Pages

Tuesday, March 29, 2011

ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ?

ಗೃಹಪ್ರವೇಶ ಮಾಡಿಕೊಳ್ಳಲು ವಾಸ್ತು ಹೋಮ/ಗಣಪತಿ ಹೋಮಗಳು ಅನಿವಾರ್ಯವೇ? ಅಥವಾ ವೇದೋಕ್ತವಾಗಿ ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ? ದಯಮಾಡಿ ತಿಳಿಸುವಿರಾ? 
-ಶ್ರೀಧರ್
----------------------------------------------------------
 ಶ್ರೀ ಶ್ರೀಧರ್ ಜೀ!
ವೇದೋಕ್ತ ರೀತ್ಯಾ ಗೃಹಪ್ರವೇಶ ಮಾಡಿಸುವ ಕ್ರಮವಿದೆ. ಅದನ್ನು "ಶಾಲಾಕರ್ಮ ವಿಧಿ' ಎಂದು ಕರೆಯಲಾಗುತ್ತದೆ. ಅಗ್ನಿಹೋತ್ರವು ಅದರ ಪ್ರಧಾನ ಅಂಗ. ಅದರಲ್ಲಿ ವಾಸ್ತುಹೋಮ ಖಂಡಿತವಾಗಿ ಇರುತ್ತದೆ.
ಅದರ ನಿಜವಾದ ಅರ್ಥ ಆ ಸಂದರ್ಭದಲ್ಲಿ ವಿವರಿಸಲಾಗುವುದು.  ಅದರ ಸ್ವಲ್ಪ ಭಾಗ "ವಾಸ್ತು ಬೀಳದಿರಿ ಬೇಸ್ತು" ಪುಸ್ತಕದಲ್ಲಿದೆ.
              ಇಲ್ಲಿ ಇದುವರೆಗೂ ಬಂದ ಆಚರಣೆಗಳನ್ನು ಬಿಡುವ ಪ್ರಶ್ನೆಯಲ್ಲ ಇರುವುದು.  ಆ ಆಚರಣೆಗಳಲ್ಲಿ ಅರ್ಥವಿರುವುದನ್ನು ತಿಳಿದು ಮಾಡುವುದು ಮತ್ತು ಅರ್ಥವಿಲ್ಲದ್ದನ್ನು ಬಿಡುವುದು ಅಷ್ಟೇ.  ಅರ್ಥವಿಲ್ಲದ ಆಚರಣೆಗಳಿಂದ   ನಾವು ನಮ್ಮ ಸಾಮಾನ್ಯ ತಿಳಿವಳಿಕೆಗೂ ಅವಮಾನ ಮಾಡುತ್ತಿರುತ್ತೇವೆ.
ಈ ಬದಲಾವಣೆಯನ್ನು ಈ ವಿಷಯಗಳಿಗೆ ಇಷ್ಟಾದರೂ ತೆರೆದುಕೊಂಡಿರುವ ನಾವು, ನಮ್ಮ ಕುಟುಂಬವರ್ಗದವರೂ ಸಹಕರಿಸದಿದ್ದರೆ, ಸಾಮಾಜಿ ಸುಧಾರಣೆ ಆಗುವುದಾದರೂ ಎಂತು?
ನಿಮ್ಮ ಕುಟುಂಬವರ್ಗದವರ ಸಮಾಧಾನಕ್ಕಾಗಿ ಬೇಕಾದರೆ 'ಗಣಪತಿ' ಪೂಜೆಯನ್ನೂ ಮಾಡಬಹುದು.  (ವೇದೋಕ್ತ ಗಣಪತಿ ಬೇರೆ, ರೂಢಿಯ ಗಣಪತಿ ಬೇರೆ.  ಆ ಬಗ್ಗೆ ಅಲ್ಲಿ ಆಗ ವಿವರಣೆ ನೀಡಿದರೆ ಆಯಿತು.)
ಅವರ ಸಮಾಧಾನಕ್ಕಾಗಿ ಸತ್ಯನಾರಾಯಣ ಪೂಜೆ = ಸತ್ಯನಾರಾಯಣ ಯಜ್ಞವನ್ನೂ ಮಾಡೋಣ. ಅದಕ್ಕೇನಂತೆ.
ಹಿಂದೊಮ್ಮೆ ವೈದಿಕ ಸತ್ಯನಾರಾಯಣ ಪೂಜೆಯನ್ನು ಪುತ್ತಿಗೆ ಸ್ವಾಮೀಜಿಯವರ ಸಾನ್ನಿದ್ಧ್ಯದಲ್ಲಿ ಮಾಡಿರುತ್ತೇನೆ.  ಸಣ್ಣ ವ್ಯತ್ಯಾಸ.  ಫೋಟೋ ಬದಲಿಗೆ ಯಜ್ಞ.  ನಿಜವಾಗಿ ಸತ್ಯಕ್ಕೆ ಸಂಬಂಧಪಟ್ಟ ವೈದಿಕ ಮಂತ್ರಗಳ ವಿನಿಯೋಗ ಅಷ್ಟೇ.  ಎಲ್ಲವೂ ಅರ್ಥಸಹಿತವಾದ್ದರಿಂದ ಇವುಗಳ ಶ್ರೇಷ್ಠತೆ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮನಸ್ಸನ್ನೂ ಸೂರೆಗೊಳ್ಳುವುದು ಖಚಿತವೆಂದು ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳಬಹುದು.  (ನಿಜ.  ಹಿಂದೆ ಆಗಿದೆ ಎಂದ ಮೇಲೆ ಈ ಸಲವೂ ಆಗುತ್ತದೆಂಬ ಖಾತರಿ ಇಲ್ಲ. ಆದರೆ ಖಂಡಿತವಾಗಿಯೂ ಸಾಧ್ಯತೆ ಹೆಚ್ಚಿದೆ.  ಶುದ್ಧ ಮನಸ್ಸಿನಿಂದ ಪ್ರಯತ್ನಿಸೊಣ.) 
-ಸುಧಾಕರ ಶರ್ಮಾ.