Pages

Tuesday, August 21, 2012

ವೇದ ಪಾಠದಲ್ಲಿ ಕೇಳಿದ್ದು


ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ

1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ



ಎಲ್ಲ ಅನರ್ಥಗಳಿಗೂ ಹಣವು ಕಾರಣ


ಪೂಜ್ಯತೇ ಯದಪೂಜ್ಯೋಪಿ ಯದಗಮ್ಯೋಪಿ ಗಮ್ಯತೇ ।
ವಂದ್ಯತೇ ಯದವಂದ್ಯೋಪಿ ಸ ಪ್ರಭಾವೋ ಧನಸ್ಯ ಚ ॥

ಪೂಜೆಗೆ ಅನರ್ಹನಾದವನನ್ನು  ಪೂಜಿಸಿದರೆ,   ಯಾರಲ್ಲಿಗೆ ಹೊಗಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸ ಬಾರದೋ ಅವನಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವವೇ ಕಾರಣ. ಎಲ್ಲ ಅನರ್ಥಗಳಿಗೂ ಹಣವು ಕಾರಣವಾಗಿದೆ.
--

ಸಂಪ್ರದಾಯಗಳು


ಹಿಂದೂ ಸಮಾಜದ ಪುನರುತ್ಥಾನಕ್ಕೆ ಆರ್ಯ ಸಮಾಜ ಕಟೀಬದ್ದವಾಗಿದೆ. ಸಾವಿರಾರು ವರುಷಗಳಿಂದ ಮೂಡನಂಬಿಕೆಗಳಿಂದ ಹಿಂದೂ ಸಮಾಜವು ನಲುಗಿದೆ.ಈ ಮೂಡನಂಬಿಕೆಗಳೇ ನಮ್ಮ ಗುಲಾಮಗಿರಿಗೂ ಕಾರಣವಾಯಿತು. ಭಾರತದ ಮೇಲೆ ಹೂಣರು, ಶಕರು ಮುಂತಾದವರು ಆಕ್ರಮಣ ಮಾಡಿದರು. ಇವರೆನ್ನಲಾ ಭಾರತ ಎದುರಿಸಿ ಭಾರತ ಗೆದ್ದಿತು. ಭಾರತಕ್ಕೆ ಬಂದ ಈ ಜನಾಂಗವು ಕಾಲಕ್ರಮೇಣ ಹಿಂದೂ ಸಮಾಜದಲ್ಲಿ ವಿಲೀನಗೊಂಡಿತು. ಇಂದು ನಮ್ಮ ಮದ್ಯೆ ಶಕರು, ಹೂಣರು, ಕುಶಾನರನ್ನು ಕಾಣೆವು. ಆದರೆ ಕಳೆದ ಕೆಲವು ನೂರು ವರ್ಷಗಳಿಂದ ಹಿಂದೂ ಸಮಾಜದಲ್ಲಿ ಎಲ್ಲರನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಪರಿಣಾಮವಾಗಿ ಅನ್ಯ ಸಮಾಜಗಳು ಹಿಂದೂ ಸಮಾಜದ ಮೇಲೆ ಸವಾರಿ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿವೆ. ಈ ನಿಟ್ಟಿನಲ್ಲಿ ನಮ್ಮ ಮದ್ಯೆ ಇರುವ ಅನೇಕ ಮೂಡ ನಂಬಿಕೆಗಳನ್ನು ದೂರವಿಟ್ಟು ಶುದ್ಧ ತಾರ್ಕಿಕ, ಮಾನವೀಯ ಮತ್ತು ವೇದಾಧಾರಿತ ಸಮಾಜವನ್ನು ಮಾಡಲೆಂದೇ ಅರ್ಯಸಮಾಜ ಪಣ ತೊಟ್ಟಿದೆ. ನಿಜ. ನಮ್ಮಲ್ಲಿ ಕೆಲವು ಉತ್ತಮ ಸಂಪ್ರದಾಯಗಳಿವೆ. ಆದರೆ ಅದಕ್ಕೂ ಮಿಗಿಲಾದದ್ದು ವೈದಿಕ ಸಂಪ್ರದಾಯ. ಒಬ್ಬ ರೈತ ಪೈರುಗಳ ನಡುವೆ ಇರುವ ಕಳೆಗಳನ್ನು ಕೀಳುವ ಸಂದರ್ಭದಲ್ಲಿ ಅನೇಕ ಉತ್ತಮ ಪೈರುಗಳು ಕೆಲವೊಮ್ಮೆ ನಾಶವಾಗುತ್ತವೆ. ಆದರೆ, ಇದಕ್ಕೆ ಭಯಬಿದ್ದು ಕಳೆಗಳನ್ನೇ ಕೀಳದಿದ್ದರೆ ಅವನು ಜಾಣ ರೈತನೇ?
ಈ ದಿಸೆಯಲ್ಲಿ ನಾವು ಯೋಚಿಸಬೇಕು ನಮ್ಮ ತಂದೆ ಕುರುಡರೆಂದು ನಾವು ಕುರುಡಾಗಬಾರದು. ಅದು ವಿವೇಕ ರಹಿತ ವರ್ತನೆಯಾಗುತ್ತದೆ. ನಮ್ಮಲ್ಲಿ ಇಂದು ಮನೆ ಮಾಡಿರುವ ವಿಗ್ರಹಾರಾದನೆ, ಶ್ರಾದ್ಧಕರ್ಮಗಳು, ಇತ್ಯಾದಿಗಳನ್ನು ಆರ್ಯಸಮಾಜ ವೇದಗಳ ಹಿನ್ನೆಲಯಲ್ಲೇ ವಿರೋಧಿಸುತ್ತದೆ. ಎಲ್ಲಕ್ಕೂ ವೇದ ಪ್ರಮಾಣ ಶ್ರೇಷ್ಟವೆನ್ನುವ ನಾವು ಈ ಸಂಪ್ರದಾಯಗಳನ್ನು ಯಾಕೆ ವಿವೇಕದ ಒರೆಗಲ್ಲಿಗೆ ಹಚ್ಚಬಾರದು? ಆಗ ಸತ್ಯ ತಾನೇ ತಾನಾಗಿ ಹೊರಹೊಮ್ಮುತ್ತದೆ.
ಆರ್ಯಸಮಾಜ ಹಿಂದೂ ಸಮಾಜದ ಒಂದು ಪ್ರಾಮಾಣಿಕ ಮಿತ್ರ. ವೀರ ಸಾವರ್ಕರ್ ಒಬ್ಬ ನಾಸ್ತಿಕರಾಗಿದ್ದರು. ಆದರೆ, ಅವರು ಆರ್ಯಸಮಾಜದ ವಿದಿ ವಿದಾನಗಳ ಕಟು ಬೆಂಬಲಿಗರಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಸ್ವಾಮಿ ದಯಾನಂದರನ್ನು ನಮ್ಮ ದೇಶದ ಆದರ್ಶವೆಂದೇ ಪ್ರತಿಪಾದಿಸುತ್ತಿದ್ದರು. ಇನ್ನೊಬ್ಬ ಪ್ರಾತಃ ಸ್ಮರಣೀಯ ವೈಕ್ತಿಯೆಂದರೆ ಪಂ| ಮದನ್ ಮೋಹನ ಮಾಳವೀಯರು. ಅವರು ಪೌರಾಣಿಕರಾದರೂ ಹಿಂದು ಸಮಾಜಕ್ಕೆ ಆರ್ಯ ಸಮಾಜವೇ ತಾರಕ ಮಂತ್ರವೆಂದು ಭಾವಿಸಿದ್ದರು. ಇವರೆಲ್ಲಾ ಹಿಂದೂ ಸಮಾಜದ ಏಳಿಗೆಗೆ ತಮ್ಮ ಜೀವನವನ್ನೇ ಸವೆಸಿದವರು. ಮೇಲಾಗಿ ಆರ್ಯಸಮಾಜವು ಕೈಗೊಂಡಿರುವ [ಮತ್ತು ಇಂದು ದುರ್ಬಲವಾಗಿರುವ] ಶುದ್ಧಿ ಮತ್ತು ಸಂಗಠನೆ ಹಿಂದೂ ಸಮಾಜದ ಕಾಯಕಲ್ಪ ಮಾಡಿಸುವಂತಹ ಔಷಧವಾಗಿದೆ. ಇದನ್ನು ಪಾಲಿಸದ ಹಿಂದೂ ಸಮಾಜ ಇಂದು ಸಂಕಷ್ಟಕ್ಕೆ ಸಿಕ್ಕಿದೆ. ಇವೆಲ್ಲವನ್ನೂ ಹೇಳುವ ಉದ್ದೇಶ್ಯವೆಂದರೆ, ಮೂಡ ನಂಬಿಕೆಗಳು ಮೂಡನಂಬಿಕೆಗಳೇ. ಅವುಗಳು ಜನಪ್ಪಿಯವಾಗಿದೆಯೆಂದು ಒಪ್ಪುವ ಹಾಗಿಲ್ಲ. ವಿಗ್ರಹರಾದನೆಯನ್ನು ಆರ್ಯಸಮಾಜವು ಒಪ್ಪಿದ್ದಲ್ಲಿ ಅದೊಂದು ಅನ್ಯ ಸಂಘಟನೆಗಳಂತೆ ಇರುತ್ತಿತ್ತೇ ಹೊರತು ಒಂದು ಆಂದೋಳನದ ರೀತಿಯಲ್ಲಿಲ್ಲ. ಇನ್ನೊಂದು ವಿಷಯ. ಉತ್ತಮ ಸಂಪ್ರದಾಯಗಳು ವೇದಾನುಕೂಲವಾಗಿದ್ದಲ್ಲಿ ಅದನ್ನು ಆರ್ಯಸಮಾಜ ವಿರೋದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.


ವಿದ್ವಾಂಸನೇ ಶ್ರೇಷ್ಠ

ಕಚ್ಚಿತ್ ಸಹಸ್ರಾನ್ ಮೂರ್ಖಾನಾಮ್ ಏಕಮಿಚ್ಚಸಿ ಪಂಡಿತಂ ।
ಪಂಡಿತೋ ಹ್ಯರ್ಥಕೃಚ್ಛ್ರೇಷು ಕುರ್ಯಾನ್ನಿಶ್ರೇಯಸಂ ಮಹತ್ ॥

ಸಾವಿರ ಮೂರ್ಖ ಜನರಿಗಿಂತಲೂ ಒಬ್ಬ ವಿದ್ವಾಂಸನೇ ಶ್ರೇಷ್ಠ ಎಂದು ಅವನನ್ನೇ ಆದರಿಸಬೇಕು, ಏಕೆಂದರೆ ಕಷ್ಟಕಾಲದಲ್ಲಿ ವಿದ್ವಂಸನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖನ ಉಪದೇಶಕ್ಕಿಂತ   ಬುದ್ಧಿವಂತನ  ನಿಂದನೆಯೂ ಶ್ರೆಷ್ಠವೇ ಆಗಿದೆಯಲ್ಲವೇ.