Pages

Monday, February 20, 2012

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಪಶುಪತಿನಾಥ ಮಂದಿರದ ಮುಖ್ಯ ಮಹಾದ್ವಾರ

ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ ಕರೆದು ಅರ್ಜುನ ಪಾಶುಪತಾಸ್ತ್ರವನ್ನೇ ಪಡೆದರೆ ರಾವಣ ಆತ್ಮ ಲಿಂಗವನ್ನೇ ಪಡೆದಿದ್ದ ಎಂಬುದು ಈ ನೆಲದ ಕಥೆ. ಇಂತಹ ನಮ್ಮ ಬೋಲೇನಾಥ ಯಾ ಬೋಳೇ ಶಂಕರ ಪುರಾಣದ ಭಾಗವತದ ಕಥಾಭಾಗಗಳಲ್ಲಿ ರಕ್ಕಸರಿಗೆ ವರಗಳನ್ನು ಕರುಣಿಸಿ ಸಂದಿಗ್ಧದಲ್ಲಿ ಸಿಲುಕಿಕೊಳ್ಳುವುದನ್ನೂ ಕೂಡ ಕಾಣಬಹುದಾಗಿದೆ. ಭೂತಗಣಗಳಿಗೆ, ರಕ್ಕಸರಿಗೆ ಪ್ರಿಯ ದೈವ ಶಿವನೇ ಆದರೂ ಪರೋಕ್ಷ ಅವರುಗಳ ನಿಯಂತ್ರಣಕ್ಕೂ ಆತ ಕಾರಣನಾಗಿದ್ದಾನೆ.

ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |.....

ಒಂದು ಚೊಂಬು ನೀರನ್ನು ನಿಷ್ಕಲ್ಮಶ ಹೃದಯದಿಂದ ಲಿಂಗರೂಪೀ ಶಿವನಮೇಲೆ ಎರಚಿದರೆ ಆತ ಸಂತೃಪ್ತ! ಸರಳತೆಯಲ್ಲಿ ಅತಿ ಸರಳ ಪೂಜೆ ಶಿವನ ಪೂಜೆ. ಇದೇ ಶಿವ ಕ್ರುದ್ಧನಾದರೆ ಮಾತ್ರ ಆಡುವುದು ತಾಂಡವ ! ಶಿವತಾಂಡವದ ಡಮರು ನಿನಾದಕ್ಕೆ ಸಮಸ್ತಲೋಕಗಳೂ ಅಂಜುತ್ತವೆ ಎಂಬುದು ಪ್ರತೀತಿ. ನರ್ತನದಲ್ಲಿಯೂ ಈತನದೇ ಮೊದಲಸ್ಥಾನವಾದ್ದರಿಂದ ನಟರಾಜ ಎಂಬ ಹೆಸರಿನಿಂದಲೂ ಪೂಜಿಸಲ್ಪಡುತ್ತಾನೆ.

ರಾತ್ರಿಯ ದೀಪಗಳಲ್ಲಿ ಪಶುಪತಿನಾಥ ದೇವಸ್ಥಾನ ಸಮುಚ್ಛಯ

ಶಿವನಿಲ್ಲದೇ ಶುಭ ಸಾಧ್ಯವೇ? ಶಿವ ಎಂದರೆ ಶುಭ ಎಂದೇ ಅಲ್ಲವೇ? ಮುಕ್ಕಣ್ಣ ತನ್ನ ಮೂರನೇ ಕಣ್ಣು ತೆರೆಯುವುದೂ ಕೂಡ ಕೋಪಗೊಂಡಾಗ ಎಂಬುದು ಸತ್ಯ. ಈ ಭೂಮಿ ಕಾಯುವುದೂ ಆರುವುದೂ ಬೇಗ ಹೇಗೋ ಹಾಗೇ ಈಶ್ವರನ ಸಿಟ್ಟು. ಅದು ಬಂದಷ್ಟೇ ಬೇಗ ಹೋಗುವುದೂ ಜನಜನಿತ. ಶಿವನನ್ನು ತಂಪಾಗಿರಿಸಿದರೆ ಜಗತ್ತಿಗೇ ತಂಪು ಎಂಬ ಕಾರಣದಿಂದ ಜಲಾಭಿಷೇಕ ನಡೆಸುವುದು ಸರ್ವವಿದಿತ. ಈಶ್ವರ ತನ್ನ ಅದಮ್ಯ ಶಕ್ತಿಯನ್ನು ತೇಜೋರೂಪದಲ್ಲಿ ಪ್ರಕಟಗೊಳಿಸಿದ್ದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಬುದು ಆಸ್ತಿಕರ ಅನಿಸಿಕೆ; ಇದು ವೈಜ್ಞಾನಿಕವಾಗಿಯೂ ಗಣಿಸಬಹುದಾದ ಅಂಶ!

ಕಾಶೀ ವಿಶ್ವನಾಥ ಜ್ಯೋತಿರ್ಲಿಂಗ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಮ್ ಮಹಾಕಾಳಮೋಂಕಾರಮಮಲೇಶ್ವರಮ್ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್|
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ|
ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ ||

ಏತಾನಿಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಭವ್ಯ ಭಾರತದ ಇಂತಿಂತಹ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳಿವೆ ಎಂಬುದನ್ನು ನೆನಪಿಸುವಂತೇ ರಚಯಿತವಾದ ಈ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಪಠಿಸಿದರೆ ಏಳು ಜನ್ಮಗಳ ಸಂಚಿತ ಕರ್ಮಗಳು ನಾಶವಾಗುತ್ತವೆ ಎಂದು ತಿಳಿಸಿದ್ದಾರೆ. ಜ್ಯೋತಿರ್ಲಿಂಗಗಳ ದರ್ಶನ ಎಲ್ಲರಿಗೂ ಸಾಧ್ಯವಲ್ಲ! ಅದಕ್ಕೆ ಬರೇ ಹಣವಿದ್ದರೆ ಸಾಲದು, ಯೋಗಬೇಕು! ಮೊದಲು ಮನಸ್ಸು ಸಿದ್ಧವಾಗಬೇಕು. ಆಮೇಲೆ ಯಾತ್ರೆಗೆ ಅನುಕೂಲಕರವಾದ ದೈಹಿಕ ಅನುಕೂಲವಿರಬೇಕು, ಸಮಯ ದೊರೆಯಬೇಕು, ಸಾಂಸಾರಿಕ ತಾಪತ್ರಯಗಳಿಂದ ತುಸು ಬಿಡುಗಡೆ ದೊರೆಯಬೇಕು. ಈ ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಪೂಜೆಗಳು ಜರುಗುತ್ತವೆ. ಶಿವಪೂಜಾ ವೈಭವಗಳನ್ನು ಈ ಹನ್ನೆರಡು ಕ್ಷೇತ್ರಗಳಲ್ಲಿ ಪಡೆಯಬಹುದಾಗಿದೆ.

ಶ್ರೀ ಪಶುಪತಿನಾಥ ಲಿಂಗ ಚಿತ್ರ-೧


ಶ್ರೀ ಪಶುಪತಿನಾಥ ಲಿಂಗ ಚಿತ್ರ-೨

ಪಂಚ ಮುಖಗಳುಳ್ಳ ಶ್ರೀ ಪಶುಪತಿನಾಥನ ಪ್ರಧಾನ ಲಿಂಗ

ಇವೆಲ್ಲವುಗಳಿಗಿಂತ ನಮ್ಮ ಅವಿಭಜಿತ ಭಾರತದ ಒಂದು ಭಾಗವಾಗಿದ್ದ ನೇಪಾಳದಲ್ಲಿ ಶಿವ ಪಶುಪತಿನಾಥನಾಗಿದ್ದಾನೆ! ಈ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಭಕ್ತಜನ ಬೋಲೇನಾಥ ಎಂದು ಕರೆಯುವ ಶಿವ ಪಶುಪತಿ ಎನಿಸಿದ ಬಗ್ಗೆ ಅಲ್ಲಿನ ಪ್ರಾದೇಶಿಕ ಕಥೆಗಳು ಹಲವು. ನಂದೀವಾಹನನಾದ ಶಂಕರ ಸಹಜವಾಗಿ ಪಶುಪತಿಯೆನಿಸಿದರೂ ಅಲ್ಲಿರುವ ಕಥೆಗಳೇ ಬದಲು !

ಮೊದನಲೆಯ ಕಥೆ ಸಾರುವುದು ಶಿವ-ಪಾರ್ವತಿ ಸುತ್ತಾಡುತ್ತಾ ಬಾಗ್ಮತೀ ದಡಕ್ಕೆ ಬಂದಾಗ ಶಿವನಿಗೆ ಜಿಂಕೆಯಾಗಿ ವಿಹರಿಸುವ ಆಸೆಯಾಗುತ್ತದೆ. ಪರಮಾತ್ಮನಾತ ಕೇಳಬೇಕೇ ? ಆ ಕ್ಷಣದಲ್ಲೇ ಶಿವ-ಪಾರ್ವತಿ ಹರಿಣಗಳಾಗಿ ಅಲ್ಲಿನ ಕಾಡಿನಲ್ಲಿ ವಿಹರಿಸತೊಡಗಿದರಂತೆ. ದೇವತೆಗಳು ದೇವಲೋಕದಲ್ಲಿ ಶಿವನ ಬರವನ್ನು ಕಾದೇ ಕಾದರು! ಶಿವ-ಸತಿಯರ ಪತ್ತೆಯೇ ಇರಲಿಲ್ಲ. ಭೂಮಿಗೆ ಬಂದು ಹುಡುಕುತ್ತಾ ಹುಡುಕುತ್ತಾ ಬಾಗ್ಮತೀ ನದಿಯ ದಡದಲ್ಲಿ ಹರಿಣದ ರೂಪದಲ್ಲಿರುವ ಶಿವ-ಪಾರ್ವತಿಯರನ್ನು ಕಂಡು ಬೆನ್ನಟ್ಟಿದರು! ಶಿವ ಭುವಿಯಲ್ಲೇ ಇರುವ ಮನದಿಚ್ಛೆಯಿಂದ ಅಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ. ಓಡತೊಡಗಿದ ಶಿವನನನ್ನು ಹಿಡಿಯುವಾಗ ಮೃಗದ ಕೊಂಬು ಕಿತ್ತು ದೇವನೊಬ್ಬನ ಕೈಗೆ ಬಂತು. ಶಿವನ ಕೋಪಕ್ಕೆ ಹೆದರಿದ ದೇವತೆಗಳು ಅಲ್ಲೇ ನಿಂತು ಆ ಕೊಂಬನ್ನು ಭೂಮಿಯಲ್ಲಿ ನೆಟ್ಟು ಪ್ರಾರ್ಥಿಸಿತೊಡಗಿದರು; ಪೂಜಿಸತೊಡಗಿದರು. "ಹೇ ಪಶುಪತೇ ಕೃಪಯಾ ದೇವಲೋಕಮಾಗಚ್ಛತು " ಎಂದು ಪರಿಪರಿಯಾಗಿ ಕೇಳಿಕೊಂಡಾಗ ಶಿವ ದೇವಲೋಕಕ್ಕೆ ಮರಳಿದನಾದರೂ ಕೊಂಬು ಮಾತ್ರ ಭುವಿಯಲ್ಲೇ ಉಳಿಯಿತು. ಭುವಿಯ ಭಕ್ತರ ಸಂತೋಷಕ್ಕಾಗಿ, ಇಲ್ಲಿನ ಜನರ ಸಂಕಷ್ಟಗಳ ನಿವಾರಣೆಗಾಗಿ ಅದನ್ನೇ ಪೂಜಿಸಲಿ ಎಂದ ಪರಶಿವ ಪಶುಪತಿಯಾಗಿ ಆ ಜಾಗದಲ್ಲುಳಿದ! ಮುಗ್ಧ ಶಿವ ಏನು ಕೇಳಿದರೂ ಕೊಡುವ ಸ್ವಭಾವದವನಾದ್ದರಿಂದ ಅಲ್ಲಿನ ಜನ ಪ್ರೀತಿಯಿಂದ ಬೋಲೇನಾಥ ಎಂದೂ ಕರೆಯತೊಡಗಿದರು.

ಎರಡನೆಯ ಕಥೆ ಹೀಗಿದೆ: ದಕ್ಷಯಜ್ಞದಲ್ಲಿ ಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿಕೊಂಡ ಸತಿಯನ್ನು ಎತ್ತಿಕೊಂಡ ಹೊರಟ ಶಿವ. ಸತಿಯ ಶರೀರದ ಭಾಗಗಳು ಆಗಲೇ ಅಲ್ಲಲ್ಲಿ ಕುಸಿದು ಬೀಳತೊಡಗಿದ್ದವು. ಹಾಗೆ ಬಿದ್ದ ಸ್ಥಳಗಳಲ್ಲೆಲ್ಲಾ ದೇವೀ ದೇವಾಲಯಗಳು ಸ್ಥಾಪಿತವಾದವು. ಅಂತಹ ದೇವಾಲಯವೊಂದು ಗುಹ್ಯೇಶ್ವರೀ ದೇವಿ ಸ್ಥಾನ. ಅದು ಪಶುಪತಿನಾಥ ಮಂದಿರದ ಸಮುಚ್ಛಯದಲ್ಲೇ ಇದೆ! ಸತಿಗಾಗಿ ಶಿವ ಅಲ್ಲಿ ನೆಲೆಸಿದ ಎಂಬುದು ಈ ಕಥೆಯ ಐತಿಹ್ಯ.

ಕಥೆ ಮೂರು : ಭೂಮಂಡಲವನ್ನು ಒಂದು ಕಾಲಕ್ಕೆ ನಾಗಗಳು ಆಳುತ್ತಿದ್ದವು. ಅವುಗಳಲ್ಲಿ ವಾಸುಕಿ ಒಬ್ಬ. ವಾಸುಕಿ ತನ್ನ ಆಡಳ್ತೆಯ ಪ್ರದೇಶವಾದ ನೇಪಾಳದಲ್ಲಿ ಶಿವನನ್ನು ಪೂಜಿಸುವ ಸಲುವಾಗಿ ಶಿವಲಿಂಗವೊಂದನ್ನು ಸ್ಥಾಪಿಸಿದ. ಅದೇ ಪಶುಪತಿನಾಥ ಲಿಂಗ !

ಹಗಲು ವೀಕ್ಷಣೆಯಲ್ಲಿ ಪಶುಪತಿನಾಥ ದೇಗುಲದ ವಿಮಾನ ಗೋಪುರ

ಕಥೆ ನಾಲ್ಕು : ಬೌದ್ಧಾವತಾರೀ ಮಹಾವಿಷ್ಣು ತನ್ನ ಸಿದ್ಧಿಗಾಗಿ ನೇಪಾಳದ ಮಂಡಿಹಾಟು ಪ್ರದೇಶದಲ್ಲಿ ಪಂಚಾಗ್ನಿಯನ್ನು ಸೃಷ್ಟಿಸಿ ತಪಸ್ಸು ನಡೆಸಿದ. ಅಲ್ಲಿನ ಆ ಉಷ್ಣತೆಗೆ ಮಣಿಮತಿ ಎಂಬ ನದಿಯ ಉಗಮವಾಯಿತು. ಸ್ಥಾನಿಕವಾಗಿ ಅಲ್ಲಿದ್ದ ಪಾರ್ವತೀ ದೇವಿ ಪ್ರಸನ್ನಳಾಗಿ ಬುದ್ಧನಿಗೆ ವಜ್ರಯೋಗಿನಿಯಾಗಿ ಕಂಡು ವರವನ್ನು ನೀಡಲು ಮುಂದಾದಳು. ಬುದ್ಧ ತಪಗೈದ ಆ ಪ್ರದೇಶದಲ್ಲಿ ಆತ ಲಿಂಗವೊಂದನ್ನು ಸ್ಥಾಪಿಸಲೆಂದೂ, ಅಲ್ಲಿ ಬೌದ್ಧರು ಮತ್ತು ಹಿಂದೂ ಸಮುದಾಯದವರು ಪರಸ್ಪರ ಸೌಹಾರ್ದಯುತ ಬದುಕು ಬದುಕುವರೆಂದು ತಿಳಿಸಿ ಅಂತರ್ಧಾನಳಾದಳು. ವಜ್ರಯೋಗಿನಿಯ ಇಚ್ಛೆಯಂತೇ ಬಾಗ್ಮತಿ ಮತ್ತು ಮಣಿಮತಿ ನದಿಗಳ ಸಂಗಮದ ಜಾಗದಲ್ಲಿ ಸ್ವತಃ ಬುದ್ಧನೇ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ. ಅದೇ ಇಂದಿನ ಪಶುಪತಿನಾಥ ಲಿಂಗ !

ಮೂಲ ಭಟ್ಟ ಮತ್ತು ಸಹಭಟ್ಟ : ಕನ್ನಡ ಕರಾವಳಿಯ ಪುರೋಹಿತರು, ಅಲ್ಲಿನ ಸಾಂಪ್ರದಾಯಿಕ ಪೂಜಾ ತೊಡುಗೆಯಲ್ಲಿ

ಒಂದುಕಾಲಕ್ಕೆ ಕನ್ನಡದ ಪ್ರಥಮ ದೊರೆ ಬನವಾಸಿಯ ಮಯೂರವರ್ಮ ತನ್ನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಯಲ್ಲಿ ಅನೇಕ ರಾಜ್ಯಗಳನ್ನು ಜಯಿಸುತ್ತಾ ನೇಪಾಳಕ್ಕೆ ಬಂದ. ಅಲ್ಲಿಯೂ ಜಯಭೇರಿ ಬಾರಿಸಿ ತನ್ನ ಸಂಸ್ಥಾನದ ಭಾಗವಾಗಿ ನೇಪಾಳವನ್ನು ಸ್ವೀಕರಿಸಿದ! ತನ್ನ ಇಷ್ಟದಂತೇ ಅಲ್ಲಿನ ಪಶುಪತಿನಾಥನನ್ನು ಪೂಜಿಸಲು ಕರ್ನಾಟಕದ ಕರಾವಳಿಯ ಬ್ರಾಹ್ಮಣ ಪುರೋಹಿತರನ್ನೇ ನೇಮಿಸಿದ.

ಪಶುಪತಿನಾಥನ ಹಿಂದೆ ಇಂತಹ ಹಲವು ಐತಿಹ್ಯಗಳಿವೆ. ಕ್ರಿಸ್ತನ ಮರಣಾನಂತರ ೪೦೦ ವರ್ಷಗಳಿಂದ ದೇವಾಲಯ ಇದ್ದ ದಾಖಲೆ ಸಿಗುತ್ತದೆ. ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿ ಕೆಲವು ಮೌಢ್ಯಗಳು ಸೇರಿಕೊಂಡು ಅಲ್ಲಿ ದೇವದೇವನ ಸಂಪ್ರೀತಿಗಾಗಿ ಮಾನವ ಬಲಿಯನ್ನು ನಡೆಸುತ್ತಿದ್ದರು. ಕೇದಾರದಲ್ಲಿ ತಪಸ್ಸು ನಡೆಸಿದ ಆದಿ ಶಂಕರರು ನೇಪಾಳದ ಕಂಠ್ಮಂಡುವಿನ ಪಶುಪತಿನಾಥ ದೇವಸ್ಥಾನಕ್ಕೆ ತೆರಳಿ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಕರೆದು ನರಬಲಿಯನ್ನು ನಿಲ್ಲಿಸುವಂತೇ ತಿಳಿಸಿಹೇಳಿದರು, ಮಾತ್ರವಲ್ಲ ನಡೆಸಬೇಕಾದ ಪೂಜಾವಿಧಾನಗಳ ಬಗ್ಗೆಯೂ ತಿಳಿಸಿದರು. ಅಲ್ಲಿರುವ ಮೌಢ್ಯಗಳನ್ನು ತೆಗೆದುಹಾಕಿ ಹೊಸದಾಗಿ ಆ ಲಿಂಗವನ್ನು ಕಳಾಪೂರ್ಣವಾಗುವಂತೇ ಮಾಡಿದರು. ಶಂಕರರ ಅಣತಿಗೆ ಮಣಿದ ಮಹಾರಾಜ ಸಾತ್ವಿಕ ಪೂಜೆಗೆ ಒಪ್ಪಿದನಲ್ಲದೇ ಪೂಜೆ ಸಮರ್ಪಕವಾಗಿ ನಡೆಯಲು ಭಾರತದ ದಕ್ಷಿಣ ಭೂಪ್ರದೇಶದಿಂದ ವೇದ-ವೇದಾಂಗಗಳನ್ನು ಓದಿಕೊಂಡ ಬ್ರಾಹ್ಮಣರನ್ನು ಕಳುಹಿಸಬೇಕಾಗಿ ಪ್ರಾರ್ಥಿಸಿದ. ಶಂಕರರು ಒಪ್ಪಿ ಪೂಜೆ ಸರಿಯಾದ ಕ್ರಮದಲ್ಲಿ ನಡೆಯಲು ಆರಂಭವಾಯ್ತು. ಅಂದಿನಿಂದ ಸದಾ ಕರ್ನಾಟಕದ ಅದರಲ್ಲೂ ಕರಾವಳೀ ಪ್ರಾಂತದ ಬ್ರಾಹ್ಮಣ ಪುರೋಹಿತರು ಪಶುಪತಿನಾಥನ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮ್ಮ ರಾಜ್ಯಕ್ಕೂ ಮತ್ತು ಪಶುಪತಿನಾಥನಿಗೂ ಇರುವ ನೇರ ಸಂಬಂಧ !

ಕೈಲಾಸ ಮಾನಸ ಸರೋವರದ ಒಂದು ವಿಹಂಗಮ ದೃಶ್ಯ

ಅಲ್ಲಿ ಪೂಜೆಗೆ ಒಟ್ಟೂ ಐದು ಮಂದಿ ಬ್ರಾಹ್ಮಣರು ಇರುತ್ತಾರೆ. ಮುಖ್ಯ ಪುರೋಹಿತನನ್ನು ಮೂಲ ಭಟ್ಟ ಅಥವಾ ರಾವಳ ಎಂಬುದಾಗಿ ಕರೆಯುತ್ತಾರೆ. ದೇವಸ್ಥಾನದ ವ್ಯಾವಹಾರಿಕ ಆಗುಹೋಗುಗಳ ಕುರಿತು ಕಾಲಕಾಲಕ್ಕೆ ಈತ ನೇರವಾಗಿ ನೇಪಾಳದ ರಾಜನಿಗೆ ವರದಿ ಒಪ್ಪಿಸಬೇಕಿತ್ತು. ರಾಜನೊಡನೆ ನೇರ ಸಂಪರ್ಕ ಇರುವುದು ಮೂಲ ಭಟ್ಟನಿಗೆ ಮಾತ್ರ! ಅಂದರೆ ಎಂತಹ ಆದ್ಯತೆ ನೀಡಿದ್ದರು ಎಂಬುದನ್ನು ಗಮನಿಸಬಹುದಾಗಿದೆ. ಕ್ರಿ.ಶ. ೨೦೦೯ ರಲ್ಲಿ ರಾಜಾಧಿಕಾರ ತಪ್ಪಿ ಪ್ರಜಾತಂತ್ರ ಆಡಳಿತಕ್ಕೆ ಬಂತು. ಮಾವೋವಾದಿಗಳು ಬ್ರಾಹ್ಮಣ ಪೂಜೆಯನ್ನು ವಿರೋಧಿಸಿ ತಾವೇ ಪೂಜೆ ಮಾಡುತ್ತೇವೆ ಎಂದು ಅಲ್ಲಿರುವ ಭಟ್ಟರುಗಳನ್ನು ಹಿಡಿದರು, ಬಡಿದರು. ಲಿಂಗವನ್ನು ಸ್ಪರ್ಶಿಸುವುದಕ್ಕೆ ಐದುಮಂದಿ ಬ್ರಾಹ್ಮಣ ಪುರೋಹಿತರ ಹೊರತು ಮತ್ತೆ ಯಾರಿಗೂ ಅವಕಾಶವಿರಲಿಲ್ಲ. ಆಗಮೋಕ್ತ ರೀತ್ಯಾ ದೇವಾಲಯದ ಪೂಜೆಗಳು ನಡೆಯುತ್ತಿದ್ದವು. ಇದನ್ನೇ ವಿರೋಧಿಸಿ ಕೆಲಕಾಲ ಗಲಭೆ-ಹಿಂಸೆ ನಡೆಯಿತು. ಕಟ್ಲೆ ನೇಪಾಳದ ಪರಮೋಚ್ಚ ನ್ಯಾಯಾಲಯದ ಕಟ್ಟೆಗೇರಿತು. ನ್ಯಾಯಾಲಯ ದೇವಸ್ಥಾನದಲ್ಲಿ ಯಾರೇ ಆದರೂ ಪೂಜೆ ಮಾಡಬಹುದೆಂಬ ಆಜ್ಞೆ ಹೊರಡಿಸಿದ ಕೆಲವೇ ದಿನಗಳಲ್ಲಿ ಕೆಲವು ಅವಘಡಗಳು ಘಟಿಸಿದವು! ನೇಪಾಳದ ಜನ ಮತ್ತೆ ಪೂಜೆಯ ಸಲುವಾಗಿ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ನಡೆದರು! ಪುನಃ ಅಲ್ಲಿ ನಮ್ಮ ಕರಾವಳಿಯ ಬ್ರಾಹ್ಮಣರನ್ನೇ ಪೂಜೆಗೆ ನಿಯಮಿಸಲಾಗಿದೆ!

ಅಂತೂ ಪಶುಪತಿಯ ಪೂಜೆಗೆ ಇಷ್ಟೆಲ್ಲಾ ಕಥೆಗಳು ಕಾಲಕಾಲಕೂ ಜನಿಸಿದವು ಎಂಬುದು ಆತನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಭೋಲೇನಾಥನ ಸನ್ನಿಧಾನ ನೋಡಲೂ ಕೂಡ ಸಹಜವಾಗಿ ರಮಣೀಯವಾಗಿದೆ. ಹಿಮಾಲಯದವರೆಗೂ ತೆರಳುವ ಭಕ್ತರು ಅನುಕೂಲವಿದ್ದರೆ ನೇಪಾಳದ ಕಂಠ್ಮಂಡುವಿನ ಪಶುಪತಿನಾಥನನ್ನೂ ದರ್ಶಿಸಿದರೆ ಒಳ್ಳೆಯದು. ಅದರಂತೇ ಶಿವನ ವಾಸಸ್ಥಳವೆಂದು ಪ್ರಚಲಿತವಾದ ಆದರೆ ವಿಪರ್ಯಾಸವಾಗಿ ಈಗ ಚೈನಾ ಆಳ್ವಿಕೆಯ ಭೂಭಾಗಕ್ಕೆ ಸೇರ್ಪಡೆಯಾದ ಕೈಲಾಸ-ಮಾನಸ ಸರೋವರ ಕೂಡ ನೋಡಲೇಬೇಕಾದ ರಮಣೀಯ ಸ್ಥಳಗಳಲ್ಲಿ ಒಂದು. ಇಲ್ಲೆಲ್ಲಾ ಹೋಗಲು ಎದೆಗಾರಿಕೆ ಬೇಕು! ಪ್ರಯಾಣ ದುರ್ಗಮ, ಹವಮಾನದ ವೈಪರೀತ್ಯಗಳನ್ನು ಲೆಕ್ಕಿಸುತ್ತಾ, ಸಿಗಬಹುದಾದ ಹೆಲಿಕಾಪ್ಟರ್ ಗಳಲ್ಲಿ ಧೈರ್ಯಗೆಡದೇ ಕೂತು, ಆಮ್ಲಜನಕದ ಕೊರತೆ ಬಾಧಿಸಿದರೂ ತಾಳಿಕೊಂಡು ದರ್ಶಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ದೂರದಲ್ಲಿ ಕೈಲಾಸ ಪರ್ವತ ಹಿನ್ನೆಲೆಯಾಗುಳ್ಳ ಮಾನಸ ಸರೋವರದ ಚಿತ್ರ

ಪರಶಿವನ ಆರಾಧನೆಗೆ ಪ್ರಮುಖವಾಗಿ ಬಳಸುವುದು ರುದ್ರ: ನಮಕ-ಚಮಕಗಳು. ಸುಶ್ರಾವ್ಯ ಸ್ವರಮೇಳದಲ್ಲಿ ರುದ್ರಾಭಿಷೇಕ ನಡೆಸಿದಾಗ, ಅದನ್ನು ಕೇಳುವ ಮನಸ್ಸಿಗೆ ಸಿಗುವ ಆನಂದ ಇನ್ನಾವ ಮಂತ್ರದಿಂದಲೂ ಸಿಗುವುದು ಆಸಾಧ್ಯ! ಜೀವವೈಜ್ಞಾನಿಕ ವಿಶ್ಲೇಷಣೆಯಂತೇ ನರಮಂಡಲ ಮತ್ತು ಮೆದುಳಿನ ಸಂತುಲಿತ ಕ್ರಿಯೆಗೆ ಸ್ವಸ್ಥ ಮನಸ್ಸು ನಮ್ಮದಾಗುವುದಕ್ಕೆ ಈ ವೇದಮಂತ್ರಗಳ ಅದರಲ್ಲೂ ರುದ್ರ ಪಠಣ, ಶ್ರವಣ ಮತ್ತು ಮನನ ಕಾರಣ ಎಂಬುದಾಗಿ ತಿಳಿದುಬಂದಿದೆ. ರಕ್ತದೊತ್ತಡ ಸಮತೋಲನವಿಲ್ಲದ ಜನ ರುದ್ರಾಭಿಷೇಕ ನಡೆಯುವ ಸ್ಥಳದಲ್ಲಿ ಆಗಾಗ ಕೂರುವುದರಿಂದ, ರುದ್ರಾಕ್ಷಿಯ ಮಾಲೆ ಧರಿಸುವುದರಿಂದ ಅದರಿಂದ ಪರಿಹಾರ ಕಾಣಬಹುದಾಗಿದೆ! ಅಭಿಷೇಕ ಮಾಡಿ ತೆಗೆದ ತೀರ್ಥವನ್ನು ಪ್ರಾಶನಮಾಡುವುದರಿಂದ, ಪ್ರೋಕ್ಷಿಸಿಕೊಳ್ಳುವುದರಿಂದ ಶಾರೀರಿಕ ಬಾಧೆಗಳನ್ನು ಕಳೆದುಕೊಳ್ಳುವುದು ತಿಳಿದುಬಂದ ವಿಷಯ! ಇಂದು ನಾವು ತಿಳಿದ ವಿಜ್ಞಾನಕ್ಕಿಂತ ಹೆಚ್ಚಿನ ಆಳವಾದ ಜ್ಞಾನ ನಮ್ಮ ಋಷಿಮುನಿಗಳಿಗೆ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೇ ಉದಾಹರಣೆ ಬೇಕೇ ?

ಬೇಡನೊಬ್ಬ ಬೇಟೆಗೆ ತೆರಳಿ ಏನೂ ಸಿಗದೇ, ದಾರಿತಪ್ಪಿ, ಹಸಿದ ಹೊಟ್ಟೆಯಲ್ಲಿ ದಟ್ಟ ಕಾನನದಲ್ಲಿ ರಾತ್ರಿ ಕಳೆಯಬೇಕಾಗಿ ಬಂತು. ಮನೆಯಲ್ಲಿರುವ ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ, ಮೇಲೆರಗಬಹುದಾದ ಹಿಂಸ್ರ ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹತ್ತಿರವೇ ಇದ್ದ ಮರವೊಂದನ್ನು ಏರಿದ. ಬೇಸರ ಕಳೆಯಲು ತನಗೇ ಅರಿವಿಲ್ಲದೇ ಎಲೆಗಳನ್ನು ಕಿತ್ತು ಕಿತ್ತು ನೆಲಕ್ಕೆ ಬಿಸುಟ. ನೆಲದಲ್ಲಿ ನೆಲೆಯಾಗಿದ್ದ ಶಿವಲಿಂಗ ಆತನಿಗೆ ಗೋಚರಿಸಲೂ ಇಲ್ಲಾ; ಹತ್ತಿದ ಮರ ಬಿಲ್ವ ವೃಕ್ಷವೆಂಬುದೂ ತಿಳಿದಿಲ್ಲ! ಬೆಳಗಿನ ಜಾವ ಸಾಕ್ಷಾತ್ ಪರಶಿವ ಬೇಡನ ಮುಂದೆ ಪ್ರತ್ಯಕ್ಷನಾಗಿದ್ದ!! ಬೇಡನ ಅಜ್ಞಾನದಲ್ಲೂ ಆತನ ಪೂಜೆಯನ್ನು ಮೆಚ್ಚಿದ ಬೀರೇಶ್ವರ ಬೇಡನ ಸಂಕಷ್ಟವನ್ನು ನೀಗಿದ ಮಾತ್ರವಲ್ಲ ಆ ಜನ್ಮಾನಂತರ ಭವದ ಬಂಧನದಿಂದ ಮುಕ್ತಿಯನ್ನು ಕರುಣಿಸಿದ! ದೇವ-ದಾನವರು ಸಮುದ್ರ ಮಥನ ಮಾಡಿದಾಗ ಮೊದಲು ಉಕ್ಕಿದ ಹಾಲಾಹಲದಿಂದ ಲೋಕಗಳು ಕಂಗೆಟ್ಟವು. ಹರಿದುಬಂದ ಹಾಲಹಲವೆಂಬ ನಂಜನ್ನು ನಂಜಿಲ್ಲದ ಶಿವ ಭುಂಜಿಸಿದ..ನಂಜುಂಡೇಶ್ವರನಾದ. ಶಿವನ ಉಳಿವಿಗೆ ಹಾವನ್ನು ಕೊರಳಲ್ಲಿ ಬಂಧಿಸಿ ನಂಜು ಒಳಸೇರದಂತೇ ಅರ್ಧಾಂಗಿ ಪಾರ್ವತಿ ತಡೆದಿದ್ದರಿಂದ ಕಂಠ[ಕತ್ತು]ನೀಲಿಯಾದ ಶಿವ ನೀಲಕಂಠನಾದ!

ಶಂಕರ ಆತ್ಮಲಿಂಗವನ್ನೇ ನಮ್ಮ ಕರ್ನಾಟಕದ ಮಂದಿಗೆ ಕೊಟ್ಟ-ಇಷ್ಟು ಪ್ರೀತಿ ಸಾಲದೇ? ಯಾವುದೇ ಜಾತಿ-ಮತಗಳ ಭೇದವಿಲ್ಲದೇ ಸಾಂಪ್ರದಾಯಿಕ ಕ್ರಮದಲ್ಲಿ ಮುಟ್ಟು ಪೂಜಿಸಬಹುದಾದ ಗೋಕರ್ಣ ನಮ್ಮ ಕನ್ನಡಿಗರ ಹೆಮ್ಮೆ ! ವಿಶ್ವಮಾನವ ತತ್ವದಿಂದ ವಿದೇಶಿಗರಿಗೂ ಸಂಸ್ಕಾರ ಕಲಿಸಿ ಅಲ್ಲೀಗ ಆಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ-ಇದು ನಮ್ಮ ಕನ್ನಡಿಗರ ಕೊಡುಗೆ-ಇಡೀ ಜಗತ್ತಿಗೆ ! ಅಂತಹ ಶಿವನನ್ನು ಈ ದಿನ ಅಹೋರಾತ್ರಿ ಪೂಜಿಸುವ ಕೈಂಕರ್ಯ ಲೋಕದಲ್ಲಿ. ಶಿವ ಪೂಜೆ ಈ ದಿನ ಮಾತ್ರವಲ್ಲ ನಿತ್ಯವೂ ನಡೆಯಲಿ, ಬದುಕಿನ ಜಂಜಡಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಲಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ಪ್ರಾರ್ಥನೆ. ಸರ್ವರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಶಂಭುವಿಗೆ ಮನಸಾ ಬಿಲ್ವಪತ್ರೆಯೊಂದನ್ನು ಅರ್ಪಿಸುವ ಮೂಲಕ ಈ ಲೇಖನಕ್ಕೆ ಶಿವಾಯನಮಃ ಎನ್ನೋಣವೇ ? :

ಅಜ್ಞಾನೇನ ಕೃತಂ ಪಾಪಂ ಜ್ಞಾನೇನಾಪಿ ಕೃತಂ ಚ ಯತ್ |
ತತ್ಸರ್ವಂ ನಾಶಯಾಮಾತು ಏಕಬಿಲ್ವಂ ಶಿವಾರ್ಪಣಂ ||

ಈ ಸಮಾಜಕ್ಕೆ ನಾನು ಮಾಡಿದ್ದೇನು?

ಇಂದು ಬೆಳಿಗ್ಗೆ  ಅಂತರ್ಜಾಲ ತೆರೆದಾಗ ನಾಲ್ಕೈದು ಶುಭಾಷಯ ಪತ್ರಗಳು ನನ್ನನ್ನು ಎಚ್ಚರಿಸಿದವು. ನಾನೀಗ ಅರವತ್ತನೇ ವಯಸ್ಸಿಗೆ ಕಾಲಿಡುತ್ತಿರುವೆ . ಇನ್ನೊಂದು ವರ್ಷ ನಾನು ಕಿರಿಯ ನಾಗರೀಕ. ಒಂದು ವರ್ಷ ಪೂರೈಸುತ್ತಲೇ ಸರ್ಕಾರದ ಲೆಕ್ಖದಲ್ಲಿ ಹಿರಿಯ ನಾಗರೀಕ.
           ಆರು ದಶಕಗಳು ಮುಗಿಯುತ್ತಲೇ ಬಂದವಲ್ಲಾ!  ನಮ್ಮ ಪೂರ್ವಜರ ಲೆಕ್ಖದಲ್ಲಿ ಇನ್ನು ನಾಲ್ಕು ದಶಕಗಳು ಇಲ್ಲಿರಬೇಕಾಗಿದೆ. ಇರಬಹುದು-ನಾನೇನಾದರೂ ಸಮಾಜಕ್ಕೆ ಮಾಡುವುದಿದ್ದರೆ! 
              ನನ್ನನ್ನು ಆರು ದಶಕಗಳ ಕಾಲ ಬೆಳೆಸಿರುವ ಈ ಸಮಾಜಕ್ಕೆ  ನಾನು ಮಾಡಿದ್ದೇನು?  ಒಳ ಮುಖಮಾಡಿ ಚಿಂತಿಸಿದರೆ ಸಮಾಧಾನದ ಉತ್ತರ ಸಿಕ್ಕಿಲ್ಲ. ಸಮಾಜದಿಂದ ಪಡೆದಿದ್ದೆ ಹೆಚ್ಚು. ಏನಾದರೂ ಕೊಡಬೇಕೆಂದರೆ ಏನು ಕೊಡಲಿ? ಏನು ಕೊಡಲು ಸಾಧ್ಯ? ನನ್ನ ಅಂತರಾಳದ ಆಸೆ ಒಂದಿತ್ತು.   ಸಮಾಜ ಎಂಬುದು ಬಲು ವಿಶಾಲ ಪದ. ಆದರೆ  ನನ್ನ ಮೊದಲ ಆಧ್ಯತೆ ನನ್ನ   ಒಡ     ಹುಟ್ಟಿದವರು  ನನ್ನಷ್ಟು ನೆಮ್ಮದಿಯಿಂದ ಬದುಕಬೇಕು. ಕಾರಣ ನಾನು ಹುಟ್ಟಿದ ಮನೆ ಅಂತದ್ದು.  ಬಲು ಬಡತನದ ಮನೆ. ಎರಡು ಹೊತ್ತು ಊಟಕ್ಕೆ ಗತಿಯಿಲ್ಲ. ನನ್ನ ಚಿಕ್ಕಂದಿನಿಂದಲೂ ನನ್ನನ್ನು ಕಾಡಿದ್ದೇ       ಅದು. ನಮ್ಮ ಮನೆಯಲ್ಲಿ ನನ್ನ ಅಪ್ಪ-ಅಮ್ಮ, ಮತ್ತು ಮಕ್ಕಳಿಗೆ     ಎರಡುಹೊತ್ತು ಊಟಸಿಕ್ಕಿದರೆ    ಸಾಕು!  ನನ್ನ ಜೀವನದ ಮೂರು ದಶಕಗಳು ಕಳೆದದದ್ದು ಹೀಗೆ.ನನಗೊಂದು ಸರಕಾರೀ ಕೆಲಸ ಸಿಕ್ಕ ಮೇಲೆ ಅನ್ನದ ಸಮಸ್ಯೆ ಪರಿಹಾರವಾಗುತ್ತಾ ಬಂತು ಎಂಬುದು ಸತ್ಯ. ಆದರೆ ಅದಕ್ಕೆ ಪೂರ್ವದಲ್ಲಿ  ಜೀವನ ಎಂದರೆ ಅನ್ನಕ್ಕಾಗಿ ಪರಿತಪಿಸುವುದು ಅಷ್ಟೇ.ಹೌದು, ನಮ್ಮ ಮನೆಯಲ್ಲಿ ಬಡತನವಿದ್ದರೂ ಪ್ರೀತಿ ನೀಡಲು ನನ್ನ ಅಪ್ಪ-ಅಮ್ಮ, ಅಜ್ಜಿ, ಸೋದರತ್ತೆ[ ಬಾಲ್ಯ ವಿಧವೆ, ನಮ್ಮ ತಂದೆಯ ಅಕ್ಕ ] ದೊಡ್ಡಮ್ಮ[ ಬಾಲ್ಯ ವಿಧವೆ ನಮ್ಮ ತಂದೆಯ ಅಣ್ಣನ ಪತ್ನಿ] ಜೊತೆಗೆ ನಾವು ಆರು ಜನ ಮಕ್ಕಳು. ಹೌದು ನನ್ನ ಹೈಸ್ಕೂಲು ತರಗತಿಯಲ್ಲಿ ಶುರುವಾದ ನನ್ನ  ದುಡಿಮೆ [ಅನ್ನಕ್ಕಾಗಿ] ನಾನು ಸ್ವಯಂ ನಿವೃತ್ತಿ ತೆಗೆದುಕೊಂಡಾಗ ನಿಂತಿತು. 
ಇರಲಿ. ಈಗೇಕೆ? ಈ ಮಾತು ಎಂದರೆ  ಸುಮಾರು ನಾಲ್ಕು ದಶಕಗಳು ನನ್ನ ಆಧ್ಯತೆ ನಮ್ಮ  ಒಟ್ಟು ಕುಟುಂಬದ ಬಗ್ಗೆ. ಯಾರೂ ಹಸಿವಿನಿಂದ ಇರಬಾರದು. ಅಷ್ಟೇ! ಅಷ್ಟೇ!!

ಆನಂತರ ಕಳೆದೆರಡು ದಶಕಗಳಿಂದ ಸ್ವಲ್ಪ ಮನೆಯಿಂದ ಹೊರಗೆ ಗಮನ ಹರಿಸಲು ಸಾಧ್ಯವಾಯ್ತು. ಅಲ್ಲಿಯವರಗೆ  ಹೊಟ್ಟೆ ದೇವರ ಚಿಂತೆ ಬಿಟ್ಟರೆ ಬೇರೆ ಚಿಂತನೆ ಇರಲಿಲ್ಲ. ಆದರೆ ಕಳೆದೆರಡು ದಶಕಗಳಿಂದ  " ವೇದದ " ಕಿಂಚಿತ್ ಪರಿಚಯವಾಗುತ್ತಿದೆ. ಈಗ ಸತ್ಯದ ದಾರಿ ಕಾಣುತ್ತಿದೆ. ಈವರಗೆ ನಡೆದುಬಂದ ನಾನು, ನನ್ನ ಮನೆ ಯಿಂದ ಸ್ವಲ್ಪ ಹೊರ ನೋಟ ಸಾಧ್ಯವಾಗುತ್ತಿದೆ . ಈಗ  ನನ್ನ ಮನೆಕಡೆ ತಿರುಗಿ ನೋಡಿದಾಗ ಸ್ವಲ್ಪ ಬೇಸರವೇ ಆಗುತ್ತದೆ. ಕೇವಲ ಹೊಟ್ಟೆಪಾಡಿಗಾಗಿ ಮೂರು ದಶಕಗಳು ಕಳೆದು ಹೋಯ್ತಲ್ಲಾ! ನನ್ನ  ಬೆನ್ನಲ್ಲಿ ಬಿದ್ದವರಿಗೆ ಸತ್ಯದ ಕಿಂಚಿತ್ ಅರಿವು ಮಾಡಿಕೊಡಲು ಸಾಧ್ಯವಾಗಲಿಲ್ಲವಲ್ಲಾ! ಮಾಡಿದ್ದೆಲ್ಲಾ ವೇಸ್ಟ್! ಅನ್ನಿಸಿದೆ. ಅಂದು ಅನ್ನಕ್ಕಾಗಿ ದುಡಿಯುವುದು  ಅನಿವಾರ್ಯವಾಗಿತ್ತು.ಆ ಕಾಲ ದಾಟಿ ಈಗ ಒಂದಿಷ್ಟು ಅರಿವಿನೆಡೆಗೆ ಸಾಗುವ ಪ್ರಯತ್ನದಲ್ಲಿ ಎಲ್ಲರೊಡನೆ ಸಾಗೋಣ ಎಂದರೆ  ಇಲ್ಲ! ಇಲ್ಲಾ!! ಅವರಿಲ್ಲವೇ ಇಲ್ಲಾ!!! ಇನ್ನೂ ಅನ್ನಕ್ಕಾಗಿ, ಚಿನ್ನಕ್ಕಾಗಿ ಹಪಹಪಿಸುತ್ತಿರುವ ಎಲ್ಲರೊಡನೆ ನಾನಿರ ಬೇಕಾಗಿದೆ.ಬ್ರಹ್ಮಚರ್ಯ, ಗೃಹಸ್ಥ, ಆಶ್ರಮಗಳನ್ನು ದಾಟಿ ವಾನಪ್ರಸ್ಥಾಶ್ರಮ ಕಾಲ    ಆರಂಭವಾಗಿದೆ. ಇನ್ನಾದರೂ ಈ ಚಡಪಡಿಕೆ       ಬಿಟ್ಟು ಹೆಜ್ಜೆ ಇಡಬೇಕಿದೆ. ಬಹಳ ತಡವಾಗಿ ಲಭ್ಯವಾಗುತ್ತಿರುವ ವೇದದ ಜ್ಞಾನದ ಪ್ರಸಾರದಲ್ಲಿ  ಕಿಂಚಿತ್ತಾದರೂ ತೊಡಗಿಸಿ ಕೊಳ್ಳಲೇ  ಬೇಕಾಗಿದೆ . ಉಳಿದಿರುವ  ಆಯಸ್ಸನ್ನು ಸಾರ್ಥಕ ಗೊಳಿಸಿ ಕೊಳ್ಳ ಬೇಕಾಗಿದೆ. ಆ ಪರಮಾತ್ಮನು ಆ ಶಕ್ತಿ ನನಗೆ ಕೊಡಲೆಂದು   ಅಷ್ಟೇ ಅವನಲ್ಲಿ ನನ್ನ ಪ್ರಾರ್ಥನೆ.  

ಮಂಕು ತಿಮ್ಮನ ಕಗ್ಗ - ರಸಧಾರೆ (೫)








ಏನು ಜೀವನದರ್ಥ?


ದೇವರೆಂಬುದದೇನು ಕಗ್ಗತ್ತಲ ಗವಿಯೆ?
ನಾವರಿಯಲಾದೆಲ್ಲದರೊಟ್ಟು ಹೆಸರೇ?
ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ?
ಸಾವು ಹುಟ್ಟುಗಳೇನು?- ಮಂಕುತಿಮ್ಮ  

ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ?
ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? - ಮಂಕುತಿಮ್ಮ.

ದೇವರು ಎನ್ನುವುದು ಏನು? ಅದೇನು ಕತ್ತಲು ಕವಿದ ಗವಿಯೆ? ಎನ್ನುತ್ತಾರೆ ಮಾನನೀಯ ಗುಂಡಪ್ಪನವರು.

ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ ಅವಿನಿಗೆ ಬಂದ ಯೋಚನೆ ಹೀಗಿದ್ದಿರಬಹುದು. ದಿನದ ಯಾವುದೋ ಸಮಯದಲ್ಲಿ ಒಂದು ವಸ್ತು  ಗಗನದಲ್ಲಿ ಬರುತ್ತದೆ. ಆಗ ಎಲ್ಲವೂ ನಿಚ್ಚಳವಾಗಿ ಕಾಣುತ್ತದೆ. ಕಾಡು ಪ್ರಾಣಿಗಳಿಂದ  ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ಆಹಾರವನ್ನು ಹುಡುಕಲು ಆಡುವ ಬೇಟೆಯೂ ಯಶಸ್ವೀ. ಆದರೆ ದಿನದ ಯಾವುದೋ ಸಮಯದಲ್ಲಿ ಗಗನದಲ್ಲಿ ಆ ವಸ್ತು ಕಾಣೆಯಾಗುತ್ತದೆ. ಆಗ ಎಲ್ಲವೂ ಕತ್ತಲೆ.  ಕಾಡು  ಪ್ರಾಣಿಗಳಿಂದ ತನ್ನ ರಕ್ಷಣೆ ಕಷ್ಟ ಅಥವಾ ಅಸಾಧ್ಯ.  ಹಾಗಾಗಿ ಗಗನದಲ್ಲಿ ಬರುವ ವಸ್ತು ತನಗೆ ಸಹಾಯ ಮಾಡುತ್ತದೆ. ಆಕಾಶದಿಂದ ನೀರು ಬೀಳುತ್ತದೆ. ಗಿಡಮರಗಳು ಚಿಗುರಿ ಗೆಡ್ಡೆ ಗೆಣಸುಗಳು, ಹಣ್ಣು ಹಂಪಲುಗಳು ಯತೇಚ್ಚವಾಗಿ  ಸಿಗುತ್ತದೆ. ಹಾಗೇ  ಗಗನದಿಂದ ಬಂದ ಮಳೆ ತನಗೆ ಸಹಾಯಮಾಡುತ್ತದೆ. ಎಲ್ಲವೂ ಮೇಲಿಂದ ಬರುವುದರಿಂದ, ಇದನ್ನೆಲ್ಲಾ ಕೊಡುವ ಅಥವಾ ಕಳುಹಿಸುವ ಯಾರೋ ಮೇಲಿರಬೇಕು. ಅದನ್ನೇ ಅಂದು ಅವನು" ದೇವರು" ಎಂದ.  ಮುಂದೆ ತನಗೆ ಉಪಯೋಗಕ್ಕೆ ಬರುವ ಎಲ್ಲಕ್ಕೂ ಆ ದೈವತ್ವವನ್ನು ಆರೋಪಿಸುತ್ತಾ ಹೋದ. ವಿಡಂಬನೆಯೇನೆಂದರೆ ಇಂದಿಗೂ ಮಾನವನ ಸ್ತಿತಿ ಹಾಗೆ ಇದೆ. ತನಗೆ ಉಪಯೋಗಕ್ಕೆ ಬರುವುದೆಲ್ಲಾ, ಅಂದರೆ ಭೂಮಿ, ಮನುಷ್ಯ, ಪ್ರಾಣಿ ಪಕ್ಷಿ ಗಿಡ ಮರ,ನದಿ ಸಮುದ್ರ, ಮಳೆ ಬಿಸಿಲು ಬೆಳಕು ಹೂವು  ಹಣ್ಣು  ಹೀಗೆ ಎಲ್ಲವೂ ಅವನಿಗೆ ದೈವ ಸಮಾನ.  

ಆದರೆ ಆ ದೇವರೇನು  ಅಷ್ಟೊಂದು ಗಹನನೆ? ಗುಹ್ಯನೆ? ಅರ್ಥವಾಗದವನೇ? ದೇವರು ಗಹನನನೋ ಅಲ್ಲವೋ ಗೊತ್ತಿಲ್ಲ. ಆದರೆ ಇಂದಿಗೂ " ಅದು " ಇದೇ" ಎಂದು ಹೇಳುವ ಒಂದು ಪ್ರಮಾಣ ಸಿಕ್ಕಿಲ್ಲ  ಅಲ್ಲವೆ?. ಸಿಕ್ಕಿದ್ದಿದ್ದರೆ ಆ ದೇವರ ರೂಪ ಮತ್ತು ಸ್ವರೂಪಗಳ ಬಗ್ಗೆ ಇಷ್ಟೊಂದು ಭಿನ್ನ ಭಿನ್ನ ಅಭಿಪ್ರಾಯಗಳು ಇರುತ್ತಿರಲಿಲ್ಲ ಅಲ್ಲವೆ? ದೇವರನ್ನು ಪರಿಭಾಷಿಸಿದವರೆಲ್ಲ( ಪರಿಭಾಷೆ = definition )ತಮ್ಮ ತಮ್ಮ ಅನುಭವದ ವೃತ್ತದಲ್ಲೇ ಆ ದೇವರನ್ನು ವಿವರಿಸಿದ್ದಾರೆ. ಅಂದರೆ ಆ ದೇವರು ಎನ್ನುವ ವಸ್ತು ಅನುಭವ ವೇದ್ಯ ಮಾತ್ರ.

ವಾಚಕರೆ, ನೋಡಿ ಈ ಜಗತ್ತಿನ ಅಥವಾ ಸೃಷ್ಟಿಯಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ, ಅದರ ನಿಜ ಸ್ವರೂಪ ಮತ್ತು ಕಾರ್ಯ ವೈಖರಿ ಮತ್ತು ಆ ವಿಧ್ಯಮಾನಗಳಿಗೆ ಕಾರಣ ಮತ್ತು ಕಾರಕ ಯಾರು ಏನು ಅಂದು ಇಂದಿಗೂ ಮಾನವನಿಗೆ ಅರ್ಥೈಸಲಾಗಿಲ್ಲ. ವಿಜ್ಞಾನದ ಮೂಲಕ ಅವನು ಕಂಡು ಹಿಡಿದುಕೊಂಡಿರುವುದು ಕೇವಲ ಸಾವಿರಕ್ಕೆ ಒಂದು ಪಾಲೂ ಇಲ್ಲ. ಅಷ್ಟೇ ಅಲ್ಲ ನಿರಂತರ ಬದಲಾಗುತ್ತ ಹೊಸ ಹೊಸ ಆಯಾಮವನ್ನು ತಳೆಯುವ ಈ ಸೃಷ್ಟಿಯನ್ನು ಅರಿಯಲು ವಿಜ್ಞಾನದ ಪ್ರಯೋಗಗಳಿಂದ ಸಾಧ್ಯವೇ?  ಹಾಗಾಗಿ ಅವನು ಗುಹ್ಯನು ಎನ್ನುವ ಅರ್ಥದಲ್ಲಿ ಮಾನ್ಯ ಗುಂಡಪ್ಪನವರು ಕೇಳುತ್ತಾರೆ.

ಹಾಗೆ  ಆ ದೇವರು ಈ ಪ್ರಪಂಚವನ್ನು ಮತ್ತು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ಎಲ್ಲರನ್ನೂ ಕಾಪಾಡುವವನಾಗಿದ್ದರೆ, ಎಲ್ಲರೂ ಸಮಾನವಾಗಿ ಸುಖವಾಗಿರಬೇಕಲ್ಲವೆ? ಈ ಹುಟ್ಟು ಸಾವುಗಳೇಕೆ? ನೋವು ದುಃಖಗಳೇಕೆ ? ಮನುಷ್ಯ ಮನುಷ್ಯರಲ್ಲಿ ಇಷ್ಟೊಂದು ಬೇಧವೇಕೆ? ಆ   ದೇವರು ಎಲ್ಲರನ್ನೂ ಕಾಯುವವನದರೆ ಎಲ್ಲರನ್ನು ಸಮಾನವಾಗಿ ಕಾಯಬೇಕಲ್ಲವೇ?  ಈ ಸಾವು ನೋವುಗಳಿಗೇನು ಅರ್ಥ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಈ ಕಗ್ಗದ ಮೂಲಕ  ಮಾನನೀಯ ಗುಂಡಪ್ಪನವರು ಎತ್ತಿದ್ದಾರೆ. ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಅವರವರ ಜೀವನದ ಯಾವುದಾದರೂ ಘಳಿಗೆಯಲ್ಲಿ ಉದ್ಭವಿಸಿರಬಹುದು.

ಮಿತ್ರರೇ  ಬನ್ನಿ ನಾವು ನೀವು ಎಲ್ಲರೂ ವಿಚಾರ ಮಾಡುವ, ಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗುವ.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ

ರವಿ ತಿರುಮಲೈ

ಶೂದ್ರ ಪದ ಎಷ್ಟು ಶ್ರೇಷ್ಠ , ಎಂಬುದು ನಿಮಗೆ ಗೊತ್ತೇ?



ನಮ್ಮ ದೇಶದಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ತುಂಬಾ ಚರ್ಚೆಗೆ ಬರುವಂತಹ ಹಾಗೂ ದೇಶದ ಸಾಮರಸ್ಯವನ್ನು ಕಾಡುತ್ತಿರುವಂತಹ  ಸಮಸ್ಯೆ ಎಂದರೆ  ಜಾತಿ ಸಂಘರ್ಷ. ಗಾಂಧೀಜಿ ಮೊದಲ್ಗೊಂಡು ಎಷ್ಟೇ ಜನ ಮಹಾ ಪುರುಷರು ಜಾತಿ ವಿರುದ್ಧ ಹೋರಾಡಿದರೂ ಸಹ ಇಂದೂ ಪರಿಹಾರ ಕಾಣದಿರುವ ಸಮಸ್ಯೆ “ಜಾತಿ” 

ಲೇಖನದ ಆರಂಭದಲ್ಲೇ ಒಂದು ಮಾತು ಸ್ಪಷ್ಟಪಡಿಸಿ  ಸಮಸ್ಯೆಯ ಬಗ್ಗೆ ಚರ್ಚಿಸೋಣ.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಸಹ  ಈ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತೂ ಕಡಿಮೆಯಾಗುತ್ತಿಲ್ಲ. ಇಂದಿನ ರಾಜಕಾರಣಿಗಳಿಗೆ ಅದು ಒಂದು ವರದಾನ ಕೂಡ. ಜಾತಿ ಸಮಸ್ಯೆಯಲ್ಲಿ ಅತೀ ಪ್ರಮುಖವಾದುದು ಹಾಗೂ ದೇಶದ ಶಾಂತಿಯನ್ನು ಹಾಳುಗೆಡವಿರುವ ಅಂಶವೆಂದರೆ  “ಅಸ್ಪೃಷ್ಯತಾ ಆಚರಣೆ”
ಇದು ಹೇಗೆ ಬಂತೋ ಏಕೆ ಬಂತೋ,  ಬಂದು ನಮ್ಮ ಸಮಾಜದ ನೆಮ್ಮದಿಯನ್ನು ಬಲಿತೆಗೆದುಕೊಂಡಿದ್ದಂತೂ ಸುಳ್ಳಲ್ಲ. ಈಗ್ಗೆ ಒಂದೆರಡು ದಶಕಗಳಿಂದ  “ಅಸ್ಪೃಷ್ಯತಾ ಆಚರಣೆ” ಕಡಿಮೆಯಾಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲವೆಂಬುದು ಸತ್ಯ ಸಂಗತಿ. ಆದರೆ ಎರಡು ಮೂರು ದಶಕಗಳ ಪೂರ್ವದಲ್ಲಿದ್ದಷ್ಟು ಕೆಟ್ಟ  ಆಚರಣೆ ಈಗ ಇಲ್ಲ ಎಂಬುದೂ ಅಷ್ಟೇ ಸತ್ಯ. ಇನ್ನೊಂದೆರಡು ದಶಕಗಳಲ್ಲಿ “ಅಸ್ಪೃಷ್ಯತಾ ಆಚರಣೆ”  “ಜಾತಿ ಸಂಘರ್ಷ” ಪದಗಳು ಅರ್ಥವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.  ಈ ಲೇಖನದ ಉದ್ಧೇಶವೆಂದರೆ  ಈ ಸಮಸ್ಯೆಗಳಲ್ಲ. ಆದರೆ  ಇದೇ ಸಮಸ್ಯೆಗೆ ಅಂಟಿಕೊಂಡಿರುವ “ ಶೂದ್ರ” ಎಂಬ ಪದದ ಬಗ್ಗೆ  ಒಂದಿಷ್ಟು ಚಿಂತನ-ಮಂಥನ. ವೇದದ ಕಿಂಚಿತ್ ಪರಿಚಯವಿದ್ದು ,ಪರಿಚಯ ವಿರುವ ಮಂತ್ರಗಳ ಸರಿಯಾದ ಅರ್ಥ ತಿಳಿದುಕೊಳ್ಳುವ ಆಸಕ್ತಿ ಇದ್ದವರಿಗೆ “ ಶೂದ್ರ” ಎಂಬ ಪದಕ್ಕೂ “ಬ್ರಾಹ್ಮಣ”  ಎಂಬ ಪದಕ್ಕೂ ಯಾವ ವೆತ್ಯಾಸ ಕಾಣುವುದಿಲ್ಲ, ಬದಲಿಗೆ  “ ಶೂದ್ರ” ಪದಕ್ಕೆ ವೇದಗಳು ನೀಡಿರುವ ಅರ್ಥ ವಿವರಣೆಯು ನಮಗೆ ಅಚ್ಚರಿಯುಂಟು ಮಾಡುತ್ತದೆ.
ಮೊದಲು ವೇದ ಎಂಬ ಪದದ ಸಾಮಾನ್ಯ ಅರ್ಥವನ್ನು ತಿಳಿದುಕೊಂಡರೆ ಮುಂದಿನದೆಲ್ಲವೂ  ಸುಲಭವಾಗುತ್ತದೆ. ಹಾಗಾದರೆ ವೇದ ಎಂದರೇನು?
ವೇದ ಎಂದರೆ  ಜ್ಞಾನ ಅಥವಾ  ಅರಿವು.ಅದೂ ಎಂತಹ  ಜ್ಞಾನ? ಸುಖವಾದ,ನೆಮ್ಮದಿಯಾದ, ಆನಂದಭರಿತ ಜೀವನ ನಡೆಸುವ ಜ್ಞಾನ. ಇಂತಹ ಜ್ಞಾನ ಯಾರಿಗೆ ಬೇಡ ? ಎಲ್ಲರಿಗೂ ಬೇಕಲ್ಲವೇ? ಆದರೆ ಅದು ಒಂದು ವರ್ಗಕ್ಕೆ ಸೀಮಿತವಾಗಿದ್ದೂ ಸುಳ್ಳಲ್ಲ. ಆಗಿರುವ ಲೋಪಕ್ಕೆ ಕಾರಣ ಹುಡುಕುವುದರಲ್ಲಿ ಕಾಲಹರಣ ಮಾಡಿದರೆ ಪ್ರಯೋಜನ ವಿಲ್ಲ. ಆದರೆ ಇಂತಹ ಅಮೂಲ್ಯ ಜ್ಞಾನವನ್ನು ಅರಿತವರು  ಅರಿಯದವರಿಗೆ ಹಂಚಬೇಕಾದುದು ಅವರ ಧರ್ಮ.
ಭೂಮಿಯಲ್ಲಿ ಅಡಗಿಸಿಟ್ಟಿದ್ದ ನಿಧಿಯೊಂದು ಒಂದು ಕಟ್ಟಡ ಕಟ್ಟಲು ತಳಹದಿ ತೋಡುವಾಗ ಸಿಕ್ಕಿತೆಂದುಕೊಳ್ಳೋಣ. ಆಗ ಕಟ್ಟಡದ ಮಾಲಿಕ  ಏನು ಮಾಡಬೇಕು? ಯಾವ ಪಾಪಿ ಇಂತಹಾ ನಿಧಿಯನ್ನು ಇಲ್ಲಿ ಹೂತಿಟ್ಟಿದ್ದಾನಲ್ಲಾ! ಅವನ ಮೂಲವನ್ನು ಹುಡುಕಿ ಅವನ ತಲೆಮಾರಿನವರನ್ನಾದರೂ ಜೈಲಿಗೆ ಅಟ್ಟಬೇಕು! ಎಂದು ಯೋಚಿಸಬೇಕೇ? ಅಥವಾ  ಹೇಗೂ ನಿಧಿ ಸಿಕ್ಕಿದೆ,  ಇದನ್ನು ಉಪಯೋಗಿಸಿಕೊಂಡು ನನ್ನ ಜೊತೆಗೆ ಸಮಾಜಕ್ಕೂ ಸ್ವಲ್ಪ ಅನುಕೂಲವಾಗುವಂತೆ ಕಟ್ಟದ ಕಟ್ಟೋಣ , ಎಂದು ಚಿಂತಿಸಬೇಕೇ?
ಯಾವ ಕಾಲದಲ್ಲಿ ಯಾರು ಹೂತಿಟ್ಟಿದ್ದರೋ, ಯಾರಿಗೆ ಗೊತ್ತು? ಅವರು ನಮ್ಮ ಮೂಲದವರೇ ಆಗಿರಬಹುದು, ಅಥವಾ ಬೇರೆ ಯಾರೇ ಆಗಿರಬಹುದು. ಅಂತೂ ಕೊನೆಗೂ ನಿಧಿ ಸಿಕ್ಕಿದೆ! ಅದರ ಪ್ರಯೋಜನ ಆಗಬೇಕು, ತಾನೇ?
ವೇದದ ವಿಚಾರದಲ್ಲೂ ಇದೇ ಸಮಸ್ಯೆ ಎದುರಾಗಿದೆ. ಯಾವುದೋ ಕಾಲದಲ್ಲಿ ಯಾವ ಕಾರಣಕ್ಕಾಗಿ ವೇದಾಧ್ಯಯನ ಕೆಲವರಿಗೆ ಸೀಮಿತ ವಾಯ್ತೋ, ಸತ್ಯವನ್ನು ಹೇಳುವವರಾರು?
ನಮ್ಮ ಇತಿಹಾಸವನ್ನು ತಿರುಚಿರುವವರೇ ಹೆಚ್ಚು. ಅದೇನೇ ಇರಲಿ, ಸಧ್ಯದ ಪರಿಸ್ಥಿತಿಯಲ್ಲಿ ಯಾರೋ ಯಾವುದೋ ಕಾಲದಲ್ಲಿ ಮಾಡಿದ ತಪ್ಪಿಗಾಗಿ  ಇಂದಿನ  ಹಲವರು ಅದರ ದುಶ್ಪರಿಣಾಮವನ್ನು ಎದುರಿಸ ಬೇಕಾಗಿದೆ. ಕಾಲಕ್ಕೆ ಶರಣಾಗಲೇ ಬೇಕು. ಸತ್ಯವು  ಜಗಜ್ಜಾಹಿರವಾಗುವ ವರೆಗೂ ಅಸತ್ಯವು  ಜಗತ್ತನ್ನು ಆಳುತ್ತದೆ. ಆದರೆ ಅಸತ್ಯ ,ಅಧರ್ಮಗಳ ಹೊಡೆತಕ್ಕೆ ಸಿಕ್ಕಿಕೊಂಡು ಇಡೀ ಮನುಕುಲವು ಅದರ ದುಶ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಈಗ ವಿಷಯಕ್ಕೆ ಬರೋಣ.
ವೇದದಲ್ಲಿ ಚಾತುರ್ವರ್ಣ ವಿವರಣೆಯನ್ನು ನೀಡುವಾಗ “ಶೂದ್ರ” ವರ್ಣದ ಬಗ್ಗೆ ಏನು ಹೇಳುತ್ತದೆ?
ಋಗ್ವೇದದ ಈ ಮಂತ್ರವನ್ನು  ನೋಡಿ…..

ತೃದಿಲಾ ಅತೃದಿಲಾಸೋ ಅದ್ರಯೋಶ್ರಮಣಾ ಅಶೃಥಿತಾ ಅಮೃತ್ಯವಃ |
ಅನಾತುರಾ ಅಜರಾಃ ಸ್ಥಾಮವಿಷ್ಣವಃ ಸುಪೀವಸೋ ಅತೃಷಿತಾ ಅತೃಷ್ಣಜಃ || (ಋಕ್.೧೦.೯೪.೧೧.)

     [ತೃದಿಲಾಃ] ಮೋಹಬಂಧರಹಿತರೂ [ಅತೃದಿಲಾಸಃ] ಆದರೂ ಜಗತ್ತಿನಿಂದ ದೂರ ಸರಿಯದವರೂ, [ಆದ್ರಯಃ] ಆದರಣೀಯರೂ, [ಆಶ್ರಮಣಾಃ] ಶ್ರಮಕ್ಕೆ ಹಿಂಜರಿಯದವರೂ [ಅಶೃಥಿತಾಃ] ಸಡಿಲವಾಗದವರೂ, [ಅಮೃತ್ಯವಃ] ಸಾವಿಗೆ ಮಣಿಯದವರೂ [ಅನಾತುರಾಃ] ರೋಗರಹಿತರೂ [ಅಜರಾಃ] ಮುಪ್ಪಿಗೆ ಸೋಲದವರೂ, [ಅಮವಿಷ್ಣವಃ] ರಕ್ಷಣೆಯನ್ನು ಅಪೇಕ್ಷಿಸುವವರೂ, [ಸುಪೀವಸಃ] ಧೃಢಕಾಯರೂ, [ಅತೃಷಿತಾಃ] ಲೋಭರಹಿತರೂ, [ಅತೃಷ್ಣಜಃ] ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, [ಸ್ಥಃ] ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ.

    [ ಮೋಹಬಂಧರಹಿತರೂ ಆದರೂ ಜಗತ್ತಿನಿಂದ ದೂರ ಸರಿಯದವರೂ, ಆದರಣೀಯರೂ, ಶ್ರಮಕ್ಕೆ ಹಿಂಜರಿಯದವರೂ  ಸಡಿಲವಾಗದವರೂ, ಸಾವಿಗೆ ಮಣಿಯದವರೂ ರೋಗರಹಿತರೂ ಮುಪ್ಪಿಗೆ ಸೋಲದವರೂ, ರಕ್ಷಣೆಯನ್ನು ಅಪೇಕ್ಷಿಸುವವರೂ, ಧೃಢಕಾಯರೂ, ಲೋಭರಹಿತರೂ,ತಮ್ಮ ನಿರ್ಲೋಭಿತ್ವಕ್ಕೆ ಪ್ರಸಿದ್ಧರೂ ಆದವರು, ಪರಿಶ್ರಮಿಗಳೂ - ಶೂದ್ರರೂ ಆಗಿರುತ್ತಾರೆ]

ಶೂದ್ರ ವರ್ಣದ ವಿವರಣೆ ಹೇಗಿದೆ ನೋಡಿ. ಶೂದ್ರ ಗುಣ ಸ್ವಭಾವಗಳನ್ನುಗಮನಿಸಿದರೆ  ಯಾರಿಗಾದರೂ ತಾನು  ಶೂದ್ರನಾದರೆ ಚೆನ್ನ ಅನ್ನಿಸಲಾರದೇ? ಗುಣ ಸ್ವಭಾವಗಳನ್ನು ವಿಶ್ಲೇಶಿಸೋಣ.

ಮೋಹಬಂಧರಹಿತ:
ಅರಿಷಡ್ವರ್ಗ ಗಳಲ್ಲೊಂದಾದ  “ ಮೋಹ” ಎಂಬ  ಬಂಧನ ಶೂದ್ರನಿಗೆ ಇರುವುದಿಲ್ಲ. ಆದರೂ ಜಗತ್ತಿನಿಂದ ದೂರ ಸರಿಯದವರೂ, ಆದರಣೀಯರೂ, ಆಗಿರುತ್ತಾರೆ. ಜಗತ್ತಿನ  ಸಂಬಂಧದಿಂದ  ದೂರ ಸರಿಯದೆ ಮೋಹ ಬಂಧರಹಿತರಾಗಿರುವ ಸ್ಥಿತಿ ಸಾಮಾನ್ಯ ಸ್ಥಿತಿಯಲ್ಲ. ಆದ್ದರಿಂದ ಸಮಾಜದಲ್ಲಿ ಆದರಣೀಯರಾಗಿರುತ್ತಾರೆ.
ಲೋಭರಹಿತರು:
ಅರಿಷಡ್ವರ್ಗ ಗಳಲ್ಲೊಂದಾದ  ಲೋಭವನ್ನು ಹೊಂದಿರುವುದಿಲ್ಲ.
ಧೃಢಕಾಯನು, ರೋಗರಹಿತನು:
 ಶೂದ್ರನು ಧೃಢಕಾಯನಾಗಿ ರೋಗರಹಿತನಾಗಿರುತ್ತಾನೆ. ಸದಾ ಶ್ರಮಜೀವಿಯಾಗಿರುವ ಇವನು ಧೃಢಕಾಯನಾಗಿಯೂ ರೋಗರಹಿತನಾಗಿಯೂ ಇರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮನುಷ್ಯನಿಗೆ  ಬೇಕಾದ್ದಾದರೂ ಏನು? ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ತಾನೇ?  ಅದು ಶೂದ್ರನ ಸ್ವತ್ತು. ಇನ್ನೇನು ಬೇಕು?
ಅಷ್ಟೇ ಅಲ್ಲ. ಶೂದ್ರ ಕನಿಷ್ಟ ,ಬ್ರಾಹ್ಮಣ ಶ್ರೇಷ್ಟ ವೆಂದು ಯಾವ ವೇದಮಂತ್ರಗಳಲ್ಲೂ ಹೇಳಿಲ್ಲ. ಬದಲಿಗೆ   ನಾಲ್ಕೂ ವರ್ಣಗಳವರೂ ಭಗವಂತನ ಮಕ್ಕಳ, ಇವರು ಸಮಾನರು. ಎಂಬ ಹತ್ತಾರು  ವೇದಮಂತ್ರಗಳನ್ನು ಕಾಣಬಹುದಾಗಿದೆ.
ಈಗ ಹೇಳಿ,  ಮನುಷ್ಯನ ನೆಮ್ಮದಿಯ ಜೀವನಕ್ಕೆ ನೆರವಾಗಬಲ್ಲ ವೇದಗಳನ್ನು ವಿರೋಧಿಸಬೇಕೇ? ಅಥವಾ ಅದರ ಅರಿವು ಪಡೆದು  ನೆಮ್ಮದಿಯಾಗಿ ಬಾಳಬೇಕೇ?
ಅಷ್ಟೇ ಅಲ್ಲ, ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ದೇಶದಲ್ಲಿರುವ ಹಲವು ಜ್ವಲಂತ ಸಮಸ್ಯೆಗಳು ತಾನೇ ತಾನಾಗಿ ಬುಡಸಮೇತ  ಕಳಚಿಹೋಗುತ್ತವೆ.  ವೇದವನ್ನು ಅರ್ಥ ಮಾಡಿಕೊಳ್ಳಬೇಕು, ಮತ್ತು ಅದರಂತೆ ಬದುಕಬೇಕು.
ವೇದವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಅದು, ಜಾತಿ, ಪ್ರಾಂತ, ಭಾಷೆ ಎಲ್ಲವನ್ನೂ ಮೀರಿ   ಮನುಕುಲದ  ಅಭ್ಯುದಯಕ್ಕಾಗಿ  ಭಗವಂತನೇ ಕೃಪೆಮಾಡಿರುವ  ಗ್ರಂಥ  ಭಂಡಾರ ಎಂಬ ಅರಿವು ಮೂಡುತ್ತದೆ.

ಸರ್ವೇಪಿ ಸುಖಿನ:ಸಂತು|  ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು| ಮಾ ಕಶ್ಚಿತ್ ದು:ಖ ಭಾಗ್ಭವೇತ್||