Pages

Tuesday, March 24, 2015

ಜನರಿಗೆ ಸತ್ಯ ತಿಳಿಸುವವರಾರು?

ಜನರಿಗೆ ಸತ್ಯ ತಿಳಿಸುವವರಾರು?   ಹಲವು ಸಂದರ್ಭದಲ್ಲಿ ನನ್ನ ಕಣ್ಮುಂದೆ ಈ ಪ್ರಶ್ನೆ ಹೆಮ್ಮರವಾಗಿ ನಿಲ್ಲುತ್ತದೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ  ಅಸತ್ಯ-ಅಧರ್ಮ-ದಬ್ಬಾಳಿಕೆ-ಬೂಟಾಟಿಕೆ-ಭಯದ ವಾತಾವರಣ ಎದ್ದು ಕಾಣುತ್ತದೆ. ಬ್ರಷ್ಟಾಚಾರದ ವಿರುದ್ಧ ಹೋರಾಟಮಾಡುವ ಹೆಸರಲ್ಲಿ ಜನರಿಂದ ಸುಲಿಗೆ ಮಾಡುವವರಿಗೇನೂ ಕಮ್ಮಿ ಇಲ್ಲ. ಧರ್ಮದ ಹೆಸರಲ್ಲೂ ಸುಲಿಗೆ. ರಾಜಕಾರಣವಂತೂ ಹೊಲಸೆದ್ದು ಹೋಗಿದೆ, ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾದ ಪ್ರಾಮಾಣಿಕ ಸೇವಾಮನೋಭಾವನೆಯ ವ್ಯಕ್ತಿಯು ರಾಜಕೀಯ ಪ್ರವೇಶಮಾಡಿ ಒಂದು ನಗರಸಭೆಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅಲ್ಲೂ ಹಣದ,ಜಾತಿಯ ಪ್ರಭಾವ. ಇನ್ನು ದೇವಾಲಯಗಳಲ್ಲಿ ಭಕ್ತರಲ್ಲಿಯೇ ತಾರತಮ್ಯ. ಶ್ರೇಣೀಕೃತ ಭಕ್ತರು!  ಮಠಮಂದಿರಗಳಲ್ಲೂ ತಾರತಮ್ಯ. ಜಾತಿಗೆ ಪ್ರಾಶಸ್ತ್ಯ!

ಇದಕ್ಕೆಲ್ಲಾ ಕಾರಣ ಏನು ಗೊತ್ತೇ? ನಮಗೆ ಸತ್ಯದರ್ಶನವಾಗಿಲ್ಲ. ಸತ್ಯ ತಿಳಿದಿಲ್ಲ. ಭಗವಂತನ ಅಸ್ತಿತ್ವದ ಬಗ್ಗೆಯೇ ಸರಿಯಾದ ಅರಿವಿಲ್ಲ. ಭಗವಂತನು ನಿರಾಕಾರಿ, ಸರ್ವವ್ಯಾಪಿ, ಸರ್ವಶಕ್ತ ಎಂಬ ನಿಜದ ಅರಿವು ನಮಗುಂಟಾದರೆ,  ಬದುಕಿನ ಉದ್ದೇಶ ತಿಳಿದರೆ  ಮುಂದೆ ಯಾವಕ್ಷೇತ್ರವೂ ನಮಗೆ ಸಮಸ್ಯೆ ಎನಿಸುವುದೇ ಇಲ್ಲ.  ಹಲವು ವೇಳೆ ನಾವು ಭಯದ ನೆರಳಲ್ಲೇ ಬದುಕು ಸಾಗಿಸುತ್ತೇವೆ. ಕಾರಣ ಬೇರೆ ಏನೂ ಅಲ್ಲ. ಸತ್ಯದ ಅರಿವಿರುವುದಿಲ್ಲ. ನಮ್ಮಲ್ಲಿ  ಮನೆ ಮಾಡಿರುವ ಭಯ ಮತ್ತು ಮೌಢ್ಯ ಎರಡು ಸಂಗತಿಗಳು ದೂರವಾದರೆ ನಮ್ಮನ್ನು ಧರ್ಮದ ಹೆಸರಲ್ಲಿ ,ದೇವರಹೆಸರಲ್ಲಿ, ಕಾನೂನಿನ ಹೆಸರಲ್ಲಿ  ಶೋಷಿಸುವ, ವಂಚಿಸುವ ಜನರನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.

ಸ್ವತಂತ್ರ ಭಾರತದಲ್ಲಿ ಆಗಬೇಕಾಗಿರುವುದು ಜನರಿಗೆ ಸತ್ಯವನ್ನು ತಿಳಿಸುವ ಕೆಲಸ. ವೇದದ ನಿಜವಾದ ಅರಿವಿದ್ದರೆ ಸತ್ಯವು ಮನವರಿಕೆಯಾಗುತ್ತದೆ. ವೇದದ ಹೆಸರಿನಲ್ಲಿಯೇ ನಡೆಯುತ್ತಿರುವ ಬೂಟಾಟಿಕೆಗಳೆಲ್ಲಾ ದೂರವಾಗ ಬೇಕಾದರೆ ವೇದದ ನಿಜ ಅರಿವು ಮೂಡಬೇಕು

ವೇದದ ಅರಿವು ಮೂಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆಂದು ಹೇಗೆ ಹೇಳುವಿರಿ-ಎಂಬುದು ತಾನೇ ನಿಮ್ಮ ಪ್ರಶ್ನೆ.ಅದಕ್ಕೆ ವೇದದಲ್ಲಿಯೇ ಉತ್ತರವಿದೆ.

ನಾವು ಬಹುಪಾಲು ಭಯದಿಂದ ಬದುಕಿರುವುದು ದೇವರ ಹೆಸರಲ್ಲಿ. ಆ ದೇವರ ಬಗ್ಗೆ ಸ್ಪಷ್ಟ    ಕಲ್ಪನೆ ವೇದದಲ್ಲಿ ದೊರೆಯುತ್ತದೆ. ಅದೊಂದು ಶಕ್ತಿ .ಇಡೀ ಬ್ರಹ್ಮಾಂಡದ ಎಲ್ಲಾ ಚಲನವಲನ-ಚಟುವಟಿಕೆಗಳ ನಿಯಂತ್ರಣ  ಶಕ್ತಿ. ಅದನ್ನು ನೋಡಲು ಸಾಧ್ಯವೇ ಇಲ್ಲ.ಅನುಭವಿಸಬಹುದು ಅಷ್ಟೆ. ಆಶಕ್ತಿಯ ಸರಿಯಾದ ಅರಿವಿಲ್ಲದೆ ದೇವರವಾರಸುದಾರರೆಂದು ಬೀಗುವ ದಳ್ಳಾಳಿಗಳ ಆಟಾಟೋಪಕ್ಕೆ  ನಾವೆಲ್ಲಾ ಬಲಿಯಾಗಿದ್ದೇವೆಂದರೆ ನನಗೆಲ್ಲೋ ತಲೆಕೆಟ್ಟಿದೆ-ಎನಿಸಬಹುದು.ಆದರೆ ಅದೇ ಸತ್ಯ.

ಭಗವಂತನು ನಿಮ್ಮಲ್ಲಿ, ನನ್ನಲ್ಲಿ, ಒಂದು ಹುಳುವಿನಲ್ಲೂ ಇದ್ದಾನೆ.ಎಲ್ಲವನ್ನೂ ನಡೆಸುತ್ತಿದ್ದಾನೆ.ಅವನು ಒಬ್ಬನೇ.ಅವನ ಹೆಸರಲ್ಲಿ ಕಿತ್ತಾಟ ನಡೆಯುತ್ತಿಲ್ಲವೇ? ಬೇಕೇ?

ಇನ್ನು ಜಾತಿಯ ಬಗ್ಗೆ ಸಂಘರ್ಷ. ವೇದದಲ್ಲಿ ಜಾತಿಯ ಸುಳಿವೂ ಇಲ್ಲ. ಮಾನವರೆಲ್ಲರೂ ಒಬ್ಬ ತಾಯಿಯ ಮಕ್ಕಳೆಂದು ವೇದವು ಸಾರುತ್ತದೆ. ಆದರೂ ವೇದದ ಹೆಸರಲ್ಲೇ ಜಾತೀಯತೆ ನಡೆಯುತ್ತದೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರಾರು?

ಸ್ವಾತಂತ್ರ್ಯ ಬಂದು ಏಳು ದಶಕಗಳು ಮುಗಿಯುತ್ತಾ ಬಂತು. ಯಾವ ಋಷಿಮುನಿಗಳ ತಪಸ್ಸಿನಿಂದ ನಮಗೆ "ವೇದವೆಂಬ" ಒಂದು ಜ್ಞಾನ ಭಂಡಾರ ಲಭ್ಯವಾಗಿದೆಯೋ ಅದರ ಸೂತ್ರಗಳ ಮೇಲೆ ನಮ್ಮ ವ್ಯವಸ್ಥೆಯನ್ನು ಬಲಪಡಿಸುತ್ತಾ ಹೋಗಿದ್ದರೆ ನಮ್ಮ ದೇಶವು ಇಂದಿನ ಕೆಟ್ಟಸ್ಥಿತಿಯಲ್ಲಿರಬೇಕಾಗಿರಲಿಲ್ಲ. ಇನ್ನೂ ಕಾಲಮಿಂಚಿಲ್ಲ. ನಮ್ಮ ದೇಶವನ್ನು ಮುನ್ನಡೆಸುವುದಕ್ಕೆ    ಹೊರಗಿನಿಂದ ಶಿಕ್ಷಣ ಪಡೆಯಬೇಕಾಗಿಲ್ಲ. ವೇದವೆಂಬ ಜ್ಞಾನ ಭಂಡಾರದ ವ್ಯಾಪಕ ಅಧ್ಯಯನ ಆಗಬೇಕು. ಇಲ್ಲಿ ಒಂದು ತಪ್ಪು ಭಾವನೆ ಕೂಡ ಇದೆ. ವೇದವೆಂದರೆ ಹೋಮಹವನಗಳನ್ನು    ಮಾಡಿಸಲು ಬೇಕಾದ ಮಂತ್ರಗಳನ್ನು ಕಲಿಯುವುದು! ಈ ಭಾವನೆ ದೂರವಾಗಬೇಕು. ವೇದವೆಂದರೆ ಸಮಸ್ತ ಬದುಕಿನ ಜ್ಞಾನ ಭಂಡಾರ. ಅದರ ಆಮೂಲಾಗ್ರ ಅಧ್ಯಯನ ಆದರೆ ನಮ್ಮ  ಸಾಮಾಜಿಕ ಬದುಕಿನ, ವೈಯಕ್ತಿಕ ಬದುಕಿನ, ರಾಷ್ಟ್ರದ ಅಭಿವೃದ್ಧಿಯ ಎಲ್ಲಾ ವಿಚಾರಕ್ಕೂ  ಮಾರ್ಗದರ್ಶನ ಸಾಧ್ಯ. ಈ ಬಗ್ಗೆ ಒತ್ತಾಯ ಮಾಡುವ ಶಕ್ತಿ ವೃದ್ಧಿಯಾಗಬೇಕಾಗಿದೆ.