Pages

Monday, March 28, 2011

ಸಾರ್ಥಕಪಡಿಸಿಕೊಳ್ಳೋಣ

ವೇದಸುಧೆಯ  ಅಭಿಮಾನಿಗಳೇ,
ಈಗಾಗಲೇ ಹಲವು ಭಾರಿ ವೇದಸುಧೆಯ ಉದ್ಧೇಶವನ್ನು ತಿಳಿಸಿದ್ದಾಗಿದೆ. ಬಹುಶ: ಇಂದಿನ ದಿನಗಳಲ್ಲಿ ಇದು ಒಂದು ವಿಶಿಷ್ಟ ಪ್ರಯೋಗ.  ಹಲವು ನೂರು ವರ್ಷಗಳಿಂದ ನಾವು ಅನುಸರಿಸಿಕೊಂಡುಬಂದಿರುವ ಪೂಜಾಪದ್ದತಿಗಳಬಗೆಗಾಗಲೀ ವ್ರತಕಥೆಗಳಬಗೆಗಾಗಲೀ, ಆಚಾರಪದ್ದತಿಗಳ ಬಗೆಗಾಗಲೀ ನಮಗೆ ಪ್ರಶ್ನೆಮಾಡಿಯೇ ಗೊತ್ತಿಲ್ಲ.ಅರ್ಥವನ್ನು ಹೇಳಿಕೊಟ್ಟವರಿಲ್ಲ.  ಗುರುವಿನ ಮೂಲ, ಋಷಿಯ ಮೂಲ, ನದಿಯಮೂಲವನ್ನು ಹುಡುಕಬಾರದೆಂಬ[ಕೆದಕಬಾರದೆಂಬ] ದೊಡ್ದವರೆನಿಸಿಕೊಂಡವರ ಮಾತನ್ನು ಇದುವರೆವಿಗೂ ಚಾಚೂತಪ್ಪದೆ ಪಾಲಿಸಿಕೊಂಡುಬಂದ ಪರಿಣಾಮವಾಗಿ ಎಲ್ಲಾ ಕ್ಷೇತ್ರದಲ್ಲೂ ಅನೀತಿ ತಾಂಡವವಾಡುತ್ತಿರುವುದನ್ನು ಯಾರೂ ಗಮನಿಸಬಹುದಾಗಿದೆಯಲ್ಲವೇ? ನಮ್ಮ ಸುದೈವಕ್ಕೆ ಸುಧಾಕರಶರ್ಮರಂತಹವರು ವೇದದ ಅರ್ಥವನ್ನು ತಿಳಿಸುತ್ತಾ ನಿಜವಾದ ಭಗವಂತನ ಅಸ್ತಿತ್ವವನ್ನು ವೇದದ ಆಧಾರದಲ್ಲಿ ಪ್ರತಿಪಾದಿಸುತ್ತಾ ನಮಗೆ ಒಂದು ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ. ನಮಗೆ ನಿಜವಾಗಿ ಅಡ್ಡಿಯಾಗುತ್ತಿರುವ ಆಚರಣೆಗಳಬಗೆಗೆ ಅಂತಹವರಿಂದ ತಿಳಿದುಕೊಳ್ಳಲು ಅವಕಾಶವಿದೆ. ಸಾರ್ಥಕಪಡಿಸಿಕೊಳ್ಳೋಣ.

ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ

ಶ್ರೀ ಮಂಜುನಾಥಶರ್ಮರ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಅಭಿಮತ ಪುಟದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಶ್ನೆಯನ್ನು ಯಾರೇ ಆಗಲೀ ದಯಮಾಡಿ ತಮ್ಮ ಈ ಮೇಲ್ ವಿಳಾಸವನ್ನು ಕೊಟ್ಟು ವೇದಸುಧೆಯೊಡನೆ ಸಂಪರ್ಕದಲ್ಲಿದ್ದರೆ ಒಳ್ಳೆಯದು, ಇನ್ನು ಮುಂದೆ ಈ ಮೇಲ್ ವಿಳಾಸವಿಲ್ಲದೆ ಅನಾನಿಮಸ್ ಹೆಸರಿನಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಲಾಗುವುದಿಲ್ಲವೆಂದು ಅನಿವಾರ್ಯವಾಗಿ ಹೇಳಬೇಕಾಗಿದೆ. ಕಾರಣ ಶ್ರೀ ಮಂಜುನಾಥಶರ್ಮರಿಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಲು ವಿನಂತಿಸಿದ್ದರೂ ಈವರಗೆ ವೇದಸುಧೆಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಿರುವುದಿಲ್ಲ. ಅಥವಾ ಅವರು ವೇದಸುಧೆಯಲ್ಲಿ ಪ್ರಶ್ನೆಯನ್ನು ಕೇಳಿದನಂತರ ವೇದಸುಧೆಗೆ  ಪುನ: ಭೇಟಿನೀಡಿದ್ದರೋ ಇಲ್ಲವೋ ತಿಳಿಯದು. ಈಗಲಾದರೂ ದಯಮಾಡಿ ಶ್ರೀ ಮಂಜುನಾಥಶರ್ಮರು ತಮ್ಮ ಈಮೇಲ್ ವಿಳಾಸವನ್ನು ನೀಡಲು ಕೋರಿಕೆ.
---------------------------------------------------------               
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ 
------------------------------------------------------
 ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ
.
ನಾಲ್ಕೂ ವೇದಗಳಿಂದ ಆಯ್ದ ನೂರು ನೂರು ಮಂತ್ರಗಳ (ಒಟ್ಟು 400 ಮಂತ್ರಗಳು) ಪುಸ್ತಕ `ವೇದಜ್ಯೋತಿ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಪ್ರತಿಗಳು ಮುಗಿದಿರುವುದರಿಂದ ಪುನಃ ಮುದ್ರಣ ಮಾಡುವ ಸಿದ್ಧತೆ ನಡೆಯುತ್ತಿದೆ. ಆದಾಗ ತಿಳಿಸಲಾಗುವುದು. ವಯಸ್ಸಿನ ಚಿಂತೆ ಮಾಡದೇ ಇಂದಿನಿಂದಲೇ ವೇದಾಧ್ಯಯನ ಪ್ರಾರಂಭಿಸಿ. ನಮ್ಮ ಸಾಧನೆಯು ಸಂಸ್ಕಾರರೂಪದಲ್ಲಿ ನಮ್ಮೊಂದಿಗೆ ಮುಂದಿನ ಜನ್ಮಗಳಿಗೂ ಬರುವದರಿಂದ ನಷ್ಟವೇನಿಲ್ಲ! ಹಿಂದಿನಿಂದ ಬಂದಿರುವ ಪೂಜಾಪದ್ಧತಿಯ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆಂದು ಪ್ರತಿಕ್ರಿಯೆ ನೀಡಿದ್ದೀರಿ. ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಮೊದಲು ಧನ್ಯವಾದಗಳು. ಯಾವುದೇ ಆದಾರವಿಲ್ಲದೇ, ನಮ್ಮ ವೈಯಕ್ತಿಕ ಅಭಿಪ್ರಾಯದಿಂದ ಪ್ರೇರಿತರಾಗಿ, ಅದರ pros and cons ಏನು ಎಂಬುದರ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವುದನ್ನು `ಹಗುರ' ಎಂದು ತಿಳಿಯಬಹುದೇ? ನಾನಾಡಿದ ಮಾತುಗಳು ಅತ್ಯಂತ ಗಂಭೀರ, ಖಂಡಿತರಾಗಿಯೂ ಹಗುರವಲ್ಲ. ದೇವಾನುದೇವತೆಗಳು, ಅವುಗಳಿಗೆ ಚಿತ್ರ-ವಿಚಿತ್ರ ಆಕಾರಗಳ ಕಲ್ಪನೆ, ವಿಧ-ವಿಧವಾದ ಪೂಜಾವಿಧಾನಗಳು (ಕುರಿ-ಕೋಳಿ ಕತ್ತರಿಸುವವರೆಗೂ) ಹುಟ್ಟಿಕೊಂಡು ಒಂದಾಗಿರಬೇಕಾಗಿದ್ದ ಮಾನವ ಸಮಾಜ ಒಡೆದು ಚೂರಾಗಿರುವುದು ಕಾಣುತ್ತಿಲ್ಲವೇ ಸ್ವಾಮಿ! ಇವುಗಳ ಹೆಸರಿನಲ್ಲಿ ಇಂದಿನವರೆಗೂ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ, ಶೋಷಣೆ, ರಕ್ತಪಾತಗಳು ಸಾಲದೇ?! ನೀವೇನೋ ಸಾತ್ವಿಕ ಪೂಜಕರಿರಬಹುದು, ಆದರೆ ವೇದವಿರುದ್ಧವಾದ, ಮಾನವೀಯತೆಯನ್ನು ಒಳಗೊಳ್ಳದ, ಜ್ಞಾನಕ್ಕೆ ಜಾಗವಿಲ್ಲದ ಮೌಢ್ಯ ಆಚರಣೆಗಳನ್ನು ತಿರಸ್ಕರಿಸದೇ ವಿಧಿಯಿಲ್ಲ. ಹಾಗೆ ಮಾಡದೇ ಹೋದರೆ, ಮತ್ತೊಬ್ಬರ ಹಾನಿಕಾರಕ, ಅಮಾನವೀಯ ಪೂಜಾವಿಧಾನಗಳಿಂದ ಸಮಾಜವನ್ನು ರಕ್ಷಿಸುವುದಾದರೂ ಹೇಗೆ? ಇಲ್ಲಿ ನಮ್ಮ ಕರ್ತವ್ಯವೇನೂ ಇಲ್ಲವೇ? `ಆಗಮಾರ್ಥಂತು ದೇವಾನಾಂ ..' ವೇದಮಂತ್ರವಲ್ಲ! ನಾಲ್ಕೂ ವೇದಗಳಲ್ಲಿ ಎಲ್ಲಿಯೂ ಇಲ್ಲ!! ಸಂಸ್ಕೃತದಲ್ಲಿ ಯಾರೋ ಮಾಡಿರುವ ಅವೈಜ್ಞಾನಿಕ ಶ್ಲೋಕ. ದೇವ ಎಂದಾಗ ಭಗವಂತನೆಂದು ಗ್ರಹಿಸುವುದಾದರೆ ಆ ಭಗವಂತನು ಸರ್ವವ್ಯಾಪಿ ಹೊಸದಾಗಿ ಬರುವ ಪ್ರಸಂಗವಿಲ್ಲ! ದೇವ ಎಂದರೆ ದಿವ್ಯಜನ, ದಿವ್ಯಗುಣ ಎಂದು ಅರ್ಥ ಮಾಡಿಕೊಳ್ಳುವುದಾದರೆ, ಅದಕ್ಕೆ ಬಾಹ್ಯ ಕೊಂಬು, ಕಹಳೆ, ಘಂಟೆ, ಜಾಗಟೆಗಳು ಬೇಕಿಲ್ಲ. ನಿಜವಾದ ಸಜ್ಜನರು (ದೇವಜನರು) ಅದನ್ನೆಂದಿಗೂ ನಿರೀಕ್ಷೆ ಮಾಡುವುದಿಲ್ಲ. ಅಂತರಂಗಶುದ್ಧಿಯಿಂದ ನಮ್ಮೊಳಗೆ ಮೂಡಿಸಿಕೊಳ್ಳಬೇಕಾದ್ದು ದಿವ್ಯಗುಣಗಳು. ಘಂಟೆ-ಜಾಗಟೆಗಳಿಂದ ಮನುಷ್ಯರು ಸಜ್ಜನರಾಗುತ್ತಾರೆ ಎಂಬ ಬುಡರಹಿತ ತರ್ಕವನ್ನು ತಾವು ಮಾಡುವುದಿಲ್ಲ ಎಂದು ಭಾವಿಸಿದ್ದೇನೆ. Concentrationಗೆ ಬೇಕಾದ್ದು "ಏಕಾಗ್ರ", A very fine point. ಯೋಗಶಾಸ್ತ್ರದಲ್ಲಿ ಇದಕ್ಕಾಗಿ "ಭ್ರೂಮಧ್ಯ ಭಾಗ" "ನಾಸಿಕಾಗ್ರ" ಹೇಳಿರುವಾಗ ವಿವಿಧ ಗಾತ್ರದ ಬೊಂಬೆಗಳೇ ಬೇಕೆಂಬುದು ಎಷ್ಟು ಸಮಂಜಸ? ಭಗವಂತನ ಸ್ವರೂಪದ ಬಗ್ಗೆ ವೇದಗಳು ಹೇಳಿರುವುದನ್ನು ಸಾಧಾರವಾಗಿ ನಿಮ್ಮ, ನಿಮ್ಮಂತಹವರ ಮುಂದೆ ಯಥಾಶಕ್ತಿ, ಯಥಾಮತಿ ಮುಂದೆ ಇಡಬಲ್ಲೆ. ಒಪ್ಪುವ, ಒಪ್ಪದಿರುವ, ಭಾಗಶಃ ಒಪ್ಪುವ ನಿಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ಸದಾಕಾಲ ಗೌರವಿಸುತ್ತೇನೆ. ಸತ್ಯದೊಂದಿಗೆ, ಒಂಟಿಯಾಗಾದರೂ ಸರಿ, ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅಥವಾ ಸತ್ಯವೋ, ಮಿಧ್ಯೆಯೋ ಆ ಚಿಂತೆಯಿಲ್ಲದೆ, ಗುಂಪಿನೊಂದಿಗೆ ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅದು ನಿಮ್ಮ ನಿರ್ಣಯಕ್ಕೆ ಬಿಟ್ಟ ವಿಷಯ. ನನ್ನ ವೈಯಕ್ತಿಕ ಆಯ್ಕೆ ಮೊದಲನೆಯದು ಎಂದು ಹೇಳಬೇಕಾದ್ದಿಲ್ಲ! ಅದರ ಫಲಾಫಲಗಳಿಗೆ ಅವರವರೇ ಹೊಣೆ. 
ಉಪನಯನವಿರುವುದೇ ವ್ಯಕ್ತಿಯನ್ನು ಅಹಿಂಸೆ, ಸತ್ಯ, ಅಸ್ತೇಯ ಮೊದಲಾದ ಮಾನವೀಯ ಮೌಲ್ಯಗಳ ಆಧಾರದ ಮೇಲೆ ರೂಪಿಸುವುದೇ ಆಗಿರುವಾಗ,ಅದಕ್ಕೆ ಹೊಂದುವ ನಿಯಮಗಳನ್ನು ಕಡ್ಡಾಯ ಮಾಡುವುದು ಅನಿವಾರ್ಯವಾಗುತ್ತದೆ. ನಿಮ್ಮ ಮಾತು ಹೇಗಿದೆಯೆಂದರೆ, ನ್ಯಾಯಾಧೀಶರಾಗುವವರಿಗೆ, ಪಕ್ಷಪಾತ ಮಾಡಬಾರದು ಎಂಬ ನಿಯಮವನ್ನು ಹೇರಬಾರದು ಎಂಬಂತಿದೆ!! ಅವರನ್ನು ದೂರವಿಡುವ ಪ್ರಶ್ನೆಯಿಲ್ಲ. ಆಹಿಂಸೆಯನ್ನು ಇನ್ನು ಮುಂದಾದರೂ ಪಾಲಿಸುವ ಸಂಕಲ್ಪ ಮಾಡಿದಲ್ಲಿ One and only condition, ಅವರನ್ನು ಎಲ್ಲ ರೀತಿಯಿಂದಲೂ ನಮ್ಮೊಡನೆ ಸೇರಿಸಿಕೊಂಡು ಕೆಲಸ ಮಾಡುತ್ತೇವೆ. ಇಷ್ಟು ವಿಶಾಲವಾದ ಮನೋಭಾವವನ್ನು, ನೀವು ಇಂದು ಸಮರ್ಥಿಸುತ್ತಿರುವ ಯಾವುದೇ ಸಂಪ್ರದಾಯದಲ್ಲಿ ತೋರಿಸಬಲ್ಲಿರಾ? ಅಥವಾ ನೀವಾದರೂ ಪಾಲಿಸಬಲ್ಲಿರಾ? ಇದು 100% ಪ್ರಾಕ್ಡಿಕಲ್. ಅಂತಹ ಪರಿವರ್ತನೆಗೆ ಸಂಕಲ್ಪ ಮಾಡಿದ ಅನೇಕರಿಗೆ ಉಪನಯನ, ವೇದಾರಂಭ ಸಂಸ್ಕಾರಗಳನ್ನು ನೀಡಿ ಅವರು ಯೋಗ್ರ ಪ್ರಜೆಗಳಾಗಿ ಬಾಳುತ್ತಿರುವ ಸಾಕ್ಷಿಗಳು ನಮ್ಮ ಮುಂದಿವೆ. ಕನಿಕರ ಉಪಯೋಗವಿಲ್ಲ ಮಂಜುನಾಥರೇ! ಅಸತ್ಯವನ್ನೇನಾದರೂ ಆಡಿದ್ದರೆ ತಿದ್ದಿ. ತಿದ್ದಿಕೊಳ್ಳುವೆ. ಯಾರಿಗೋ ಅಪ್ರಿಯವಾಗುತ್ತದೆಂದು (Actually ತಿದ್ದಿಕೊಳ್ಳಬೇಕಾದವರು ಅವರಿರಬಹುದು!)ಸತ್ಯವನ್ನು ಆಡುವುದರಿಂದ ಹಿಂದೆ ಸರಿಯುವ ಸಲಹೆ ನೀಡುತ್ತೀರಾ? ಆದಷ್ಟು ಪ್ರಿಯವಾಗಿ ಹೇಳಬೇಕೆಂಬುದನ್ನು ಒಪ್ಪಿಯಾಗಿದೆ, ನಿರಂತರ ಆ ಪ್ರಯತ್ನದಲ್ಲಿದ್ದೇನೆ, ಇತರರಿಗೂ ಅದನ್ನೇ ವಿನಂತಿಸಿಕೊಳ್ಳುತ್ತಿರುತ್ತೇನೆ. ಸಂಗೀತಕ್ಕೆ ಎರಡು ಮುಖ. ರಾಗ-ಭಾವ ಒಂದು ಮತ್ತೊಂದು ಇವುಗಳ ಹಿಂದಿರುವ ಸ+ಹಿತವಾದ ಸಾಹಿತ್ಯ, ಜ್ಞಾನ. ಎರಡೂ ಕೂಡಿದಲ್ಲಿ ಲಾಭ ಹೆಚ್ಚು - ಹಾಡುವವರಿಗೂ, ಕೇಳುವವರಿಗೂ. ಉತ್ತಮ ಸಂಗೀತ ಕೇಳಿದ ಅಣ್ಣ-ತಮ್ಮಂದಿರು ತಮ್ಮ Court case ಹಿಂದಕ್ಕೆ ಪಡೆಯಬೇಕು! ಅತ್ತೆ-ಸೊಸೆ ಜಗಳ ನಿಲ್ಲಬೇಕು!! ಅಪ್ಪ-ಅಮ್ಮ ಮಕ್ಕಳ ನಡುವೆ ಪ್ರೀತಿಯ ವಾತಾವರಣ ನಿರ್ಮಾಣವಾಗಬೇಕು!!! ಕಲ್ಪನೆಯಲ್ಲ, ಸಾಮಗಾನದಿಂದ ಇದನ್ನು ಸಾಧಿಸಬಹುದು. (ಒಂದಷ್ಟು ಪ್ರಯೋಗ, ಪರೀಕ್ಷೆಗಳ ಅಗತ್ಯವಿದೆ. ಆಸಕ್ರ ಸಂಶೋಧಕರಿದ್ದೆರೆ ನನ್ನ ಬಳಿ ಇರುವ ಮಾಹಿತಿಯನ್ನು ನೀಡುತ್ತೇನೆ. ವೇದವೇ ಎಲ್ಲದಕ್ಕೂ ಅಂತಿಮ ಎಂಬುದು ನನ್ನ ನಂಬಿಕೆಯಲ್ಲ. ಸತ್ಯಾಸತ್ಯತೆಯ ಪರೀಕ್ಷೆಗಾಗಿ ಮುಕ್ತಮನಸ್ಸಿನಿಂದ ಯಾರೂ ಬೇಕಾದರೂ ವೇದಗಳ ಅಧ್ಯಯನವನ್ನು ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಮಾಡಿನೋಡಲಿ. ನಿಮ್ಮ ಮಾತುಗಳ ಮೊದಲಲ್ಲಿ ನೀವು ಹೇಳಿದ 'ಪೂರ್ವದಿಂದ ಬಂದುದಕ್ಕೆ' ಸಿಲುಕಿಕೊಂಡೇ, ಅದರ ನೇರಕ್ಕೇ ನಮಗೆ ಉತ್ತರ ಬೇಕು ಎನ್ನುವುದಾದರೆ, 'ಪೂರ್ವದಿಂದ ಬಂದುದು' ಅಂತಿಮವಾಗುವುದಕ್ಕೆ ಏನು ಯೋಗ್ಯತೆ ಪಡೆದಿದೆ ಎಂದು ಪ್ರಶ್ನಿಸದೇ ವಿಧಿಯಿಲ್ಲ! ಇಷ್ಟಂತೂ ನಿಜ ಎಲ್ಲ ಪೂರ್ವಗಳಿಗೂ ಪೂರ್ವವಾದದ್ದೇ ವೇದ = ಜ್ಞಾನ!!!