Pages

Thursday, December 29, 2011

ಭಗವಾನ್ ರಮಣ ಮಹರ್ಷಿಗಳು



ಭಾರತ ದೇಶದಂತಹ ಪುಣ್ಯಭೂಮಿಯಲ್ಲಿ ಅದೆಷ್ಟು ಮಹಾಮಹಿಮರು ಜನ್ಮವೆತ್ತಿ ಈ ನೆಲವನ್ನು ಪಾವನಗೊಳಿಸಿ ಜನ್ಮ ಸಾರ್ಥಕ್ಯ ಮಾಡಿಕೊಂಡು ಅಜರಾಮರರಾಗಿದ್ದರೋ ಲೆಕ್ಕವಿಲ್ಲ . ಇಂತಹ ಮಹಾಮಹಿರಲ್ಲಿ ಭಗವಾನ್ ರಮಣ ಮಹರ್ಷಿಗಳು ಒಬ್ಬರು. 30 ನೆ ಡಿಸೆಂಬರ್ 1879 ರ ಪುಣ್ಯ ದಿನದಂದು ತಾಯಿ ಅಳಗಮ್ಮಾಲ್, ತಂದೆ ಸುಂದರಂ ಐಯೆರ್ರವರ ಸುಪುತ್ರರಾಗಿ ಜನಿಸಿದರು. ಇವರ ಹುಟ್ಟು ಹೆಸರು ವೆಂಕಟರಮಣ. ಈ ಭೂಮಿ ಕಂಡ ಅತ್ಯಂತ ಸರಳ, ಮೌನ ಸಾಧಕ ಮತ್ತು ಶ್ರೇಷ್ಠ ಆತ್ಮಜ್ನಾನಿಗಳಲ್ಲಿ ಒಬ್ಬರೆಂದರೆ, ಅವರೆ ಶ್ರೀ ರಮಣ ಮಹರ್ಷಿಗಳು. ಇವರ ಜನ್ಮ ದಿನದ ಅಂಗವಾಗಿ ಈ ಸಂಕ್ಷಿಪ್ತ ಲೇಖನವನ್ನು ಮಹರ್ಷಿಗಳ ನೆನಪಿನಲ್ಲಿ ಗೌರವಪೂರ್ಣವಾಗಿ ಓದುಗರಿಗೆ ಅರ್ಪಿಸುತ್ತಿದ್ದೇನೆ.
1896 ರ ಒಂದು ದಿನ ವೆಂಕಟರಮಣನಿಗೆ ಆದ ಒಂದು ಅನುಭವ ಈತನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ತನ್ನ ಚಿಕ್ಕಪ್ಪನ ಮನೆಯ ಮಹಡಿಯ ಕೊಟಡಿಯಲ್ಲಿ ಒಬ್ಬನೇ ಮಲಗಿದ್ದಾಗ, ಇದ್ದಕಿದ್ದಂತೆ ಸಾವಿನ ಭೀತಿ ಕಾಣಿಸಿಕೊಂಡಿತು. ಕೆಲವುನಿಮಿಶಗಲ್ಲಿ ದೇಹ ನಿಶ್ಚಲವಾದಂತೆ ಭಾಸವಾಗತೊಡಗಿತು. ಸಾವು ಬಂದಂತೆ ಅನುಭವವಾಯಿತು.
ಆದರೆ ಈ ಎಲ್ಲ ಪ್ರಕ್ರಿಯೆಗಳು ಆತನಿಗೆ ತಿಳಿಯುತ್ತಿತು. ತನ್ನ ಸಾವನ್ನು ತಾನೆ ನೋಡುತ್ತಿರುವಂತೆ ಭಾಸವಾಯಿತು. ಕೆಲವು ಕ್ಷಣಗಳಲ್ಲಿ ಎಲ್ಲವು ಸರಿಯಾಗಿ ಸಹಜ ಸ್ತಿತಿಗೆ ಮರಳಿದರೂ, 'ಸಾವು' ದೇಹಕ್ಕೆ ಆದರೆ ಈ ಸಾವನ್ನು ನೋಡಿದ್ದು ಯಾರು ? ಈ ಚೈತನ್ಯ ವಸ್ತು ಯಾವುದು? ಎಂಬ ಪ್ರಶ್ನೆ 16 ವರ್ಷದ ಬಾಲಕನನ್ನು ಕಾಡಿತು. ವಾರಗಟ್ಟಲೆ ಕಳೆಯಿತು. ಉತ್ತರ ಸಿಗಲಿಲ್ಲ. ಮನಸ್ಸು ಮಾತ್ರ ತುಡಿಯುತ್ತಿತ್ತು. ಒಂದು ದಿನ ಇದ್ದಕ್ಕೆ ಇದ್ದಹಾಗೆ ಯಾರಿಗೂ ಹೇಳದೆ ಮನೆಯನ್ನು ತೊರೆದು ಸತ್ಯವನ್ನು ಅರಸಲು ಹೊರಟ. ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಏನೂ ಗೊತ್ತಿಲ್ಲ. ದೈವಾನುಗ್ರಹ ಈ ಬಾಲಕನನ್ನು ತಿರುವಣ್ಣ ಮಲೈ ಕಡೆಗೆ ಆಕರ್ಷಿಸಿತು. ಸರ್ವಸಂಗ ಪರಿತ್ಯಾಗಿಯಾಗಿ ಸ್ವಸ್ವರೂಪವನ್ನು ಅರಿಯಲು ಅರುಣಾಚಲದ ಗುಹೆಯೊಂದರಲ್ಲಿ ಧ್ಯಾನಾಸಕ್ತನಾದ. ದೇಹಭಾವ ತೊರೆದು ಆತ್ಮಭಾವದಲ್ಲಿ ನೆಲನಿಂತ ಈತನ ಉಗ್ರ ತಪ್ಪಸಿಗೆ ಯಾವುದು ಅಡ್ಡಿಯಾಗಲಿಲ್ಲ. ಕ್ರಿಮಿಕೀಟಗಳು ಕಾಲಿನ ಮತ್ತು ತೊಡೆಯ ಕೆಲವು ಭಾಗಗಳನ್ನು ತಿಂದರು ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿ ಕುಳಿತುಬಿಟ್ಟ. ತಲೆ ಕೂದಲು, ಉಗುರುಗಳು ಊಹೆಮಾಡಲು ಸಾಧ್ಯವಾಗದಷ್ಟು ಬೆಳದು ಬಿಟ್ಟಿದ್ದವು. ನಿತ್ರಾಣನಾಗಿದ್ದ ವೆಂಕಟರಮಣನನ್ನು ಸ್ಥಳೀಯ ವಾಸಿಗಳು ಕಂಡು ಸಂತೈಸಿದರು. ನಿಧಾನವಾಗಿ ಸಹಜಸ್ತಿತಿಗೆ ಬಂದರೂ ಹೆಚ್ಚು ಕಾಲ ಮೌನದಲ್ಲೇ ಇರುತ್ತಿದ್ದ ಈ ಸಾಧಕನನ್ನು ಅರ್ಥಮಾಡಿಕೊಳ್ಳಲು ಸ್ತಳೀಯರಿಗೆ ಸಾಕಷ್ಟು ಸಮಯವೇ ಬೇಕಾಯಿತು.
ದಿನಗಳು ಉರುಳಿದಂತೆ ಈ ಸಾಧಕ ಯುವಕನ ಪ್ರಭಾವಲಯಕ್ಕೆ ಸ್ವಲ್ಪ ಸ್ವಲ್ಪವಾಗಿ ಜನರು ಬರಲು ಪ್ರಾರಂಭ ಮಾಡಿದರು. ಎಷ್ಟೇ ಜನಸಮೂಹ ಇದ್ದರು ಎಲ್ಲರಿಗು ಮೌನವೇ ಉತ್ತರ. ಎಲ್ಲಾ ಸಮಸ್ಯೆಗೂ ಮೌನದಲ್ಲೇ ಉತ್ತರನೀಡುತ್ತಿದ್ದ. ಈ ಮೌನಿಯುವಕನ ಪ್ರಸಿದ್ದಿ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಇಂತಹ ಸಮಯದಲ್ಲಿ ಒಬ್ಬ ಸಾಧಕರು ಈ ಯುವಕನ ಸಾಮಿಪ್ಯಕ್ಕೆ ಬಂದರು.ಇವರೇ ಕಾವ್ಯ ಕಂಠ ಗಣಪತಿ ಮುನಿ . ಇವರು ಈ ಯುವಕನ ಅದ್ಯಾತ್ಮ ಸಾಧನೆಗೆ ಮಾರುಹೋಗಿ "ಭಗವಾನ್ ಶ್ರೀ ರಮಣ ಮಹರ್ಷಿ" ಎಂದು ತುಂಬು ಹೃದಯದಿಂದ ನಾಮಕರಣ ಮಾಡಿದರು. ಅಂದಿನಿಂದ ಈ ಯುವಕ ರಮಣ ಮಹರ್ಷಿ ಆದರು. ಮೌನ ತಪಸ್ಸಿನಿಂದ ಪ್ರತಿ ಕ್ಷಣವೂ ಆತ್ಮಚಿಂತನೆ ಮಾಡುತ್ತಾ ತಮ್ಮನ್ನು ಅರಸಿ ಬಂದವರಿಗೆ ದಿವ್ಯಾನುಗ್ರಹ ಮಾಡುತ್ತಿದ್ದರು. ಮೌನ ಬ್ರಾಹ್ಮಣಮುನಿ ಎಂದು ಪ್ರಸಿದ್ದಿ ಹೊಂದಿದ ಇವರ ದರ್ಶನಕ್ಕಾಗಿ ಬರುವ ಭಕ್ತರ ಸಂಖೆ ದಿನದಿಂದ ದಿನಕ್ಕೆ ಹೆಚ್ಹಾಗ ತೊಡಗಿತು. ದರ್ಶನ ಮಾತ್ರಕ್ಕೆ ಬರುವ ಸಂಖೆಗಿಂತ ತಮ್ಮ ಕಷ್ಟ ಪರಿಹಾರಕ್ಕಾಗಿ ಬರುವವರ ಸಂಖೆ ಜಾಸ್ತಿ ಇತ್ತು. ಆದರೆ ಮಹರ್ಷಿಗಳು ಯಾವುದೇ ಪವಾಡವನ್ನಾಗಲಿ ಮಾಡುತ್ತಿರಲಿಲ್ಲ, ಭವಿಷ್ಯವನ್ನಾಗಲಿ ಹೇಳುತ್ತಿರಲಿಲ್ಲ, ಬದಲಿಗೆ ದಿವ್ಯ ತೇಜಸ್ಸಿನ ತಮ್ಮ ಕಣ್ಣುಗಳ ಮೂಲಕ ಸಾಂತ್ವನ ಹೇಳುತ್ತಿದ್ದರು. ಇದು ಬೇಡಿ ಬಂದವರಿಗೆ ಸಾಕಾಗುತ್ತಿತ್ತು . ದರ್ಶನ ಮಾತ್ರದಿಂದಲೇ ತಮ್ಮ ಮಾನಸಿಕ ಕ್ಲೇಶಗಳು ದೂರವಾಗುತ್ತಿದ್ದವು.
ಮಹರ್ಷಿಗಳು ದಿನದ 24 ಘಂಟೆಗಳು ಭಕ್ತರಿಗೆ ಲಭ್ಯವಾಗಿರುತ್ತಿದ್ದರು. 1896 ರಿಂದ 1950 ರ ತನಕ ಆಶ್ರಮ ಬಿಟ್ಟು ಎಲ್ಲೂ ಹೋಗಲೇ ಇಲ್ಲ. ಹೆಚ್ಚೆಂದರೆ ಎರಡು ಕಿ ಮಿ ದೂರ ಹೋಗಿರಬಹುದು. ಆದರೆ ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರನ್ನು ಸೆಳದುಕೊಂಡರು. ದೇಶ ವಿದೇಶಗಳಿಂದ ಬರುವ ಆಗರ್ಭ ಶ್ರೀಮಂತ ಭಕ್ತನಿಂದ , ಕಡು ಬಡವನವರಗೆ ಒಂದೇ ತೆರನಾದ ಅವಕಾಶ ಮತ್ತು ಆತಿಥ್ಯ ಆಶ್ರಮದಲ್ಲಿ ದೊರೆಯುತ್ತಿತ್ತು. ಮಹರ್ಷಿಗಳು ಎಲ್ಲರೊಟ್ಟಿಗೆ ಕೂತು ಊಟಮಾಡುತ್ತಿದ್ದರು. ಯಾವ ರೀತಿಯ ವಿಶೇಷ ಸವಲತ್ತನ್ನು ಬಯಸದೆ ಸರಳವಾದ ನಡೆ ನುಡಿಗಳನ್ನು ಸ್ವಯಂ ಪಾಲಿಸಿ ಇತರರಿಗೆ ಮಾದರಿಯಾಗಿದ್ದರು. ಮುಂಜಾನೆ 3 ಘಂಟೆಗೆ ಎದ್ದು ಆಶ್ರಮವಾಸಿಗಳಿಗೆ ಊಟ ತಿಂಡಿ ವ್ಯವಸ್ತೆ ಏನಾಗಿದೆ ವಿಚಾರಿಸುತ್ತಿದ್ದರು, ಸ್ವತಹ ಕೂತು ತರಕಾರಿ ಹೆಚ್ಚುತ್ತಿದ್ದರು, ರುಬ್ಬಲು ಸಹಾಯ ಮಾಡುತ್ತಿದ್ದರು, ಕಸ ಗುಡಿಸುವುದರಿಂದ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು.ನಂತರದಲ್ಲಿ ಬರುವ ಭಕ್ತರ ಜೊತೆ ಸಂವಾದ ನಡೆಸುತ್ತಿದ್ದರು. ಪ್ರಾಣಿ, ಪಕ್ಷಿ ಮತ್ತು ಗಿಡ ಮರಗಳನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು. ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ಕೀಳಬೇಡಿ ಎಂದು ಸದಾಕಾಲ ಹೇಳುತ್ತಿದ್ದರು. ಆಶ್ರಮದಲ್ಲಿ ಈಗಲೂ ಕಾಗೆಗೊಂದು, ಹಸುವಿಗೊಂದು, ಮಂಗನಿಗೊಂದು ಸಮಾಧಿ ಇದೆ. ಇದು ಇವರ ಪ್ರಾಣಿ ಪ್ರೇಮವನ್ನು ಹೇಳುತ್ತದೆ.
ಇವರ ವಸ್ತುವಾಗಿ ಕೇವಲ ಒಂದು ಹುಲಿ ಚರ್ಮ, ನೀರಿಗಾಗಿ ಒಂದು ಚೆಂಬು ಮತ್ತು ಆಸರೆಗಾಗಿ ಒಂದು ಊರುಗೋಲು ಬಿಟ್ಟರೆ ಬೇರೇನೂ ಇರಲಿಲ್ಲ. ಸರಳ , ಸಾತ್ವಿಕ,ಸಜ್ಜನರಾದ ಇವರು ಶಾಂತ, ಸಹಜ ಸ್ತಿತಿಯಲ್ಲಿ ಯಾವಾಗಲು ಇರುತ್ತಿದ್ದರು.
1950 ರಲ್ಲಿ ಇವರ ಮೊನಕೈಯಲ್ಲಿ ಆದ ಗಂಟುಗಳು ಇವರನ್ನು ಭಾದಿಸತೊಡಗಿತು. ದೇಶದ ಪ್ರಸಿದ್ದ ವೈದ್ಯರು ಇವರ ಮೊಣಕೈಯನ್ನು ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಆದರು ಯಾವುದೇ ಗುಣ ಕಾಣಲಿಲ್ಲ. ಉಲ್ಬನಗೊಳ್ಳುತ್ತ ಹೋಯಿತು. ಮಹರ್ಷಿಗಳು ದಿನದಿಂದ ದಿನಕ್ಕೆ ಕ್ರುಶವಾಗುತ್ತ ಸಾಗಿದರು. ಯಾತನೆ ಜಾಸ್ತಿಯಾಯಿತು ಆದರೂ ಇವರ ಮುಖ ಮಾತ್ರ ಶಾಂತವಾಗೆ ಇರುತ್ತಿತ್ತು. ಯಾವ ಯಾತನೆಯು ಇಲ್ಲವೇನೋ ಎಂಬಂತೆ ಶಾಂತವಾಗಿ ಮಲಗಿರುತ್ತಿದ್ದರು. ಭಕ್ತರು ಇವರ ದರ್ಶನಕ್ಕೆ ಮುಗಿಬೀಳಲು ಪ್ರಾರಂಭ ಮಾಡಿದರು. ಅಲೋಪತಿ, ಆಯುರ್ವೇದ ಮತ್ತು homeaopathi ಔಷಧಿಗಳು ಕೆಲಸ ಮಾಡಲಿಲ್ಲ. 14 ಏಪ್ರಿಲ್ 1950 ರಂದು ಭಗವಾನ್ ರಮಣರು ತಮ್ಮ ದೇಹವನ್ನು ತ್ಯಾಗ ಮಾಡಿದರು. ಒಂದು ದಿವ್ಯ ಚೇತನ ನಮ್ಮ ಕಣ್ಣಿಂದ ಮರೆಯಾಯಿತು. ಆದರೆ,ರಮಣರ ಸಂದೇಶ ಎಂದೆಂದಿಗೂ ಶಾಶ್ವತ. ಅವರ ಕೃಪೆ ಇಂದಿಗೂ ಲಕ್ಷಾಂತರ ಭಕ್ತಸಮೂಹದ ಮೇಲೆ ಸದಾ ಕಾಲ ನಿತ್ಯ ನೂತನವಾಗಿದೆ. ಇಂತಹ ಆತ್ಮಜ್ನಾನಿಗಳು ಸಾಯುವುದಿಲ್ಲ, ಸದಾಕಾಲ ನಮ್ಮ ಹೃದಯ ಗುಹೆಯಲ್ಲೇ ನೆಲಸಿರುತ್ತಾರೆ.
-ಹೆಚ್.ಏನ್. ಪ್ರಕಾಶ್, ಹಾಸನ 

Saturday, December 24, 2011

ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳು, ನಂಬಿಕೆಗಳನ್ನು ಅಲುಗಿಸುವ ಕೆಲಸ ?

ಇಂದು ವೇದಸುಧೆಯ ಹಳೆಯ ಲೇಖನಗಳನ್ನು ಆಯಾ ಮಾಲಿಕೆಯಡಿಯಲ್ಲಿ ಬರುವಂತೆ ಸರಿಪಡಿಸುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಲೇಖನವನ್ನು  ವೇದಸುಧೆಯ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಇಲ್ಲಿ ಪುನ: ಪ್ರಕಟಿಸುತ್ತಿರುವೆ.
-ಹರಿಹರಪುರ ಶ್ರೀಧರ್

ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನ ಪಥ ಮಾಲಿಕೆಯಲ್ಲಿ ಪಂ. ಸುಧಾಕರ ಚತುರ್ವೇದಿಗಳ ಬರಹಗಳನ್ನು ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ಅದನ್ನು ಓದುತ್ತಿರುವ ನಾನು ಅಲ್ಲಿ ಬರೆದ ನನ್ನ ಅನಿಸಿಕೆಯನ್ನು ಇಲ್ಲಿ ಮುಖ್ಯ ಲೇಖನವಾಗಿ ಪ್ರಕಟಿಸುತ್ತಿರುವೆ. ಸುಧಾಕರ ಶರ್ಮರು ಇದಕ್ಕೆ ಉತ್ತರಿಸಬೇಕೆಂಬುದು ಅಪೇಕ್ಷೆ.
ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯಸಮಾಜಿಗಳನ್ನು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.
-ಹರಿಹರಪುರ ಶ್ರೀಧರ್
--------------------------------------------------
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
--ಡಾ| ಜ್ಞಾನದೇವ್ ಮೊಳಕಾಲ್ಮುರು
-------------------------------------------------
ಆತ್ಮೀಯರಾದ ಡಾ| ಜ್ಞಾನದೇವ್,
ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
-ಹರಿಹರಪುರಶ್ರೀಧರ್

10 ಕಾಮೆಂಟ್‌(ಗಳು):


ಸಾಗರದಾಚೆಯ ಇಂಚರ said...
Good one
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ. ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ. --ಡಾ| ಜ್ಞಾನದೇವ್ ಮೊಳಕಾಲ್ಮುರು
ಹರಿಹರಪುರ ಶ್ರೀಧರ್ said...
ಆತ್ಮೀಯರಾದ ಡಾ| ಜ್ಞಾನದೇವ್, ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
Dr Gnanadev said...
ನಿಜ ಶ್ರೀಧರ್ , ಯಾವುದೇ ಪೂರ್ವಾಗ್ರಹಗಳಿಲ್ಲದೆ ಮುಕ್ತ ಪ್ರಾ೦ಜಲ ಮನಸ್ಸಿನಿ೦ದ ಭಾರತೀಯ ಸ೦ಸ್ಕೃತಿಯ ಎಲ್ಲ ಚಹರೆಗಳನ್ನು , ಎಲ್ಲ ಇತಿಹಾಸವನ್ನು ,ಗುರುತಿಸುವ ಗೌರವಿಸುವ ವಿಮರ್ಶಿಸುವ ವಿಶ್ಲೇಷಿಸುವ ಸುಧಾರಿಸುವ ಪ್ರಾಮಾಣಿಕ ಪ್ರಯತ್ನಗಳು ನಮ್ಮೆಲ್ಲರ ನಡುವೆ ಮೂಡಲಿ. ಆ ಮೂಲಕ ವಿಶ್ವಶಾ೦ತಿಯನ್ನು ಸದಾ ಕೋರುವ ಭಾರತೀಯ ಸ೦ಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಪಾಲ್ಗೊಳ್ಳೋಣ. ಶ್ರೀಧರ್ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಕ್ಕೆ ನನ್ನ ಹ್ಯಾಟ್ಸ್ ಆಫ್!
ಸೀತಾರಾಮ. ಕೆ. / SITARAM.K said...
nice debate
ಹರಿಹರಪುರ ಶ್ರೀಧರ್ said...
ಶ್ರೀ ಸೀತಾರಾಮ್, ನಿಮ್ಮ ಅಭಿಪ್ರಾಯ ತಿಳಿಸಿ.ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಂಡಾಗ ಒಂದಿಷ್ಟು ಬದಲಾವಣೆ ಸಾಧ್ಯ.ನಮ್ಮ ಮನದಲ್ಲಿ ಮೂಡಿದ್ದೆಲ್ಲಾ ಸರಿಯಾಗಿರಬೇಕೆಂದೇನೂ ಇಲ್ಲ.ಆದರೆ ಹಿಂದುಸಮಾಜದಲ್ಲಿನ ಜೊಳ್ಳನ್ನು ಬೇರ್ಪಡಿಸಿ ಸ್ವೀಕರಿಸಬೇಕಾದುದಕ್ಕೆ ಪುಷ್ಟಿಕೊಡುವ ಪಾತ್ರದಲ್ಲಿ ನಮ್ಮೆಲ್ಲರ ಹೊಣೆ ಇದೆ , ಅಲ್ಲವೇ?
SUDHAKARA SHARMA said...
ಮೊದಲಿಗೆ ಒಂದು ಸ್ಪಷ್ಟನೆ. ಸುಧಾಕರ ಶರ್ಮಾ ಆರ್ಯಸಮಾಜಿಯಲ್ಲ, Repeat ಆರ್ಯಸಮಾಜಿಯಲ್ಲ. ವೇದಗಳನ್ನು ಅಧ್ಯಯನ ಮಾಡುತ್ತಿರುವ ಒಬ್ಬ ಸತ್ಯಾನ್ವೇಷಕ ಅಷ್ಟೇ. ಆರ್ಯಸಮಾಜದ ಲೋಪ-ದೋಷಗಳಿಗೆ, ಇತಿ-ಮಿತಿಗಳಿಗೆ ಖಂಡಿತವಾಗಿ ನಾನು ಹೊಣೆಗಾರನಲ್ಲ. ವೇದಗಳ ಪ್ರಚಾರವೊಂದೇ ಆರ್ಯಸಮಾಜದ ಉದ್ದೇಶವಾಗಿರುವುದರಿಂದ ಒಟ್ಟಿಗೆ ಕೆಲಸ ಮಾಡುವುದು ಅನಿವಾರ್ಯ. ಅಷ್ಟೇ ನನ್ನ ಆರ್ಯಸಮಾಜದ ಸಂಬಂಧ. ಇನ್ನು 'ಹಿಂದೂ' ಎಂಬ ಪದ ತೀರಾ ಇತ್ತೀಚಿನದು. ಪ್ರಾಚೀನ ಸಾಹಿತ್ಯಗಳಲ್ಲಿ ಈ ಪದದ ಪ್ರಯೋಗವೇ ಇಲ್ಲ. ಇದರ ಬಗ್ಗೆ ಇನ್ನೂ ದೀರ್ಘವಾದ ಪ್ರತಿಕ್ರಿಯೆ ನೀಡುವವನಿದ್ದೇನೆ. - ಸುಧಾಕರ ಶರ್ಮಾ
ವೇದಸುಧೆ said...
ಶ್ರೀ ಶರ್ಮಾಜಿ, ನಮಸ್ತೆ, ಹಿಂದು ಪದದ ಬಗೆಗೆ ನೀವು ನಿಮ್ಮ ಸುಧೀರ್ಘ ಚರ್ಚೆಯನ್ನು ಆರಂಭಿಸುವ ಮುಂಚೆಯೇ ನನ್ನ ಅಭಿಪ್ರಾಯವನ್ನು ತಿಳಿಸಿ ಬಿಡುತ್ತೇನೆ. ವಿಶ್ವದಲ್ಲಿ ನಮ್ಮ ದೇಶವನ್ನು "ಹಿಂದು ದೇಶ" ಎಂದು ಒಪ್ಪಿಯಾಗಿದೆ. ವೇದದಲ್ಲಿ ಹಿಂದು ಎಂಬ ಪದವು ಇಲ್ಲದಿದ್ದರೂ ಹಿಂದು ಸಮಾಜಕ್ಕೆ ವೇದವೇ ಮೂಲ. ವೇದದಬಗ್ಗೆ ಅಪಾರ ಶ್ರಧ್ಧೆ,ಗೌರವ,ಭಕ್ತಿ ಹಿಂದು ಸಮಾಕ್ಕಿದೆ.ನಮ್ಮನ್ನು ಆರ್ಯರೆಂದರೂ, ಸನಾತನಿಗಳೆಂದರೂ ಹಿಂದುಗಳಿಗೇನೂ ಬೇಸರವಿಲ್ಲ.ಅದೇನೇ ಇರಲಿ, ನಾವೆಲ್ಲಾ ಮಾಡಬೇಕಾದ ಮೊದಲ ಕರ್ತವ್ಯವೆಂದರೆ ನಮ್ಮ ಸಮಾಜದಲ್ಲಿರುವ ಮಾನವವಿರೋಧಿ ಆಚರಣೆಗಳನ್ನು ಕಿತ್ತುಹಾಕುವ ಕೆಲಸ. ಎರಡನೆಯ ಸಂಗತಿಯೆಂದರೆ ಪ್ರತಿಯೊಬ್ಬ ಮನುಷ್ಯನೂ ಅಂತಿಮವಾಗಿ ಬಯಸುವುದು ನೆಮ್ಮದಿಯ ಜೀವನ, ಆನಂದಮಯ ಜೀವನ.ಯಾವ ಜೀವನಮಾರ್ಗದಿಂದ ಮನುಷ್ಯನಿಗೆ ನೆಮ್ಮದಿ ಸಿಗುತ್ತದೋ ಆ ಮಾರ್ಗವನ್ನು ಅವನು ಹುಡುಕಿಕೊಳ್ಳುತ್ತಾನೆ.ಇನ್ನೊಬ್ಬರಿಗೆ ನೋವುಂಟಾಗದಂತೆ ಬದುಕಿದರಾಯ್ತು, ಅಲ್ಲವೇ?
SUDHAKARA SHARMA said...
ಆತ್ಮೀಯರೇ! ವಿಶ್ವದಲ್ಲಿ ನಮ್ಮ ದೇಶವನ್ನು `ಹಿಂದೂ ದೇಶ' ಎಂದು ಒಪ್ಪಿಯಾಗಿದೆ ಎಂದಿರೆ. ನಾವು ಭಾರತೀಯರೇ ಅದನ್ನು ಒಪ್ಪಿಲ್ಲವಲ್ಲ! ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!! This is a Secular Country you know?! ಮೊದಲಿಗೆ ನಮ್ಮ ಭಾರತ ಆರ್ಯಾವರ್ತ. ನಾವು ಮೊದಲಿಗೆ ಆರ್ಯರು. ಈ ಆರ್ಯ ಜಾತಿ, ಜನಾಂಗವಲ್ಲ, ಜೀವನಪದ್ಧತಿ, ಸಂಕ್ಷಿಪ್ತವಾಗಿ ಹೇಳುವುದಾದರೆ, Gentrleman. ಪ್ರಗತಿಶೀಲ, Progressive, ಎಂಬ ಅರ್ಥವೂ ಇದೆ. ಪ್ರಾಚೀನತೆ ಇದೆ. ಇದಕ್ಕೆ ಹೋಲಿಸಿದರೆ ಹಿಂದೂ ಶಬ್ದಕ್ಕೆ ರೂಢಿಯ ಬಲ ಬಿಟ್ಟರೆ ಮಿಕ್ಕಾವ ಬಲವೂ ಇಲ್ಲ. ಅಷ್ಟೇ ಅಲ್ಲ ಅರಾಬಿಕ್/ಪಾರ್ಸಿ ಭಾಷೆಗಳಲ್ಲಿ ಕಳ್ಳ, ದರೋಡೆಕೋರ ಎಂಬರ್ಥಗಳೂ ಇವೆ. ಇಲ್ಲಿಯ ಜನರನ್ನು ಹೀನಾಯವಾಗಿ ಗುರುತಿಸಲು ಬಳಸಿದ ಪದವಿದ್ದಂತೆ ಕಾಣುತ್ತದೆ. ಪದದ ಬಳಕೆಗಿಂತ, ಯಾವ ಪದವು ನಮ್ಮ ಅಂತರಂಗದ ಭಾವನೆಗಳನ್ನು ಚೆನ್ನಾಗಿ, ವೈಜ್ಞಾನಿಕವಾಗಿ ಪ್ರತಿಬಿಂಬಿಸಬಲ್ಲದೋ ಅದು ಸೂಕ್ತವಲ್ಲವೇ? ಆರ್ಯ = ಆರ್ಯಾ ಜ್ಯೋತಿರಗ್ರಾಃ - ಬೆಳಕನ್ನು, ಜ್ಞಾನದ ಬೆಳಕನ್ನು ಮುಂದಿಟ್ಟುಕೊಂಡು ಸಾಗುವ ಸಭ್ಯನೇ ಆರ್ಯ. ಹಿಂದೂ ಎನ್ನುವಾಗಲೂ ನಮ್ಮ ಭಾವನೇ ಇದೇ ಆಗಿದೆಯಲ್ಲವೇ?! ಅಂತಿಮವಾಗಿ, ಪದ ಯಾವುದೇ ಆಗಿರಲಿ, ಮುಕ್ತ ಮನಸ್ಸಿನಿಂದ ಸತ್ಯವನ್ನು ಹುಡುಕುತ್ತಾ, ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ, ಪ್ರಗತಿಶೀಲರಾಗಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುದೇ ಮುಖ್ಯವಲ್ಲವೇ?!
ಹರಿಹರಪುರ ಶ್ರೀಧರ್ said...
ಗೌರವಾನ್ವಿತ ಶರ್ಮಾಜಿ, ಬೃಹಸ್ಪತಿ ಆಗಮದಲ್ಲಿ ಈ ಸಾಲುಗಳಿವೆಯಲ್ಲಾ? ಹಿಮಾಲಯಮ್ ಸಮಾರಭ್ಯ ಯಾವದಿಂಧು ಸರೋವರಮ್| ತಂ ದೇವನಿರ್ಮಿತಮ್ ದೇಶಮ್ ಹಿಂದುಸ್ಥಾನಂ ಪ್ರಚಕ್ಷ್ಯತೇ|| ಈ ಬಗ್ಗೆ ನಿಮ್ಮೊಡನೆ ವಾದ ಮಾಡುವುದಿಲ್ಲ, ಆದರೆ ನನ್ನ ಭಾವನೆಗಳನ್ನು ವಿವರವಾಗಿ ಪ್ರತ್ಯೇಕ ಬರೆಯುವೆ. [ಭಾರತದ ಸಂವಿಧಾನದ ಪ್ರಕಾರ ನಮ್ಮದು ಹಿಂದೂ ರಾಷ್ಟ್ರವೇ ಅಲ್ಲ!! This is a Secular Country you know?!] ಈ ಬಗ್ಗೆಯೂ ನನ್ನ ಭಾವನೆಗಳನ್ನು ಹಂಚಿಕೊಳ್ಳುವೆ. ನಮಸ್ಕಾರಗಳೊಡನೆ -ಶ್ರೀಧರ್

Wednesday, December 21, 2011

ಸತ್ತರು ಎನಲವರು ಹುಟ್ಟಿರಲೇ ಇಲ್ಲ!


     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾಗಿ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
    'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ/ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸೃಷ್ಟಿಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸೃಷ್ಟಿಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ 
ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಆ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಸೃಷ್ಟಿಸಿದ ಅಂದರೆ ಬೇಕು ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು. ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ || (ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು ವ್ಯಕ್ತಿ ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು, ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಯಾವುದೇ ಜೀವಜಂತುವಾಗಿರಬಹುದು! 


ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||
**********************
-ಕ.ವೆಂ.ನಾಗರಾಜ್.
[ಆಧಾರ: ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ]

Friday, December 16, 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!

ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ" ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?
ಅವರು ನಿರುತ್ತರರಾಗಿದ್ದರು.
ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:....... ಮಾ ಕಶ್ಚಿತ್ ದು:ಖ ಭಾಗ್ಭವೇತ್"-ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ? " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?

ಸಮಾನೋ ಮಂತ್ರ: ಸಮಿತಿ: ಸಮಾನೀ
ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ
ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]

ಅಥರ್ವ ವೇದದ ಈ ಮಂತ್ರ ಏನು ಹೇಳುತ್ತದೆ?

ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]

ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ


ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]
ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?
ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?
ಈ ಮಾತು ಹೇಳುವಾಗ ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?
ಎಂತಹಾ ಪ್ರಶ್ನೆ!
ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?
ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?
ಇಡೀ ವಿಶ್ವಕ್ಕೆ ಉತ್ತಮ ಬದುಕು ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು
ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?
-ಹರಿಹರಪುರಶ್ರೀಧರ್

ಸಜ್ಜನರ ವರ್ತನೆ

ಸಜ್ಜನರ ವರ್ತನೆ ಹೇಗಿರುತ್ತೆ? ಚಿಂತಕ ಸೂರ್ಯ ಪ್ರಕಾಶ್ ಪಂಡಿತ್ ಏನ್ ಹೇಳ್ತಾರೆ? ಕೇಳಿ

ದಾನ

ದಾನದ ಬಗ್ಗೆ ಬೆಂಗಳೂರಿನ ಚಿಂತಕ ಸೂರ್ಯ ಪ್ರಕಾಶ್ ಪಂಡಿತ್ ಏನು ಹೇಳ್ತಾರೆ?

Wednesday, December 14, 2011

ಸೇವಾಭಾರತಿ

ನಾನು ನಿನ್ನೆ  ಬರೆದ  ಲೇಖನ ನೋಡಿದ ಕವಿನಾಗರಾಜರು ನಾವು 1994  ರ ಸುಮಾರಿನಲ್ಲಿ ಮಾಡುತ್ತಿದ್ದ ಹಾಸನದ  ಸೇವಾಭಾರತಿಯ     ಚಟುವಟಿಕೆಗಳ   ಬಗ್ಗೆ ತಮ್ಮ ಕವಿಮನದಲ್ಲಿ  ಸಚಿತ್ರ ವರದಿ ಕೊಟ್ಟಿದ್ದಾರೆ. ಸಮಾಜ ಸೇವೆ ಮಾಡುವ ಹಂಬಲ ಇರುವವರಿಗೆ ಪ್ರೇರಣಾ ದಾಯಕವಾಗಿದೆ. ದಯಮಾಡಿ ನೋಡಿ.
http://kavimana.blogspot.com/2011/12/blog-post_6813.html
http://kavimana.blogspot.com/2011/12/blog-post_14.ಹ್ತ್ಮ್ಲ್

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ
ಸೇವಾಭಾರತಿ 

Tuesday, December 13, 2011

ವೇದಕ್ಕೂ ಈ ಬರಹಕ್ಕೂ ಏನು ಸಂಬಂಧ?

ಆತ್ಮೀಯರೇ,
ಇಂದು ನನ್ನ ಲೇಖನ ಒಂದನ್ನು ಪ್ರಕಟಿಸಿರುವೆ. ಸಹಜವಾಗಿ ವೇದಕ್ಕೂ ಈ ಬರಹಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಏಳಬಹುದು. ವೇದ ಎಂದರೆ ಅರಿವು     ಅಲ್ಲವೇ?  ನಮಗೆ ನಮ್ಮ ಸುತ್ತ ಮುತ್ತಲ ಸಮಾಜದ  ಜನರ ಸ್ಥಿತಿ -ಗತಿ ಯ ಅರಿವಿರಬೇಕು. ನಮ್ಮೊಳಗಿಗ-ಹೊರಗಿನ ಎಲ್ಲಾ ಸ್ಥಿತಿಯ ಅರಿವು ನಮಗೆ ಆದಾಗಲೇ ನಮಗೆ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಅಲ್ಲವೇ? ನಾವು ಐಶಾರಾಮಿ ಜೀವನವನ್ನೇ ಅನುಭವುಸುತ್ತಿದ್ದು  ಕೇವಲ ವೇದದ ಮಂತ್ರಗಳನ್ನು ಕಲಿಯುವುದರಿಂದ  ವೇದಾ ಧ್ಯಯನ ಮಾಡುತ್ತಿದ್ದೀನೆಂದರೆ ಅದರಿಂದ ಪ್ರಪಂಚದ ಅರ್ಥವಾಗುವುದಿಲ್ಲ. ಹಾಗಾಗಿ ಈ ಲೇಖನ ವನ್ನು ಸದುದ್ಧೇಶದಿಂದ ನನ್ನ ಮನದ ಭಾವನೆಗಳನ್ನು ಹಂಚಿಕೊಳ್ಳಲು ಬರೆದಿರುವೆ. ಇದು ಯಾರಿಗೂ ಉಪದೇಶವಲ್ಲ. ಪ್ರಯೋಜನವಾಗುವವರಿಗೆ ಪ್ರಯೋಜನ ವಾಗಲಿ ಎಂದಷ್ಟೇ ನನ್ನ ಆಸೆ.

ಅದು ಅವರ ಹಣೆ ಬರಹ!!





                                 [ಚಿತ್ರ ಕೃಪೆ ಗೂಗಲ್ ಅಂತರ್ಜಾಲ ]






            [ಇಲ್ಲೂ ಮನುಷ್ಯರು ಬದುಕ್ತಾರೆ. ಚಿತ್ರ ಕೃಪೆ: ವಿಕಿಪಿಡಿಯಾ ]


ಡಾ||ಕೃಷ್ಣಮೂರ್ತಿಯವರು ತಮ್ಮ ಕೊಳಲು ಬ್ಲಾಗಿನಲ್ಲಿ  "ಜಗವೆಲ್ಲ ಮಲಗಿರಲು" ಎಂಬ ಒಂದು ಲೇಖನವನ್ನು ಬರೆದಿದ್ದಾರೆ. ಅದನ್ನು ಓದಿದಾಗ ನನಗೆ ನಮ್ಮ ಸಮಾಜದ ಸ್ಥಿತಿಗತಿಗಳ ಚಿತ್ರಣ ಮನದಲ್ಲಿ ಮೂಡಿ ಅದರಲ್ಲೇ ಸ್ವಲ್ಪ ಕಾಲ ಮುಳುಗಿಹೋಗಿದ್ದೆ. ಸಾಮಾನ್ಯವಾಗಿ ನಾವೆಲ್ಲಾ  ಭಗವಂತನ ಕೃಪೆಯಿಂದ ಹೊಟ್ಟೆ-ಬಟ್ಟೆಗೆ ನೆಮ್ಮದಿಯಿಂದ ಇರುವವರೆ. ಇರಲು ಎಷ್ಟು ಬೇಕೋ ಅದಕ್ಕಿಂತಲೂ ಸ್ವಲ್ಪ ಹೆಚ್ಚು ಹೊಂದಿರುವವರೇ.[ನಾನು ಈ ಲೇಖನ ಬರೆಯುತ್ತಿರುವುದು ಮಧ್ಯಮ ವರ್ಗದಿಂದ ಮೇಲಿರುವವರಿಗೆ] ಎಲ್ಲರ ಮನೆಯ ದೋಸೆಯೂ ತೂತವೇ ಅನ್ನೋ ಗಾದೆ ಸುಳ್ಲಲ್ಲ. ಭಗವಂತ ನಮಗೆಲ್ಲಾ  ಎಷ್ಟು ಕೊಟ್ಟಿದ್ದರೂ ಅಕಾರಣವಾಗಿ ಮನೆಯಲ್ಲಿ  ನಾವು ಸಮಾಧಾನವನ್ನು ಹಾಳುಮಾಡಿಕೊಂಡು ಜೀವನವನ್ನು ವ್ಯರ್ಥಮಾಡಿಕೊಂಡಿರುತ್ತೇವೆ. ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರಿಗೂ ಇರುವ ಕಾಮನ್ ಸಮಸ್ಯೆ ಎಂದರೆ  ಪತಿಪತ್ನಿಯರಲ್ಲಿ  ಒಬ್ಬರಿಗೆ ಚಿನ್ನ, ಬೆಳ್ಳಿ, ಬಟ್ಟೆ, ಮತ್ತು ಮನೆಯ ಅಲಂಕಾರಿಕ ವಸ್ತುಗಳಿಗೆ ಎಷ್ಟು ಹಣ ವ್ಯಯ ಮಾಡಿದರೂ ಸಮಾಧಾನವಿರುವುದಿಲ್ಲ. ಮತ್ತೊಬ್ಬರಿಗೆ ಅಯ್ಯೋ ಅನ್ಯಾಯವಾಗಿ ಇವಕ್ಕೆಲ್ಲಾ ದುಡ್ದು ಖರ್ಚುಮಾಡಿ ಮನೆಯಲ್ಲಿ ತುಂಬಿಕೊಂಡು ಸಮಾಧಾನ ಕೆಡಸಿಕೊಳ್ಳ  ಬೇಕಲ್ಲಾ!  ಎಂದು . ಒಬ್ಬರಿಗೆ ಮನೆಯಲ್ಲಿ ಎಷ್ಟಿದ್ದರೂ ಇನ್ನೂ ಬೇಕೆನುವ ಸ್ವಭಾವವಿದ್ದರೆ ಮತ್ತೊಬ್ಬರಿಗೆ, ಸಮಾಜದಲ್ಲಿ ಹಸಿದ ಜನರನ್ನು ಕಂಡು ಕನಿಕರದಿಂದ ನೀಡುವ ಸ್ವಭಾವ!!
ಕುಟುಂಬ ದಲ್ಲಿ ಎಲ್ಲರ ಸ್ವಭಾವವೂ ಒಂದೇ ಆಗಿರ ಬೇಕೆಂದೇನೂ ಇಲ್ಲ. ಕೆಲವರ ಮನೆಗಳು ಇದಕ್ಕೆ ವಿರುದ್ಧವಾಗಿಯೂ ಇರಬಹುದು. ಪತಿ-ಪತ್ನಿಯರಿಬ್ಬರಿಗೂ ನೀಡುವ ಸ್ವಭಾವ ಇರಬಹುದು, ಅಥವಾ ಪತಿ-ಪತ್ನಿಯರಿಬ್ಬರಿಗೂ ಕೊಳ್ಳು ಬಾಕ ಸಂಸ್ಕೃತಿಯ  ಕೂಡಿಹಾಕಿಕೊಳ್ಳುವ ಸ್ವಭಾವವಿರಬಹುದು.ಇವತ್ತಿನ ಮಕ್ಕಳಿಗಂತೂ ಎಷ್ಟೇ ಬಟ್ಟೆ ಕೊಂಡರೂ ಸಮಾಧಾನವಿಲ್ಲ. ಒಟ್ಟಿನಲ್ಲಿ ಹೀಗೆ ಮನಸ್ಸಿಗೆ ನೆಮ್ಮದಿ ಹಾಳಾಗಲು ಒಂದಿಲ್ಲೊಂದು ವಿಚಾರ ನಮ್ಮನ್ನು ಕಾಡ್ತಾ ಇರುತ್ತೆ.
ಯಾಕೆ ಹೀಗಾಗುತ್ತೆ, ಅಂದ್ರೆ ಸಮಾಜದ ಬಗ್ಗೆ ನಮಗಿರುವ ಅಜ್ಞಾನ. ಮನೆ ಬಿಟ್ಟು ಹೊರಗೆ ಸುತ್ತಬೇಕು. ಸುತ್ತಬೇಕು ಅಂದ ತಕ್ಷಣ ಸಾಮಾನ್ಯವಾಗಿ ಮನೆ ಮಂದಿಗೆಲ್ಲಾ ಅನ್ನಿಸೋದು ಬಿಗ್ ಬಝಾರ್, ಹೋಟೆಲ್, ಸಿನೆಮಾ, ಪಾರ್ಕು, ಚಿನ್ನ ಬೆಳ್ಳಿ ಅಂಗಡಿ, ಅಥವಾ ಯಾವ್ಯಾವುದೋ ಮಾಲ್ ಗಳು. ಅಥವಾ ದೇವಸ್ಥಾನಗಳು, ಪುಣ್ಯ ಕ್ಷೇತ್ರಗಳು, ಮಠ ಮಂದಿರಗಳು. ಇದು ಬಿಟ್ಟು ಬೇರೆ ಎಲ್ಲಾದರೂ ಹೆಜ್ಜೆ ಹಾಕಿದ್ದೀವಾ? ನನ್ನನ್ನೂ ಸೇರಿಸಿಕೊಂಡೇ ಈ ಮಾತು. ನಾನು ಒಮ್ಮೊಮ್ಮೆ ಹೀಗೆ ಮಾಡುವುದುಂಟು.  ಸಮಯ ಸಿಕ್ಕಾಗ ನಮ್ಮ ಹತ್ತಿರದ ಕೊಳೆಗೇರಿ ಯಲ್ಲಿ ಒಂದು ರೌಂಡ್ ಹಾಕಿ ಬಂದಿದ್ದುಂಟು. ಆಗೆಲ್ಲಾ ಸಿ೦ಬಳ ಸುರಿಸಿಕೊಂಡು, ನಿಕ್ಕರ ತೊಡದೆ ರಸ್ತೆಯಲ್ಲಿ ಚಿರಂಡಿ  ಬದಿಯಲ್ಲಿ ಓಡಾಡುವ ಮಕ್ಕಳು. ಬಿಸಲು ಕಾಯಿಸುತ್ತಾ ಕುಳಿತಿರುವ ಚಿಂದಿ ಬಟ್ಟೆ ಉಟ್ಟ ಮುದುಕರು. ಸಾಮಾನ್ಯವಾಗಿ ಆ ಮನೆಗಳ ಪ್ರಾಯಸ್ತರು ಗಾರೆ ಕೆಲಸ, ಬಣ್ಣ ಹೊಡೆಯುವ ಕೆಲಸ, ಗಾಡಿಯಲ್ಲಿ ತರಕಾರಿ ಮಾರುವ ಕೆಲಸ, ಹೀಗೆ ಯಾವುದೋ ಕೆಲಸದ ಮೆಲೆ ಹೊರ ಹೋಗಿದ್ದರೆ ಕೇರಿಯಲ್ಲಿರುವವರ ಸ್ಥಿತಿ ಹೀಗಿರುತ್ತೆ. ಇದನ್ನೆಲ್ಲಾ ನೋಡಿ ಮನ ಕರಗಿ ಮನೆಯಲ್ಲಿ ಮಾತನಾಡಿದರೆ ಸಾಮಾನ್ಯವಾಗಿ ರಿಯಾಕ್ಷನ್ ಏನು ಗೊತ್ತಾ? ಅವರಿಗೆಲ್ಲಾ ಸರ್ಕಾರ ಎಷ್ಟು ಮಾಡುತ್ತೆ! ಎಷ್ಟು ಮಾಡಿದ್ರೂ ಇಷ್ಟೆ!! ಅದು ಅವರ ಹಣೆ ಬರಹ!! 
ಅಯ್ಯೋ ಅನ್ನಿಸುತ್ತೆ. ಯಾರ ಹಣೆ ಬರಹ ಯಾರೂ ತಿದ್ದಲಾಗದು. ಆದರೆ ನಮಗೆ ಭಗವಂತನು ಏನಾದರೂ ಸ್ವಲ್ಪ ವಿದ್ಯೆ ಅಂತಾ ಕೊಟ್ಟಿದ್ದರೆ ಅದರ ವಿನಿಯೋಗ ಹೇಗಾಗಬೇಕು? ಕನಿಷ್ಟ ಒಬ್ಬಿಬ್ಬರನ್ನಾದರೂ ಪರಿವರ್ತಿಸಲು ನಮ್ಮಿಂದಾಗದೇ? ನಮ್ಮ ಕೈಲಾದ ಸಹಾಯವನ್ನು ಒಂದು ಕುಟುಂಬಕ್ಕಾದರೂ ಮಾಡಲು ನಮಗೆ ಸಾಧ್ಯವಿಲ್ಲವೇ? 
ನಮಗೆ ಬೇಕಿರುವುದು ಏನು? 
  ಕೊಳೆಗೇರಿ ಜನರೂ ಕೂಡ ನಮ್ಮಂತೆ ಮನುಷ್ಯರು, ನಮ್ಮ ಅಣ್ಣ ತಮ್ಮಂದಿರು            ಎನಿಸಿದರೆ ಮೊದಲ ಹಂತವಾಗಿ ನಾವು ನಮ್ಮ ವಾಕಿಂಗ್ [ನಿತ್ಯವೂ ಗಾಳಿ ಸೇವನೆಗಾಗಿ ಮಾಡ್ತೀವಲ್ಲವೇ?] ವಾರಕ್ಕೊಮ್ಮೆಯಾದರೂ ಅಲ್ಲಿ ಮಾಡಬೇಕು. ಕಣ್ಣಾರೆ ಅಲ್ಲಿಯ ಜನರನ್ನು ನೋಡಬೇಕು. ಅಯ್ಯೋ ಎನಿಸಿದರೆ ಯಾರ ಬಗ್ಗೆ ಅನ್ನಿಸುತ್ತೋ ಅವರ  ಮನೆ ಹತ್ತಿರ ನಾಲ್ಕಾರು ದಿನ ಓಡಾಡಿ ಪರಿಚಯ ಮಾಡಿಕೊಳ್ಳಬೇಕು. ನಮ್ಮ ಪ್ರಯತ್ನಕ್ಕೆ ಎಟುಕದಿದ್ದರೆ ದುಸ್ಸಾಹಸ ಮಾಡುವ ಅಗತ್ಯವಿಲ್ಲ. ಆದರೆ ಪರಿಚಯ ಬೆಳೆದು ನಾವು ಆ ಕುಟುಂಬಕ್ಕೆ ಏನಾದರೂ ಕಿಂಚಿತ್ ಸಹಾಯ ಮಾಡಿ ಆ ಮನೆಯ ಜನರ ಸ್ಥಿತಿಯನ್ನು ಕೊಂಚ ಮೇಲೆತ್ತಬಹುದೆಂದು ನಮಗೆ ಅನ್ನಿಸಿದರೆ ಏನು ಮಾಡ ಬಹುದೆಂದು ನಮಗೇ ತೋಚುತ್ತದೆ.

ಎಚ್ಚರ ವಿರಲಿ
ಈಗ್ಗೆ  ಹತ್ತು ಹದಿನೈದು ವರ್ಷಗಳ ಮುಂಚೆ ಕವಿನಾಗರಾಜರು ಮತ್ತು ನಮ್ಮ  ಹಲವು ಮಿತ್ರರು ಸೇರಿ ಹಾಸನದಲ್ಲಿ " ಸೇವಾಭಾರತೀ"ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ನಾನು ಕೆಲಸ ಮಾಡುತ್ತಿದ್ದ ಕೆ.ಇ.ಬಿ. ಕಚೇರಿ ಸಮೀಪದ ಸಿದ್ದಯ್ಯ ನಗರವೆಂಬ ಕಲೊನಿಯಲ್ಲಿ  ಪ್ರತೀ ತಿಂಗಳು ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಸಿದೆವು. ಸುಮಾರು ವರ್ಷಕ್ಕಿಂತಲೂ ಹೆಚ್ಚು ಕಾಲ. ನಮಗೆ ಸಮಾಧಾನವೆಂದರೆ ಆ ಸಮಯದಲ್ಲಿ ಆ ಕಾಲೊನಿಯಲ್ಲಿ ಹಲವರಿಗಿದ್ದ " ಕಜ್ಜಿ" ರೋಗದ ನಿರ್ಮೂಲನೆ ಮಾಡಲು ಸಾಧ್ಯವಾಯ್ತು. ನಮ್ಮೊಡನೆ ಮಿತ್ರರಾದ ಡಾ|| ಗುರುರಾಜ ಹೆಬ್ಬಾರ್ ಅವರು ತಮ್ಮ ಸಿಬ್ಬಂಧಿಗಳೊಡನೆ ತಮ್ಮದೇ ಆದ ವಾಹನದಲ್ಲಿ ಬಂದು ಉಚಿತವಾಗಿ ರಕ್ತ ,ಮೂತ್ರ, ಬಿಪಿ ,ಇಸಿಜಿ ಎಲ್ಲವನ್ನೂ ಪರೀಕ್ಷಿಸಲು ತಪಾಸಣಾ ಕೇಂದ್ರವನ್ನೆ ತಾತ್ಕಾಲಿಕವಾಗಿ ತೆರೆಯುತ್ತಿದ್ದರು. ಮತ್ತೊಬ್ಬ ವೈದ್ಯರಾದ ಡಾ|| ವೀರಭದ್ರಪ್ಪನವರು ತಮ್ಮ ಮೆಡಿಕಲ್ ಶಾಪ್ ನಲ್ಲಿ ಅಗತ್ಯವಾದ ಎಲ್ಲಾ ಔಷ ಧಿಯನ್ನು ಉಚಿತವಾಗಿ ಒದಗಿಸುತ್ತಿದ್ದರು. ಅದನ್ನೆಲ್ಲಾ ವ್ಯವಸ್ಥೆ ಮಾಡಲು ಶ್ರೀ ಕವಿನಾಗರಾಜ್, ಲಕ್ಷ್ಮಣ್ ಮತ್ತು ನಾನು ಸೇರಿ, ಮೂವರ ತಂಡ. ವ್ಯವಸ್ಥಿತವಾಗಿ ಕೆಲವು ವರ್ಷಗಳು ಈ ಸೇವೆ ನಡೆಯಿತು. ಆದರೆ ಸಿದ್ದಯ್ಯ ನಗರದಲ್ಲಿ ಯಾರೋ ಒಬ್ಬರ ಬಾಯಲ್ಲಿ ಬಂದ ಮಾತು" ಸರ್ಕಾರದೋರು ನಿಮಗೆ ಎಷ್ಟು ಕೊಡ್ತಾರೆ?" ಅದರಲ್ಲಿ ಏನಾದರೂ ಉಳಿದರೆ ನಮಗೂ ಹಂಚಿ ಎಂಬುದು ಅವರ ಮಾತು.
ನಿಸ್ವಾರ್ಥವಾಗಿ ಕೆಲಸ ಮಾಡಿದ್ದ ನಮಗೆ ಆ ಒಂದು ಮಾತು ಬೇಸರವನ್ನೂ ತಂದಿತ್ತು. ಹೀಗೆ ಸಮಾಜ ಸೇವೆ ಮಾಡುವಾಗ ಇದೆಲ್ಲಾ ಇದ್ದದ್ದೇ. ಆದರೆ ನಾವು ನಾವೇನೋ ಮಹಾನ್ ಕಾರ್ಯ ಮಾಡುತ್ತಿದ್ದೇವೆಂದು ಭಾವಿಸುವುದಕ್ಕಿಂತಲೂ  ನಮಗಿಂತ ಕೆಳಗಿನವರ ಜೀವನದ ಪರಿಚಯ ನಮಗೆ ಆದಾಗ ನಮ್ಮ ಮನೆ ಮಂದಿ ಜೀವನವನ್ನು ಅರ್ಥ ಮಾಡಿಕೊಂಡು    ಸಂತೃಪ್ತವಾಗಿ ಜೀವನ ನಡೆಸ ಬಲ್ಲರು. ಅದಕ್ಕಾಗಿಯಾದರೂ ನಾವು ನಮಗಿಂತ  ಆರ್ಥಿಕವಾಗಿ ಸಾಮಾಜಿಕವಾಗಿ ಕೆಳಗಿರುವವರ ಕಾಲೊನಿಗಳ ಹಾದಿ ತುಳಿಯಬೇಕು.

Monday, December 12, 2011

ಸ್ವಾಮಿ ಕೃತಾತ್ಮ ನಂದರೊಡನೆ

ಯೋಚಿಸಲೊ೦ದಿಷ್ಟು...೪೭

೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿಗೊಳಿಸುವುದರಲ್ಲಿಯಾಗಲೀ ಇಲ್ಲ!!
೨. “ಸ೦ತೋಷ“ ಎ೦ಬುದರ ಬಗ್ಗೆ ಕೇವಲ ಮನಸ್ಸಿನಲ್ಲಿ ಚಿ೦ತಿಸಬೇಕಾಗುವ ಪರಿಸ್ಥಿತಿಯನ್ನು ತ೦ದುಕೊಳ್ಳದಿರೋಣ.. “ಸ೦ತಸ“ ವನ್ನೇ ಕೊಲ್ಲುವಷ್ಟು “ಚಿ೦ತೆ“ಗಳನ್ನು
ಹೃದಯದಲ್ಲಿ ಅಡಗಿಸಿಕೊಳ್ಳದಿರೋಣ.
೩. ಟೀಕೆಗಳು ಸಾಧಕರನ್ನು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ!!
೪. ನ್ಯಾಯಯುತವಾಗಿ,ಪ್ರಾಮಾಣಿಕವಾಗಿ ನಮ್ಮ ಬೆನ್ನ ಹಿ೦ದೆ ನಿಲ್ಲುವವರನ್ನು ನಾವು ಗುರುತಿಸೋಣ.
೫. ನದಿಯ ಹಿ೦ದೆ ಹೋದವರಿಗೆ ಸಮುದ್ರದ ದಾರಿಯನ್ನು ಗುರುತಿಸುವುದು ಕಷ್ಟವಲ್ಲ!
೬. ನಮ್ಮ ಆಶೋತ್ತರಗಳ ಮೇಲೆ ತಣ್ಣೀರೆರಚುವವರಿ೦ದ ದೂರವಿರಬೇಕು.
೭. ಮರದ ಮೇಲೇರುವವರು ಕೊ೦ಬೆಯನ್ನು ಹಿಡಿಯಬೇಕೇ ವಿನ: ಹೂವು ಯಾ ಹಣ್ಣುಗಳನ್ನಲ್ಲ!!
೮. ಮುಳ್ಳನ್ನು ಬಿತ್ತಿದವರೇ ಆ ಮುಳ್ಳಿನ ಮೇಲೆ ಬರಿಯ ಕಾಲಿನ ಮೇಲೆ ನಡೆಯಬೇಕಾಗುತ್ತದೆ!!
೯. “ ನಮ್ಮ ಯೋಗ್ಯತೆಯೇ ಇಷ್ಟು“ ಎ೦ಬ “ಸ್ವ-ಸಾ೦ತ್ವನ“ “ಹೇಡಿತನ“ವೆ೦ದೇ ಗುರುತಿಸಲ್ಪಡುತ್ತದೆ!
೧೦. ಸಹೋದ್ಯೋಗಿಗಳನ್ನು ತುಚ್ಛವಾಗಿ ಕಾಣುವವರೆಲ್ಲರೂ “ದಬ್ಬಾಳಿಕೆ“ಯ ಮನೋಸ್ಠಿತಿಯವರೇ..
೧೧. ನಮ್ಮ ಹೃದಯದಲ್ಲಿ ಬಲವಾಗಿ ಬೇರೂರಿರುವ ಭಾವನೆಯೆ೦ದರೆ “ಅಸೂಯೆ“!
೧೨. ಅಭಿಪ್ರಾಯ ಬೇಧವೆಲ್ಲಾ ವಿರೋಧಕ್ಕೆ ಕಾರಣವಲ್ಲ!
೧೩. ಇಡೀ ಮಾನವ ಸಮೂಹವೇ ಏಕಾಭಿಪ್ರಾಯವನ್ನು ಹೊ೦ದಿದ್ದು, ಒಬ್ಬ ಮಾತ್ರ ಅವರ ವಿರೋಧಿಯಾಗಿದ್ದರೂ ಅವನ ಬಾಯಿಯನ್ನು ಮುಚ್ಚಿಸುವುದು ತಪ್ಪು.. ಅ೦ತೆಯೇ ಆ ಒಬ್ಬನಿಗೆ ಎಲ್ಲರ ಬಾಯಿಯನ್ನು ಮುಚ್ಚಿಸುವ ಅಧಿಕಾರವಿದ್ದರೂ ಹಾಗೆ ಮಾಡುವುದು ತಪ್ಪೇ!! ಜೆ.ಎಸ್. ಮಿಲ್
೧೪. ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಬೇಕು.. ಬೇಡದನ್ನು ಕ೦ಡಾಗ ಮಾತು ಕಡಿಮೆಯಾಗಬೇಕು!
೧೫. “ ಮೌನದ ಮಹತ್ವ ಮನಗ೦ಡಾಗ ಜಗತ್ತಿನ ಅನೇಕಾನೇಕ ವಿವಾದ-ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ “- ಡಿ.ವೀರೇ೦ದ್ರ ಹೆಗ್ಗಡೆ

Sunday, December 11, 2011

ವೇದಸುಧೆಯ ರಚನೆಯಲ್ಲಿ ಸ್ವಲ್ಪ ಬದಲಾವಣೆ

ವೇದಸುಧೆಯ   ಆತ್ಮೀಯ ಅಭಿಮಾನಿಗಳೇ , ವೇದಸುಧೆಯ  ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹೆಡ್ಡರ್ ಅಡಿಯಲ್ಲಿದ್ದ ಪುಟಗಳಿಂದ ಅಷ್ಟಾಗಿ ಪ್ರಯೋಜನ ಇರಲಿಲ್ಲ. ಅಲ್ಲದೆ ಆಯಾ ಪುಟಗಳಿಗೆ ಸೇರ್ಪಡಿಸುವುದು ತ್ರಾಸದ ಕೆಲಸವಾಗಿತ್ತು. ಹಾಗಾಗಿ ಆ ಪುಟಗಳನ್ನು ತೆಗೆದು ಬದಲಿಗೆ ಅದೇ ಜಾಗದಲ್ಲಿ ಮಾಲಿಕೆಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ  ನೀವು ನೋಡಬೇಕಾದ ಮಾಲಿಕೆಯ ಎಲ್ಲಾ  ಬರಹಗಳನ್ನೂ  ಒಂದೇ ಪುಟದಲ್ಲಿ ತೆರೆಯಬಹುದಾಗಿದೆ. ಇದರಿಂದ  ನಿಮಗೆ ಅನಾನುಕೂಲವಾದರೆ ದಯಮಾಡಿ ತಿಳಿಸಿ.
-ಹರಿಹರಪುರ ಶ್ರೀಧರ್
ಸಂಪಾದಕ 

ದ್ವಿತೀಯ ವಾರ್ಷಿಕೋತ್ಸವ

ಆತ್ಮೀಯರೇ,
ಬರುವ ಫೆಬ್ರವರಿ ಮಾಸಕ್ಕೆ ವೇದಸುಧೆಯು ಮೂರನೇ ವರ್ಷಕ್ಕೆ ಕಾಲಿಡಲಿದೆ. ಫೆಬ್ರವರಿ ಮಾಸದಲ್ಲಿ ಅದರ ದ್ವಿತೀಯ ವಾರ್ಷಿಕೋತ್ಸವ  ಮಾಡಬೇಕು. ಈ ಬಗ್ಗೆ ನಿಮ್ಮ ಸಲಹೆಗಳನ್ನು  ವೇದಸುಧೆಗೆ ಬರೆಯುವಿರಾ?
-ಹರಿಹರಪುರಶ್ರೀಧರ್ 

Saturday, December 10, 2011

ಮನದಲಿ ಮೂಡಿಬಂದ ಭಾವನೆಗಳು


ಇಂದು ಭಗವಾನ್ ಶ್ರೀಧರಸ್ವಾಮಿಗಳ ಜನ್ಮದಿನ. ಸಾಮಾನ್ಯವಾಗಿ ಬೆಳಿಗ್ಗೆ ನನ್ನ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಕಂಪ್ಯೂಟರ್ ಮುಂದೆ ಕೂರುವ ನಾನು ಇಂದೇಕೋ ನೆಟ್ ತೆರೆಯಬೇಕೆನಿಸಿತು. ತೆರೆದರೆ  ವಿ.ಆರ್. ಭಟ್ಟರು ತಮ್ಮ ಬ್ಲಾಗಿನಲ್ಲಿ  ಭಗವಾನ್ ಶ್ರೀಧರ ಸ್ವಾಮಿಗಳ ಬಗ್ಗೆ ಲೇಖನ ಒಂದನ್ನು  ಬರೆದಿರುವ ಬಗ್ಗೆ ನನ್ನ ಬ್ಲಾಗಿನಲ್ಲೇ ಗೊತ್ತಾಯ್ತು. ಕ್ಲಿಕ್ಕಿಸಿದೆ.  ಭಗವಾನರ ದರ್ಶನವಾಯ್ತು. ಲೇಖನವನ್ನು ಓದಿ ಭಗವಾನರನ್ನು ಮನದಲ್ಲಿ ತುಂಬಿಕೊಂಡು ಹೋಗಿ ಸ್ನಾನ ಮುಗಿಸಿ ಅಗ್ನಿಹೋತ್ರ     ಮಾಡಲು   ಕುಳಿತೆ. ಅಗ್ನಿಹೋತ್ರವನ್ನು ಮುಗಿಸಿ ಕಣ್ಮುಚ್ಚಿ ಕುಳಿತೆ. ಮನದಲ್ಲೆಲ್ಲಾ ಭಗವಾನರೇ ತುಂಬಿದ್ದರು. ಅವರ ದರ್ಶನವಾಗಿತ್ತು. ಮನದಲ್ಲಿ ಮೂಡಿಬಂದ  ಪದಗಳಿಂದ ಭಗವಾನರನ್ನು ಸ್ತುತಿಸಿದೆ. ತೋಚಿದ ರಾಗದಲ್ಲಿ ಹಾಡಿದ್ದೆ. ಅದನ್ನೇ ರೆಕಾರ್ಡ್ ಮಾಡಿಕೊಂಡು ನಮ್ಮ ಲಲಿತಳ ಧ್ವನಿಯಲ್ಲಿ ರೆಕಾರ್ಡ್                  ಮಾಡಿಸಬೇಕೆಂದು ಕೊಂಡೆ, ಅದಾಗಲೇ ಅವಳೂ ಅವಳ  ಪತಿಯೊಡನೆ   ನಮ್ಮ ಮನೆಗೆ ಹಾಜರ್. ಭಗವಾನರೇ ಕರೆಸಿದ್ದಾರೆ. ಅವಳ ಧ್ವನಿಯಲ್ಲಿ ಇದೀಗ  ರೆಕಾರ್ಡ ಮಾಡಿಕೊಂಡು ಪ್ರಕಟಿ ಸಿರುವೆ. ಭಗವಾನರನ್ನು  ಕಂಡಾಗ ನನ್ನ ಮನದಲಿ ಮೂಡಿಬಂದ  ಭಾವನೆಗಳು ಇಲ್ಲಿವೆ.


ಕಂಡೆನಾ ಗೋವಿಂದನಾ
ನನ್ನೊಳಗೆ ನಾ ಕಂಡೇನಾ ಗೋವಿಂದನಾ||

ಅಲ್ಲಲ್ಲಿ ಸುತ್ತಾಡಿ ಎಲ್ಲೆಲ್ಲೊ ಓಡಾಡಿ
ಎಲ್ಲೂ ಕಾಣದ ಅವನ ಇಲ್ಲೇ   ಕಂಡೇ ||

ಗೋವಿಂದನಾ ಕಂಡೆ ಮೃಷ್ಟಾನ್ನ  ನಾ ಉಂಡೆ
ಗಂಗಾ ಯಮುನೆಯರ ತೀರ್ಥದಲಿ ನಾ ಮಿಂದೆ||

ಅಗ್ನಿಯ ಶಾಖ ಕಂಡೆ,ಜ್ಯೋತಿಯ ಬೆಳಕ ಕಂಡೆ
ಆಕಾಶದಲ್ಲಿ  ನಾ ಹಕ್ಕಿಯಂತೆ ಹಾರಿದಂತೆ||

ನೀರಿನಲ್ಲಿ ಮೀನುಗಳು ಈಜಿದಂತೆ ಕಂಡೆ
ಲತೆಯ ಕಮಲಗಳು   ಅರಳಿದಂತೆ ಕಂಡೆ  ||

ಅಮ್ಮನ ಮಡಿಲಲ್ಲಿ  ಕಂದನು ಮಲಗಿದಂತೆ
ಕರುವು ಹಸುವಿನ ಹಾಲ  ಕುಡಿವಂತೆ||

Friday, December 9, 2011

ವೇದಸುಧೆಯ ಅಂಕಿಅಂಶಗಳು

ಇಂದಿನಂತೆ ವಿಶ್ವದಲ್ಲಿ ವೇದಸುಧೆಯನ್ನು  ವೀಕ್ಷಿಸಿರುವ ಅಂಕಿಅಂಶಗಳು ಇಲ್ಲಿವೆ.
ಭಾರತ
38205
ಅಮೇರಿಕಾ ಸಂಯುಕ್ತ ಸಂಸ್ಥಾನ
3796
ಸಂಯುಕ್ತ ಅರಬ್ ಎಮಿರೇಟಸ್
964
ಮಲೇಶಿಯಾ                                                                             272                                                                                                                         
ರಶಿಯಾ
259
ಬ್ರಿಟನ್/ಇಂಗ್ಲೆಂಡ್
252
ಕೆನಡಾ
204
ಸಿಂಗಪುರ
202
ಓಮನ್
157
ದಕ್ಷಿಣ ಕೋರಿಯಾ                                                                          114                                                                                   

Thursday, December 8, 2011

ನನ್ನ ಆಕಾಶಯಾನ




  ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು ಶುಭ್ರ ಆಗಸವನ್ನು ನೋಡುತ್ತಾ ಕುಳಿತಿದ್ದೆ. ನೋಡುತ್ತಾ ನೋಡುತ್ತಾ ಹೋದಂತೆ ಆಕಾಶ ಮಂದಹಾಸ ಬೀರುತ್ತಾ ತೆರೆದುಕೊಳ್ಳುತ್ತಾ ಹೋಯಿತು. ಹೊರಗಣ್ಣು, ಒಳಗಣ್ಣುಗಳನ್ನು ಅಗಲಿಸಿ ವಿಸ್ಮಯದಿಂದ ನೋಡುತ್ತಿದ್ದ ನಾನು ಒಂದು ರೀತಿಯ ಅನಿರ್ವಚನೀಯ ಭಾವಪರವಶತೆಗೆ ಒಳಗಾಗಿದ್ದೆ. ಮನದೊಳಗೆ ಅರಿವಿಲ್ಲದಂತೆ ಮಂಥನ ಆರಂಭಗೊಂಡಿತ್ತು. ಆಕಾಶ ಎಂದಾಕ್ಷಣ ಅಚಾನಕವಾಗಿ ಮೇಲೆ ನೋಡುತ್ತೇವೆ. ಹಾಗಾದರೆ ಆಕಾಶ ಮೇಲೆ ಇದೆಯೇ? ಮೇಲೆ ಇದ್ದರೆ ಎಷ್ಟು ಮೇಲೆ ಇದೆ? ನಾವು ಅದನ್ನು ಕಾಣಲು ಎಷ್ಟು ಮೇಲೆ ಹೋದರೂ ಅದು ಅಷ್ಟೂ ಅಷ್ಟೂ ಮೇಲೆಯೇ ಹೋಗುತ್ತದಲ್ಲಾ! ಹಾಗಾದರೆ ಅದು ಮರೀಚಿಕೆಯೇ? ಹಾಗಾದರೆ ನಾವು ಕಾಣುವ ಆಕಾಶ ಅನ್ನುವುದಾದರೂ ಏನು? ಅದು ನಿಜಕ್ಕೂ ಇದೆಯೇ? ಇಲ್ಲ ಎನ್ನಲಾಗುವುದಿಲ್ಲ, ಆಕಾಶ ಇದೆ. ಆದರೆ ಅದು ಹೇಗಿದೆ? ಕಂಡೂ ಕಾಣದ ಆಕಾಶ ನಿಜಕ್ಕೂ ಒಂದು ಅದ್ಭುತ. ಆಕಾಶವನ್ನು ವೈಜ್ಞಾನಿಕವಾಗಿ ವಿವರಿಸಲು ಮಾನವನಿಗೆ ಶಕ್ಯವೆಂದು ನನಗೆ ಅನ್ನಿಸುತ್ತಿಲ್ಲ. ವೈಜ್ಞಾನಿಕವಾಗಿ ವಿವರಿಸಲು ಬರುವುದಿಲ್ಲವೆಂದು ಆಕಾಶವನ್ನು ಇಲ್ಲವೆಂದು ಹೇಳಲಾಗುವುದೆ? ಕಣ್ಣಿಗೆ ಕಾಣುವುವದನ್ನು ವಿಸ್ತರಿಸಿ ಏನು ಹೇಳಬಹುದೆಂದರೆ ಇಡೀ ಬ್ರಹ್ಮಾಂಡದ ವ್ಯಾಪ್ತಿ ಎಷ್ಟು ವಿಶಾಲವೋ, ವಿಸ್ತಾರವೋ ಅಷ್ಟೂ ವಿಸ್ತಾರದಲ್ಲಿ ಆಕಾಶ ಆವರಿಸಿದೆಯೆಂದು ಮಾತ್ರ ಹೇಳಬಹುದು.  
    ಆಕಾಶ ಅಂದರೇನು? ಗೊತ್ತಿಲ್ಲ. ಆಕಾಶ ಎಷ್ಟು ದೊಡ್ಡದು? ಗೊತ್ತಿಲ್ಲ. ಆಕಾಶ ಹೇಗಿದೆ? ಗೊತ್ತಿಲ್ಲ. ಚಂದ್ರ ಎಲ್ಲಿದ್ದಾನೆ? ಆಕಾಶದಲ್ಲಿದ್ದಾನೆ. ಭೂಮಿ ಎಲ್ಲಿದೆ? ಅದೂ ಆಕಾಶದಲ್ಲಿದೆ. ಚಂದ್ರನ ಮೇಲೆ ನಿಂತವರಿಗೆ ಭೂಮಿ ಆಕಾಶದಲ್ಲಿರುವಂತೆ ಕಾಣುತ್ತದೆ. ಈರೀತಿ ಯೋಚಿಸಿದಾಗ ಗೊತ್ತಾಗುತ್ತದೆ, ಆಕಾಶ ಮೇಲೆ ಮಾತ್ರ ಇಲ್ಲ, ಎಲ್ಲೆಲ್ಲೂಇದೆ. ಎಲ್ಲೆಲ್ಲೂ ಅಂದರೆ ಎಲ್ಲೆಲ್ಲೂ! ಈ ಜಗತ್ತು/ವಿಶ್ವ/ಬ್ರಹ್ಮಾಂಡ ಎಂದರೆ ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನಲ್ಲ. ಇಂತಹ ಅಸಂಖ್ಯ ಭೂಮಿ, ಸೂರ್ಯ, ಚಂದ್ರ, ಎಣಿಕೆಗೆ ಸಿಕ್ಕದ ಬೃಹತ್ ನಕ್ಷತ್ರಗಳ ಬೃಹತ್ ಸಮೂಹ ಇದರಲ್ಲಿದೆ. ಅಲ್ಲೆಲ್ಲಾ ಆವರಿಸಿರುವುದು ಈ ಆಕಾಶವೇ! ಅಂದರೆ ನಾವೂ ಆಕಾಶದಲ್ಲೇ ಇದ್ದೇವೆ. ಆಕಾಶ ನಮ್ಮನ್ನು ಹೊಂದಿಕೊಂಡೇ ಇದೆ! ನಾವಷ್ಟೇ ಏಕೆ, ಎಲ್ಲಾ ಚರಾಚರ, ಜೀವ, ನಿರ್ಜೀವ ವಸ್ತುಗಳನ್ನೂ ಆಕಾಶ ಆವರಿಸಿದೆ. ಅಂದರೆ ಆಕಾಶ ಸರ್ವವ್ಯಾಪಿ. ಅದು ಇಲ್ಲದ ಸ್ಥಳವೇ ಇಲ್ಲ. ಜೀವಿಗಳ ದೇಹ ಪಂಚಭೂತಗಳಿಂದ - ಜಲ, ವಾಯು, ಅಗ್ನಿ, ಭೂಮಿ ಮತ್ತು ಆಕಾಶ -ಗಳಿಂದ ಆಗಿರುವುದೆಂಬುದು ಅಂಗೀಕೃತವಾದ ವಿಚಾರ. ಅಂದರೆ ಆಕಾಶ ನಮ್ಮೊಳಗೂ ಇದೆ, ಹೊರಗೂ ಇದೆ. ಒಳಗೂ ಇರುವ, ಹೊರಗೂ ಇರುವ, ಎಲ್ಲೆಲ್ಲೂ ಇರುವ, ಅದು ಇಲ್ಲದ ಸ್ಥಳವೇ ಇರದಿರುವುದು ಆಕಾಶ ಎಂದು ಅನ್ನಿಸಿದಾಗ ನಾನು ಒಂದು ರೀತಿಯ ಆನಂದಾನುಭೂತಿ ಅನುಭವಿಸಿದೆ. ನಾವು ಆಕಾಶವನ್ನು ಕಾಣದಿರಬಹುದು. ಆದರೆ ಆಕಾಶ ಸದಾ ನಮ್ಮನ್ನು ನೋಡುತ್ತಿರುತ್ತದೆ. ಆಕಾಶದ ಕಣ್ಣು ತಪ್ಪಿಸಿ ಯಾರಾದರೂ ಏನಾದರೂ ಮಾಡಲು ಸಾಧ್ಯವೇ? ಏನಾದರೂ ನಡೆಯಲು ಸಾಧ್ಯವೇ?  ಪರಮಾತ್ಮನನ್ನು ವರ್ಣಿಸುವಾಗ ಅವನು ಸರ್ವವ್ಯಾಪಿ, ಅವನಿಲ್ಲದ ಸ್ಥಳವೇ ಇಲ್ಲ, ಅವನು ಒಳಗೂ ಇದ್ದಾನೆ, ಹೊರಗೂ ಇದ್ದಾನೆ, ಎಲ್ಲೆಲ್ಲೂ ಇದ್ದಾನೆ, ಇತ್ಯಾದಿ ಹೇಳುವುದನ್ನು ಕೇಳಿದ್ದೇವೆ. ಅವನ ಗಮನಕ್ಕೆ ಬಾರದಂತೆ ಏನೂ ಜರುಗಲು ಸಾಧ್ಯವಿಲ್ಲವೆಂದು ಹೇಳುವುದನ್ನು ಕೇಳಿದ್ದೇವೆ. ಈ ವಿಶ್ವ ಬ್ರಹ್ಮಾಂಡವನ್ನು ನಿಯಂತ್ರಿಸುವ ವಿರಾಟ್ ಶಕ್ತಿಯ ಕುರಿತು ವೇದದಲ್ಲಿ ಹೀಗೆ ಹೇಳಿದೆ:
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ || (ಯಜು. ೪೦.೫.)                   
     ಇದರ ಅರ್ಥ, ಅದು ವಿಶ್ವಕ್ಕೆ ಗತಿ ನೀಡುತ್ತದೆ, ಅದು ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಇದೆಲ್ಲದರ ಹೊರಗೂ ಇದೆ. 
     ಈ ಎಲ್ಲಾ ಗುಣಗಳು ಆಕಾಶಕ್ಕೆ ಇರುವುದರಿಂದ ಆಕಾಶವನ್ನು 'ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು' ಎಂದು ಭಾವಿಸಬಹುದೆಂದು ಅನ್ನಿಸಿದಾಗ ನನಗೆ ಏನೋ ಬೆಳಕು ಹೊಳೆದಂತಾಯಿತು. ಸ್ವಾಮಿ ವಿವೇಕಾನಂದರು ತಾವು ಭೇಟಿಯಾದ ಎಲ್ಲಾ ಸಾಧು-ಸಂತ-ಸನ್ಯಾಸಿಗಳನ್ನು ಒಂದು ಪ್ರಶ್ನೆ ಕೇಳುತ್ತಿದ್ದರು - "ಸ್ವಾಮಿ, ತಾವು ದೇವರನ್ನು ಕಂಡಿದ್ದೀರಾ?" ಇದೇ ಪ್ರಶ್ನೆಗೆ ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ್ದ ಉತ್ತರವೆಂದರೆ -"ಹೌದು, ನಾನು ಕಂಡಿದ್ದೇನೆ. ದೇವರೊಂದಿಗೆ ಮಾತನ್ನೂ ಆಡಿದ್ದೇನೆ". ಈ ಪ್ರಸಂಗದ ಕುರಿತು ಚರ್ಚೆ ಇಲ್ಲಿ ಅಪ್ರಸ್ತುತವೆನಿಸೀತು. ನಾನಂತೂ ಪರಮಾತ್ಮನನ್ನು ಕಂಡಿಲ್ಲ, ಆದರೆ ಪರಮಾತ್ಮ ನನ್ನನ್ನು ಕಂಡಿದ್ದಾನೆ, ಕಾಣುತ್ತಿದ್ದಾನೆಂದು ನನಗೆ ಖಾತ್ರಿಯಾಗಿದೆ. ನನ್ನ ಅರಿವಿನ ಪರಿಮಿತಿಯಲ್ಲಿ ಪರಮಾತ್ಮನ ಇರುವಿಕೆಯ ರೀತಿಯನ್ನು ಅರ್ಥೈಸಿಕೊಂಡಿದ್ದೇನೆಂದು ಭಾವಿಸಿದ್ದೇನೆ. (ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ಇವನಿಗೂ ಮನೆಯ ತಾರಸಿ ಮೇಲೆ ಕುಳಿತು ಆಕಾಶ ನೋಡುತ್ತಾ ಜ್ಞಾನೋದಯವಾಗಿರಬೇಕು ಎಂದು ತಮಾಷೆ ಮಾಡುವುದಾದರೆ ಅಥವ ಇವನಿಗೆ ಬುದ್ಧಿಭ್ರಮಣೆಯಾಗಿರಬಹುದೆಂದು ಯಾರಾದರೂ ಅಂದುಕೊಂಡರೆ ನನ್ನ ಅಭ್ಯಂತರವಿಲ್ಲ).
      ಆಕಾಶ ಇಂತಹ ಸ್ಥಳದಲ್ಲಿ ಇದೆ, ಇಂತಹ ಸ್ಥಳದಲ್ಲಿ ಇರುವುದಿಲ್ಲವೆಂದು ಹೇಳಲಾಗುವುದಿಲ್ಲ. ಜೀವಿಗಳು ವಾಸವಿರಲು ಸಾಧ್ಯವೇ ಇರದ ಸ್ಥಳದಲ್ಲೂ ಅದಿದೆ, ಧಗಧಗಿಸುವ ಅಗ್ನಿಯ ಜೊತೆಗೂ ಇದೆ, ಭೋರ್ಗರೆಯುವ ಸಮುದ್ರ, ಸಾಗರಗಳಿರುವಲ್ಲೂ ಇದೆ. ಆಕಾಶವನ್ನು ಬೆಂಕಿ ಸುಡಲಾರದು, ನೀರು ತೋಯಿಸಲಾರದು, ಅದನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಅದನ್ನು ಯಾರೂ ಏನೂ ಮಾಡಲಾರರು. ಬ್ರಹ್ಮಾಂಡದ ಸೃಷ್ಟಿಯ ಜೊತೆಗೂ ಅದು ಇರುತ್ತದೆ, ಪ್ರಳಯ, ವಿನಾಶ ಕಾಲದಲ್ಲೂ ಅದು ಇರುತ್ತದೆ. ಅದಕ್ಕೆ ಪ್ರಾರಂಭವಿಲ್ಲ, ಕೊನೆಯಿಲ್ಲ, ಅರ್ಥಾತ್ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಪರಮಾತ್ಮನನ್ನೂ ಹೀಗೆಯೇ ಇದ್ದಾನೆ ಅನ್ನುತ್ತೇವಲ್ಲವೇ? ಹಾಗಾದರೆ ದೇವರು ಆಕಾಶರೂಪದಲ್ಲಿ ಪ್ರಕಟನಾಗಿದ್ದಾನೆ ಅನ್ನಬಹುದಲ್ಲವೇ? ದೇವರ ವಿಶ್ವರೂಪ ದರ್ಶನವೆಂದರೆ ಇದೇ ಅಲ್ಲವೇ? ಒಳಗಣ್ಣಿದ್ದು ತೆರೆದು ನೋಡಬಲ್ಲವರು ಈ ವಿಶ್ವರೂಪವನ್ನು ಅವರ ಶಕ್ತ್ಯಾನುಸಾರ ಕಂಡಾರು. ನಿಜವಾಗಿ ದೇವರ ಪ್ರತಿನಿಧಿ ಎಂದು ಆಕಾಶವನ್ನು ಹೆಸರಿಸಬಹುದೇ ಹೊರತು, ಯಾವುದೇ ವ್ಯಕ್ತಿ ಅಥವ ಜೀವಿಯನ್ನು, ವಸ್ತುವನ್ನು ಇಂತಹ ಅಗಾಧ ಶಕ್ತಿಯ ಪ್ರತಿನಿಧಿ ಎಂದು ಹೇಳುವುದು, ದೇವರ ಮಗ ಅನ್ನುವುದು, ದೇವರ ರೂಪದಲ್ಲಿ ಕಾಣುವುದು ಸಮಂಜಸವೆನಿಸುವುದಿಲ್ಲ. ಎಲ್ಲರಲ್ಲೂ ಅವನ ಅಂಶವಿರುವುದರಿಂದ ಆ ವಿಶಾಲಾರ್ಥದಲ್ಲಿ ತೆಗೆದುಕೊಳ್ಳಬಹುದೇ ಹೊರತು, ಯಾರನ್ನೇ ಆಗಲಿ ದೇವರಂತೆ ಭಾವಿಸುವುದು ಸೂಕ್ತವಲ್ಲ. ನಾಶವಿರದ ಭಗವಂತನನ್ನು ನಾಶವಾಗಬಹುದಾದ ಸಂಗತಿಗಳಲ್ಲಿ ಗುರುತಿಸುವುದು ಎಷ್ಟರ ಮಟ್ಟಿಗೆ ಸರಿಯಾದೀತು? ಬೇಕಾದರೆ ದೇವಮಾನವರು, ಮಹಿಮಾವಂತರು, ವಿಶೇಷ ಶಕ್ತಿಯುಳ್ಳವರು, ಹೀಗೆ ಭಾವಿಸಬಹುದು.
   ಆಕಾಶದ ಗುಣ ಹೇಗಿದೆ? ಅದಕ್ಕೆ ಗುಣವೇ ಇಲ್ಲ, ನಿರ್ಗುಣ. ಅದಕ್ಕೆ ಮಮಕಾರವೂ ಇಲ್ಲ, ಅಹಂಕಾರವೂ ಇಲ್ಲ. ಭೇದ-ಭಾವ ಮಾಡುವುದೇ ಇಲ್ಲ. ಜಾತಿ, ಮತ, ಪಂಥಗಳ ಕಟ್ಟಿಲ್ಲ. ಆ ದೇಶ, ಈ ದೇಶ ಅನ್ನುವುದು ಇಲ್ಲ. ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಇದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮಿಕ ಸತ್ಯ. ಕೆಟ್ಟವರು, ಒಳ್ಳೆಯವರು, ಜೀವಿ, ನಿರ್ಜೀವಿ ಎಂದು ಎಣಿಸುವುದೇ ಇಲ್ಲ. ಯಾರು ಏನೇ ಮಾಡಿದರೂ ಅಡ್ಡಿಪಡಿಸುವುದಿಲ್ಲ, ಪ್ರೋತ್ಸಾಹಿಸುವುದೂ ಇಲ್ಲ. ಎಲ್ಲಾ ಆಗು-ಹೋಗುಗಳಿಗೆ, ಕ್ರಿಯೆಗಳಿಗೆ ಅದು ಕೇವಲ ಸಾಕ್ಷಿಯಾಗಿರುತ್ತದೆ. ಖಾಲಿ ಆಕಾಶವನ್ನು ಯಾವುದರಿಂದಲಾದರೂ ತುಂಬಿ ಭರ್ತಿ ಮಾಡಲು ಸಾಧ್ಯವಿದೆಯೇ? ಇಲ್ಲ, ಎಷ್ಟು ತುಂಬಿದರೂ, ಏನನ್ನು ತುಂಬಿದರೂ ಅದು ಭರ್ತಿಯಾಗುವುದೇ ಇಲ್ಲ. ಹಾಗೆಯೇ ನಾವು ಆಕಾಶವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಹೊರಟರೂ ಅದು ಆಕಾಶವಾಗಿಯೇ, ಗೂಢವಾಗಿಯೇ ಉಳಿಯುತ್ತದೆ. ಆಕಾಶ ನಮ್ಮನ್ನು ಅರಗಿಸಿಕೊಳ್ಳುತ್ತದೆ. ನಾವು ಆಕಾಶವನ್ನಲ್ಲ. ಆಕಾಶ ನಮ್ಮ ಅಹಂ, ಮನಸ್ಸು, ಯೋಚನೆಗಳು, ಚಿಂತನೆಗಳು, ಜ್ಞಾನ, ಅಜ್ಞಾನ, ಎಲ್ಲವನ್ನೂ, ಎಲ್ಲಾ ಅಂದರೆ ಎಲ್ಲವನ್ನೂ, ನುಂಗಿ ನೀರು ಕುಡಿಯಬಲ್ಲುದು, ಅರ್ಥಾತ್ ಅರಗಿಸಿಕೊಳ್ಳಬಲ್ಲದು. ಪರಮಾತ್ಮ 'ನಿರ್ಮಮೋ ನಿರಹಂಕಾರಃ' ಎಂಬುದನ್ನು ತೋರ್ಪಡಿಸಿಕೊಂಡಿರುವುದು ಆಕಾಶದಿಂದಲೇ. ಆಕಾಶವನ್ನು ತೃಪ್ತಿ ಪಡಿಸಲು ಯಾವ ಪೂಜೆ ಮಾಡಬೇಕು? ಯಾವ ಪ್ರಾಣಿಯ ಬಲಿ ಕೊಡಬೇಕು? ಯಾವ ನೈವೇದ್ಯ ಇಡಬೇಕು? ಏನೂ ಮಾಡಬೇಕಿಲ್ಲ. 'ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟದ್ದಕ್ಕೆ ಕೆಟ್ಟದ್ದು' ಎಂಬುದು ಜ್ಞಾನಿಗಳು, ಸಾಧಕರು ಹೇಳುವ ಮಾತು. ಪುನರ್ಜನ್ಮವನ್ನು ನಂಬದವರೂ ಸಹ ದೇವರು ಒಂದು 'ನಿರ್ಣಾಯಕ ದಿನ'ದಂದು ಎಲ್ಲಾ ಜೀವಿಗಳಿಗೆ ಅವರ ಕರ್ಮಕ್ಕನುಸಾರವಾಗಿ ಫಲ ಕೊಡುತ್ತಾನೆಂದು ನಂಬುತ್ತಾರೆ. ಪುನರ್ಜನ್ಮವನ್ನು ನಂಬುವವರಿಗೆ ಪೂರ್ವಾರ್ಜಿತ ಕರ್ಮದ ಅನುಸಾರ ಮುಂದಿನ ಜನ್ಮವೆಂದು ಹೇಳುತ್ತಾರೆ. ಒಟ್ಟಿನಲ್ಲಿ ನಾವು ಒಳ್ಳೆಯ ರೀತಿ ಬಾಳಬೇಕೆಂಬುದು ನೀತಿ. ಹಾಗೆ ಮಾಡಲು ಏನು ಅಡ್ಡಿ? ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ. ನಮ್ಮ ಕಷ್ಟ-ನಷ್ಟಗಳಿಗೆ, ಒಳಿತು-ಕೆಡಕುಗಳಿಗೆ ದೇವರು ಕಾರಣನಲ್ಲ, ನಾವೇ ಎಂಬುದು ಆಕಾಶ ತನ್ನ ಇರುವಿಕೆಯ ರೀತಿಯಿಂದ ಹೇಳುತ್ತಿದೆಯೆಂದು ಅನ್ನಿಸುವುದಿಲ್ಲವೇ?
    ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಗಳನ್ನು ಮೇಲೆತ್ತಿ 'ದೇವರೇ ಕಾಪಾಡಪ್ಪಾ' ಅನ್ನುತ್ತೇವೆ. ಅಂದರೆ ದೇವರು ಮೇಲೆ ಇದ್ದಾನೆ ಎಂದು ಅಂದುಕೊಳ್ಳುತ್ತೇವೆ, ಆಕಾಶವನ್ನೂ ಮೇಲೆ ಇದೆ ಎಂದು ಭಾವಿಸಿದಂತೆ. ಆಕಾಶವನ್ನು ಬೆಟ್ಟ-ಗುಡ್ಡಗಳ ಮೇಲೆ, ರಾತ್ರಿಯಲ್ಲಿ ಮಿನುಗುವ ಚಂದ್ರ-ತಾರೆಗಳ ಹಿನ್ನೆಲೆಯಲ್ಲಿ ಕಾಣುವ ಸುಂದರ ದೃಷ್ಯಗಳ ರೀತಿಯಲ್ಲಿ ಕಾಣುವ ನಾವು ದೇವರೂ ವೈಕುಂಠ, ಕೈಲಾಸ, ಇತ್ಯಾದಿ ಬೇರೆಯೇ ಲೋಕಗಳಲ್ಲಿದ್ದಾನೆಂದು ಭಾವಿಸುತ್ತೇವೆ. ಕಾಶಿ, ಬದರಿ, ಕನ್ಯಾಕುಮಾರಿ, ಮೆಕ್ಕಾ, ಜೆರುಸಲೇಮ್, ಇತ್ಯಾದಿ ಸ್ಥಳಗಳು ದೇವರು ಇರುವ ವಿಶೇಷ ಸ್ಥಳಗಳೆಂದುಕೊಳ್ಳುತ್ತೇವೆ. ಆಕಾಶವನ್ನು ಮೇಲೆ ಮಾತ್ರ ಇದೆ ಎಂದು ಅಂದುಕೊಳ್ಳುವ ನಾವು ಅದು ನಮ್ಮೊಡನೆಯೇ ಇದೆ ಎಷ್ಟು ಜನ ಭಾವಿಸುತ್ತೇವೆ? ಕೈಗೆ ಸಿಗಲಾರದ ವಸ್ತುವನ್ನು ಗಗನಕುಸುಮವೆಂದು ವರ್ಣಿಸುತ್ತೇವೆ. ಆದರೆ, ಸದಾ ನಮ್ಮನ್ನು ಹೊಂದಿಕೊಂಡೇ ಇರುವ, ಆವರಿಸಿರುವ ಆಕಾಶವನ್ನು ಗಮನಿಸದ ನಾವುಗಳೇ ನಿಜವಾದ ಗಗನಕುಸುಮಗಳು. ಅಶನ, ವಸನ, ವಸತಿಗಳನ್ನು ಕರಣಿಸುವ ಭೂಮಿ ನಮ್ಮ ತಾಯಿಯಾದರೆ, ಸದಾ ನಮ್ಮೊಡನಿದ್ದು ನಮ್ಮನ್ನು ಗಮನಿಸುವ ಆಕಾಶ ನಮ್ಮ ತಂದೆ! ನಮ್ಮೊಂದಿಗಿದ್ದರೂ ತನ್ನ ಇರುವನ್ನು ಪ್ರಕಟಿಸದ, ನಮ್ಮ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸದ, ಜಗತ್ತನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟಿರುವ ಆಗಸಕ್ಕಿಂತ ಹೆಚ್ಚು ವಾತ್ಸಲ್ಯಮಯಿ ತಂದೆ ಬೇರೆ ಯಾರಾದರೂ ಇರಲು ಸಾಧ್ಯವೇ?
      ನಾಟಕದಲ್ಲಿ ವಿವಿಧ ಪಾತ್ರಧಾರಿಗಳು ನಾಟಕ ಆಡುವಾಗ ಪಾತ್ರಗಳೇ ಆಗಿ ಅನುಭವಿಸಿ ಆಡಿದರೂ ನಾಟಕ ಮುಗಿದ ನಂತರ ವಾಸ್ತವ ವ್ಯಕ್ತಿಗಳಾಗುತ್ತಾರೆ. ಆದರೆ ನಿಜ ಜೀವನ ನಾಟಕದಲ್ಲಿ? 'ಜಗದೀಶನಾಡುವಾ ಜಗವೇ ನಾಟಕರಂಗ' ಎಂಬ ಹಾಡು ಕೇಳಿದ್ದೇವೆಲ್ಲವೇ? ಈ ನಾಟಕರಂಗದ ಅದ್ಭುತ ಪರದೆ ಆಕಾಶ! ಈ ಪರದೆಯ ಮುಂದೆ ನಾವು-ನೀವೆಲ್ಲರೂ ಪಾತ್ರಧಾರಿಗಳೇ. ನಮ್ಮ ಪಾತ್ರಗಳನ್ನು ನಾವು ಎಷ್ಟು ತನ್ಮಯರಾಗಿ ನಿರ್ವಹಿಸುತ್ತೇವೆಂದರೆ ನಾವು ಆ ಪಾತ್ರಗಳೇ ಆಗಿಬಿಡುತ್ತೇವೆ. ನಾವು ನಿಜವಾಗಿ ಯಾರು ಎಂದು ತಲೆಕೆಡಿಸಿಕೊಳ್ಳುವುದೇ ಇಲ್ಲ, ಮತ್ತು ಪಾತ್ರವಲ್ಲದೆ ನಾವು ಬೇರೆ ಎಂದು ಅಂದುಕೊಳ್ಳುವುದೇ ಇಲ್ಲ.  ಈ ಜೀವನ ನಾಟಕದಲ್ಲಿ ನಮ್ಮದು ಕೆಲ ಸೀಮಿತ ಅವಧಿಗೆ ಬಂದು ಹೋಗುವ ಪಾತ್ರವಾಗಿದ್ದರೂ ನಾವು ಶಾಶ್ವತರೆಂದು ಅಂದುಕೊಂಡು, ನಮ್ಮ ಇರುವಿಕೆಯನ್ನು ಶಾಶ್ವತಗೊಳಿಸಲು, ನಮ್ಮತನವನ್ನು ಅಚ್ಚೊತ್ತಲು ಜೀವನ ಪೂರ್ತಿ ತೊಡಗಿಕೊಳ್ಳುತ್ತೇವೆ!
    ಒಂದು ಮೂಲವಸ್ತು ಯಾವ ಕಾಲಕ್ಕೂ ನಾಶವಾಗುವುದಿಲ್ಲವೆಂದು ರೂಪಾಂತರ ಮಾತ್ರ ಹೊಂದುವುದೆಂದು ವಿಜ್ಞಾನ ಹೇಳುತ್ತದೆ. ನಮ್ಮ ದೇಹ ಪಂಚಭೂತಗಳಿಂದ ಆಗಿದ್ದು ಆ ದೇಹಕ್ಕೆ ಅರ್ಥ ಕೊಡುವ ಒಂದು ಶಕ್ತಿ ಜೀವಾತ್ಮ. ಸತ್ತ ನಂತರದಲ್ಲಿ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ಜೀವಾತ್ಮ? ಅದಕ್ಕೆ ನಾಶವಿಲ್ಲ. ನಂತರದಲ್ಲಿ ಅದು ಹೊಸ ಶರೀರವನ್ನು ಕಂಡುಕೊಳ್ಳುತ್ತದೆ ಎಂದು ತಿಳಿದವರು ಹೇಳುತ್ತಾರೆ. ವೈಜ್ಞಾನಿಕವಾಗಿ ಚಿಂತಿಸಿದರೂ ಪಂಚಭೂತಗಳಿಗೆ ಸೇರದ ಜೀವಾತ್ಮ ಯಾವುದಾದರೂ ರೂಪದಲ್ಲಿ ಇರಲೇಬೇಕಲ್ಲವೆ? ಈ ಎಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾಗುವುದು ಆಕಾಶವೊಂದೇ! ಇದ್ದದ್ದು ಆಕಾಶದಲ್ಲಿ, ಹೋದದ್ದು ಆಕಾಶದಲ್ಲಿ, ಬರುವುದೂ ಆಕಾಶದಲ್ಲಿ! ಇದನ್ನು ವೈಜ್ಞಾನಿಕ ಆಸ್ತಿಕವಾದವೆನ್ನಬಹುದು.
      "ರೀ, ಎಷ್ಟು ಹೊತ್ತು ಅಲ್ಲೇ ಕುಳಿತಿರುತ್ತೀರಿ? ಕತ್ತಲಾಯಿತು, ಒಳಗೆ ಬನ್ನಿ" ಎಂಬ ಕರೆ ನನ್ನನ್ನು ಎಚ್ಚರಿಸಿತು. ಆಕಾಶದಿಂದ ಭೂಮಿಗೆ ಬಂದೆ. ನನ್ನ ಆಕಾಶಯಾನ ಅಲ್ಲೇ ಮೊಟಕಾಯಿತು. ಇನ್ನೊಮ್ಮೆ ದೀರ್ಘ ಆಕಾಶಯಾನ ಮಾಡಬೇಕೆಂಬ ಇಚ್ಛೆಯೊಂದಿಗೆ ಮನೆಯೊಳಗೆ ಸೇರಿಕೊಂಡೆ.
**************
-ಕವಿ ನಾಗರಾಜ್