Pages

Wednesday, July 9, 2014

ಹೀಗೊಬ್ಬರು ವೇದಾಭಿಮಾನಿ



ನಮಸ್ತೆ,

ನಾನು ಅಮೇರಿಕಾ ಸಂಯುಕ್ತ ಸಂಸ್ಥಾನದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿದ್ದೆನೆ. ಸುಮಾರು ೧೧ ವರ್ಷಗಳಿಂದ ಇಲ್ಲಿದ್ದೇನೆ. ನಾನು ವ್ರತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ನಿಮ್ಮ ಬ್ಲಾಗ್ಗಗಳನ್ನು ಬಹಳ ದಿನಗಳಿಂದ ಓದುತ್ತಿದ್ದೇನೆ. ಅವು ವೇದಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತಿದೆ. ನಿಮ್ಮ ಪ್ರಯತ್ನ ತುಂಬಾ ಅಮೂಲ್ಯವಾಗಿದೆ. ದಯವಿಟ್ಟು ಇದನ್ನು ಮುಂದುವರೆಸಿ. ಆ ಭಗವಂತನು ನಿಮಗೆ ಹಾಗು ಈ ಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ.

ನನಗೆ ತಿಳಿದಿರುವ ಮಟ್ಟಿಗೆ ಸಾಕಷ್ಟು ಜನ ವೇದಭಾಷ್ಯಕಾರರು ಇದ್ದಾರೆ. ಇವರಲ್ಲಿ ಸಾಯನ, ಮ್ಯಾಕ್ಸ್ ಮುಲ್ಲರ್, ಆರೋಬಿಂದೋ, ದಯಾನಂದ ಸರಸ್ವತಿ ಅತಿ ಪ್ರಾಮುಖ್ಯರು. ಇವರುಗಳಲ್ಲಿ ಯಾರ ಭಾಷ್ಯೆಯು ಋಗ್ವೇದದ ಅತಿ ನಿಖರ ಅರ್ಥವನ್ನು ತಿಳಿಸಿಕೊಡುತ್ತದೆ? ದಯವಿಟ್ಟು ತಿಳಿಸಿಕೊಡುವಿರಾ?
-ದಯಾನಂದ
ದಯಾನಂದ ಸರಸ್ವತಿಯವರ ಭಾಷ್ಯವು ಮಾನವೀಯತೆಯ ಆಧಾರದಲ್ಲಿದ್ದು ಇಂದಿಗೂ ಬಲು ಪ್ರಸ್ತುತ.
-ಶ್ರೀಧರ್
ನನ್ನ ಈ ಪ್ರಶ್ನೆಯು ಬಹಳ ದಿನದಿಂದ ಕಾಡುತ್ತಿದೆ. ವೇದ ಮಂತ್ರಗಳನ್ನು ಉಚ್ಚರಿಸುವಾಗ ಬೇರೆ ಬೇರೆರೀತಿಯಲ್ಲಿ ಸ್ವರಗಳನ್ನು ಏರಿಸಿ ಇಳಿಸಿ ಹೇಳುತ್ತಾರೆ. ಕಲಿಯುವವರು ಇದೇ ರೀತಿ ಏಕೆ ಕಲಿಯಬೇಕು?ಮಂತ್ರಗಳ ಅರ್ಥವನ್ನು ಪುಸ್ತಕದಿಂದ ಓದಿ ತಿಳಿದ ಮೇಲೆ, ಮಂತ್ರಗಳನ್ನು ಈ ಕ್ರಮದಲ್ಲಿ ಉಚ್ಚರಿಸುವಅಗತ್ಯವೇನು?
-ದಯಾನಂದ
ಇಲ್ಲಿ ಒಂದು ಮಂತ್ರದ ಸ್ವರ ಸ್ಥಾನದ ವಿವರಣೆ ಅಟ್ಯಾಚ್ ಮಾಡಿರುವೆ. ನಿಮ್ಮ ಪ್ರಶ್ನೆಗೆ ಅದು ಸಮಾಧಾನವಾಗಬಹುದು.ನೋಡಿ
-ಶ್ರೀಧರ್




ಉತ್ತರಿಸಿದ್ದಕ್ಕೆ ಧನ್ಯವಾದಗಳು. ನೀವು ಕಳುಹಿಸಿದ attachment ಓದಿದ ಮೇಲೆ ಮಂತ್ರಗಳ ಉಚ್ಚಾರಣೆಯ ಮಹತ್ವ ತಿಳಿಯಿತು. coming back to my question; "ಶಾಂತಿಯು ನನ್ನ ಬಾಳಿಗೆ ಇಳಿದು ಬರಲಿ" ಎಂದು ಕನ್ನಡದಲ್ಲಿ ಅರ್ಥ ಕೊಡುವ ಈ ಮಂತ್ರವನ್ನು ಕನ್ನಡಲ್ಲೇ ಓದುವುದಕ್ಕೂ ಹಾಗು ಮೂಲ ಮಂತ್ರವನ್ನು ಯಥಾವತ್ತಾಗಿ ಉಚ್ಚರಿಸುವುದಕ್ಕೂ ಏನು ವ್ಯತ್ಯಾಸ? ಮೂಲ ವೇದ ಭಾಷೆಯಲ್ಲಿ ಉಚ್ಚರಿಸುವುದರಿಂದ ಏನಾದರು effect ಇದೆಯೇ?ಇದೇ ರೀತಿ ನಮಗೆ ಉಪನಯನ ಮಾಡಿದ ಮೇಲೆ ಗಾಯತ್ರಿ ಮಂತ್ರವನ್ನು ೧೦೮ ಬಾರಿ ಹೇಳುವಂತೆ ನಮಗೆ ಗುರು ಹಿರಿಯರು ತಿಳಿಸಿಕೊಟ್ಟಿದ್ದಾರೆ. ಆ ಮಂತ್ರದ ಅರ್ಥ ತಿಳಿದ ಮೇಲೆ ಪದೇ ಪದೇ ಉಚ್ಚರಿಸುವುದರಿಂದ ಏನು ಲಾಭ?

ಒಂದು ಮಂತ್ರವು ಒಂದು ವೇದಭಾಷ್ಯ ಪುಸ್ತಕದಲ್ಲಿ ಒಂದು ಅರ್ಥವನ್ನು ಕೊಟ್ಟರೆ, ಅದೇ ಮಂತ್ರವು ಮತ್ತೊಂದು ಪುಸ್ತಕದಲ್ಲಿ ಮತ್ತೊಂದು ಅರ್ಥವನ್ನು ಕೊಡುತ್ತದೆ. ಹೀಗಾಗಿ ಯಾವುದನ್ನು ನಂಬಬೇಕು ಎನ್ನುವ ಪ್ರಶ್ನೆ ನನ್ನಂತಹ ಸಾಮಾನ್ಯರಲ್ಲಿ ಬರಬಹುದು. ಇದರ ನಿವಾರಣೆ ಹೇಗೆ?

ಭಾರತ ದೇಶದಲ್ಲಿ ಶತಶತಮಾನಗಳಿ೦ದ ಪರಕೀಯರ ದಾಳಿಗೆ ಸಿಕ್ಕಿ ಅತ್ಯಮೂಲ್ಯವಾದ ಜ್ಞಾನಸಂಪತ್ತು ನಾಶವಾಗಿದೆ. ಹಾಗಾದರೆ ನಮ್ಮ ಬಳಿ ಲಭ್ಯವಿರುವ ಈಗಿನ ಗ್ರಂಥಗಳುಪರಿಪೂರ್ಣವಾಗಿ, ದೋಷಮುಕ್ತವಾಗಿದೆಯೆ ಇಲ್ಲವೇ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ?

ನಿಮ್ಮ ಬಳಿ ಬಹಳ ಪ್ರಶ್ನೆಗಳನ್ನು ಕೇಳಿ ನಿಮಗೆ ತೊಂದರೆಯುಂಟು ಮಾಡುತ್ತಿದ್ದರೆ ದಯವಿಟ್ಟು ಕ್ಷಮಿಸಿ. ನನಗೆ ಬಹಳ ದಿನಗಳಿಂದ ಇಂತಹ ಪ್ರಶ್ನೆಗಳು ಕಾಡುತ್ತಿವೆ.

--ದಯಾನಂದ


ನಮಸ್ತೆ,
ನನ್ನಂತ ಸಾಮಾನ್ಯನಿಗೆ ನೀವು ವೇದದ ಬಗ್ಗೆ ಕೆಲವು ಸಂದೇಹಗಳನ್ನು ಕೇಳಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೀರೆಂಬುದೇ ನನಗೆ ಸಂತಸ ನೀಡಿದೆ.
ನಿಮ್ಮ ಸಂದೇಹಗಳಿಗೆ ನನ್ನ ಅನಿಸಿಕೆಗಳು......
ನೀವು ಒಬ್ಬ ಸಾಫ್ಟ್ವೇರ್ ಇಂಜಿನಿಯರ್ . ಬಿ.ಇ.ಮಾಡಿದ ನಂತರ ಇಷ್ಟೂ ವರ್ಷಗಳು ಆ ಫೀಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜೊತೆಯೇ ಬಿ.ಇ. ಮಾಡಿ ಆರಾಮವಾಗಿ ಮನೆಯಲ್ಲಿದ್ದುಕೊಂಡು ತಾನು ಓದಿ ತೇರ್ಗಡೆಯಾದ ವಿಷಯಗಳನ್ನು ಒಮ್ಮೆಯೂ ಕಣ್ಣಾಡಿಸದೆ ಇರುವವನಿಗೆ ನೀವು ಓದಿ ಪಾಸ್ ಮಾಡಿದ ವಿಷಯದ ಬಗ್ಗೆ ಈಗ ಕೇಳಿ ನೋಡಿ. " ನಾನು ಬಿ.ಇ. ಮಾಡಿ ಹತ್ತು ವರ್ಷವಾಯ್ತಪ್ಪ.ಎಲ್ಲಾ ಮರೆತು ಹೋಗಿದೆ. ಅನ್ನುತ್ತಾನಲ್ಲವಾ? ಆದರೆ ಪರೀಕ್ಷೆ ಬರೆಯುವಾಗ ವಿಷಯ ಅರ್ಥವಾಗಿತ್ತಲ್ಲವೇ? ಈಗೇಕೆ ಗೊತ್ತಿಲ್ಲಾ ಅಂತಾರೇ?

ಇದು ಬಹು ಸರಳವಾಗಿ ಸಮೀಕರಣ ಮಾಡಬಹುದಾದ ಉಧಾಹರಣೆ, ಎಂದಷ್ಟೇ ಈ ಉಧಾಹರಣೆ ಕೊಟ್ಟೆ.
ಒಂದು ದಿನ ತೊಳೆಯದೆ ಇಟ್ಟ ತಾಮ್ರದ ಪಾತ್ರೆಯನ್ನು ಮಾರನೆ ದಿನ ನೋಡಿ ಅದರ ಬಣ್ಣ ಹೇಗಿರುತ್ತದೆಂದು? ಆದರೆ ನಿತ್ಯವೂ ಹುಣಿಸೆ ಹಣ್ಣಿನಿಂದ ತಿಕ್ಕಿ ತೊಳೆದ ತಾಮ್ರದ ಪಾತ್ರೆಯನ್ನು ನೋಡಿ.ತಳತಳ ಹೊಳೆಯುತ್ತಿರುತ್ತದೆ. ಅಲ್ಲವೇ?
ಇದೂ ಹಾಗೆಯೇ. ಒಮ್ಮೆ ಓದಿ ಮುಚ್ಚಿಡುವ ಕಥೆ ಪುಸ್ತಕವಲ್ಲ .ಇದು. ನಿತ್ಯವೂ ಒಂದೇ ಮಂತ್ರವನ್ನು ಓದಿದದರೂ ಇಂದಿಗಿಂತ ನಾಳೆ ಅದರ ಅರ್ಥ ಅದ್ಭುತವಾಗಿ ಗೋಚರವಾಗುತ್ತದೆ. ಮಂತ್ರದಲ್ಲಿ ಏನೂ ಬದಲಾವಣೆಯಾಗಿಲ್ಲ. ಪ್ರತಿದಿನ ನಮ್ಮ ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತಿದೆ.
ಮಂತ್ರವನ್ನು ಏಕೆ ಪಠಿಸಬೇಕೆಂಬುದು ಮತ್ತೊಂದು ಪ್ರಶ್ನೆ. ಇದಕ್ಕೂ ನಾನು ವಿದ್ವಾಂಸರ ಉತ್ತರ ಕೊಡಲಾರೆ. ಆದರೆ ಅನುಭವದ ಮಾತು ಹೇಳುವೆ. ನಾನು ಕಳೆದ ಎರಡು ವರ್ಷದಿಂದ ಆಯ್ದ ಹತ್ತಿಪ್ಪತ್ತು ವೇದ ಮಂತ್ರಗಳನ್ನು ನಿತ್ಯವೂ ಸ್ವರ ಬದ್ಧವಾಗಿ ಇನ್ನೂ ಹಲವು ಮಿತ್ರರೊಡನೆ ಸತ್ಸಂಗದಲ್ಲಿ ಪಠಿಸುವೆ. ನಿತ್ಯವೂ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳುವೆ. ಒಂದೆರಡು ವೇದಭಜನೆಯನ್ನು ನಿತ್ಯವೂ ಮಾಡುವೆ. ಸಂಜೆ 6.00 ರಿಂದ 7.00ರವರಗೆ ನಮ್ಮ ಆ ಸತ್ಸಂಗದ ಸಮಯ ಇದೆಯಲ್ಲಾ , ದಿನದ 24 ಗಂಟೆಯಲ್ಲಿ ಆ ಒಂದು ಗಂಟೆಯ ಮಹತ್ವವೇ ಬೇರೆ. ನಾನು ಇದೇ ವಿಚಾರಕ್ಕಾಗಿ ಸ್ವಯಂ ನಿವೃತ್ತಿ ಪಡೆದು ಮೂರು ವರ್ಷಗಳಾಯ್ತು. ನನ್ನ ಮಿತ್ರರೆಲ್ಲಾ ಕಳೆದ ವರ್ಷ ಈ ವರ್ಷ ನಿವೃತ್ತರಾಗಿದ್ದಾರೆ. ಎಲ್ಲರ ಬಾಯಲ್ಲಿ ಒಂದೇ ಮಾತು " ಶ್ರೀಧರ್ ಏನು ಬರು ಬರುತ್ತಾ ಯಂಗ್ ಆಗ್ತಾ ಇದೀಯ!! "
ಇದು ಜಂಬದ ಮಾತಲ್ಲ ವೇದದ ಕೊಡುಗೆ. ಮಂತ್ರೋಚ್ಚಾರಣೆಯ ತರಂಗಗಳ ಮಹತ್ವ. ನಿತ್ಯವೂ ಕೆಲವು ವೇದ ಮಂತ್ರಗಳ ಅರ್ಥವನ್ನು ಮನನ ಮಾಡುತ್ತಾ ಇರುವುದರಿಂದಬೇರೆಯವರು ಗಮನಿಸ ಬಹುದಾದ ನಮ್ಮಲ್ಲಾಗುವ ಗುಣಾತ್ಮಕ ಬದಲಾವಣೆ.
ಹೌದು.ಉತ್ತರ ಭಾರತದಲ್ಲಿ ವೇದ ಮಂತ್ರಗಳು ಉಚ್ಚರಿಸುವ ಸ್ವರ ಭಿನ್ನವಾಗಿದೆ. ಅದರ ಪರಿಣಾಮಗಳು ನನಗೆ ಗೊತ್ತಿಲ್ಲ. ಆದರೆ ದಕ್ಷಿಣಭಾರತದ ಸಸ್ವರ ವೇದ ಮಂತ್ರದ ಉಚ್ಚಾರಣೆಯ ಫಲವಾಗಿ ಹೊರಹೊಮ್ಮುವ ತರಂಗಗಳ ಪರಿಣಾಮ ಅದ್ಭುತ.
ನಾವು ಅನುಸರಿಸುತ್ತಿರುವ ವೇದ ಮಂತ್ರದ ಆಡಿಯೋ ಕ್ಲಿಪ್ ಗಳನ್ನು ಸ್ವಲ್ಪ ಸಮಯ ತೆಗೆದುಕೊಂಡು ನಿಮಗೆ ಕಳಿಸಿಕೊಡಲು ಸಾಧ್ಯ.
ವೇದಮಂತ್ರಗಳ ಅರ್ಥವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬರೆದಿದ್ದಾರೆಂಬುದು ನಿಜವಾದರೂ ಯಾವುದು ಮಾನವೀಯತೆಗೆ ಹತ್ತಿರವಾಗಿದೆಯೋ ಅದು ಸೂಕ್ತವಲ್ಲವೇ? ದಯಾನಂದರ ಭಾಷ್ಯವಂತೂ ವೇದದ ನಿಜ ದರ್ಶನ ಮಾಡಿಸುತ್ತದೆ. ನನಗೆ ಅದು ಹಿತವಾಗಿದೆ.
ಎಲ್ಲರಿಗಾಗಿ ವೇದ - ಎಂಬ ಕಲ್ಪನೆಯ ಈ ಕಾರ್ಯಕ್ಕೆ ತಮ್ಮ ಪೂರ್ಣ ಸಹಕಾರ ಕೋರುವೆ.
ನಮಸ್ತೆ

-ಶ್ರೀಧರ್

ನಮಸ್ತೆ,

ನೀವು ನಮ್ಮ ಸಂಭಾಷಣೆಯನ್ನು ನಿಮ್ಮ ಬ್ಲಾಗ್ ನಲ್ಲಿ ಪ್ರಕಟಿಸಬಹುದು.

ನಿಮ್ಮ ಈ ಪ್ರಯತ್ನಕ್ಕೆ ನನ್ನ ಸಹಕಾರ ಸದಾ ಇರುತ್ತದೆ. ನೀವು ವಿಶ್ವನಾಥ ಶರ್ಮರ ವೇದಪಾಠ series ನ್ನು ಮುಂದುವರೆಸುತ್ತಿರಾ?
-ದಯಾನಂದ

ನಮಸ್ಕಾರ
ಮುಂದುವರೆಸುವ ಇಚ್ಛೆ ನಮಗಿದೆ. ಆದರೆ ಯಾರ್ಯಾರು ವೇದಪಾಠದ ಆಡಿಯೋ ಕ್ಲಿಪ್ ಗಳನ್ನು ಮೇಲ್ ಮೂಲಕ ತರಿಸಿಕೊಳ್ಳುತ್ತಿದ್ದರು ಅವರ್ಯಾರೂ ರೆಸ್ಪಾಂಡ್ ಮಾಡಲಿಲ್ಲ. ಆದಕ್ಕಾಗಿ ರೆಕಾರ್ಡಿಂಗ್ ನಿಲ್ಲಿಸಿಬಿಟ್ಟೆ. ಮತ್ತೆ ಬೇಕಾದರೆ ಶುರುಮಾಡಬಹುದು. ಆದರೆ ಇದೇ ಆಗಸ್ಟ್ 16,17 ವೇದಭಾರತಿಯ ವಾರ್ಷಿಕೋತ್ಸವ ಇದೆ. ಅದಕ್ಕೆ ಸಿದ್ಧತೆ ಆಗುತ್ತಿದೆ. ವಾರ್ಷಿಕೋತ್ಸವದ ನಂತರ ಆರಂಭಿಸಬಹುದು.
ವಂದನೆಗಳು
-ಶ್ರೀಧರ್