Pages

Wednesday, September 28, 2016

ಚನ್ನರಾಯಪಟ್ಟಣ ಪ್ರವಾಸ.

ಇಂದು ಶ್ರೀ ಶೇಷಪ್ಪ, ನಾಗಭೂಷಣ್ ಜೊತೆ ಚನ್ನರಾಯಪಟ್ಟಣ ಪ್ರವಾಸ.ಪರಿಸರವಾದಿ ಮತ್ತು ಪತಂಜಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಅಶೋಕ್ ಮತ್ತು ಮಿತ್ರರ ಭೇಟಿ. ಗಣಪತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾಸತ್ಸಂಗದ ವಿಚಾರವನ್ನು ತಿಳಿಸುವ ಅವಕಾಶ. ನೂರು ಸಂಖ್ಯೆ ನಿರೀಕ್ಷೆ. ಅಶೋಕ್ ಅವರಿಂದ ನಮಗೆ ಗಿಡಗಳ ಉಡುಗೊರೆ.

ಹಾಸನದಲ್ಲಿ ನಡೆಯಲಿರುವ ಮಹಾ ಸತ್ಸಂಗಕ್ಕಾಗಿ ಸಕಲೇಶಪುರದಲ್ಲಿ ಭೈಠಕ್.



ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?



ಸುಳ್ಳು, ಸುಳ್ಳು,ಸುಳ್ಳು...........
ಅಬ್ಬಾ ಅದೆಷ್ಟು ಸುಳ್ಳು ಹೇಳೋದು!

ಸುಳ್ಳನ್ನು ಯಾರೋ ಅಮಾಯಕರು ಹೇಳಿದ್ದರೆ ಬೇಸರವಾಗುತ್ತಿರಲಿಲ್ಲ.ಅಮಾಯಕರಿಗೆ ಸುಳ್ಳು ಹೇಳುವವರನ್ನು ಕಂಡಾಗ ಬಲು ಬೇಸರವಾಗುತ್ತೆ.


ಪಾಪ! ಒಬ್ಬ ಅಮಾಯಕ ಅವನ ಕಷ್ಟಕಾಲದಲ್ಲಿ ಇವರನ್ನು ನಂಬಿ ಬಂದರೆ ಅವನಿಗೆ ಸಮಾಧಾನ ಹೇಳಿ ಆತ್ಮ ವಿಶ್ವಾಸವನ್ನು ತುಂಬುವ ಬದಲು ಅವನನ್ನು ಇನ್ನೂ ಪ್ರಪಾತಕ್ಕೆ ತಳ್ಳಿದರೆ!

ಇಂತಾ ಒಂದು ಘಟನೆಯನ್ನು ಅಮಾಯಕ ವ್ಯಕ್ತಿ ನನ್ನೊಡನೆ ಹೇಳಿಕೊಂಡಾಗ ಆತನಿಗೆ ಸಮಾಧಾನ ಹೇಳಿದ್ದೆ. ಆದರೂ ಆತನಿಗೆ ಪೂರ್ಣ ಸಮಾಧಾನವಿಲ್ಲ. ನನಗೆ ನಾಲ್ಕೈದು ದಿನಗಳಿಂದ ಫೋನ್ ಮಾಡುತ್ತಲೇ ಇದ್ದಾನೆ. ದುರಾದೃಷ್ಟಕ್ಕೆ ನಾನು ಸತ್ಸಂಗದಲ್ಲೋ,ಯೋಗ ತರಗತಿಯಲ್ಲೋ ಇರುವಾಗಲೇ ಆತನ ಫೋನ್ ಬರುತ್ತಿತ್ತು." ಒಂದು ಕಾರ್ಯಕ್ರಮದಲ್ಲಿರುವೆ ಮುಗಿದಮೇಲೆ ಮಾತನಾಡುವೆ" ಎಂದು ಹೇಳುತ್ತಿದ್ದೆ.ಆ ನಂತರ ಮರೆತು ಬಿಡುತ್ತಿದ್ದೆ.
ಕೊನೆಗೂ ಬಿಡುವಿದ್ದಾಗ ಫೋನ್ ಬಂತು.

- " ಸಾರ್ ನೀವು ನಮ್ಮನೆಗೆ ಬಂದು ಅಗ್ನಿ ಹೋತ್ರ ಮಾಡಿಸ ಬೇಕು.ಎಷ್ಟು ಖರ್ಚಾಗುತ್ತೆ? ಸಾರ್?

- 50 ರೂಪಾಯಿ ಖರ್ಚಾಗುತ್ತೆ.

- ಸಾರ್, ನನ್ನನ್ನು ನೋಡಿ ತಮಾಶೆ ಮಾಡ್ತೀರ ಸಾರ್?

- ಖಂಡಿತಾ ಇಲ್ಲ. ತುಪ್ಪಕ್ಕೆ 50 ರೂಪಾಯಿ ಆಗಬಹುದು ಅಷ್ಟೆ.

ಆತ ಇರುವುದು ಬೆಂಗಳೂರಿನಲ್ಲಿ. ಬೆಂಗಳೂರಿಗೆ ಹೋದಾಗ ಅವರ ಮನೆಗೆ ಹೋಗಿ ಅಗ್ನಿಹೋತ್ರ ಮಾಡಿ ಅವನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿಬರುವೆ. ಫೋನಿನ್ನಲ್ಲಿ ಸಾಕಷ್ಟು ಆಪ್ತ ಸಮಾಲೋಚನೆ ಮಾಡಿದ್ದಾಗಿದೆ.

ಆತನಿಗೆ ಕಷ್ಟ ಬಂದು ತೊಂದರೆಯಲ್ಲಿರುವಾಗ ತೊಂದರೆ ಪರಿಹರಿಸಲು ಆತನಿಗೆ ಕೊಟ್ಟ ಸಲಹೆಗೆ ತಗಲುವ ಖರ್ಚು ಎಷ್ಟು ಗೊತ್ತಾ?

ಬರೋಬರಿ 50 ಸಾವಿರ ರೂ!!

ಆತನ ಹತ್ತಿರ ಎರಡು ಹೊತ್ತು ಊಟಕ್ಕೆ ಗತಿ ಇಲ್ಲ!!

ಇದರಲ್ಲಿ ಯಾವುದೂ ಉತ್ಪ್ರೇಕ್ಷೆ ಇಲ್ಲ.

ನಾನು ಹಿಂದೆ ಕೂಡ ಇಂತಹ ಘಟನೆ ಬರೆದಿರುವೆ. ಆಗ ಮಿತ್ರರೊಬ್ಬರು ನನಗೆ ಮೆಸ್ಸೇಜ್ ಮಾಡಿದರು." ನೀವೇ ಹೀಗೆ ಬರೆದು ಬಿಟ್ಟರೆ! ಜನರಲ್ಲಿ ಧಾರ್ಮಿಕ ಶ್ರದ್ಧೆಯೇ ಹೊರಟು ಹೋಗಿ ಬಿಡುತ್ತೆ. ನೀವು ಸಾಮಾಜಿಕ ತಾಣಗಳಲ್ಲಿ ಬರೆಯುವ ಬದಲು ಅವರಿಗೆ ನೇರ ಮೆಸ್ಸೇಜ್ ಮಾಡ ಬಹುದಲ್ಲ! ಅಥವಾ ಫೋನಿನಲ್ಲೇ ತಿಳಿಸ ಬಹುದಲ್ಲ!

ಅವರದು ಒಂದು ರೀತಿಯ ಆಕ್ಷೇಪಣೆಯೇ ಅಗಿತ್ತು.
ಸರಿ- ಎಂದು ಸುಮ್ಮನಾದೆ.

ಕೆಲವು ದಿಗಳ ನಂತರ ಮುಕ್ತವಾಗಿ ಸಿಕ್ಕಾಗ ಹೇಳಿದೆ " ಇಂತಾ ಸಮಸ್ಯೆಗಳಲ್ಲಿ ನೆರಳುತ್ತಿರುವ ಬೇರೆಯವರಿಗೆ ಅನುಕೂಲವಾಗುವುದಿಲ್ಲವೇ?

- ಒಟ್ಟಿನಲ್ಲಿ ಹೆಚ್ಚು ವಿರೋಧಿಗಳನ್ನು ಕಟ್ಟಿಕೊಳ್ಳುತ್ತೀರಿ. ಅವರೆಂದರು.

ನಿಜವಾಗಿ ಹೇಳುವೆ " ಜನ ಮೆಚ್ಚಲಿ ಎಂದು ಹೊಗಳಿ ಬರೆಯಲಾರೆ. ಪ್ರಪಂಚದ ಸಮಸ್ಯೆಗಳಗೆಲ್ಲಾ ಪರಿಹಾರ ಸೂಚಿಸುವ ಬ್ರಮೆ ನನಗಿಲ್ಲ. ಆದರೆ ಸಾಮಾಜಿಕ ತಾಣಗಳಿಂದಲೇ ನನ್ನ ಬಗ್ಗೆ ತಿಳಿದು ನನ್ನ ಸಲಹೆ ಕೇಳಿದಾಗ ಬರೆಯದೆ ಇರಲಾರೆ.

ಯಾರೋ ಮೆಚ್ಚಲಿ ಎಂದು ಸುಳ್ಳನ್ನೇ ಬರೆಯಬೇಕೆ?

ಮತ್ತೊಮ್ಮೆ ಭಾರತವು ಜಗದ್ಗುರುವಾಗಲು......







ವಿಶ್ವದಲ್ಲಿ ಭಾರತಕ್ಕೆ ವಿಶೇಷವಾದಂತಹ ಗೌರವ ಇರುವುದು ಇಲ್ಲಿನ ಸಂಸ್ಕೃತಿ-ಪರಂಪರೆ ಮತ್ತು  ಇಲ್ಲಿನ ಜೀವನ ಶೈಲಿಗಾಗಿ. ಈಗಲೂ ಸಹ ಪಾಶ್ಚಿಮಾತ್ಯರು ನೆಮ್ಮದಿ ಹುಡುಕುತ್ತಾ ಭಾರತಕ್ಕೆ ಬರುತ್ತಾರೆ. ಕಾರಣ ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ತಪಸ್ಸನ್ನು ಮಾಡಿ ಜೀವನದ ಸತ್ಯವನ್ನು ಕಂಡು ಕೊಂಡು ಅದರಂತೆ ಇಲ್ಲಿನ ಜೀವನ ಶೈಲಿಯನ್ನು ರೂಪಿಸಿದರು. 
ಅದರ ವಿಶೇಷ ಏನು? 
ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ | ಸರ್ವೇಭದ್ರಾಣಿ ಪಶ್ಯಂತು| ಮಾ ಕಶ್ಚಿತ್ ದುಃಖ ಭಾಗ್‌ಭವೇತ್ || [ಎಲ್ಲರೂ ಸುಖವಾಗಿರಲಿ. ಎಲ್ಲರೂ ಆರೋಗ್ಯವಾಗಿರಲಿ.ಎಲ್ಲರೂ     
    ಆನಂದವಾಗಿರಲಿ.ಯಾರಿಗೂ ದುಃಖ ಬೇಡ]
ಕೃಣ್ವಂತೋ ವಿಶ್ವಮಾರ್ಯಂ [ವಿಶ್ವದ ಎಲ್ಲರನ್ನೂ ಶ್ರೇಷ್ಠರನ್ನಾಗಿ ಮಾಡೋಣ]
ವಸುಧೈವ ಕುಟುಂಬಕಮ್  [ಇಡೀ ಜಗತ್ತೇ ಒಂದು ಕುಟುಂಬ]
ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ [ ಅಥರ್ವಣ ವೇದ ೧೨.೧.೧೨]
[ಭೂಮಾತೆಯು ನಮ್ಮ ತಾಯಿಯಾಗಿದ್ದಾಳೆ. ನಾನು ಅವಳ ಪುತ್ರ]
ಅಹಂ ಬ್ರಹ್ಮಾಸ್ಮಿ - ತತ್ ತ್ವಂ ಅಸಿ [ ಭಗವಂತನ ಸ್ವರೂಪವೇ ನಾನು, ನೀನೂ ಅದೇ ಆಗಿದ್ದೀಯೆ]
ಮಾತೃವತ್ ಪರದಾರೇಶು, ಪರದ್ರವ್ಯೇಶು ಲೋಷ್ಠವತ್, ಆತ್ಮವತ್ ಸರ್ವಭೂತೇಶು.......
[ ಪರಸ್ತ್ರೀಯರು ನನ್ನ ತಾಯಿ ಸ್ವರೂಪ, ಇನ್ನೊಬ್ಬರ ಸಂಪತ್ತು ನನಗೆ ಮಣ್ಣಿನ ಹೆಂಟೆಯ ಸಮಾನ, ಎಲ್ಲರಲ್ಲೂ ಪರಮಾತ್ಮನಿದ್ದಾನೆ ]

ಈಗೇನಾಗಿದೆ?

  ಇಂತಾ ಉದಾತ್ತ ವಿಚಾರಗಳಿಂದ ಕೂಡಿದ ನಮ್ಮ ಸಂಸ್ಕೃತಿ-ಪರಂಪರೆಯು  ಹಿಡಿಯಷ್ಟು ಸ್ವಾರ್ಥ ಜನರ ಕಾರಣ ನಶಿಸುತ್ತಾ ಬಂದು ಮನುಷ್ಯನ ನೈತಿಕ ಮೌಲ್ಯಗಳಲ್ಲಿ ಆದ ಕುಸಿತದ ಪರಿಣಾಮವನ್ನು ನಮ್ಮ ದೇಶವು ಎದಿರಿಸುತ್ತಿರುವುದನ್ನು ನಾವು ನಿತ್ಯವೂ ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ನೋಡ ಬಹುದಾಗಿದೆ.

ನಿತ್ಯವೂ ನಾವು ಪತ್ರಿಕೆಗಳಲ್ಲಿ  ಕಾಣುವ ಸುದ್ದಿಗಳೇನು?

* ಕೊಲೆ, ಸುಲಿಗೆ, ಮೋಸ! 
* ಜಾತಿ ಜಾತಿಗಳ ನಡುವೆ ದ್ವೇಷ!
* ದೇವರ ಹೆಸರಲ್ಲಿ ಸಂಘರ್ಷ!
* ಧರ್ಮದ ಹೆಸರಲ್ಲಿ ಸಂಘರ್ಷ!
* ಭಾಷೆಯ ಹೆಸರಲ್ಲಿ ಸಂಘರ್ಷ!
* ಹಸುಳೆಯ ಮೇಲೆ ಅತ್ಯಾಚಾರ!
* ದೇಶದ ಸಂಪತ್ತಿನ ಲೂಟಿ!
* ಮತಾಂತರ!
* ಗೋಹತ್ಯೆ!

ಈ ದುರಂತಗಳಿಗೆಲ್ಲಾ ಕಾರಣ ಏನು?

ಮೇಲೆ ತಿಳಿಸಿರುವ ನಮ್ಮ ಋಷಿಮುನಿಗಳು ನಮಗೆ ಕೊಟ್ಟಿರುವ ಮಾರ್ಗದಲ್ಲಿ ನಾವು ಸಾಗುವುದರಲ್ಲಿ ವಿಫಲರಾಗಿದ್ದು ಇಂದಿನ ದುರಂತಗಳಿಗೆ ಮುಖ್ಯ ಕಾರಣವಾಗಿದೆ.ಪ್ರತಿಯೋಂದು ಶ್ಲೋಕಗಳನ್ನೂ ವಿಶ್ಲೇಶಿಸುವ ಅಗತ್ಯವೇನೂ ಇಲ್ಲ. ಎಲ್ಲವೂ ಉದಾತ್ತ ಚಿಂತನೆಗಳೇ ಆಗಿವೆ.
ವಿವೇಕಾನಂದರು ಅತ್ಯಂತ ಚಿಂತಿತರಾಗಿದ್ದು ಇಂತಾ ಉದಾತ್ತ ಚಿಂತನೆಗಳು ಎಲ್ಲಿ ಹೇಗೆ ಮಾಯವಾಯ್ತು? ಎಂಬ ಕಾರಣ ದಿಂದಲೇ. ಇಂತಾ ಭವ್ಯವಾದ ಸಂಸ್ಕೃತಿಯಲ್ಲಿ ಜನಿಸಿದ ನಮ್ಮ ವರ್ತನೆ ಏಕೆ ಹೀಗೆ? ಕನ್ಯಾಕುಮಾರಿಯ ಸಮುದ್ರದ ಬಂಡೆಯ ಮೇಲೆ ತಪಸ್ಸಿಗೆ ಕುಳಿತಾಗ ಭಗವತಿ ಕನ್ಯಾಕುಮಾರಿಯನ್ನು ವಿವೇಕಾನಂದರು ಪ್ರಾರ್ಥಿಸಿದ್ದು ಇದನ್ನೇ!  ತಾಯಿ ನನಗೆ ಮುಕ್ತಿ ಬೇಡ. ನಮ್ಮ ದೇಶದಲ್ಲಿ ತಾಂಡವವಾಡುತ್ತಿರುವ ಅಜ್ಞಾನವನ್ನು ದೂರ ಮಾಡು. ಈ ದೇಶದ ಅತ್ಯಂತ ಬಡಪಾಯಿಯೂ ಹಸಿವಿನಿಂದ ನೆರಳಬಾರದು. ಅಂತಹ ಸ್ಥಿತಿಯನ್ನು ದೇಶದಲ್ಲಿ ನಿರ್ಮಾಣಮಾಡಲು ನನಗೆ ಶಕ್ತಿ ಕೊಡು

ಒಂದು  ಶತಮಾನದ ಹಿಂದೆ ವಿವೇಕಾನಂದರು ಯಾವ ವಿಷಯದಲ್ಲಿ ಚಿಂತಿತರಾಗಿದ್ದರೋ ಆ ಸಮಸ್ಯೆಗಳು ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವುದು ಸುಳ್ಳಲ್ಲ! ನೈತಿಕ ಮೌಲ್ಯಗಳು ಇದೇ ರೀತಿ ಕುಸಿಯುತ್ತಾ ಹೋದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವೇನು?

ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು:

ನಮ್ಮ ಈಗಿನ ಪೀಳಿಗೆಗೆ ನಮ್ಮ ಉದಾತ್ತ ವಿಚಾರಗಳ ಪರಿಚಯವನ್ನು  ಮತ್ತೊಮ್ಮೆ ಮಾಡಿಕೊಡಲೇ ಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಇದನ್ನೆಲ್ಲಾ ಆಳವಾಗಿ ಅರಿತಿರುವ ಪೂಜ್ಯ ಸ್ವಾಮಿ ಬಾಬಾ ರಾಮ ದೇವ್ ಜಿ ಯವರು  ನಮ್ಮ ದೇಶದ ಇಂತಾ  ದುಃಸ್ಥಿತಿಗೆ ಪರಿಹಾರವೆಂದರೆ ನಮ್ಮ ಋಷಿಪರಂಪರೆಯ ಪುನರುತ್ಥಾನ ಮಾತ್ರ. ಎಂದರಿತು ಯೋಗದ ಮೂಲಕ ಜನರ ಆರೋಗ್ಯ ಸುಧಾರಿಸುವುದರ ಜೊತೆಗೆ ಜನರಿಗೆ ನಮ್ಮ ಋಷಿಪರಂಪರೆಯ ಶ್ರೇಷ್ಠತೆಯನ್ನು ಪರಿಚಯಿಸುವ ಯೋಜನೆಯನ್ನು ರೂಪಿಸಿದ್ದಾರೆ.
ಗುರುಕುಲ ಶಿಕ್ಷಣ: 
ಪತಂಜಲಿ ಯೋಗ ಪೀಠದ ಮೂಲಕ ಹತ್ತಾರು ಯೋಜನೆಗಳನ್ನು ರೂಪಿಸಿದ್ದಾರೆ. ಜಿಲ್ಲೆಗೊಂದರಂತೆ ಆಚಾರ್ಯ ಕುಲಮ್ [ಗುರುಕುಲ] ಗಳನ್ನು ಆರಂಭಿಸಲಿದ್ದಾರೆ. ಅಲ್ಲಿ ಇಂದಿನ ಆಧುನಿಕ ವಿಜ್ಞಾನದ ಶಿಕ್ಷಣವನ್ನು ಕೊಡುವುದರ ಜೊತೆಗೆ ನಮ್ಮ ಋಷಿಪರಂಪರೆಯ ವೇದ/ಉಪನಿಷತ್ತುಗಳು, ಭಾರತೀಯ ಸಂಗೀತ, ಸಾಹಿತ್ಯ, ಕಲೆಗಳು ಮತ್ತು ಯೋಗದ ಶಿಕ್ಷಣವನ್ನು ಕೊಡಲಾಗುತ್ತದೆ. ಸ್ವದೇಶೀ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ಈಗಾಗಲೇ ಆರಂಭವಾಗಿ  ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದು ಬೆಳೆಯುತ್ತಿದೆ. 

ಪತಂಜಲಿ ಯೋಗ ಪೀಠವೆಂದರೆ ಕೇವಲ ಯೋಗ ಕೇಂದ್ರವಲ್ಲ

ಜನರಿಗೆ ಯೋಗ ಕಲಿಸುವುದರ ಮೂಲಕ ಚಟುವಟಿಕೆಗಳನ್ನು ಆರಂಭಿಸಿ, ಜೊತೆಜೊತೆಗೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುತ್ತ  ಭಾರತವು ಮತ್ತೊಮ್ಮೆ ಜಗದ್ಗುರು ವಾಗಬೇಕೆಂಬ ಮಹಾನ್ ಉದ್ದೇಶದಿಂದ ಪತಂಜಲಿ ಯೋಗ ಪೀಠವು ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಸಹ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಯೋಗವನ್ನು ಯಾವುದೇ ಗುರುವಿನೊಡನೆ ಕಲಿಯುತ್ತಿದ್ದರೂ ಸಹ ಸ್ವಾಮಿ ಬಾಬಾ ರಾಮ್ ದೇವ್ ಜಿ ಯವರ ಮಹಾನ್ ಉದ್ದೇಶಕ್ಕಾಗಿ ಪತಂಜಲಿ ಯೋಗಪೀಠದೊಡನೆ ಕೈಜೋಡಿಸುವುದು ನಮ್ಮ ಋಷಿ ಸಂಸ್ಕೃತಿಯನ್ನು ಕಾಪಾಡ ಬೇಕೆಂಬ ಎಲ್ಲರ  ಕರ್ತವ್ಯವಾಗಿದೆ.
ಇದು ನಮಗಾಗಿ ಮತ್ತು ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ
ಭಾರತ್ ಮಾತಾ ಕಿ ಜೈ
-ಹರಿಹರಪುರಶ್ರೀಧರ್