Pages

Tuesday, February 22, 2011

ನೀವೇನು ಹೇಳುವಿರಿ?

ಮೊನ್ನೆ ಬೆಂಗಳೂರಿನ ವಿದ್ಯಾರಣ್ಯಪುರಂ ಗೆ ಹೋಗಿದ್ದೆ. ಅಲ್ಲೊಂದು ದುರ್ಗಿ ದೇವಾಲಯ.ಭಕ್ತರ ಸಂಖ್ಯೆ ಅಪಾರ.ನನ್ನ ಜೊತೆಯಲ್ಲಿದ್ದವರೆಲ್ಲಾ ಕ್ಯೂನಲ್ಲಿ ನಿಂತು ದೇವಿದರ್ಶನ ಮಾಡಿದರು. ಹೊರಗೆ ದೇವಸ್ಥಾನದ ಮೇಲೆ ಸಿಮೆಂಟಿನಲ್ಲಿ ಮಾಡಿದ್ದ ದೇವರ ಪ್ರತಿಮೆಗಳತ್ತ ನನ್ನ ದೃಷ್ಟಿ ಹೋಯ್ತು. ನೂರಾರು ಚಿತ್ರವಿಚಿತ್ರ ಪ್ರತಿಮೆಗಳು. ಅದರಲ್ಲೊಂದನ್ನು ಇಲ್ಲಿ ಪೇರಿಸಿರುವೆ. ಈ ಕೆಳಗೆ ಇನ್ನೊಂದು ಚಿತ್ರವೂ ಇದೆ. ಎರಡನ್ನೂ ನೋಡಿ,ನಿಮ್ಮ ಅಭಿಪ್ರಾಯ ತಿಳಿಸಿ.
--------------------------------------------
ಈ ವಿಗ್ರಹ ನಮ್ಮೂರಿನ ಮಾಧವ ಕೃಷ್ಣ. ಐನೂರು ವರ್ಷಗಳ ಇತಿಹಾಸ ಉಳ್ಳದ್ದು. ಇದೇ ದೇವಾಲಯದಲ್ಲಿ ಪ್ರತೀ ಶನಿವಾರ  ಮಾಡುತ್ತಿದ್ದ ಭಜನೆಯಲ್ಲಿ ಮೈ ಮರೆಯುತ್ತಿದ್ದೆ.ಕೃಷ್ಣಶಿಲೆಯ  ಮೂರ್ತಿಯು ಬೇಲೂರು ಚೆನ್ನಕೇಶವನಿಗಿಂತಲೂ ಸುಂದರವಾಗಿದೆ.ಈ ದೇವಾಲಯ ಈಗ ಶಿಥಿಲಾವಸ್ಥೆಯಲ್ಲಿದೆ.ದೇವಾಲಯಕ್ಕೆ ಹೋಗುವವರೇ ಇಲ್ಲ. ಅಪರೂಪಕ್ಕೆ ಊರಿಗೆ ನೆಂಟರಿಷ್ಟರು ಬಂದಾಗ ಈ ದೇವರಿಗೆ ಅದೃಷ್ಟ ಕೂಡಿ ಬರುತ್ತೆ! ಎರಡೂ ಪ್ರತಿಮೆಗಳನ್ನು ನೋಡಿದಿರಿ. ನೀವೇನು ಹೇಳುವಿರಿ?

ವೇದೋಕ್ತ ಜೀವನ ಪಥ - ಜೀವಾತ್ಮ ಸ್ವರೂಪ -5.

ಭಗವಂತನು ನಮ್ಮೆಲ್ಲರ ತಂದೆ, ನಮ್ಮೆಲ್ಲರ ತಾಯಿಯೂ ಹೌದು. ಋಗ್ವೇದ ಹೇಳುತ್ತದೆ:

ತ್ವಂ ಹಿ ನಃ ಪಿತಾ ವಸೋ ತತ್ವಂ ಮಾತಾ ಶತಕ್ರತೋ ಬಭೂವಿಥ|
ಅಧಾ ತೇ ಸುಮ್ನಮೀಮಹೇ|| (ಋಕ್. ೮.೯೮.೧೧.)

     [ವಸೋ] ಸರ್ವಾಶ್ರಯನೇ! [ಶತಕ್ರತೋ] ನೂರಾರು ರಚನೆ ಮಾಡುವವನೇ! [ತ್ವಂ ಹಿ] ನೀನೇ [ನಃ ಪಿತಾ] ನಮ್ಮ ತಂದೆ, [ತ್ವಂ ಮಾತಾ] ನೀನೇ ತಾಯಿ, [ಬಭೂವಿಥ] ಆಗಿದ್ದೀಯೆ. [ಅಧಾ] ಈ ಅಧಿಕಾರದಿಂದ [ತೇ ಸುಮ್ನಮ್] ನಿನ್ನ ಸುಖ-ಶಾಂತಿಗಳನ್ನು [ಈಮಹೇ] ಕೋರುತ್ತೇವೆ.
ಇಷ್ಟು ಮಾತ್ರವಲ್ಲ, ಅದೇ ಪ್ರಭುವಿನಲ್ಲಿ ಈ ರೀತಿ ಬೇಡಿಕೆಯನ್ನೂ ಮಂಡಿಸುತ್ತೇವೆ:

ಸ ನಃ ವಿತೇವ ಸೂನವೇsssಗ್ನೇ ಸೂಪಾಯನೊ ಭವ|
ಸಚಸ್ವಾ ನಃ ಸ್ವಸ್ತಯೇ|| (ಋಕ್. ೧.೧.೯.)

     [ಅಗ್ನೇ] ಓ ತೇಜಸ್ವಿ ಪ್ರಭೋ, [ಸಃ] ಆ ನೀನು [ಪಿತಾ ಸೂನವೇ ಇವ] ತಂದೆಯು ತನ್ನ ಮಗನಿಗೆ ಸುಲಭವಾಗಿ ಸಿಕ್ಕುವಂತೆ [ನಃ] ನಮಗೆ [ಸು ಉಪಾಯನಃ ಭವ] ಸುಲಭವಾಗಿ ಲಭಿಸುವವನಾಗು. [ನಃ ಸ್ವಸ್ತಯೇ] ನಮ್ಮ ಆತ್ಮಕಲ್ಯಾಣಕ್ಕಾಗಿ [ಸಚಸ್ವ] ಪ್ರಾಪ್ತನಾಗು.
ನಮ್ಮ ತಂದೆಯಾದ, ಮಾತ್ರವಲ್ಲ, ತಾಯಿಯೂ ಆದ ಭಗವಂತನ ನಡುವೆ ನಿಲ್ಲುವುದಕ್ಕೆ ಯಾವ ಕಲ್ಪಿತ ಪ್ರಭುವಿನ ಏಕಮಾತ್ರ ಔರಸಪುತ್ರನಿಗೂ, ಯಾವ ದೇವಪ್ರೇಷಿತ ಸಂದೇಶವಾಹಕನಿಗೂ ಅಧಿಕಾರವಿಲ್ಲ, ಯಾವ ಧರ್ಮದ ಗುತ್ತಿಗೆದಾರನಿಗೂ ಇಲ್ಲ.

     ವೇದಗಳು ನೀಡುವ ಸಂದೇಶವೇ ಬೇರೆ, ಅದರ ವೈಭವವೇ ಒಂದು ಬಗೆ. ವೇದಗಳು ಬೇರೆಯವರ ಬೆನ್ನೇರಿ ಮೋಕ್ಷಕ್ಕೆ ಹೋಗುವ ಅಪಸಿದ್ಧಾಂತಕ್ಕೂ ಬೆಲೆ ಕೊಡುವುದಿಲ್ಲ. ಯಾವನೋ ಒಬ್ಬ ಎಲ್ಲರ ಪಾಪವನ್ನೂ ತಾನು ಹೊತ್ತು ಎಲ್ಲರಿಗೂ ಮುಕ್ತಿಗೆ ದಾರಿ ಮಾಡಿಕೊಡುತ್ತಾನೆ ಎಂಬ ಅರ್ಥರಹಿತವಾದ, ಬುಡವಿಲ್ಲದ ಕುರುಡುನಂಬಿಕೆಗೂ, ವೇದದ ಬೌದ್ಧಿಕ ಹಾಗೂ ವೈಜ್ಞಾನಿಕ ಸತ್ಯಸಿದ್ಧಾಂತಕ್ಕೂ ಏನೇನೂ ಸಂಬಂಧವಿಲ್ಲ. ವೇದಗಳು ಕಲಿಸುವುದು ಆತ್ಮಾವಲಂಬನೆಯ ಭವ್ಯಪಾಠವನ್ನು. ಪ್ತಿಯೊಬ್ಬ ಜೀವಾತ್ಮನೂ ತನ್ನ ಪತನ ಅಥವಾ ಉತ್ಥಾನಕ್ಕೆ ತಾನೇ ಕಾರಣ. ಕೇಳಿರಿ;-

ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ|
ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು. ೨೩.೧೫.)

     [ವಾಜಿನ್] ಓ ಬಲಶಾಲಿ, ಅನ್ನವಾನ್, ಜ್ಞಾನವಾನ್ ಜೀವಾತ್ಮ! [ಸ್ವಯಂ ತನ್ವಂ ಕಲ್ಪಯಸ್ವ] ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. [ಸ್ವಯಂ ಯಜಸ್ವ] ಸ್ವತಃ ಸತ್ಕರ್ಮ ಮಾಡು. [ಸ್ವಯಂ ಜುಷಸ್ವ] ಸ್ವತಃ ಸಂತೋಷಪಡು. [ತೇ ಮಹಿಮಾ] ನಿನ್ನ ಮಾಹಾತ್ಮ್ಯ [ಅನ್ಯೇನ ನ ಸನ್ನಶೇ] ಬೇರೆಯವರಿಂದ ಸಿದ್ಧಿಸದು.
ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಉಚ್ಛೃಂಖಲ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. ನಾನು ಈ ದಿವ್ಯ ಪುರುಷನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ ಎಂದು ಯಾರೂ ಹೇಳುವಂತಿಲ್ಲ.

ಎರಡು ಚಿಕ್ಕ ಕಥೆಗಳು

ತಸಿ ಕೆಟ್ಟ!

ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಶ್ಯವು ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯಾಸಿ ಹೇಳಿದ " ಅಯ್ಯೋ ಹುಡುಗಿ ನೀರಲ್ಲಿ ಮುಳುಗಿಹೋಗುತ್ತಿದ್ದಾಳಲ್ಲಾ! ನಾವಾದರೋ ಸನ್ಯಾಸಿಗಳು , ಮಾಡುವುದಾದರೂ ಏನು?"
ಮತ್ತೊಬ್ಬ ಮಾತನಾಡದೆ ಈಜುಹೊಡೆದುಕೊಂಡು ಮುಳುಗುತ್ತಿರುವ ತರುಣಿಯತ್ತ ಧಾವಿಸಿದ,ಎತ್ತಿಕೊಂಡುಬಂದು ದಡ ಸೇರಿದ. ಪ್ರಾಥಮಿಕ ಆರೈಕೆ ಮಾಡಿದ, ತರುಣಿಯನ್ನು ಸಾವಿನ ದವಡೆಯಿಂದ ಪಾರುಮಾಡಿದ ಸಮಾಧಾನದಿಂದ ಆಶ್ರಮ ಸೇರಿದ. ಅದಾಗಲೇ ಅತ್ತೊಬ್ಬ ಸನ್ಯಾಸಿ ಆಶ್ರಮ ದೌಡಾಯಿಸಿದ್ದ. ಹಿರಿಯ ಸನ್ಯಾಸಿಗೆ ನದಿಯಯಲ್ಲಿ ನಡೆದ ವೃತ್ತಾಂತವನ್ನೆಲ್ಲಾ ರೆಕ್ಕೆಪುಕ್ಕ ಕಟ್ಟಿ ಕಥೆ ಹೇಳಿದ್ದ. ತರುಣಿಯನ್ನು ಸಾವಿನಿಂದ ಪಾರುಮಾಡಿದ್ದ ಸನ್ಯಾಸಿಯೂ ಪ್ರಸನ್ನ ಚಿತ್ತದಿಂದ ಆಶ್ರಮಕ್ಕೆ ಬಂದ. ಹಿರಿಯ ಸನ್ಯಾಸಿಗಳನ್ನು ಹೊರತುಪಡಿಸಿ ಎಲ್ಲರೂ ಇವನನ್ನು ಅಪರಾಧಿಯನ್ನು ನೋಡುವಂತೆ ನೋಡುತ್ತಿದ್ದಾರೆ. ಇವನಿಗೆ ಎಲ್ಲವೂ ಅರ್ಥವಾಯ್ತು. ಹಿರಿಯ ಸನ್ಯಾಸಿ ಇವನನ್ನು ಕೇಳಿದ-
" ಯುವತಿಯೊಬ್ಬಳನ್ನು ಮುಟ್ಟಿ ಬಿಟ್ಟೆಯಂತಲ್ಲಾ?"
- ಹೌದು ಸ್ವಾಮೀಜಿ, ನಾನು ಮುಟ್ಟಿದ್ದೂ ನಿಜ. ಅಲ್ಲೇ ಬಿಟ್ಟಿದ್ದೂ ನಿಜ. ಆದರೆ ನನ್ನ ಮಿತ್ರ ಸನ್ಯಾಸಿ ಆಯುವತಿಯನ್ನು ಈ ಆಶ್ರಮಕ್ಕೂ ಕರೆತಂದು ಬಿಟ್ಟನಲ್ಲಾ?!
---------------------------------------------------------------
ಮೂರು ಕಾಗೆ ವಾಂತಿ ಮಾಡಿದ್ದು:

ಸೋಮು ಓಡೋಡಿ ಬಂದ. ಅಲ್ಲಿದ್ದವರಿಗೆಲ್ಲಾ ಹೇಳಿದ." ಮೈಸೂರು ಅರಮನೆಯಲ್ಲಿ ರಾಜ ಕುಮಾರ ಮೂರು ಕಾಗೆಯನ್ನು ವಾಂತಿ ಮಾಡಿಕೊಂಡನಂತೆ"
- ಸೋಮು, ನಿನಗೆ ಹೇಳಿದವರಾರು?
- ನನಗೆ ನನ್ನ ಸ್ನೇಹಿತ ಕುಲಕರ್ಣಿ ಹೇಳಿದ.
ಕುಲಕರ್ಣಿಯನ್ನು ಅರಸುತ್ತಾ ಎಲ್ಲರೂ ಸಾಗಿದರು ಅಂತೂ ಇಂತೂ ಕುಲಕರ್ಣಿಯ ಭೇಟಿಯಾಯ್ತು.             
-" ಕುಲಕರ್ಣಿಯವರೇ, ರಾಜಕುಮಾರ ಮೂರು ಕಾಗೆಯನ್ನು ವಾಂತಿ ಮಾಡಿಕೊಂಡಿದ್ದಾದರೂ ಹೇಗೆ?"
ಕುಲಕರ್ಣಿ ಹೇಳಿದರು-" ಅದು ಮೂರು ಕಾಗೆಯಲ್ಲ, ಎರಡು"

_ " ನೀವು ನೋಡಿದಿರಾ?"
-ಇಲ್ಲ, ಅದು ನಿಜ , ನನಗೆ ಅರಮನೆಯ ಪುರೋಹಿತರ ಮಗ ಶರ್ಮ ಹೇಳಿದ್ದು."
ಶರ್ಮನನ್ನೂ ಹುಡುಕಿದ್ದಾಯ್ತು, ಶರ್ಮ ಹೇಳಿದರು" ಯಾರು ಹೇಳಿದ್ದು, ಅದು ಎರಡಲ್ಲ ಒಂದು ಕಾಗೆ".

-ನಿಮಗೆ ಯಾರು ಹೇಳಿದ್ದು?

- ನಮ್ಮಪ್ಪನಿಗೆ ಯಾರೋ ಅರಮನೆಗೆ ತುಂಬ ನಂಬಿಕೆಪಾತ್ರರಾದವರು ಹೇಳಿದರಂತೆ.
ಕೊನೆಗೆ ರಾಜ ಪುರೋಹಿತರನ್ನು ಕಂಡು ವಿಚಾರಿಸಿದರೆ ಅವರು ಹೇಳಿದ್ದೇನು ಗೊತ್ತೆ?
ಯಾರ್ರೀ ಹೇಳಿದ್ದು? ರಾಜ ಕುಮಾರ ಕಾಗೆಯಂತೆ ಕಪ್ಪಗೆ ವಾಂತಿ ಮಾಡಿಕೊಂಡನೆಂದು ನಾನು ನನ್ನ ಪತ್ನಿಗೆ ಹೇಳಿದ್ದೆ, ಅಷ್ಟೆ.
---------------------------------------------------------------
ಎರಡೂ ಕಥೆಗೆ ವಿವರಣೆ ಯೆಲ್ಲಾ ಯಾಕೆ ಬೇಕು? ಅಲ್ಲವೇ?

ವಸ್ತುಗಳ ಗುರುತ್ವಾಕರ್ಷಣ ನಿಯಮ ಮೊದಲು ಕಂಡು ಹಿಡಿದವರಾರು?

ವಸ್ತುಗಳ ಗುರುತ್ವಾಕರ್ಷಣ ನಿಯಮ ಮೊದಲು ಕಂಡು ಹಿಡಿದವರಾರು?
ನ್ಯೂಟನ್?
ಭಾಸ್ಕರಾಚಾರ್ಯ-೨?