Pages

Saturday, July 24, 2010

|| ಗುರು ಬುದ್ಧಿ ವಿಶೇಷತಃ ||



|| ಗುರು ಬುದ್ಧಿ ವಿಶೇಷತಃ ||

ಜಗತ್ತಿನಲ್ಲಿ ಎಲ್ಲರ ಬುದ್ಧಿಗಿಂತ ಗುರುಬುದ್ಧಿ ವಿಶೇಷ ಎಂದು ಪ್ರಮಾಣೀಕೃತವಾಗಿದೆ! ಇದು ಇಂದಿನ ನಮ್ಮ ವಿಜ್ಞಾನಕ್ಕೂ ಸವಾಲೊಡ್ಡಿ ಜಯಿಸಬಹುದಾದ ವಿಷಯ! ಸದ್ಗುರುವೊಬ್ಬ ಕೇವಲ ತನ್ನ ತಪೋಬಲದಿಂದ ಕುಳಿತಲ್ಲೇ ಎಲ್ಲವನ್ನೂ ಗಳಿಸಬಲ್ಲ. ಎಲ್ಲಾ ಜ್ಞಾನ, ಭಾಷೆ, ಪರಿಕರ ಏನು ಬೇಕು ಹೇಳಿ ಅದನ್ನೆಲ್ಲವನ್ನೂ ಪಡೆಯಬಲ್ಲ ಯೋಗಸಿದ್ಧಿ ಗುರುವಿಗೆ ಸಾಧ್ಯ. ಹಾಗಂತ ಎಲ್ಲಾ ಗುರುವಿಗೂ ಅದು ಧಕ್ಕಲೇ ಬೇಕೆಂತಿಲ್ಲ ಅಥವಾ ಧಕ್ಕಿದವರೆಲ್ಲ ಅದನ್ನು ಪ್ರಯೋಗಿಸಿ ತೋರಿಸಬೇಕೆಂದಿಲ್ಲ.

ತನಗಾಗಿ ಪರಿತಪಿಸದ, ತನ್ನ ಹೊಟ್ಟೆಬಟ್ಟೆಯ ಹಾಗೂ ತನ್ನ ಸ್ವಾಸ್ಥ್ಯದ ಚಿಂತೆಯನ್ನು ಮರೆತು ಕೇವಲ ಆತ್ಮೋನ್ನತಿ ಬಯಸಿ, ಮೋಕ್ಷ ಬಯಸಿ ತಪಸ್ಸನ್ನಾಚರಿಸುವ ಯತಿಗೆ ಗುರುವೆನ್ನುತ್ತಾರೆ. ಸದ್ಗುರುವಾದವನು ’ನಾನು’ ಎಂಬ ಅನಿಸಿಕೆ ತೊರೆದು ’ನಾವು’ ಎಂಬ ಹಂತವನ್ನು ತಲ್ಪಿ ತನ್ನ ಆತ್ಮೋದ್ಧಾರದ ಜೊತೆಗೆ ನಂಬಿಬಂದ ಶಿಷ್ಯಗಣದ ಉದ್ಧಾರವನ್ನು ಬಯಸುತ್ತಾನೆ. ಇಂತಹ ಸಾಧನೆಯ ಮಾರ್ಗ ಬಲು ದುರ್ಗಮ, ಬಹಳ ಕಠಿಣ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಈ ದಿನಗಳಲ್ಲಿ ಸಿಗುವ ಕಣ್ಣಿಗೆ ರಾಚುವ ಹಲವು ಐಹಿಕ ಸುಖೋಪಭೋಗಗಳನ್ನು ತ್ಯಜಿಸಿ ಏಕನಿಷ್ಠೆಯಿಂದ ಇಂದ್ರಿಯನಿಗ್ರಹಮಾಡಿ ಸಾಧನೆಮಾಡುವುದು ವಜ್ರಾದಪಿ ಕಠೋರ! ಹಿಂದಿನ ಕಾಲದಲ್ಲಿ ಸರಿಸುಮಾರು ೧೯ ನೇ ಶತಮಾನಕ್ಕೂ ಮುಂಚೆ ಕೊನೇಪಕ್ಷ ಸರಿಯಾದ ಶಿಷ್ಯಂದಿರಾದರೂ ಸಿಗುತ್ತಿದ್ದರು, ಈಗ ನಿಜವಾದ ಸನ್ಯಾಸಿಗಳಿಗೆ ಶಿಷ್ಯರು ಸಿಗುವುದು ದುರ್ಲಭ, ಅದೇ ಢಾಂಬಿಕರಿಗೆ ಬಹಳಜನ ಸಿಗುತ್ತಾರೆ!

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತ

ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಈ ಹುಣ್ಣಿಮೆಯ ದಿನ ಗುರುವನ್ನು ನೆನೆಯುವುದರಿಂದ, ದರ್ಶಿಸುವುದರಿಂದ, ತೀರ್ಥ-ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ ವಿಷಿಷ್ಟ ಅನುಭೂತಿ ಉಂಟಾಗುವುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ನಮಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ತಿದ್ದಿಬರೆಸಿದ, ಗುದ್ದು ಕೊಟ್ಟು ಒಂದು ಮನುಷ್ಯರೂಪಕ್ಕೆ ತಂದ ಗುರುವಿಗಲ್ಲದೇ ನಮ್ಮೊಳಗಿನ ನಮ್ಮಾತ್ಮಕ್ಕೆ ಪರದ ತತ್ವವನ್ನು ಪರಿಚಯಿಸುವ, ಆ ಮೂಲಕ ಆತ್ಮಕ್ಕೆ ಉತ್ತಮ ಸಂಸ್ಕಾರ ಕೊಡುವ ಗುರುಗಳೆಲ್ಲರನ್ನೂ ನೆನಪುಮಾಡಿಕೊಂಡು ಅವರ ಪಾದಾರವಿಂದಗಳಿಗೆ ಶಿರಸಾ ವಂದಿಸುವ ದಿನವೇ ಗುರುಪೂರ್ಣಿಮೆ. ಗುರುವಿನ ಮೂಲವನ್ನು ಹುಡುಕಿದರೆ ಅದು ಪರೋಕ್ಷ ಆದಿನಾರಾಯಣ ಅಂದರೆ ಮಹಾವಿಷ್ಣುವನ್ನೇ ಪುನಃ ಸೇರುತ್ತದೆ. ಯಾವ ಪರಂಪರಾ ಶ್ಲೋಕವನ್ನೇ ತೆಗೆದುಕೊಂಡರೂ ಮೂಲದಲ್ಲಿ ಆ ಶ್ಲೋಕ ನಾರಾಯಣನ ಕುರಿತೇ ಪ್ರಾರಂಭವಾಗುತ್ತದೆ.

ಭಗವಂತ ತನ್ನ ಭಕ್ತರ ಒಳಿತಿಗಾಗಿ, ಅವನಾಡುವ ನಾಟಕದ ಪಾತ್ರಧಾರಿಗಳಿಗೆ ಪರೋಕ್ಷ ಸಹಕರಿಸಲಾಗಿ, ಹಾರಾಡುವ ಮತಿಗೆಟ್ಟ ಜನರ-ರಕ್ಕಸ ಸಂಸ್ಕೃತಿಯ ದಮನಕ್ಕಾಗಿ ಆಗಾಗ ಬೇರೆಬೇರೆ ರೂಪದಲ್ಲಿ ಅವತರಿಸುತ್ತಾನೆ ಎಂಬುದನ್ನು ಅವನೇ ಗೀತೆಯಲ್ಲಿ ಹೇಳಿದ್ದಾನಲ್ಲವೇ ? ಈ ಅವತಾರಗಳಲ್ಲಿ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂಬ ಕೆಲವು ಭೇದಗಳಿವೆ. ಉದಾಹರಣೆಗೆ ವರಾಹ, ನಾರಸಿಂಹ, ರಾಮ, ಕೃಷ್ಣ ಇವೆಲ್ಲ ಪೂರ್ಣಾವತಾಗಳಾದರೆ ತಿರುಪತಿ ಶ್ರೀನಿವಾಸ, ದತ್ತಾತ್ರೇಯ, ಅಯಪ್ಪ ಇವುಗಳೆಲ್ಲಾ ಅಂಶಾವತಾರಗಳು. ವ್ಯಾಸ, ಪರಾಶರ, ಶಂಕರ, ರಾಮಾನುಜ, ಮಧ್ವ ಈ ಥರದವೆಲ್ಲಾ ಅಂಶಾಂಶಾವತಾರಗಳೆಂದರೆ ತಪ್ಪೇನಿಲ್ಲ. ಹೀಗೇ ಹಲವು ಸ್ತರಗಳಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಗೋಚರಿಸುವ ಈ ಗುರುಪರಂಪರೆಗಳಲ್ಲಿ ಏರುತ್ತಾ ಏರುತ್ತಾ ಹಿಂದಕ್ಕೆ ಹೋದರೆ ಕಾಣುವುದು ಶ್ರೀಮನ್ನಾರಾಯಣ ಸ್ವರೂಪ! ನನಗೊಬ್ಬ ಗುರು, ಆ ಗುರುವಿಗೆ ಇನ್ನೊಬ್ಬ ಗುರು, ಅವರ ಗುರುವಿಗೆ ಮತ್ತೊಬ್ಬ ಗುರು ಹೀಗೇ ಸ್ತರಗಳು ಮೇಲೆ ಹೋಗುತ್ತವೆ. ಒಟ್ಟಿನಲ್ಲಿ ಇಡೀ ಗುರುಸಂಕುಲವನ್ನೇ ಧ್ಯಾನಾವಾಹನಾದಿ ಪೂಜೆ ನಡೆಸಿ ಒಮ್ಮೆ ಅವರ ಋಣ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಈ ಗುರುಪೂಜೆಯನ್ನು ಆಯಾಯ ಧರ್ಮಗಳವರು ಅವರವರ ಧರ್ಮಾನುಸಾರ ನೆರವೇರಿಸಬಹುದು.

ಮಳೆಗಾಲದಲ್ಲಿ ಮುಂಗಾರಿನ ಮಳೆಯ ಸೇಚನಕ್ಕೆ ಭೂಮಿ ನೆನೆದಾಗ ಅಲ್ಲಿ ಹಲವು ಥರದ ಕ್ರಿಮಿಕೀಟಗಳು ಹುಟ್ಟಿಕೊಂಡು ಭೂಮಿಯ ಮೇಲ್ಪದರದಲ್ಲಿ ನೆಲೆಗೊಳ್ಳುತ್ತವೆ. ಕಪ್ಪೆಮರಿಗಳು, ಏಡಿಮರಿಗಳು, ಎರೆಹುಳುಗಳು, ಶತಪದಿ, ಸಹಸ್ರಪದಿ, ಚೇಳು, ಪಡಚೇಹುಳು, ಶಂಖದ ಹುಳು, ಬಸವನಹುಳು .....ಹೀಗೇ ಒಂದೆರಡಲ್ಲ ಅನೇಕ ಸಹಸ್ರಥರದ ಪ್ರಭೇದಗಳನ್ನು ಹೊಂದಿರುವ ಕೀಟಕುಟುಂಬಗಳ ಸಂತಾನವೃದ್ಧಿ ಈ ಕಾಲಘಟ್ಟದಲ್ಲಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಬೋಧಿಸುವ-ಪ್ರತಿಪಾದಿಸುವ ಸನ್ಯಾಸಿಗಳು ಓಡಾಡಿದರೆ ತಾನು ಎಲ್ಲಿ ಅವುಗಳ ಜೀವಕ್ಕೆ ಕುತ್ತು ತರಬೇಕಾಗುತ್ತದೋ ಎಂಬ ಅನಿಸಿಕೆಯಿಂದ ಒಂದು ಸರಿಯಾದ ತಪೋಯೋಗ್ಯ ಜಾಗ ಹುಡುಕಿ ಅಲ್ಲಿ ನಾಲ್ಕು ಮಾಸಗಳು ಅಥವಾ ನಾಲ್ಕು ಪಕ್ಷಗಳ ಪರ್ಯಂತ ತಪಸ್ಸಿನಲ್ಲಿ ಮಗ್ನರಗುತ್ತಾರೆ. ಒಂದೇ ಕಡೆ ಅವರು ಹಾಗೆ ಮೊಕ್ಕಾಂ ಹೂಡಿರುವ ವೇಳೆ ಬೇರೆ ಬೇರೆ ಸ್ಥಳಗಳ ಶಿಷ್ಯರು ಗುರುವನ್ನು ಕಾಣಲೂ ಸಾಧ್ಯವಾಗುತ್ತದೆ. ಹೀಗಾಗಿ ವ್ಯಾಸಮಹರ್ಷಿಯನ್ನೂ ತಮ್ಮ ಗುರುಸಂಕುಲವನ್ನೂ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರದಿಂದಲೂ ನೈವೇದ್ಯವೇ ಮೊದಲಾದ ವಿಶೇಷ ಉಪಚಾರಗಳಿಂದಲೂ ಅರ್ಚಿಸಿ, ಪೂಜಿಸಿ ತಾವು ಕೈಗೊಳ್ಳುವ ದೀರ್ಘ ತಪಸ್ಸಿಗೆ ಅನುಕೂಲವಿರುವಂತೆಯೂ ತಮ್ಮಿಂದ ಶಿಷ್ಯಗಣದ ಉದ್ಧಾರಕ್ಕೆ ಅನುಕೂಲವಾಗಲೆಂದೂ ಪ್ರಾರ್ಥಿಸುತ್ತಾರೆ. ಹೀಗೆ ಪೂಜಿಸಿದ ವೃತದ ಆದಿಭಾಗದಲ್ಲಿ ಆ ದಿನದ ಜಪತಪಗಳನ್ನು ಪೂರೈಸಿ ಹೊರಬಂದು ನೆರೆದ ಶಿಷ್ಯರಿಗೆ ಅಭಿಮಂತ್ರಿಸಿದ ಅಕ್ಷತೆಗಳನ್ನು ಎರಚುವುದು ಅಥವಾ ಕೊಡುವುದು ಸಂಪ್ರದಾಯ. ಹಾಗೆ ಗುರುವು ಕೊಡುವ ಆ ಮಂತ್ರಾಕ್ಷತೆ ಎಂದಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾಗಿರುತ್ತದೆ ಮತ್ತು ಅದಕ್ಕೆ ವ್ಯಾಸಮಂತ್ರಾಕ್ಷತೆ ಎಂದೇ ಕರೆಯುತ್ತಾರೆ. ಹೇಗೆ ದೊಡ್ಡ ಆಯಸ್ಕಾಂತದ ಪ್ರಭಾವ ಜಾಸ್ತಿ ಇರುತ್ತದೋ ಹಾಗೇ ಉಳಿದ ದಿನ ಸಣ್ಣ ಆಯಸ್ಕಾಂತವಾದರೆ ಗುರುಪೂರ್ಣಿಮೆಯ ದಿನ ಅತೀದೊಡ್ಡ ಆಯಸ್ಕಾಂತದ ಬಲ ಈ ಆಶೀರ್ವಾದಕ್ಕಿದೆ ಎಂಬುದು ಅನುಭವಿಕರ ಮಾತು.

ಈ ಸುಸಂದರ್ಭ ಒಂದು ಕಥೆ ಹೇಳುತ್ತೇನೆ ಕೇಳಿ- ಶ್ರೀ ಶಂಕರರು ತಿರುಗುತ್ತ ತಿರುಗುತ್ತ ಹಿಮಾಲಯದ ತಪ್ಪಲಿನ ಗುಹೆಯೊಂದರಲ್ಲಿ ತನಗೆ ಬೇಕಾದ ಆಧ್ಯಾತ್ಮಿಕ ಗುರುವನ್ನು ಕಾಣುತ್ತಾರೆ. ಹಾಗೆ ಕಂಡಿದ್ದು ಕೇವಲ ಯೋಗ ದೃಷ್ಟಿಯಿಂದಲೇ ಹೊರತು ನೇರವಾದ ದರ್ಶನ ಅವರಿಗಿನ್ನೂ ಆಗಿರುವುದಿಲ್ಲ. ಶಂಕರರು ಕಾಯುತ್ತಾ ಕಾಯುತ್ತಾ ಬಹಳ ಸಮಯವಾಗುತ್ತದೆ. ಆದರೆ ಗುಹೆಯಲ್ಲಿ ಇರುವ ಆ ಗುರುಗಳು ಸಮಾಧಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಜಾಗ್ರತಸ್ಥಿತಿಗೆ ತಂದರೆ ಕೋಪಬರಲೂ ಬಹುದು ಅಥವಾ ಹಾಗೆ ತಪೋಭಂಗ ಮಾಡಿದ ಪಾಪ ಬರಬಹುದೆಂಬ ಅನಿಸಿಕೆಯಿಂದ ಕೇವಲ ಯೋಗ ಮಾರ್ಗದಿಂದಲೇ ಅವರ ಆತ್ಮವನ್ನು ಸಂಧಿಸಿ ತಾನು ಬಂದಿದ್ದೇನೆ ಎನ್ನುತ್ತಾರೆ. ಆಗ ಎಚ್ಚೆತ್ತ ಗುರುಗಳು ಕೇವಲ ತನ್ನ ಕಾಲು ಪಾದಗಳನ್ನು ಮಾತ್ರ ಹೊರಗೆ ಕಾಣಿಸಿ ಮಿಕ್ಕಿದ ಶರೀರಭಾಗದ ದರ್ಶನ ಕೊಡದಂತೇ ಇರುತ್ತಾರೆ. ಮತ್ತು ಕೇಳುತ್ತಾರೆ " ನೀನು ಬಂದೆ ಅಂದೆಯಲ್ಲ, ಯಾರು ನೀನು ? " " ನಾವು ಬಂದಿದ್ದೇವೆ " ಶಂಕರರು ಹೀಗೆ ಹೇಳುವವರೆಗೂ ಅವರು ಹಾಗೇ ಬರೇ ಪಾದಗಳನ್ನು ಮಾತ್ರ ತೋರಿಸಿದರಂತೆ. ಆ ಗುರುಗಳೇ ಗುರು ಗೋವಿಂದ ಭಗವತ್ಪಾದರು. ಆಗ ಶಂಕರರ ಬಾಯಿಂದ ಹುಟ್ಟಿದ್ದು ’ಗೋವಿಂದಾಷ್ಟಕಮ್’ ಅಷ್ಟಕ ಸ್ತೋತ್ರ! ಹೀಗೇ ಗುರುವನ್ನು ಕಾದು ನೋಡಬೇಕೆಂಬುದು ಪ್ರತೀತಿ.

ಇತ್ತೀಚಿನ ಇಂತಹ ಒಂದು ಗುರುವೆಂದರೆ ಬ್ರಹ್ಮೈಕ್ಯ ಶ್ರೀ ಶ್ರೀಧರ ಸ್ವಾಮಿಗಳು. ಕರ್ನಾಟಕದ ಗಡಿಭಾಗದಲ್ಲಿ ಗುಲಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿದ ದತ್ತಾತ್ರೇಯನ ಅವತಾರವಾದ ಶ್ರೀ ಭಗವಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಜನರನ್ನು ಉದ್ಧರಿಸಿದ್ದಾರೆ. ಯಾವುದೇ ಪವಾಡಗಳನ್ನು ಅವರೌ ಮಾಡುತ್ತಿರಲಿಲ್ಲ, ಬದಲಾಗಿ ಅವರ ಉಪಸ್ಥಿತಿಯಿದ್ದಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು. ಒಮ್ಮೆ ಹೀಗಾಯಿತು ಅತೀ ಬಡವನೊಬ್ಬ ಶ್ರೀಗಳಲ್ಲಿ ಬೇಡಿದ "ಸ್ವಾಮೀ ನಾನೊಬ್ಬ ಬಡವ, ನನ್ನಲ್ಲಿ ಕೊಡಲು ಏನೂ ಇಲ್ಲ, ತಾವು ಒಮ್ಮೆ ನಮ್ಮನೆಗೆ ಬಂದು ತಮ್ಮ ಪಾದಧೂಳಿಯಿಂದ ನಮ್ಮನ್ನು ಪುನೀತರನ್ನಾಗಿ ಮಾಡ್ಬೇಕು. " ತಮಾಷೆಗಾಗಿ ಗುರುಗಳು " ಆಯ್ತಪ್ಪಾ ನೀನು ಹೋಗಿ ಬಯಲಿನಲ್ಲಿರುವ ಧೂಳನ್ನು ತಂದು ನಿಮ್ಮನೆಯ ನೆಲದಮೇಲೆಲ್ಲಾ ಚೆಲ್ಲು, ನಾನು ನಡೆದು ಹೋದಾಗ ಅಲ್ಲಿ ನನ್ನ ಪಾದ ಸೋಕುವುದರಿಂದ ಅದು ನನ್ನ ಪಾದಧೂಳಿಯೇ ಆಯಿತಲ್ಲ ಇನ್ನೇನು ಆಗದೇ ? " ಎಂದರಂತೆ. ಶ್ರದ್ಧೆಯಿಂದ ಮರುಮಾತನಾಡದ ಆ ಶಿಷ್ಯ ಗುರುಗಳು ಹೇಳಿದ ಹಾಗೇ ಮಾಡಿದ್ದು ಗುರುಗಳನ್ನು ಕರೆದೊಯ್ಯಲು ಬಂದ. ಗುರುಗಳಿಗೆ ಬಹಳ ಕನಿಕರ ಮೂಡಿಬಿಟ್ಟಿತು. ತಕ್ಷಣಕ್ಕೆ ಗುರುಗಳು ಹೊರಟು ಆತನ ಮನೆಗೆ ಬಂದು ಆತನಿಗೆ ಹೇಳಿದಂತೇ ಮನೆಯ ತುಂಬೆಲ್ಲ ನಡೆದಾಡಿದರು. ಅವರು ಹೋದಲ್ಲೆಲ್ಲಾ ಬಂಗಾರದ ನಾಣ್ಯಗಳು ಕಾಣಿಸಿಕೊಂಡವು ! ಅವುಗಳನ್ನೆತ್ತಿ ಗುರುಗಳ ಪಾದಕ್ಕೆ ತುಲಸೀ ಸಮೇತ ಅರ್ಚಿಸಿದ ಆ ಭಕ್ತ. ಆತನ ನಿರ್ವಿಣ್ಣಭಾವ ನೋಡಿದ ಗುರುಗಳು " ಬದುಕು ಪೂರ್ತಿ ನಿನಗಿದು ಸಾಕು" ಎಂದು ಎಲ್ಲಾ ಬಂಗಾರದ ನಾಣ್ಯಗಳನ್ನೂ ಅವನ ಕೈಗೆ ಹಾಕಿ, ತಲೆಯಮೇಲೆ ಅಭಯ ಹಸ್ತವನ್ನಿಟ್ಟು ಹರಸಿದರು. ಅಂದಿನಿಂದ ಆತನಿಗೆ ಯಾವುದೇ ಬಡತನದ ಭವಣೆ ಕಾಡಲಿಲ್ಲ.

ಇದು ಕೇಳಲು ಕಥೆ ಎನಿಸಿದರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರಾಶ್ರಮದಲ್ಲಿ ಇದರ ದಿನಾಂಕ ಮತ್ತು ಭಕ್ತ ವ್ಯಕ್ತಿ ಯಾರಗಿದ್ದ ಎಂಬ ದಾಖಲೆ ಸಹಿತ ಸಿಗುತ್ತದೆ! ಇಂತಹ ಹಲವು ಸಾವಿರ ಘಟನೆಗಳು ಶ್ರೀಧರರ ಅವತಾರದಲ್ಲಿ ನಡೆದವು. ಅದಕ್ಕೇ ಅವರನ್ನು ಜನ ’ಭಗವಾನ್’ ಎಂದರು, ’ಅಘಟಿತ ಘಟನಾ ಅದ್ಬುತ ಶಕ್ತಿ’ ಎಂದರು. ಇಂತಹ ಗುರುವನ್ನು ಪಡೆಯಲು ಯೋಗ ಬೇಕು. ಇದು ಎಲ್ಲರಿಗೂ ಲಭ್ಯವಲ್ಲ. ಇಂದಿನ ನಮ್ಮ ಜಂಜಾಟಗಳಲ್ಲಿ ಸಿಲುಕಿಕೊಂಡು ನಮ್ಮ ಮೂಲಸ್ವರೂಪವನ್ನೇ ಮರೆತ ನಾವು ಚಕ್ರವ್ಯೂಹದ ಅಭಿಮನ್ಯುವಿನ ರೀತಿ ಆಗಿಬಿಟ್ಟಿದ್ದೇವೆ. ಹುಟ್ಟು-ಸಾವು ಎಂಬ ಈ ಜೀವನ ಚಕ್ರದಿಂದ ಹೊರಬರಲು ಅದಕ್ಕಿರುವ ಮಾರ್ಗವೊಂದೇ ಅದು ಗುರುವನ್ನು ಮೊರೆಹೋಗುವುದು! ಅವರ ದರ್ಶನ, ಪಾದಸ್ಪರ್ಶನದಿಂದ ಮಾತ್ರ, ಅವರ ಕೃಪೆಯಿಂದ ಮಾತ್ರ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮಲ್ಲಿನ ಗಾದೆ ಹೀಗಿದೆ -’ಹರ ಮುನಿದರೂ ಗುರು ಕಾಯುತ್ತಾನೆ’ ಎಂದು. ಮನೆಯಲ್ಲಿ ಚಿಕ್ಕವರಿರುವಾಗ ಅಪ್ಪ ಮುನಿಸಿಕೊಂಡರೆ ಅಮ್ಮನ ಸೆರಗಿನ ಹಿಂದೋ ಕಾಲಹಿಂದೋ ನಿಂತು ಅಮ್ಮನ ಮುಖೇನ ಅಪ್ಪನ ಸಿಟ್ಟನ್ನು ಶಮನಗೊಳಿಸುತ್ತಿದ್ದೆವು. ಅದೇ ರೀತಿ ಹರನಿಗೇ ಅಂದರೆ ದೇವರಿಗೇ ಕೋಪಬಂದು ನಿನ್ನನ್ನು ತರಿದುಬಿಡುತ್ತೇನೆ ಎಂತ ಬಂದರೂ ರಾಮನಿಗೆ ಹನುಮ ತೋರಿದಂತೆ ಕೇವಲ ದೇವರ ನಾಮಬಲದಿಂದ ದೇವರನ್ನೇ ಮಂತ್ರಮುಗ್ಧಗೊಳಿಸಿ ತನ್ಮೂಲಕ ನಮ್ಮನ್ನು ಕಾಪಾಡುವ, ಸನ್ಮಾರ್ಗ ಬೋಧಿಸಿ ನಮ್ಮನ್ನು ಉದ್ಧರಿಸುವ ಸ್ಥಾನವೊಂದಿದ್ದರೆ ಅದು ’ಗುರು’ ಮಾತ್ರ. ಅಮ್ಮನ ಪ್ರೀತಿ, ಅಪ್ಪನ ವಾತ್ಸಲ್ಯ, ಸ್ನೇಹಿತನ ಹೆಗಲು, ಅಕ್ಕ-ತಂಗಿ-ಅಣ್ಣ-ತಮ್ಮ ಈ ಎಲ್ಲರ ಆಪ್ತತೆ ತೋರುವ ಸಕಲವೂ ಆಗಿ ಸಂಭಾಳಿಸುವ, ಸಂತೈಸುವ, ಆಲಿಸುವ, ಲಾಲಿಹಾಡುವ, ರಮಿಸುವ, ಎತ್ತಿ ಮುದ್ದಾಡುವ ಪರಾತ್ಪರ ಶಕ್ತಿಯಾದ ಇಂತಹ ಗುರುವನ್ನು ಸ್ಮರಿಸಲು ಬೇರೆ ಹಲವು ಲೌಕಿಕ ಕಾರಣಗಳು ಬೇಕಿಲ್ಲ. ಇಂತಹ ಗುರುರೂಪವನ್ನು ನೆನೆಯೋಣವೇ ?

ನೆನೆವೆ ಶ್ರೀಧರ ಸತತ ಗುರುವರ
ನಿನ್ನ ಅಡಿದಾವರೆಗಳ
ಮನವನಣಿಗೊಳಿಸುತ್ತ ಭವಹರ
ಕನವರಿಸುವೇ ಪದಗಳ

ದೇಗಲೂರಲಿ ಹುಟ್ಟಿಬೆಳೆಯುತ ದೇಗುಲವೆ ನೀನಾಗಿಹೆ
ಸಾಗಿ ದೂರದಿ ಉತ್ತರದಿ ನಿನ್ನ ಪಾದಪದ್ಮವನೂರಿದೆ
ಯಾಗಯಜ್ಞದ ತಿರುಳ ಅರುಹಿದೆ ಮಾರ್ದನಿಸಿ ಜನಕೂಗಿರೆ
ಸಾಗರದ ಪ್ರಾಂತದಲಿ ನೆಲೆಸಿದ ಯೋಗಿ ನಿನ್ನನು ಭಜಿಸುವೆ

ದತ್ತರೂಪನೆ ಕಮಲಾ ತನಯನೆ ವಿಮಲ ಕೋಮಲ ನೇತ್ರನೆ
ನೆತ್ತಿನೇವರಿಸುತ್ತ ಹರಸಿದೆ ಭಕ್ತಜನರನುರಾಗನೆ
ಒತ್ತಿ ಬೆರಳನು ಹರಿಸಿ ತೀರ್ಥವ ಕೊಟ್ಟೆ ನೀನೌಷಧವನು
ಎತ್ತುವೆನು ಮಂಗಳದ ಆರತಿ ಸೃಷ್ಟಿಗೊಡೆಯನೆ ನಮಿಪೆನು
----


ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ|
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

-ವಿ.ಆರ್.ಭಟ್

ಯೋಚಿಸಲೊ೦ದಿಷ್ಟು-೪

೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!

೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬಧ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿನಿಮಿಷಕ್ಕೂ ಈ ಬಧ್ಧತೆ ಅಥವಾ ವಚನವು ನವೀಕರಣಗೊಳ್ಳುತ್ತಿರುತ್ತದೆ!

೩. ಶತ್ರುವನ್ನಾದರೂ ಜಯಿಸಬಹುದು. ಆದರೆ ಹಿತಶತ್ರುವನ್ನು ಜಯಿಸುವುದು ಸುಲಭಸಾಧ್ಯವಲ್ಲ! ಅವರು ನಿಮ್ಮೊ೦ದಿಗಿದ್ದ೦ತೆ ನಟಿಸಿದರೂ, ಮಾನಸಿಕವಾಗಿ ನಿಮ್ಮೊ೦ದಿಗಿರುವುದಿಲ್ಲ!

೪. ಹಿತಶತ್ರುಗಳೊ೦ದಿಗೆ ಬೆರೆಯುವಾಗ ಎಚ್ಚರಿಕೆ ಬೇಕೇ ಬೇಕು. ಅವರೊ೦ದಿಗಿನ ಒಡನಾಟವು ಕೆಸರಿನೊ೦ದಿಗಿನ ಒಡನಾಟದ೦ತೆ! ಕಾಲಲ್ಲಿ ತುಳಿದರೆ ಕಾಲನ್ನು ಮಾತ್ರ ತೊಳೆದರಾಯಿತು. ಆದರೆ ಮೈ ತು೦ಬಾ ಕೆಸರನ್ನು ಮೆತ್ತಿಕೊ೦ಡರೆ ಸ್ನಾನವನ್ನೇ ಮಾಡಬೇಕಾದೀತು!

೫. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ.

೬. ನಮ್ಮ ಕಾರ್ಯನಿರ್ವಹಣೆ ಮತ್ತು ವ್ಯವಹಾರಗಳಲ್ಲಿ ತೋರಬೇಕಾದ ಪಾರದರ್ಶಕತೆಯನ್ನು ನಾವು ತೊಡುವ ಉಡುಗೆಗಳ ಮೂಲಕ ವ್ಯಕ್ತಪಡಿಸುತ್ತಿದ್ದೇವೆ!

೭. ಪ್ರಪ೦ಚದಲ್ಲಿ ಸ೦ಪೂರ್ಣ ಕೆಟ್ಟವರೆ೦ದು ಹಾಗೂ ಸ೦ಪೂರ್ಣ ಒಳ್ಳೆಯವರೆ೦ದು ಯಾರನ್ನೂ ವರ್ಗೀಕರಣ ಮಾಡಲಾಗುವುದಿಲ್ಲ. ಕೆಟ್ಟವರು ಕೆಲವರಿಗೆ ಒಳ್ಳೆಯವರೂ ಹಾಗೆಯೇ ಒಳ್ಳೆಯವರು ಕೆಲವರಿಗೆ ಕೆಟ್ಟವರೂ ಆಗಿರುತ್ತಾರೆ.

೮. ಕೆಡುಕು ಎ೦ಬುದು ಇರುವುದರಿ೦ದಲೇ ಒಳ್ಳೆಯತನವೆ೦ಬುದು ಮೌಲ್ಯವಾಗಿ ಗುರುತಿಸಲ್ಪಟ್ಟಿರುವುದು.

೯. ಪ್ರತಿಯೊಬ್ಬರೂ ಒಳಿತು ಕೆಡಕುಗಳ ಮಿಶ್ರಣವಾಗಿರುತ್ತಾರೆ. ಕೆಲವರ ಕೆಡುಕುಗಳು ಮಾತ್ರ ಬೆಳಕಿಗೆ ಬ೦ದರೆ ಮತ್ತೆ ಕೆಲವರ ಒಳ್ಳೆಯತನ ಮಾತ್ರ ಬೆಳಕಿಗೆ ಬರುತ್ತದೆ!

೧೦. ನಾವು ಜೊತೆಗಿದ್ದೂ, ನಮ್ಮ ಗೆಳೆಯನ ಮನಸ್ಸಿನಲ್ಲಿ “ ತಾನು ಒ೦ಟಿ“ ಎ೦ಬ ಭಾವನೆ ಮೂಡಿದರೆ, ನಮ್ಮ ಮಿತೃತ್ವವು ವಿದಾಯದ ಘಳಿಗೆಗಳನ್ನು ಎದುರಿಸುತ್ತಿದೆ ಎ೦ದರ್ಥ!

೧೧. ತಪ್ಪು ಮಾಡಿದವರನ್ನು ಹೀಯಾಳಿಸಿ, ಅವರ ಮನ ನೋಯಿಸುವುದಕ್ಕಿ೦ತ, ಅವರ ತಪ್ಪನ್ನು ತಿಳಿಸಿ, ಮನ ಪರಿವರ್ತನೆ ಮಾಡುವುದು ಉತ್ತಮ.

೧೨. ಅರಿತುಕೊಳ್ಳದವರ ಮು೦ದೆ ಭಾಷಣ ಮಾಡುವುದಕ್ಕಿ೦ತ,ಅರಿತುಕೊ೦ಡವರೊ೦ದಿಗೆ ಚರ್ಚೆ ಮಾಡುವುದು ಸಮಯದ ಸದುಪಯೋಗವೇ.

೧೩. ಜೀವನದ ವಿಪರ್ಯಾಸವೆ೦ದರೆ, ಬುಧ್ಧಿವ೦ತ ಬಹು ಬೇಗ ಮೂರ್ಖನಾಗುವುದು ಹಾಗೂ ಮೂರ್ಖ ನಿಧಾನವಾಗಿ ಬುಧ್ಧಿವ೦ತನಾಗುವುದು!

೧೪. ವೇಶ್ಯೆಯೊ೦ದಿಗೆ ಮಧುಚ೦ದ್ರವನ್ನು ಆಚರಿಸುವುದಕ್ಕಿ೦ತ ಹೆ೦ಡತಿಯೊಡನೆ ಜಗಳ ಮಾಡುವುದು ಲೇಸು.

೧೫. ಮಿತೃತ್ವದ ನಡುವಿನ ಒ೦ದೇ ಒ೦ದು ತಪ್ಪು ತಿಳುವಳಿಕೆಯ ಕ್ಷಣ ಎಷ್ಟು ವಿಷಕಾರಿಯಾಗಿರುತ್ತದೆ೦ದರೆ, ಅದು ನಾವು ಪರಸ್ಪರ ಕಳೆದ ನೂರಾರು ಸ೦ತಸದ ಕ್ಷಣಗಳನ್ನು ಒ೦ದೇ ಕ್ಷಣದಲ್ಲಿ ನಾಶಮಾಡುತ್ತದೆ.

ಭಾವಸಂಗಮ

ವೇದಸುಧೆಯ ಮಿತ್ರರೇ,
ಮಿತ್ರರಾದ ಸರ್ವಶ್ರೀ ನಾಗರಾಜ್, ವಿ.ಆರ್.ಭಟ್, ರಾಘವೇಂದ್ರನಾವಡ, ಹಂಸಾನಂದಿ, ಡಾ||ಜ್ಞಾನದೇವ್, ಸುಧಾಕರಶರ್ಮರು......ಹೀಗೆ ಹಲವರು ಉತ್ತಮವಾದ ಕವನಗಳನ್ನು ಬರೆಯುತ್ತಾರೆ. ಇಂದಿನ ದಿನಗಳಲ್ಲಿ ಬಹುಪಾಲು ಕವಿಗಳ ಕವನದ ವಸ್ತು ಯುವಕ-ಯುವತಿಯರ ನಡುವಿನ ಪ್ರೀತಿ-ಪ್ರೇಮ ,ಇದು ಸರ್ವೇ ಸಾಮಾನ್ಯ. ಆದರೆ ಅದಕ್ಕೂ ಮೀರಿ ನಮ್ಮ ಚಿಂತನೆ ಸಾಗಬಹುದೆಂಬುದಕ್ಕೆ ವೇದಸುಧೆಯಲ್ಲಿ ಈಗಾಗಲೇ ಪ್ರಕಟವಾಗಿರುವ ಕೆಲವು ಉತ್ತಮ ಕವನಗಳು ನಿದರ್ಶನಗಳಾಗಿವೆ. ಅವುಗಳನ್ನು ಭಾವಗೀತೆ ಎನ್ನಬಹುದು, ಅಧ್ಯಾತ್ಮ ಚಿಂತನೆಯೆ ನುಡಿಮುತ್ತುಗಳೆನ್ನಬಹುದು. ಈಗಾಗಲೇ ಭಟ್ಟರ "ಜಗದಮಿತ್ರ" ಕವಿನಾಗರಾಜರ "ಮೂಢ ಉವಾಚ" ಸಾಕಷ್ಟು ಜನರ ಮೆಚ್ಚುಗೆ ಪಡೆದಿವೆ. ಹೀಗೆ ಬರೆಯುವ ಎಲ್ಲಾ ಕವನಗಳನ್ನು ಇನ್ನು ಮುಂದೆ ಒಂದು ಲೇಬಲ್ ಅಡಿಯಲ್ಲಿ ಅವರವರ ಹೆಸರಲ್ಲಿ ಬರೆಯೋಣ. ಮುಂದೆ ಭಗವಂತನ ಕೃಪೆ ಇದ್ದರೆ ಒಂದು ಪುಸ್ತಕ ಹೊರತರಬಹುದಲ್ಲವೇ? ಅಂತೂ ಕವನಗಳೆಲ್ಲಾ ಒಂದೆಡೆ :"ಭಾವಸಂಗಮ" ಲೇಬಲ್ ಅಡಿಯಲ್ಲಿ ಇರಲಿ, ಅಲ್ಲವೇ?

ಅಮೃತಾತ್ಮನು ನೀನು

ಈ ದೇಹ ನೀನೆಂದು ತಿಳಿದಿರುವೆ ನೀನು|
ನಿಜತಿಳಿಯಬೇಕೇನು? ದೇಹವಲ್ಲವು ನೀನು||

ಶಿಶುವಾಗಿ
ಜನಿಸಿ, ಬೆಳೆದು ಯೌವ್ವನ ಪಡೆದು|
ವೃದ್ಧಾಪ್ಯದೆಡೆಗೆ, ದಿನದಿನವು ಸಾಗಿ
ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||

ಮೊದಲು
ಬಾಲ್ಯದ ಆಟ, ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು, ಸಂಸಾರದಾಟ|
ಆಡಿದವನಾರು? ಆಡಿಸಿದವನಾರು?
ಆಡುವಾ ದೇಹದೊಳು ಇರುವ ನೀನಾರು?||

ನೀ ಹುಟ್ಟಲಿಲ್ಲ,ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ
, ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು, ಅಮೃತಾತ್ಮನು ನೀನು||