Pages

Thursday, September 27, 2012

ವೇದಾಧ್ಯಾಯೀ ಶ್ರೀ ಸುಧಾಕರಶರ್ಮ ಕಿರು ಪರಿಚಯ


     ಈಗ್ಗೆ ೧ ವರ್ಷದ ಹಿಂದೆ ‘ಖತಾರ್’ ಎಂಬ ಖಾಸಗಿ ಧಾರ್ಮಿಕ ಟಿ.ವಿ. ವಾಹಿನಿಯಲ್ಲಿ ವಿವಿಧ ಮತ ಧರ್ಮಗಳ ಗುರುಗಳ ನಡುವೆ ಧಾರ್ಮಿಕ ಚರ್ಚೆಯೊಂದು ನೇರ ಸಂವಾದ ರೂಪದಲ್ಲಿ ನಡೆದಿತ್ತು. ಆ ಗುರುಗಳ ನಡುವೆ ‘ಬದುಕುವ ಕಲೆ’ ಕಲಿಸುವ ಓರ್ವ ಗುರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಆದರೆ ಪರಸ್ಪರ ವಾದ ವಿವಾದ ಸಾಗಿದಂತೆ ನಮ್ಮ ಗುರುಗಳಿಗೆ ಸೋಲುಂಟಾಯಿತು! ಈ ಮಹನೀಯರು ನಮ್ಮ ಮನುಕುಲದ ಜ್ಞಾನ ಭಂಡಾರವೆನಿಸಿದ ವೇದಗಳನ್ನು ಬದಿಗಿಟ್ಟು, ನಮ್ಮ ಪರಂಪರೆ ನಡುವೆ ಸಾಗಿ ಬಂದಿರುವ ಕೆಲಸಕ್ಕೆ ಬಾರದ ಪುರಾಣಗಳು-ಪುಣ್ಯ ಕಥೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲು ಯತ್ನಿಸಿದ್ದೇ ಅವರ ಸೋಲಿಗೆ ಕಾರಣವಾಯಿತು. ಅವರ ಜಾಗದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಗಳೋ ಅಥವಾ ಅವರ ಶಿಷ್ಯ ಸುಧಾಕರ ಶರ್ಮರೋ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು! ಅಂದಹಾಗೆ ಯಾರು ಈ ಸುಧಾಕರ ಶರ್ಮ?


     ಪ್ರಳಯದ ಭೀತಿ, ವಾಸ್ತು, ಜ್ಯೋತಿಷ್ಯ, ವ್ರತಾಚರಣೆ, ವಿಶೇಷ ಪೂಜೆ ಅವುಗಳಿಂದ ಸಿಗುತ್ತದೆನ್ನುವ ಪ್ರತಿಫಲ ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕಾತರರಾಗುವ ನಾವು ಟಿ.ವಿ. ಮುಂದೆ ಕುಳಿತು ಅಂತಹ ಕಾರ್ಯಕ್ರಮಗಳನ್ನು ಎವೆಯಿಕ್ಕದೆ ವೀಕ್ಷಿಸುತ್ತೇವೆ. ಇಂತಹ ಅಸಂಬದ್ಧ ಪುರಾಣಗಳು, ಪುಣ್ಯ ಕಥೆಗಳು, ಪೂಜೆ, ಪುನಸ್ಕಾರದಂತಹ ವಿಷಯಗಳಾವುವೂ ವೇದದಲ್ಲಿಲ್ಲ; ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಬೋಧಿಸುವ ‘ಮನುಕುಲದ ಸಂವಿಧಾನ’ವೇ ವೇದ ಎಂಬ ಸತ್ಯ ಸಂಗತಿಗಳನ್ನು ವೇದ ಮಂತ್ರಗಳ ನಿಜವಾದ ಅರ್ಥ ಬಿಡಿಸಿಟ್ಟು ತಿಳಿಸಿಕೊಡುವ ದಾರ್ಶನಿಕರೇ ವೇದಾಧ್ಯಾಯಿ ಸುಧಾಕರಶರ್ಮ! ‘ಚಂದನ’ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೯-೩೦ ರಿಂದ ಪ್ರಸಾರವಾಗುತ್ತಿರುವ ‘ಹೊಸ ಬೆಳಕು’ ಧಾರಾವಾಹಿಯ ಕೇಂದ್ರ ಬಿಂದು- ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇದ, ವಿಜ್ಞಾನ ಹಾಗೂ ವೈಚಾರಿಕತೆ- ಈ ಮೂರನ್ನೂ ಮೇಳೈಸಿಕೊಂಡಿರುವ ಅಪರೂಪದ ವಿಶಿಷ್ಟ ಬಹುಮುಖ ವ್ಯಕ್ತಿತ್ವದ ಜ್ಞಾನ ವೃದ್ಧ ಈ ವ್ಯಕ್ತಿ!!
     ಪ್ರಸ್ತುತ ಭಾರತ ದೇಶ ಸಾಗುತ್ತಿರುವ ಹಾದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ವೇದಗಳ ಕುರಿತು ಚರ್ಚಿಸಲು ಹೊರಟಾಗ ಯಾರಾದರೂ ಮೂಗು ಮುರಿದರೆ ಅಥವಾ ‘ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ’ ಎಂಬಂತೆ ವೇದಗಳನ್ನು ದೂಷಿಸಿದರೆ ಅದು ಸಹಜ ಹಾಗೂ ತಪ್ಪು ಅವರದಲ್ಲ! ಏಕೆಂದರೆ ವೇದಗಳ ಕುರಿತು ಶತ ಶತಮಾನಗಳಿಂದಲೂ ಹರಿದುಬಂದ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ಅರೆಬೆಂದ ಎರವಲು ಜ್ಞಾನ, ಗೊಡ್ಡು ಸಂಪ್ರದಾಯಗಳು, ವಿಚಾರವಿಲ್ಲದ ಆಚರಣೆಗಳು, ಜೀವನ ಶೈಲಿ ಇತ್ಯಾದಿ ಅನಿಷ್ಟ ಕಲಸು ಮೇಲೋಗರಗಳ ನಡುವೆ ಭಾರತೀಯರು ಬೆಳೆದು ಬಂದಿರುವ ಬಗೆಯೇ ಇದಕ್ಕೆ ಕಾರಣ. ವೇದಗಳು ವಜ್ರವಿದ್ದಂತೆ; ಆದರೆ ಅಜ್ಞಾನದಿಂದಾಗಿ ವಜ್ರವನ್ನು ತಿಪ್ಪೆಗೆ ಎಸೆಯಲಾಗಿದೆ; ಅದು ವಜ್ರದ ತಪ್ಪಲ್ಲವಲ್ಲ!? ಜಗತ್ತಿಗೇ ಶಾಂತಿ ಪಾಠ ಹೇಳಿದ ನಮ್ಮ ದೇಶದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಾಗಿ ಖತಾರ್ ಟಿ.ವಿ. ಪ್ರಕರಣ ರೂಪದಲ್ಲಿ ಇನ್ನೊಂದು ವಿಪರ್ಯಾಸ ಸೇರ್ಪಡೆಯಾಯಿತಷ್ಟೆ.
   ವೇದಾಧ್ಯಾಯಿ ಎಂದ ಕೂಡಲೇ ಸಂತನೋ, ಮುನಿಯೋ ಅಥವಾ ಯಾವುದೋ ಮಠದ ಸ್ವಾಮೀಜಿಯೋ ಎಂದೇನೂ ಭಾವಿಸಬೇಕಾಗಿಲ್ಲ. ಬಹುಮುಖ ವಿದ್ಯಾರ್ಹತೆ- ಅಂದರೆ ವಿಜ್ಞಾನ. ಸಂಸ್ಕೃತ ಹಾಗೂ ಲೆಕ್ಕ ಶಾಸ್ತ್ರ (ಐ.ಸಿಡಬ್ಲ್ಯುಎ) ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೇದಾಧ್ಯಾಯಿಯೂ ಆಗಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಎಂದು ಧಾರಾಳವಾಗಿ ಹೇಳಬಹುದು! ಈ ಹಿಂದೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ದಿ. ಎನ್. ಶ್ರೀಕಂಠಯ್ಯ ಅವರ ಪುತ್ರರಾದ ಶ್ರೀಯುತರು, ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದಾರೆ. ಇವರ ಇಡೀ ಸುಖೀ ಕುಟುಂಬವೇ ವೇದೋಕ್ತ!
     ೧೯೭೩ ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿರುವ ಶರ್ಮ ಅವರು ನಮ್ಮ ಪರಂಪರೆಯಲ್ಲಿ ಸಾಗಿಬಂದಿರುವ ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿರುವುದರಿಂದ ‘ಖಂಡಿತವಾದಿ ಲೋಕ ವಿರೋಧಿ’ ಎಂಬಂತೆ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಇವರು ಕರ್ನಾಟಕದಾದ್ಯಂತ ಹಾಗೂ ಪಕ್ಕದ ಆಂಧ್ರ ಪ್ರದೇಶದಲ್ಲೂ ವೇದಗಳ ಕುರಿತು ನಿರಂತರ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡುತ್ತಿದ್ದಾರೆ.
     ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿರುವ ಶರ್ಮಾಜಿ, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದಾರೆ; ಮಾಡಿಸುತ್ತಾರೆ! ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಮಾಡುವ ಶ್ರೀಯುತರನ್ನು, ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳು ಹಲವು ಕಾರ್ಯಕ್ರಮಗಳ ಮೂಲಕ ಪರಿಚಯಿಸಿವೆ; ಅವರ ಲೇಖನಗಳನ್ನು ಪ್ರಕಟಿಸುತ್ತಿವೆ ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿವೆ.
     ಬೆಂಗಳೂರು ನಿವಾಸಿಗಳಾಗಿರುವ ಶ್ರೀಯುತರು, ತಮ್ಮ ಮಕ್ಕಳನ್ನು ಹೊರಗಿನ ಯಾವುದೇ ಶಾಲೆಗಳಿಗೂ ಕಳುಹಿಸದೆ ಮನೆಯಲ್ಲೇ ಗುರುಕುಲ ಮಾದರಿ ವೇದ ಶಿಕ್ಷಣ ಕೊಡಿಸಿದ್ದು, ಯಾವ ಪದವೀಧರರಿಗಿಂತಲೂ ಕಡಿಮೆಯಿಲ್ಲದೆ ಒಂದು ಕೈ ಹೆಚ್ಚಾಗಿಯೇ ಬುದ್ಧಿವಂತರನ್ನಾಗಿ ಬೆಳೆಸಿದ್ದಾರೆಂದರೆ ಅಚ್ಚರಿಯೇ ಸರಿ!
-ಎಚ್.ಎಸ್. ಪ್ರಭಾಕರ, ಹಿರಿಯ ಪತ್ರಕರ್ತರು,
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ,
ಎಚ್.ಆರ್.ಎಸ್. ಕಾಂಪೌಂಡ್, ೬ನೇ ಕ್ರಾಸ್,
ಕೆ.ಆರ್. ಪುರಂ, ಹಾಸನ-೫೭೩ ೨೦೧

ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್ ಅವರ ಬಿಚ್ಚು ಮಾತುಗಳು



ವೇದಸುಧೆಯ ಅಭಿಮಾನಿಗಳಾದ ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್  ಇವರು ಸಂಸ್ಕೃತ MA ಪದವೀದರರು. ಸಿರ್ಸಿಯಲ್ಲಿ ವೈದಿಕ ವೃತ್ತಿ ಮಾಡುತ್ತಿರುವ ಶ್ರೀಯುತರು ದಿನದಲ್ಲಿ ಬಹುಭಾಗವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಶ್ರೀಯುತರೊಡನೆ ಅಂತರ್ಜಾಲದಲ್ಲಿ ಕರೆಮಾಡಿ ನಮ್ಮ ಸಂಭಾಷಣೆಯನ್ನು ಅವರ ಅನುಮತಿ ಪಡೆದು ರೆಕಾರ್ಡ್ ಮಾಡಿರುವೆ. ಇಲ್ಲಿ ಪ್ರಕಟಿಸುವುದಾಗಿ ನಾನು ಶ್ರೀಯುತರ ಗಮನಕ್ಕೆ ತಂದಿಲ್ಲವಾದರೂ ವೇದಸುಧೆಯೊಡನೆ ಮಾಡಿದ ಸಂವಾದ ನಿಮಗಾಗಿ ತಾನೇ.  ಶ್ರೀಯುತರು ಈ ಮೇಲ್ ಮೂಲಕ ವ್ಯಕ್ತಪಡಿಸಿದ ಅವರ ಅಭಿಪ್ರಾಯಗಳ ಜೊತೆಗೆ ಸಂಭಾಷಣೆಯ ಆಡಿಯೋ ಇಲ್ಲಿದೆ.
ಶ್ರಿಧರರೆ,
ವೈದಿಕರ (ಪುರೋಹಿತರ) ಇಂದಿನ ಪರಿಸ್ಥಿತಿಗೆ ನಾಕಂಡಂತೆ ಮುಖ್ಯವೆನಿಸುವ ಕಾರಣಗಳು...
     ೧ ಅತೃಪ್ತಿ.
        ಸಾಮಾಜಿಕ ಏರು ಪೇರುಗಳಿಗೆ ನೇರವಾಗಿ ಬಲಿಯಾದ ಪುರೋಹಿತರು ಅತೃಪ್ತರಾಗಿದ್ದಾರೆ. ಗೌರವಮಾತ್ರದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯ! ಪೌರೋಹಿತ್ಯವನ್ನು ಉದ್ಯೋಗ ಎನ್ನಲು ಸಾಧ್ಯವಾಗುತ್ತಿಲ್ಲಾ! ಹಾಗಂತ ಇವರು ನಿರುದ್ಯೋಗಿಗಳೂ ಅಲ್ಲ!
    ೨ ವಿದ್ಯಾರ್ಹತೆ ಕೊರತೆ.
      ಎಲ್ಲೂ ಸಲ್ಲದವ ಇಲ್ಲಿ ಸಲ್ಲುತ್ತಾನೆ! ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲಾ ಎಂಬ ವಿಶ್ವಾಸ. ಅಲ್ಲದೆ ಇಲ್ಲಿ ಓದಿದವನೂ-ಓದದವನೂ ಸಮಾನ ಸಂಮಾನಕ್ಕೆ ಒಳಗಾಗುತ್ತಾನೆ. ಸ್ವತಃ ಯಜಮಾನನಿಗೂ ವೈದಿಕದ ಜ್ಞಾನವಿಲ್ಲದಿರುವುದು. ಹೀಗೆ ಇಬ್ಬರಲ್ಲೂ ಅರ್ಹತೆ ಪ್ರಶ್ನಾತೀತವಾಗಿದೆ!!!
    ೩ ಅನಧಿಕೃತ ಸ್ಥಿತಿ.
       ಈ ಸಮಾಜದಲ್ಲಿ ಪುರೋಹಿತನ ನಿಲುವು ಅಧಿಕೃತವಾಗಿಲ್ಲ. ಎಲ್ಲಕಡೆಯಿಂದ ಮುಚ್ಚುಮರೆ ತುಂಬಿದೆ. (ಜಾತಿ-ಮತ-ಪಂಥ-ಮಡಿ-ಮೈಲಿಗೆ-ಬುಧ್ಧಿವಾದ-ಬುಧ್ಧಿಜೀವಿಗಳವಾದ-ಶ್ರದ್ಧೆ-ನಂಬಿಕೆ ಇತ್ಯಾದಿ)
    ೪ ಭವಿಷ್ಯವಾದಿಗಳ ಅಟ್ಟಹಾಸ.
       ಇಂದು ಭವಿಷ್ಯವಾದಿಗಳು ವೈದ್ಯರಂತೆಯೂ, ವೈದಿಕರು ಔಷಧಿವಿತರಕರಂತೆಯೂ ಆಗಿದ್ದಾರೆ. ಸಂಸ್ಕಾರವೋ, ಚಿತ್ತಶುದ್ಧಿಯೋ ಮೂಲವಾಗಬೇಕಿದ್ದ ಕರ್ಮ, ಇಂದು ಸ್ವಾರ್ಥ ಸಾಧನೆಗೆ ಹೆಚ್ಚು ಬಳಕೆಯಾಗುತ್ತಿದೆ.
     ೫ ಆಡಂಬರ ಮತ್ತು ಸಾಂಪ್ರದಾಯಿಕತೆ.
       ಆಡಂಬರ ಮುಖ್ಯವಾಗಿ ಸಂಸ್ಕಾರಕರ್ಮಗಳು ಅರ್ಥಹೀನವಾಗಿವೆ. ಮತ್ತು ಸಾಂಪ್ರದಾಯಿಕ ಆಚರಣೆ ಜನಜನಿತವಾಗಿ, ಅಲ್ಲಲ್ಲಿ ಹೊಸ ಹೊಸ ಸಂಪ್ರದಾಯಗಳು ಎದ್ದು, ಕರ್ಮವನ್ನೇ ತಿಂದುಹಾಕಿವೆ.
ಇನ್ನು ವೇದೋಕ್ತ ಕರ್ಮಗಳು ಎಂಬ ವಿಷಯವಾಗಿ...
ಶ್ರುತಿವಿಹಿತ ಕರ್ಮಗಳನ್ನು ಶ್ರೌತಕರ್ಮಗಳೆಂದೂ, ಸ್ಮೃತಿವಿಹಿತಕರ್ಮಗಳನ್ನು ಸ್ಮಾರ್ತಕರ್ಮಗಳೆಂದೂ ವಿಂಗಡಿಸಿದ್ದಾರೆ. ಹೆಚ್ಚಾಗಿ ನಮ್ಮ ಆಚರಣೆ ಸ್ಮಾರ್ತವೇ ಆಗಿದೆ. ಹೀಗೆ ಹಿನ್ನೆಲೆಯಿರುವ ಕರ್ಮ ಮುನ್ನೆಡೆಗೆ ಕಾರಣ ಎಂಬಲ್ಲಿ ಸಂಶಯವಿಲ್ಲಾ!
ಶ್ರುತಿ - ಸ್ಮೃತಿ - ಸೂತ್ರ - ಕಾರಿಕಾ - ಪ್ರಯೋಗ ಈ ಕ್ರಮದಲ್ಲಿ ಕರ್ಮಕ್ಕೆ ಹತ್ತಿರವಾದದ್ದು ಪ್ರಯೋಗ. ಸೂತ್ರಾದಿಯಾಗಿ ಪ್ರಯೋಗಾಂತ ಗ್ರಂಥಗಳು ಕಲ್ಪಗ್ರಂಥಗಳು. ಈ ಕಲ್ಪಗಳನ್ನು ಆಧರಿಸಿಬಂದ ಕರ್ಮಗಳನ್ನು ಮಾನ್ಯವೆಂದೂ, ಕಪೋಲ ಕಲ್ಪಿತ ಕರ್ಮಗಳನ್ನು ಅಮಾನ್ಯವೆಂದೂ ನಿರ್ಧರಿಸೋಣ ಅಲ್ಲವೇ!!!???