Pages

Sunday, September 19, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -3

ಇನ್ನೊಂದು ಮಂತ್ರವನ್ನು ನೋಡೋಣ ಬನ್ನಿ:-


ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಹಾಪವಿದ್ಧಮ್|
ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತಥ್ಯತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ||
(ಯಜು.40.8)


[ಸಃ] ಆ ಚೇತನ ತತ್ವ, [ಪರಿ ಅಗಾತ್] ಎಲ್ಲಕ್ಕಿಂತ ಮೇಲಿದೆ, ಸರ್ವೋತ್ಕೃಷ್ಟವಾಗಿದೆ. [ಶುಕ್ರ] ಜ್ಯೋತಿರ್ಮಯವಾಗಿದೆ. [ಅಕಾಯಮ್] ವ್ರಣರಹಿತವಾಗಿದೆ. [ಅಸ್ಸಾವಿರಮ್] ನರನಾಡಿಗಳ ಬಂಧನವಿಲ್ಲದುದಾಗಿದೆ. [ಶುದ್ಧಮ್] ಪವಿತ್ರವಾಗಿದೆ. [ಅಪಾಪವಿದ್ಧಮ್] ಪಾಪದಿಂದ ಛೇದಿಸಲ್ಪಡದುದಾಗಿದೆ. [ಕವಿಃ] ಸರ್ವಜ್ಞ, ಸರ್ವದ್ರಷ್ಟುವಾಗಿದೆ. [ಮನೀಷೀ] ವಿಚಾರಶೀಲವೂ, ಮನಃಪ್ರೇರಕವೂ ಆಗಿದೆ. [ಪರಿಭೂಃ} ಸರ್ವಶ್ರೇಷ್ಠ, ಸರ್ವಜ್ಯೇಷ್ಠವಾಗಿದೆ. [ಸ್ವಯಂಭೂಃ] ಸ್ವತಃ ಇರತಕ್ಕ, ಅನುತ್ಪನ್ನವಾದ ಅನಾದಿ ತತ್ವವಾಗಿದೆ ಅದು. [ಶಾಶ್ವತೀಭ್ಯಃ ಸಮಾಭ್ಯಃ] ತನ್ನ ಶಾಶ್ವತ ಪ್ರಜೆಗಳಾದ ಜೀವಾತ್ಮರಿಗೆ, [ಯಾಥಾ ತಥ್ಯತಃ] ಹೇಗೆ ಕೊಡಬೇಕೋ ಹಾಗೆ, [ಅರ್ಥಾನ್] ಜೀವಿಕಾ ಸಾಧನಗಳನ್ನೂ, ವಿಷಯಗಳ ಜ್ಞಾನವನ್ನೂ, [ವಿ ಅದಧಾತ್] ವಿಶಿಷ್ಟ ರೀತಿಯಲ್ಲಿ, ವಿವಿಧ ಪ್ರಕಾರದಿಂದ ದಯಪಾಲಿಸುತ್ತಿದೆ.


     ಭಗವಂತನ ಅತ್ಯಂತ ವೈಜ್ಞಾನಿಕವಾದ ಈ ಭವ್ಯಸ್ವರೂಪದ ಚಿತ್ರಣವನ್ನು ನೋಡಿ, ನಾಸ್ತಿಕರೂ ಕೂಡ "ಈ ದೇವರನ್ನಲ್ಲ ನಾವು ಖಂಡಿಸುವುದು" ಎಂದುಕೊಳ್ಳಬೇಕು. ವೈಜ್ಞಾನಿಕರು "ಈ ದೇವರನ್ನಲ್ಲ ನಾವು ಕೊಂದುದು" ಎಂದುಕೊಳ್ಳಬೇಕು! ಈ ಮಹಾನ್ ವಿಶ್ವಚೇತನ ಕೇವಲ ಸರ್ವವ್ಯಾಪಕವಲ್ಲ; ಅದು ಸರ್ವಜ್ಞವೂ ಅಹುದು; ಸರ್ವದ್ರಷ್ಟುವೂ ಅಹುದು, ಅತ್ಯಂತ ಪವಿತ್ರವಾದ ಆ ಪತಿತಪಾವನ ತತ್ವ ಸ್ವತಃ ಸತ್ಯ ಸಂಕಲ್ಪಗಳಿಂದ ಕೂಡಿ ನಿರ್ಮಲಾಂತಃಕರಣ ಚಿತ್ರಗಳಲ್ಲಿ ಪ್ರೇರಣೆ ತುಂಬಿಸುವ ಸದ್ವಸ್ತುವಾಗಿದೆ. ಸರ್ವಶ್ರೇಷ್ಠ. ಸರ್ವಜ್ಯೇಷ್ಠವಾದ ಆ ದಿವ್ಯಚೇತನ ಬೇರೆಯವರಿಂದ ತನ್ನ ಅಸ್ತಿತ್ವವನ್ನು ಎರವು ತೆಗೆದುಕೊಳ್ಳುವುದಿಲ್ಲ. ಯಾರು ಒಪ್ಪಲಿ, ಬಿಡಲಿ, ಅದಂತೂ ಇದ್ದೇ ಇರುತ್ತದೆ