Pages

Thursday, April 15, 2010

ವೇದದಲ್ಲಿ ಮಾನವೀಯ ನೆಲೆ


ಸಮಾನೀ ಪ್ರಪಾ ಸಹವೋsನ್ನಭಾಗಃ ಸಮಾನೇ ಯೋಕ್ತ್ರೇ ಸಹ ವೋ ಯುನಜ್ಮಿ|
ಸಮ್ಯಂಚೋsಗ್ನಿಂ ಸಪರ್ಯತಾರಾ ನಾಭಿಮಿವಾಭಿತಃ||
(ಅಥರ್ವ.೩.೩೦.೬.)
ಜಲಾಶಯಗಳು ನಿಮ್ಮೆಲ್ಲರಿಗೂ ಸಮಾನವಾಗಿ ಸೇರಿದವುಗಳಾಗಿವೆ. ನಿಮ್ಮೆಲ್ಲರ ಜಲಾಶಯಗಳು ಸಮಾನವಾಗಿರಲಿ. ನಿಮ್ಮ ಭೋಜನಗಳು ಒಂದಿಗಿರಲಿ. ಸಮಾನವಾದ ನೊಗದಲ್ಲಿ ನಿಮ್ಮನ್ನು ಒಂದಿಗೆಯೇ ಹೂಡಿದ್ದೇನೆ. ಗುಂಭವನ್ನು ಅರೆಕಾಲುಗಳು ಸುತ್ತಲಿಂದಲೂ ಆವರಿಸಿಕೊಂಡಿರುವಂತೆ ಒಂದುಗೂಡಿ ಜಗನ್ನಾಯಕನನ್ನು ಆರಾಧಿಸಿರಿ.

ಇದು ‘ನನ್ನ’ ಹೊಲ-ಗದ್ದೆ. ಅಲ್ಲಿ ನನ್ನ ಭಾವಿಗೆ ನಾನು ಪಂಪ್ ಸೆಟ್ ಹಾಕಿದರೆ ಕೇಳಲು ನೀನು ಯಾರು? - ಎಂದು ಮುಂದುವರೆದಾಗ ಪಕ್ಕದ ಹೊಲದ ಭಾವಿ ಒಣಗಿದ ಮೇಲೆ ಪಕ್ಕದ ಭೂಮಿಯವನು ಏನು ಮಾಡಬೇಕು? ಕೊಳವೇಭಾವಿಯೇ ಗತಿ. ಈಗ ಮೊದಲಿನವನ ಭಾವಿಯ ಕಥೆ ಮುಗಿದಂತೆ! ಅವನು ಇನ್ನೂ ಆಳವಾದ ಕೊಳವೆಭಾವಿ ಹಾಕಿಸಿದಾಗ ಪಕ್ಕದವನ ಕೊಳವೇಭಾವಿಯೂ ಒಣಗುತ್ತದೆ. ಈ ಧೋರಣೆಯಿಂದ ಪ್ರಾರಂಭವಾದ ಅಂತರ್ಜಲದ ಶೋಷಣೆ ಇಂದು ಯಾವ ಮಟ್ಟಕ್ಕೆ ಬಂದಿದೆಯೆಂದರೆ, ೮೦೦ರಿಂದ ೧೦೦೦ ಅಡಿ ಭೂಮಿಯನ್ನು ಕೊರೆದರೂ ನೀರು ಸಿಕ್ಕುವ ಸಾಧ್ಯತೆಯಿಲ್ಲವೆಂದಾಗಿದೆ. ನಮ್ಮೆಲ್ಲರಿಗೂ ಆಶ್ರಯ ನೀಡುತ್ತಿರುವುದು ಒಂದೇ ಭೂಮಿ. ಭೂಮಿಯಳಗಿನ ಜಲಾಶಯಗಳು ಭೂಮಿಯ ಮೇಲಿನಂತೆ ಚಕ್ಕುಬಂದಿಗಳಿಗೆ ಒಳಪಟ್ಟಿಲ್ಲ. ಅವನ್ನು ರಕ್ಷಿಸುವ ಭಾರ ಎಲ್ಲರಿಗೂ ಸೇರಿದ್ದಾಗಿದೆ. ಅದರ ಶೋಷಣೆಯ ವಿರುದ್ಧ ದನಿಯೆತ್ತಲು ಎಲ್ಲರಿಗೂ ಹಕ್ಕಿದೆ. ಈ ಸರಳ ಸತ್ಯವನ್ನೇ ಈ ಮಂತ್ರ ನೆನಪಿಸುತ್ತಿದೆ. ಗೊಡ್ಡು ಆಚಾರ-ವಿಚಾರಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡವರು ಸ್ಪೃಶ್ಯ-ಅಸ್ಪೃಶ್ಯ ಎಂಬ ಮಾನವದ್ರೋಹೀ ಭಾವನೆಗಳಿಗೆ ಕಾವನ್ನು ಕೊಡುತ್ತಾ, ನೀರಿನ ವಿಚಾರಕ್ಕೂ ಅದನ್ನೇ ವಿಸ್ತರಿಸಿ ಮಾಡಿರುವ ಅನ್ಯಾಯಕ್ಕೆ ಲೆಕ್ಕವಿಲ್ಲ. ಇಂದಿಗೂ ಕೆಲವೆಡೆ ಈ ದುಷ್ಟ ಪದ್ಧತಿ ಜೀವಂತವಾಗಿದೆಯೆಂದರೆ ಆ ಗೊಡ್ಡು ಪದ್ಧತಿಗಳ ಆಳವನ್ನು ಊಹಿಸಬಹುದು. ವೇದವಿದನ್ನು ಸ್ಪಷ್ಟನುಡಿಗಳಲ್ಲಿ ನಿಷೇಧಿಸಿರುವಾಗ, ಸ್ಪೃಶ್ಯಾಸ್ಪೃಶ್ಯ ಪಿಡುಗಿನ ಮೂಲವನ್ನು ವೇದಗಳಲ್ಲಿ ಗುರುತಿಸುವುದು ತಮ್ಮನ್ನು ತಾವು ಬುದ್ಧಿಜೀವಿ(?)ಗಳೆಂದು ಕರೆದುಕೊಳ್ಳುವವರಿಗೆ ಮಾತ್ರ ಸಾಧ್ಯವೇನೋ?!!

ಮಾಂಸಾಹಾರಿಗಳು ಯಾರೊಡನೆಯೂ ಕುಳಿತು ಊಟ ಮಾಡಿಬಿಡುತ್ತಾರೆ. ಆದರೆ, ಸಸ್ಯಾಹಾರಿಗಳಿಗೆ ಇದು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಭೋಜನ ಒಂದಿಗಿರಲಿ‌ಎಂದಾಗ ಎಲ್ಲರೂ ಸಸ್ಯಾಹಾರಿಗಳೇ ಆಗಬೇಕಾಗುತ್ತದೆ.

-ವೇದಾಧ್ಯಾಯೀ ಸುಧಾಕರಶರ್ಮ

2 comments:

  1. ಇಂತಹ ಜಿಜ್ಞಾಸೆ ಸಸ್ಯಾಹಾರಿಗಳಿಗೆ ಮಾತ್ರ ಸಾಧ್ಯ.ಆದರೆ ಒಳ್ಳೆಯ ಸಂಗತಿಗಳು ಎಲ್ಲರಿಗೂ ಪಥ್ಯವಾಗುವುದಿಲ್ಲವೆಂಬುದು ಸತ್ಯ.

    ReplyDelete