Pages

Saturday, August 14, 2010

ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವ



ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ದೇಶವು ಸಾಗಿದೆ.ಪ್ರತಿ ವರ್ಷವೂ ಸಹ ಆಗಸ್ಟ್ ೧೫ ಬಂದೊಡನೆ ಎಲ್ಲಾ ಕಛೇರಿಗಳಲ್ಲಿ, ಶಾಲಾಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಸಂಘಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಜನಗಣಮನ ಹಾಡಿ ಸಿಹಿತಿಂದರೆ ಅಂದಿನ ಕಾರ್ಯಕ್ರಮ ಮುಗಿದಂತೆಯೇ.ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಆಡಳಿತವು ವಿಶೇಷ ಕಾರ್ಯಕ್ರಮಗಳನ್ನು ಮಾಡಬಹುದು. ಆದರೆ ಅಂದು ನಮ್ಮೆಲ್ಲರ ಹೊಣೆ ಏನು? ಈ ದೇಶದಲ್ಲಿ ಜನ್ಮ ತಾಳಿದ್ದಕ್ಕೆ ಕನಿಷ್ಟಪಕ್ಷ ಆ ದಿನವಾದರೂ ನಮ್ಮಲ್ಲಿ ರಾಷ್ಟ್ರಭಕ್ತಿಯ ಜಾಗೃತಿಯಾಗಬೇಡವೇ? ಸಂಕ್ರಾಂತಿಯ ದಿನ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡು ಎನ್ನುವಂತೆ, ಯುಗಾದಿಯ ಹಬ್ಬದದಿನ ಬೇವು ಬೆಲ್ಲತಿಂದು ವರ್ಷವೆಲ್ಲಾ ನಮ್ಮ ಜೀವನ ಹೇಗಿರಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವಂತೆ, ಸ್ವಾತಂತ್ರೋತ್ಸವದ ದಿನ ನಮ್ಮ ಕರ್ತವ್ಯ ಇಲ್ಲವೇ? ಅಂದು ನಡೆವ ಯಾವುದೇ ಸಭೆಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಾಣುವುದೇನು? ಒಂದಿಷ್ಟು ನೃತ್ಯಗಳು, ಚಿತ್ರಗೀತೆಗಳು. ಆದರೆ ರಾಷ್ಟ್ರಭಕ್ತಿಯನ್ನು ಪುಟಿದೇಳಿಸುವ ಭಾಷಣಗಳು ನಡೆಯುತ್ತವೆಯೇ? ನನ್ನ ಸರ್ವಸ್ವವನ್ನೂ ಪೂರೈಸುವ ಈದೇಶಕ್ಕಾಗಿ ನನ್ನ ಕರ್ತವ್ಯ ವೇನು? ಎಂಬ ಬಗ್ಗೆ ಸಂಕಲ್ಪತೊಡುವ ಕಾರ್ಯಕ್ರಮಗಳು ಎಷ್ಟು ನಡೆಯುತ್ತವೆ?

ಬ್ರಿಟಿಶರು ನಮಗೆ ಚಿನ್ನದ ತಟ್ಟೆಯಲ್ಲಿಟ್ಟು ಈ ದೇಶದ ಸ್ವಾತಂತ್ರ್ಯವನ್ನು ಉಡುಗೊರೆಯಾಗಿ ಕೊಟ್ಟಿಲ್ಲ. ಇದರ ಹಿಂದೆ ಸಹಸ್ರಾರು ದೇಶಭಕ್ತರ ತ್ಯಾಗ-ಬಲಿದಾನದ ಕಥೆಯಿದೆ.ಸಹಸ್ರಾರು ತರುಣರು ನೇಣಿಗೆ ತಮ್ಮ ಕತ್ತನ್ನು ನೀಡಿರುವ ಧಾರುಣ ಜೀವನ ಗಾಥೆಯಿದೆ.ಜೈಲಿನಲ್ಲಿ ನರಕಯಾತನೆಅನುಭವಿಸಿದ ಸಹಸ್ರಾರು ದೇಶಭಕ್ತರ ನೋವಿನ ಕಥೆಯಿದೆ.೧೯೪೭ ರ ಆಗಸ್ಟ್ ೧೪ ರ ರಾತ್ರಿ ೧೨ ಗಂಟೆಯಲ್ಲಿ ಕೆಲವರು ಸ್ವಾತಂತ್ರ್ಯ ನೀಡಲು , ಕೆಲವರು ಸ್ವಾತಂತ್ರ್ಯ ಪಡೆಯುವ ಸಂಬ್ರಮದಲ್ಲಿದ್ದರೆ ಅದೇ ಸಮಯದಲ್ಲಿ ಭಾರತವು ತುಂಡಾಗಿತ್ತು.ಆಗಸ್ಟ್ ೧೩ ರಂದು ನಮ್ಮದೇಶದಲ್ಲಿದ್ದವರು ೧೪ ರ ರಾತ್ರಿಯ ವೇಳೆಗೆ ಪರಕೀಯರಾಗಿದ್ದುದು ಐತಿಹಾಸಿಕ ದುರಂತ.ಅಂದು ನಮ್ಮವರು ತೆಗೆದುಕೊಂಡಂತ ತಪ್ಪು ನಿರ್ಧಾರಗಳು ಇಂದಿಗೂ ಕಾಶ್ಮೀರಿಗಳ ನಿದ್ರೆಯನ್ನು ಕೆಡಸಿವೆ.ಅದೊಂದು ದೊಡ್ದ ಕರುಣಾಜನಕ ಕಥೆಯೇ ಸರಿ!

ಕೇವಲ ಸಿಹಿತಿಂದು ಕೈಒರಸಿಕೊಂಡರೆ ನಮ್ಮ ದೇಶಭಕ್ತಿ ಮುಗಿದುಹೋಗಬೇಕೆ? ಸಿಹಿ ತಿನ್ನುವ ಮುಂಚೆ ದೇಶಬಾಂಧವರೇ ಸ್ವಲ್ಪ ನಮ್ಮ ದೇಶದ ಇಂದಿನ ಒಟ್ಟಾರೆ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ.ನಮ್ಮ ಕಣ್ಣೆದುರಿಗೆ ಕುದಿಯುತ್ತಿರುವ ಕಾಶ್ಮೀರವೂ ಬರಲಿ, ಶಾಂತವಾಗಿರುವ ಪ್ರದೇಶಗಳೂ ಬರಲಿ. ಅಂತರ್ಜಾಲ ಸೌಲಭ್ಯ ಉಪಯೋಗಿಸುತ್ತಿರುವ ನಮಗೆ ಖಂಡಿತವಾಗಿಯೂ ಎರಡು ಹೊತ್ತು ಊಟಕ್ಕೆ ಕಷ್ಟಪಡುವ ಪರಿಸ್ಥಿತಿಯಿಲ್ಲ. ಆದರೆ ನಮ್ಮ ಸರ್ಕಾರಗಳು ಇಷ್ಟೆಲ್ಲಾ ಸವಲತ್ತುಗಳನ್ನು ನೀಡಿದರೂ ಇಂದಿಗೂ ಹಸಿದಜನರ ನೆರಳಾಟ ತಪ್ಪಿಲ್ಲ. ದುರ್ಬಲರ ಶೋಷಣೆ ತಪ್ಪಿಲ್ಲ. ಅಮಾಯಕರ ಮೇಲೆ ದೌರ್ಜನ್ಯವು ತಪ್ಪಿಲ್ಲ. ಹೌದು ನಾವು ಇಂದು ಇವೆಲ್ಲಾ ಚಿತ್ರವನ್ನೂ ನಮ್ಮ ಕಣ್ಮುಂದೆ ತಂದುಕೊಂಡು ಹಸಿದವರಿಗಾಗಿ ಮರುಕಪಟ್ಟು ನಮ್ಮ ಕೈಲಾದ ಕಿಂಚಿತ್ ಸೇವೆಯನ್ನು ನಮ್ಮ ದೇಶದ ದುರ್ಬಲರಿಗಾಗಿ ಮಾಡುತ್ತೇವೆಂಬ ಸಂಕಲ್ಪ ಮಾಡುವುದಾದರೆ ಇಂದಿನ ನಮ್ಮ ಸ್ವಾತಂತ್ರೋತ್ಸವ ಅರ್ಥಪೂರ್ಣ ವಾದೀತು.ತಾಯಿ ಭಾರತಿಗೆ ಜಯವಾಗಲಿ.