Pages

Monday, March 2, 2015

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 5


ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನದಲ್ಲಿ ಹರಿಹರಪುರ ಶ್ರೀಧರರ 'ಜೀವನವೇದ' ಪುಸ್ತಕದ ಲೋಕಾರ್ಪಣೆ
ಮಿತ್ರ ಹರಿಹರಪುರ ಶ್ರೀಧರ್ ಸ್ಥಳೀಯ ಜನಮಿತ್ರ, ಜನಹಿತ ಪತ್ರಿಕೆಗಳಲ್ಲಿ ಮತ್ತು ವಿಕ್ರಮ ವಾರಪತ್ರಿಕೆಯಲ್ಲಿ ವೇದದ ವಿಚಾರಗಳನ್ನು ಮಂತ್ರಗಳ ಅರ್ಥಸಹಿತ ವಿವರಿಸಿ ಅಂಕಣ ಲೇಖನಗಳನ್ನು ಬರೆಯುತ್ತಿದ್ದು, ಆಯ್ದ 51 ಲೇಖನಗಳನ್ನು ಒಟ್ಟಗೂಡಿಸಿದ 'ಜೀವನವೇದ' ಎಂಬ ಪುಸ್ತಕವನ್ನು ಬೆಂಗಳೂರಿನ ಸಂಮೃದ್ಧ ಪ್ರಕಾಶನದವರು ಹೊರತಂದಿದ್ದು ಅದನ್ನು ಸಮ್ಮೇಳನದಲ್ಲಿ ಬೆಂಗಳೂರಿನ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಮಲ್ಲೇಪುರಂ ವೆಂಕಟೇಶ್ ರವರು ಕಾಗಿನೆಲೆಯ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಶ್ರೀ ಶ್ರೀ ಶಿವಾನಂದುರಿ ಸ್ವಾಮೀಜಿ, ಶ್ರೀ ಕೆ.ಎಸ್.ಎಲ್. ಸ್ವಾಮಿ ಮತ್ತು ವಿಕ್ರಮ ವಾರಪತ್ರಿಕೆ ಸಂಪಾದಕ ಶ್ರೀ ದು.ಗು.ಲಕ್ಷ್ಮಣ್ ರವರುಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಶ್ರೀ ಮಲ್ಲೇಪುರಂ ವೆಂಕಟೇಶರು "ವೇದಗಳಲ್ಲಿನ ಜ್ಞಾನ ಸಾಮರಸ್ಯದ ಸಾರವಾಗಿದೆ. ವೇದಗಳ ಕುರಿತು ಇದ್ದ ಅಪಪ್ರಚಾರಗಳನ್ನು ಸ್ವಾಮಿ ದಯಾನಂದ ಸರಸ್ವತಿಯವರು ನಿವಾರಿಸಿದರು. ದೈವರಾತ ಮಹನೀಯರು ಹೆಣ್ಣು ಮಕ್ಕಳಿಗೂ ವೇದಾಧ್ಯಯನ ಮಾಡಿಸಿದವರು. ವೇದಗಳೇ ಇರದಿದ್ದರೆ ನಂತರದ ಯಾವುದೇ ದರ್ಶನಗಳು ಇರುತ್ತಿರಲಿಲ್ಲ. ಜೀವನವೇದ ಕೃತಿಯಲ್ಲಿ ವೇದಮಂತ್ರಗಳನ್ನು ಆಧರಿಸಿದ ಬಿಡಿ ಲೇಖನಗಳು ಅತ್ಯಂತ ಸರಳ, ಸತ್ಯ ಮತ್ತು ಆಕರ್ಷಕವಾಗಿವೆ. ಎಲ್ಲರೂ ಕೊಂಡು ಓದಬೇಕು" ಎಂದರು.
ನಂತರ ಮಾತನಾಡಿದ ಶ್ರೀ ದು.ಗು. ಲಕ್ಷ್ಮಣ್ "ಜೀವನವೇದದಲ್ಲಿನ ಬಿಡಿ ಲೇಖನಗಳು ವಿಕ್ರಮದಲ್ಲಿ ಪ್ರಕಟವಾದಾಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಸಾಮಾನ್ಯರಿಗೂ ಅರ್ಥವಾಗುವಂತೆ ವೇದದ ಸಾರವನ್ನು ಲೇಖನಗಳಲ್ಲಿ ಲೇಖಕರು ಬಿಂಬಿಸಿದ್ದಾರೆ" ಎಂದರು. ಮುಂದುವರೆದು, "ಭಗವದ್ಗೀತೆಯನ್ನು ಸುಡುವ ಮಾತನಾಡುವ ಮಹನೀಯರುಗಳು ಅದನ್ನು ಓದಿಯೇ ಇರುವುದಿಲ್ಲ. ಓದಿ ಅರ್ಥ ಮಾಡಿಕೊಂಡಿದ್ದರೆ ಅದನ್ನು ಸುಡುವ ಮಾತನ್ನೇ ಆಡುತ್ತಿರಲಿಲ್ಲ. ಭೈರಪ್ಪನವರ ಕೃತಿಗಳನ್ನೂ ಓದದೇ ಪೂರ್ವಾಗ್ರಹಪೀಡಿತರಾಗಿ ವಿಮರ್ಶಿಸಹೋಗುವವರದು ಹುಚ್ಚುತನವೋ, ಮೂರ್ಖತನವೋ ತಿಳಿಯದು" ಎಂದು ಪರೋಕ್ಷವಾಗಿ 'ಬುದ್ಧಿಜೀವಿ' ಎಂದು ಕರೆಯಲಾಗುವ ಭಗವಾನರ ಮತ್ತು ಇತರ ಸ್ವಘೋಷಿತ ವಿಚಾರವಾದಿಗಳ ಕೃತ್ಯವನ್ನು ಟೀಕಿಸಿದರು.
ಲೇಖಕ ಹರಿಹರಪುರ ಶ್ರೀಧರ್ ಮಾತನಾಡುತ್ತಾ, "ನಾನು ವೇದ ಪಂಡಿತನಲ್ಲ. ವೇದಾಧ್ಯಾಯಿ ಸುಧಾಕರ ಶರ್ಮರಿಂದ ವೇದದ ವಿಚಾರಗಳಲ್ಲಿ ಆಸಕ್ತಿ ತಳೆದವನು. ಪಂ. ಸುಧಾಕರ ಚತುರ್ವೇದಿಯವರು ವೇದಮಂತ್ರಗಳಿಗೆ ಕೊಟ್ಟ ಅರ್ಥ ವಿವರಣೆಗಳನ್ನು ಆಧಾರವಾಗಿ ಬಳಸಿಕೊಂಡು ಇಂದಿನ ಘಟನೆಗಳು, ಸಂಗತಿಗಳು, ಜೀವನಶೈಲಿಗಳನ್ನು ಜೋಡಿಸಿ ಲೇಖನಗಳನ್ನು ಬರೆದಿದ್ದು ಇದನ್ನು ಪ್ರಾಜ್ಞರು ಮೆಚ್ಚಿ ಹರಸಿರುವುದು ಧನ್ಯತಾಭಾವ ಮೂಡಿಸಿದೆ" ಎಂದರು. ಪ್ರಕಾಶಕ ಶ್ರೀಹರ್ಷ ಸಹ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಜಿ.ಎಸ್.ಮಂಜುನಾಥ್ ನಿರೂಪಣೆ ಮಾಡಿದರು.
ರೂ. 160.00 ಬೆಲೆಯ ಈ ಪುಸ್ತಕವನ್ನು ರೂ. 100ರ ರಿಯಾಯಿತಿ ಬೆಲೆಯಲ್ಲಿ ಅಂದು ಮಾರಲಾಯಿತು. ಗಣನೀಯ ಸಂಖ್ಯೆಯ ಪುಸ್ತಕಗಳು ಮಾರಾಟವಾದವು.






































[ಕವಿ ನಾಗರಾಜರ ಜೀವನವೇದದಿಂದ]


ಹಾಸನದಲ್ಲಿ ಸಂಸ್ಕೃತ ಸಂಭ್ರಮ - 4

ಜಿಲ್ಲಾ ಸಂಸ್ಕೃತ ಸಮ್ಮೇಳನದ ಉದ್ಘಾಟನೆ:
"ಪಠತು ಸಂಸ್ಕೃತಂ ವದತು ಸಂಸ್ಕೃತಂ
ಲಸತು ಸಂಸ್ಕೃತಂ ಚಿರಂ ಗೃಹೇ ಗೃಹೇಚ ಪುನರಪಿ"
ಸಮ್ಮೇಳನದ ಉದ್ಘಾಟಕರಾದ ಹೆಸರಾಂತ ಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ ಕೆ.ಎಸ್.ಎಲ್. ಸ್ವಾಮಿ (ರವಿ)ಯವರನ್ನು ಮತ್ತು ಇತರ ಗಣ್ಯರನ್ನು ಆರತಿ ಬೆಳಗಿ, ತಿಲಕವಿಟ್ಟು ಕಲಶಗಳೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸುಶ್ರಾವ್ಯವಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮ್ಮೇಳನದ ಕಾರ್ಯಾಧ್ಯಕ್ಷರಾದ ಶ್ರೀ ಅಟ್ಟಾವರ ರಾಮದಾಸ್ ಗಣ್ಯರನ್ನೂ, ಸರ್ವರನ್ನೂ ಸ್ವಾಗತಿಸಿದರು. ಸಂಸ್ಕೃತಭಾರತಿಯ ದಕ್ಷಿಣ ಕರ್ನಾಟಕ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಮೃತಭಾಷೆಯೆಂದು ಹೇಳಲಾಗುತ್ತಿದ್ದ ಸಂಸ್ಕೃತ ಇಂದಿಗೂ ಹೇಗೆ ಜೀವಂತವಿದೆ, ಪ್ರಸ್ತುತವಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದ್ದು ಚೇತೋಹಾರಿಯಾಗಿತ್ತು. ಒಂದು ಅದ್ಭುತವಾದ ಮತ್ತು ಅಮೂಲ್ಯವಾದ ಜ್ಞಾನಭಂಡಾರಕ್ಕೆ ಸಂಸ್ಕೃತ ಕೀಲಿಕೈ ಆಗಿದೆಯೆಂದರು. ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿ ಗಣ್ಯರುಗಳು ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀಯುತರಾದ ಕೆ.ಎಸ್.ಎಲ್. ಸ್ವಾಮಿ, ಬೆಂಗಳೂರಿನ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ, ಸಮ್ಮೇಳನದ ಗೌರವಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜಶ್ರೇಷ್ಠಿ, ಶ್ರೀನಿವಾಸನ್, ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು, ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶಂಕರಪ್ಪ ಮತ್ತು ಸಂಯೋಜಕ ಹರಿಹರಪರ ಶ್ರೀಧರ ಉಪಸ್ಥಿತರಿದ್ದರು. ಶ್ರೀ ಪಿ.ವಿ.ಭಟ್ ನಿರೂಪಿಸಿದರು.
ಶ್ರೀ ಕೆ.ಎಸ್.ಎಲ್. ಸ್ವಾಮಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, 'ಸಂಸ್ಕೃತ ಕೇವಲ ಒಂದು ವರ್ಗದ ಅಥವ ಒಂದು ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎಂದು ಕರೆಸಿಕೊಳ್ಳಬೇಕಾದರೆ, ಭಾಷಾ ಏಕತೆ ಸಾಧಿಸಬೇಕಾದರೆ ಸಂಸ್ಕೃತ ಬಳಕೆ ಆಗಲೇಬೇಕು. ಸಂಸ್ಕೃತವನ್ನು ನಾವು ಬೆಳೆಸಬೇಕಿಲ್ಲ. ಅದು ಆಗಲೇ ಬೆಳೆದಿದೆ. ಅದನ್ನು ನಾವು ಬಳಸಬೇಕು ಅನ್ನಬೇಕು. ದೇಶದ ಜ್ಞಾನ ಭಂಡಾರ ಮತ್ತು ಸಕಲ ಶಾಸ್ತ್ರಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಲೇಬೇಕು ಮತ್ತು ಬಳಸಲೇಬೇಕು' ಎಂದು ನುಡಿದರು. ಸಮ್ಮೇಳನದ ಗೌರವಾಧ್ಯಕ್ಷ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಭಾರತೀಯತೆ ಉಳಿಯಬೇಕೆಂದರೆ ಸಂಸ್ಕೃತವನ್ನು ಮತ್ತೆ ಉಚ್ಛ್ರಾಯ ಸ್ಥಿತಿಗೆ ಏರಿಸುವ ಅಗತ್ಯತೆಯಿದೆಯೆಂದರು.





















 [ಕವಿ ನಾಗರಾಜರ ವೇದಜೀವನದಿಂದ]

ಹಾಸನದಲ್ಲಿ ಸಂಸ್ಕೃತ ಸಂಭ್ರಮ - 3

ಅಗ್ನಿಹೋತ್ರದಿಂದ ಆರಂಭವಾದ ಹಾಸನ ಜಿಲ್ಲಾ ಸಂಸ್ಕೃತ ಸಮ್ಮೇಳನ:
ಓಂ ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ | ಯುಯೋಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ ||
(ಯಜು.೪೦.೧೬.)
 ಭಾವಾರ್ಥ: ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ | ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಪ್ರಭು ವಂದನೆ ||
 ಹಾಸನದ ವೇದಭಾರತೀ ಕಳೆದ ಎರಡೂವರೆ ವರ್ಷಗಳಿಂದ ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದೆ ವೇದಾಸಕ್ತರೆಲ್ಲರಿಗೂ ವೇದಮಂತ್ರಗಳನ್ನು ಕಲಿಯಲು, ಅರ್ಥ ತಿಳಿಯಲು, ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿದ್ದು ಅನೇಕರು ಇದನ್ನು ಉಪಯೋಗಿಸಿಕೊಂಡಿದ್ದಾರೆ, ಉಪಯೋಗಿಸಿಕೊಳ್ಳುತ್ತಿದ್ದಾರೆ. ವೇದಭಾರತಿ ಸದಸ್ಯರುಗಳು ಸಮ್ಮೇಳನದ ಆರಂಭಪೂರ್ವದಲ್ಲಿ ಸರ್ವರ ಹಿತ ಬಯಸಿ ಅಗ್ನಿಹೋತ್ರ ನೆರವೇರಿಸಿದರು. ಆ ಸಂದರ್ಭದ ಕೆಲವು ದೃಷ್ಯಗಳಿವು:














































[ಕವಿ ನಾಗರಾಜರ ಜೀವನವೇದದಿಂದ]