Pages

Thursday, February 27, 2014

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು|
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ||
     ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೆಂದರೆ ಸೂಕ್ತವಾದೀತು. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ತಿಳಿಯೋಣ, ಕೇವಲ ನಿದ್ರೆ ಮಾಡದಿರುವುದಲ್ಲ. ಶಿವ, ಶಂಭು, ಶಂಕರ, ಹರ, ಮಹಾದೇವ, ಇತ್ಯಾದಿಗಳು ಒಬ್ಬನೇ ದೇವನ ಗುಣವಿಶೇಷಗಳೇ ಹೊರತು ಮತ್ತೇನಲ್ಲ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"- ಸತ್ಯ ಒಂದೇ, ಪ್ರಜ್ಞಾವಂತರು ಅದನ್ನು ಬಹು ರೀತಿಯಲ್ಲಿ ಹೇಳುತ್ತಾರೆ. 'ದೇವನೊಬ್ಬ, ನಾಮ ಹಲವು' ಎಂಬುದು ಸನಾತನ ಧರ್ಮದ ನಿಲುವಾಗಿದೆ. ಹಾಗೆಯೇ 'ಗುರಿಯೊಂದೇ, ದಾರಿಗಳು ಹಲವು' ಎಂಬುದನ್ನೂ ನಾವು ಅರಿತು ಅರಗಿಸಿಕೊಳ್ಳಬೇಕಿದೆ. ದೇವರು ಒಬ್ಬನೇ ಎಂಬುದನ್ನು ಬಹುತೇಕರು ಒಪ್ಪುತ್ತಾರೆ. ಆದರೆ ಆ ದೇವರು ನಾವು ನಂಬುವ ದೇವರು ಮಾತ್ರ - ಏಸು, ಅಲ್ಲಾಹು, ವಿಷ್ಣು, ಶಿವ, ಇತ್ಯಾದಿ- ಎನ್ನುತ್ತೇವೆ. ಗೊಂದಲ ಶುರುವಾಗುವುದು ಇಲ್ಲಿಯೇ. ಪ್ರತಿ ಧರ್ಮದ ಸಂದೇಶ 'ಮುಕ್ತಿ'ಗೆ ದಾರಿ ತೋರಿಸುವುದೇ ಆಗಿದೆ. ಜಿಜ್ಞಾಸುವಿಗೆ ಅರ್ಥವಾಗುತ್ತದೆ. ಈ ದೇವಸ್ಥಾನ, ಮಂದಿರ, ಮಸೀದಿ, ಮುಂತಾದವು, ಭಜನೆ, ಉಪಾಸನೆ, ಧ್ಯಾನ, ಪೂಜೆ, ಇತ್ಯಾದಿಗಳು ಮುಕ್ತಿಗೆ ದಾರಿ ತೋರಿಸುವ ಕೈಮರಗಳು (ದಿಕ್ಸೂಚಿಗಳು), ಸಾಧನಗಳು, ಮುಕ್ತಿ ಪಥಕ್ಕೆ ಒಯ್ಯುವ ಮೆಟ್ಟಲುಗಳು ಮಾತ್ರ ಆಗಿವೆ. ದುರದೃಷ್ಟವೆಂದರೆ ನಾವು ದಿಕ್ಸೂಚಿ ಫಲಕ, ಮೆಟ್ಟಲುಗಳೇ ಅಂತಿಮವೆಂದುಕೊಂಡು ಅಲ್ಲೇ ಜೋತು ಬಿದ್ದು ಉಳಿದುಬಿಡುತ್ತೇವೆ. ಮುಂದುವರೆದಾಗ ಮಾತ್ರ ಗುರಿ ತಲುಪಿಯೇವು. ನಾವು ಮಾಡುವ ವಿವಿಧ ಆಚರಣೆಗಳ ಉದ್ದೇಶವೂ ಇದೇ ಆಗಿದೆ. ಆದರೆ ಕೇವಲ ಆಚರಣೆಗಳಲ್ಲೇ ಮುಳುಗಿಬಿಟ್ಟರೆ ಆಚರಣೆಯ ನೈಜ ಉದ್ದೇಶ ಅರ್ಥ ಕಳೆದುಕೊಳ್ಳುತ್ತದೆ.
ಸಕಲರುದ್ಧಾರವೇ ಧರ್ಮಶಾಸ್ತ್ರದ ಸಾರ
ಪರಮಪದಕಿಹುದು ನೂರಾರು ದಾರಿ|
ದಾರಿ ಹಲವಿರಲು ಗುರಿಯದು ಒಂದೆ
ಮನ ತೋರ್ವ ದಾರಿಯಲಿ ಸಾಗು ಮೂಢ||
     ಪ್ರತಿ ಧರ್ಮವೂ ತನ್ನದೇ ಆದ ರೀತಿಯಲ್ಲಿ ಜಗತ್ತು, ಜೀವ, ದೇವರನ್ನು ವಿವರಿಸುತ್ತದೆ. ಯಾವ ಧರ್ಮ ಏನೇ ಹೇಳಲಿ, ಅವುಗಳನ್ನು ನಾವು ಹೇಗೆಯೇ ಅರ್ಥ ಮಾಡಿಕೊಳ್ಳಲಿ ಅದರಿಂದ ಜಗತ್ತು, ಜೀವ, ದೇವರು ಬದಲಾಗುವುದಿಲ್ಲ. ಆದರೆ, ಈ ಸಮಾಜದಲ್ಲಿ ಬಾಳುತ್ತಿರುವ ನಾವು, ಪಂಚಭೂತಗಳಿಂದ-ಜಲ, ವಾಯು, ಆಕಾಶ, ಅಗ್ನಿ, ನೆಲ- ಒಡಗೂಡಿ ನಮ್ಮೊಳಗೆ ಚೈತನ್ಯರೂಪಿ ಆತ್ಮವನ್ನು ಹೊಂದಿರುವ ನಾವು, ಪಂಚಭೂತಗಳಿಂದಲೇ ನಮ್ಮ ಅಭಿವೃದ್ಧಿ ಹೊಂದಿರುವುದನ್ನು, ಹೊಂದುತ್ತಿರುವುದನ್ನು ಅರಿತು ಆ ಕುರಿತು ಕೃತಜ್ಞತಾಭಾವ ಹೊಂದಿರುವುದು, ಇವೆಲ್ಲದಕ್ಕೂ ಕಾರಣಕರ್ತವಾದ ಆ ಮಹಾನ್ ಶಕ್ತಿಗೆ ನಮಿಸುವುದು ನಾವು ಮಾಡಬೇಕಾದ ಕರ್ತವ್ಯವಾಗಿದೆ. ಈ ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಕಾಶಗಳನ್ನು ಹಾಳು ಮಾಡದೆ, ಕಲುಷಿತಗೊಳಿಸದೆ ನಮ್ಮ ಮುಂದಿನವರಿಗೂ ಉಳಿಸಿ, ಸಂರಕ್ಷಿಸುವುದು ಆ ಪರಮಾತ್ಮನ ನಿಜವಾದ ಪೂಜೆಯಾಗುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವನನ್ನು ಕಾಣೋಣ, ಪೂಜಿಸೋಣ. ಇಂತಹ ಪೂಜೆಯಿಂದ ಆನಂದ, ತೃಪ್ತಿ ಸಿಗದೇ ಇರುವುದಿಲ್ಲ. ಆ ಮಂಗಳಮಯ ಶಿವನನ್ನು ನಮ್ಮಲ್ಲಿ ಆತ್ಮದ ಅರಿವನ್ನುಂಟು ಮಾಡು ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸೋಣ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ
ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
     ಈ ಮಂತ್ರದ ಅರ್ಥ ಹೀಗಿದೆ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.


-ಕ.ವೆಂ.ನಾಗರಾಜ್.

Saturday, February 22, 2014

ಶ್ರಾದ್ಧ - ಏಕೆ ಮತ್ತು ಹೇಗೆ?

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ, ವೈದಿಕ, ಪುಣ್ಯಸ್ಮರಣೆ, ಶಾಂತಿ, ಉತ್ತರ ಕ್ರಿಯೆ, ಇತ್ಯಾದಿಗಳಿಗೆ ಬಳಸಲಾಗುತ್ತಿದೆ. ಆದರೆ ಶ್ರಾದ್ಧ ಎಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎಂದಷ್ಟೇ ಅರ್ಥ. ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸವೂ ಶ್ರಾದ್ಧವೇ! ಒಬ್ಬ ಶಿಕ್ಷಕ, ನೌಕರ, ಅಧಿಕಾರಿ, ಕಾರ್ಮಿಕ, ವಿದ್ಯಾರ್ಥಿ, ವ್ಯಾಪಾರಿ, ರಾಜಕಾರಣಿ, ಹೀಗೆ ಯಾರೇ ಆಗಿರಲಿ, ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ನಿಜವಾದ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ವೈದಿಕ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಮಾನವನ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ತಮ್ಮ ಸಂಪ್ರದಾಯಗಳಿಗೆ ಅನುಸಾರವಾಗಿ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎಂದು ಹೇಳುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತಾ ಹೋಗುತ್ತದೆ, ಅಲ್ಲದೆ ಪರಿಸರ ಮಾಲಿನ್ಯವೂ ಆಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯವಾಗುತ್ತದೆ, ಹದ್ದು-ಪಕ್ಷಿಗಳಿಗೆ ಆಹಾರವಾಗಿಸಲು ಮುಕ್ತವಾಗಿರಿಸಿದರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ. 
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||
     ಶ್ರಾದ್ಧ ಮಾಡುವುದು ಏತಕ್ಕಾಗಿ ಮತ್ತು ಯಾರಿಗಾಗಿ? ಯೋಚಿಸೋಣ. ದೇಹದಲ್ಲಿ ಪ್ರಾಣವಿರುವವರೆಗೂ ಅದು ವ್ಯಕ್ತಿಯಾಗಿ ಗುರುತಿಸಲ್ಪಡುತ್ತದೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣವೆನಿಸುತ್ತದೆ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಒಂದು ಜಡವಸ್ತು. ಹೀಗಾಗಿ ಅದನ್ನು ಶೀಘ್ರವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದ ಚಕ್ರವರ್ತಿಯ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳಬಯಸುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಇನ್ನು ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳು ಎಂದೆನ್ನಬಹುದೆ? ವೇದಗಳು ಆತ್ಮ ಅವಿನಾಶಿ, ಅನಾದಿ, ಅನಂತವಾದುದು ಎನ್ನುತ್ತವೆ. ತನ್ನ ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯ್ಟೇಷ್ಟಿ ಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಶಾಶ್ವತವಲ್ಲದ ಜೀವನದ ಅನುಭವವನ್ನು ಈ ಕ್ರಿಯೆ ಉಂಟುಮಾಡುತ್ತದೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದ ಸಂದರ್ಭದ ಕ್ರಿಯೆಗಳಿಂದ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ನಾವು ಚಿರಂಜೀವಿಗಳಂತೆ ವರ್ತಿಸುತ್ತೇವಲ್ಲಾ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡಿಸುತ್ತದೆ. ಮುಂದಾದರೂ ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ವಿಪರ್ಯಾಸವೆಂದರೆ ಈ ಭಾವನೆ ಹೆಚ್ಚು ಕಾಲ ಇರುವುದಿಲ್ಲ. ನಂತರ ನಾಯಿಯ ಬಾಲದ ಡೊಂಕಿನಂತೆ ಹಿಂದಿನ ಮಾಮೂಲು ಜೀವನದಲ್ಲಿ ತೊಡಗಿಕೊಳ್ಳುತ್ತೇವೆ. 
     ಮೃತರ ಆತ್ಮ ಸದ್ಗತಿ ಅರ್ಥಾತ್ ಮೋಕ್ಷ ಪಡೆಯಲೆಂಬ ಉದ್ದೇಶದಿಂದ ಶ್ರಾದ್ಧ ಮಾಡುವುದೇನೋ ಸರಿ. ಆದರೆ ಹಿಂದೆಯೇ ಹೇಳಿದಂತೆ ಆತ್ಮ ಮೋಕ್ಷ ಪಡೆಯಲು ಸ್ವಪ್ರಯತ್ನದಿಂದ ಮಾತ್ರ ಸಾಧ್ಯ, ಇತರರು ಸದ್ಗತಿ ನೀಡಲಾರರು. ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ಜಗಳದ ಸಂದರ್ಭದಲ್ಲಿ ಬಳಸುವ 'ನಿನ್ನ ತಿಥಿ ಮಾಡಿಬಿಡ್ತೀನಿ' ಎಂಬ ಮಾತಿಗೂ ಈ ರೀತಿಯ ಕೃತಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಸತ್ತ ಮೇಲೆ ಭೂತ-ಪ್ರೇತವಾಗಿ ಕಾಡಿಯಾರು ಎಂಬ ಭಯದಿಂದ ಈ ಕ್ರಿಯೆಗಳನ್ನು ಮಾಡುವವರೂ ಇರುತ್ತಾರೆ. ಇಂತಹ ಆಚಾರಗಳಲ್ಲಿ ನಂಬಿಕೆಯಿಲ್ಲದವರೂ ಸಹ ಇತರರು ಏನಾದರೂ ಅಂದುಕೊಂಡಾರು ಎಂಬ ಲೋಕಾಪವಾದದ ಭಯದಿಂದ ಮಾಡುವವರೂ ಇರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನು ಎಂದು ಮಾಡುವವರೂ ಸಿಗುತ್ತಾರೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಧರಿಸುವ ಯಜ್ಞೋಪವೀತದ ಮೂರು ಎಳೆಗಳು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಅವುಗಳನ್ನು ತೀರಿಸುವ ಸಂಕಲ್ಪದ ಸಂಕೇತ. ಇವು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತವೆಂದರೆ ಅದಕ್ಕೆ ಅರ್ಥವಿಲ್ಲ.  ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ರೀತಿಯಾಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ಸತ್ಸಂಗಗಳು, ವೇದಾಧ್ಯಾಯಿ ಸುಧಾಕರ ಶರ್ಮರು, ಪಂ. ಸುಧಾಕರ ಚತುರ್ವೇದಿಯವರು ಮುಂತಾದವರ ಮಾರ್ಗದರ್ಶನ, ಓದಿದ ಪುಸ್ತಕಗಳು, ಇತ್ಯಾದಿ ಪ್ರಭಾವಗಳಿಂದ ಹಾಗೂ ಮನನ, ಮಂಥನಗಳಿಂದ ಒಡಮೂಡಿದ ಮನದ ಭಾವನೆಗಳನ್ನು ಹಂಚಿಕೊಂಡಿರುವೆ. ಶ್ರಾದ್ಧವನ್ನು ಹೇಗೆ ಮಾಡಬೇಕೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.
     ಕೆಲವು ಪ್ರಸ್ತುತವೆನಿಸಿದ ಘಟನೆಗಳನ್ನು ನೋಡೋಣ. ಸಂನ್ಯಾಸಿಯ ರೀತಿಯಲ್ಲಿ ಬಾಳಿ ಅನೇಕರಿಗೆ ಜೀವನ ದರ್ಶನ ಮಾಡಿಸಿದ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾವುದೇ ಶ್ರಾದ್ಧಾದಿ ಕರ್ಮಗಳಲ್ಲಿ ನಂಬಿಕೆಯಿರಿಸಿರಲಿಲ್ಲ. 'ಸತ್ತಾಗ ಬೆಂಕಿಗೆ ಬಿಸಾಕಿ' ಎನ್ನುತ್ತಿದ್ದವರು. ಅವರ ಅಭಿಲಾಷೆಯಂತೆಯೇ ನಡೆಯಿತು. ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೂ ಸಹ ತಾವು ಸತ್ತ ನಂತರದಲ್ಲಿ ಯಾವುದೇ ಸಾಂಪ್ರದಾಯಿಕ ಕ್ರಿಯೆಗಳನ್ನು ಮಾಡದೇ, ತಮ್ಮ ಶರೀರವನ್ನು ಅಗ್ನಿಗೆ ಅರ್ಪಿಸಬೇಕೆಂದು ಬಯಸಿದ್ದರು. ಹಾಗೆಯೇ ಆಯಿತು. ಕೆಲವು ವರ್ಷಗಳ ಹಿಂದೆ ಮೃತ ತಂದೆಯವರ ದೇಹವನ್ನು ಮೃತರ ಇಚ್ಛೆಯಂತೆಯೇ ಅವರ ಮಗ ಡಾ. ಮಹಾಂತೇಶ ರಾಮಣ್ಣವರ್ ಅವರೇ ಬೆಳಗಾವಿಯ ಕಂಕನವಾಡಿ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೃತರ ಎರಡನೆಯ ವರ್ಷದ ಪುಣ್ಯತಿಥಿಯ ದಿನದಂದು ಅಂಗವಿಚ್ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಹಾಸನದ ಪತ್ರಕರ್ತ ಮಿತ್ರ ಮತ್ತು ಬಂಧು ಹೆಚ್.ಎಸ್. ಪ್ರಭಾಕರರವರು ತಮ್ಮ ಕಿರಿಯ ಸಹೋದರ ರಮೇಶಬಾಬು ನಿಧನರಾದ ಸಂದರ್ಭದಲ್ಲಿ ಅವರ ಇಚ್ಛೆಯಂತೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೂ ವೈಕುಂಠ ಸಮಾರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದರು. ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದಿದ್ದವರು ರಮೇಶಬಾಬು. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದರೊಂದಿಗೆ ಅನುಸರಿಸಬೇಕಾದ ಚಿಕಿತ್ಸಾಕ್ರಮದ ಬಗ್ಗೆ ಡಾ. ಹಾಲಪ್ರಶಾಂತರಿಂದ, ದೇಹದಾನದ ಮಹತ್ವದ ಕುರಿತು ಹಿಮ್ಸ್ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರಿಂದ ಮತ್ತು ವೇದದ ಹಿನ್ನೆಲೆಯಲ್ಲಿ ದೇಹ, ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂದು ವಿವರಿಸಲು ಬೇಲೂರಿನ ವೇದಾಧ್ಯಾಯಿ ವಿಶ್ವನಾಥ ಶರ್ಮರಿಂದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಿ ಪ್ರಭಾಕರ್ ವಿಶಿಷ್ಟತೆ ಮೆರೆದರು. ವೈಯಕ್ತಿಕವಾಗಿ ನಾನಂತೂ ಸತ್ತ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳಿಗೆ ಸಮಯ, ಹಣ, ಶ್ರಮ ವಿನಿಯೋಗಿಸದೆ ಜನೋಪಯೋಗಿ ಕಾರ್ಯಗಳಿಗೆ ಮನ ಹರಿಸುವಂತೆ ನನ್ನ ಬಂಧುಗಳಿಗೆ ತಿಳಿಸಿರುವೆ. ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.
[ಚಿತ್ರಕೃಪೆ: http://technoayurveda.wordpress.com/2010/11/11/dissect/]
ದಿನಾಂಕ 10-02-2014ರ 'ಜನಮಿತ್ರ' ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ.



Thursday, February 20, 2014

ಮಹಿಳೆಯರಿಂದ ಅಗ್ನಿಹೋತ್ರ



















ಅಂದು ನಾನು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಪುರುಷ ವೇದಾಧ್ಯಾಯಿಗಳು ವೇದಪಾಠಕ್ಕೆ ಬಂದಿರಲಿಲ್ಲ. ಕೇವಲಮಹಿಳೆಯರು ಬಂದಿದ್ದರು.ಅದರಲ್ಲಿ  ಕೆಲವರು ಹೊಸಬರು.ಚಿಂತೆ ಮಾಡಲೇ ಇಲ್ಲ. ಅಗ್ನಿಹೋತ್ರವನ್ನು ಮಾಮೂಲಿನಂತೆ ಆರಂಭಿಸಿದರು.ಅದ್ಭುತವಾಗಿ ನಡೆಸಿದರು.ಮಧ್ಯದಲ್ಲಿ  ಬಂದ ಶ್ರೀ ಬೈರಪ್ಪಾಜಿಯವರಿಗೆ.ಆಶ್ಚರ್ಯ! ಕೇವಲ ಮಹಿಳೆಯರೇ    ಇಷ್ಟುಅದ್ಭುತವಾಗಿ ಮಾಡಿದರಲ್ಲಾ! ತಮ್ಮಮೊಬೈಲ್ ನಲ್ಲಿದೃಶ್ಯಗಳನ್ನುಸೆರೆಹಿಡಿದರು.ಅದುನಿಮ್ಮಮುಂದಿದೆ. ಕಳೆದ ಒಂದುವರೆ ವರ್ಷದಿಂದ ಹಾಸನದಲ್ಲಿ ನಮ್ಮ ಮನೆ ಈಶಾವಾಸ್ಯಮ್ ನಲ್ಲಿನಿರಂತರವಾಗಿನಡೆಯುತ್ತಿರುವ ಅಗ್ನಿಹೋತ್ರ ಮತ್ತುವೇದ ತರಗತಿಗಳು ಸಾರ್ಥಕವಾಯ್ತು ,ಅನ್ನಿಸುವುದಿಲ್ಲವೇ?

Wednesday, February 19, 2014

ತಲೆ ಮಾತ್ರ ಬಾಗದಿರಲಿ, ಅನ್ಯಾಯದೆದುರು ಧಾತಾ

     ಪ್ರತಿ ಶನಿವಾರದಂದು ಸಾಯಂಕಾಲ 5-30ಕ್ಕೆ ಸರಿಯಾಗಿ ಬೆಂಗಳೂರಿನ ಪಂ. ಸುಧಾಕರ ಚತುರ್ವೇದಿಯವರ (ಇವರಿಗೆ ಈಗ 117 ವರ್ಷಗಳು) ನಿವಾಸದಲ್ಲಿ ಸತ್ಸಂಗವಿರುತ್ತದೆ. ಆ ಸಂದರ್ಭದಲ್ಲಿ ಅಗ್ನಿಹೋತ್ರ, ಭಜನೆ ಮತ್ತು ಪಂಡಿತರಿಂದ ಸುಮಾರು 45 ನಿಮಿಷಗಳ ಕಾಲ ಉಪನ್ಯಾಸವಿರುತ್ತದೆ. ಆಸಕ್ತರು ಭಾಗವಹಿಸಬಹುದು. ಅಲ್ಲಿ ಹಾಡಲಾದ ಒಂದು ಭಜನೆಯನ್ನು ಚಿತ್ರೀಕರಿಸಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಭಜನೆಯ ಸಾಹಿತ್ಯವನ್ನೂ ಇಲ್ಲಿ ಕೊಟ್ಟಿರುವೆ. ನಿಮಗೆ ಇಷ್ಟವೆನಿಸಿದರೆ ಸಂತೋಷ.
-ಕ.ವೆಂ.ನಾಗರಾಜ್.
     ಹಾಡಿನ ಸಾಹಿತ್ಯಕ್ಕಾಗಿ ಕ್ಲಿಕ್ಕಿಸಿ: 
http://vedajeevana.blogspot.in/2012/03/blog-post_20.html

Tuesday, February 18, 2014

ದೇಶದ ಸಮಸ್ಯೆಗಳಿಗೆ ಸಮಗ್ರವಾದ ಪರಿಹಾರ ?

      ನನ್ನನ್ನು  ಒಬ್ಬ ಯುವಕ ಕೇಳಿದ  "ಸರ್ ಇವತ್ತಿನ ದೇಶದ ಸಮಸ್ಯೆಗಳಿಗೆ ಯಾವ ಸಂಸ್ಥೆ ಸಮಗ್ರವಾದ ಪರಿಹಾರ ನೀಡಬಲ್ಲದು?"  ಅವರ ಪ್ರಶ್ನೆಯಲ್ಲಿ ಕಳಕಳಿ ಇತ್ತು. ಇನ್ನೂ 25 ವರ್ಷದ ತರುಣ. ಈ ಸಮಾಜಕ್ಕಾಗಿ  ಏನಾದರೂ  ಮಾಡಬೇಕೆಂಬ ಆಸಕ್ತಿ ಅವನ  ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.  ರಾಮಕೃಷ್ಣಾಶ್ರಮ, ಆರ್ಟ್ ಆಫ್ ಲಿವಿಂಗ್, ಬಾಬಾ ರಾಮದೇವ್, ಹೀಗೆ ಹತ್ತು ಹಲವು ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾನೆ. ಎಲ್ಲವೂ ಅವನಿಗೆ ಚೆನ್ನಾಗಿಯೇ ಕಾಣುತ್ತದಂತೆ. ಆದರೆ ಈ ದೇಶದ ಸಮಸ್ಯೆಗೆ ಸಮಗ್ರವಾಗಿ ಪರಿಹಾರ ಎಲ್ಲೂ ಕಾಣುತ್ತಿಲ್ಲವೆಂಬ ನಿರಾಶಭಾವ ಕೂಡ   ಅವನಲ್ಲಿದೆ.
         ಯುವಕನಿಗೆ ನಾನು ಹೇಳಿದೆ. ನೋಡಿ, ನಾನು ಸುಮಾರು 45 ವರ್ಷಗಳಿಂದ RSS ಸಂಪರ್ಕದಲ್ಲಿರುವವನು. ತಾರುಣ್ಯದಲ್ಲಿ RSS ಕೆಲಸ ಮಾಡಿದೆ. ನಂತರ ಧಾರ್ಮಿಕ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಂಡೆ. ಐವತ್ತು ವರ್ಷಗಳು ಕಳೆದಮೇಲೆ  ಶ್ರೀ ಸುಧಾಕರಶರ್ಮರ ಮೂಲಕ  ವೇದದ ಸರಳ   ಪರಿಚಯವಾಯ್ತು. ಆಗ ನನಗೆ ಅನ್ನಿಸಲು ಶುರುವಾಯ್ತು. ವೇದದಲ್ಲಿ ಈ ಸಮಾಜದ ಸನಸ್ಯೆಗಳಿಗೆ ಎಲ್ಲದಕ್ಕೂ ಪರಿಹಾರವಿದೆಯಲ್ಲಾ! ನಮ್ಮ ಪ್ರಾಚೀನ ಸಾಹಿತ್ಯವಾದ ವೇದವನ್ನು ಮರೆತು ಯಾಕೆ ದೇಶವು ಹೀಗೆ ದು:ಸ್ಥಿತಿಗೆ ಬಂದಿದೆ? 
          ಹೀಗೆ  ಚಿಂತನೆ ನಡೆಸಿ  ವೇದದ ವಿಚಾರವನ್ನು ಸಾಮಾನ್ಯ ಜನರಿಗೆ ತಿಳಿಸಲು ಸುಧಾಕರಶರ್ಮರ ಉಪನ್ಯಾಸ   ಗಳನ್ನೇ ಪ್ರಧಾನವಾಗಿಟ್ಟುಕೊಂಡು  "ವೇದಸುಧೆ" ಬ್ಲಾಗ್ ಆರಂಭಿಸಿದೆ. ಆರಂಭದಲ್ಲಿ ಅದರಲ್ಲಿ ಬರೆಯಲು 15-20 ಜನರು ಮುಂದೆ ಬಂದರು.ಈಗಲೂ 20ಕ್ಕಿಂತ ಹೆಚ್ಚು ಲೇಖಕರಿಗೆ ವೇದಸುಧೆಯಲ್ಲಿ ಬರೆಯಲು ಅವಕಾಶವಿದ್ದು, ಅವರೆಲ್ಲಾ ಲೇಖಕರ   ಪಟ್ಟಿಯಲ್ಲಿದ್ದಾರೆ. ಆರಂಭದ ಉತ್ಸಾಹ ಹೇಗಿತ್ತೆಂದರೆ ನಮ್ಮ ಸಾಮಾಜಿಕ ಸಮಸ್ಯೆಗಳಿಗೆಲ್ಲಾ ವೇದದಿಂದಲೇ ಪರಿಹಾರ ಒದಗಿಸಲು ಸಾಧ್ಯ! ವೇದವೇ ಸರ್ವಸ್ವ! ವೇದದಿಂದಲೇ ಸಾಮಾಜಿಕ ಬದಲಾವಣೆ ತರಬಹುದೆಂಬ ನಿಶ್ಚಿತ ಭರವಸೆಯಿಂದ ಕೆಲಸ ಮಾಡುತ್ತಾ ಹೋದೆವು. ಸಾಮಾನ್ಯವಾಗಿ ಈಗ ಐದಾರು ವರ್ಷಗಳಿಂದ ಈ ಕೆಲಸ ನಡೆಯುತ್ತಿದೆ. ಆರಂಭದಲ್ಲಿ ಉತ್ಸಾಹದಲ್ಲಿ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಬರೆದರು. ಬರುಬರುತ್ತಾ  ಬರೆಯುವವರ ಸಂಖ್ಯೆ  ಕಡಿಮೆಯಾಯ್ತು. ಆದರೆ ನಾವು ಕಟ್ಟಿಕೊಂಡಿರುವ "ವೇದಭಾರತಿಯ" ಚಟುವಟಿಕೆ ಹೆಚ್ಚಾಯ್ತು. 
            ಸಮಾಜದಲ್ಲಿ ಕೆಲಸ ಮಾಡುತ್ತಾ ಮಾಡುತ್ತಾ ನಮ್ಮ ಅರಿವಿಗೆ ಹಲವು ಸಂಗತಿಗಳು ಗೋಚರವಾಗುತ್ತೆ. ಅನುಭವ ಹೆಚ್ಚಿದಂತೆ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಬೆಳೆಯುತ್ತದೆ. ಯಾಕೆ ಇಷ್ಟೆಲ್ಲಾ ಬರೆದೆ, ಎಂದರೆ ಯಾವುದೇ ಒಂದು ಸಂಸ್ಥೆಯು ದೇಶದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ   ಸಮಗ್ರವಾದ ಪರಿಹಾರ ನೀಡಲು ಸಾಧ್ಯವಿಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಹಲವು   ಮುಖಗಳು. ಹಾಗಾಗಿ ಯಾರ್ಯಾರಿಗೆ ಯಾವ ಸಮಸ್ಯೆಗಳು ಪ್ರಮುಖವಾಗಿ ಕಾಣುತ್ತದೆಯೋ ಆ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಂಸ್ಥೆಗಳ ಜೊತೆಗೆ ಜೋಡಿಸಿಕೊಳ್ಳುತ್ತಾರೆ, ಅಷ್ಟೆ.
          ಉಧಾಹರಣೆಗೆ ದೇಶವನ್ನೇ ತಿನ್ನುತ್ತಿರುವ ಬ್ರಷ್ಟಾಚಾರ! ಬ್ರಷ್ಟಾಚಾರ ತೊಲಗಿದರೆ ಸಾಕೇ? ಇಲ್ಲ. ನಮಗೆ ಅದಕ್ಕಿಂತಲೂ ಭೀಕರವಾಗಿ ಕಾಣುವುದು ಭಯೋತ್ಪಾದನೇ! ಮತಾಂತರದ ಹಾವಳಿ!  ಪಟ್ಟಿಮಾಡುತ್ತಾ ಹೋದರೆ ನಮ್ಮ ಸಾಂಸ್ಕೃತಿಕ ಅಧ:ಪಥನ, ಅನೈತಿಕತೆ, ಅವ್ಯವಹಾರ, ಅಶ್ಲೀಲ ಸಾಹಿತ್ಯ, ಯುವಕರ ಮೇಲೆ ಆಗುತ್ತಿರುವ ಪಾಶ್ಚಿಮಾತ್ಯ ವಿಕೃತಿಗಳು! ದೇಶಭಕ್ತಿಯ ಕೊರತೆ, ಅಶಿಸ್ತು, ಅನಾರೋಗ್ಯ,  ಬಡವ-ಶ್ರೀಮಂತ ಭೇದಗಳು, ಜಾತಿ-ಜಾತಿಗಳ ಮಧ್ಯೆ ಸಾಮರಸ್ಯದ ಕೊರತೆ...
       ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳು ಹಲವಾರು. ಒಂದೇ ಸಂಘಟನೆಯಿಂದ ಎಲ್ಲದಕ್ಕೂ ಪರಿಹಾರ ಖಂಡಿತಾ ಸಾಧ್ಯವಿಲ್ಲ. ಆದರೆ ನಮ್ಮ ಮಾನಸಿಕತೆಗೆ ಒಪ್ಪುವ ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಾ ಹೋದರೆ ಸಮಾಜದಲ್ಲಿ ಬದಲಾವಣೆ ಆಗುತ್ತದೋ ಇಲ್ಲವೋ, ಆದರೆ ನಮ್ಮಲ್ಲಿ ಬದಲಾವಣೆ ಆಗುವುದು ನಿಶ್ಚಿತ.

        ಹೌದು, ಆ ಯುವಕನ ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕು.ನಾನೊಬ್ಬ ಹಿರಿಯನೆಂದು ಅವನು ನನ್ನ ಸಲಹೆ ಕೇಳಿದನೆಂದು ನಾನು ಅವನಿಗೆ ನೀನು ಹೀಗೆಯೇ ಮಾಡೆಂದು ಹೇಳಲಿಲ್ಲ. ಬದಲಿಗೆ ನಿನ್ನ ಮನಸ್ಸಿಗೆ ಒಪ್ಪುವ ಕ್ಷೇತ್ರ ಆಯ್ದು ಕೋ, ಎಂದು ತಿಳಿಸಿದೆ. ಆದರೆ ಜೊತೆಗೆ ಒಂದು ಎಚ್ಚರ ಗಮನಿಸಲು ತಿಳಿಸಿದೆ,  "ಅದೇನೆಂದರೆ ಹಲವು ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಇರುತ್ತವೆ, ಮಾಧ್ಯಮಗಳಲ್ಲಿ ಸುದ್ಧಿ ಮಾಡಲು ಇರುತ್ತವೆ. ಆದರೆ ಎಲೆ ಮರೆ ಕಾಯಿಯಂತೆ ಕೆಲಸಮಾಡುವ ಹಲವಾರು ಸಂಘಟನೆಗಳಿರುತ್ತವೆ. ಸಾಮಾಜಿಕ ಕಳಕಳಿ ಇದ್ದವರಿಗೆ ತಾನೇ ತಾನಾಗಿ ಅಂತಹ ಸಂಘಟನೆಗಳ ಪರಿಚಯವಾಗುತ್ತೆ. ಅಥವಾ ತಾವೇ ತಮ್ಮ ಸಮಾನ ಮಾನಸಿಕರೊಡಗೂಡಿ ಕೆಲಸ ಮಾಡುತ್ತಾ ಹೋಗಬಹುದು"

 ನಿಜವಾಗಿ ಸಾಮಾಜಿಕ ಕಳಕಳಿಯಿರುವ ಹಲವಾರು ತರುಣರು ದೇಶದಲ್ಲಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಇಂತಹ ತರುಣರನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ತಮ್ಮ ವಿವೇಕವನ್ನು ಉಪಯೋಗಿಸಿ ಕೊಂಡು ಉತ್ತಮರ ಸಹವಾಸ ಮಾಡುವ ಹೊಣೆಯು ಇಂತಹ ಯುವಕರ ಮೇಲೆಯೇ  ಇರುತ್ತದೆ.

Monday, February 17, 2014

ಮನವಿ

 ವೇದಸುಧೆಯ ಅಭಿಮಾನಿಗಳೇ,

ವೇದಸುಧೆಯಲ್ಲಿ ಆರಂಭದಿಂದಲೂ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸಗಳನ್ನು ಪ್ರಕಟಿಸಿ ವೇದವನ್ನು ಸಾಮಾನ್ಯಜನರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ. ಈಗಲೂ ನೀವು ಬ್ಲಾಗ್ ನಲ್ಲಿ "ಶರ್ಮರ ಪುಟದಲ್ಲಿ  " ಶರ್ಮಾಜಿಯವರ ಸಾಕಷ್ಟು ಆಡಿಯೋ ಕೇಳಬಹುದು. 
ಜೊತೆ ಜೊತೆಗೆ ಶರ್ಮರ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ವೇದಭಾರತಿಯು ತನ್ನ ಚಟುವಟಿಕೆಗಳ ಮೂಲಕ ವೇದದ ಪ್ರಚಾರವನ್ನು ಸಾಕಷ್ಟು   ಮಾಡುತ್ತಿದೆ. ಆ ಎಲ್ಲಾ ವರದಿಯನ್ನು  ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಅಲ್ಲದೆ ಪತ್ರಿಕೆಗಳಿಗಾಗಿ ಬರೆದ ವೇದಾಧಾರಿತ ಲೇಖನಗಳನ್ನೂ ಕೂಡ ಪ್ರಕಟಿಸುತ್ತಿದ್ದೇವೆ. ಜೊತೆಯಲ್ಲಿ  ಈಗ ಮತ್ತೊಂದು ಪ್ರಯತ್ನವನ್ನು ಆರಂಭಿಸಿದ್ದೇವೆ. ಅದು ಡಾ|| ಗೋಪಾಲಕೃಷ್ಣರ ಸರಳ ಇಂಗ್ಳೀಶ್ ಉಪನ್ಯಾಸಗಳು. ಅದನ್ನೂ ದಯಮಾಡಿ ಕೇಳಿ. ಅದ್ಭುತವಾಗಿದೆ. 

ವೇದಭಾರತಿಯ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿದ್ದು ಎಲ್ಲವನ್ನೂ ಬ್ಲಾಗ್ ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಸಮಯದ ಅಭಾವವಿರುವುದರಿಂದ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದುದನ್ನು ಕಡಿಮೆ ಮಾಡಲು ಆಲೋಚಿಸುತ್ತಿರುವೆ. ಓದುಗರು ವೇದಸುಧೆಯಲ್ಲಿ  ತಮಗೆ ಇಷ್ಟವಾದ  ಲೇಖನಗಳ ಕೊಂಡಿಯನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿ ವೇದದ ವಿಚಾರವು ಹೆಚ್ಚುಜನರಿಗೆ ತಲುಪಿಸಲು ಸಹಾಯ ಮಾಡಬೇಕೆಂದು ಕೋರುವೆ.

ಡಾ|| ಗೋಪಾಲಕೃಷ್ಣ ರ ಉಪನ್ಯಾಸಗಳು

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಂಟಿಫಿಕ್ ಹೆರಿಟೇಜ್ ನ ಡಾ|| ಗೋಪಾಲಕೃಷ್ಣ ಅವರ ಸರಳ ಇಂಗ್ಳೀಶ್ ಉಪನ್ಯಾಸ ಕೇಳಿ.ಅದ್ಭುತವಾಗಿದೆ.

Indian Customs & Rituals

Friday, February 14, 2014

ಶುಚೀವೋ ಹವ್ಯಾ ಮರುತ:

||ಶುಚೀವೋ ಹವ್ಯಾ ಮರುತ: ||

ಋಗ್ವೇದದ ೭ ನೇ ಮಂಡಲದ ೫೬ ನೇ ಸೂಕ್ತದ ೧೨ ನೇ ಈ ಮಂತ್ರವು ನಮ್ಮ ಕಣ್ ತೆರಸದಿದ್ದರೆ ನಾವು ಯಾವ ದೇವರಿಗೆ ಎಷ್ಟು ಸೇವೆಮಾಡಿದರೂ ನಿಶ್ಪ್ರಯೋಜಕವೇ. ಈ ಮಂತ್ರವಾದರೂ ಏನು ಹೇಳುತ್ತದೆ? ನಾವು ಭಗವಂತನಿಗೆ ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ. ಅಂದರೆ ಏನು? ಅದಕ್ಕೆ ಡಿ.ವಿ.ಜಿ ಯವರ ಕಗ್ಗ ನೆನಪಾಗಬೇಕು.

ಅನ್ನವುಣುವಂದು ಕೇಳ್
ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೋ
ಪರರ ಕಣ್ಣೀರೋ?

ಅಬ್ಭಾ! ಈ ಮಾತನ್ನು ಡಿ.ವಿ.ಜಿ ಯವರು ಹೇಳಬೇಕಾದರೆ ಅವರ ಜೀವನ ಅಷ್ಟು ಪರಿಶುದ್ಧವಾಗಿತ್ತು. ಅಂತಾ ಮೇಧಾವಿಯು ಮನಸ್ಸು ಮಾಡಿದ್ದರೆ ಸುಖಭೋಗಗಳನ್ನು ಅನುಭವಿಸಬಹುದಿತ್ತು. ಆದರೆ ಜೀವನ ಪರ್ಯಂತ ಕಷ್ಟದ ಬದುಕನ್ನೇ ನಡೆಸಿಬಿಟ್ಟರು. ಅವರು ದೈವಾದೀನರಾದ ಮೇಲೆ ಬೆಳಕಿಗೆ ಬಂದ ಒಂದು ಸುದ್ಧಿಯಂತೂ ಅವರನ್ನು ಇನ್ನೂ ಎತ್ತರಕ್ಕೆ ಏರಿಸಿಬಿಡುತ್ತದೆ.

ಅವರು ಕಾಲವಾದ ಕೆಲವಾರು ದಿನಗಳಲ್ಲಿ ಅವರು ಉಪಯೋಗಿಸುತ್ತಿದ್ದ ಟ್ರಂಕ್ ಒಂದರಲ್ಲಿ  ನೂರಾರು ಚೆಕ್ ಗಳು ಕಾಣುತ್ತವೆ. ಅವೆಲ್ಲವೂ ಯಾವುವು ಗೊತ್ತೇ? ಅವರ ಅಭಿಮಾನಿಗಳು ಅವರಿಗೆ ಕಾರ್ಯಕ್ರಮದಲ್ಲಿ ಕೊಟ್ಟಿದ್ದ ಸಂಭಾವನೆಯ ಚೆಕ್ ಗಳು! ಬೇಡವೆಂದರೆ ಅಭಿಮಾನಿಗಳು ಬೇಸರಗೊಂಡಾರೆಂದು ಕೊಟ್ಟಂತಹ  ಚೆಕ್ ಗಳನ್ನು  ತೆಗೆದುಕೊಳ್ಳುತ್ತಿದ್ದರು. ಆದರೆ ಅದನ್ನು   ನಗದು ಮಾಡಿಸಿಕೊಳ್ಳದೆ ಒಂದು ಕಡೆ ಎತ್ತಿಡುತ್ತಿದ್ದರಂತೆ. ಹಾಗೆಯೇ ಅವಧಿಕಳೆದು ನಗದಾಗದ ಚೆಕ್ ಗಳ ಒಟ್ಟು ಮೌಲ್ಯ ಲಕ್ಷಾಂತರ ರೂಗಳು. ಆದರೆ ನಿತ್ಯವೂ ಜೀವನಕ್ಕೆ ಕಷ್ಟಪಡುತ್ತಿದ್ದುದು ಸುಳ್ಳಲ್ಲ.

ಅಬ್ಭಾ! ಡಿ.ವಿ.ಜಿ ಯವರದು ಅಷ್ಟು ಅಪ್ಪಟ ಬದುಕು. ಅನ್ಯರ ಹಣವೆಂದರೆ ಅದು ವಿಷ. ತಾವು ಮಾಡುತ್ತಿದ್ದ ಉಪನ್ಯಾಸಕ್ಕೆ ಸಂಭಾವನೆ ತೆಗೆದುಕೊಳ್ಳುವುದೇ? ಛೇ!!  ಜ್ಞಾನವನ್ನು ಮಾರಿಕೊಳ್ಳಬೇಕೇ? ತಾವು ತಿಳಿದಿದ್ದನ್ನು ಬೇರೆಯವರಿಗೆ ತಿಳಿಸಬೇಕು. ಅಷ್ಟೆ. ಅದಕ್ಕೆ ಸಂಭಾವನೆ ತೆಗೆದುಕೊಳ್ಳುವುದೇ ಅಪರಾಧ!

ಇಂತಹಾ ಉನ್ನತವಾದ  ಆದರ್ಶ ಜೀವನ ಮಾಡುತ್ತಿದ್ದವರು ಮಾತ್ರವೇ  ಇಂತಹ ಸಾಲುಗಳನ್ನು ಬರೆಯಲು ಅರ್ಹರು. ಎಲ್ಲಾ ಕವಿಗಳೂ ಇಂತಹ ಪದ್ಯಗಳನ್ನು ಬರೆಯಲು ಅರ್ಹತೆ ಹೊಂದಿರುವುದಿಲ್ಲ. ಬರೆಯುವುದು ಒಂದು, ಮಾಡುವುದು ಮತ್ತೊಂದು ಇರುವಂತಿಲ್ಲ.

ಡಿ.ವಿ.ಜಿ. ಯವರ ಮಾತು ನೋಡಿ ಎಷ್ಟು ಕಠೋರಸತ್ಯವನ್ನು ಬಿಚ್ಚಿಡುತ್ತದೆ!  ತಾನು ಊಟಮಾಡುವಾಗ ಬಾಯಿಗೆ ತುತ್ತು ಇಡುವ ಮುಂಚೆ ತನ್ನ ಅಂತರಂಗದಲ್ಲಿ ಪ್ರಶ್ನೆ ಹಾಕಿಕೊಳ್ಳಬೇಕಂತೆ " ಈ ತುತ್ತು ತಾನು ಸತ್ಯವಾಗಿ ದುಡಿದು ಸಂಪಾದಿಸಿದ್ದೋ? ಅಥವಾ ಅನ್ಯರಿಗೆ ಕಣ್ಣೀರ ಹಾಕಿಸಿ ಗಿಟ್ಟಿಸಿದ್ದೋ? "
           ಅಬ್ಭಾ! ಇಂತಾ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಒಬ್ಬ ಮನುಷ್ಯ ಊಟಕ್ಕೆ ಮುಂಚೆ ತನಗೆ ತಾನು ಹಾಕಿಕೊಂಡು ಬಿಟ್ಟರೆ ಅದು ಸತ್ಯದ ದುಡಿಮೆ ಯಾದರೆ ಮಾತ್ರ ಗಂಟಲಿನಲ್ಲಿ ಇಳಿದೀತು! ಇಲ್ಲವಾದರೆ ಆ ತುತ್ತನ್ನು ತಿನ್ನಲು ಅವನ ಮನಸ್ಸು ಒಪ್ಪುವುದೇ ಇಲ್ಲ.   ಆ ಘಳಿಗೆಯಿಂದ ಅವನ ಚಿಂತನೆಯೇ ಬದಲಾಯಿಸಿ ಬಿಡ  ಬೇಕಾಗುತ್ತದೆ. ಅಸತ್ಯಮಾರ್ಗದ ಗಳಿಕೆಯನ್ನು ಅಂದಿಗೆ ನಿಲ್ಲಿಸಿ ಸತ್ಯವಾದ ಮಾರ್ಗದಲ್ಲಿ ದುಡಿದು ತಿಂದಾಗ ಅವನಿಗೆ ತೃಪ್ತಿಯಾಗುತ್ತದೆ.

ತಾನು ತಿನ್ನುವ ತುತ್ತು ಅನ್ನದ ಬಗ್ಗೆ ಇಷ್ಟು ಕಠೋರವಾದ ಸತ್ಯಮಾರ್ಗವನ್ನು ಡಿ.ವಿ.ಜಿ ಯವರು ಹೇಳುವಾಗ ಇನ್ನು ಭಗವಂತನ ವಿಚಾರ ಬಂದಾಗ!

ವೇದವು ಹೇಳುತ್ತದೆ.....

||ಶುಚೀವೋ ಹವ್ಯಾ ಮರುತ: ||

ತಾನು ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ. ಅಂದರೆ ಏನು? ತನ್ನ ಸತ್ಯವಾದ ದುಡಿಮೆಯಿಂದ ಮಾತ್ರವೇ ಭಗವಂತನ ಕೆಲಸ ಮಾಡಬೇಕು. ಯಾಗ ಯಜ್ಞಾದಿಗಳನ್ನು ಮಾಡುವಾಗ,ಪೂಜೆ ಪುನಸ್ಕಾರಗಳನ್ನು ಮಾಡುವಾಗ ..ಯಾವ ದುಡಿಮೆಯಿಂದ ಮಾಡಬೇಕೆಂಬುದಕ್ಕೆ ವೇದವು ಹೇಳುತ್ತದೆ " ನೀವು ಅರ್ಪಿಸುವ ಹವಿಸ್ಸು ಶುಚಿಯಾಗಿರಲಿ" ಅಂದರೆ ಸತ್ಯವಾದ ದುಡಿಮೆಯಿಂದ ಗಳಿಸಿದ್ದಾಗಿರಲಿ.
ಆದರೆ ನಾವು ಕಾಣುವುದೇನು?

ಲೋಕ ಕಲ್ಯಾಣದ ಹೆಸರಲ್ಲಿ ಬಹಳ ವಿಜೃಂಬಣೆಯಿಂದ ಯಾಗ ಯಜ್ಞಾದಿಗಳನ್ನು ಮಾಡುವುದು ಸಾಮಾನ್ಯ. ಆದರೆ ಅದಕ್ಕೆ ಬಳಕೆಯಾಗಿರುವ ಹಣದ ಮೂಲ?
ಒಮ್ಮೆ ಈ ಬಗ್ಗೆ ಆಳವಾಗಿ ಚಿಂತಿಸಿದರೆ ನಾವು ಮಾಡುವುದೆಲ್ಲವೂ ವೇದ ವಿರುದ್ಧ ಎನಿಸಿಕೊಳ್ಳದೇ ಇರದು. ಯಾರೋ ದೊಡ್ಡ ಉಧ್ಯಮಿ ಲಕ್ಷಾಂತರ ರೂಪಾಯಿ ದಾನ ಕೊಟ್ಟಿರುತ್ತಾನೆ. ಅದರಲ್ಲಿ  ಲೋಕ ಕಲ್ಯಾಣಕ್ಕಾಗಿ ಯಾಗವನ್ನು ಮಾಡಲಾಗುತ್ತದೆ. ಆದರೆ ಆ ಉಧ್ಯಮಿ ಅವನ ಉಧ್ಯಮದಲ್ಲಿ ಶ್ರಮಿಕರ ಶ್ರಮಕ್ಕೆ ಸೂಕ್ತವಾದ ವೇತನವನ್ನು ನೀಡಿದ್ದಾನೆಯೇ? ಶ್ರಮಿಕರ ಕಣ್ಣೀರು ಹಾಕಿಸಿಲ್ಲವೇ? ಇವೆಲ್ಲವನ್ನೂ ತಿಳಿದು ಅವನ ಗಳಿಕೆ ಧರ್ಮವಾದ ಗಳಿಕೆ ಎಂದು ಖಾತ್ರಿಯಾದಾಗ ಅದು ಸ್ವೀಕಾರಾರ್ಹ. ಆದರೆ ಸತ್ಯವು ಗೊತ್ತಿದ್ದೂ  ಅಧರ್ಮವಾದ ಗಳಿಕೆಯಲ್ಲಿ ಧರ್ಮಕಾರ್ಯಗಳಿಗೆ ದಾನವಾಗಿ ಹಣವನ್ನು ಪಡೆಯುತ್ತಿಲ್ಲವೇ? ಇಂತಹಾ ಕಟು ಸತ್ಯಗಳನ್ನು ನಾವು ನೋಡುತ್ತಲೇ   ಇರುತ್ತೇವೆ.

ಒಬ್ಬ ಮಹನೀಯರಂತೂ ನನಗೆ ಹೇಳಿದರು " ನಾಯಿ ಮಾರಿದ ಹಣ   ಬೊಗಳುತ್ತದೇನು? "
ಅದರರ್ಥ ಹೇಗೆ ಬಂದಿದ್ದರೇನು ಸ್ವಾಮಿ, ನಿಮ್ಮ ಪಾಡಿಗೆ ನೀವು ಇದರ ಸದ್ವಿನಿಯೋಗ ಮಾಡಿಕೊಳ್ಳಿ.

ನಿಜವಾಗಿ  ಅದ್ಧೂರಿಯಾಗಿ ಲಕ್ಷ ಲಕ್ಷ  ರೂಪಾಯಿ ಖರ್ಚುಮಾಡಿ ಲೋಕ ಕಲ್ಯಾಣದ ಹೆಸರಲ್ಲಿ ಯಾಗ ಯಜ್ಞಾದಿಗಳನ್ನು ಮಾಡುವ ಮುಂಚೆ  ಹಣದ ಮೂಲವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಸರ್ಕಾರಕ್ಕೆ ವಂಚಿಸಿದ, ಶ್ರಮಿಕರಿಗೆ ವಂಚಿಸಿದ, ಹಣದಲ್ಲಿ ಯಾವ ಯಾಗ ಯಜ್ಞಾದಿಗಳನ್ನು  ಮಾಡಿದರೂ ಪ್ರಯೋಜನವಿಲ್ಲ.

ಸತ್ಯಮಾರ್ಗದಲ್ಲಿ ಗಳಿಸಿ ಧರ್ಮಕಾರ್ಯ ಮಾಡುವ ಜನರು ಇಲ್ಲವೆಂದಲ್ಲಾ. ಆದರೆ ಅಪರೂಪ. ನಾನು ಲೋಕಕಲ್ಯಾಣಕ್ಕಾಗಿ ಮಾಡುವ ಕೆಲಸಗಳಿಗೆ ಅಧರ್ಮದ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಸಂಕಲ್ಪ ಮಾಡುವವರು ವಿರಳ.  ಈ ಸತ್ಯವನ್ನು ಪಾಲಿಸುವ ಎದೆಗಾರಿಕೆ ಬರಲು ವೇದದ ಹಿನ್ನೆಲೆ ಇರಬೇಕು.