Pages

Wednesday, August 15, 2012

ವೈಶೇಷಿಕ ದರ್ಶನ

ಪರಿಚಯ:
          ವೈಶೇಷಿಕ ದರ್ಶನವು ಕಣಾದ ಅಥವಾ ಉಲೂಕನಿಂದ ಸ್ಥಾಪಿಸಲ್ಪಟ್ಟಿತು. ಆದ್ದರಿಂದ ಅದನ್ನು 'ಕಾಣಾದ' ಅಥವಾ 'ಔಲೂಕ್ಯ' ದರ್ಶನ ಎಂದೂ ಕರೆಯುತ್ತಾರೆ. ಕಣಾದ ಎನ್ನುವುದು ಉಲೂಕನ ಅನ್ವರ್ಥ ನಾಮವೆಂದು ಕಾಣುತ್ತದೆ. ಏಕೆಂದರೆ ಅವನು ಋಷಿಗಳಂತೆ ಜೀವನ ನಡೆಸಿ ರೈತರ ಹೊಲಗಳಿಂದ ಹೆಕ್ಕಿದ ಕಾಳುಗಳನ್ನು ತಿನ್ನುತ್ತಿದ್ದ. (ಕಣ=ಕಾಳು; ಅದ್=ತಿನ್ನು)
          ಈ ದರ್ಶನಕ್ಕೆ ಕಣಾದನ 'ವೈಶೇಷಿಕ ಸೂತ್ರ'ಗಳು ಮೂಲ ಗ್ರಂಥವಾಗಿದೆ. ಅದು ಹತ್ತು ಅಧ್ಯಾಯಗಳು ಅಥವಾ ಪುಸ್ತಕಗಳಿಂದ ಒಡಗೂಡಿದೆ ಮತ್ತು ಪ್ರತಿಯೊಂದೂ ಅಧ್ಯಾಯವು ಎರಡು 'ಅಹ್ನಿಕ' ಅಥವಾ ವಿಭಾಗಗಳನ್ನು ಹೊಂದಿವೆ. ಒಟ್ಟಾರೆಯಾಗಿ ಇದರಲ್ಲಿ ೩೭೪ ಸೂತ್ರಗಳು ಇವೆ.
          ಪ್ರಶಸ್ತಪಾದ(ಕ್ರಿ.ಶ. ನೇ ಶತಮಾನ) ರಚಿಸಿದ 'ಪದಾರ್ಥ ಧರ್ಮ ಸಂಗ್ರಹ' ಎನ್ನುವ ವ್ಯಾಖ್ಯಾನ ಗ್ರಂಥ ಬಹುಶಃ ವೈಶೇಷಿಕ ದರ್ಶನಕ್ಕೆ ಬರೆದ ಮೊದಲ ಭಾಷ್ಯ (ಲಭ್ಯವಿರುವ ಮೊದಲ ಗ್ರಂಥ). ಇದನ್ನು ಭಾಷ್ಯ ಗ್ರಂಥವೆಂದು ಕರೆದರೂ ಕೂಡ ಅದು ಪದ್ಧತಿಯಂತೆ ಮೂಲಗ್ರಂಥದ ಪ್ರತಿಯೊಂದೂ ಸೂತ್ರಕ್ಕೆ ಬರೆದ ಟಿಪ್ಪಣಿಯಲ್ಲ. ಈ ಭಾಷ್ಯದಲ್ಲಿ, ಮೂಲ ತತ್ವಗಳನ್ನು ಪುನರುದ್ಧರಿಸಿದರೂ ಕೂಡ ಅವುಗಳನ್ನು ಗಣನೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ. ಶ್ರೀಧರನ(ಕ್ರಿ.ಶ. ೯೯೧) 'ನ್ಯಾಯಖಂಡಲಿ', ವ್ಯೋಮಶಿವನ 'ವ್ಯೋಮಾವಳಿ' ಮತ್ತು ಉದಯನನ (ಕ್ರಿ.ಶ. ೯೮೪) 'ಕಿರಣಾವಳಿ' ಇವುಗಳು ಪ್ರಶಸ್ತಪಾದನ ಗ್ರಂಥಗಳಿಗೆ ಬರೆದ ಪ್ರಸಿದ್ಧ ವ್ಯಾಖ್ಯಾನ ಗ್ರಂಥಗಳಾಗಿವೆ. ವಲ್ಲಭಾಚಾರ್ಯರ(ಕ್ರಿ.ಶ. ೧೧ನೇ ಶತಮಾನ) 'ನ್ಯಾಯಲೀಲಾವತಿ' ಮತ್ತು ಉದಯನನ 'ಲಕ್ಷಣಾವಳಿ' ಇವುಗಳು ವೈಶೇಷಿಕ ದರ್ಶನಕ್ಕೆ ಬರೆದ ಸಂಗ್ರಹ ಗ್ರಂಥಗಳಾಗಿವೆ.
          ವೈಶೇಷಿಕ ಪದ್ಧತಿಯು ನ್ಯಾಯ ಪದ್ಧತಿಯೊಂದಿಗೆ ಕಾಲ ಕ್ರಮೇಣ ಬಹಳ ಹತ್ತಿರದ ಸಹಯೋಗ ಹೊಂದಿತು. ಅದು ಎಷ್ಟು ಸನಿಹವಿತ್ತೆಂದರೆ ಕೆಲವು ಕಾಲದ ನಂತರ ಬಂದ ಗ್ರಂಥಕಾರರು ಇವೆರಡನ್ನೂ ಒಂದೇ ಆಗಿ ಪರಿಗಣಿಸಿ ವಿಶ್ಲೇಷಿಸತೊಡಗಿದರು. ಈ ವಿಷಯವಾಗಿ ಬಂದ ಗ್ರಂಥಗಳಲ್ಲಿ ಶಿವಾದಿತ್ಯನ(ಕ್ರಿ.ಶ.೧೦ನೇ ಶತಮಾನ) 'ಸಪ್ತಪದಾರ್ಥಿ' ಹಾಗೂ ವಿಶ್ವನಾಥ ವಿರಚಿತ 'ಭಾಷಾಪರಿಚ್ಛೇದ' ಮತ್ತು ಆ ಗ್ರಂಥಕ್ಕೆ ಅವನೇ ಬರೆದ ಭಾಷ್ಯ - 'ಸಿದ್ಧಾಂತ ಮುಕ್ತಾವಳಿ' ಇವುಗಳು ಉಲ್ಲೇಖಾರ್ಹವಾಗಿವೆ.

ಸಪ್ತ ಪದಾರ್ಥಗಳು
          ವೈಶೇಷಿಕ ತತ್ವ ಶಾಸ್ತ್ರವು ಏಳು 'ಪದಾರ್ಥ' ಅಥವಾ ವಾಸ್ತವದ ವಿಧಾನಗಳನ್ನು ಗುರುತಿಸುತ್ತದೆ. ಪದಾರ್ಥದ ಅರ್ಥ 'ಯಾವುದು ಪದದಿಂದ ಗುರುತಿಸಲ್ಪಡುತ್ತದೆ'ಯೋ ಅಥವಾ ಜ್ಞಾನಕ್ಕೆ ಕಾರಕವಾದ ವಸ್ತುವೇ ಪದಾರ್ಥ. ಈ ರೀತಿಯ ಎಲ್ಲಾ ವಸ್ತುಗಳನ್ನು ಎರಡು ವರ್ಗಗಳಲ್ಲಿ ವಿಭಾಗಿಸಬಹುದು: ಭಾವ (ಇರುವಿಕೆ) ಮತ್ತು ಅಭಾವ (ಇಲ್ಲದಿರುವಿಕೆ). ಭಾವವು ಎಲ್ಲಾ ರೀತಿಯ ಧನಾತ್ಮಕವಾದ ವಾಸ್ತವ ಸಂಗತಿಗಳನ್ನು ಬಿಂಬಿಸಿದರೆ, ಅಭಾವವು ಋಣಾತ್ಮಕ ವಾಸ್ತವಿಕತೆಯನ್ನು ಬಿಂಬಿಸುತ್ತದೆ (ವೈಶೇಷಿಕ ಸೂತ್ರಗಳು ೧.೧.೧೪).
          ಸಪ್ತ ಪದಾರ್ಥಗಳು ಅಥವಾ ಏಳು ವಿಧಾನಗಳು ಯಾವುವೆಂದರೆ: ) ದ್ರವ್ಯ (ವಸ್ತು); 2) ಗುಣ (ಸ್ವಭಾವ); 3) ಕರ್ಮ (ಕ್ರಿಯೆ); 4) ಸಾಮಾನ್ಯ (ಸಮಾನ ಅಂಶ); 5)ವಿಶೇಷ (ಪ್ರತ್ಯೇಕತೆ); 6) ಸಮವಾಯ (ಅಂತರ್ಗತ ಸಂಭಂದ/ಬೇರ್ಪಡಿಸಲಾಗದ ಸಂಭಂದ)  ಮತ್ತು 7) ಅಭಾವ (ಇಲ್ಲದಿರುವಿಕೆ). ಇವುಗಳನ್ನು ಈಗ ಒಂದೊಂದಾಗಿ ಪರಿಶೀಲಿಸೋಣ:
          ದ್ರವ್ಯ ಎನ್ನುವ ಒಂದು ವಸ್ತುವು, ಗುಣ (ಸ್ವಭಾವ) ಮತ್ತು ಕರ್ಮ (ಕ್ರಿಯೆ) ಇವುಗಳನ್ನು ಒಳಗೊಳ್ಳಬಹುದು. ದ್ರವ್ಯವು ಎರಡೂ ಪದಾರ್ಥಗಳಿಗೆ ಮೂಲಾಧಾರವಾಗಿದೆ. ಒಂಭತ್ತು ರೀತಿಯ ದ್ರವ್ಯಗಳಿವೆ, ಅವುಗಳೆಂದರೆ: ನಾಲ್ಕು ಧಾತುಗಳಾದ [ಪೃಥ್ವಿ (ಭೂಮಿ), ಜಲ(ನೀರು), ತೇಜಸ್(ಅಗ್ನಿ/ಬೆಳಕು) ಮತ್ತು ವಾಯು(ಗಾಳಿ)]; ಆಕಾಶ (ಮೂಲ ಧಾತು), ಕಾಲ(ಸಮಯ); ದಿಕ್(ಸ್ಥಳ); ಆತ್ಮ(ಜೀವಿ) ಮತ್ತು ಮನಸ್ಸು; ಇವೆಲ್ಲವೂ ಆದ್ಯಂತರಹಿತವಾಗಿವೆ ಅಥವಾ ನಿತ್ಯನಿರಂತರವಾಗಿವೆ.
          ನಾಲ್ಕು ಧಾತುಗಳು ಸೃಷ್ಟಿಕ್ರಿಯೆಗೆ ಮುಂಚೆ ಪರಮಾಣುಗಳ ರೂಪದಲ್ಲಿ ಇದ್ದರೆ; ಆಕಾಶ, ಕಾಲ, ದಿಕ್ಕು ಮತ್ತು ಮನಸ್ಸು ಇವು ಸರ್ವಾಂತರ್ಯಾಮಿಗಳಾಗಿವೆ ಮತ್ತು ಇದರಲ್ಲಿ ಮನಸ್ಸೆಂಬುದು ಅಣುವಿನ ಗಾತ್ರದಲ್ಲಿರುತ್ತದೆ.
          ವೈಶೇಷಿಕ ಪದ್ದತಿಯು ಎರಡು ವಿಧವಾದ ಜೀವಿ(ಆತ್ಮ)ಗಳನ್ನು ಗುರುತಿಸುತ್ತದೆ, ಜೀವಾತ್ಮ ಮತ್ತು ಪರಮಾತ್ಮ(ಈಶ್ವರ ಅಥವಾ ಪರಮೇಶ್ವರ ಎಂದೂ ಕರೆಯುತ್ತಾರೆ). ಮೊದಲನೆಯದಾದ ಜೀವಾತ್ಮರು ಅನಂತ ಸಂಖ್ಯೆಯಲ್ಲಿದ್ದರೆ ಪರಮಾತ್ಮನು ಅಥವಾ ಅತ್ಯುನ್ನತ ಆತ್ಮನು ಅಥವಾ ದೇವರು ಒಬ್ಬನೇ ಒಬ್ಬನಿರುತ್ತಾನೆ.
          ಗುಣ ಅಥವಾ ಸ್ವಭಾವವು ಯಾವಾಗಲೂ ದ್ರವ್ಯ ಅಥವಾ ವಸ್ತುವಿನ ಆಧಾರಕ್ಕೊಳಪಟ್ಟು ತನ್ನ 'ಇರುವಿಕೆ' ಮತ್ತು 'ವ್ಯಕ್ತವಾಗುವುವಿಕೆ'ಗೆ ಅದನ್ನೇ ಅವಲಂಬಿಸಿದೆ. ಅದು ಯಾವಾಗಲೂ ದ್ರವ್ಯಕ್ಕೇ ಸೇರಿದ್ದೇ ಹೊರತು ಇನ್ನೊಂದು ಗುಣಕ್ಕೆ ಸೇರುವುದಿಲ್ಲ; ಅಂದರೆ ಅದು ದ್ರವ್ಯದ ಭಾಗವೇ ಹೊರತು ಇನ್ನೊಂದು ಗುಣದ ಭಾಗವಲ್ಲ.
          ವೈಶೇಷಿಕ ಪದ್ಧತಿಯು ೨೪ ರೀತಿಯ ಗುಣಗಳನ್ನು ಪ್ರತಿಪಾದಿಸುತ್ತದೆ. ಅವುಗಳಲ್ಲಿ ಕೆಲವೆಂದರೆ: ಐದು ಗ್ರಹಣೇಂದ್ರಿಯಗಳ ಗುಣಗಳು(ರೂಪ, ರಸ, ಗಂಧ, ಸ್ಪರ್ಶ, ಶಬ್ದ), ಪರಿಮಾಣ (ಗಾತ್ರ), ಸಂಯೋಗ್ಯ (ಜೋಡಣೆ), ಬುದ್ಧಿ (ಗ್ರಹಿಕೆ), ಸುಖ ಮತ್ತು ದುಃಖ (ನೋವು ಮತ್ತು ನಲಿವುಗಳು), ಇಚ್ಛೆ ಮತ್ತು ದ್ವೇಷ (ಇಷ್ಟ ಮತ್ತು ಅಯಿಷ್ಟಗಳು), ಸಂಸ್ಕಾರ (ಧೋರಣೆ/ಸಹಜ ಪ್ರವೃತ್ತಿ), ಧರ್ಮ ಮತ್ತು ಅಧರ್ಮ (ಒಳ್ಳೆಯ ಮತ್ತು ಕೆಟ್ಟ ಗುಣಗಳು).
          ಇಲ್ಲಿ ಗುಣಗಳನ್ನು ೨೪ಕ್ಕೇ ಪರಿಮಿತಗೊಳಿಸುವುದರ ಹಿಂದಿರುವ ಉದ್ದೇಶವೇನೆಂದರೆ ಅವುಗಳನ್ನು ಇದಕ್ಕೂ ಹೆಚ್ಚಾಗಿ ವಿಭಾಗಿಸಲು ಆಗುವುದಿಲ್ಲವೆನ್ನುವುದು ವೈಶೇಷಿಕರ ಅಭಿಮತ.
          ಕರ್ಮ ಅಥವಾ ಕ್ರಿಯೆಯು ಒಂದು ಭೌತಿಕ ಚಲನೆ. ಅದು ವಸ್ತುವಿಗೆ ಸೇರಿದ್ದಾಗಿದ್ದು ಅದರ ಸ್ವಭಾವವು ನಿರಂತರ ಬದಲಾವಣೆ. ಐದು ರೀತಿಯಾದ ಚಲನೆಗಳನ್ನು; ಉತ್ಕ್ಷೇಪಣ (ಮೇಲೆ ತೂರುವಿಕೆ) ಮತ್ತು ಆಕುಂಚನ (ಕುಗ್ಗುವಿಕೆ) ಮೊದಲಾದವುಗಳನ್ನು ಪಟ್ಟಿ ಮಾಡಲಾಗಿದೆ. ಈ ರೀತಿಯ ಚಲನೆಗಳನ್ನು ಕಣ್ಣು, ಚರ್ಮ ಮೊದಲಾದ ಪಂಚೇಂದ್ರಿಯಗಳಿಂದ ಗ್ರಹಿಸಬಹುದು. ಮನಸ್ಸೂ ಕೂಡ ಚಲನೆಯನ್ನು ಒಳಗೊಂಡಿದೆ ಆದರೆ ಅದನ್ನು ಬಾಹ್ಯವಾಗಿ ಗ್ರಹಿಸಲಾಗದು.
          'ಸಾಮಾನ್ಯ' ಅಥವಾ ಸಮಾನ ಅಂಶವೆಂದರೆ ಒಂದು ವರ್ಗದಲ್ಲಿರುವ ಸಾರ ಮತ್ತು ಅದರ ಸಾರ್ವತ್ರಿಕತೆ. ಸಾರ್ವತ್ರಿಕತೆ ವರ್ಗದಲ್ಲಿರುವ ಪ್ರತಿಯೊಬ್ಬ ಸದಸ್ಯನಲ್ಲೂ ನಿತ್ಯ (ನಿರಂತರ ಮತ್ತು ಕೊನೆಯಿಲ್ಲದ್ದು) ಮತ್ತು ಅಂತರ್ಜ್ಯನ್ಯವಾಗಿರುತ್ತವೆ. ಉದಾಹರಣೆಗೆ: 'ಗೋತ್ವ' (ಗೋವಿನ ಅಂಶ) ಮತ್ತು 'ಘಟತ್ವ' (ಮಡಕೆಯ ತತ್ವ) ಇವುಗಳು ಪ್ರತಿ ಹಸು ಮತ್ತು ಮಡಕೆಯಲ್ಲಿಯೂ ಅನುಕ್ರಮವಾಗಿ ಇರುತ್ತವೆ. ಒಂದು ಹಸುವಿನ ಮರಣ ಅಥವಾ ಮಡಕೆಯ ಒಡೆಯುವಿಕೆ ಅವುಗಳಲ್ಲಿದ್ದ 'ಸಾಮಾನ್ಯ'ವನ್ನು ನಾಶಪಡಿಸುವುದಿಲ್ಲ.
          'ವಿಶೇಷ' ಅಥವಾ ಪ್ರತ್ಯೇಕತೆಯು 'ಸಾಮಾನ್ಯ'ದ ನೇರ ವಿರುದ್ಧ ಪದ. ಅದು ನಿತ್ಯವಿರುವ ವಸ್ತುಗಳಲ್ಲಿ ಕಂಡು ಬರುವ ಅದ್ವಿತೀಯತೆ. ಉದಾಹರಣೆಗೆ ಭೂಮಿಯ ಮೇಲೆ ಲಭ್ಯವಿರುವ ಒಂದು ಪರಮಾಣು ಇದೇ ಭೂಮಿಯ ಮತ್ತೊಂದು ಪರಮಾಣುವಿಗಿಂತ ವಿಭಿನ್ನವಾಗಿರುತ್ತದೆ. ಇವುಗಳಲ್ಲಿರುವ ಏನೋ ಒಂದು ಪ್ರತಿಯೊಂದನ್ನೂ ಒಂದರಿಂದ ಮತ್ತೊಂದನ್ನು ವ್ಯತ್ಯಾಸಗೊಳಿಸುತ್ತದೆ; ಅದನ್ನೇ 'ವಿಶೇಷ' ಎನ್ನುವುದು.
          'ಸಮವಾಯ' ಅಥವಾ ಅಂತರ್ಗತತ್ವವು ವೈಶೇಷಿಕ ಸಿದ್ಧಾಂತದ ವಿಶೇಷ ಕೊಡುಗೆ ಇರಬಹುದೆಂದು ಕಾಣುತ್ತದೆ. ಎರಡು ವಸ್ತುಗಳ ನಡುವೆ ಸಂಯೋಗ ಅಥವಾ ಜೋಡಣೆಯನ್ನು ಇಷ್ಟ ಬಂದಾಗ ಮಾಡಬಹುದು ಮತ್ತು ಅದೇ ರೀತಿ ವಿಯೋಗ ಅಥವಾ ಬೇರ್ಪಡಿಸುವಿಕೆಯನ್ನು ಕೂಡ. ಎರಡು ವಸ್ತುಗಳ ನಡುವಿನ ಈ ವಿಧವಾದ ಸಂಭಂದವು ತಾತ್ಕಾಲಿಕ. ಆದರೆ 'ಸಮವಾಯ'ವು ಪ್ರತಿಪಾದಿಸುವ ಸಂಭಂದವು ಅಂತರ್ಗತವಾದದ್ದು (ಪ್ರತ್ಯೇಕಿಸಲಾಗದ್ದು) ಆದ್ದರಿಂದ ಇದನ್ನು 'ಅಯುತಸಿದ್ಧ' ಅಥವಾ ಜೋಡಣೆಯಲ್ಲದ ಸಂಭಂದವೆಂದು ಕರೆದಿದ್ದಾರೆ. ಅದು ನಿತ್ಯ ಮತ್ತು ಸರ್ವಕಾಲಿಕ. ಒಂದು ಪೂರ್ಣ ವಸ್ತು ಮತ್ತದರ ಭಾಗಗಳೊಂದಿಗಿನ ಸಂಭಂದವು  'ಸಮವಾಯ' ಅಥವಾ ಅಂತರ್ಗತತ್ವತೆ. ದಾರದ ಎಳೆಗಳೊಂದಿಗೆ ಬಟ್ಟೆಯ ಸಂಭಂದ; ಕೆಂಪುತನದೊಂದಿಗೆ ಕೆಂಪು ವಸ್ತು(ಉದಾ: ಕೆಂಪು ಗುಲಾಬಿ)ವಿನ ಸಂಭಂದ; ಚಲಿಸುವ ವಸ್ತುವಿನಲ್ಲಿರುವ ಚಲನೆಯ ಸಂಭಂದ (ಉದಾ: ಚಲಿಸುವ ಚಂಡು) ಇವುಗಳನ್ನು ಸಮವಾಯಕ್ಕೆ ಉದಾಹರಣೆಗಳಾಗಿ ಕೊಡಬಹುದು. ಸಮವಾಯದಲ್ಲಿ ಪ್ರಸ್ತಾಪಿಸಿರುವ ಸಂಭಂದಗಳು ಮಾರ್ಪಾಟಿಗೆ ಒಳಪಡದೇ ಇರುವಂತವುಗಳು ಅಂದರೆ ಬದಲಾವಣೆಗೆ ಅತೀತವಾಗಿರುವಂತಹವು.
          'ಅಭಾವ' ಅಥವಾ 'ಇಲ್ಲದಿರುವಿಕೆ' (ಏಳು ಪದಾರ್ಥಗಳಲ್ಲಿನ ಕೊನೆಯದು) ಮಾತ್ರವೇ ಋಣಾತ್ಮಕ ವರ್ಗಕ್ಕೆ ಸೇರಿದ್ದು. ಅದನ್ನು ಕೂಡ ವೈಶೇಷಿಕ ಪದ್ಧತಿಯಲ್ಲಿ ವಾಸ್ತವವೆಂದು ತಿಳಿಯಲಾಗುತ್ತದೆ. ರಾತ್ರಿಯ ಹೊತ್ತಿನಲ್ಲಿ ನಾವು ಆಕಾಶವನ್ನು ನೋಡಿದಾಗ ಅಲ್ಲಿ ಸೂರ್ಯನು ಗೋಚರಿಸದೇ ಇರುವುದನ್ನು ಗಮನಿಸುತ್ತೇವೆ; ಚಂದ್ರ ಹಾಗೂ ಇತರ ತಾರೆಗಳನ್ನು ನಾವು ನೋಡಿದರೂ ಕೂಡ. (ಇಲ್ಲಿ ಸೂರ್ಯನ ಅಭಾವವು-ಇಲ್ಲದಿರುವಿಕೆಯು ವಾಸ್ತವ). ಸ್ಥೂಲವಾಗಿ ಹೇಳಬೇಕೆಂದರೆ ಅಭಾವವು ಎರಡು ವಿಧವಾದದ್ದು, ಸಂಸರ್ಗಾಭಾವ ಮತ್ತು ಅನ್ಯೋನ್ಯಾಭಾವ. ಮೊದಲನೆಯದಾದ ಸಂಸರ್ಗಾಭಾವವು "ಒಂದರಲ್ಲಿ ಮತ್ತೊಂದು ಇಲ್ಲದಿರುವಿಕೆ"ಯನ್ನು ಪ್ರತಿಪಾದಿಸುತ್ತದೆ. ಉದಾಹರಣೆಗೆ - ಮೇಜಿನ ಮೇಲೆ ಮಡಕೆಯು ಇಲ್ಲದಿರುವುದು. ಇನ್ನೊಂದು ಭಾವವಾದ ಅನ್ಯೋನ್ಯಾಭಾವವು ಒಂದು ವಸ್ತುವು ಇನ್ನೊಂದು ವಸ್ತುವಲ್ಲ ಎಂದು ತಿಳಿಸುತ್ತದೆ; ಉದಾಹರಣೆಗೆ - ಒಂದು ಕುದುರೆಯು ಎಮ್ಮೆಯೊಳಗೆ ದೊರೆಕದು(ಸಿಗದು). 
          ಸಂಸರ್ಗಾಭಾವವು ಮೂರು ವಿಧಾನದ್ದಾಗಿರುತ್ತದೆ, ಅವುಗಳೆಂದರೆ:
1) ಪ್ರಾಗಾಭಾವ (ಪೂರ್ವದಲ್ಲಿ ಇಲ್ಲದಿರುವಿಕೆ); 2) ಪ್ರಧ್ವಂಸಾಭಾವ ಅಥವಾ ಧ್ವಂಸಾಭಾವ (ಹಾಳಾದ ನಂತರ ಇಲ್ಲದಿರುವಿಕೆ); ಮತ್ತು 3) ಅತ್ಯಂತ್ಯಾಭಾವ (ಅಪ್ಪಟವಾಗಿ ಇಲ್ಲದಿರುವಿಕೆ ಅಥವಾ ಸಂಪೂರ್ಣವಾಗಿ ಯಾವಾಗಲೂ ಇಲ್ಲದಿರುವಿಕೆ).ಕಟ್ಟುವ ಮುನ್ನ ಇಟ್ಟಿಗೆಗಳಲ್ಲಿ ಮನೆಯು ಇಲ್ಲದಿರುವಿಕೆಯನ್ನು ಪ್ರಾಗಾಭಾವಕ್ಕೆ ಉದಾಹರಣೆಯಾಗಿ ಕೊಡಬಹುದು. ಒಂದು ಮಣ್ಣಿನ ಮಡಕೆಯು ಒಡೆದು ಹೋದ ನಂತರ ಅದರಲ್ಲಿ ಮಡಕೆಯು ಇಲ್ಲದಿರುವಿಕೆಯು ಪ್ರಧ್ವಂಸಾಭಾವಕ್ಕೆ ಉದಾಹರಣೆಯಾಗುತ್ತದೆ. ಗಾಳಿಯು "ಬಣ್ಣ ಅಥವಾ ಆಕಾರ" ರಹಿತವಾಗಿರುವುದು ಅತ್ಯಂತ್ಯಾಭಾವಕ್ಕೆ ಉದಾಹರಣೆ.

ದೇವರು ಮತ್ತು ಪ್ರಪಂಚ:
          ವೈಶೇಷಿಕ ದರ್ಶನವು ದೇವರು ಅಂದರೆ ಈಶ್ವರ ಅಥವಾ ಪರಮೇಶ್ವರ ಇವನ ಇರುವಿಕೆಯನ್ನು ಒಪ್ಪಿಕೊಳ್ಳುತ್ತದೆ. ಈ ಭಗವಂತನು ಅತ್ಯಂತ ಮೇಧಾವಿಯಾದ ಜೀವಿಯಾಗಿದ್ದು ಅವನ ಇಚ್ಛೆ ಮತ್ತು ಮಾರ್ಗದರ್ಶನದಲ್ಲಿ ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯ(ರಚನೆ-ನಿರ್ವಹಣೆ-ವಿನಾಶ)ಗಳು ಏರ್ಪಡುತ್ತವೆ.
          ಈ ಪ್ರಪಂಚವು ಭೌತಿಕ ಮತ್ತು ಜೈವಿಕ ವಸ್ತುಗಳ ವ್ಯವಸ್ಥೆಯಾಗಿದ್ದು ಅವುಗಳು ಒಂದರೊಂದಿಗೆ ಮತ್ತೊಂದು ಪರಸ್ಪರ ಸಹಯೋಗವನ್ನು ಹೊಂದಿವೆ. ವಾಸ್ತವವಾಗಿ ಪ್ರಪಂಚವನ್ನು ಮುನ್ನಡೆಸುವ ನೀತಿಸೂತ್ರ ಯಾವುದೆಂದರೆ ವಿಶ್ವವ್ಯಾಪಿಯಾದ ಕರ್ಮ ನಿಯಮ - ಇದರಿಂದ ಎಲ್ಲ ಆತ್ಮಗಳ(ಜೀವರುಗಳ) ಜೀವನ ಮತ್ತು ಗುರಿಗಳು ನಿರ್ದೇಶಿಸಿಲ್ಪಟ್ಟಿದೆ.   
          ಸೃಷ್ಟಿಕ್ರಿಯೆಯ ಪ್ರಾರಂಭ (ಅದನ್ನನುಸರಿಸಿ ಅದರ ನಿರ್ವಹಣೆ ಮತ್ತು ವಿನಾಶ, ಇವು ಮೂರು ನಿರಂತರವಾಗಿ ಆವರ್ತನಗೊಳ್ಳುತ್ತವೆ) ಇದು ಭಗವಂತನ ಇಚ್ಛೆಗನುಗುಣವಾಗಿ ನಡೆಯುತ್ತದೆ. ಅವನ ಇಚ್ಛೆಯಿಂದ ಉತ್ಪನ್ನಗೊಂಡ ಮೊದಲ ವಸ್ತು 'ಜಗತ್ತಿನ ಆತ್ಮ' - ಬ್ರಹ್ಮ. ಭಗವಂತನ ಕೃಪೆಯಿಂದ ಅವನು ಆರು ಸದ್ಗುಣಗಳಾದ ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ ಮೊದಲಾದವುಗಳ ಗಣಿಯಾಗಿದ್ದಾನೆ. ಈ ಬ್ರಹ್ಮನು ಸೃಷ್ಟಿಯ ಪ್ರಧಾನ ಶಿಲ್ಪಿ; ಅವನು ಸಂಪೂರ್ಣವಾಗಿ ವಿವಿಧ ಆತ್ಮಗಳ ಅದೃಷ್ಠ (ಅಗೋಚರವಾದ ಒಳಿತು ಮತ್ತು ಕೆಡಕುಗಳು)ಗಳಿಗೆ ಅನುಗುಣವಾಗಿ ಮತ್ತು ವಿವಿಧ ರೀತಿಯ ಪರಮಾಣುಗಳು ಅಥವಾ ಅಣುಗಳನ್ನು ಒಂದಕ್ಕೊಂದು ಜೋಡಣೆಗೊಳಿಸಿ ಅಂತಿಮವಾಗಿ ಈ ವಿಶ್ವವನ್ನು ಸೃಜಿಸಿದ್ದಾನೆ.
          ಅಂತ್ಯದ ಪ್ರಕ್ರಿಯೆಯು ಸೃಷ್ಟಿಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಬ್ರಹ್ಮನು ತನ್ನ ದೇಹವನ್ನು ಪರಿತ್ಯಜಿಸುತ್ತಾನೆ, ತದನಂತರ ಮಹೇಶ್ವರನು ಸೃಷ್ಟಿಯನ್ನು ಅಂತಿಮಗೊಳಿಸಲು ಇಚ್ಛಿಸಿ ಪ್ರಳಯ ಅಥವಾ ವಿನಾಶವನ್ನು ಉಂಟುಮಾಡುತ್ತಾನೆ. ಆಗ ಇಡೀ ಪ್ರಪಂಚವು ತನ್ನ ಮೂಲ ಸ್ವರೂಪವಾದ ಏಳು ಪದಾರ್ಥಗಳ ಸ್ಥಿತಿಗೆ ಹಿಂತಿರುಗುತ್ತದೆ.

ಉಪಸಂಹಾರ
          ನ್ಯಾಯ ಪದ್ಧತಿಯಂತೆ ವೈಶೇಷಿಕ ದರ್ಶನವೂ ಕೂಡ ನೈಜ ತತ್ವವನ್ನು ಒಳಗೊಂಡು ಅನೇಕತೆ ಮತ್ತು ಆಸ್ತಿಕತೆಯನ್ನು ಪ್ರತಿಪಾದಿಸುತ್ತದೆ. ಸೃಷ್ಟಿಯು ಅವಾಂಛಿತವಾದುದ್ದಲ್ಲ ಅದು ಭಗವಂತನ ಇಚ್ಛೆಯಂತೆಯೇ ಕ್ರಮಬದ್ಧವಾಗಿ; ಜೀವಾತ್ಮರ ಕರ್ಮಕ್ಕನುಗುಣವಾಗಿ ಅವುಗಳು ಅಂತಿಮ ನೈತಿಕ ಪರಿಪೂರ್ಣತೆಯನ್ನು ಪಡೆಯುವ ದಿಕ್ಕಿನಲ್ಲಿ ಸಾಗುತ್ತದೆ.
          ಅಣು ಸಿದ್ಧಾಂತವನ್ನು ನೈತಿಕ ಹಾಗು ಆಧ್ಯಾತ್ಮಿಕತೆಗಳೊಂದಿಗೆ ಸಮನ್ವಯಗೊಳಿಸಿದ್ದಲ್ಲದೆ, ಭಗವಂತನನ್ನು ಸೃಷ್ಟಿಕರ್ತ ಮತ್ತು ಜಗನ್ನಿಯಾಮಕನೆಂದು ಒಪ್ಪಿಕೊಂಡು ವೈಶೇಷಿಕ ದರ್ಶನವು ಭಾರತೀಯ ತತ್ವಶಾಸ್ತ್ರಗಳಲ್ಲಿ ಅತ್ಯುನ್ನತವೆಂದು ಪರಿಗಣಿಸಲ್ಪಟ್ಟಿರುವ ವೇದಾಂತ ದರ್ಶನಕ್ಕೆ ಅತೀ ಸಮೀಪದಲ್ಲಿ ಬಂದು ನಿಂತಿತು.       

-ಶ್ರೀಧರ್ ಭಂಡ್ರಿ

ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್



ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್  ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ. ಅವಳಿಗೆ ಮೊನ್ನೆ ಸನ್ಮಾನ ನಡೆಯಿತು. ಸ್ಯಾಂಟ್ರೊ  ಕಾರ್ ನ್ನು  ಅವಳಿಗೆ ಬಹುಮಾನವಾಗಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ವಾತಿಯ ಭರತನಾಟ್ಯ ಪ್ರದರ್ಶನ ಕೂಡ ಏರ್ಪಾಡು ಮಾಡೋಣ" ಕೂಡಲೇ ಸ್ವಾತಿಯ ತಂದೆ ಪ್ರಕಾಶ್ ರನ್ನು ಸಂಪರ್ಕಿಸಲಾಯ್ತು. ಅವರೂ ಒಪ್ಪಿದರು. ಭರತನಾಟ್ಯ ಕಾರ್ಯಕ್ರಮವೂ ನಿಶ್ಚಯವಾಗಿ ಆಮಂತ್ರಣ  ಮುದ್ರಣವಾಯ್ತು. ಆಮಂತ್ರಣವನ್ನು ಹಿಡಿದು ಚೆನ್ನರಾಯ ಪಟ್ಟಣದತ್ತ ಕಾರ್ ತಿರುಗಿತು. ಅವರ ಮನೆಯೊಳಗೆ ಕಾಲಿಟ್ಟ ಕೂಡಲೇ ಕಂಡ ಪ್ರಶಸ್ತಿಗಳ ಸರಮಾಲೆಯನ್ನು ನನ್ನ ಕ್ಯಾಮರಾ ಕ್ಲಿಕ್ಕಿಸಲು ವಿಫಲವಾಯ್ತು. ಅದಕ್ಕಾಗಿಯೇ ಒಂದು ವೀಡಿಯೋ ತೆಗೆದೆ. ಸಾಮಾನ್ಯ ಕ್ಯಾಮರಾವಾದ್ದರಿಂದ ವೀಡಿಯೋ ಗುಣಮಟ್ಟ ಅಷ್ಟು ಚೆನ್ನಾಗಿಲ್ಲವಾದರೂ ಅದು ಹೇಳಬೇಕಾದ್ದನ್ನು ಹೇಳುತ್ತದೆಯಾದ್ದರಿಂದ ಆ ಕ್ಲಿಪ್ ಇಲ್ಲಿ ಅಳವಡಿಸುವೆ.ಜೊತೆಗೆ ಫೋಟೋಗ    ಳನ್ನೂ    ಪ್ರಕಟಿಸಿರುವೆ.ಕು|| ಸ್ವಾತಿ ಭಾರಧ್ವಾಜ್ ,ಇವರ ವೆಬ್ ಸೈಟ್ ಕೊಂಡಿ ಕೆಳಗಿದೆ.ಹೆಚ್ಚಿನ ವಿವರ ಅಲ್ಲಿ ಲಭ್ಯ.
http://www.indiandancinglegend.com/