Pages

Thursday, March 11, 2010

ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!

ನಾನು ಚಿಕ್ಕವನಿದ್ದಾಗ ನಮ್ಮ ಅಜ್ಜಿಯು ಹೇಳುತ್ತಿದ್ದರು " ನೋಡುಮಗು, ಸುಳ್ಳು ಹೇಳಬಾರದು,” ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!" ಇವತ್ತು ಆ ಮಾತು ನೆನಪು ಮಾಡಿಕೊಂಡರೆ ನಗು ಬರುತ್ತೆ. ಆದರೆ ಆ ವಯಸ್ಸಿನಲ್ಲಿ ಹೆದರಿಸಿದ್ದರಿಂದ ಒಂದಿಷ್ಟು ಒಳ್ಳೆಯ ನಡತೆಯನ್ನು ರೂಢಿಸಿಕೊಳ್ಳಲು ಸಹಾಯವಾಗಿದ್ದಿರಬಹುದು. ಈಗ ಆ ಮಾತು ಯಾಕೆ ನೆನಪಾಯ್ತೆಂದರೆ ಚಿಕ್ಕ ಮಕ್ಕಳಿಗೆ ಹೀಗೆ ಭಯ ಉಂಟು ಮಾಡಿ ಒಂದಿಷ್ಟು ಸದ್ಗುಣಗಳನ್ನು ಕಲಿಸುವುದನ್ನು ಒಪ್ಪ ಬಹುದೇನೋ ಆದರೆ ಪ್ರೌಢಾವಸ್ತೆ ತಲುಪಿದಮೇಲೂ ಈ ರೀತಿ ಯಾರಾದರೂ ಭೀತಿಯುಂಟು ಮಾಡಿದರೆ ಅವರಿಗೆ ಏನೆನ್ನಬೇಕು? ಹಲವಾರು ವರ್ಷಗಳಿಂದ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ನನ್ನ ಮನದಲ್ಲಾಗುವ ಜಂಜಾಟವನ್ನು ನಿಮ್ಮ ಗಮನಕ್ಕೂ ತರಲು ಈ ಪ್ರಯತ್ನ. ಪೂಜಾ ಭಾಗ ಮುಗಿಯುವ ವರೆಗೂ ಭಕ್ತಿಯಿಂದಲೇ ಕುಳಿತಿರುವ ನನಗೆ ಸತ್ಯನಾರಾಯಣ ಕಥೆಯನ್ನು ಕೇಳುವಾಗ ಗೊಂದಲ ಶುರುವಾಗುತ್ತದೆ. ಸತ್ಯನಾರಾಯಣ ಪ್ರಸಾದವನ್ನು ತಿನ್ನಲಿಲ್ಲವೆಂಬ ಕಾರಣಕ್ಕೆ ವ್ಯಾಪಾರಿಯೊಬ್ಬನ ಹಡಗುಗಳು ಸಮುದ್ರದಲ್ಲಿ ಮುಳುಗಿಹೋಗಿ ಭಾರಿ ನಷ್ಟವಾಯ್ತೆಂದೂ ನಂತರ ಪಶ್ಚಾತ್ಥಾಪ ಪಟ್ಟು ವ್ರತವನ್ನಾಚರಿಸಿ ಪ್ರಸಾದವನ್ನು ತಿಂದ ಮೇಲೆ ಅವನ ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಾಯ್ತೆಂದೂ ಕಥೆಯನ್ನು ಕೇಳುವಾಗ , ನಮ್ಮಜ್ಜಿ ನೆನಪಾಗುತ್ತಾಳೆ
ಸತ್ಯನಾರಾಯಣ ಕಥೆಯನ್ನು ಯಾರೂ ಪ್ರಶ್ನೆ ಮಾಡಲು ಯತ್ನಿಸುವುದಿಲ್ಲ. ಕಾರಣ ಅದರ ಹಿಂದೆ ಶ್ರದ್ಧೆ- ಭಕ್ತಿಯ ಜೊತೆಗೆ ಭೀತಿಯೂ ಸೇರಿದೆ. ಸತ್ಯನಾರಾಯಣವ್ರತವನ್ನು ಕೇವಲ ಯಾರೋ ಅವಿದ್ಯಾವಂತರು ಆಚರಿಸುತ್ತಾರೆಂದೇನೂ ಅಲ್ಲ. ಬಹುಪಾಲು ಜನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಅದರಬಗ್ಗೆ ಯಾವ ತಕರಾರೂ ಇಲ್ಲ. ಆದರೆ ಎಲ್ಲರನ್ನೂ ರಕ್ಷಿಸುವ ಭಗವಂತನು ಐಶ್ವರ್ಯವನ್ನು ನಾಶಮಾಡಿದ, ಜೀವಹಾನಿ ಮಾಡಿದ, ಮುಂತಾಗಿ ಕಥೆ ಇದ್ದರೆ ಅದನ್ನು ಇನ್ನೂ ಹೇಳಿಕೊಂಡೇ ಇರಬೇಕೇ?
ಯಾವುದೋ ಒಂದು ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಬಂದಾಗ ಧರ್ಮಕಾರ್ಯ ನಡೆಯಲು ಅಂದಿನ ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ಜನರಲ್ಲಿ ಭಯವನ್ನುಂಟು ಮಾಡಿದರೆ ಅವನು ಧರ್ಮಮಾರ್ಗದಲ್ಲಿ ಹೋಗುತ್ತಾನೆಂಬ ಕಾರಣದಿಂದ ಒಂದಿಷ್ಟು ಕಥೆ ಹೆಣೆದಿರಬಹುದು. ಇದನ್ನು ಇಂದಿನ ದಿನಗಳಲ್ಲಿ ಪುರೋಹಿತರು ಅವರ ಹೊಟ್ಟೆ ತುಂಬಿಸಿಕೊಳ್ಳಲು ಮಾಡಿದ ಪ್ಲಾನ್ ಅಂತಾ ಹೇಳುವ ಜನರಿದ್ದಾರೆ. ದೇವರನ್ನು ನಂಬದ ನಾಸ್ತಿಕನ ವಿಚಾರ ಬೇರೆ. ವಿಚಾರವಾದದ ಹೆಸರಲ್ಲಿ ಹಿಂದು ಪರಂಪರೆ, ಹಿಂದು ಧಾರ್ಮಿಕ ಆಚರಣೆಗಳನ್ನು ಖಂಡಿಸುವವರ ವಿಚಾರ ಬೇರೆ. ಆದರೆ ಭವಂತನನ್ನು ನಂಬುವ ಹಿಂದು ಆಚಾರ-ವಿಚಾರಗಳನ್ನು ಪ್ರೀತಿಸುವ ಪ್ರಗತಿಪರ ಆಸ್ತಿಕನ ವಿಚಾರ ಬಂದಾಗ ಇಂತಾ ಕಥೆಗಳನ್ನು ಹೇಳದೆ ಮನಸ್ಸಿನ ನೆಮ್ಮದಿಗಾಗಿ ಯಾವುದೇ ದೇವರ ಪೂಜೆಯನ್ನು ಅವನ ಇಚ್ಛೆಯಂತೆ ಮಾಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಭಾವನೆ. ಅಷ್ಟೇ ಅಲ್ಲ ಕುರುಡು ನಂಬಿಕೆಗಳು, ಅಂಧಾಚರಣೆಗಳನ್ನು ಬಿಡುವ ಧೈರ್ಯ ನಮಗೆ ಬರಬೇಕು. ನೀವುಏನಂತೀರಾ?