Pages

Sunday, August 29, 2010

ಮೂಢ ಉವಾಚ -5

ಬಾಳು
ಬಾರದದು ಜನವು ಧನವು ಕಾಯದು
ಕರೆ ಬಂದಾಗ ಅಡೆತಡೆಯು ನಡೆಯದು
ಇರುವ ಮೂರು ದಿನ ಜನಕೆ ಬೇಕಾಗಿ
ಜಗಕೆ ಬೆಳಕಾಗಿ ಬಾಳೆಲೋ ಮೂಢ


ತನ್ನತನ
ಸ್ವಾಭಿಮಾನಿಯ ಜಗವು ಗುರುತಿಪುದು
ಹಸಿವಾದರೂ ಹುಲಿಯು ಹುಲ್ಲು ತಿನ್ನದು
ಕೊಂಡಾಡಿದರೂ ಶಿರ ಚೆಂಡಾಡಿದರೂ
ತನ್ನತನವ ಉಳಿಸಿಕೊಳ್ಳೆಲೋ ಮೂಢ


ನಡೆ ನುಡಿ
ಸಲ್ಲದ ನಡೆಯು ತೋರಿಕೆಯ ಜಪತಪವು
ಪರರ ಮೆಚ್ಚಿಸಲು ಡಂಭದಾಚರಣೆಯು
ಹಿತಕಾಯದು ಮರುಳೆ ಮತಿ ನೀಡದು
ಕಪಟ ಫಲಕಾಗಿ ಬಳಲದಿರು ಮೂಢ


ಹಸಿವು
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡ ಬೇಡ
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ
********
-ಕವಿನಾಗರಾಜ್.

ಯೋಚಿಸಲೊ೦ದಿಷ್ಟು-೮

೧.ಜೀವನದಲ್ಲಿ ಒಮ್ಮೆ ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸ ಲಾಗದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಕಷ್ಟಸಾಧ್ಯ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವವೇ ಮಾರ್ಗದರ್ಶನವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ)


೨.ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ!ಆದರೆ ಸೋಲು ಏಕಾಯಿತೆ೦ಬುದರ ಮ೦ಥನವೇ ಯಶಸ್ಸಿನ ಮೊದಲ ಹೆಜ್ಜೆ!

೩.ಮುಖದಲ್ಲಿ ಮೂಡುವ ಭಾವನೆಗಳನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು.ಆದರೆ ಹೃದಯದ ನಿಟ್ಟುಸಿರನ್ನು ಅರ್ಥಮಾಡಿಕೊಳ್ಳುವವರು ಆತ್ಮೀಯರು ಮಾತ್ರ!

೪.ಆತ್ಮೀಯರನ್ನು ಮರೆಯುವುದಾಗಲೀ ಅಥವಾ ಅವರಿ೦ದ ಅಗಲುವುದಾಗಲೀ ಸುಲಭ ಸಾಧ್ಯವಲ್ಲ!

೫.ಚರ್ಚೆಯು ಯಾವಾಗಲೂ ವಾದಕ್ಕಿ೦ತ ಉತ್ತಮವಾದದ್ದು.ವಾದವು ವ್ಯಕ್ತಿಗಳಲ್ಲಿ ಯಾರು ಸರಿ? ( ವ್ಯಕ್ತಿಗತ) ಎ೦ಬುದನ್ನು ಗುರುತಿಸಿದರೆ, ಚರ್ಚೆಯು ಯಾವುದು ಸರಿ?(ವಿಷಯ) ಎ೦ಬುದನ್ನು ಗುರ್ತಿಸುತ್ತದೆ! ವ್ಯಕ್ತಿಗಿ೦ತ ವಿಚಾರ ಹೆಚ್ಚು ಮುಖ್ಯವೆ೦ದು ಪರಿಗಣಿಸಬೇಕು.

೬. ಯಾವುದೇ ನಿರ್ಧಾರವನ್ನು ನಮ್ಮ ಆ ಕ್ಷಣದ ಮನೋಸ್ಥಿತಿಯ ಮೇಲೆ ಅವಲ೦ಬಿತವಾಗಿ ತೆಗೆದುಕೊಳ್ಳಲೇ ಕೂಡದು. ಒಮ್ಮೊಮ್ಮೆ ನಮ್ಮ ಮನೋಸ್ಥಿತಿಯು ಭಾವನೆಗಳ ಭಾರದಿ೦ದ,ನಾವು ತೆಗೆದುಕೊಳ್ಳಬಹುದಾದ ನಿರ್ಧಾರಗಳಿಗೆ ಪೂರಕ ವಾಗುವ ನೈಜ ಕಾರಣಗಳನ್ನೇ ಹತ್ತಿಕ್ಕುತ್ತದೆ!

೭.ಸಮಸ್ಯೆಗಳೆ೦ಬ ಹಕ್ಕಿಗಳನ್ನು ನಮ್ಮತ್ತ ಹಾರಿ ಬರಲು ಹಾಗೂ ನಮ್ಮ ನೆತ್ತಿಯ ಮೇಲಿ೦ದ ಬಹು ದೂರಕ್ಕೆ ಹಾರಿ ಹೋಗಲು ಬಿಡಿ! ಆದರೆ ನಮ್ಮ ನೆತ್ತಿಯ ಸುತ್ತಲೇ ಗಿರಕಿ ಹೊಡೆಯಲು ಅಥವಾ ಅಲ್ಲಿಯೇ ಗೂಡನ್ನು ಕಟ್ಟಲು ಬಿಡಬಾರದು! ಆಗ ನಮ್ಮ ಮನಸೊ೦ದು ಗೀಜಗದ ಗೂಡಾಗುತ್ತದೆ!

೮.ನಮ್ಮ ಮನಸ್ಸಿನ ದೌರ್ಬಲ್ಯವೇನೆ೦ದರೆ,ನಾವು ಇನ್ನೊಬ್ಬರು ತಪ್ಪನ್ನು ಮಾಡಿದಾಗ, ಅದರ ತೀರ್ಮಾನ ಹಾಗೂ ಶಿಕ್ಷೆಯನ್ನು ಪ್ರಕಟಿಸಿಬಿಡುವ ಧೈರ್ಯವನ್ನು ತೋರಿದರೂ,ನಾವೇ ಆ ತಪ್ಪನ್ನು ಮಾಡಿದಾಗ ಸ೦ಧಾನ ಮತ್ತು ಸಮಜಾಯಿಷಿ ಯಾ ಸಮರ್ಥನೆ ಮು೦ತಾದ ಹಾದಿಗಳತ್ತ ಮುಖ ಮಾಡುತ್ತೇವೆ!

೯.ಪ್ರತಿಯೊಬ್ಬರ ಮಾತನ್ನೂ ಆಲಿಸೋಣ, ಪ್ರತಿಯೊಬ್ಬರಿ೦ದಲೂ ಕಲಿಯೋಣ. ಏಕೆ೦ದರೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ಆದರೆ ಪ್ರತಿಯೊಬ್ಬರೂ ಕೆಲವೊ೦ದಷ್ಟನ್ನಾದರೂ ತಿಳಿದುಕೊ೦ಡಿರುತ್ತಾರೆ.

೧೦.ನಮ್ಮನ್ನು ಸರಿಯಾಗಿ ಅರಿಯದೇ ಇರುವವರ,ನಮ್ಮ ಮನದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವವರೊ೦ದಿಗಿನ ಸತತ ಸಖ್ಯಕ್ಕಿ೦ತ ಒ೦ಟಿತನವೇ ಮೇಲು!( ಆಸುಮನದ ಸ೦ದೇಶ)

೧೧. ಮೌನದ ಹಿ೦ದೆಯೂ ಹೇಳಲಾಗದ ಒ೦ದು ಭಾವನೆ ಇದ್ದೇ ಇರುತ್ತದೆ!

೧೨.ಪ್ರತಿಯೊಬ್ಬರೊ೦ದಿಗೂ ನಮ್ಮ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳುವುದು ಉಚಿತವಲ್ಲ!ಒಮ್ಮೊಮ್ಮೆ ನಮ್ಮ ಭಾವನೆಗಳ ವ್ಯಕ್ತಪಡಿಸುವಿಕೆಯೇ ನಮಗೆ ಬಹು ದೊಡ್ಡ ಹಿನ್ನಡೆಯಾಗಬಹುದು!

೧೩.ಪ್ರತಿಯೊಬ್ಬ ಅ೦ಗವಿಕಲನಲ್ಲಿಯೂ ಯಾವುದಾದರೂ ವಿಶೇಷವಾದ ಬಲ/ಚೈತನ್ಯ/ ಇದ್ದೇ ಇರುತ್ತದೆ!

೧೪.ಸತತ ಓದು ಹಾಗೂ ಓದಿರುವುದರ ಸರಿಯಾದ ಗ್ರಹಿಕೆ ಮೌಲ್ಯಯುತ ಚಿ೦ತನೆಗೆ ದಾರಿ ಮಾಡಿಕೊಡುತ್ತದೆ.

೧೫.ನಮ್ಮ ಅತ್ಯ೦ತ ವಿನಯಶೀಲತೆ ಕೆಲವೊಮ್ಮೆ. ಕೆಲವರ ಕಣ್ಣಿಗೆ ಧೂರ್ತತನವಾಗಿ ಕ೦ಡೀತು! ( ಅತಿ ವಿನಯ೦ ಧೂರ್ತ ಲಕ್ಷಣ೦)

Friday, August 27, 2010

ಮನವಿ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆಯು ಹಲವು ಕಾರಣಗಳಿಂದ ಸಹಸ್ರಾರು ಜನರ ಮೆಚ್ಚಿಗೆ ಪಡೆದಿದೆ. ಓದುಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಥವಾ ಈಗಾಗಲೇ ವೇದಸುಧೆಯ ಹತ್ತಿರ ಬಂದಿರುವವರು ನಿತ್ಯವೂ ನೋಡುತ್ತಿದ್ದಾರೆ. ವೇದಸುಧೆಯ ಪ್ರಮುಖ ಉದ್ಧೇಶ ಈಗಾಗಲೇ ಹಲವಾರು ಭಾರಿ ತಿಳಿಸಿದೆ. "ಸಮಾಜಕ್ಕೆ ಹಿತವೆನಿಸಿದ್ದನ್ನು ಹಂಚುವುದು" ಈ ದಾಟಿಯಲ್ಲಿ ವಿಚಾರಮಾಡುವಾಗ ’ಪ್ರಪಂಚದ ಎಲ್ಲೆಡೆಯಿಂದ ಬರುವ ಸದ್ವಿಚಾರಗಳಿಗೆ ಇಲ್ಲಿ ಸ್ವಾಗತ ಇದ್ದೇ ಇದೆ. ಇಂತಹ ಹಾದಿಯಲ್ಲಿರುವಾಗ ಕೆಲವರಿಗೆ ಕೆಲವು ಆಪ್ಯಾಯಮಾನವಾಗಬಹುದು. ಕೆಲವು ಕಹಿಯಾಗಬಹುದು. ಕೆಲವು ಹಿಡಿಸದಿರಬಹುದು. ಅಂತೂ ಇಲ್ಲಿ ವೇದದ ಚಿಂತನೆ ನಡೆದಿದೆ, ವೇದಮಂತ್ರಗಳ ಆಡಿಯೋಗಳಿವೆ, ಡಾ|| ಗೋಪಾಲಕೃಷ್ಣರಂತಹ ವಿಜ್ಞಾನಿಗಳಿಂದ ನಮ್ಮ ಭಾರತೀಯ ಪರಂಪರೆಯ ಚಿಂತನೆಗಳಿವೆ. ಶ್ರೀ ರಾಮಕೃಷ್ಣಾಶ್ರಮದ ಯತಿಗಳ ಮಾತುಗಳಿವೆ. ವೇದಾಧ್ಯಾಯೀ ಸುಧಾಕರ ಶರ್ಮರ ಹಲವಾರು ಉಪನ್ಯಾಸಗಳ ಆಡಿಯೋ ಗಳಿವೆ. ಪಂಡಿತ ಸುಧಾಕರ ಚತುರ್ವೇದಿಗಳ ಚಿಂತನೆಗಳನ್ನು ಕವಿ ನಾಗರಾಜ್ ಹಂಚಿಕೊಳ್ಳುತ್ತಿದ್ದಾರೆ. ಶ್ರೀ ವಿ.ಆರ್.ಭಟ್, ಶ್ರೀ ರಾಘವೇಂದ್ರ ನಾವಡರು, ಕವಿ ಸುರೇಶ್ ಮುಂತಾದವರು ಚಿಂತನೆಗೆ ಯೋಗ್ಯವಾದ ಬರಹಗಳನ್ನು ನೀಡುತ್ತಿದ್ದಾರೆ. ವೇದಮಂತ್ರಗಳಿಗೆ, ಸುಧಾಕರ ಶರ್ಮರ ಉಪನ್ಯಾಸಗಳಿಗೆ, ವಿವೇಕಾನಂದರ ವಿಚಾರಗಳಿಗಾಗಿ, ಭಾವಗೀತೆಗಳಿಗೆ ಮತ್ತು ವಿಶೇಷ ಬರಹಗಳಿಗೆ ಪ್ರತ್ಯೇಕ ಪುಟಗಳಿವೆ. ಈ ಪುಟಗಳೆಲ್ಲಾ ಮತ್ತೆ ಮತ್ತೆ ಓದಬೇಕಾದ, ಆಡಿಯೋ ಕೇಳಬೇಕಾದ ಪುಟಗಳು. ವೇದಮಂತ್ರಗಳನ್ನು ಆಗಿಂದಾಗ್ಗೆ ಕೇಳಲು ಹಿತವಾಗಿರುತ್ತವೆ, ಅಲ್ಲವೇ? ಎಲ್ಲದರ ಉಪಯೋಗವಾಗಲೆಂಬ ಆಶಯದೊಡನೆ, ನಿಮ್ಮ ಅಮೂಲ್ಯ ಸಲಹೆಗಳನ್ನು ವೇದಸುಧೆಯು ಅಪೇಕ್ಷಿಸುತ್ತದೆ, ಎಂಬ ಮಾತನ್ನು ನೆನಪು ಮಾಡಬಯಸುವೆ. ಸರ್ಕಾರ ಉದ್ಧೇಶಿಸಿರುವ ಅತ್ಯಂತ ಹೇಯವಾದ ಪ್ರಾಣಿಹತ್ಯಾಗೃಹದ ಕೆಟ್ಟ ಯೋಜನೆಗೆ ನಿಮ್ಮ ವಿರೋಧ ವ್ಯಕ್ತಪಡಿಸಲು ಇಂದು ಪ್ರಕಟವಾಗಿರುವ ಲೇಖನದಲ್ಲಿರುವ ಅಂತರ್ಜಾಲ ಕೊಂಡಿಯ ಮೂಲಕ ಪಿಟಿಶನ್ ಗೆ ಸಹಿಮಾಡಲು ವಿನಂತಿಸುವೆ.
ನಿಮ್ಮವನೇ,
ಹರಿಹರಪುರಶ್ರೀಧರ್

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1

ಸನ್ಮಿತ್ರರೇ,
ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು 'ವೇದೋಕ್ತ ಜೀವನ ಪಥ'ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ 'ಚತುರ್ವೇದಿ'ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು 'ವಿಜಯ ಕರ್ನಾಟಕ' ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. 'ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.


ಭಗವತ್ ಸ್ವರೂಪ -1
ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ - ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

ಪಾಶವೀ ಯೋಜನೆ ಧಿಕ್ಕರಿಸಿ








ನನ್ನ ಮಿತ್ರರಾದ ಪ್ರಕಾಶ್ ಯಾಜಿಯವರಿಂದ ನನಗೆ ಒಂದು ಮೇಲ್ ಬಂದಿದೆ. ಅದನ್ನು ಓದಿ.
please visit www.jivdaya.net and sign your petition and oppose ,because the Govt is planning to modernize DEONAR Slaughter house which will be Asia,s largest Slaughter house killing 15000 animals daily.

ಕರುಳು ಹಿಂಡುವ ಕಥೆಯ ಕೇಳಿ. ಅಹಿಂಸಾ ವಾದಿ ಮಹಾವೀರ, ಮಹಾತ್ಮಾಗಾಂಧಿ, ಬಸವಣ್ಣನವರು ಜನಿಸಿದ ಈ ನಾಡಿನಲ್ಲಿ ಸಹಸ್ರಾರು ಪ್ರಾಣಿಗಳನ್ನು ಏಕಕಾಲದಲ್ಲಿ ಹತ್ಯೆ ಮಾಡುವ ಪಾಶವೀ ಯೋಜನೆಗೆ ಸರ್ಕಾರವೇ ಮುಂದಾದರೆ ಅದನ್ನು ಸಹಿಸಬೇಕೆ? ಧಿಕ್ಕರಿಸಿ. ನೀವು ಹೇಗೆ ಧಿಕ್ಕರಿಸಬಹುದು. ಕೆಳಗಿನ ಕೊಂಡಿಗೆ ಭೇಟಿ ನೀಡಿ.
www.jivdaya.net

Thursday, August 26, 2010

ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ


ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ

ಶ್ರಾವಣ ಮಾಸವೇ ಹೀಗೆ! ಒಂದಿಲ್ಲೊಂದು ಹಬ್ಬ, ಸಡಗರ, ಪೂಜೆ ನಡೆದೇ ಇರುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ನಿಸರ್ಗದ ಮಡಿಲಲ್ಲಿ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬಹುಬೇಗ ಎದ್ದು, ಸುರಿವ ಸೋನೆಮಳೆಯಲ್ಲಿ ಕೊಡೆಹಿಡಿದು ಸಲ್ಸಲ್ಪ ಮೈಗೆ ಹಾರುವ ಮಳೆಯ ಹನಿಗಳನ್ನು ಸಹಿಸಿಕೊಂಡು ದೇವಸ್ಥಾನ, ಮಠ ಇಂತಹ ಜಾಗಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಿಗೆ ಹೋಗುವುದು ಬಲು ಹಿತಕರ ಸಂಗತಿ. ಅಲ್ಲಿನ ಹೋಮದ ಧೂಮ, ಕರ್ಪೂರದ ಆರತಿಯ ಪರಿಮಳ, ಬಳಸಿದ ಮಂಗಳ ದ್ರವ್ಯಗಳ ಸುಗಂಧ, ತುಪ್ಪದ ಜ್ಯೋತಿಯಿಂದ ಹೊರಸೂಸುವ ಅಪ್ಪಟ ದೀಪದ ಅಗರು, ಹಲವು ವಿಧದ ಬಣ್ಣ ಬಣ್ಣದ ಹೂಗಳ ಅಲಂಕಾರ, ಥರಥರದ ರಂಗೋಲಿ ಇವನ್ನೆಲ್ಲಾ ನೆನೆಸಿಕೊಂಡರೆ ಒಂದೊಮ್ಮೆ ನಾವೌ ಇಂತಹ ದೃಶ್ಯಗಳನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮನಸ್ಸು ಬೇಸರಗೊಳ್ಳುತ್ತದೆ ಎಂದರೆ ತಪ್ಪಲ್ಲ.

ಪ್ರಾಯಶಃ ಇದು ಆಸ್ತಿಕರಿಗೆ ಮಾತ್ರ. ನಾಸ್ತಿಕರಿಗೆ ದೇವರು-ದಿಂಡರ ರಗಳೆಯೇ ಇಲ್ಲ ಅಥವಾ ಅವರ ಲೆಕ್ಕದಲ್ಲಿ ಇದೆಲ್ಲಾ ಒಂದು ರಗಳೆ. ಜೀವನದಲ್ಲಿ ಪೂರ್ವಜ್ನ್ಮದ ಸುಕೃತದಿಂದ ಅಂತಹ ದೊಡ್ಡ ತೊಂದರೆ ಅನುಭವಿಸಿರುವುದಿಲ್ಲ, ಯಾವುದೇ ಕಾಯಿಲೆ-ಕಸಾಲೆಗಳಿಗೆ ಈಡಾಗಿರುವುದಿಲ್ಲ ಮತ್ತು ಅವರು ಮುಟ್ಟಿದ್ದೆಲ್ಲಾ ಹೊನ್ನಾಗುವಂತ ಯೋಗವನ್ನು ಪಡೆದಿರುತ್ತಾರೆ--ಹೀಗಾಗಿ ಅವರಿಗೆ ಈ ಜನ್ಮದಲ್ಲಿ ದೇವರ ಅಸ್ಥಿತ್ವವಾಗಲೀ ಅವಶ್ಯಕತೆಯಾಗಲೀ ಬಂದಿರುವುದಿಲ್ಲ-ಬೇಕಾಗಿರುವುದಿಲ್ಲ. ಯಾವಾಗ ತಿರುಗುವ ಯಂತ್ರ ನಿಂತುಕೊಂಡಿತೋ, ಚಲಿಸುವ ಗಾಲಿ ಹೂತು ಹೋಯಿತೋ, ಮನೆಯಲ್ಲಿ ಅನಾರೋಗ್ಯ, ವಿರಸ, ಆರ್ಥಿಕ ನಷ್ಟ ಉಂಟಾಯಿತೋ ಆ ಘಳಿಗೆಯಿಂದ ನಮ್ಮ ಸರಕಾರೀ ಬಸ್ಸುಗಳ ಬೋರ್ಡು ಬದಲಾದ ಹಾಗೇ ತಾವೂ ಆಸ್ತಿಕರೇ ಎಂಬ ಪೋಸುಕೊಡುತ್ತ ಬರುತ್ತಾರೆ. ದೇವರೆಂಬ ದೇವರಿಗೆ ಇವರ ಬೇರು-ಬಿತ್ತು ಎಲ್ಲಾ ಗೊತ್ತಿರುವುದಿಲ್ಲವೇ ! ಯಾವಾಗ ಆ ಘಳಿಗೆಯಲ್ಲಿ ಮಾತ್ರ ನೆನೆಯ ಬರುತ್ತಾರೋ ಅಂಥವರನ್ನು ಇನ್ನೂ ಪರೀಕ್ಷೆಗೊಳಪಡಿಸುವ ಅದ್ಬುತ ಚೈತನ್ಯವೇ ದೇವರು. ಇಂತಹ ಅರ್ಜೆಂಟಿಗೆ ದೇವರ ದಾಸರಾಗುವವರನ್ನು ನೆನೆದು ನಮ್ಮ ಪೂರ್ವಜರು ’ ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾಡಿದರು! ನಾಸ್ತಿಕರಲ್ಲಿ ನಾನು ಯಾವಾಗಲೂ ಕೇಳುತ್ತಿದ್ದುದು ಎರಡೇ ಪ್ರಶ್ನೆ- ಮೊದಲನೆಯದು: ಆಕಾಶ ಕಾಯಗಳನ್ನು ಗುರುತ್ವಾಕರ್ಷಣ ಶಕ್ತಿಯಿಂದ ಸರಿಯಾದ ಹಿಡಿತದಲ್ಲಿ ನಿಯಂತ್ರಿಸಿಡುವ ಶಕ್ತಿ ಯಾವುದು ? [ ಹಾಗೆ ಕರೆಯುವ ಆ ಗುರುತ್ವಾಕರ್ಷಣ ಶಕ್ತಿ ಹೇಗೆ ಹುಟ್ಟಿಕೊಳ್ಳುತ್ತದೆ ? ] ಎರಡನೇದು: ಆತ್ಮವೆಂಬ ಚೈತನ್ಯ ದೇಹಕ್ಕೆ ಬರುವ ಮೊದಲು ಎಲ್ಲಿರುತ್ತದೆ? ಯಾವ ರೂಪದಲ್ಲಿರುತ್ತದೆ ? ಸತ್ತಮೇಲೆ ಎಲ್ಲಿಗೆ ಹೋಗುತ್ತದೆ ?

ಜನಸಾಮಾನ್ಯರಲ್ಲಿ ನಾವು ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರೆ ಸತ್ತದಿನವನ್ನು ದುಃಖದಿಂದ ಶ್ರಾದ್ಧವಾಗಿ ಆಚರಿಸುತ್ತೇವೆ. ಸಾಧು-ಸಂತ, ಸನ್ಯಾಸಿಗಳೂ ಯತಿಗಳೂ ಹುಟ್ಟಿದ ಮತ್ತು ಕಾಲವಾದ ಎರಡೂ ದಿನಗಳು ನಮಗೆ ಸಂಭ್ರಮಾಚರಣೆಯ ದಿನಗಳೇ ಆಗಿರುತ್ತವೆ. ಯಾಕೆಂದರೆ ಮಹಾತ್ಮರ ಹುಟ್ಟು ಮತ್ತು ಸಾವುಗಳೇ ಹಾಗೆ. ಅವರೆಲ್ಲ ಕಾರಣವಿಲ್ಲದೇ ಹುಟ್ಟುವುದೂ ಇಲ್ಲ, ಕಾಲವಾಗುವುದೂ ಇಲ್ಲ! ಹಾಗಾದರೆ ಅವರ ಹುಟ್ಟು-ಸಾವಿಗೆ ಏನುಕಾರಣ ಎಂದು ಅಂದಾಜಿಸಹೊರಟರೆ ನಮಗೆ ಸಿಗುವ ಸಾಮಾನ್ಯ ಉತ್ತರ ’ಜಗದೋದ್ಧಾರ’ ಅರ್ಥಾತ್ ಜಗತ್ತಿನ ಕೆಲವು ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯವನ್ನು ಹಮ್ಮಿಕೊಂಡು ಜನರಿಗೆ ಒಳಿತನ್ನು ಮಾಡಲೋಸುಗ ಅವರು ಅಂಶಾಂಶಾವತಾರಿಗಳಾಗಿ ಭೂಮಿಯ ಮೇಲೆ ಅವತರಿಸುತ್ತಾರೆ. ಹೀಗೆ ಅವತರಿಸಿದ ಆ ಮಹನೀಯರು ಒಂದಷ್ಟು ಕಾಲ ಭುವಿಯಲ್ಲಿದ್ದು ಅಲ್ಲಿ ತಮ್ಮ ಸೇವೆಗೈದು ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ದೇಹಾಂತ್ಯವನ್ನು ಕಾಣುತ್ತಾರೆ. ಅವರ ಆ ಭೌತಿಕ ಕಾಯದಿಂದ ಅವರ ಆತ್ಮ ಹೊರಟು ನಡೆದರೂ ಅವರ ಪಾರ್ಥಿವ ಶರೀರವನ್ನು ಸಮಾಧಿಮಾಡಿದ ಸ್ಥಳದಲ್ಲಿ ಅವರ ತಪದ ಪ್ರಭೆ ಅಡಗಿರುತ್ತದೆ. ಸಮಾಧಿಯಲ್ಲಿರುವ ಅವರ ಭೌತಿಕ ಶರೀರದ ಅವಶೇಷಗಳು ನಾವಿವತ್ತು ಹೇಳುವ ಕಾಸ್ಮಿಕ್ ರೇಡಿಯೇಶನ್ ಉಂಟುಮಾಡುತ್ತಿರುತ್ತವೆ. ಹೀಗೇ ಕಾಲವಾದ ಸನ್ಯಾಸಿ ಜನರ ನೆನಪಿನಲ್ಲಿ ಅವರು ಸಮಾಧಿಸ್ಥರಾದ ಆ ಮಿತಿಯಂದು ಪ್ರತೀ ವರ್ಷ ಅವರ ಯತಿಶ್ರಾದ್ಧವನ್ನು ವಿದ್ವಜ್ಜನರು ಸೇರಿ ವಿಧಿವತ್ತಾಗಿ ವೇದಮಂತ್ರಗಳೊಂದಿಗೆ ಆಚರಿಸುತ್ತಾರೆ-ಇದೇ ’ಆರಾಧನೆ’ ಎಂದು ಕರೆಸಿಕೊಳ್ಳುತ್ತದೆ.



ನಮ್ಮ ಇಂದಿನ ಈ ಯುಗದಲ್ಲಿ ಒಂದೆರಡು ಸನ್ಯಾಸಿಗಳ ಸಜೀವ ಸಮಾಧಿಗಳು ನಮಗೆ ನೋಡ ಸಿಗುತ್ತವೆ. ಒಂದು ಶೃಂಗೇರಿಯ ಶ್ರೀ ವಿದ್ಯಾಶಂಕರ ದೇಗುಲ.ಸರಿಸುಮಾರು ಹನ್ನೆರಡನೇ ಶತಮಾನದ ಅಂತ್ಯಭಾಗದಲ್ಲಿ ನೂರಾ ಐದು ವರ್ಷಗಳ ವರೆಗೆ ದೇಹದಿಂದಿದ್ದ ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳು ತಪಸ್ಸಿನಲ್ಲಿ ಬಹಳ ಉತ್ತುಂಗಕ್ಕೆ ಏರಿದವರು. ಅವರ ನಂತರದಲ್ಲಿ ಬಂದ ಶ್ರೀ ವಿದ್ಯಾರಣ್ಯ ಮಹಾಮುನಿಗಳು [ಹಂಪೆ ಮತ್ತು ವಿಜಯನಗರಕ್ಕೆ ಕಾರಣೀಭೂತರಾದವರು] ವಿದ್ಯಾಶಂಕರ ದೇಗುಲವನ್ನು ಕಟ್ಟಿಸಿದರು ಎನ್ನುತ್ತವೆ ಶೃಂಗೇರಿ ಮಠದ ದಾಖಲೆಗಳು. ಇಲ್ಲಿನ ವಿಶೇಷವೆಂದರೆ ಸೂರ್ಯರಶ್ಮಿ ಒಂದೊಂದು ಋತುವಿನಲ್ಲೂ ಅಲ್ಲಿರುವ ವಿವಿಧ ಮಧ್ಯಭಾಗದ ಬಾಗಿಲು ಮತ್ತು ಕಿಟಕಿಗಳ ಮೂಲಕ ಹಾದು ದೇವಸ್ಥಾನದ ಒಳಗೆ ಹೋಗಿ ಲಿಂಗವನ್ನು ದರ್ಶಿಸುತ್ತವೆ, ಇಲ್ಲಿನ ಹನ್ನೆರಡು ಕಂಬಗಳು ಹನ್ನೆರಡು ರಾಶಿಗಳನ್ನು ಬಿಂಬಿಸುತ್ತವೆ. ವಿದ್ಯಾ ಶಂಕರರಿಗೆ ನಮಸ್ಕರಿಸಿ ಇನ್ನೊಬ್ಬ ಮುನಿಯ ಬಗ್ಗೆ ತಿಳಿಯೋಣ.

ಮತ್ತೊಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಂದಿರ. ತಮ್ಮ ಸಾಧನೆ ಮುಗಿದ ಮೇಲೆ ಅರೆಘಳಿಗೆಯೂ ನಿಲ್ಲದ ಈ ಮುನಿಜನ ತಮ್ಮ ಸ್ವ ಇಚ್ಛೆಯಿಂದ ಸಮಾಧಿಯ ಆಳದಲ್ಲಿ ಪದ್ಮಾಸೀನರಾಗಿ ಕುಳಿತು ಮೇಲೆ ತಮ್ಮನ್ನು ಮುಚ್ಚಿಬಿಡುವಂತೆ ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸುತ್ತಾರೆ. ಇದು ಶಿಷ್ಯಂದರನ್ನು ಚಣಕಾಲ ದುಃಖಕ್ಕೆ ಈಡುಮಾಡಿದರೂ ಗುರುವಾಜ್ಞೆಯನ್ನು ಮೀರಲಾಗದ ಶಿಷ್ಯರು ಹಾಗೆ ಮಾಡುತ್ತಾರೆ. ಅಂತಹ ಕೊನೇಘಳಿಗೆಯಲ್ಲಿ ಗುರು-ಶಿಷ್ಯರ ಮಾತುಕತೆ ನಡೆದು ಶಿಷ್ಯರ ಅನುವು-ಆಪತ್ತಿನಲ್ಲಿ ಗುರುವು ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಇಂತಹ ಹೃದಯವಿದ್ರಾವಕ ಸನ್ನಿವೇಶದಲ್ಲಿ ಸಮಾಧಿಸ್ಥರಾಗುವ ಮುನಿಜನರು ತಮ್ಮ ದಿವ್ಯಚೈತನ್ಯದಿಂದ ಬಹುಕಾಲ ಅಲ್ಲಿ ಸುಪ್ತಸ್ಥಿತಿಯಲ್ಲಿ ನೆಲೆಸಿ ಭಕ್ತರನ್ನು ಹರಸುತ್ತಿರುತ್ತಾರೆ. ಈ ದಿವ್ಯ ಚೈತನ್ಯ ಸ್ವರೂಪೀ ಮುನಿಜನರು ಕಾಲವಾದ ದಿನವನ್ನು ಹಬ್ಬದ ರೀತಿ ಆಚರಿಸುವುದೇ ಪುಣ್ಯ.


ಬಹುತೇಕರಿಗೆ ಗುರುವಾಗಿ, ಬಹಳ ಜನಪ್ರಿಯರಾಗಿ, ಜನರ ಭಾವನೆಗಳಿಗೆ ತ್ವರಿತ ಸ್ಪಂದಿಸಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೩೯ನೇ ಆರಾಧನೆ ಇಂದು ನಡೆಯುತ್ತಿದೆ. ಅಂದರೆ ಇಂದಿಗೆ ೩೩೯ ವರ್ಷಗಳ ಹಿಂದೆ ಗುರುರಾಯರು ಬದುಕಿದ್ದರು, ನಮ್ಮಂತಹ ಜನರೊಟ್ಟಿಗೆ ಮನುಷ್ಯದೇಹದಿಂದ ತಿರುಗಾಡುತ್ತ ಜಪತಪಾದಿ ಹಲವು ಅನುಷ್ಠಾನದಲ್ಲಿದ್ದರು. ಆದರೆ ನಾವೇ ಹತಭಾಗ್ಯರು-ಅವರನ್ನು ನೇರವಾಗಿ ನೋಡಲಿಲ್ಲ, ಒಂದೊಮ್ಮೆ ನೋಡಿದ್ದರೂ ನಮಗದರ ಅರಿವಿಲ್ಲ! ಬದುಕಿದ್ದಾಗಲೇ ಸಮಾಧಿಮಾಡಿಸಿಕೊಂಡರೂ ತದನಂತರವೂ ಜನರಿಗೆ ಅಲ್ಲಿಂದಲೇ ಸಹಾಯ ಹಸ್ತನೀಡಿದ ಗುರುವು ತನ್ನ ವೈಯಕ್ತಿಕ ಬದುಕನ್ನ ಕಡೆಗಣಿಸಿ ಸಮಾಜಕ್ಕಾಗಿ ತನ್ನ ಬದುಕನ್ನು ಧಾರೆ ಎರೆದಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಬೇಸರಗೊಂಡು ಬಾವಿಗೆ ಹಾರಿ ಪ್ರಾಣತೆತ್ತ ಪೂರ್ವಾಶ್ರಮದ ಸಹಧರ್ಮಿಣಿಗೆ ಮೋಕ್ಷವನ್ನು ಕರುಣಿಸಿದ್ದಾರೆ. ಲೌಕಿಕದ ಹಲವು ಜನರಿಗೆ ಇದೆಲ್ಲಾ ಅರ್ಥವಿಹೀನವೆನಿಸಿದಂತೆ ಕಂಡರೂ ಸನ್ಯಾಸಿಗಳಿಗೆ ಅವರ ಆತ್ಮಜ್ಞಾನ ಎಲ್ಲವನ್ನೂ ಹೇಳುತ್ತದೆ. ಯಾವುದನ್ನು ತೊರೆಯಲಾಗದೋ ಅಂತಹ ವ್ಯಾಮೋಹವನ್ನೇ ಹಿಂದಕ್ಕೆ ಹಾಕಿ ತಾನು ಮುನ್ನಡೆದರು ಶ್ರೀ ರಾಘವೇಂದ್ರರು.

ಹಲವಾರು ಜನರು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಅವರನ್ನು ನೆನೆದು ಫಲವನ್ನು ಪಡೆದಿದ್ದಾರೆ. ಇಂತಹ ಸದ್ಗುರುವಿನ ಸ್ಮರಣೆ ಇವತ್ತಿನ ಭಕ್ತಿಸಿಂಚನದಲ್ಲಿ-

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ತುಂಗೆಯ ದಡದಲಿ ಮನೆಮಾಡಿಹ
ಮಹನೀಯ ಮುನಿಯೆ ನಿನ್ನನು ನೆನೆವೆ
ಅಂಗಳದಲಿ ಚಿತ್ರವು ಎದುರಾಗಲು
ಒಮ್ಮೆ ನಿನಗೆ ನಾ ಕೈಮುಗಿವೆ

ಮಂಚಾಲೆಯ ಆ ಊರಲಿ ನೆಲೆಸುತ
ಸಂಚಿತ ವ್ಯಾಧಿಗಳನು ಕಳೆದೆ
ಅಂಚೆಯ ತೆರದಲಿ ಭಕುತರ ದೂರನು
ಕೊಂಚವೂ ಬಿಡದೆ ಆಲಿಸುವೆ

ವೀಣಾಗಾನ ವಿನೋದನೆ ನುತಿಸಲು
ತ್ರಾಣವು ಯುಕ್ತಿಯು ನಮಗಿಲ್ಲ
ಪ್ರಾಣದೇವನೆಂದೆನಿಸಿದ ಗುರುವರ
ಗಾಣದ ಎತ್ತುಗಳ್ ನಾವೆಲ್ಲ !

ಜನನೊಂದರು ಸ್ವೀಕರಿಸೆ ಸಮಾಧಿಯ
ಮನಬೇಗುದಿ ತಾಳದೆ ಅಂದು
ಅನುದಿನ ಜನಸಮುದಾಯವ ಹರಸುವ
ಘನಮಹಿಮನೆ ಜಯನಮೋ ಎಂದು

ಆರಾಧಿಸುವೆವು ಭಾವ ತರಂಗದಿ
ನಾರಯಣ ರೂಪನೆ ನಮನ
ಕಾರಣಗಳ ನೀ ಹೇಳದೆ ಮನ್ನಿಸು
ಘೋರದುರಿತಗಳ ಕಳೆದು ದಿನಾ

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||


--ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ 'ಭಕ್ತಿ ಸಿಂಚನ ' ಮಾಲಿಕೆಯಿಂದ


Tuesday, August 24, 2010

ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರೀ ಗಾಯತ್ರೀ ದೇವಿ

[ಚಿತ್ರಗಳ ಋಣ : ಅಂತರ್ಜಾಲ ]
ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರಾವಣ ಶುದ್ಧ ಹುಣ್ಣಿಮೆ ನೂಲು ಹುಣ್ಣಿಮೆ ಎಂದೇ ಜನಜನಿತ. ಸಾಮಾನ್ಯವಾಗಿ ಇಲ್ಲಿಯವರೆಗೆ ಸುರಿವ ಮುಂಗಾರಿನ ಮುಸಲಾಧಾರೆಗೆ ಸಾಥ್ ಕೊಟ್ಟು ಹೆದರಿಸುವ ಸಮುದ್ರರಾಜ ವರುಣನಿಗೆ ಉಳ್ಳವರು ಬಂಗಾರದ ಜನಿವಾರ ಅರ್ಪಿಸಿ ತಮಗೆ ಇನ್ನು ಮುಂದೆ ಒಂದು ಹಂತಕ್ಕೆ ಕೆಲಸಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸಹಕರಿಸು ಎಂದು ಪ್ರಾರ್ಥಿಸುವ ದಿನ. ನಮ್ಮ ಪಂಚಭೂತಗಳಲ್ಲಿ ಒಂದಾದ ನೀರಿಗೂ ನಮ್ಮ ವರುಣಮಹಾರಾಜರಿಗೂ ಮತ್ತು ಇಂದ್ರಾದಿ ದೇವತೆಗಳಿಗೂ ಒಳಗೊಳಗೆ ಇಂಟರ್ನೆಟ್ ಇದೆ! ಈ ಅತೀ ಬ್ರಾಡ್ಬ್ಯಾಂಡ ನೆಟ್ ಮೂಲಕ ಅವರು ಸದಾಕಾಲ ಸಂಪರ್ಕದಲ್ಲಿರುತ್ತಾರೆ!

ರಕ್ಷಾಬಂಧನ 'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! ಈಗ ಪ್ರಾಣಿಗಳೂ ಇಲ್ಲ, ಇದ್ದ ಪ್ರಾಣಿಗಳಿಗೆ ಕಾಡಿಲ್ಲ ಹಾಗಾಗಿ ಹಗಲಿಡೀ ಸತ್ಯೋ ಇದ್ಯೋ ಎಂದು ಅಲ್ಲಿಲ್ಲಿ ಅಡಗಿ ಬದುಕುವ ಆ ಜೀವಿಗಳು ರಾತ್ರಿ ರೈತರ ಜಮೀನುಗಳಿಗೆ ನುಗ್ಗುತ್ತವೆ, ನುಗ್ಗಿ ನಿಲ್ಲಿಸಿದ ಬೆದರುಬೊಂಬೆಯನ್ನೇ ಕೆಡವುಹಾಕಿ ತಮ್ಮ ಮೇವನ್ನು ಹುಡುಕುತ್ತವೆ! ಇದು ಡಾರ್ವಿನ್ ವಿಕಾಸ ವಾದ.

ಬರುಬರುತ್ತ ಶಾಲೆ-ಕಾಲೇಜುಗಳಲ್ಲಿ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಈ ಹಬ್ಬವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಾರೆ, ಇದಕ್ಕೆ ಕಾರಣ ರಕ್ಷಾಬಂಧನದ ನೆಪದಲ್ಲಾದರೂ ಕೈಕೈ ಸೋಕಿಸಿಕೊಂಡು ಪುಲಕಿತರಾಗುವ ಬಯಕೆ ಎಂಬುದು ನನ್ನ ಅಭಿಪ್ರಾಯ; ಇದಕ್ಕೆ ಪುರಾವೆಯಾಗಿ ನನ್ನೆದುರೇ ಕೆಲವು ಜೋಡಿಗಳು ಹಾಗೆ ರಾಖಿ ಕಟ್ಟಿಕೊಂಡವರು ಈಗ ನಿಜಜೀವನದ ಜೋಡಿಗಳಾಗಿದ್ದಾರೆ, ಇನ್ನು ಕೆಲವರು ಉಪೇಂದ್ರನ ಕೆಟ್ಟ ಉಪದೇಶವನ್ನು ಸಿನಿಮಾದಿಂದ ಪಡೆದು ಪರಸ್ಪರ ದ್ವೇಷಿಕರಾಗಿ ಬದುಕುತ್ತಿದ್ದಾರೆ. ಇರಲಿ. ಇಲ್ಲಿ ರಾಖಿ ಕಟ್ಟುವುದು ಮುಖ್ಯವಲ್ಲ, ಅದರ ಹಿಂದಿನ ಮನೋಭೂಮಿಕೆ ಬಹಳ ಮುಖ್ಯ. ರಾಖಿ ಕಟ್ಟಿದ ತಕ್ಷಣ ಅವರು ಅಣ್ಣ-ತಂಗಿ ಆಗುತ್ತಾರೆಂಬ ಭಾವನೆ ಸುಳ್ಳು, ರಾಖಿ ಕಟ್ಟದಿದ್ದರೆ ಅವರು ಹಾಗೆ ನಡೆಯಲಾಗುವುದಿಲ್ಲ ಎಂಬ ಅನಿಸಿಕೆಯೂ ಅಷ್ಟೇ ಸುಳ್ಳು.


ಕಟ್ಟುವ ರಾಖಿ ಬಹಳ ಆಡಂಬರದ, ಬಹಳ ಅಲಂಕಾರವನ್ನು ಹೊಂದಿದ ಮತ್ತು ಬಹಳ ದುಬಾರಿಯ ದಾರವೇ ಆಗಬೇಕೆಂದೇನಿಲ್ಲ. ಕೇವಲ ಸಾದಾ ರೇಷ್ಮೆ ದಾರ ಕೂಡ ರಾಖಿಯಾಗಿ ಉಪಯೋಗಿಸಲು ಯೋಗ್ಯ. ಮಾರುಕಟ್ಟೆಯಲ್ಲಿ ಈಗ ಬಹಳ ವಿಧದ ರಾಖಿಗಳು ಸಿಗುತ್ತಿವೆ. ಸಂಗೀತ ಹಾಡುವ, ಪರಿಮಳ ಬೀರುವ, ಗಡಿಯಾರ ಹೊಂದಿರುವ, ಛಾಯಾಚಿತ್ರ ಹಚ್ಚಿರುವ ರಾಖಿಗಳೂ ನೋಡಸಿಗುತ್ತವೆ. ಇಲ್ಲಿ ಉದ್ದಿಮೆದಾರರು ತಮ್ಮ ಸೃಜನಶೀಲತೆ ಮೆರೆದು ಒಂದಷ್ಟು ಕಾಸು ಮಾಡಿಕೊಳ್ಳಲು ನೋಡುತ್ತಾರೆ. ಇವೆಲ್ಲದರ ಹಿಂದೆ ನಾವು ಭಾವಿಸಬೇಕಾದ್ದು ಒಂದೇ -ರಾಖಿ ಎಂಬುದು ರಕ್ಷಣೆಯ ದ್ಯೋತಕ.

ಉಪಾಕರ್ಮ ನಡೆಸುತ್ತಿರುವುದು

ಉಪಾಕರ್ಮಕ್ಕೆ ಬರೋಣ. ಇಂದಿನ ಜನಸಾಮಾನ್ಯರಲ್ಲಿ ಬಹಳ ಜನ ತಮಗೆಲ್ಲಾ ಜನಿವಾರ ಇರಲಿ ಎಂದು ಹಾಕಿಕೊಳ್ಳತೊಡಗಿದ್ದಾರೆ. ಇಲ್ಲೂ ಕೂಡ ಅದರ ಆಚರಣೆಗಿಂತ ಅದರ ತತ್ವಾನುಸರಣೆ ಮುಖ್ಯ. ಜನಿವಾರಕ್ಕೆ ಉಪವೀತ, ಯಜ್ಞೋಪವೀತ ಎಂದೂ ಕರೆಯುತ್ತೇವೆ. ಆಂಗ್ಲ ಭಾಷೆಯಲ್ಲಿ ಇದನ್ನು ಬೇರೆ ಹೆಸರು ಕಾಣದೆ ’ಸೇಕ್ರೆಡ್ ಥ್ರೆಡ್ ’ಎಂದು ಕರೆದುಕೊಂಡಿದ್ದೇವೆ --ನಾವೇ, ಯಾಕೆಂದರೆ ಆಂಗ್ಲರಲ್ಲಿ ಇದರ ಬಳಕೆಯಿಲ್ಲ ಅಲ್ಲವೇ ? ಶುದ್ಧ ಹತ್ತಿಯಿಂದ ಕೈಯ್ಯಲ್ಲಿ ತಕಲಿ ಎನ್ನುವ ವಸ್ತುವಿನಿಂದ ತಿರುಗಿಸಿ ದಾರಮಾಡಿ ಮೂರು ಮುಖ್ಯ ದಾರಗಳಲ್ಲಿ ಒಂದೊಂದರಲ್ಲೂ ಇನ್ನೂ ಮೂರು ಮೂರು ಸೇರಿಸಿ ಒಟ್ಟಿಗೆ ೨೭ ದೇವತೆಗಳನ್ನು ಆಹ್ವಾನಿಸಿ ಅದರಲ್ಲಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ಆಮೇಲೆ ಅದನ್ನು ಸೂರ್ಯನ ಅಪ್ಪಣೆ ಪಡೆದು, ಭೂಮಿತಾಯಿಮೇಲೆ ಇರಿಸಿ ನಮಸ್ಕರಿಸಿ, ತಾನು ತತ್ವಾವಲಂಬಿ ಎಂಬುದನ್ನು ಅಗ್ನಿ ಕಾರ್ಯದ ಮೂಲಕ ಅಗ್ನಿಗೆ ತಿಳಿಹೇಳಿ ಆಮೇಲೆ ಧರಿಸಬೇಕಾಗುತ್ತದೆ. ಹೀಗೆ ಧರಿಸಿದ ಮೇಲೆ ಅದಕ್ಕೆ ಪೂರಕವಾದ ಕೆಲವು ಆಚರಣೆಗಳು ಸದಾ ಇರುತ್ತವೆ. ನಾವು ಎಲ್ಲೇ ಇದ್ದರೂ ಅವುಗಳನ್ನು ಬಿಡುವಂತಿಲ್ಲ. ನಮ್ಮ ಮೈಮೇಲೆ ದೇವರನ್ನು ಧರಿಸಿದ್ದೇವೆ ಎಂದೇ ತಿಳಿದು ವರ್ತಿಸಬೇಕಾಗುತ್ತದೆ. ಅದರಲ್ಲಿರುವ ದೇವತೆಗಳು ನಮ್ಮ ಪ್ರತೀ ಕೆಲಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ! ಹೀಗಾಗಿ ಯಾರು ಯಾವಾಗ ಹೇಗೆ ಬೇಕೆಂದರೂ ಧರಿಸಿದ ದಾರ ಜನಿವಾರವಾಗುವುದಿಲ್ಲ. ಅದರಂತೇ ಧರಿಸಿದ ದಾರದ ಮಹತ್ವ ತಿಳಿಯದೇ ಬರೇ ಸುಮ್ಮನೆ ಎಲ್ಲರೂ ಧರಿಸುತ್ತಾರೆ ತನಗೂ ಇರಲಿ ಎಂದು ಧರಿಸಿದರೆ ಅದು ನ್ಯಾಷನಲ್ ವೇಸ್ಟು!

ಅರಿತರದು ಬಲು ಹಗುರ ಈ ದಾರ ಜನಿವಾರ
ಅರಿವಿರದೆ ಧರಿಸಿದರೆ ಅದು ಬಹಳ ಭಾರ
ಪರಹಿತದ ನೆಲೆಯಲ್ಲಿ ಸರಿಯಾಚರಣೆ ನಡೆಸಿ
ಪರಿಪಕ್ವತೆಯ ಪಡೆಯೋ | ಜಗದಮಿತ್ರ

ಜಗದಮಿತ್ರ ಸಾರಿದ- ನೀವು ನೋಡಿದಿರಿ, ಆಸ್ತಿಕನೊಬ್ಬ ದೇವರಲ್ಲಿ ಯಾವ ಭಕ್ತಿ ಶ್ರದ್ಧೆ ಹೊಂದಿರುತ್ತಾನೋ ಅಷ್ಟೇ ಆಸ್ಥೆಯನ್ನು ಈ ಯಜ್ಞೋಪವೀತದ ಮೇಲೂ ಇಡಬೇಕಾಗುತ್ತದೆ. ಯಜ್ಞದಲ್ಲಿ ಅಗ್ನಿಗೆ ನಾವು ವಚನವಿತ್ತು ಧರಿಸುವ ಅತಿ ವಿಶಿಷ್ಟ ದಾರ ಇದಾಗಿರುವುದರಿಂದ ನಾವು ಮಲ-ಮೂತ್ರಾದಿ ವಿಸರ್ಜನಾ ಕಾರ್ಯಗಳಿಗೆ ಹೋದಾಗ ಅದನ್ನು ’ ಸಸ್ಪೆಂಡ್ ಮೋಡ್ ’ ನಲ್ಲಿ ಇಟ್ಟುಕೊಳ್ಳುವ ಗೌರವದ ಕ್ರಮವೂ ಇದೆ! ಇಂತಹ ದಾರವನ್ನು ಧರಿಸಿದ ಮೇಲೆ ಎಂತೆಂತಹ ಆಹಾರವನ್ನು ತಿನ್ನಬೇಕು-ಯಾವ ಆಹಾರ ವರ್ಜ್ಯ ಎಂಬುದೂ ಕೂಡ ವೇದಮಂತ್ರಗಳಲ್ಲೇ ಹೇಳಲ್ಪಟ್ಟಿದೆ. ಇದೂ ಒಂದು ಹಂತದ ಸಾಧನೆಯಾದ್ದರಿಂದ ಎಲ್ಲರಿಗೂ ಇದು ರುಚಿಸುವುದಿಲ್ಲ. ಪ್ರಾಯಶಃ ’ ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್ ’ ಎಂಬ ಮನೋವೃತ್ತಿಯ ಜನರಿಗೆ ಆ ಆಂಗ್ಲ ಗಾದೆ ಹಿಡಿಸುತ್ತದೆ ಮತ್ತು ಅಂಥವರಿಗೆ ಈ ಜನಿವಾರ ಯೋಗ್ಯವಲ್ಲ.

ಉಪನಯದ ಆದಿಭಾಗ -ಕಲಶ ಸ್ನಾನ

ಜನಿವಾರ ಧರಿಸಿದ ವ್ಯಕ್ತಿ ನಿತ್ಯವೂ ಸ್ನಾನ ಮಾಡಲೇ ಬೇಕು. ಮುಡಿಯಿಂದ-ಅಡಿಯವರೆಗೂ ಸ್ನಾನವಾದರೆ ಒಳ್ಳೆಯದು, ಅದಿಲ್ಲಾ ತಲೆಯೊಂದನ್ನುಳಿದು ಮಿಕ್ಕುಳಿದ ದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ನಾವು ಸ್ನಾನಮಾಡುವಾಗ ೨೭ ದೇವತೆಗಳೂ ಸ್ನಾನಮಾಡುತ್ತಾರೆ ಎಂಬ ಕಲ್ಪನೆಯಿರಬೇಕು. ನಮ್ಮ ಪೂರ್ವಜರು ಇದನ್ನೆಲ್ಲಾ ಎಷ್ಟು ಚೆನ್ನಾಗಿ ನಮಗೆ ಹೇಳಿದರು ನೋಡಿ. ಹಲವು ಪವಿತ್ರನದಿಗಳ ನೀರನ್ನು ನಾವು ಸ್ನಾನಮಾಡಿದರೆ ಪುಣ್ಯ ಎಂದರು, ಆದರೆ ದಿನವೂ ಎಲ್ಲಾನದಿಗಳಿಗೂ ಭೇಟಿನೀಡಲು ಸಾಧ್ಯವೇ? ಇಲ್ಲವಲ್ಲ! ಹೀಗಾಗಿ ಅದಕ್ಕೆ ಪರ್ಯಾಯವಾಗಿ ಆ ಪುಣ್ಯನದಿಗಳನ್ನು ನಾವು ಸ್ನಾನಮಾಡುವ ನೀರಿಗೇ ಆಹ್ವಾನಿಸಿ ಅದರಿಂದ ಸ್ನಾತರಾಗಿ ಎಂದರು.

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

-- ಇದು ಆ ಪುಣ್ಯನದಿಗಳಲ್ಲಿ ಪ್ರಾರ್ಥನೆ. ತಾಯಂದಿರಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಕಾವೇರಿ ಇನ್ನೂ ಹಲವು ನದಿಗಳೇ ನೀವೆಲ್ಲ ಬಂದು ಈ ನೀರಿನಲ್ಲಿ ಸೇರಿರೆಂದು ನಿಮ್ಮಲ್ಲಿ ವಿಜ್ಞಾಪನೆ. ಎಂತಹ ಸುಮಧುರ ಅನುಭವ. ಬೆಳಗಿನ ಜಾವ ಎದ್ದು, ದೇವರನ್ನು ನೆನೆಸಿ, ಒಳ್ಳೆಯ ಮನಸ್ಸಿನಿಂದ ಈ ಪ್ರಾರ್ಥನೆಯೊಂದಿಗೆ ಶುದ್ಧನೀರಿನಲ್ಲಿ ಸ್ನಾನಮಾಡಿ ಮುಂದಿನ ನಮ್ಮ ನಿತ್ಯನೈಮಿತ್ತಿಕ ದೇವಪೂಜಾದಿ ಕಾರ್ಯಗಳಿಗೆ ಅನುವುಮಾಡಿಕೊಳ್ಳಬೇಕು. ಹೀಗೆ ನಾವು ದೇವ ಪೂಜೆ ಮಾಡಿದ ನಂತರ ಹತ್ತಿರದಲ್ಲಿ ನಮಗೆ ಲಭ್ಯವಿರುವ ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಸ್ವಲ್ಪ ಅಕ್ಕಿಯನ್ನು ನೀಡಬೇಕು. ಇವತ್ತಿಗೆ ಹಲವರಿಗೆ ಅಗ್ನಿಕಾರ್ಯ ಸಾಧ್ಯವಿಲ್ಲವಾಗಿದೆ, ಆದರೆ ಪ್ರತೀ ವ್ಯಕ್ತಿಗೂ ಮಾನಸಪೊಜೆ ಎಂಬುದೊಂದಿದೆಯಲ್ಲ, ಅ ಕ್ರಮದಂತೇ ಅಗ್ನಿಗೆ ಮಾನಸ ಪೂಜೆ ನೇರವೇರಿಸಿ ನಾವು ಮಾಡಲೊಪ್ಪಿದ ಕಾರ್ಯದಲ್ಲಿ ಚ್ಯುತಿಯಾಗಿಲ್ಲದ ಭಾವವನ್ನು ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ಹಕ್ಕು-ಬಾಧ್ಯತೆಯಿರುವ ಈ ದಾರದ ನಿಜಸ್ವರೂಪವನ್ನು ಅರಿತ ನೀವೇ ಹೇಳಿ ನಮ್ಮಲ್ಲಿ ಈಗ ಎಷ್ಟು ಜನಸಾಮಾನ್ಯರು ಇದನ್ನು ಧರಿಸಲು ಯೋಗ್ಯರು?


ಉಪನಯನದಲ್ಲಿ ಮೊದಲ ಬಾರಿಗೆ ಜನಿವಾರ ಧಾರಣೆ

ಜನಿವಾರವನ್ನು ಬಹುತೇಕ ೭ ವರ್ಷ ವಯಸ್ಸಿನ ಒಳಗೆ ಹಾಕುವುದಿಲ್ಲ. [ಧರಿಸುವ ಮಗುವಿಗೆ ಮಾತಿನಲ್ಲಿ ಸ್ಪಷ್ಟತೆ ಬರಬೇಕು, ಮಂತ್ರದ ಉಚ್ಚಾರಗಳಲ್ಲಿ ಲೋಪ/ದೋಷ ಉಂಟಾಗಬಾರದು ಎಂಬ ಕಾರಣಕ್ಕಾಗಿ.ವೇದ ಮಂತ್ರಗಳನ್ನು ಮತ್ತು ಯೋಗಾಸನಗಳನ್ನೂ ತಪ್ಪಾಗಿ ಬಳಸಿದರೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ ! ] ಮೊದಲಾಗಿ ಅದನ್ನು ಹಾಕುವಾಗ ತಂದೆಯಿಂದ ಮಗನಿಗೆ ಅದು ಬ್ರಹ್ಮೋಪದೇಶ ಸಂಸ್ಕಾರದ ಮೂಲಕ ಲಭ್ಯವಾಗಬೇಕಾಗುತ್ತದೆ. ಆಗ ತಂದೆಯೇ ಮಗನಿಗೆ ಗುರುವಾಗುತ್ತಾನೆ. ಬ್ರಹ್ಮೋಪದೇಶ ಬೋಧಿಸುತ್ತಾನೆ. ಬ್ರಹ್ಮೋಪದೇಶದಲ್ಲಿ ಗಾಯತ್ರೀ ಮಂತ್ರ ಸೇರಿದಂತೆ ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಹಾಮಂತ್ರಗಳೂ ಸೇರಿರುತ್ತವೆ. ಇಲ್ಲಿ ಒಂದನ್ನು ನೆನೆಪಿಡಿ- ಈ ಉಪದೇಷ ತಂದೆಯ ಹೊರತು ಬೇರಾರಿಂದಲೂ ಪಡೆಯಲು ಅರ್ಹವಾಗಿರುವುದಿಲ್ಲ. ಈ ಗೌರವವೇನಿದ್ದರೂ ತಂದೆಗೇ ಸಲ್ಲಬೇಕಾಗುತ್ತದೆ. ಒಳ್ಳೆಯ ತಂದೆಯಿಂದ, ಒಳ್ಳೆಯ ಮುಹೂರ್ತದಲ್ಲಿ, ಒಳ್ಳೆಯ ಮಗನಿಗೆ ಉಪದೇಶ-ಯಜ್ಞ ಸಹಿತ ಧರಿಸಲು ಅನುಮೋದಿಸುವ ದಾರವೇ ಜನಿವಾರ. ಮೊದಲಾಗಿ ಒಮ್ಮೆ ಇದರ ಧಾರಣೆಯಾದ ಮೇಲೆ ಜೀವನ ಪೂರ್ತಿ ಅದನ್ನೇ ಹಾಗೇ ಇಟ್ಟುಕೊಳ್ಳಲು ಸಾಧ್ಯವೇ ? ಅದು ಹತ್ತಿಯದಾದ್ದರಿಂದ ಹಳೆಯದಾಗುತ್ತದೆ, ಬಣ್ಣಗೆಡುತ್ತದೆ, ಅದರಲ್ಲಿ ಕೊಳೆಸೇರುತ್ತದೆ ಈ ಎಲ್ಲ ಅನಿವಾರ್ಯ ಸಹಜ ಪ್ರಕ್ರಿಯೆಗಳಿಂದ ಕಳೆಗುಂದುವ ಜನಿವಾರವನ್ನು ಬದಲಾಯಿಸಿ ಮತ್ತೆ ಅಗ್ನಿಕಾರ್ಯದ ಮುಖೇನ ಹೊಸದನ್ನು ಪಡೆಯುವ ಕ್ರಮವೇ ಉಪಾಕರ್ಮ! ಇದನ್ನು ಬಿಟ್ಟು ನಮ್ಮಲ್ಲಿ ನಮ್ಮ ಕುಟುಂಬವರ್ಗದಲ್ಲಿ ಯಾರಾದ್ರೂ ಹಡೆದರೆ ಅಥವಾ ಸತ್ತರೆ ಆಗ ತಗಲಬಹುದಾದ ಆಶೌಚವನ್ನು, ಸೂತಕವನ್ನು ಕಳೆದುಕೊಳ್ಳುವ ದಿನ ಜನಿವಾರವನ್ನು ಬದಲಿಸಬೇಕಾಗುತ್ತದೆ. ಹೀಗೇ ಜನಿವಾರಕ್ಕೆ ಇವೆಲ್ಲಾ ಕಟ್ಟು-ನಿಟ್ಟಿನ ನಿಬಂಧನೆಗಳು ಇರುತ್ತವೆ. ಇದ್ಯಾವುದೂ ಇರದ ದಾರವನ್ನು ಅಲಂಕಾರಕ್ಕಾಗಿ ಧರಿಸಿದರೆ ಆಗ ’ಆ ದಾರ ಜೀವನದಿ ಬಲು ಭಾರ’ ಎಂಬ ಸ್ಥಿತಿ ಉಂಟಾಗುತ್ತದೆ.

ಇವತ್ತಿನ ದಿನಮಾನ ಬದಲಿರುವುದರಿಂದ ಕೆಲವರು ಕೇಳಬಹುದು " ನಮಗೆ ಜನಿವಾರ ಧರಿಸುವ ಯೋಗ್ಯತೆಯಿಲ್ಲವೇ ? " ಇದೆಯಪ್ಪಾ ಎಲ್ಲರಿಗೂ ಇದೆ, ಆದರೆ ಮೇಲೆ ನಾನು ಸ್ವಲ್ಪದರಲ್ಲೇ ಹೇಳಿದೆನಲ್ಲ ಅದನ್ನು ಅನುಸರಿಸುತ್ತೀರಾದರೆ ನೀವು ಜನಿವಾರ ಧರಿಸಲು ಬಹಳಯೋಗ್ಯರಾಗಿರುತ್ತೀರಿ. ಅದಿಲ್ಲಾ ನೀವದನ್ನು ಧರಿಸಿದರೆ ಯಾವ ಪ್ರಯೋಜನಕ್ಕೂ ಬಾರದು. ಸರಿಯಾದ ಆಚರಣೆಯಲ್ಲಿದ್ದು ಉಪನೀತನಾದವನಿಗೆ ಅದು ಅಗೋಚರವಾದ ಶಕ್ತಿಯನ್ನು ಸ್ಪುರಿಸುತ್ತದೆ! ಶರೀರದಲ್ಲಿ ಕಾಸ್ಮಿಕ್ ರೇಡಿಯೇಶನ್ ಆಗುತ್ತದೆ!

ಹಿಂದಕ್ಕೆ ಗುರುಗೋವಿಂದ ಭಟ್ಟರು ಸಂತ ಶಿಶುನಾಳ ರೀಫ ಸಾಹೇಬರಿಗೆ ಉಪನಯನ ಮಾಡಿದ್ದರಂತೆ! ಆ ಕಾಲಕ್ಕೆ ಶರೀಫರ ಬಾಯಿಂದ ಬಂದ ಭಕ್ತಿಪೂರ್ವಕ ಹಾಡು --

ಹಾಕಿದ ಜನಿವಾರವಾ ಸದ್ಗುರುನಾಥ
ಹಾಕಿದ ಜನಿವಾರವಾ

ಹಾಕಿದ ಜನಿವಾರ ನೂಕಿದ ಭವಭಾರ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದೂ

ಹಾಕಿದ ಜನಿವಾರವಾ.......

---ರೀಫರಾದರೇನಾಯ್ತು ಅವರಿಗೆ ಆತ್ಮಾವಲೋಕನದ ಅನುಭವವಾಗಿತ್ತು. ಅವರಿಗೆ ಸಿಕ್ಕ ಗುರುವಿನ ಮಹತ್ತು ಹಾಗಿತ್ತು. ಸಮಾಜವನ್ನೇ ಎದುರುಹಾಕಿಕೊಂಡರೂ ತನ್ನನ್ನು ನಂಬಿದ ಶಿಷ್ಯನನ್ನು ಕೈಬಿಡಲಿಲ್ಲ ಆ ಸದ್ಗುರು! ರೀಫರ ಆತ್ಮಾನುಭೂತಿ ನೋಡಿದ ಗೋವಿಂದ ಭಟ್ಟರು ಅವರಿಗೆ ಉಪನಯನ ಸಂಸ್ಕಾರವನ್ನು ಕೊಡುತ್ತಾರೆ. ರೀಫರ ಬಗ್ಗೆ ತಮಗೆಲ್ಲಾ ಹೊಸದಾಗಿ ಹೇಳಬೇಕೇನು ? ಗೊತ್ತಿರುವ ವಿಷಯ ಅಲ್ಲವೇ? ಅದೇ ರೀತಿ ಇಂದಿಗೂ ಸಹಿತ ಇಂತಹ ಮಂಗಳ ಕಾರ್ಯಕ್ಕೆ ನಮ್ಮಲ್ಲಿ ಗುರುಮುಖಗಳಿವೆ.

ಜನಿವಾರ ಹಾಕಿಸಿಕೊಳ್ಳುವ ವರೆಗೆ ಒಳ್ಳೆಯ ಆಚರಣೆಯಲ್ಲಿದ್ದು ಆಮೇಲೆ ಅದನ್ನು ತೊರೆದರೆ ಜನಿವಾರ ಹಾಕಿದವರಿಗೆ ಅದರ ಲೋಪದೋಷ ತಟ್ಟುತ್ತದೆ. ಇದು ಜಾಮೀನು ವ್ಯವಹಾರದಂತಿರುತ್ತದೆ--ತಿಳಿದಿರಲಿ. ಯಾವ ಮಂತ್ರ-ತಂತ್ರ ಏನೇ ಇದ್ದರೂ ಉಪದೇಶಪಡೆದಾತ ಸರಿಯಾಗಿ ನಡೆಸದಿದ್ದಲ್ಲಿ ಉಪದೇಶ ಕೊಟ್ಟಾತನಿಗೆ ಗ್ರಹಚಾರ ಪ್ರಾರಂಭವಾಗುತ್ತದೆ! ಇದಕ್ಕಾಗಿ ಯಾರಿಗಾದರೂ ಜನ್ಮಪೂರ್ತಿ ತಾನು ಪೂರಕ ಆಚರಣೆಯಲ್ಲಿರುತ್ತೇನೆಂಬ ನಂಬಿಕೆ ’ಒಳಗಿನಿಂದ’ ಬರುತ್ತಿದ್ದರೆ, ಅದು ಅಷ್ಟು ಬಲವಾಗಿದ್ದರೆ ಅಂಥವರು ಜನಿವಾರ ಧರಿಸಿಬಹುದು. ಅದಕ್ಕಾಗಿ ನಮ್ಮ ’ವೇದಸುಧೆ’ ಬಳಗ ಕಾರ್ಯತತ್ಪರವಾಗಿದೆ. [ಇಲ್ಲಿ ಯಾವುದೇ ಜಾತಿ, ಜನಾಂಗ ಇವುಗಳ ವೈಷಮ್ಯ ಇರುವುದಿಲ್ಲ, ಆದರೆ ಮೇಲಿನ ಕೆಲವು ಕಟ್ಟುಪಾಡುಗಳು ನಮ್ಮ ಸಂವಿಧಾನದಂತೇ ನಡೆಸಲೇ ಬೇಕಾದವು!]

ಬ್ರಹ್ಮೋಪದೇಶಕ್ಕೆ ಇನ್ನೊಂದು ಹೆಸರು ಉಪನಯನ. ನಮಗೆ ಹುಟ್ಟುವಾಗ ದೇವರು ನಯನಗಳೆರಡನ್ನು ಕೊಟ್ಟಿಯೇ ಇರುತ್ತಾನೆ. ಜನಿವಾರ ಹಾಕಿದ ಮೇಲೆ ನಮಗೆ ನಮ್ಮ ಅರ್ಹತೆಯ ವ್ಯಾಪ್ತಿ ವೃದ್ಧಿಸುತ್ತದೆ, ಜ್ಞಾನಮಾರ್ಗದಲ್ಲಿ ನಮಗೆ ಕಣ್ಣು ದೊರೆತಂತೇ ಮುಂದಿನ ನಮ್ಮ ಅಧ್ಯಯನ ಅಧ್ಯಾಪನ ಮೊದಲಾದ ಕಾರ್ಯಗಳಿಗೆ, ನಮ್ಮ ಜ್ಞಾನಾರ್ಜನೆಗೆ ಇದು ಇನ್ನೊಂದು ನಯನ [ಚಕ್ಷು, ಕಣ್ಣು] ಎಂಬ ಅರ್ಥದಲ್ಲಿ ಹೊಸದಾಗಿ,ಮೊದಲಾಗಿ ಜನಿವಾರ ಧರಿಸುವ ಈ ಸಮಾರಂಭಕ್ಕೇ ಉಪನಯನ ಎಂದರು!

ಎಲ್ಲರೂ ಮಾಡುತ್ತಾರೆಂದು ತಾವೂ ಮಾಡ ಹೊರಟಿದ್ದಕ್ಕೆ ಒಂದು ಉತ್ತಮ ಉದಾಹರಣೆಯನ್ನು ’ಬಿಸಿಲು ಬೆಳದಿಂಗಳು’ ಅಂಕಣದಲ್ಲಿ ನಮ್ಮ ಆದ್ಯರೂ ಆರಾಧ್ಯರೂ ಆದ ಶ್ರೀ ಶ್ರೀ ತರಳಬಾಳು ಸ್ವಾಮಿಗಳವರು ದಯಪಾಲಿಸಿದ್ದನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ-

ಒಮ್ಮೆ ನಮ್ಮ ಸರಕಾರೀ ಸರ್ವೇ ಮತ್ತು ರೆವಿನ್ಯೂ ಡಿಪಾರ್ಟ್ಮೆಂಟಿನ ಜನ ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ. ಪೂಜೆಯೆಲ್ಲಾ ಸಾಂಗವಾಗಿ ಇನ್ನೇನು ಮುಗಿಸುವಾಗ ಪುರೋಹಿತರು ಸಹಜವಾಗಿ ಮಂತ್ರ ಹೇಳಿದರು

" ಸರ್ವೇ ಜನಾಃ ಸುಖಿನೋ ಭವಂತು "

ತಕಳಿ ಸಮಸ್ಯೆ ಬಂದಿದ್ದೇ ಅಲ್ಲಿ! ಸಂಸ್ಕೃತದ ಗಂಧಗಾಳಿಯೂ ಇಲ್ಲದ ಅಲ್ಲಿರುವವರಿಗೆ ಅವರು ಏನು ಹೇಳುತ್ತಿದ್ದಾರೆಂಬುದರ ಅರ್ಥವಂತೂ ಆಗುತ್ತಿರಲಿಲ್ಲ, ಆದರೆ ’ ಸರ್ವೇ ಜನಾ ’ ಎಂದಿದ್ದರಲ್ಲ ಹೀಗಾಗಿ ರೆವಿನ್ಯೂ ಜನರ ತಕರಾರು ಪ್ರಾರಂಭವಾಯಿತು. ಅವರು ಪುರೋಹಿತರನ್ನು ಗದರಿಕೊಂಡರು.

" ಇಲ್ಲಿ ಸರ್ವೇ ಮತ್ತು ರೆವಿನ್ಯೂ ಎರಡೂ ಕಡೆಯ ಜನರಿದ್ದೇವೆ, ಆದರೆ ನೀವು ಸರ್ವೇ ಜನರಿಗೆ ಮಾತ್ರ ಅದು ಹೇಗೆ ಸುಖವಾಗಲಿ ಅಂದ್ರಿ "

ಪುರೋಹಿತರಿಗೆ ಒಂದು ಕಡೆ ನಗು ಮತ್ತು ಇನ್ನೊಂದು ಕಡೆ ಬೆವರು ಎರಡೂ ಬಂದವು. ಅಂತೂ ಕೊನೆಗೆ ಇಲ್ಲದ ಮಂತ್ರವನ್ನು ಕಟ್ಟಿ ಹೇಳಬೇಕಾದುದು ಅನಿವಾರ್ಯವಾಗಿ ಅವರು

" ರೆವಿನ್ಯೂ ಜನಾಃ ಸುಖಿನೋ ಭವಂತು " ಅಂತ ಹೇಳಿದರಂತೆ.

ಹೀಗೇ ನೋಡಿ ಎಲ್ಲರೂ ಮಾಡುತ್ತಾರೆಂದು ಅದರ ಮೌಲ್ಯ ತಿಳಿಯದೇ ನಾವೂ ಮಾಡಹೊರಟರೆ ಇಂತಹ ಹಲವಾರು ಹಾಸ್ಯಾಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಗೊತ್ತಿಲ್ಲದ್ದನ್ನು ತಿಳಿಸಿಕೊಡಲು ಜ್ಞಾನ ದೀವಿಗೆಗಳಾದ ಹಲವು ಪುಸ್ತಕಗಳಿವೆ, ಪ್ರಾಜ್ಞರು ಅನೇಕರು ನಮ್ಮ ನಡುವೆಯೇ ಬದುಕುತ್ತಿರುತ್ತಾರೆ, ಅವರನ್ನು ಕೇಳಿ ತಿಳಿದರೆ ತಪ್ಪೇನಿಲ್ಲವಲ್ಲ ! ಋಜುಮಾರ್ಗದವರಾದ ನಾವು ಎಲ್ಲವನ್ನೂ ಆಚರಿಸುವ ಮೊದಲು ಸರಿಯಾಗಿ ಅರಿಯೋಣ, ಅರ್ಥೈಸೋಣ, ಆಮೇಲೆ ಆಚರಿಸೋಣ -ಸರಿಯಾಗಿ, ಸಮರ್ಪಕವಾಗಿ ಅಲ್ಲವೇ ?


ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು ಮತ್ತು ಈ ರಕ್ಷಾಬಂಧನ ಎಲ್ಲರಿಗೂ ಪರಸ್ಪರ ರಕ್ಷೆಯನ್ನೀಯಲಿ, ದಿವ್ಯ ಚಕ್ಷುವಿನಂತಹ ’ಉಪನಯನ’ ವನ್ನೀಯಲಿ ಎಂದು ಆಶಿಸುತ್ತೇನೆ. ಜ್ಞಾನಕ್ಕಾಗಿ ಎಲ್ಲರೂ ಓದೋಣ, ಬೆಳೆಯೋಣ- ಬೆಳಗೋಣ ನಮ್ಮ ಮುಂದಿನ ಸಮಾಜವನ್ನು,

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||

-----ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ' ಹತ್ತಿರದಿಂದ ' ಪ್ರಬಂಧಗಳ ಮಾಲಿಕೆಯಿಂದ

Monday, August 23, 2010

ಶ್ರೀ ವಿಷ್ಣು ಸಹಸ್ರನಾಮದ ಪಠಣದಿ೦ದಾಗುವ ಪ್ರಯೋಜನ

ಶ್ರೀ ವಿಷ್ಣು ಸಹಸ್ರ ನಾಮದ ಫಲಶೃತಿ ಅಧ್ಯಾಯದಿ೦ದ:

ಭಕ್ತಿಮಾನ್ ಯ: ಸದೋತ್ಥಾಯ ಶುಚಿಸ್ತದ್ಗತಮಾನಸ:
ಸಹಸ್ರ೦ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ ||೫||

ಯಶ: ಪ್ರಾಪ್ನೋತಿ ವಿಪುಲ೦ಜ್ಞಾತಿಪ್ರಾಧಾನ್ಯಮೇವ ಚ
ಅಚಲಾ೦ ಶ್ರೀಯಮಾಪ್ನೋತಿ ಶ್ರೇಯ: ಪ್ರಾಪ್ನೋತ್ಯನುತ್ತಮಮ್ | |೬||

ನ ಭಯ೦ ಕ್ಕ್ವಿಚಿದಾಪ್ನೋತಿ ವೀರ್ಯ೦ ತೇಜಸ್ಚ ವಿ೦ದತಿ
ಭವತ್ಯರೋಗೋ ದ್ಯುತಿಮಾನ್ ಬಲರೂಪಾಗುಣಾನ್ವಿತ: || ೭||

ಭಕ್ತಿವ೦ತನೂ ಪರಿಶುಧ್ಧನೂ ಆದ ಯಾವನು ಯಾವಾಗಲೂ ಎದ್ದು ವಾಸುದೇವನಲ್ಲಿ ನೆಲೆಗೊ೦ಡ ಮನಸ್ಸುಳ್ಳವನಾಗಿ, ವಾಸುದೇವನ ಈ ಸಹಸ್ರನಾಮವನ್ನು ಪಠಿಸುತ್ತಾನೋ,ಅವನು ವಿಪುಲವಾದ ಯಶಸ್ಸನ್ನೂ,ತನ್ನ ಬ೦ಧುಗಳಲ್ಲಿ ಪ್ರಾಧಾನ್ಯತೆಯನ್ನೂ ಹೊ೦ದುತ್ತಾನೆ.ಅಚಲವಾದ ಸ೦ಪತ್ತನ್ನು(ಶ್ರೀಯನ್ನು)ಹೊ೦ದುತ್ತಾನೆ.ಸರ್ವೋತ್ತಮವಾದ ಶ್ರೇಯಸ್ಸನ್ನು ಪಡೆಯುತ್ತಾನೆ;ಎಲ್ಲಿಯೂ ಭಯವನ್ನು ಹೊ೦ದುವುದಿಲ್ಲ;ವೀರ್ಯವನ್ನೂ,ತೇಜಸ್ಸನ್ನೂ ಪಡೆಯುತ್ತಾನೆ;ರೋಗರಹಿತನೂ ಕಾ೦ತಿಯುಳ್ಳವನೂ ಮತ್ತು ಬಲರೂಪಗುಣಗಳಿ೦ದ ಕೂಡಿದವನೂ ಆಗುತ್ತಾನೆ.

ರೋಗಾರ್ತೋ ಮುಚ್ಯತೇ ರೋಗಾತ್ ಬದ್ಧೋ ಮುಚ್ಯೇತ ಬ೦ಧನಾತ್|

ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದ: ||೮||


ರೋಗಿಯೂ ರೋಗದಿ೦ದಲೂ,ಬದ್ಧನು ಬ೦ಧನದಿ೦ದಲೂ,ಭಯಗ್ರಸ್ತನು ಭಯದಿ೦ದಲೂ,ಆಪತ್ತಿನಲ್ಲಿರುವವನು ಆಪತ್ತಿ ನಿ೦ದಲೂ ಮುಕ್ತನಾಗುವನು.


‘ಕೃತಯುಗದಲ್ಲಿ ಧ್ಯಾನದಿ೦ದಲೂ,ತ್ರೇತಾಯುಗದಲ್ಲಿ ಯಜ್ಞದಿ೦ದಲೂ ,ದ್ವಾಪರಯುಗದಲ್ಲಿ ಅರ್ಚನೆಯಿ೦ದಲೂ ಯಾವುದನ್ನು ಹೊ೦ದಬಹುದೋ ಅದನ್ನು ಕಲಿಯುಗದಲ್ಲಿ ಕೇಶವನ ನಾಮ ಸ೦ಕೀರ್ತನೆಯಿ೦ದಲೇ ಹೊ೦ದಬಹುದು ( ವಿಷ್ಣು ಪುರಾಣ)

ಯಸ್ಮಿನ್ ದೇವಾಶ್ಚ ವೇದಾಶ್ಚ ಪವಿತ್ರ೦ ಕೃತ್ಸ್ನಮೇಕತಾಮ್ |
ವ್ರಜೇತ್ತನ್ಮಾನಸ೦ ತೀರ್ಥ೦ ತತ್ರ ಸ್ನಾತ್ವಾsಮ್ಮೃತೋ ಭವೇತ್ ||

ಜ್ಞಾನಹ್ರದೇ ಧ್ಯಾನಜಲೇ ರಾಗದ್ವೇಷಮಲಾಪಹೇ |
ಯ:ಸ್ನಾತಿ ಮಾನಸೇ ತೀರ್ಥೇ ಸ ಯಾತಿ ಪರಮಾ೦ ಗತಿಮ್ ||

ಆತ್ಮಾ ನದೀ ಸ೦ಯಮತೋಯಪೂರ್ಣಾ ಸತ್ಯಹ್ರದಾ ಶೀಲತಟಾ ದಯೋರ್ಮಿ: |
ತತ್ರಾವಗಾಹ೦ ಕುರು೦ ಪಾ೦ಡುಪುತ್ರ ನ ವಾರಿಣಾ ಶುದ್ಧ್ಯತಿ ಚಾ೦ತರಾತ್ಮಾ ||
“ಯಾವುದರಲ್ಲಿ ಸ್ನಾನಮಾಡಿ ದೇವತೆಗಳೂ ವೇದಗಳೂ ಪವಿತ್ರತೆಯನ್ನು ಮತ್ತು ಪೂರ್ಣವಾದ ಏಕತ್ವವನ್ನು ಹೊ೦ದುವರೋ ಅದೇ ಮಾನಸತೀರ್ಥ;ಅದರಲ್ಲಿ ಸ್ನಾನ ಮಾಡಿ ಮಾನವನು ಅಮೃತನಾಗುತ್ತಾನೆ.ಮಾನಸತೀರ್ಥದ ಜ್ಞಾನವೆ೦ಬ ಸರೋವರ ದಲ್ಲಿ,ರಾಗದ್ವೇಷಗಳನ್ನು ನಾಶ ಮಾಡುವ ಧ್ಯಾನಜಲದಲ್ಲಿ ಸ್ನಾನಮಾಡುವವನು ಪರಮಗತಿಯನ್ನು ಹೊ೦ದುತ್ತಾನೆ. ಆತ್ಮವೆ೦ಬ ನದಿಯು ಸ೦ಯಮತೋಯದಿ೦ದ ತು೦ಬಿದೆ;ಸತ್ಯವೇ ಅದರ ಆಳ: ಶೀಲವೇ ಅದರ ದಡ; ದಯೇಯೇ ಅದರ ತರ೦ಗ.ಹೇ ಪಾ೦ಡು ಪುತ್ರ ಅದರಲ್ಲಿ ಸ್ನಾನಮಾಡು.ಅ೦ತರಾತ್ಮವು ಬರಿಯ ನೀರಿನಿ೦ದ ಶುಧ್ಧವಾಗುವುದಿಲ್ಲ.( ಭೀಷ್ಮಾಚಾರ್ಯರು ಪಾ೦ಡವರಿಗೆ ಹೇಳಿದ ವಿಷ್ಣುಸಹಸ್ರನಾಮದ ಮೇಲೆ ಮಧ್ವಾಚಾರ್ಯರು ಭಾಷ್ಯದಲ್ಲಿ ಬರೆದದ್ದು)

ಕೆಲವರು ವಿತ್ತ೦ಡವಾದಿಗಳು ಕೇಳಬಹುದು! ಇವನ್ನೆಲ್ಲಾ ಅ೦ದರೆ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಲಲಿತಾ ಸಹಸ್ರನಾಮ, ಶ್ರೀ ಅರ್ಗಲಾ ಸ್ತೋತ್ರ,ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಇವುಗಳನ್ನು ಪಠಿಸುವುದರಿ೦ದ ಆಗುವ ಪ್ರಯೋಜನವೇನು? ಅವರಿಗೆ ನನ್ನ ಉತ್ತರವೇನೆ೦ದರೆ ಮೊದಲು ಪಠಿಸಲು ಆರ೦ಭಿಸಿ, ದಿನವೂ ತಪ್ಪಿಸಬೇಡಿ! ತದನ೦ತರ ದಿನದಿ೦ದ ದಿನದಿ೦ದ ದಿನಕ್ಕೆ, ನಿಮ್ಮ ಮನಸ್ಸಿನ ಭಾವನೆಗಳಲ್ಲಿ,ಲೌಕಿಕ ಜೀವನದಲ್ಲಿ,ಪ್ರತಿದಿನದ ಕಾರ್ಯ ನಿರ್ವಹಣೆಯಲ್ಲಿ ದೊರೆಯುವ ಯಶಸ್ಸನ್ನು ಅನುಭವಿಸಿ! ಆದರೆ ಇವೆಲ್ಲವಕ್ಕೂ ಮೊದಲೇ ಒ೦ದು ಮಾತು ಹೇಳುತ್ತೇನೆ!ನಿಮ್ಮಲ್ಲಿ ಅವುಗಳ ಮೇಲೆ ನ೦ಬಿಕೆಯಿರ ಬೇಕು, ಪಠಿಸುವಲ್ಲಿ ಶ್ರದ್ಧೆಯಿರಬೇಕು.ಒ೦ದು ದಿನ ಓದಿದ ಕೂಡಲೇ ನಿಮ್ಮಲ್ಲಿ ಯಾವುದೇ ಬದಲಾವಣೆಗಳೂ ಕ೦ಡುಬರಲಾರದು!ಏಕೆ೦ದರೆ ಒ೦ದು ಸ೦ತಾನವು ಭೂಮಿಗೆ ಕಾಲಿಡಬೇಕಾದರೇ ಸ೦ಪೂರ್ಣ ೯ ತಿ೦ಗಳು,೯ ದಿನ,೯ ಕ್ಷಣಗಳು ಬೇಕೇ ಬೇಕು!ಅ೦ಥಾದ್ದರಲ್ಲಿ ಒ೦ದು ದಿನದ ಕಾರ್ಯಾಚರಣೆಯಿ೦ದ,ಯಾ ಒ೦ದು ಸಲದ  ಇವೆಲ್ಲವುಗಳ ಪಠಣ ದಿ೦ದ ಪವಾಡವನ್ನ೦ತೂ ನಿರೀಕ್ಷಿಸಬೇಡಿ!ಇವುಗಳ ನಿರ೦ತರ ಪಠಣ ನಿಮ್ಮ ಬದುಕನ್ನು ಯಶಸ್ಸಿನ ಹಾದಿ ಯತ್ತ ಕೊ೦ಡೊಯ್ಯುವುದ೦ತೂ ಖಚಿತ !

( ಷರಾ: ಸ೦ಪದದಲ್ಲಿ ನಡೆಯುತ್ತಿರುವ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸುವುದು ಏಕೆ? ಎ೦ಬ ಚರ್ಚೆಗೆ ನಾನು ಹಾಕಿದ ಪ್ರತಿಕ್ರಿಯೆಯನ್ನೇ ಇಲ್ಲಿ ಬದಲಾಯಿಸಿ,ಇನ್ನೂ ವಿಸ್ತರಿಸಿ ಲೇಖನವನ್ನಾಗಿ ಹಾಕಿದ್ದೇನೆ)

Friday, August 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ

*************

-ಕವಿನಾಗರಾಜ್.

Tuesday, August 17, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -16

ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ (ಅಥರ್ವ. 8.2.25)

[ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.

ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.

ಯೋಚಿಸಲೊ೦ದಿಷ್ಟು-೭

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ ಹೆಚ್ಚು ಸಮಯದ ಅಗತ್ಯವಿಲ್ಲ!


೨. ಒ೦ದು ಬೃಹತ್ ಸಾಧನೆಯನ್ನು ಹೆಸರಿಸಿ, ಅದು ತನ್ನದೆ೦ದು ಹೇಳುವವನು ನಾಸ್ತಿಕನು ಮಾತ್ರ!

೩. ಒ೦ದು ಮಾತಿನಿ೦ದ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಮಾತಿಗಿ೦ತ ಮೌನವೇ ಲೇಸು!

೪. ಸ೦ಪತ್ತಿನ ಉತ್ಪಾದನೆಯಿಲ್ಲದೆ ಅದನ್ನು ಉಪಭೋಗ ಸಾಧುವಲ್ಲ.

೫.ಅತಿಯಾಗಿ ಯಾವುದಾದರೂ ವರ್ಜ್ಯವೇ.ಜೀವನವೆ೦ಬ ಪಥದಲ್ಲಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಇರುವುದು ಉತ್ತಮ.ಏಕೆ೦ದರೆ ಕೆಲವೊಮ್ಮೆ ಜೀವನದ ಪಥದಲ್ಲಿ ನಾವು ಏಕಾ೦ಗಿಯಾಗಿಯೇ ತಿರುವುಗಳನ್ನು ಕ್ರಮಿಸಬೇಕಾಗುತ್ತದೆ ಹಾಗೂ ಆ ತಿರುವುಗಳು ಯಾವಾಗ ಎದುರಾಗುತ್ತವೆ ಎ೦ಬುದು ಊಹಿಸಲಸಾಧ್ಯ!

೬.ಸಾವಿರಾರು ನಕ್ಷತ್ರಗಳು ಗಗನಕ್ಕೆ ಮೆರುಗನ್ನು ನೀಡಿದರೆ,ಹಲವಾರು ಹಸಿರು ಮರಗಳು ಅರಣ್ಯಕ್ಕೆ ದಟ್ಟತೆ ಹಾಗೂ ಸೌ೦ದರ್ಯವನ್ನು ನೀಡಿದರೆ, ಹಲವಾರು ಚೆ೦ದದ ಹೂವುಗಳು ಉದ್ಯಾನವನಕ್ಕೆ ಅ೦ದವನ್ನು ನೀಡುತ್ತವೆ. ಆದರೆ ಎರಡೇ ಹೃದಯಗಳು ಸಾಕು, ಒ೦ದು ಅವಿನಾಭಾವ ಹಾಗೂ ಅವಿಚ್ಛಿನ್ನವಾದ ಸ೦ಬ೦ಧ ಬೆಳೆಯಲು!

೭.ನಾವು ಜೀವನದಲ್ಲಿ ಅಳವಡಿಸಿಕೊ೦ಡಿರುವ ಹಾಗೂ ಇನ್ನೊಬ್ಬರೊ೦ದಿಗೆ ಹ೦ಚಿಕೊಳ್ಳಬಹುದಾದ ಶ್ರೇಷ್ಠ ಮೌಲ್ಯಗಳು ಹಾಗೂ ಸ೦ಬ೦ಧವಿರಿಸಿಕೊ೦ಡಿರಬಹುದಾದ ಉತ್ತಮ ಮೌಲ್ಯಯುತ ವ್ಯಕ್ತಿಗಳೇ ನಮ್ಮ ನಿಜವಾದ ಸ೦ಪತ್ತು! ಆ ಸ೦ಪತ್ತು ಯಾವ ಬ್ಯಾ೦ಕ್ ಖಾತೆಗೂ ನಿಲುಕುವ೦ಥಹದ್ದಲ್ಲ !

೮.ಒ೦ದು ಗು೦ಪಿನ ಚಿತ್ತವನ್ನು ಆಕರ್ಷಿಸುವುದು ಸುಲಭ.ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮನಸ್ಸನ್ನು ನಮ್ಮತ್ತ ಆಕರ್ಷಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ!

೯.ನಮ್ಮ ಹೃದಯವು ಸದಾ ಪ್ರೀತಿಯಿ೦ದಲೂ ಮನಸ್ಸು ಶಾ೦ತಿಯಿ೦ದಲೂ,ಆತ್ಮವು ಸ೦ತೋಷದಿ೦ದಲೂ ಹಾಗೂ ಕನಸುಗಳು ನಿರೀಕ್ಷೆಗಳಿ೦ದಲೂ ಕೂಡಿದ್ದರೆ ಬದುಕನ್ನು ಭರವಸೆಯಿ೦ದ ಸುಖಿಸುವುದು ಅಸಾಧ್ಯವೇನಲ್ಲ!
೧೦.ನಮ್ಮೆದುರು ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸುವವರು ಹಾಗೂ ನಮ್ಮ ಅನುಪಸ್ಥಿತಿಯಲ್ಲಿ ಬೇರೆಯವರ ಎದುರು ನಮ್ಮ ಬಲವನ್ನು ಎತ್ತಿ ಆಡುವವರು ಮಾತ್ರವೇ ನಮ್ಮ ಹಿತೈಷಿಗಳು.

೧೧. ಅರಿಯದ ವಿಚಾರದ ಬಗ್ಗೆ ಮಾತನಾಡದಿರುವುದು, ಆ ವಿಚಾರವನ್ನು ತಿಳಿದುಕೊಳ್ಳಲು ಚರ್ಚಿಸುವ ಅವಕಾಶವನ್ನು ನೀಡುತ್ತದೆ.

೧೨.ಸೋಮಾರಿಯು ಕೆಲಸದ ಬಗ್ಗೆಯೂ ಶ್ರೀಮ೦ತರು ಮಿತವ್ಯಯದ ಬಗ್ಗೆಯೂ ಮಾತನಾಡುತ್ತಾರೆ.ದುರದೃಷ್ಟವಶಾತ್ ಇಬ್ಬರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ!

೧೩.ಸಮಾಜದಲ್ಲಿ ಎಲ್ಲಾ ಜಾತಿ,ವರ್ಗಗಳು ನಿರ್ಮೂಲನೆಗೊ೦ಡರೂ ಉಳಿಯಬಹುದಾದ ವರ್ಗಗಳೆ೦ದರೆ ಕಾರ್ಮಿಕ ಹಾಗೂ ಮಾಲೀಕರದು!

೧೪.ಯಾವುದೇ ಸಮಸ್ಯೆಗಳಿಲ್ಲದೆ ಅಥವಾ ಯಾರಿ೦ದಲೂ ಸ್ಪರ್ಧೆಯಿಲ್ಲದೆ ಪಡೆದ ಗೆಲುವು ಕೇವಲ ಜಯವೆ೦ದು ಗುರುತಿಸಲ್ಪಟ್ಟರೆ,ತೀವ್ರ ಅಡೆ-ತಡೆಗಳು ಹಾಗೂ ಸ್ಪರ್ಧೆಯನ್ನು ಎದುರಿಸಿ ಪಡೆದ ಜಯವು ಇತಿಹಾಸವಾಗಿ ದಾಖಲಿಸಲ್ಪಡುತ್ತದೆ!

೧೫. ಸಾಧನೆಯ ಹಾದಿಯಲ್ಲಿನ ಪ್ರಥಮ ಸೋಲು ಮು೦ದಿನ ಅನೇಕ ಗೆಲುವುಗಳಿಗೆ ಬೇಕಾಗುವ ಕಾರ್ಯಕ್ಷಮತೆಯನ್ನು ಹಾಗೂ ಸ್ಥೈರ್ಯವನ್ನು ತು೦ಬುತ್ತದೆ. ಸೋಲಾದ ಕೂಡಲೇ ಸಾಧನೆಯ ಹಾದಿಯಲ್ಲಿ ನಡೆಯುವುದನ್ನು ಕೈಬಿಡಬಾರದು!

Monday, August 16, 2010

ಸಂಪಾದಕೀಯ

ಪ್ರಿಯ ವೇದಸುಧೆಯ ಅಭಿಮಾನಿಗಳೇ,
ವೇದಸುಧೆ ಬಳಗದ ಒಬ್ಬ ಸದಸ್ಯರ ಬಗ್ಗೆ ನಿಮಗೆ ಪರಿಚಯ ಮಾಡಲೇ ಬೇಕು. ನಿಜವಾಗಿ ನಿನ್ನೆಯೇ ಮಾಡಿದ್ದರೆ ಚೆನ್ನಾಗಿತ್ತು. ಇರಲಿ ಇಂದು ಸ್ವಾತಂತ್ರ್ಯೋತ್ಸವದ ಮರು ದಿನ, ತಪ್ಪೇನಿಲ್ಲ. ಪರಿಚಯ ಮಾಡಿಕೊಡಬೇಕಾದವರ ಬಗ್ಗೆ ನಿಮಗೆ ಈಗಾಗಲೇ ಪರಿಚಯವಿದೆ. ಅವರೇ ಕವಿ ನಾಗರಾಜ್. ೧೯೭೬ ರ ಎಮರ್ಜೆನ್ಸಿ ಅವಧಿಯಲ್ಲಿ ಸೆರೆಮನೆವಾಸ ಅನುಭವಿಸಿದವರು. ಅವರ ಅನುಭವಗಳನ್ನು ಅವರ ಮಾತುಗಳಿಂದಲೇ ಕೇಳಿ. ಅವರ ಬ್ಲಾಗ್ "ಕವಿಮನ" ವನ್ನು ಇಣುಕುವ ಮುನ್ನ ವೇದಸುಧೆಯ ವಿಶೇಷ ಲೇಖನಗಳ ಪುಟದಲ್ಲಿ ನಾಗರಾಜರ ಸೇವಾಪುರಾಣವನ್ನೊಮ್ಮೆ ಓದಿ , ಸೇವಾಪುರಾಣದ ಎಲ್ಲಾ ಭಾಗಗಳನ್ನೂ ಮೊದಲಿನಿಂದ ಓದಿದಾಗ ಮಾತ್ರ ನಾಗರಾಜರ ಬಗ್ಗೆ ಸರಿಯಾದ ಪರಿಚಯವಾಗುತ್ತೆ.ಅಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲವಾದ್ದರಿಂದ ಇಲ್ಲಿ ಪ್ರತಿಕ್ರಿಯಿಸಿ. ಆಗಬಹುದೇ? ನಾಗರಾಜರು ಪಕ್ಕಾ ದೇಶಭಕ್ತರೆಂಬ ವಿಚಾರವನ್ನು ಮಾತ್ರ ತಿಳಿಸುತ್ತಾ ಮುಂದೊಮ್ಮೆ ವಿವರವಾಗಿ ಮಾತನಾಡಲು ಅವಕಾಶ ಉಳಿಸಿಕೊಳ್ಳುವೆ.ವಿಶೇಷ ಲೇಖನಗಳ ಪುಟದಲ್ಲಿ ಇನ್ನೊಂದು ಲೇಖನವೂ ಇದೆ.ಅದು ಕವಿ ಸುರೇಶ್ ಅವರದು. ಸುರೇಶ್ ಅವರು ನಾಗರಾಜರ ಸೋದರರು.

ಶ್ರೀಮಾತಾನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಆಶಾಢ ಮಾಸದ ಹೂವಿನ ಅಲ೦ಕಾರದ ಸೊಬಗು

ದೇವಳದ ಸುತ್ತ ಮುತ್ತಲ ಹೊರಾ೦ಗಣ ನೋಟ
ಮುಖ್ಯದ್ವಾರದ ನೋಟ
ದೇವಳದ ಮುಖ್ಯ ದ್ವಾರದ ಮತ್ತೊ೦ದು ನೋಟ



ಪ್ರಥಮ ದ್ವಾರ




ದೇವಳದ ಮೊದಲದ್ವಾರದಿ೦ದ ಒಳ ಹೊಕ್ಕಾಗ ಕಾಣುವ ಸು೦ದರ ಹೂವಿನ ಅಲ೦ಕಾರ

ಸೇವಾ ವಿಭಾಗದ ಪಕ್ಕದಿ೦ದ ದೇವಳದ ಪ್ರಥಮ ದ್ವಾರ

ಪ್ರಥಮದ್ವಾರದೊಳಗಿನ ಛಾವಣಿಗೆ ಹೂವಿನ ಅಲ೦ಕಾರ

ಪ್ರಥಮ ದ್ವಾರದ ಒಳಭಾಗಕ್ಕೆ ಮಾಡಿರುವ ಸು೦ದರ ಹೂವಿನ ಅಲ೦ಕಾರ

ಪ್ರಥಮದ್ವಾರದ ಮತ್ತೊ೦ದು ನೋಟ

ಎರಡನೇ ದ್ವಾರದ ಅಲ೦ಕಾರ- ಎರಡೂ ಸಾಲಿನಲ್ಲಿ ನಿಲ್ಲಿಸಿರುವುದು ರ೦ಗಪೂಜೆ ನೆರವೇರಿಸುವ ದೀಪದ ದಳಿಗಳು

ರ೦ಗಪೂಜಾ ಮ೦ದಿರದಿ೦ದ ಸು೦ದರ ಹೂವಿನ ಅಲ೦ಕಾರದ ನಡುವೆ ಶ್ರೀಮಾತೆಯವರ ನೇರ ನೋಟ

ಗರ್ಭಗುಡಿಯ ಸ್ವಲ್ಪ ಮು೦ಭಾಗದಿ೦ದ ದರ್ಶನದ ಸಾಲಿನಿ೦ದ ಶ್ರೀ ಮಾತೆಯವರನ್ನು ದರ್ಶಿಸಿದಾಗ


ಸರ್ವಾಲ೦ಕಾರಭೂಷಿತೆ ನನ್ನಮ್ಮ-ಜಗನ್ಮಾತೆ ಶ್ರೀಮಾತಾನ್ನಪೂರ್ಣೇಶ್ವರಿಯ ಪಾದಗಳಿಗೆ ನಮೋನಮ:

ಶ್ರೀಕ್ಷೇತ್ರ ಹೊರನಾಡಿನಲ್ಲಿ ಆಷಾಢ ಮಾಸ ಬ೦ತೆ೦ದರೆ ದೇವಸ್ಥಾನದ ತು೦ಬೆಲ್ಲಾ ಹೂವಿನ ಅಲ೦ಕಾರದ ಸೊಬಗೇ ಸೊಬಗು! ಶ್ರೀ ಕ್ಷೇತ್ರವನ್ನು ಹಾಗೂ ಆ ತಾಯಿ ಶೀ ಅನ್ನಪೂರ್ಣೆಯನ್ನು ನೋಡಲು ಎರಡು ಕಣ್ಣು ಸಾಲದು!ನಿಮಗಾಗಿ ಈ ನಾಲ್ಕಾರು ಚಿತ್ರ ಗಳನ್ನು ಹಾಕಿದ್ದೇನೆ. ನನ್ನಮ್ಮ ಶ್ರೀ ಮಾತೆ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ಆಷಾಢ ಮಾಸದ ತು೦ಬೆಲ್ಲಾ ಪ್ರತಿ ೩-೪ ದಿನಗಳಿಗೊಮ್ಮೆ ಇದೇ ರೀತಿಯ ಹೂವಿನ ಅಲ೦ಕಾರದಿ೦ದ ಕ೦ಗೊಳಿಸುತ್ತಿರುತ್ತಾಳೆ. ಈ ಮಾಸದ ತು೦ಬೆಲ್ಲಾ ಭಕ್ತಾದಿಗಳ ಸ೦ಖ್ಯೆಯೂ ಹೆಚ್ಚು. ಹೆಚ್ಚೆಚ್ಚು ಹೂವಿನ ಅಲ೦ಕಾರದಿ೦ದ ಸರ್ವಾ೦ಗ ಸು೦ದರಿಯಾಗಿ ಕಾಣುತ್ತಾ, ಭಕ್ತರ ಅಭೀಷ್ಟೇಗಳನ್ನೆಲ್ಲಾ ನೆರವೇರಿಸುವ ನನ್ನಮ್ಮ ಶ್ರೀ ಜಗನ್ಮಾತೆಯವರ ದರ್ಶನ ಹಾಗೂ ಶ್ರೀ ಪ್ರಸಾದವನ್ನು ಸ್ವೀಕರಿಸಲು ಕುಟು೦ಬ ಸಮೇತರಾಗಿ ಬನ್ನಿ.ನಿಮ್ಮೆಲ್ಲರ ಆತಿಥ್ಯಕ್ಕಾಗಿ ನಾನಿದ್ದೇನೆ.ಊಟ, ವಸತಿ ಇತ್ಯಾದಿಗಳ ಬಗ್ಗೆ ಯಾವುದೇ ಅ೦ಜಿಕೆ ಬೇಡ. ಆದಷ್ಟೂ ರಜಾದಿನಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತಾದಿಗಳ ಸ೦ಖ್ಯೆ ಹೆಚ್ಚಿರುತ್ತದೆ. ಆದರೂ ನನಗೊಮ್ಮೆ ಕರೆಮಾಡಿ, ತಿಳಿಸಿ, ಯಾವಾಗ ಬರುವಿರೆ೦ದು? ನೀವು ಶ್ರೀ ಮಾತೆಯವರಿಗೆ ಸೇವೆ ಸಲ್ಲಿಸಿ ಶ್ರೀ ಪ್ರಸಾದ ಸ್ವೀಕರಿಸಿ, ನಾನು ಶ್ರೀ ಮಾತೆಯವರ ಸೇವೆಯೊ೦ದಿಗೆ ನಿಮ್ಮ ಸೇವೆಯನ್ನು ಗೈದು ಆನ೦ದವನ್ನೂ ಅನುಭವಿಸುತ್ತೇನೆ ಹಾಗೂ ಸೇವಾ ಪುಣ್ಯವನ್ನೂ ಪಡೆದುಕೊಳ್ಳುತ್ತೇನೆ.

Sunday, August 15, 2010

ಪೂಜ್ಯ ವಿವೇಕಮಯೀ ಮಾತಾಜಿಯವರ ಮೆಚ್ಚುಗೆ

Dear Sridhar,
Jai Ramakrishna.
I appreciate the noble work you are doing on Veda Sudhe.

With regards
Mata Vivekamayi
------------------------------------

ಬೆಂಗಳೂರಿನ ಭವತಾರಿಣಿ ಆಶ್ರಮದ ಪೂಜ್ಯ ವಿವೇಕಮಯೀ ಮಾತಾಜಿಯವರು ವೇದಸುಧೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಯ ಪುರುಶೋತ್ತಮಾನಂದರ ಬಗ್ಗೆ ಒಂದು ಲೇಖನವನ್ನು ಕಳಿಸಿಕೊಟ್ಟಿರುತ್ತಾರೆ. ಅದನ್ನು ವೇದಸುಧೆಯಲ್ಲಿ ಪ್ರಕಟಿಸಲಾಗಿದೆ.ಫಾಂಟ್ ವೆತ್ಯಾಸದಿಂದ ಓದಲಾಗದಿದ್ದಲ್ಲಿ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.
-ಶ್ರೀಧರ್

ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ?



ದೇಶವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಇಂದು ದೇಶದ ಮಾಜಿ ಪ್ರಧಾನಿ, ರಾಷ್ಟ್ರಭಕ್ತ ಶ್ರೀ ಆಟಲ್ ಬಿಹಾರಿವಾಜಪೇಯಿ ಯವರನ್ನು ಟಿವಿ ಪರದೆಯಲ್ಲಿ ಎಲ್ಲಾದರೂ ಕಾಣಬಹುದೇನೋ ಎಂದು ನಿರೀಕ್ಷಿಸಿದ್ದೆ.ಆದರೆ ನನ್ನ ಕಣ್ಣಿಗೆ ಬಿದ್ದಿಲ್ಲ. ನೀವೇನಾದರೂ ಕಂಡಿರಾ? ದೇಶದಲ್ಲಿ ಬಿ.ಜೆ.ಪಿ ಯನ್ನು ಹುಟ್ಟುಹಾಕಿದ ಮಹಾನುಭಾವನನ್ನು ಬಿ.ಜೆ.ಪಿ.ಯವರೇ ಮರೆತು ಬಿಟ್ಟರೇ? ಈದಿನ ಆಟಲ್ ಜಿ ಯವರು ಹೇಗಿರಬಹುದು? ಅವರ ಆರೋಗ್ಯಸ್ಥಿತಿ ಹೇಗಿರಬಹುದು? ವೇದಸುಧೆಯ ಅಭಿಮಾನಿಗಳೇ ಆಟಲ್ ಜಿ ಯವರನ್ನು ಇತ್ತೀಚಿಗೆ ಯಾರಾದರೂ ಕಂಡಿದ್ದೀರಾ? ಟಿವಿ ಪರದೆಯಲ್ಲಾದರೂ ಸರಿ ನೀವು ನೋಡಿ ಎಷ್ಟು ದಿನಗಳಾಯ್ತು? ಯಾಕೋ ಅವರ ಬಗ್ಗೆ ಮಾತನಾಡಬೇಕೆನಿಸಿದೆ, ತಿಳಿದವರು ಹಂಚಿಕೊಳ್ಳುವಿರಾ?

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು \
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ

ಪ್ರಶ್ನೆಯಾದ ರಾಜು!

-ಈಗ್ಗೆ ಸುಮಾರು ಸುಮಾರು ೧೮-೨೦ ವರ್ಷಗಳಮಾತು. ನಾನು ನಿತ್ಯವೂ ಒಂದು ಧ್ಯಾನಮಂದಿರಕ್ಕೆ ಹೋಗಿ ಸಂಜೆವೇಳೆ ಅರ್ಧ ಗಂಟೆ ಧ್ಯಾನ ಮಾಡಿ ಬರುತ್ತಿದ್ದೆ. ಅಲ್ಲಿ ಆಗಿಂದಾಗ್ಗೆ ಕಾಣುತ್ತಿದ್ದ ವ್ಯಕ್ತಿ ರಾಜು. ಸುಮಾರು ೪೦ ವರ್ಷ ವಯಸ್ಸಿನ ರಾಜು ಮೂರುವರೆ ಅಡಿ ಎತ್ತರ ವಿದ್ದಿರಬಹುದು. ಪರಸ್ಪರ ಪರಿಚಯ ವಾಯ್ತು. ನಮ್ಮ ಮನೆಯ ಸಮೀಪ ಇರುವ ಪರಿಶಿಷ್ಟ ಜಾತಿಗೆ ಸೇರಿದ ಎರಡು ಕಾಲುಗಳೂ ಇಲ್ಲದ ಲಕ್ಷ್ಮಿಯನ್ನು ರಾಜು ಮದುವೆಯಾಗಿದ್ದರು. ರಾಜುವಿನ ವೃತ್ತಿ ಎಂದರೆ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರಾಟ. ರಾಜು ತಮಿಳುನಾಡಿನವರು. ಹೀಗೆಯೇ ಊರೂರು ತಿರುಗುತ್ತಾ ಲಾಟರಿ ಟಿಕೆಟ್ ಮಾರುವಾಗ ಯಾರದೋ ಪರಿಚಯವಾಗಿ ಲಕ್ಶ್ಜ್ಮಿಯ ಸಂಬಂಧದವರೆಗೆ ತಲುಪಿ ಲಕ್ಷ್ಮಿಯ ಮದುವೆಯನಂತರ ಪತ್ನಿಯ ಮನೆಯಲ್ಲೇ ಇದ್ದುಕೊಂಡು ಲಾಟರಿ ಟಿಕೆಟ್ ಮಾರಾಟ ಮಾಡುವ ಕಾಯಕ ಮುಂದುವರೆಸಿದ್ದರು. ನಂತರ ಒಂದು ಹೆಣ್ಣುಮಗು ಜನ್ಮತಾಳಿ ಬೆಳೆದು ಅವಳ ಮದುವೆಯೂ ಆಯ್ತು. ಇತ್ತೀಚೆಗೆ ರಾಜು ಕಂಡಿರಲಿಲ್ಲ.
ಇಂದು ಭಾನುವಾರವಾದ್ದರಿಂದ ಸ್ನೇಹಿತರಾದ ಕವಿನಾಗರಾಜ್ ಮನೆಗೆ ಹೋಗಿದ್ದವನು ಅಲ್ಲಿಂದ ಆಫೀಸ್ ಕಡೆ ಹೋಗುವ ಮಾರ್ಗದಲ್ಲಿ ಇರುವ ಮಹಾರಾಜಾ ಪಾರ್ಕಿನೊಳಗೆ ಒಮ್ಮೆ ಹೋಗಿ ಹತ್ತು ನಿಮಿಷ ಅಡ್ಡಾಡಿ ನಂತರ ಆಫೀಸ್ ಗೆ ಹೋಗೋಣವೆಂದು ಪಾರ್ಕಿನೊಳಗೆ ಕಾಲಿಟ್ಟೆ. ಅಲ್ಲಿ ಬಿಳಿ ತುಂಡುಪಂಚೆ ಮತ್ತು ಬಿಳಿ ಹೊದಿಕೆ ಹೊದ್ದಿದ್ದ ಗಡ್ಡದಾರಿ ಕುಳ್ಳುವ್ಯಕ್ತಿಯೊಬ್ಬನನ್ನು ಕಂಡು ಅವನತ್ತ ನೋಡುವುದರಲ್ಲಿ ಅರೇ! ಇವರು ನಮ್ಮ ರಾಜು ಅಲ್ಲವೇ?!! ನೋ ಡೌಟ್ , ಆತನೇ!!

-ಏನ್ರೀ ಹೀಗೆ?
- "ಎಲ್ಲಾ ಸಾಯಿಬಾಬರ ಕೃಪೆ "
- ಕಾಣ್ತಾ ಇರಲಿಲ್ಲ, ಹೆಂಡ್ತಿ -ಮಗಳು?
- ಈಗ ಯಾರೂ ಇಲ್ಲ. ನಿಮಗೆ ಗೊತ್ತಿರುವಂತೆ ಹೆಳವಳಾದ ಅವಳನ್ನು ಮದುವೆಯಾಗಿ ನಿತ್ಯವೂ ಅವಳ ಸೇವೆ ಮಾಡಿಕೊಂಡು ನನ್ನ ವ್ಯಾಪಾರ ಮಾಡಿಕೊಂಡು ಅವಳನ್ನು ಸಾಕಿದ್ದಕ್ಕೆ ಅವಳೇ ನನ್ನ ಮೇಲೆ ಅನುಮಾನ ಪಟ್ಟಳು. ಒಂದೆರಡು ವರ್ಷ ಸಹಿಸಿಕೊಂಡಿದ್ದೆ. ಕೊನೆಗೆ ತಡೆಯಲಾಗಲಿಲ್ಲ. ಮನೆ ಬಿಟ್ಟು ಹೊರಟೆ. ವ್ಯಾಪಾರ ಮಾಡುವುದನ್ನೂ ನಿಲ್ಲಿಸಿದೆ. ಕೈಲಿದ್ದ ೨೫ ಸಾವಿರ ರೂಪಾಯಿಯಿಂದ ಬೂದಿಗೆರೆ ಸಾಯಿನಾಥ ಮಂದಿರಕ್ಕೆ ಒಂದು ಕಾಣಿಕೆಹುಂಡಿ ಮಾಡಿಸಿಕೊಟ್ಟೆ. ಅಲ್ಲಿಂದ ಮಾಲೂರು -ಬಂಗಾರ್ ಪೇಟೆ ರಸ್ತೆಯ ೧೨ ನೇ ಮೈಲುಗಲ್ಲಿಗೆ ಮೂರು ಕಿಲೋ ಮೀಟರ್ ದೂರವಿರುವ ಪಣಣಾತಿಹಳ್ಳಿಯಲ್ಲಿನ ಸಾಯಿಬಾಬ ಮಂದಿರದಲ್ಲಿ ಸೇವೆ ಮಾಡಿಕೊಂಡಿರುವೆ.
-ಏನು ಸೇವೆ ಮಾಡ್ತೀರಿ?
-"ಬಾಬರಿಗೆ ಅಲಂಕಾರ ಮಾಡುವೆ. ಅಲ್ಲಿ ಸಾಕಿರುವ ನಾಲ್ಕು ಹಸುಗಳ , ಕೆಲವು ಪಕ್ಷಿಗಳ ಸೇವೆ ಮಾಡಿಕೊಂಡಿರುವೆ".
ರಾಜು ಮಾತು ಮುಂದುವರೆಸಿದ್ದರು" ನೋಡಿ, ಅಲ್ಲಿರುವ ಹೂಗಿಡಗಳಲ್ಲಿ ಹೂ ಕೊಯ್ದುಕೊಂಡು ಪೂಜೆಗೆ ಕೊಡುವೆ, ಹುಲ್ಲು ಕೊಯ್ದು ,ಸಗಣಿ-ಗಂಜಲ ತೆಗೆದು ಪಶು ಸೇವೆ ಮಾಡುವೆ. ಪಶು-ಪಕ್ಷಿ ಗಳ ಸೇವೆ ಮಾಡಿಕೊಂಡು ಆನಂದ ವಾಗಿರುವೆ. ಬಿಡುವಾದಾಗ ಧ್ಯಾನ ಮಾಡುವೆ. ನಾನು ಹೂವು ಕೊಯ್ಯುವಾಗ ಒಮ್ಮೊಮ್ಮೆ ಏನಾಗುತ್ತೆ ಗೊತ್ತಾ? ಒಂದು ಹೂವು ನನ್ನ ಕಿವಿಯಲ್ಲಿ ಮಾತನಾಡಿದಂತೆ ಬಾಸವಾಗುತ್ತೆ " ನನ್ನನ್ನೇಕೆ ಬಾಬರ ಚರಣಕ್ಕೆ ಅರ್ಪಿಸಲು ನೀನು ಮನಸ್ಸು ಮಾಡಲಿಲ್ಲ?" ತಕ್ಷಣ ಹಿಂದಿರುಗಿ ಹೋಗಿ ಆಗಿಡದಲ್ಲಿ ನೋಡಿದರೆ ಸಂಧಿಯಲ್ಲಿ ಕಾಣದೆ ಬಿಟ್ಟಿದ್ದ ಹೂವೊಂದು ಪತ್ತೆಯಾಗುತ್ತೆ. ಆಹೂವನ್ನು ಕೊಯ್ದು ಬಾಬರಿಗೆ ಅರ್ಪಿಸುವೆ.............
ಹೀಗೆಯೇ ರಾಜು ಮಾತನಾಡುತ್ತಲೇ ಇದ್ದರು. ನಾನೇ ಮಧ್ಯೆ ಮಾತನಾಡಿ ಅವರ ಮಾತು ನಿಲ್ಲಿಸಿದೆ.ರಾಜು ತಮಿಳುನಾಡಿನ ಚೆಟ್ಟಿಯಾರ್ ಕುಲದವರಂತೆ. ವಿಧಿ ಅವರನ್ನು ಕರ್ನಾಟಕ ಸುತ್ತುವಂತೆ ಮಾಡಿ ಹಾಸನಕ್ಕೂ ಬಂದು ಅಲ್ಲಿನ ಲಕ್ಷ್ಮಿಯನ್ನು ಮದುವೆಯಾಗಿ ಅವಳಿಂದಲೂ ಪರಿತ್ಯಜ್ಯನಾಗಿ ಈಗ ಸಾಯಿಬಾಬರ ಸೇವೆ ಮಾಡಿಕೊಂಡಿರಲು ನಿರ್ಧರಿಸಿದ್ದೇನೆನ್ನುತ್ತಾರೆ. ನಮ್ಮ ಮನೆ ಗೃಹಪ್ರವೇಶಕ್ಕೆ ಆತ ಬಂದಿದ್ದರು. ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ ಎಲ್ಲರಿಗಿಂತ ಮುಂದೆ ಕುಳಿತು ಎಲ್ಲರ ಕಣ್ಸೆಳೆದಿದ್ದರು. ನಮ್ಮ ಪತ್ನಿ ಆಗ ಹೇಳಿದ್ದಳು" ಯಾರ್ಯಾರನ್ನೋ ಕರೀತೀರಲ್ರೀ!
ಮನುಷ್ಯನ ಈ ಜೀವನಕ್ಕೆ ಏನೆನ್ನೋಣ? ರಾಜು ಯಾರೋ, ಲಕ್ಷ್ಮಿ ಯಾರೋ, ಎಲ್ಲೋ ಇದ್ದವನು ಎಲ್ಲೋ ಬಂದು ಹೆಳವಿಯನ್ನು ಮದುವೆಯಾಗಿ ಆವಳಿಂದಲೇ ಪರಿತ್ಯಜ್ಯನಾಗಿ , ಈಗ ಮತ್ತೆ ಒಬ್ಬಂಟಿಯಾಗಿ ಓಡಾಡುತ್ತಿರುವ ರಾಜು ನನಗೆ ಪ್ರಶ್ನೆಯಾಗಿಯೇ ಉಳಿದು ಹೋದರು!! ನನ್ನ ಮೊಬೈಲ್ ಸೆರೆಹಿಡಿದ ಅವರ ಚಿತ್ರವನ್ನೊಮ್ಮೆ ನೋಡಿದರೆ ವಿ.ಆರ್.ಭಟ್ಟರು ಭವಿಷ್ಯ ಹೇಳಿಯಾರು!



ನಮ್ಮೊ೦ದಿಗಿನ ಗ೦ಟು...

ಮಿತ್ರ, ಅಲ್ಲಿಗೆ ನಾವೆಲ್ಲಾ ನಡೆದೇ ಹೋಗಬೇಕು,

ಕೈಕಟ್ಟಿ ನಿಲ್ಲಬೇಕು, ತಪ್ಪಿಲ್ಲದ೦ತೆ,

ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು,

ಮು೦ಜಾನೆ ನಗರಸಭೆಯ ನಲ್ಲಿಯ ಮು೦ದೆ

ಕೊಡಗಳನ್ನು ಹಿಡಿದು ನೀರಿಗೆ ನಿಲ್ಲುವ೦ತೆ,

ಒಬ್ಬರಾದ ಮೇಲೆ ಒಬ್ಬರು,

ಆದರೆ ಎಲ್ಲರೂ ತು೦ಬಿಕೊಳ್ಳಲೇಬೇಕು!

ಕಟ್ಟಿಕೊ೦ಡು ಹೊರಡಲೇಬೇಕು

ನಮ್ಮ ನಮ್ಮ ಪಾಪ-ಪುಣ್ಯವೆ೦ಬ ಗ೦ಟುಗಳ,

ಮತ್ತೆಲ್ಲವನೂ ಇಲ್ಲಿಯೇ ಬಿಟ್ಟು!

ಮು೦ದೇನೋ ಎ೦ಬ ಯಾವುದೇ ಚಿ೦ತೆ ಇಲ್ಲದೆ,

ಇದ್ದದ್ದು ಇದ್ದ ಹಾಗೇ, ಬದುಕಿ ಬ೦ದ ಹಾಗೇ,

ಕೊನೆಗಾಲದ ಪರಿವರ್ತನೆ ಯಾವ ಪ್ರಯೋಜನ ತ೦ದೀತು?

ಗೆಳೆಯ, ಇನ್ನಾದರೂ ಈಗಿ೦ದಲೇ ಸತ್ಯಪಥದಲ್ಲಿ ನಡೆ


ನಾಲ್ಕು ಜನ ಮೆಚ್ಚುವ೦ತೆ ಬದುಕು,

ನಾಲ್ಕು ಜನ ಬದುಕುವ೦ತೆ ನೀ ಮಾಡು

ಸ್ವಲ್ಪವಾದರೂ ಕೊಡು,

ನಿನ್ನ ನ೦ಬಿದವರ ಅರ್ಧಕ್ಕೆ ಕೈಬಿಡದ೦ತೆ,

ಇದ್ದುದ್ದನ್ನೆಲ್ಲವನೂ ಕೊಡದಿರು


ಎಲ್ಲರೊಟ್ಟಿಗೇ ನೀನೂ ಬದುಕು.

ಬದುಕೆ೦ಬುದಕ್ಕೆ ನಿನ್ನದೇ ತತ್ವವಿರಲಿ,

ನೆನಪಿಡು ನಡೆದೇ ಹೋಗಬೇಕು,ಕೈಕಟ್ಟಿ ನಿಲ್ಲಬೇಕು

ಉತ್ತರಿಸಬೇಕು ತಪ್ಪಿಲ್ಲದ೦ತೆ ಎಲ್ಲಾ ಪ್ರಶ್ನೆಗಳನು!

ಜೀವನದ ಸಂಜೆಯಲಿ











ಬಾಲ್ಯ, ಯೌವನ, ವೃದ್ದಾಪ್ಯ ಮತ್ತು ವಾನಪ್ರಸ್ಥಾಶ್ರಮ (ಸನ್ಯಾಸ) ಇವುಗಳು ನಮ್ಮ ಸನಾತನ ಧರ್ಮ ಗುರುತಿಸಿರುವ ಮಾನವ ಜೀವನದ ವಿವಿಧ ಘಟ್ಟಗಳು. ಪೂರ್ಣಾಯಸ್ಸಿನ ಕೃಪೆಯಿದ್ದಲ್ಲಿ ಪ್ರತಿಯೊಬ್ಬರೂ ಈ ಎಲ್ಲಾ ಹಂತಗಳನ್ನೂ (ಬಹುಶ: ಸನ್ಯಾಸವೊಂದನ್ನು ಬಿಟ್ಟು-ಅದು ವ್ಯಕ್ತಿಯ ವೈಯುಕ್ತಿಕ ತೀರ್ಮಾನ) ಅನುಭವಿಸಲೇ ಬೇಕು; ದಾಟಲೇ ಬೇಕು. ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಜನೆ,ಯೌವನದಲ್ಲಿ ವೈವಾಹಿಕ ಜೀವನ ನಿರ್ವಹಣೆ ಮತ್ತು ವೃದ್ಧಾಪ್ಯದಲ್ಲಿ ನೆಮ್ಮದಿಯ, ನಿರಪೇಕ್ಷವಾದ ಮತ್ತು ಶಾಂತಿಯ ಜೀವನ ಇವು ಸಾಮಾನ್ಯವಾಗಿ ನಾವೆಲ್ಲರ ಜೀವನದಲ್ಲಿ ನಿರೀಕ್ಷಿಸಬಹುದಾದ ಮತ್ತು ಸಹಜವಾದ ಕ್ರಿಯೆಗಳು. ಬಾಲ್ಯಾವಸ್ಥೆ ಜೀವನದ ಏಕೈಕ ನಿಶ್ಚಿಂತ ಮತ್ತು ಸುಂದರ ಕಾಲ - a golden period! ಅದೇ ರೀತಿ, ಯೌವನಾವಧಿ ಕೂಡ ಕನಸುಗಳ ಅಲೆಗಳನ್ನೇರಿ ಸುಖ-ಸಂತೋಷಗಳಿಂದ ಸಂಭ್ರಮಿಸುವ ವರ್ಣಮಯ ಕಾಲ. ಆದರೇನು ಮಾಡುವುದು? ಈ ಗಡಿಯಾರದ ಟಿಕ್ ಟಿಕ್ ನಿಲ್ಲುವುದೇ ಇಲ್ಲವಲ್ಲ. ಹಾಗಾಗಿ ಮತ್ತಷ್ಟು ಬೇಕೆಂದರೂ ಕೂಡ ಈ ಘಟ್ಟಗಳ ನಿಜವಾದ ಮತ್ತು ಸಂಪೂರ್ಣವಾದ ಸಂತೋಷವನ್ನು ಅನುಭವಿಸುತ್ತಿರುವಾಗಲೇ ಕಾಲವು ನಮಗರಿವಿಲ್ಲದೆಯೇ ಜಾರಿ ವೃದ್ಧಾಪ್ಯದ ಹೊಸಲಿಗೆ ಬಂದೇ ಬಿಡುತ್ತೇವೆ. ಕಳೆದು ಹೋದ ಸುಂದರ ಸಮಯ ಬರೀ ನೆನಪಾಗಿಯೇ ಉಳಿಯುತ್ತದೆ. ಏತನ್ಮಧ್ಯೆ ನಮ್ಮ ಸ್ವಂತ ಸುಖದ ಬಯಕೆ ಮತ್ತು ಹೆಚ್ಚು ಹೆಚ್ಚು ಗಳಿಸಬೇಕೆಂಬ ನಾಗಾಲೋಟದಲ್ಲಿ ಅನೇಕ ಸತ್ಕಾರ್ಯಗಳನ್ನು ಮುಂದೆ ಮಾಡಿದರಾಯಿತು, ಇನ್ನೂ ಸಮಯ ಇದೆಯಲ್ಲಾ ಇತ್ಯಾದಿ ಸಬೂಬುಗಳನ್ನು ಹೇಳಿ ನಾವು ಮುಂದೂಡುತ್ತಲೇ ಬರುತ್ತೇವೆ. ಹೀಗೆ ಮುಂದೂಡಿದ ಸತ್ಸಂಕಲ್ಪಗಳು ಸಾಕಷ್ಟು ದೊಡ್ಡದಾಗಿ ಬೆಳೆದು, ನಮ್ಮ ಒಳಮನಸ್ಸು ಎಚ್ಚರಿಸಿ ನಾವು ಜಾಗೃತರಾಗುವ ವೇಳೆಗೆ ವೃದ್ಧಾಪ್ಯ ಸನಿಹದಲ್ಲೇ ನಿಂತು ನಸುನಗುತ್ತಾ ನಮ್ಮನ್ನು ಸ್ವಾಗತಿಸುತ್ತಿರುತ್ತದೆ ಇಲ್ಲವೇ ಸಾಕಷ್ಟು ಆವರಿಸಿಬಿಟ್ಟಿರುತ್ತದೆ!!

ಅದುದರಿಂದ, ಜೀವನದಲ್ಲಿ ವೃದ್ಧಾಪ್ಯ ಒಂದು ಪರ್ವಕಾಲ. ಸಂಸಾರದ ಜವಾಬ್ದಾರಿಗಳನ್ನು ಒಂದೊಂದೇ ಕಳೆದು ನಿಶ್ಚಿಂತೆಯಿಂದಿರುವ ಕಾಲ. ವಿಶೇಷವಾಗಿ ಇರಲಿಕ್ಕೊಂದು ಮನೆ, ಹೆಣ್ಣು ಮಕ್ಕಳ ಮದುವೆ ಮತ್ತು ಗಂಡು ಮಕ್ಕಳಿಗೆ ಉದ್ಯೋಗ ಮತ್ತು ಸರಳ ವೃದ್ಧಾಪ್ಯದ ಜೀವನಕ್ಕೊಂದು ದಾರಿ ಪ್ರಾಪ್ತಿಯಾದರೆ ಆ ಸಂಸಾರಸ್ಥನ ಬಹುತೇಕ ಕರ್ತವ್ಯಗಳು ಮುಗಿದಿವೆಯೆಂದೇ ಭಾವಿಸಬಹುದು. ಸುಮಾರು 50-55 ವರ್ಷಗಳಾಗುತ್ತಲೇ ನಾವು ವೃದ್ಧಾಪ್ಯದೆಡೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿ ಜಾಗೃತಿಯಾಗಬೇಕು. ಅದು ಉದ್ಯೋಗ, ವ್ಯಾಪಾರ, ಶಿಕ್ಷಣ, ಸಂಶೋಧನೆ ಮುಂತಾದ ರಂಗಗಳಲ್ಲಿ ದುಡಿತು ಶಕ್ತಿ-ಸಾಮರ್ಥ್ಯಾನುಸಾರ ಮತ್ತು ಅರ್ಹತೆಯಾನುಸಾರ ಮೇಲ್ಮಟ್ಟವನ್ನು ತಲುಪಿರುವಂತಹ ಕಾಲ. ಹಾಗೆಯೇ ಸ್ವಲ್ಪ ಸಮಯದಲ್ಲಿಯೇ ರಿಟೈರ್ ಆಗಿ ಅವರವರ ಕ್ಷೇತ್ರಗಳಲ್ಲಿ ಸಾಧಿಸಿದ ಉತ್ತುಂಗದಿಂದ ಜಾರಿ ಪುನ: ಶೂನ್ಯಾವಸ್ಥೆಗೆ ತಲುಪಿ ಮನೆ ಸೇರುವ ಕಾಲ. ಏಕೆಂದರೆ ಕಾಲಚಕ್ರದಲ್ಲಿ ಮೇಲಕ್ಕೆ ಹೋದ ಮೇಲೆ ಕೆಳಗಿಳಿಯಲೇ ಬೇಕು. ಮೇಲೇರಿದಾಗ ಬಹು ಜನರಿಗೆ ಪ್ರಪಂಚವೇ ಕಾಣದು. ಯಶಸ್ಸಿನ ಮತ್ತು ಹಣದ ಮದ ಅವರ ಕಣ್ಣನ್ನು ಕುರುಡಾಗಿಸಿರುತ್ತದೆ. ವಾಸ್ತವವೆಂದರೆ, ನಾವು ಆ ಉತ್ತುಂಗದಿಂದ ಕೆಳಗಿಳಿದಾಗ ಪ್ರಪಂಚದ ಬೇರೆ ಯಾರಿಗೂ ಕೂಡ ನಾವೂ ಕಾಣಿಸುವುದಿಲ್ಲ! ಆ ಎಚ್ಚರ ಮತ್ತು ಅರಿವು ಇದ್ದಾಗ ನಾವು ಆ ಶಿಖರದಿಂದ ಇಳಿದಾಗ ವಾಸ್ತವವನ್ನು ಎದುರಿಸುವುದು ಅಷ್ಟರಮಟ್ಟಿಗೆ ಸುಲಭವಾದೀತು. ಜೀವನವೆಂದರೆ ಇಷ್ಟೇ ಎಂಬ ನಿರ್ವಿಕಾರ ಭಾವನೆ ಮೂಡಲೂ ಸಹಾಯಕವಾದೀತು. ಎಂತಲೇ, ನಮ್ಮ ವೃದ್ಧಾಪ್ಯ ಜೀವನದ ತಯಾರಿ ಸಕಾರಾತ್ಮಕವಾಗಿ ಮತ್ತು ಯೋಜಿತವಾಗಿ ಪ್ರಾರಂಭವಾಗಬೇಕು. ರಿಟೈರ್ ಆಗುವ ಮೊದಲೇ ರಿಟೈರ್ ಆದ ಮೇಲಿನ ಜೀವನಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಮತ್ತು ನೆಮ್ಮದಿಯ ಜೀವನಕ್ಕಾಗಿ ಪರ್ಯಾಯ ಹವ್ಯಾಸಗಳನ್ನು ಮತ್ತು ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ.

ಲೌಕಿಕವಾಗಿ ಶಕ್ತ್ಯಾನುಸಾರ ಸಾಧನೆ-ಸಂಪಾದನೆ ಮಾಡಿದ ಮೇಲೆ ಮತ್ತು ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ಮೇಲೆ, ಮುಂದಿನ ಮತ್ತು ಅಂತಿಮ ಘಟ್ಟದಲ್ಲಿಯಾದರೂ ಹಂತ-ಹಂತವಾಗಿ ಈ ಪ್ರಾಪಂಚಿಕ ಜಂಜಾಟಗಳಿಂದ, ಆಕರ್ಷಣೆಗಳಿಂದ ಮತ್ತು ಮೋಹದ ಪಾಶದಿಂದ ವಿಮುಖವಾಗುವ ಪ್ರಕ್ರಿಯೆ ಒಂದು ಅತೀ ಅಪೇಕ್ಷಣೀಯವಾದ ಮತ್ತು ಅತ್ಯಗತ್ಯವಾದ ಬೆಳವಣಿಗೆ. ಒಬ್ಬ ಕೋಟ್ಯಾಧಿಪತಿಯಾದ ವ್ಯಾಪರಸ್ಥನಿದ್ದನಂತೆ. ಸಾಕಷ್ಟು ವಯಸ್ಶಾದ ಮೇಲೆ, ತನ್ನ ಲೆಕ್ಕಾಧಿಕಾರಿಯನ್ನು ಕರೆದು ನನಗೆ ವಯಸ್ಸಾಗಿದೆ, ಸಾಕಾಗಿದೆ, ನಾನು ಮಾಡಿರುವ ಆಸ್ತಿ ಎಷ್ಟು ತಲೆಮಾರಿನವರೆಗೆ ಬರುತ್ತದೆ, ಲೆಕ್ಕ ಮಾಡಿ ಹೇಳು. ಇನ್ನು ಮುಂದೆ ನಾನು ವಿಶ್ರಾಂತಿ ತೆಗೆದುಕೊಳ್ಳಬಯಸುತ್ತೇನೆ ಎಂದ. ಲೆಕ್ಕ ಹಾಕಿನ ನಂತರ ಆ ಲೆಕ್ಕಾಧಿಕಾರಿ, ಸ್ವಾಮಿ, ತಾವು ಸಂಪಾದಿಸಿದ ಆಸ್ತಿ ಸುಮಾರು ಆರು ತಲೆಮಾರಿಗೆ ಸಾಕಾಗುತ್ತದೆ ಎಂದ. ವ್ಯಾಪಾರಿ ಹಾಗಿದ್ದರೆ, ನಾಳೆಯಿಂದಲೇ ನಾನು ವಿಶ್ರಾಂತ ಜೀವನ ನಡೆಸುತ್ತೇನೆ, ಅಂಗಡಿಗೆ ಬರಿವುದಿಲ್ಲ ಎಂದು ಹೇಳಿ ಮನೆಗೆ ತೆರಳಿದ. ಮಾರನೇ ದಿನ ಲೆಕ್ಕಾಧಿಕಾರಿ ಅಂಗಡಿಗೆ ಬಂದಾಗ ಆಶ್ಷರ್ಯ ಕಾದಿತ್ತು. ಆ ಮುದಿ ಯಜಮಾನ ಅರ್ಧ ಘಂಟೆ ಮುಂಚೆಯೇ ಅಂಗಡಿಗೆ ಬಂದು ಆಸೀನನಾಗಿದ್ದ. ಲೆಕ್ಕಾಧಿಕಾರಿಯ ಪ್ರಶ್ನಾರ್ಥಕ ನೋಟಕ್ಕೆ ಯಜಮಾನನ ಉತ್ತರ ಹೀಗಿತ್ತು: ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ. ನೀನು ಹೇಳಿದಂತೆ ಈ ಆಸ್ತಿ ಕೇವಲ ಆರು ತಲೆಮಾರಿಗಷ್ಟೇ ಸಾಕು. ಏಳನೇ ತಲೆಮಾರಿಗೆ ಏನು ಮಾಡುವುದು ಎಂಬ ಚಿಂತೆಯಾಯಿತು. ಅದಕ್ಕೇ ಕೆಲಸಕ್ಕೆ ಬಂದು ಬಿಟ್ಟೆ! ಹಾಗಾಗಿ, ಈ ಪ್ರಾಪಂಚಿಕ ಮೋಹ-ಪಾಶಗಳಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಅದಕ್ಕೆ ತಕ್ಕ ಸಂಸ್ಕಾರ ಬೇಕು. ಶಿಸ್ತುಬದ್ಧವಾದ, ದೃಢಮನಸ್ಸಿನ ಸಂಕಲ್ಪ, ತಯಾರಿ ಮತ್ತು ಅನುಷ್ಠಾನ ಬೇಕು. ಜೀವನಪೂರ್ತಿ ನಾನು, ನನ್ನ ಸಂಸಾರ, ನನ್ನ ದುಡಿಮೆ, ಯಶಸ್ಸು, ಕೀರ್ತಿ ಇವುಗಳನ್ನೇ ನಾವು ಬೆನ್ನು ಹತ್ತಿಬಿಟ್ಟರೆ, ನಾನು ಎಂದರೇನು ಮತ್ತು ನನ್ನಾತ್ಮದ ಸದ್ಗತಿಯ ಮಾರ್ಗಗಳಾವುವು ಎಂಬುದರ ಬಗ್ಗೆ ಕಿಂಚಿತ್ತಾದರೂ ಚಿಂತಿಸುವುದು ಯಾವಾಗ? ಹಿಂದಿನ ಜನ್ಮಗಳಲ್ಲಿ ನಾವು ಮಾಡಿರುವ ಪಾಪ ಕರ್ಮಗಳು ನಮಗೆ ತಿಳಿಯವು. ಆದುದರಿಂದ, ಕನಿಷ್ಠಪಕ್ಷ ಹಿಂದಿನ ದಿನಗಳಲ್ಲಿ ತಿಳಿದೋ, ತಿಳಿಯದೆಯೋ ಮಾಡಿರಬಹುದಾದ ತಪ್ಪು-ಒಪ್ಪುಗಳ ತುಲನೆ/ಆತ್ಮಾವಲೋಕನ ಮಾಡಿ ಕೊಳ್ಳುವುದು ಯಾವಾಗ? ಅವುಗಳನ್ನು ತಿದ್ದಿಕೊಂಡು ಅಥವಾ ಕನಿಷ್ಟಪಕ್ಷ ಪಶ್ಚಾತ್ತಾಪ ಪಡುವುದು ಯಾವಾಗ? ಸುತ್ತಲಿನ ಆಗು-ಹೋಗುಗಳನ್ನು ಹಂಸ-ಕ್ಷೀರ ನ್ಯಾಯದಂತೆ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಯಾವಾಗ? ನಾವಿಲ್ಲದಿದ್ದಾಗಲೂ ಈ ಪ್ರಪಂಚ ನಡೆದಿದೆ; ನಾವೂ ಸಹ ಅದನ್ನು ಅನುಭವಿಸಿದ್ದೇವೆ; ನಮ್ಮ ನಂತರವೂ ಈ ನಾಟಕ ಮುಂದುವರೆಯಲಿದೆ ಎಂಬ ಅಂಶ ನಮಗೆ ಮೊದಲು ಸ್ಪಷ್ಟವಾಗಬೇಕು. ನಾವು ಬಂದದ್ದರಿಂದ ಅಥವಾ ಬರದಿದ್ದುದರಿಂದ ಅಥವಾ ನಮ್ಮ ನಿರ್ಗಮನದಿಂದ ಈ ಪ್ರಪಂಚದ ಆಗು-ಹೋಗುಗಳಿಗೆ ಏನೂ ಪ್ರಭಾವ ಇಲ್ಲ. ನಾನಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂದು ಪ್ರಪಂಚವನ್ನೆಲ್ಲವನ್ನೂ ತಮ್ಮ ತಲೆಯ ಮೇಲೇ ಹೊತ್ತವರಂತೆ ಪರದಾಡುವ ಅನೇಕ ವೃದ್ಧರನ್ನು ನಾವು ಹೇರಳವಾಗಿ ನೋಡಬಹುದು. ಈ ಭ್ರಮೆಯಿಂದಲೇ ಅವರು ತಮ್ಮ ಮಕ್ಕಳ ಹಾಗೂ ನೆಂಟರಿಷ್ಟರ ಬಾಳಿನಲ್ಲಿ ಪ್ರತಿ ವ್ಯವಹಾರದಲ್ಲೂ ಅನಾವಶ್ಯಕ ಮೂಗು ತೂರಿಸಿ ತಮ್ಮ ಹಾಗೂ ಇತರರ ಬಾಳನ್ನೂ ನೆಮ್ಮದಿಗೆಡಿಸುವ ಮೂರ್ಖತನದ ಕೆಲಸಕ್ಕೂ ಕೈ ಹಾಕುವದೂ ಕೂಡ ಈಗ ಸರ್ವೇ ಸಾಮಾನ್ಯ. ತಾವೂ ನೆಮ್ಮದಿಯಿಂದ ಬಾಳರು; ಇತರರನ್ನೂ ನೆಮ್ಮದಿಯಿಂದ ಬಾಳಲು ಬಿಡರು. ಸ್ವಾರ್ಥಸಾಧನೆಯೊಂದೇ ಗುರಿಯಾದಾಗ ಎಲ್ಲರ ನೆಮ್ಮದಿಗೂ ಕುತ್ತು. ಸಾಂಸಾರಿಕ ಮತ್ತು ವ್ಯಾವಹಾರಿ ಜವಾಬ್ದಾರಿಗಳನ್ನು ನಿಶ್ಚಿಂತೆಯಿಂದ ಬಾಧ್ಯಸ್ಥರಿಗೆ ವಹಿಸಿ ತಮ್ಮ ಪ್ರಸ್ತುತಕ್ಕೆ ಅವಶ್ಯವಿರುವಷ್ಟನ್ನು ಮಾತ್ರಾ ಸಂತೃಪ್ತ ಭಾವನೆಯಿಂದ ಅನುಭವಿಸುವ ಪ್ರವೃತ್ತಿ ಕೂಡ ಇಂದು ಮರೆಯಾಗುತ್ತಿದೆ. ಕಡೆಯವರೆಗೂ ಈ ಜಂಜಾಟದಲ್ಲೇ ಮುಳುಗುವವರೇ ಹೆಚ್ಚು. ಅಂತೆಯೇ ಮುಂದಿನ ಪೀಳಿಗೆಯೊಂದಿಗೆ ಸಂಘರ್ಷ ಕೂಡ ಸಾಮಾನ್ಯ. ವೃದ್ಧಾಶ್ರಮಗಳ ಹೆಚ್ಚಳಕ್ಕೆ ಬರೀ ಮಕ್ಕಳನ್ನೇ ಅಪರಾಧಿಗಳಂತೆ ಇಂದು ಬಿಂಬಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ನಾಣ್ಯದ ಎರಡು ಮುಖಗಳಂತೆ ಇಲ್ಲೂ ಎರಡು ಆಯಾಮಗಳಿವೆ. ಇತ್ತೀಚಿನ ಕುಟುಂಬಗಳ ವೃದ್ಧರನ್ನು ಗಮನಿಸಿದಾಗ ಸ್ವತಂತ್ರವಾಗಿಯೇ ಬಾಳಬೇಕೆಂಬ ಇರಾದೆ ಮತ್ತು ಕುಟುಂಬದ ಇತರರೊಂದಿಗೆ ಸಮರಸವಾಗಿ ಬೆರೆತು-ಬಾಳುವ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಮಕ್ಕಳು ವಯಸ್ಶಾದ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವ ಬಗ್ಗೆ ಅವರಿಗೇ ಅನುಮಾನ (ಬಹುಶ: ಅವರು ಹಿಂದೆ ಅವರ ತಂದೆ-ತಾಯಿಗಳನ್ನು ನೋಡಿಕೊಂಡ ರೀತಿ ನೆನಪಾಗಿ ಅದೇ ಗತಿ ತಮಗೂ ಬರಬಹುದೆಂಬ ಅಂಜಿಕೆಯೂ ಕಾಡಬಹುದೇನೋ?); ಅಂತಹ ಅನುಮಾನ ಅವರಲ್ಲಿ ಮೂಡಬೇಕಾದರೆ ಮಕ್ಕಳನ್ನು ಅವರು ಬೆಳೆಸಿ-ಪೋಷಿಸಿದ ರೀತಿಯಲ್ಲಿಯೇ ಏನೋ ದೋಷವಿದೆಯೆನಿಸುವುದೂ ಸಹಜ ತಾನೇ? ವೃದ್ಧಾಪ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಿಕೊಂಡವರು ವಿಶೇಷವಾಗಿ ಆ ವಿಚಾರವನ್ನೇ ಪದೇ ಪದೇ ತಮ್ಮ ಕುಟುಂಬದ ಕಿರಿಯರಿಗೆ ನೆನಪಿಸುತ್ತಾ, ತಾವೇನೂ ಪರಾವಲಂಬಿಗಳಲ್ಲ, ಮಕ್ಕಳು ಬಿಟ್ಟಿ ಕೂಳು ಹಾಕುತ್ತಿಲ್ಲ ಎಂಬ ತಲೆಪ್ರತಿಷ್ಠೆಯ ಮತ್ತು ಅನಾವಶ್ಯಕ ನಡವಳಿಕೆ ತೋರಿದಾಗ ಸಂಬಂಧಗಳು ಹಳಸುತ್ತವೆ. ಆರ್ಥಿಕವಾಗಿ ಅವರಷ್ಟೇ ಮತ್ತು ಅನೇಕ ಸಂದರ್ಭಗಳಲ್ಲಿ ಅವರಿಗಿಂತ ಹೆಚ್ಚು ಸಬಲವಾಗಿರುವ ಕಿರಿಯರು ಸಹಜವಾಗಿಯೇ ಈ ಪ್ರವೃತ್ತಿಯಿಂದ ಬೇಸತ್ತು ಹಿರಿಯರನ್ನು ಇನ್ನಷ್ಟು ಹೆಚ್ಚು ನಿರ್ಲಕ್ಷಿಸಲು ಮತ್ತು ಪ್ರತಿಭಟಿಸಲು ಮುಂದಾಗುತ್ತಾರೆ. ಸಹಬಾಳ್ವೆಗೆ ಎಲ್ಲರ ಸಹಯೋಗ ಮತ್ತು ಸಹಕಾರ ಅಗತ್ಯ. ಯಾವ ಒಂದು ಕೊಂಡಿ ಸಡಿಲವಾದರೂ ಸಂಬಂಧಗಳು ಸೊರಗುತ್ತವೆ. ಹಾಗಾಗದಂತೆ ಎಚ್ಚರ ವಹಿಸುವ ಮತ್ತು ಸಕಾಲಿಕ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಮತ್ತು ಮೇಲ್ಪಂಕ್ತಿ ಹಾಕಿಕೊಡುವ ಜವಾಬ್ದಾರಿ ಕೂಡ ಹಿರಿಯರದ್ಧೇ ಅಲ್ಲವೇ? ಆದರೆ, ಪ್ರೀತಿ, ಪ್ರೇಮ, ಹಿರೀಕತನ ಮುಂತಾದವು ಇರಬೇಕಾದ ಕಡೆ ಇಂದು ಸ್ವಪ್ರತಿಷ್ಠೆ ಮತ್ತು ಅವಶ್ಯಕತೆಗೂ ಮೀರಿದ ಸ್ವಾಭಿಮಾನ (ದುರಭಿಮಾನ) ವಿರಾಜಿಸುತ್ತಿದೆ. ಹಾಗಾಗಿ ವೃದ್ಧಾಶ್ರಮ ಸೇರುವ ಸಾಕಷ್ಟು ಮಂದಿ ಸ್ವಯಂಕೃತ ಅಪರಾಧಿಗಳೇ ಎಂಬುದು ಕಟುವೆನಿಸಿದರೂ ಸತ್ಯವಾದ ಮತ್ತು ಒಪ್ಪಲೇಬೇಕಾದ ಸಂಗತಿ. ಒಟ್ಟಿನಲ್ಲಿ ಇದು ಕುಟುಂಬದ ಸುಮಧುರ ಬಾಂಧವ್ಯದ ಮತ್ತು ಬಂಧಗಳ ನಿರಂತರ ಪತನದ ದಿಕ್ಸೂಚಿಯೆಂದರೂ ಸರಿಯೇ. ಇಂತಹ ಅವನತಿಗೆ ಪ್ರಮುಖ ಕಾರಣಗಳಲ್ಲೊಂದು ಹಿರಿಯರ ಸ್ವಾರ್ಥಾರಾಧನೆ ಮತ್ತು ಸ್ವಪ್ರತಿಷ್ಠೆ. ಕಾಲ ಕಾಲಕ್ಕು, ತಲೆಮಾರಿನಿಂದ ತಲೆಮಾರಿಗೂ ಸಂಪ್ರದಾಯಗಳು, ಜೀವನಶೈಲಿ ಮತ್ತು ಯೋಚನಾಲಹರಿಗಳು ಬದಲಾಗುತ್ತವೆ; ಬದಲಾಗಲೇ ಬೇಕು. ಬದಲಾವಣೆ ಜಗದ ನಿಯಮ. ಈ ಅಂಶವನ್ನು ಅರಿತು, ಗೌರವಿಸಿದಷ್ಟೂ ಎಲ್ಲರ ಜೀವನ ಆನಂದಮಯವಾಗಿರಲು ಸಾಧ್ಯ. ಕಿರಿಯರಿಗೆ ಹಿರಿಯರ ಮಾರ್ಗದರ್ಶನ, ಒಡನಾಟ ಮತ್ತು ಆಶೀರ್ವಾದ ಬೇಕೇ ಬೇಕು. ಆದರೆ ವಿಶೇಷವಾಗಿ ಈ ಕಾಲದಲ್ಲಿ ಅದನ್ನು ಅವರಾಗಿಯೇ ಕಿರಿಯರ ಮೇಲೆ ಹೇರುವ ಹಠ ಮಾತ್ರಾ ತರವಲ್ಲ. ಅದು ಅವರ ಮತ್ತು ಕಿರಿಯರ ನಡುವೆ ಕೇವಲ ಕಿರಿಕಿರಿಯ ಅಸ್ತ್ರವೊಂದೇ ಆದೀತು. ಅದಕ್ಕೇ ಬಯಸದೇ ಇರುವ ಯಾವುದೇ ಸಲಹೆ ನೀಡಬೇಡಿ ಎಂದು ತಿಳಿದವರು ಹೇಳುವುದು.

ವೃದ್ಧಾಪ್ಯದ ಈ ಕಾಲ, ಈ ಹಿಂದೆ ಹೇಳಿದಂತೆ, ಒಂದು ಆತ್ಮಾವಲೋಕನದ ಕಾಲ. ಈ ಮೊದಲು ಮುಂದೂಡಿದ್ದ ಅನೇಕ ಸತ್ಸಂಕಲ್ಪಗಳನ್ನು ನೆರವೇರಿಸುವ ಕಾಲ. ಅದು ನಿಮ್ಮ ಕುಲದೇವರ ಕ್ಷೇತ್ರಕ್ಕೆ ಹೋಗುವುದಿರಬಹುದು, ತೀರ್ಥಯಾತ್ರೆಗೆ ಹೋಗುವ ವಿಚಾರವಿರಬಹುದು, ಪೂಜೆ, ಹೋಮ-ಹವನ, ದಾನಧರ್ಮಾದಿಗಳನ್ನು ಮಾಡುವುದಿರಬಹುದು, ಕನಿಷ್ಠಪಕ್ಷ ತಮ್ಮ ಕುಟುಂಬದ ಮಕ್ಕಳು-ಮೊಮ್ಮಕ್ಕಳು ವರ್ಷದೊಂದು ದಿನವಾದರೂ (ಹಬ್ಬ ಹರಿದಿನಗಳಲ್ಲಿ) ಒಂದೆಡೆ ಕಲೆತು ಬಾಂಧವ್ಯ ಬಲಗೊಳಿಸುವತ್ತ ಮಾರ್ಗದರ್ಶನ ನೀಡುವುದಿರಬಹುದು, ಕುಟುಂಬದ ಸಂಪ್ರದಾಯಗಳ ಬಗ್ಗೆ, ರೀತಿ ರಿವಾಜುಗಳ ಬಗ್ಗೆ ಮತ್ತು ಕುಟುಂಬದ ಹಿರಿಯರ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದಿರಬಹುದು ಇತ್ಯಾದಿ. ಜೀವನದ ಪರ್ವಕಾಲದಲ್ಲೂ ಇಂತಹ ಯೋಚನೆಗಳು ಬಾರದಿದ್ದಲ್ಲಿ ಅದು ಸ್ವಾರ್ಥದ, ಅಜ್ಞಾನದ ಮತ್ತು ಅಸಡ್ಡೆಯ ಪರಮಾವಧಿ ಎಂದರೆ ತಪ್ಪಾಗಲಾರದು. ಈ ಸಮಯ ಇಂತಹ ಸಂಕಲ್ಪಗಳನ್ನು ಸಾಕಾರಗೊಳಿಸಲು ಇರುವ ಸಕಾಲ ಮತ್ತು ಅಲ್ಪ ಕಾಲ! ಇನ್ನು ತಡಮಾಡಿದರೆ ಮುಂದೆಂದೂ ಆಗದು. ಅಂತ್ಯಕಾಲದಲ್ಲಿ ಭ್ರಮನಿರಸನ ಮತ್ತು ಆಪ್ತರ ತೆಗಳಿಕೆ ಬಿಟ್ಟರೆ ಬೇರೇನೂ ಲಭಿಸದು. ದುರದೃಷ್ಟವಶಾತ್, ಕೊನೆಗಾಲದಲ್ಲಿ ಅರಳು-ಮರುಳಾಗಿಬಿಟ್ಟರಂತೂ, ಅವರ ಅಂತ್ಯಕ್ಕೂ ಪ್ರಾಣಿಯ ಅಂತ್ಯಕ್ಕೂ ಯಾವುದೇ ವ್ಯತ್ಯಾಸ ಇರದು. ಏಕೆಂದರೆ, ಆಗ ದೇಹ ಮತ್ತು ಮನಸ್ಸು ಎರಡೂ ತಮ್ಮ ಸಮತೋಲನವನ್ನು ಸಂಪೂರ್ಣ ಕಳೆದುಕೊಂಡುಬಿಟ್ಟಿರುತ್ತದೆ. ಹಾಗಾಗಿ, ದೇವರು ಆ ಸ್ಥಿತಿ ತಲುಪಿಸುವ ಮೊದಲೇ ಮತ್ತು ಅಂತಹ ಲಕ್ಷಣಗಳು ಕಂಡೊಡನೆಯೇ, ಇರುವ ಶಕ್ತಿ-ಸಂಪನ್ನೂಲಗಳನ್ನು ಬಳಸಿ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಮುಂದಿನ ಪೀಳಿಗೆಗೆ ತಿಳಿಸುವ ಯಾವುದಾದರೂ ಕುಟುಂಬದ ರಹಸ್ಯ ವಿಚಾರಗಳಿದ್ದಲ್ಲಿ ಮತ್ತು ಜವಾಬ್ದಾರಿಗಳನ್ನು ಹಸ್ತಾಂತರಿಸುವುದಿದ್ದಲ್ಲಿ, ಬುದ್ಧಿ ನೆಟ್ಟಗಿರುವಾಗಲೇ ಆ ಕರ್ತವ್ಯಗಳನ್ನು ಮುಗಿಸಿ, ನಿರಾಳವಾಗಿರಬೇಕು. ದಿನನಿತ್ಯದ ಹೆಚ್ಚಿನ ಸಮಯ ಜಪ-ತಪ, ಸದ್ವಿಚಾರ ಚಿಂತನೆ, ಹರಿಕಥೆ-ಸಂಗೀತಗಳ ಶ್ರವಣ, ಹಿತಮಿತವಾದ ದೇಹಕ್ಕೊಪ್ಪುವ ಉಡುಗೆ-ತೊಡುಗೆ ಮತ್ತು ಆಹಾರ-ವಿಹಾರಗಳಲ್ಲಿ ಕಳೆಯುವಂತೆ ಯೋಜನೆ ಮಾಡಿಕೊಳ್ಳಬೇಕು. ಕಿರಿಯರು ಮಾಡುವ ಪ್ರತಿಯೊಂದಕ್ಕೂ ತಪ್ಪು ಹುಡುಕಿ ಗೊಣಗುವುದು ನಿಲ್ಲಬೇಕು. ಸಾಂಸಾರಿಕ ದಿನನಿತ್ಯದ ಪಿರಿಪಿರಿಯಿಂದ ಸಾಕಷ್ಟು ದೂರವಿರಬೇಕು. ಹಾಗಿದ್ದಾಗ ಅನಾಯಾಸವಾದ ಅಂತ್ಯವೂ ಲಭ್ಯವಾದೀತು. ವಿಪರ್ಯಾಸವೆಂದರೆ, ಇಂದಿನ ಅನೇಕ ವೃದ್ಧರೂ ಕೂಡ ತಮ್ಮ ಬಹು ಸಮಯವನ್ನು ಮನೋವಿಕಾರಗೊಳಿಸುವ, ವಿಕೃತ ಕಾಮನೆಗಳನ್ನು ಉದ್ದೀಪಿಸುವ ಮತ್ತು ಯಾವುದೇ ಸದ್ವಿಚಾರಗಳಿಲ್ಲದ ದೂರದರ್ಶನದ ಧಾರಾವಾಹಿಗಳನ್ನು ನೋಡುವುದೇ ತಮ್ಮ ಜೀವನದ ಸಾರ್ಥಕ್ಯವೆಂದು ನಡೆದುಕೊಳ್ಳುತ್ತಿರುವುದು ನಿಜಕ್ಕೂ ಒಂದು ಅಸಹ್ಯಕರವಾದ ಮತ್ತು ಅನಪೇಕ್ಷಣೀಯವಾದ ಬೆಳವಣಿಗೆ. ಮನೆಯಲ್ಲಿರುವ ಮಕ್ಕಳ ಓದಿಗೆ ಕೂಡ ಇದು ತೊಡಕಾಗುತ್ತಿದೆ ಎಂಬ ಅಂಶ ಗೊತ್ತಿದ್ದರೂ ಗಮನಿಸದಂತೆ ತಮ್ಮ ಚಟವನ್ನು ತೀರಿಸಿಕೊಳ್ಳುವವರೇ ಇಂದು ಬಹುಮಂದಿ. ಎಲ್ಲರ ಸಬೂಬೂ ಒಂದೇ - ನಮಗೆ ಕಾಲ ಹೋಗುವುದಿಲ್ಲ; ನಮ್ಮನ್ನು ಯಾರೂ ಗಮನಿಸುವುದಿಲ್ಲ ಎಂದು. ಕಾಲವನ್ನು ಉಪಯೋಗವಾಗುವ ರೀತಿಯಲ್ಲಿ ಮತ್ತು ಸಂತೋಷದಿಂದ ಕಳೆಯಲು ನೂರೆಂಟು ಪರ್ಯಾಯವಾದ ಮತ್ತು ಉತ್ತಮವಾದ ಮಾರ್ಗಗಳಿವೆ. ಅವುಗಳನ್ನು ತಮ್ಮ ಅಭಿರುಚಿಯಾನುಸಾರ ಗುರುತಿಸಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾತ್ರಾ ಅವರೇ ಮಾಡಬೇಕು. ಬೇರೆಯವರ ಪ್ರೀತಿ, ವಾತ್ಸಲ್ಯ, ಸಮಯ ಮತ್ತು ಒಡನಾಟ ಬೇಕಿದ್ದರೆ ನೀವು ಕಿರಿಯರಿಗೆ ಅದನ್ನೇ ಮೊದಲು ನೀಡಬೇಕು. ಆದರೆ ಕಿರಿಯರಿಗೆ ಮಾರ್ಗದರ್ಶಕರಾಗಿರಬೇಕಾದ ಇವರೇ ಇಂತಹ ಕೀಳು ಹವ್ಯಾಸಗಳ ಗುಲಾಮರಾದರೆ, ಕಿರಿಯರ ಮತ್ತು ಮೊಮ್ಮಕ್ಕಳ ಒಟನಾಟದಿಂದ ದೂರ ಸರಿದರೆ, ಕಿರಿಯರಿಗೆ ಉತ್ತಮ ಪುಸ್ತಕಗಳ ಓದುವ ಹವ್ಯಾಸ, ಕಲೆ-ಆಟೋಟಗಳಲ್ಲಿ ಆಸಕ್ತಿ, ಸದಾಚರಣೆ ಮತ್ತು ಟಿ.ವಿ.ನೋಡುವ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳುವ ಪ್ರವೃತ್ತಿ ಮುಂತಾದವುಗಳನ್ನು ಬೆಳೆಸುವವರಾರು?

ಈ ಘಟ್ಟದಲ್ಲಿ ಮೊದಲೇ ಹೇಳಿದಂತೆ, ಮಾನವ ತನ್ನ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ನೆಮ್ಮದಿಯಾಗಿ ಇಡುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಪ್ರಾಜ್ಞರು ಹೇಳುವಂತೆ ಆ ಸಚ್ಚಿದಾನಂದದ ಅನುಭವದ ಗುರಿ ಮುಖ್ಯ. ದೇಹಕ್ಕೆ ವಯಸ್ಶಾದಂತೆ ಮನಸ್ಸೂ ಪರಿಪಕ್ವವಾಗುತ್ತಾ, ಮಾಗುತ್ತಾ ಸಾಗಬೇಕು. ಒಂದೊಂದು ಹಲ್ಲು ಬಿದ್ದಾಗಲೂ ಮನಸ್ಸಿನ ಒಂದೊಂದು ಕಲ್ಮಷವನ್ನೂ ತೊಳೆದು ಬಿಸಾಡಬೇಕು. ಆ ಹಂತದಲ್ಲಿ ಖಾಯಿಲೆಗಳು ಬಂದು ದೇವರ ದಯೆಯಿಂದ ಗುಣವಾದಾಗ ಪುನರ್ಜನ್ಮ ಸಿಕ್ಕದೆಯೆಂದೇ ಭಾವಿಸಬೇಕು. ವಯಸ್ಸಾದಾಗ ಬಿಳಿಯಾಗುವ ಕೂದಲು ಪರೋಕ್ಷವಾಗಿ ನಮ್ಮನ್ನು ಮನಸ್ಸಿನ ಶುಭ್ರತೆಯೆಡೆಗೆ ಸಾಗು ಎಂದು ಹೇಳುವ ಒಂದು ಅಲಾರಾಂ. ಮಾಗಿದ ಫಲದ ರುಚಿಯಂತೆ ಮೈಬಾಗಿದ ದೇಹದ ಮನಸ್ಸೂ ಪ್ರೀತಿ-ವಾತ್ಸಲ್ಯಗಳಿಂದ ತುಂಬಿ ಸಿಹಿಯಾಗಬೇಕು; ಆ ಸಿಹಿಯನ್ನು ಎಲ್ಲ ಆಪ್ತೇಷ್ಟರೊಡನೆ ತೆರೆಯ ಹೃದಯದಿಂದ ಹಂಚಿ ಸಂಭ್ರಮಿಸಬೇಕು. ಅಂತೆಯೇ ಈ ಸಮಯದಲ್ಲಿ ಹಿರಿಯರ ನಡೆ-ನುಡಿಗಳು ಕಿರಿಯರಿಗೆ ಮತ್ತು ಕುಟುಂಬಸ್ಥರಿಗೆ ಆಪ್ಯಾಯಮಾನವಾಗಿರಬೇಕು, ಆಹ್ಲಾದಕರವಾಗಿರಬೇಕು ಮತ್ತು ಪ್ರೀತಿ-ವಾತ್ಸಲ್ಯಗಳಿಂದ ತುಂಬಿರಬೇಕು. ಹಿರಿಯರು ತಮ್ಮ ದಿನನಿತ್ಯದ ಆತ್ಮ ಸಾಕ್ಷಾತ್ಕಾರದ ಕೈಂಕರ್ಯಗಳನ್ನು ನಿಷ್ಠೆಯಿಂದ ಮಾಡಿ ಹಿರಿತನದ ಸ್ಥಾನದ ಗೌರವವನ್ನು ಉಳಿಸಿಕೊಂಡಾಗ ನಿಜವಾದ ಅರ್ಥದಲ್ಲಿ ಹಿರೀಕರೆನಿಸಿಕೊಳ್ಳುತ್ತಾರೆ. ಅವರ ಕುಟುಂಬರ ಕಿರಿಯರು, ಅಷ್ಟೇಕೆ, ಇಡೀ ಸಮಾಜ ಅವರನ್ನು ಅತೀ ಗೌರವಾದರಗಳಿಂದ ನೋಡುತ್ತದೆ. ಆ ಮರ್ಯಾದೆ ಸಿಗಬೇಕಾದರೆ ಅದಕ್ಕೆ ತಕ್ಕಂತೆ ಹಿರಿಯರ ನಡೆ-ನುಡಿಗಳು ಇರುವದೂ ಅಷ್ಟೇ ಮುಖ್ಯ. ಕೇವಲ ವಯಸ್ಸು ಮತ್ತು ಮುದಿತನ ಒಂದೇ ಎಂದಿಗೂ ಗೌರವವನ್ನು ಗಳಿಸಲಾರವು. ಆದುದರಿಂದ, ವೃದ್ಧಾಪ್ಯದಲ್ಲೂ ಸಾಂಸಾರಿಕ ಜಂಜಾಟಕ್ಕೆ ತಾವೇ ಸಿಲುಕಿಕೊಳ್ಳುವ ಬದಲು ಆನಂದಭರಿತವಾದ ಮತ್ತು ತಮಗೂ ತಮ್ಮ ಕುಟುಂಬದವರೆಲ್ಲರಿಗೂ ಸಹನೀಯವಾಗುವಂತಹ ಸನ್ನಿವೇಶ ನಿರ್ಮಾಣವಾಗುವತ್ತ ಗಮನ ಕೇಂದ್ರೀಕರಿಸಿದರೆ ಮತ್ತು ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಕುಟುಂಬದ ಎಲ್ಲರ ಬಾಳೂ 'ಭಾಗ್ಯವಂತರು ನಾವು ಭಾಗ್ಯವಂತರು' ಎನ್ನುವಂತಾದೀತು. ಆದರೆ ಆ ಬದಲಾವಣೆ ಎಂದಿದ್ದರೂ ಮೇಲಿನಿಂದಲೇ ಪ್ರಾರಂಭವಾಗಬೇಕಲ್ಲವೇ?

ಈ ಭೂಮಿಯ ಮೇಲೆ ನಾವೆಲ್ಲರೂ ನಿಗದಿತ ಕಾಲದ ಅತಿಥಿಗಳು. ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ಮನೆ ಎಂಬಂತೆ, ಋಣಾನುಸಾರ, ಕರ್ಮಾನುಸಾರ ಮತ್ತು ಲಭ್ಯಾನುಸಾರ ಪ್ರಕೃತಿ ಇಲ್ಲಿ ನೀಡುವಷ್ಟನ್ನು ತೆಪ್ಪಗೆ ಮತ್ತು ಗೊಣಗುಟ್ಟದೇ ಅನುಭವಿಸಿ ಕಾಣದೂರಿಗೆ ಪ್ರಯಾಣ ಮುಂದುವರೆಸುವ ಒಂದು ತಾತ್ಕಾಲಿಕ ತಾಣ. ಇಲ್ಲಿಗೆ ನಾವು ತಂದದ್ದೂ ಶೂನ್ಯ; ತೆಗೆದುಕೊಂಡು ಹೋಗುವುದೂ ಶೂನ್ಯ. ಅದೇ ರೀತಿ, ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ ನಾವು ನಮ್ಮನ್ನು ಕುಟುಂಬದಲ್ಲಿ ಅತಿಥಿಗಳ ಸ್ಥಾನದಲ್ಲಿ ಪರಿಭಾವಿಸಿಕೊಂಡು ವರ್ತಿಸಬೇಕು. ಕುಟುಂಬದ ಒಳ ದೈನಂದಿನ ಆಗು-ಹೋಗುಗಳ ಬಗ್ಗೆ ಅತಿಥಿಗಳಂತೆ ನಿರ್ವಿಕಾರ ಭಾವದಿಂದಿದ್ದು ಇರುವ ಸವಲತ್ತುಗಳನ್ನು ಸಂತೃಪ್ತ ಭಾವದಿಂದ ಅನುಭವಿಸುವ ಮನೋಸಂಕಲ್ಪ ಮಾಡಬೇಕು. ತಾವರೆ ಎಲೆ ಮೇಲೆ ಅಂಟಿಕೊಳ್ಳದೇ ಮುತ್ತಿನಂತೆ ಹೊಳೆದು ಹೊಯ್ದಾಡುವ ನೀರಿನ ಹನಿಗಳ ಸೌಂದರ್ಯವೂ ಇರಬೇಕು; ದೈನಂದಿನ ಸಾಂಸಾರಿಕ ಆಗು-ಹೋಗುಗಳ ಬಗ್ಗೆ ಎಲೆಗೆ ಅಂಟಿಕೊಳ್ಳದ ನೀರಿನ ಹನಿಗಳ ಪರಿ ವಿರಕ್ತಿಯೂ ಇರಬೇಕು. ಆಗ ಮಾತ್ರ ಜೀವನದ ಸಂಜೆಗಳು ಅವರಿಗೂ ಮತ್ತು ಅವರ ಕುಟುಂಬಸ್ಥರಿಗೂ ಪ್ರೀತಿ, ವಾತ್ಸಲ್ಯಗಳ ಸೆಲೆಯಾದೀತು ಮತ್ತು ಹಿರೀಕರ ಬಗ್ಗೆ ಗೌರವಾದರಗಳು ಇನ್ನೂ ಉಳಿದೀತು. ಒಣ-ಮದ ಬಿಟ್ಟು ಮುದದಿಂದ ನಡೆದಾಗ ತಾನೆ ಬಾಳು ಸುಂದರ?

ನಿರ್ಮಲ ಪ್ರೀತಿ, ಆರೋಗ್ಯ-ವೈರಾಗ್ಯ, ಋಣರಾಹಿತ್ಯ, ಪಾಪವಿಮುಕ್ತಿ, ನಿಶ್ಚಿಂತೆ ಹಾಗೂ ಭಗವಂತನಲ್ಲಿ ನಂಬಿಕೆ ಇವಿಷ್ಟಿದ್ದರೆ ವೃಧ್ದಾಪ್ಯ ನಿಜವಾಗಿಯೂ ಶೋಭಿಸುತ್ತದೆ; ಆತ್ಮ ಸಂತೃಪ್ತಿಗೆ ಸೋಪಾನವಾಗುತ್ತದೆ. ವಯಸ್ಸಾಗುತ್ತಿರುವವರಿಗೆ ಮತ್ತು ವಯಸ್ಸಾದರವರೆಲ್ಲರಿಗೂ ಆ ಭಗವಂತ ಈ ಜ್ಞಾನವನ್ನು ಮೂಡಿಸಿದರೆಷ್ಟು ಚೆನ್ನ ಅಲ್ಲವೇ?


ಜೀವನ ಸಂಜೆಯ ಹೊಂಗಿರಣ
ಆಗಲಿ ಎಲ್ಲರ ಬಾಳಿನ ಸವಿ ಹೂರಣ |

Saturday, August 14, 2010

ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವ



ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ದೇಶವು ಸಾಗಿದೆ.ಪ್ರತಿ ವರ್ಷವೂ ಸಹ ಆಗಸ್ಟ್ ೧೫ ಬಂದೊಡನೆ ಎಲ್ಲಾ ಕಛೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಸಂಘಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಜನಗಣಮನ ಹಾಡಿ ಸಿಹಿತಿಂದರೆ ಅಂದಿನ ಕಾರ್ಯಕ್ರಮ ಮುಗಿದಂತೆಯೇ.ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಆಡಳಿತವು ವಿಶೇಷ ಕಾರ್ಯಕ್ರಮಗಳನ್ನು ಮಾಡಬಹುದು. ಆದರೆ ಅಂದು ನಮ್ಮೆಲ್ಲರ ಹೊಣೆ ಏನು? ಈ ದೇಶದಲ್ಲಿ ಜನ್ಮ ತಾಳಿದ್ದಕ್ಕೆ ಕನಿಷ್ಟಪಕ್ಷ ಆ ದಿನವಾದರೂ ನಮ್ಮಲ್ಲಿ ರಾಷ್ಟ್ರಭಕ್ತಿಯ ಜಾಗೃತಿಯಾಗಬೇಡವೇ? ಸಂಕ್ರಾಂತಿಯ ದಿನ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡು ಎನ್ನುವಂತೆ, ಯುಗಾದಿಯ ಹಬ್ಬದದಿನ ಬೇವು ಬೆಲ್ಲತಿಂದು ವರ್ಷವೆಲ್ಲಾ ನಮ್ಮ ಜೀವನ ಹೇಗಿರಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವಂತೆ, ಸ್ವಾತಂತ್ರೋತ್ಸವದ ದಿನ ನಮ್ಮ ಕರ್ತವ್ಯ ಇಲ್ಲವೇ? ಅಂದು ನಡೆವ ಯಾವುದೇ ಸಭೆಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಾಣುವುದೇನು? ಒಂದಿಷ್ಟು ನೃತ್ಯಗಳು, ಚಿತ್ರಗೀತೆಗಳು. ಆದರೆ ರಾಷ್ಟ್ರಭಕ್ತಿಯನ್ನು ಪುಟಿದೇಳಿಸುವ ಭಾಷಣಗಳು ನಡೆಯುತ್ತವೆಯೇ? ನನ್ನ ಸರ್ವಸ್ವವನ್ನೂ ಪೂರೈಸುವ ಈದೇಶಕ್ಕಾಗಿ ನನ್ನ ಕರ್ತವ್ಯ ವೇನು? ಎಂಬ ಬಗ್ಗೆ ಸಂಕಲ್ಪತೊಡುವ ಕಾರ್ಯಕ್ರಮಗಳು ಎಷ್ಟು ನಡೆಯುತ್ತವೆ?

ಬ್ರಿಟಿಶರು ನಮಗೆ ಚಿನ್ನದ ತಟ್ಟೆಯಲ್ಲಿಟ್ಟು ಈ ದೇಶದ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ಕೊಟ್ಟಿಲ್ಲ. ಇದರ ಹಿಂದೆ ಸಹಸ್ರಾರು ದೇಶಭಕ್ತರ ತ್ಯಾಗ-ಬಲಿದಾನದ ಕಥೆಯಿದೆ.ಸಹಸ್ರಾರು ತರುಣರು ನೇಣಿಗೆ ತಮ್ಮ ಕತ್ತನ್ನು ನೀಡಿರುವ ಧಾರುಣ ಜೀವನ ಗಾಥೆಯಿದೆ.ಜೈಲಿನಲ್ಲಿ ನರಕಯಾತನೆಅನುಭವಿಸಿದ ಸಹಸ್ರಾರು ದೇಶಭಕ್ತರ ನೋವಿನ ಕಥೆಯಿದೆ.೧೯೪೭ ರ ಆಗಸ್ಟ್ ೧೪ ರ ರಾತ್ರಿ ೧೨ ಗಂಟೆಯಲ್ಲಿ ಕೆಲವರು ಸ್ವಾತಂತ್ರ್ಯ ನೀಡಲು , ಕೆಲವರು ಸ್ವಾತಂತ್ರ್ಯ ಪಡೆಯುವ ಸಂಬ್ರಮದಲ್ಲಿದ್ದರೆ ಅದೇ ಸಮಯದಲ್ಲಿ ಭಾರತವು ತುಂಡಾಗಿತ್ತು.ಆಗಸ್ಟ್ ೧೩ ರಂದು ನಮ್ಮದೇಶದಲ್ಲಿದ್ದವರು ೧೪ ರ ರಾತ್ರಿಯ ವೇಳೆಗೆ ಪರಕೀಯರಾಗಿದ್ದುದು ಐತಿಹಾಸಿಕ ದುರಂತ.ಅಂದು ನಮ್ಮವರು ತೆಗೆದುಕೊಂಡಂತ ತಪ್ಪು ನಿರ್ಧಾರಗಳು ಇಂದಿಗೂ ಕಾಶ್ಮೀರಿಗಳ ನಿದ್ರೆಯನ್ನು ಕೆಡಸಿವೆ.ಅದೊಂದು ದೊಡ್ದ ಕರುಣಾಜನಕ ಕಥೆಯೇ ಸರಿ!

ಕೇವಲ ಸಿಹಿತಿಂದು ಕೈಒರಸಿಕೊಂಡರೆ ನಮ್ಮ ದೇಶಭಕ್ತಿ ಮುಗಿದುಹೋಗಬೇಕೆ? ಸಿಹಿ ತಿನ್ನುವ ಮುಂಚೆ ದೇಶಬಾಂಧವರೇ ಸ್ವಲ್ಪ ನಮ್ಮ ದೇಶದ ಇಂದಿನ ಒಟ್ಟಾರೆ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ.ನಮ್ಮ ಕಣ್ಣೆದುರಿಗೆ ಕುದಿಯುತ್ತಿರುವ ಕಾಶ್ಮೀರವೂ ಬರಲಿ, ಶಾಂತವಾಗಿರುವ ಪ್ರದೇಶಗಳೂ ಬರಲಿ. ಅಂತರ್ಜಾಲ ಸೌಲಭ್ಯ ಉಪಯೋಗಿಸುತ್ತಿರುವ ನಮಗೆ ಖಂಡಿತವಾಗಿಯೂ ಎರಡು ಹೊತ್ತು ಊಟಕ್ಕೆ ಕಷ್ಟಪಡುವ ಪರಿಸ್ಥಿತಿಯಿಲ್ಲ. ಆದರೆ ನಮ್ಮ ಸರ್ಕಾರಗಳು ಇಷ್ಟೆಲ್ಲಾ ಸವಲತ್ತುಗಳನ್ನು ನೀಡಿದರೂ ಇಂದಿಗೂ ಹಸಿದಜನರ ನೆರಳಾಟ ತಪ್ಪಿಲ್ಲ. ದುರ್ಬಲರ ಶೋಷಣೆ ತಪ್ಪಿಲ್ಲ. ಅಮಾಯಕರ ಮೇಲೆ ದೌರ್ಜನ್ಯವು ತಪ್ಪಿಲ್ಲ. ಹೌದು ನಾವು ಇಂದು ಇವೆಲ್ಲಾ ಚಿತ್ರವನ್ನೂ ನಮ್ಮ ಕಣ್ಮುಂದೆ ತಂದುಕೊಂಡು ಹಸಿದವರಿಗಾಗಿ ಮರುಕಪಟ್ಟು ನಮ್ಮ ಕೈಲಾದ ಕಿಂಚಿತ್ ಸೇವೆಯನ್ನು ನಮ್ಮ ದೇಶದ ದುರ್ಬಲರಿಗಾಗಿ ಮಾಡುತ್ತೇವೆಂಬ ಸಂಕಲ್ಪ ಮಾಡುವುದಾದರೆ ಇಂದಿನ ನಮ್ಮ ಸ್ವಾತಂತ್ರೋತ್ಸವ ಅರ್ಥಪೂರ್ಣ ವಾದೀತು.ತಾಯಿ ಭಾರತಿಗೆ ಜಯವಾಗಲಿ.

Friday, August 13, 2010

ಆತ್ಮ



ಎಳ್ಳಿನೊಳಗೆಣ್ಣೆ ಹಾಲಿನಲಿ ಬೆಣ್ಣೆ
ಕಟ್ಟಿಗೆಯಲಿ ಕಿಚ್ಚು ಹೂವಿನಲಿ ಕಂಪು
ಕಬ್ಬಿನಲಿ ಬೆಲ್ಲವು ಇರುವ ತೆರದಲ್ಲೇ
ಒಡಲಲಿನಲಿ ಆತ್ಮವನು ನೀ ಕಾಣು


ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ)
ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ

ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ

-ಹಂಸಾನಂದಿ

ವೇದೋಕ್ತ ಜೀವನ ಪಥ

ಜೀವನ ಬುನಾದಿ -15

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ
ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ (ಋಕ್.10.62.4)

[ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇದಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.

ದಾರಿ..

ದಾರಿ, ಅದು ನಿತ್ಯ ಮೌನಿ,


ದಾರಿಯಲ್ಲಿ ಯಾರೂ ನಡೆಯಬಹುದು

ಜಾತಿ ಮತ ಪ೦ಥಗಳ ಬೇಧವಿಲ್ಲದೆ,

ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ

ನಿ೦ತರದು ಸ್ಥಾವರ, ಆ ಕ್ಷಣಕ್ಕೆ

ನಮ್ಮ ಅನುಭವಗಳ ಅ೦ತ್ಯ;


ನಡೆಯುತ್ತಲೇ ಇದ್ದಲ್ಲಿ ಅದೂ

ನಮ್ಮೊ೦ದಿಗೇ ಸಾಗುತ್ತದೆ,

ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,

ನಮಗೋ ಅನುಭವಗಳ ಮು೦ದುವರಿಕೆ;


ಎಷ್ಟೊ೦ದು ಜನ ನಡೆದರು ಇಲ್ಲಿ!

ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು

ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;


ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು

ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;

ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,

ನಡೆದವರು ಉಳಿದವರಿಗೆ ದಾರಿಯ ತೋರಿದರು,

ನಡೆಯಲಾಗದವರೆಲ್ಲಾ ಇದರ ಬಗ್ಗೆ ಬರೀ ಹೇಳಿದರು,

ಆದವರು ನಡೆದರು, ಉಳಿದವರು ಸುಮ್ಮನೇ ಉಳಿದರು;


ಒಬ್ಬೊಬ್ಬರದು ಒ೦ದೊ೦ದು ದಾರಿ,

ಸಬಲರು ದುರ್ಬಲರೆನ್ನದೆ ಸರಿ

ದಾರಿಯಲ್ಲಿ ಕ್ರಮಿಸಿದವರು ಉಳಿದರು,

ತಪ್ಪು ಹಾದಿಯ ಆರಿಸಿದವರು ಅಳಿದರು,

ಯೌವನ, ಗ್ರಹಸ್ಥ, ಸನ್ಯಾಸ, ವಾನಪ್ರಸ್ಥ

ಎಲ್ಲವೂ ದಾರಿಗಳೇ, ಗಮ್ಯದತ್ತ ಮಾರ್ಗದರ್ಶಿಗಳೇ;


ರಾಜನಾದರೇನು? ಗುಲಾಮನಾದರೇನು?

ನಾಯಕನಾದರೇನು? ಹಿಂಬಾಲಕನಾದರೇನು?

ಎಲ್ಲರೂ ನಡೆದರು, ಮು೦ದೂ ನಡೆಯುವರು,

ಯಾವುದೋ ಸಾಧನೆಗಾಗಿ,

ತಡಕಾಡಿದ ಕನಸುಗಳ ಸಾಕಾರಕ್ಕಾಗಿ;


ಆದರೆ ದಾರಿ ಮಾತ್ರ ಸದಾ ಮೌನಿ,

ನೀವು ಮಾತನಾಡಿದರೂ ಅದು ಬಾಯ್ತೆರೆಯದು,

ಅದೊ೦ದು ವಸ್ತು!

ಅದೊ೦ದು ನಿಗೂಢ!

ಅದೊ೦ದು ಕುತೂಹಲ!

ನಡೆದಾಡುವವರ ತೂಕವನ್ನಳೆವ ಮಾಪಕ

ನಮ್ಮೊ೦ದಿಗೇ ಉಳಿದರೂ,

ನಮ್ಮೊ೦ದಿಗೇ ಅಳಿಯದಂಥಹ ದ್ಯೋತಕ!

Thursday, August 12, 2010

ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ

ಕೃಷಿ ಬಗ್ಗೆ ಸಂಶೋಧನೆಗಾಗಿ ಒಬ್ಬ ವಿದ್ಯಾರ್ಥಿಯು ಹಳ್ಳಿಗೆ ಹೋಗುತ್ತಾನೆ. ಒಂದು ಹೊಲ. ಅದರಲ್ಲಿ ಒಂದು ಎತ್ತಿನ ಗಾಣ ಕಟ್ಟಿದೆ. ಎತ್ತು ಅದರಪಾಡಿಗೆ ಅದು ಸುತ್ತುತ್ತಿದೆ. ಗಾಣದಿಂದ ಬಂದ ಎಣ್ಣೆ ಡಬ್ಬ ತುಂಬುತ್ತಿದೆ.ಅಲ್ಲಿ ಯಾರೂ ಮನುಷ್ಯರು ಇಲ್ಲ. ವಿದ್ಯಾರ್ಥಿ ಸುತ್ತ ಮುತ್ತ ನೋಡುತ್ತಾನೆ. ಸಮೀಪದಲ್ಲಿಯೇ ಒಬ್ಬ ರೈತ ಹೊಲ ಉಳುತ್ತಿರುತ್ತಾನೆ. ಅವನ ಹತ್ತಿರ ಹೋಗಿ ವಿಚಾರಿಸುತ್ತಾನೆ. ಆ ಗಾಣ ಯಾರದು?

ರೈತ ಹೇಳುತ್ತಾನೆ.-" ನನ್ನದೇ ಸ್ವಾಮಿ"

- ನಿನಗೆ ಬುದ್ಧಿ-ಗಿದ್ಧಿ ಇದ್ಯಾ? ಎಣ್ಣೆ ಗಾಣ ತಿರುಗಲು ಬಿಟ್ಟು ಇಲ್ಲಿ ಬಂದು ಇಲ್ಲಿ ಹೊಲ ಉಳುತ್ತಿದ್ದೀಯಲ್ಲಾ? ಎಣ್ಣೆ ಡಬ್ಬ ತುಂಬಿ ಹೊರಚೆಲ್ಲಿದರೆ ಎಷ್ಟು ನ್ಯಾಶನಲ್ ವೇಸ್ಟ್ ಆಗುತ್ತೆ ಗೊತ್ತಾ?

- ಅಂಗಂದ್ರ ನಂಗ್ ಅರ್ಥ ಆಗಲಿಲ್ಲ ಬುದ್ಧಿ.

- ಎಣ್ಣೆ ಡಬ್ಬ ತುಂಬಿ ಹೆಚ್ಚಾಗಿ ಹೊರಚೆಲ್ಲಿದರೆ ನಷ್ಟ ಆಗುತ್ತೆ ಅಂತಾ.ಇಷ್ಟೂ ಬುದ್ಧಿ ಇಲ್ವಲ್ಲಾ ನಿನಗೆ.

- ಅಂಗೆಲ್ಲಾ ಏನೂ ಆಕ್ಕಿಲ್ಲ ಬುದ್ಧಿ.

-ಅದು ಹೇಗೆ? ನೀನು ಇಲ್ಲಿದ್ದೀಯ.ವೇಸ್ಟ್ಆಗುಲ್ಲಾ ಅಂತೀಯಲ್ಲಾ?

-ನೋಡಿ ಬುದ್ಧಿ, ನಾನು ನಾಲ್ಕು ಸಾಲು ಉಳ್ಮೆ ಮಾಡೋ ಹೊತ್ತಿಗೆ ಒಂದು ಡಬ್ಬ ಎಣ್ಣೆ ತುಂಬಿರ್ತದೆ. ಇಲ್ಲಿ ಉಳಾದು ನಿಲ್ಸಿ ಅಲ್ಲಿ ಓಯ್ತೀನಿ. ಎಣ್ಣೆ ಡಬ್ಬ ಬದಲಿಸ್ತೀನಿ. ಬತ್ತೀನಿ.

-ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳ್ತೀಯಾ? ನೀನು ಇಲ್ಲಿರುವಾಗ ಗಾಣದೆತ್ತು ತಿರುಗೋದು ನಿಲ್ಲಿಸಿಬಿಟ್ರೆ!

- ಇಲ್ಲಾ ಬುದ್ಧಿ, ಅಂಗಾಗಾಕಿಲ್ಲ. ಅದರ ಕುತ್ತಿಗೆಗೆ ಗಂಟೆ ಕಟ್ಟೀವ್ನಿ.ಅದು ಸುತ್ತುತ್ತಿರೋವಾಗ ನನಗೆ ಗಂಟೆ ಸದ್ದು ಕೇಳ್ತಾ ಇರ್ತದೆ.

- ಎತ್ತು ಏನಾದರೂ ನಿ೦ತಲ್ಲೇ ಕತ್ತು ಅಲ್ಲಾಡಿಸುತ್ತಾ ಗಂಟೆ ಶಬ್ಧ ಮಾಡುತ್ತಿದ್ದರೆ?

-ಅದು ನಿಮ್ಮಂಗೆ ಪ್ಯಾಟಿಗೆ ಇಸ್ಕೂಲ್ಗೆ ಹೋಗಿಲ್ಲಾ ಬುದ್ಧಿ.

“ಹೃದಯ ಮಾತನಾಡಿದಾಗ”

ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………

“ಸುಮಾರು ನಾಲ್ಕು ದಶಕಗಳಿಂದ ಸಮಾಜ-ಸಮಾಜ ಅಂತ ಪ್ರಾಣ ಬಿಡ್ತೀಯಲ್ಲಾ,ಈಗಿನ ಸಾಮಾಜಿಕ ಸಂದರ್ಭ ನಿನಗೆ ಏನನ್ನಿಸುತ್ತಿದೆ?”

ಅವನ ಪ್ರಶ್ನೆಯಲ್ಲಿ ಕಳಕಳಿ ಇತ್ತು. ಹಾಗಾಗಿ ಅವನ ಪ್ರಶ್ನೆ ನನ್ನನ್ನು ಸ್ವಲ್ಪ ಚಿಂತನೆಗೆ ಈಡುಮಾಡಿತು. ತಕ್ಷಣಕ್ಕೆ ಉತ್ತರಕೊಡುವುದು ಕಷ್ಟವೆನಿಸಿತು. ಶ್ಯಾಮ್ ನಲ್ಲಿ ಸಮಾಜದ ಬಗ್ಗೆ ಪ್ರಾಮಾಣಿಕವಾದ ಕಳಕಳಿ ಇದೆ,ಇಂದಿನ ಸ್ಥಿತಿಗತಿಗಳಬಗ್ಗೆ ಅಸಮಾಧಾನವಿದೆ, ದು:ಖವಿದೆ, ಅಂತೆಯೇ ನೋವೂ ಇದೆ. ಅವನೇ ಮಾತು ಮುಂದುಬರೆಸಿದ.

“ ಶ್ರೀಧರ್, ಎಲ್ಲಾ ಬೋಗಸ್, ಯಾರನ್ನೂ ನಂಬಬೇಡ,ಸಮಾಜದ ಹೆಸರು ಹೇಳಿಕೊಂಡು ಮುಗ್ಧರನ್ನು ಹಿಂಡಿ ಹಿಪ್ಪೇಕಾಯಿ ಮಾಡ್ತಾರೆ. ಕೆಲಸವಾಗುವ ತನಕ ನಿಮ್ಮಂತವರನ್ನು ಇಂದ್ರ,ಚಂದ್ರ, ದೇವೇಂದ್ರನೆನ್ನುತ್ತಾರೆ. ಕೆಲಸವಾದಮೇಲೆ “ಹಾಸುಂಡು ಬೀಸಿ ಒಗೆದಂಗ” ಅನ್ನೋ ಮಾತು ಕೇಳಿದೀಯ ತಾನೆ, ಅಷ್ಟೆ.

ಅವನ ನಾಲಿಗೆ ಮಾತನಾಡುತ್ತಿರಲಿಲ್ಲ ಬದಲಿಗೆ ಹೃದಯ ಮಾತನಾಡುತ್ತಿತ್ತು. ಹಾಗಾಗಿ ನಾನು ತಲೆಯಾಡಿಸುತ್ತಲೇ ಇದ್ದೆ. “ ಕೇವಲ ೧೦-೨೦ ವರ್ಷಗಳ ಹಿಂದೆ ಮಂಡಿಯಲ್ಲಿ ಲೆಕ್ಖ ಬರೆಯುತ್ತಿದ್ದವರು ರಾಜಕೀಯ ಪ್ರವೇಶ ಮಾಡಿ ಈಗ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯರು, ನೂರಾರು ಎಕರೆ ಜಮೀನು,ಹತ್ತಾರು ಬಂಗಲೆಗಳು, ಹತ್ತಾರು ಕಾರ್ಖಾನೆಗಳ ಒಡೆಯರು. ಶಾಸಕರು-ಮಂತ್ರಿಗಳಾಗಿ ಇವರು ಮಾಡಿರುವ ಸಮಾಜಸೇವೆಯ ಪರಿ ಇದು.ಹೇಳು ಶ್ರೀಧರ್, ಇದೆಲ್ಲಾ ಹೇಗೆ ಸಾಧ್ಯ ವಾಯ್ತು? ಅಥವಾ ಇದು ಸುಳ್ಳೇ ?”

ನನ್ನ ಮೌನ ಗಮನಿಸಿದ ಶ್ಯಾಮ್ ಮಾತನಾಡುತ್ತಲೇ ಇದ್ದ. “ಶ್ರೀಧರ್, ಯಾರನ್ನೂ ನಂಬಬೇಡ.ಸಮಾಜದ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಸೇವೆಯ ಹೆಸರಲ್ಲಿ, ಮೋಸ ಮಾಡಿ ಮಾಡಿ “ಸಮಾಜ ಸೇವೆ” ಎಂಬ ಪದ ಅದರ ಅರ್ಥವನ್ನೇ ಕಳೆದುಕೊಂಡಿದೆ.”

ಅಬ್ಭಾ! ನನ್ನ ಮಿತ್ರನ ಮುಖ ಕೆಂಪೇರಿತ್ತು, ದು:ಖ, ಕೋಪ ಒಮ್ಮೆಲೇ ಬರುತ್ತಿತ್ತು. ಯಾಕೋ ಎರಡು ನಿಮಿಷ ಸುಮ್ಮನಾದ. ಆಗ ನಾನು ಬಾಯ್ತೆರೆದೆ “ ನೋಡು ಶ್ಯಾಮ್, ನೀನು ಸಮಾಜದ ಒಂದು ವರ್ಗದ ಕೆಟ್ಟ ಮುಖವನ್ನು ನೋಡಿ ಮಾತನಾಡುತ್ತಿರುವೆ. ಆದರೆ ಸಮಾಜವೆಂದರೆ ಕೇವಲ ಭ್ರಷ್ಟ ರಾಜಕಾರಣಿಗಳ ಸ್ವತ್ಥಲ್ಲ.ನಿಜವಾದ ಸಮಾಜಸೇವೆ ಮಾಡುತ್ತಿರುವ ಸಾವಿರಾರು ಮಂದಿ ಇನ್ನೂ ಎಲೆಮರೆಕಾಯಿಯಂತೆ ಸುದ್ಧಿಯಿಲ್ಲದೇ ನಿಜದರ್ಥದ ಸಮಾಜಸೇವೆ ಮಾಡುತ್ತಲೇ ಇದ್ದಾರೆ. ಸಮಾಜಕ್ಕೆ ಇನ್ನೂ ಒಂದು ಮುಖವಿದೆ. ಅಲ್ಲಿ ದೀನ, ದಲಿತ,ದರಿದ್ರರ ಆಕ್ರಂದನ ಬೆಚ್ಚಿ ಬೀಳಿಸುವಂತೆ ಕೇಳುತ್ತದೆ. ಕೇವಲ ಟಿ.ವಿ. ಮಾಧ್ಯಮಗಳಲ್ಲಿ ನೋಡುವ, ಸುದ್ಧಿಪತ್ರಿಕೆಗಳಲ್ಲಿ ಓದುವ ಸುದ್ಧಿಯಷ್ಟೇ ಪ್ರಪಂಚವಲ್ಲ. ಅದರಾಚೆಗೂ ಯಾವ ಮಾಧ್ಯಮಗಳೂ ತಲುಪಲಾರದ ಜಾಗದಲ್ಲಿ ನೆರಳುತ್ತಿರುವವರ ಗೋಳು ಕಿವಿಗೆ ಬೀಳದಿರುವ ಜಾಗದಲ್ಲಿ ಅಂತವರ ಸೇವೆ ಮಾಡುತ್ತಿರುವವರ ಸಂಖ್ಯೆಗೇನೂ ಕಮ್ಮಿಇಲ್ಲ. ಆದೃಶ್ಯಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ. ಕಾರಣ ಆ ಜಾಗವನ್ನು ತಲುಪಲು ರಸ್ತೆಗಳೇ ಇಲ್ಲ, ದೂರವಾಣಿ ಇಲ್ಲ, ವಿದ್ಯುತ್ ಎಂಬುದು ಗೊತ್ತೇ ಇಲ್ಲ. ಮಾನ ಮುಚ್ಚಲು ಬಟ್ಟೆಗೇ ಗತಿಯಿಲ್ಲ. ಮಲಗಲು ಸೂರಿಲ್ಲ. ಹೊರಪ್ರಪಂಚವನ್ನು ಕಂಡೇ ಇಲ್ಲ……

ನನ್ನ ಮಾತು ಮುಗಿದೇ ಇಲ್ಲ, ಮಧ್ಯೆ ಬಾಯಿ ಹಾಕಿದ ಶ್ಯಾಮ್ “ ಹೌದು ಶ್ರೀಧರ್, ಅಂತಹ ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ಮಹಾನುಭಾವರಿಲ್ಲವೆಂದು ನಾನು ಹೇಳಲಿಲ್ಲ. ಅಂತವರು ಮಾಡುತ್ತಲೇ ಇದ್ದಾರೆ. ಎಷ್ಟೋ ಜನ ಅಂತವರ ಸೇವೆಮಾಡುತ್ತಲೇ ಕೊನೆಯುಸಿರೆಳದಿರುವ ನಿದರ್ಶನಗಳೂ ನನ್ನ ಗಮನಕ್ಕೆ ಬಂದಿದೆ. ಆದರೆ ಅದಕ್ಕಿಂತ ಘೋರ ಸುದ್ಧಿಯೂ ಕಿವಿಮುಟ್ಟಿದೆ. ಇಂತಹ ದೀನ, ದಲಿತ,ದರಿದ್ರರ ಸೇವೆಯ ಹೆಸರಲ್ಲೂ ಲೂಟಿ ನಡೆಯುತ್ತಿದೆ. ಅಂತವರ ಹೆಸರಲ್ಲಿ ಹಣಸಂಗ್ರಹಿಸಿ ಅದರ ದುರುಪಯೋಗ ಪಡಿಸಿಕೊಂಡಿರುವ ಬೋಗಸ್ ಸಂಸ್ಥೆಗಳ ಬಗ್ಗೆ ನಿನಗಿನ್ನೂ ತಿಳಿದಿಲ್ಲ. ಅದಕ್ಕೇ ನೀನು ಇಷ್ಟು ಮುಗ್ಧನಾಗಿ ಮಾತನಾಡುತ್ತಿರುವೆ.”

“ನೋಡು ಶ್ಯಾಮ್, ನೀನು ಏನೇ ಹೇಳು, ಸಮಾಜಸೇವೆಯ ಶುದ್ಧಮುಖವನ್ನು ಹತ್ತಿರದಿಂದ ಕಂಡಿರುವವನು ನಾನು.ಆ ಮುಖವೇ ನನಗೆ ಸ್ಫೂರ್ತಿ, ಕಾಲೇಜುಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ವೈದ್ಯರಾಗಿ, ಇಂಜಿನಿಯರುಗಳಾಗಿ ಲಕ್ಷ ಲಕ್ಷ ದುಡಿಯಲು ಸಮರ್ಥರಿದ್ದ ತರುಣರು ಅದನ್ನೆಲ್ಲಾ ಎಡಗಾಲಲ್ಲಿ ಒದ್ದು ,ಮುಂಜಿ-ಮದುವೆ ಗಳಿಲ್ಲದೆ, ಏಕಾಂಗಿಯಾಗಿ ಸಮಾಜಕಾರ್ಯಮಾಡುತ್ತಾ ಅದರಲ್ಲೇ ಕೊನೆಯುಸಿರೆಳೆದಿರುವ ಅನೇಕ ಪುಣ್ಯಾತ್ಮರನ್ನು ಕಂಡಿದ್ದೇನೆ. ಅವರೊಡನೆ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನೆನಪುಗಳು ನನ್ನ ಸ್ಮೃತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ…….” ನನ್ನ ಮಾತಿನ ನಡುವೆಯೇ ಮಾತಿಗಿಳಿದ ಶ್ಯಾಮ್

“ ಹೌದೌದು ಶ್ರೀಧರ್, ಹೊಟ್ಟೆಗೆ ಹಿಟ್ಟಿಲ್ಲದೇ ಕಡಲೆ ಪುರಿ ತಿಂದು , ಹಳ್ಳಿಗಳ ದೇವಸ್ಥಾನದ ಜಗಲಿಯ ಮೇಲೆ ಮಲಗಿ, ಆಹಳ್ಳೀ ಜನಗಳಿಂದ ಬಾಯ್ತುಂಬ ಬೈಗುಳ ಕೇಳಿದರೂ ಬೇಸರಿಸದೆ ಅವರ ಮನ ಒಲಿಸಿ, ನಾಲ್ಕಾರು ತರುಣರನ್ನು ಕಲೆಹಾಕಿ, ಅವರೊಡನೆ ಗೆಳೆತನ ಬೆಳಸಿ, ದೇಶಭಕ್ತಿಗೀತೆಗಳನ್ನು ಹೇಳಿಕೊಟ್ಟು, ಕಬ್ಬಡ್ಡಿ ಆಡಿಸಿ, ಕೊನೆಯಲ್ಲಿ “ ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ” ಅಂತಾ ಪ್ರೆಯರ್ ಮಾಡಿಸಿ ಅವರಲ್ಲಿ ದೇಶ ಭಕ್ತಿಯ ಹುಚ್ಚು ಹಿಡಿಸಿದರಲ್ಲಾ! ಆ ಪುಣ್ಯಾತ್ಮರ ಹೆಸರು ಹೇಳಿಕೊಂಡೇ ಬೆಳೆದವರು ಈಗ ದೇಶವನ್ನೇ ಲೂಟಿಮಾಡುತ್ತಿದ್ದಾರಲ್ಲಾ! ಸಂಸ್ಕಾರವಿಲ್ಲದೆ ನೇರವಾಗಿ ರಾಜಕೀಯ ಪ್ರವೇಶಮಾಡಿ ಭ್ರಷ್ಟ ನಾದ ರಾಜಕಾರಣಿಗೂ ಸೋಕಾಲ್ದ್ ಸಂಸ್ಕಾರ ಪಡೆದ ಈ ಮಂದಿಗೂ ಏನಪ್ಪಾ ವೆತ್ಯಾಸ? ಸಾಕು ನಿನ್ನ ಆದರ್ಶಗಳ ಬೊಗಳೆ ಪಾಠ. ಜನರು ಈಗ ರೋಸಿ ಹೋಗಿದ್ದಾರೆ. ದೇಶ ಭಕ್ತಿಯ ಹೆಸರು ಹೇಳಿಕೊಂಡು ಬೆಳೆದವರು ಈಗ ಭ್ರಷ್ಟ ರಾಜಕಾರಣಿಗಳ ರೂಪ ತಳೆದಿರುವುದು ನಿನ್ನ ಕಣ್ಣಿಗೆ ಬೀಳುತ್ತಿಲ್ಲವೇ? ನೀವೆಲ್ಲಾ ಕಣ್ಣಿದ್ದೂ ಕುರುಡರೇ? ಕಿವಿ ಸರಿ ಇದ್ದೂ ಕಿವುಡರೇ? ಅಥವಾ ಜಾಣ ಕಿವುಡೋ? “

ನನ್ನ ಮಿತ್ರನ ಕೋಪ ನೆತ್ತಿಗೇರಿತ್ತು. ನನ್ನ ಮಾತು ಅವನ ಕಿವಿಗೆ ಬೀಳುವ ಸ್ಥಿತಿಯಲ್ಲಿರಲಿಲ್ಲ. ಆದರೂ ನಾನು ಬಾಯ್ದೆರೆದೆ….

“ ಹಾಗಲ್ಲಾ ಶ್ಯಾಮ್, ನಿನಗೆ ಮತ್ತೂ ಸಮಾಜದ ಒಂದೇ ಮುಖ ಕಾಣುತ್ತಿದೆ, ಸಮಾಜದ ಇನ್ನೊಂದು ಮುಖವನ್ನೂ ನೋಡುವ ಮನಸ್ಸು ಮಾಡು, ಈಗಲೂ ಸತ್ಯವಾಗಿ, ಪ್ರಾಮಾಣಿಕವಾಗಿ, ಸಮಾಜಕ್ಕಾಗಿ ಬೆವರು ಸುರಿಸುತ್ತಿರುವವರು ಇಲ್ಲವೇ?”

ನನ್ನ ಮಿತ್ರ ಈಗ ಸ್ವಲ್ಪ ಸಮಾಧಾನದಿಂದ ಮಾತನಾಡಲು ಶುರು ಮಾಡಿದ “ ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಗಳೇ ಇಲ್ಲವೆಂದು ನಾನು ಹೇಳಲಿಲ್ಲ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಶ್ರೀಮಂತರೂ ಇದ್ದಾರೆ- ಬಡವರೂ ಇದ್ದಾರೆ. ದಾನಿಗಳೂ ಇದ್ದಾರೆ-ಜಿಪುಣರೂ ಇದ್ದಾರೆ. ಸಂಕುಚಿತರೂ ಇದ್ದಾರೆ- ವಿಶಾಲ ಮನೋಭಾವದವರೂ ಇದ್ದಾರೆ. ಧರ್ಮಾಂಧರೂ ಇದ್ದಾರೆ- ಧರ್ಮಿಷ್ಠರೂ ಇದ್ದಾರೆ. ಹಾಗೆಯೇ ಪ್ರಾಮಾಣಿಕರೂ ಇದ್ದಾರೆ, ಆದರೆ ಭ್ರಷ್ಟ ರು ಮೆರೆದಿದ್ದಾರೆ. ಇಲ್ಲಿ ಎಲ್ಲರೂ ಇದ್ದಾರೆ. ಸಮಾಜವೆಂದರೆ ಇವೆಲ್ಲದರ ಮಿಶ್ರಣವೇ ಆಗಿದೆ. ಆದರೆ ಒಂದು ಉತ್ತಮ ಕಾರ್ಯಮಾಡಲು ಹೊರಟ ಸಾಮಾಜಿಕ ಕಾರ್ಯಕರ್ತನು ಭ್ರಷ್ಟ ರಾಜಕಾರಣಿಗಳನ್ನು ಓಲೈಸಲು ಹೊರಟಿದ್ದಾನಲ್ಲಾ! ಸಮಾಜ ಕಾರ್ಯಕ್ಕಾಗಿ ಭ್ರಷ್ಟರ ಹಣವನ್ನು ಅವಲಂಭಿಸುವ ಪರಿಸ್ಥಿತಿ ಬಂದಿದೆಯಲ್ಲಾ! ಅದು ಸುಳ್ಳೇ? ಇಂತಾ ಸಮಾಜ ಕಾರ್ಯ ಬೇಕಾ? ನಿಮ್ಮಂತವರು ಇಂತಹಾ ವಿಷವೃತ್ತದಲ್ಲಿ ಸಿಕ್ಕಿಹಾಕಿಕೊಂಡು ಮಾಡುವ ಸಮಾಜಕಾರ್ಯದ ಅನಿವಾರ್ಯತೆಯಾದರೂ ಏನು? “

ಶ್ಯಾಮ್ ಮಾತನಾಡುತ್ತಾ ಆಡುತ್ತಾ ಭಾವುಕನಾಗಿದ್ದ. ನಿಜವಾಗಿ ನನ್ನ ತಲೆಯಲ್ಲಿ ನೂರಾರು ಹುಳುಗಳನ್ನು ಒಮ್ಮೆಲೇ ಬಿಟ್ಟು ಚಡಪಡಿಸುವಂತೆ ಮಾಡಿದ್ದ. ಅವನೂ ಭಾವುಕನಾಗಿ ಚಡಪಡಿಸುತ್ತಿದ್ದ. ಹೌದು ಶ್ಯಾಮನ ಮಾತಿನಲ್ಲಿ ಸತ್ಯವಿದೆ. ಅಬ್ಭಾ! ಒಂದು ಸಾಮಾಜಿಕ ಕಾರ್ಯ ಮಾಡುವಾಗ ಅಪ್ರಮಾಣಿಕ, ಭ್ರಷ್ಟ ವ್ಯಕ್ತಿಗಳನ್ನು ಅವಲಂಬಿಸಿ ಸಮಾಜಕಾರ್ಯ ಮಾಡುವಂತಹ ಪರಿಸ್ಥಿತಿ ಇದೆಯಲ್ಲಾ! ಇಂತಹಾ ಸಮಾಜಕಾರ್ಯ ಬೇಕೆ? ನನ್ನೊಳಗೇ ಏನೋ ತಳಮಳ! ದ್ವಂದ್ವ ಕಾಡುತ್ತಲಿತ್ತು.ಶ್ಯಾಮನ ಮುಖ ಕೆಂಪೇರಿತ್ತು. ಅವನನ್ನು ದೃಷ್ಟಿಸುವುದೂ ಕಷ್ಟವಾಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. “ ಶ್ಯಾಮ್ ಸಧ್ಯಕ್ಕೆ ಊಟ ಮಾಡಿ ಮಲಗೋಣ. ನನ್ನ ಆತ್ಮ ಒಪ್ಪುವಂತಾ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಳ್ಳುವೆ. ಆದರೆ ನಿನಗೊಂದು ಭರವಸೆ ನೀಡುವೆ “ಭ್ರಷ್ಟ ವ್ಯಕ್ತಿಗಳಿಂದ ನನಗೇನೂ ಆಗ ಬೇಕಿಲ್ಲ. ಅವರ ಹಂಗು ನನಗೆ ಬೇಡ. ಆದರೆ ಆ ವಿಷ ವರ್ತುಲ ನಾಶವಾಗಲೇ ಬೇಕು.ಆಗುತ್ತದೆ. ಅಂತಹ ಆತ್ಮ ವಿಶ್ವಾಸ ನನಗಿದೆ. ಹೇಗೆ? ಯಾರಿಂದ? ಕೇಳಬೇಡ.ಇದು ಧರ್ಮ ಭೂಮಿ. ಧರ್ಮಕ್ಕೇ ಜಯ. ದುಷ್ಟ ಶಕ್ತಿಗಳು ನಾಶವಾಗಲೇ ಬೇಕು. ಇದು ನಾವು ಚರಿತ್ರೆಯಿಂದ ಕಲಿತಿರುವ ಪಾಠ. ದುಷ್ಟರ ಶಿಕ್ಷೆ-ಶಿಷ್ಟರ ರಕ್ಷಣೆ ಆಗಲೇ ಬೇಕು. ಇದು ವಿಧಿ ಲಿಖಿತ. ಇದನ್ನು ಯಾರೂ ತಪ್ಪಿಸಲಾರರು. ಈಗ ಕಾಣುತ್ತಿರುವುದೆಲ್ಲಾ ಭ್ರಷ್ಟ ತನದ ಪರಾಕಾಷ್ಟೆ. ಇನ್ನು ಮೇಲೇರಲು ಸಾಧ್ಯವಿಲ್ಲ. ಇನ್ನೇನಿದ್ದರೂ ದುಷ್ಟ ಶಕ್ತಿಗಳ ನಾಶ-ಶಿಷ್ಟರ ಉತ್ಥಾನಕ್ಕೆ ಕಾಲ ಪಕ್ವವಾಗುತ್ತಿದೆ. ಇದೇ ಕಣ್ಣುಗಳಿಂದ ಆ ಕಾಲವನ್ನೂ ನೋಡುವಿಯಂತೆ . ಅರವಿಂದರ ಮಾತು ಸುಳ್ಳಾಗಲಾರದು. ಇನ್ನೇನಿದ್ದರೂ ಧರ್ಮದ್ದೇ ಕಾಲ. ಆ ದಿನಗಳು ಹತ್ತಿರ ವಾಗುತ್ತಿದೆ. ಸ್ವಲ್ಪ ತಾಳ್ಮೆ ಬೇಕಷ್ಟೇ……”

ಊಟ ಸೇರಲಿಲ್ಲ. ದುಗುಡ ತುಂಬಿದ ಮನಸ್ಸಲ್ಲೇ ಮಾತನಾಡುತ್ತಲೇ ಮಲಗಿದಾಗ ಯಾವಾಗ ನಿದ್ರಾದೇವಿ ಒಳಿದಳೋ ಬೆಳಿಗ್ಗೆ ಕಣ್ ಬಿಟ್ಟಾಗ ಕಿಟಿಕಿಯ ಸರಳುಗಳನ್ನು ಭೇದಿಸಿಕೊಂಡು ಬಂದ ಸೂರ್ಯನ ಕಿರಣಗಳು ನವೋತ್ಸಾಹ ಮೂಡಿಸಿದ್ದವು.

ಸತ್ಯ

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ ಸತ್ಯ!
****
-ಕವಿನಾಗರಾಜ್.
ತೋಚಿದ್ದು-ಗೀಚಿದ್ದು-ಭಾಗ-1


ನಾನೆಂಬುದು ನಾನಲ್ಲ,
ನನದೆಂಬುದು ನನದಲ್ಲ,
ನನ್ನವರೆಂಬುವರು ನನ್ನವರಲ್ಲ,
ಆದರೂ ಈ ಸತ್ಯ ನಾ ತಿಳಿದಿಲ್ಲ!
*** *** ***

ಬದುಕುವಾಸೆ ವರ್ಷ ನೂರು,
ಅಂದು ಕೊಂಡದ್ದು ನೂರು,
ಕನಸು ಕಂಡಿದ್ದು ನೂರು,
ಆದರೂ ಆಗಲಿಲ್ಲ ಚೂರು-ಪಾರು!
*** *** ***

ಬರುವಾಗ ಒಂಟಿ,
ಹೋಗುವಾಗ ಒಂಟಿ,
ನಡುವಿನಲೇಕೆ ಈ ಜಂಟಿ?
*** *** ***

ನನದೆಲ್ಲವೂ ಸರಿ
ನಾ ನುಡಿವುದೆಲ್ಲವೂ ಸರಿ
ನಾ ಮಾಡುವುದೆಲ್ಲವೂ ಸರಿ
ಹೌದಲ್ಲವೇ? ನೀವೇನಂತೀರಿ?
ಖಂಡಿತಾ ಅಲ್ಲ! ಸಧ್ಯಕ್ಕೆ ನೀ ಪಕ್ಕಕ್ಕೆ ಸರಿ!!
*** *** ***

ನನ್ನ ನಿತ್ಯಾನುಷ್ಠಾನದ ಮೂಲ ಜಪಮಂತ್ರ 'ಬೇಕು'
ಎಲ್ಲವೂ ಬೇಕು, ಎಲ್ಲವೂ ನನಗೇ ಬೇಕು,
ಆದರೂ ತಿಳಿಯದಾಗಿದೆ, 'ನನಗೇನು ಬೇಕು'
ಯಾರಾದರೂ ತಿಳಿಸುವಿರಾ ಈ ಬೇಕಿಗೊಂದು ಬ್ರೇಕು?
*** *** ***

ಬದುಕಬೇಡ ನೀ ನೂರು ವರುಷ
ಖಂಡಿತಾ ತರಲಾರದು ಅದು ನಿನಗೆ ಹರುಷ
ಬದುಕಾಗುವುದು ನಿತ್ಯ ಗೋಳಾಟದ ಬೇಗುದಿ
ತೊಲಗಿದರೆ ಸಾಕಪ್ಪಾ ಎಂದು ಕಾಯ್ವರೇ ಬಲು ಮಂದಿ!
*** *** ***

ದಿನಾ ನಡೆಯುತ್ತೇನೆ, ದಿನಾ ಎಡವುತ್ತೇನೆ
ದಿನಾ ನುಡಿಯುತ್ತೇನೆ, ದಿನಾ ತೊದಲುತ್ತೇನೆ
ದಿನಾ ಅಳುತ್ತೇನೆ, ದಿನಾ ನಗುತ್ತೇನೆ
ದಿನದಿನದ ಬಾಳಿನ ಅನುಭವವೆ ಇದೇ ತಾನೆ?
*** *** ***

ಒಳಗೆ ಜ್ವಾಲಾಮುಖಿ, ಹೊರಗೆ ಹಸನ್ಮುಖಿ,
ಒಳಗೆ ನಾನಾ ಜಂಜಾಟದ ನಡುವೆಯೂ ಜೀವನ್ಮುಖಿ,
ಬದುಕುವುದು ನನಗಲ್ಲ, ಪರರಿಗೆ,
ಅದುವೇ ಸದಾ ಇರಲಿ ನನ ಪಾಲಿಗೆ!
*** *** ***

ಕಡೆಗಣಿಸಬೇಡ ನಿನ್ನೀ ದೇಹವನು
ಅದೇ ಆ ಭಗವಂತನ ಅನುಪಮ ಸೃಷ್ಠಿ
ಸದಾ ಇರಲಿ ಸ್ವಸ್ಥ ದೇಹ, ಸ್ವಸ್ಥ ಮನಸ್ಸು
ಅದುವೇ ಇಹಲೋಕದಿಂದ ಪರಲೋಕಕ್ಕೊಯ್ಯುವ ಸಾಧನ ಸಂಪತ್ತು!
*** *** ***

ಸುರಿಯುತಿಹುದು ಮಳೆ

ತಂಪಾಗಿಹುದು ಇಳೆ

ಬಸಿರೊಡೆಯಿತು ಧರೆ,

ಹೊದ್ದಿತು ಹಸಿರಿನಾ ಝರಿ-ಸೀರೆ!
*** *** ***

ನಿನಗಿರಲು ಅಧಿಕಾರ
ಇರುವುದು ವಂದಿ ಮಾಗದರ
ಜೈಜೈಕಾರ
ಅಧಿಕಾರ ಹೋದೊಡನೆ ವಂದಿ
ಮಾಗದರು ಮಾಯ
ಕಾಲ್ಗೆ ಬೀಳುವವರಿಲ್ಲ, ಕಾಲೆಳೆಯುವವರೇ ಎಲ್ಲ!
*** *** ***

ಒಳಗೆ ತುಂಬಿದಾ ನಗು, ಹೊರಬಾರದ ನಗು,
ಒಳಗೆ ತುಂಬಿದಾ ಹರುಷ, ಹೊರಗೆ ಬರೀ ವರ್ಷ
ಒಳಗೆ ತುಂಬಿದಾ ಭಾವನೆಗಳು, ಹೊರಗೆ ಬರೀ ಗೋಜಲುಗಳು
ಉಕ್ಕಬಾರದೇ ಈ ಅಗ್ನಿಪರ್ವತ, ಉಗುಳಬಾರದೇ ತನ್ನೊಡಲಿನ ತುಡಿತಗಳ?
*** *** ***

ಒಳಗೊಂದು ಮುಖ, ಹೊರಗೆ ನಾನಾ ಮುಖ
ಒಳಗೆ ಒಂದೇ ಭಾವನೆ, ಹೊರಗೆ ಹರಿವುದು ನಾನಾ ಭಾವನೆ
ಒಳಗೆಲ್ಲ ತಳಮಳ-ಕಳವಳ, ಹೊರಗೆ ಮಾತ್ರ ಫಳಫಳ
ಒಳಗೆಲ್ಲ ಬರೀ ಬೇಗುದಿ, ಹೊರಗೆ ತೋರಿಕೆಯ ನೆಮ್ಮದಿ
ಒಳಗಿದೆ ಎಡವಿದ ನೋವು, ಹೊರಗೆ ಮಾತ್ರ ಸತ್ಯದ ಸಾವು
ನನಗಿರಲಿ ಎಲ್ಲವೂ, ಉಳಿದವರಿಗೇಕೆ ಅನ್ಯಥಾ ಎಲ್ಲವೂ?

*** *** ***
ನನಗ್ಯಾರಿಲ್ಲ ನಾನೊಬ್ಬನೇ ಎಲ್ಲ
ಎಲ್ಲವೂ ಇದೆ ಆದರೆ ನನಗೇನಿಲ್ಲ
ಹೊಳೆ ದಾಟಿದ ಮೇಲೆ ಅಂಬಿಗ ಮಿಂಡ
ಅಂಬಿಗನ ಬಾಳಿನ ಪರಿ ನನ ಬಾಳೂ ದಂಡ!
*** *** ***
ನೊಂದು ಮೂಕಾಗಿ

ಬೆಂದು ಬೆಂಡಾಗಿ

ಸೋತು ಸುಣ್ಣಾಗಿ, ಸುಟ್ಟು ಕರಕಲಾಗಿ

ರೋಧಿಸುತಿಹುದೀ ಜೀವ

*** *** ***

ಬಳಸಿದರು ನನ್ನನ್ನು ಕಬ್ಬಿನ ಜೆಲ್ಲೆಯಂತೆ

ಬಳಸಿ ಮೂಲೆ ಸೇರಿಸಿದರು ಕಸಪೊರಕೆಯಂತೆ

ಮೊಸರನ್ನ ತಿಂದು ನನ ಮೂತಿಗೆ ಸವರಿದರು ಕೋತಿಯಂತೆ

ಎಸೆದರು ಉಂಡಾದ ಮೇಲೆ ಬಾಳೆಎಲೆಯ ಪರಿಯಂತೆ!

*** *** ***

ಮಾತಾಡಿ ಕೆಟ್ಟರು ಕೆಲವರು

ಮಾಡಿ ಕೆಟ್ಟರು ಕೆಲವರು

ಮಾತಾಡಿ-ಮಾಡಿ ಕೆಟ್ಟವರೂ ಕೆಲವರು

ಮಾತಾಡದೇ, ಮಾಡದೇ ಜಾಣರಾದರು ಹಲವರು!

*** *** ***


ದುರ್ಬಳಿಸಿಹರು ಎನ್ನ ಸಹನೆಯನ್ನ

ದುರ್ಬಳಿಸಿಹರು ಎನ್ನ ಮೌನವನ್ನ

ದುರ್ಬಳಿಸಿಹರು ಎನ್ನ ಮೃದು ಮನಸ್ಸನ್ನ

ನಾನೀಗ ಬರೀ ಹಳಸಿದ ಚಿತ್ರಾನ್ನ!


*** *** ***


ಋಣದಿಂದ ಬಂತು ಸಂಬಂಧ

ಸಂಬಂಧದಿಂದ ಹೆಚ್ಚಿತು ಋಣಬಂಧ

ಅದುವೇ ಜೀವ-ಜೀವನದ ಋಣಾನುಬಂಧ

ಅದುವೇ ತಪ್ಪಿಸಿಕೊಳ್ಳಲಾರದ ಪಾಶ-ಬಂಧ!


*** *** ***

Wednesday, August 11, 2010

ವೇದೋಕ್ತ ಜೀವನ ಪಥ

ಜೀವನ ಬುನಾದಿ -14
ಪರಮ ವೈಜ್ಞಾನಿಕವಾದ ವೇದಗಳು, ಶ್ರದ್ಧೆಯನ್ನು ನಿಜವಾದ ಶ್ರದ್ಧೆಯಾಗಿ ಉಳಿಸಿಕೊಳ್ಳುವ ದಿವ್ಯಪಥವನ್ನು ತೋರಿ, ಯಾವ ಬಗೆಯ ಭೇಧ ಭಾವಗಳಿಗೂ ಎಡೆಯಿಲ್ಲದಂತೆ ಮಾಡಿ, ಪೃಥ್ವಿಯ ಸರ್ವಮಾನವರಿಗೂ ಮಾನವತ್ವದ ವಿಕಾಸ ಮಾಡಿಕೊಲ್ಳುವ ಬಗೆಯನ್ನು ಬಣ್ಣಿಸಿ ಹೇಳುತ್ತವೆ. ವೇದಗಳಲ್ಲಿ ಮತಮತಾಂತರಗಳ ಗೊಂದಲವಿಲ್ಲ, ಮಾನವ ಜಾತಿಯನ್ನು ಹರಿದು ಹಂಚಿಹಾಕುವ ಹೊಂಚಿಲ್ಲ. ವೇದಗಳನ್ನು ಹಿಂದೂಗಳ ಶಾಸ್ತ್ರವೆಂದು ಕರೆಯುವುದು ವೇದಗಳ ಔನ್ನತ್ಯಕ್ಕೆ ಅಪಮಾನ ಮಾಡಿದಂತೆಯೇ ಸರಿ. ಈಸ್ವರೀಯ ವೇದಗಳು ಸರ್ವಮಾನವರ ಸಂಪತ್ತು. ವೇದಗಳು ಜೀವಮಾತ್ರರನ್ನು -ಇನ್ನು ಮಾನವಮಾತ್ರರೆಂದು ಬೇರೆ ಹೇಳಬೇಕೇನು?- ಅಮರನಾದ ಪ್ರಭುವಿನ ಮಕ್ಕಳೆಂದು ಕರೆಯುತ್ತವೆ:-

ಯುಜೇ ವಾಂ ಬ್ರಹ್ಮ ಪೂರ್ವ್ಯಂ ನಮೋಭಿರ್ವಿ
ಶ್ಲೋಕ ಏತು ಪಥ್ಯೇವ ಸೂರೇಃ|
ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ|| (ಯಜು.11.5)

ನರನಾರಿಯರೇ! [ವಾಮ್] ನಿಮ್ಮಿಬ್ಬರನ್ನೂ [ಪೂರ್ವ್ಯಂ ಬ್ರಹ್ಮಯುಜೇ] ಅನಾದಿ ಭಗವದ್ವಾಣಿಯೊಂದಿಗೆ ನಿಯೋಜಿಸುತ್ತೇನೆ. [ಸೂರೇ ಪಥ್ಯಾ ಇವಾ] ಜ್ಞಾನಿಯ ಮಾರ್ಗದಲ್ಲಿ ನಡೆದಂತೆ [ನಮೋಭಿಃ] ವಿನಯದಿಂದ [ಶ್ಲೋಕಃ ವಿ ಏತು] ನಿಮ್ಮ ಕೀರ್ತಿ ಹರಡಲಿ. [ಯೇ] ಯಾರು [ದಿವ್ಯಾನಿ ಧಾಮಾನಿ ಆತಸ್ಥುತುಃ] ದೇವನಿರ್ಮಿತ ನೆಲೆಗಳಲ್ಲಿ ನೆಲೆಸಿರುವರೋ [ಅಮೃತಸ್ಯ ವಿಶ್ವೇ ಪುತ್ರಾಃ] ಆ ಅಮರ ಪ್ರಭುವಿನ ಮಕ್ಕಳೆಲ್ಲರೂ [ಶೃಣ್ವಂತು] ಆಲಿಸಲಿ. ವೇದಗಳ ದೃಷ್ಟಿಯಲ್ಲಿ ಮಾನವರೆಲ್ಲಾ ಭಗವದ್ಪುತ್ರರೇ. ಅಷ್ಟೇ ಅಲ್ಲ ಮಾನವ ಗೌರವವನ್ನು ವೇದಗಳು ಸಾರುತ್ತಿರುವ ರೀತಿಯೂ ಅದ್ಭುತವೇ.

Tuesday, August 10, 2010

ಎಲ್ಲಿಯ ಸಂಬಂಧ ?


ಚಿತ್ರ ಋಣ : ಅಂತರ್ಜಾಲ

ಎಲ್ಲಿಯ ಸಂಬಂಧ ?

ಮಾನವ ಜೀವನ ಭಾವನೆಗಳ ಸರ
ಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ

ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು

ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !

ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?

ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !


--- [ ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ' ಚಿಂತನಶೀಲ ಕವನಗಳು' ಸಂಕಲನದಿಂದ ]