Pages

Wednesday, July 28, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -10
ಅಥರ್ವ ವೇದ ಭಕ್ತನ ಬಾಯಿಯಿಂದ ಪ್ರಭುವಿನ ಮುಂದೆ ಈ ಬೇಡಿಕೆಯನ್ನು ಮೂಡಿಸುತ್ತದೆ:
ಮೇಧಾಂ ಸಾಯಂ ಮೇಧಾಂ ಪ್ರಾತ್ರರ್ಮೇಧಾಂ ಮಧ್ಯಂದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭರ್ವಚಸಾ ವೇಶಯಾಮಹೇ||
(ಅಥರ್ವ.6.108.5)
[ಸಾಯಂ] ಸಂಜೆ, [ಮೇಧಾಂ] ಬುದ್ಧಿಯನ್ನು [ಆವೇಶಯಾಮಹೇ] ಜೀವನಗಳಿಗೆ ಇಳಿಸಿಕೊಳ್ಳುತ್ತೇವೆ. [ಪ್ರಾತಃ] ಬೆಳಿಗ್ಗೆ [ಮೇಧಾಂ] ಬುದ್ಧಿಯನ್ನು ಜೀವನಗತಮಾಡಿಕೊಳ್ಳುತ್ತೇವೆ. [ಮಧ್ಯಂದಿನಂ ಪರಿ] ಮಧ್ಯಾಹ್ನದಲ್ಲಿಯೂ [ಮೇಧಾಂ] ಬುದ್ಧಿಶಕ್ತಿಯನ್ನೇ ತುಂಬಿಕೊಳ್ಳುತ್ತೇವೆ. [ಸೂರ್ಯಸ್ಯ ರಶ್ಮಿ ಭಿಃ] ಸೂರ್ಯನ ಕಿರಣಗಳೊಂದಿಗೆ [ವಚಸಾ] ವಿದ್ವಜ್ಜನರ ಉಪದೇಶ ವಚನಗಳಿಂದ [ಮೇಧಾಂ ಆವೇಶಯಾಮಹೇ] ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇವೆ. ಬೇರೆ ಮತ-ಮತಾಂತರಗಳ ಶಾಸ್ತ್ರಗಳಿಗೂ, ಭಗವದ್ದತ್ತವಾದ ವೈಜ್ಞಾನಿಕ ಶಾಸ್ತ್ರಗಳಾದ ವೇದಗಳಿಗೂ ಇರುವ ವ್ಯತ್ಯಾಸವಿದೇ. ಭಕ್ತನು ಭಗವಂತನಲ್ಲಿ ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ| ಪ್ರ ಯಚ್ಛತು|| (ಅಥರ್ವ.19.64.1) [ಸ ಜಾತವೇದಾ] ಆ ಸರ್ವವ್ಯಾಪಕ ಸರ್ವಜ್ಞನಾದ ಭಗವಂತನು [ಮೇ] ನನಗೆ [ಶ್ರದ್ಧಾಂ ಚ ಮೇಧಾಂ ಚ ಪ್ರಯಚ್ಛತು] ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ - ಎಂದೇ ಬಿನ್ನಹ ಮಾಡಿಸುತ್ತದೆ. ಬುದ್ಧಿಸಂಗತವಾದ ವೇದಗಳು ಎಷ್ಟು ಸೊಗಸಾಗಿ ಶ್ರದ್ಧೆಗೆ ಸಲ್ಲಬೇಕಾದ ಸ್ಥಳವನ್ನು ನಿರೂಪಿಸುತ್ತದೆ ನೋಡಿರಿ.

1 comment: