Pages

Thursday, April 21, 2011

ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!!


ವೇದಗಳಲ್ಲಿ ಈಗ ಬ್ರಾಹ್ಮಣರು ನಡೆಸುವ ಮರಣೋತ್ತರ ಕರ್ಮಾಂಗಗಳ ವಿವರಣೆ ಇದೆಯೇ??? ಇರಲಿಕ್ಕಿಲ್ಲ.          -ಸುಬ್ರಮಣ್ಯ ಮಾಚಿಕೊಪ್ಪ                                                                                  ಇರಲಿಕ್ಕಿಲ್ಲ ಎಂಬ ನಿಮ್ಮ ನಿರೀಕ್ಷೆ ಸರಿ! ಮರಣವಾಗಿದೆ. ಇತ್ತ ಮೃತ ಶರೀರ. ಅದನ್ನು ವಾಯುಮಾಲಿನ್ಯವಾಗದಂತೆ ಸುಟ್ಟು ಬೂದಿ ಮಾಡಿದರೆ ಅದರ ವಿಚಾರದಲ್ಲಿ ನಮ್ಮ ಕರ್ತವ್ಯ ಮುಗಿದಂತೆ. "ಭಸ್ಮಾಂತಂ ಶರೀರಮ್" (ವೇದ) ಅತ್ತ ಶರೀರವನ್ನು ತೊರೆದ ಜೀವಾತ್ಮ. ಅದು ಶರೀರದಲ್ಲಿದ್ದಾಗ, ಶರೀರದಲ್ಲಿದ್ದಾಗ ಮಾಡಿದ ಕರ್ಮಗಳನುಸಾರ ಪುನರ್ಜನ್ಮವನ್ನೋ, ಮೋಕ್ಷವನ್ನೋ ಪಡೆಯುತ್ತದೆ. ಅದರ ಕರ್ಮಗಳಿಗೆ ಅದೇ Responsible. ಈ ವಿಚಾರದಲ್ಲಿ ಯಾರೂ ಮೂಗು ಹಾಯಿಸಲು ಅವಕಾಶವೇ ಇಲ್ಲ. ಪಕ್ತಾರಂ ಪಕ್ವಃ ಪುನರಾವಿಶಾತಿ (ವೇದ) - ನಾವು ಮಾಡಿದ ಕರ್ಮಗಳ ಅಡುಗೆಯು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿನ್ನುವವರೆಗೂ ಬಿಡುವುದಿಲ್ಲ. ನಮ್ಮ ಪುಣ್ಯವನ್ನು ಬೇರೊಬ್ಬರ Accountಗೆ ಬದಲಾಯಿಸುವುದಾಗಲಿ, ಇಲ್ಲಿ ಚಪ್ಪಲಿ ದಾನ ಮಾಡಿದರೆ ಅವರಿಗೆ ಅಲ್ಲಿ (ಎಲ್ಲೋ ಕಂಡವರಿಲ್ಲ, ಕೇಳಿದವರಿಲ್ಲ, ಹೋದವರು ಒಂದು SMS ಕಳಿಸಿಲ್ಲ!!!) ಚಪ್ಪಲಿ ಸಿಗುತ್ತದೆ ಎಂಬುದೆಲ್ಲಾ ಪುರಾಣಗಳಲ್ಲಿ ಬಂದಿರುವ ಕಾಗಕ್ಕ ಗುಬ್ಬಕ್ಕನ ಕಥೆಗಳು. ಇಂತಹ ಪಿಂಡಪ್ರದಾನಗಳಾಗಲೀ, ತಿಥಿ-ಮತಿಗಳಾಗಲಿ ವೇದಗಳಲ್ಲಿ ಎಲ್ಲಿಯೂ ಹೇಳಲ್ಪಟ್ಟಿಲ್ಲ. ಇಂದು ಇವರು ವೈದಿಕವೆಂದು ಮಾಡುವ ಅಷ್ಟೂ 100% ಅವೈದಿಕ!! ಶ್ರಾದ್ಧ, ತರ್ಪಣ, ಪಿತೃಯಜ್ಞ ಎಂದೆಲ್ಲಾ ವೇದಗಳು ಹೇಳಿರುವುದು ಬದುಕಿರುವ ತಂದೆ-ತಾಯಿಗಳು, ಹಿರಿಯರ ವಿಚಾರದಲ್ಲಿ. ಶ್ರದ್ಧೆಯಿಂದ ಮಾಡಿದ ಸೇವೆಯೇ ಶ್ರಾದ್ಧ, ಬದುಕಿರುವವರಿಗೆ. ತೃಪ್ತಿಯಾಗುವಂತೆ ಮಾಡಿದ್ದೇ ತರ್ಪಣ, ಬದುಕಿರುವವರಿಗೆ. ಪಿತೃಗಳ ಸೇವೆಯನ್ನು ಅತ್ಯುತ್ತಮವಾಗಿ ಮಾಡುವುದೇ ಪಿತೃಯಜ್ಞ, ಬದುಕಿರುವವರಿಗೆ!!
  -ಸುಧಾಕರಶರ್ಮಾ  
  ನನ್ನ ಮಾತು:   ಶ್ರಾದ್ಧವನ್ನು ಆಡುಭಾಷೆಯಲ್ಲಿ ತಿಥಿ/ವೈದಿಕ...ಹೀಗೆಲ್ಲಾ ಕರೆಯುತ್ತಾರೆ. ನನ್ನ ಈ ವಯಸ್ಸಿಗೆ ಶ್ರಾದ್ಧದ ವಿಚಾರದಲ್ಲಿ ಆಗಿರುವ ಅನುಭವದ ಆಧಾರದಲ್ಲಿ ಎರಡುಮಾತು ಬರೆಯ ಬೇಕೆನಿಸಿದೆ. ಒಂದು ಘಟನೆಯಂತೂ ನಮ್ಮ ಸೋದರತ್ತೆಯವರು ಮೃತರಾದಾಗ ನಾನು ಪಟ್ಟಪಾಡು.ನಮ್ಮ ಗೌರತ್ತೆ ಅವರ ಹತ್ತನೆಯ ವಯಸ್ಸಿನಲ್ಲಿ ಮದುವೆಯಾಗಿ ಹನ್ನೊಂದನೆಯ ವಯಸ್ಸಿನಲ್ಲಿ ವಿಧವೆಯಾಗಿ!! ನಂತರ ನಮ್ಮ ಮನೆಯಲ್ಲಿಯೇ ಉಳಿದು ತಾಯಿಗಿಂತ ಹೆಚ್ಚಾಗಿ ಪ್ರೀತಿಸಿ  ನಮ್ಮನ್ನೆಲ್ಲಾ ಸಾಕಿ ಬೆಳೆಸಿದ ಮಹಾತಾಯಿ. ಅವರು ನಮ್ಮ ಮನೆಯಲ್ಲಿ ಕೊನೆಯುಸಿರೆಳೆದಾಗ ಅವರ ಅಂತ್ಯಕಾರ್ಯ ಯಾರು ಮಾಡಬೇಕೆಂಬ ಜಿಜ್ಞಾಸೆ. ಹಣ ಖರ್ಚುಮಾಡಲು ನಾನು ಸಿದ್ಧನಿದ್ದರೂ ತಂದೆ ತಾಯಿಯುಳ್ಳ ನಾನು ಮಾಡಬಾರದೆಂಬ ಸಲಹೆ ಎಲ್ಲರಿಂದ .ನಮ್ಮತಂದೆಗಾದರೋ ಶ್ರಾದ್ಧಕರ್ಮಗಳನ್ನು ಮಾಡುವಷ್ಟು ಶಾರೀರಿಕ ತ್ರಾಣವಿರಲಿಲ್ಲ. ಆಗ ಕಂಡುಕೊಂದ ದಾರಿ....ಬಾಡಿಗೆ  ಕರ್ತೃ ತರುವುದು.!! ಹೇಗೋ ಅದೂ ಆಯ್ತು. ಸತ್ತ ಐದನೆಯ ದಿನಕ್ಕೆ ಕರ್ಮಗಳು ಆರಂಭವಾದರೆ ಎಂಟನೆಯ ದಿನಕ್ಕೆ ಕರ್ತೃ ನಾಪತ್ತೆ!! ನಮ್ಮದು ಹಳ್ಳಿ ಬೇರೆ. ನಮ್ಮ ಹಳ್ಳಿ ಹರಿಹರಪುರದಿಂದ ಹೊಳೇನರಸೀಪುರಕ್ಕೆ ಆ ಬಾಡಿಗೆ ಕರ್ತೃವನ್ನು ಹುಡುಕಿಕೊಂಡು ಹೋದರೆ ಅವನನ್ನು ಮತ್ತೊಬ್ಬ ಪುರೋಹಿತರು ಸೆರೆ ಮಾಡಿಕೊಂಡಿದ್ದರು. ಆ ಪುರೋಹಿತರನ್ನು ವಿಚಾರಿಸದರೆ  ಅವರಿಂದ ಬಂದ ಉತ್ತರ " ನೀನು ಯಾರೋ ಪುರೋಹಿತನ್ನು ಗೊತ್ತು ಮಾಡಿಕೊಂಡಿದ್ದೀಯಲ್ಲಾ! ಅವನನ್ನೇ ಕೇಳು, ಅವನೇ ಯಾರನ್ನಾದರೂ ಹುಡುಕಲಿ!" ಅಂದಿನ ನನ್ನ ಮನ:ಸ್ಥಿತಿ ಹೇಗಿತ್ತೆಂದರೆ " ಇವತ್ತು ಈ ಕರ್ತೃ ಬಾರದಿದ್ದರೆ ಏನೋ ವಿಪತ್ತು ಸಂಭವಿಸಿ ಬಿಬಹುದು! ದೊಡ್ದ ಅನಾಹುತವಾಗಿಬಿಡಬಹುದು!" ಎಂದೆಲ್ಲಾ ಅಜ್ಞಾನದಿಂದ ಕೂಡಿದ ಭೀತಿ!! ನಾನು ಆಪುರೋಹಿತರನ್ನು ರಸ್ತೆಯಲ್ಲಿ ಭೇಟಿಯಾಗಿದ್ದೆ.ಭಯದಿಂದ ಅಲ್ಲೇ ಅವರ ಕಾಲಿಗೆ ಬಿದ್ದೆ. ಉಹೂಂ, ಅವರ ಹೃದಯ ಕರಗಲೇ ಇಲ್ಲ.[ಹೃದಯ ಇದ್ದರೆ ತಾನೇ?!] ಕೊನೆಗೆ ನಮ್ಮ ಬಂಧುವೂ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ವೇದಪಂಡಿತರಾದ ಶ್ರೀ ಲಕ್ಷ್ಮೀನರಸಿಂಹ ಮೂರ್ತಿಗಳ ಹತ್ತಿರ ಹೋದೆ. ಅವರು ಏನೋ ಏರ್ಪಾಡು ಮಾಡಿದರು. ಮುಂದೆ ಎಲ್ಲಾ ಕಾರ್ಯಕ್ರಮ ನಡೆಯಿತು ಎನ್ನಿ.  ಅಂದು ನನ್ನ ವಯಸ್ಸು 26-27 ಇದ್ದಿರಬಹುದು. ಅಮ್ಮನ ಧಾರ್ಮಿಕ ಆಚರಣೆಗಳಿಂದ ಪ್ರಭಾವಿತನಾಗಿದ್ದವನು. ಅಂದಿನ ನನ್ನ ಮನ:ಸ್ಥಿತಿ! ಪರಿಸ್ಥಿತಿ! ಹೇಗಿತ್ತೆಂಬುದನ್ನು ಈಗ ಊಹಿಸಿಕೊಂಡರೂ ಆ ಹೃದಯಹೀನ,ನಿರ್ದಯೀ ಪುರೋಹಿತನ ಮುಖ ನನ್ನ ಕಣ್ಮುಂದೆ ಕಟ್ಟಿದಂತಾಗುತ್ತದೆ. ಈಗಲೂ ಹೊಳೇನರಸೀಪುರದ ರಾಜಬೀದಿಯಲ್ಲಿ ಆ ವ್ಯಕ್ತಿಯ ಕಾಲು ಹಿಡಿದುಕೊಂಡು ಬಿದ್ದಿದ್ದೀನೇನೋ ಎಂದು ನನ್ನ ಕಣ್ಣಾಲಿ ನೀರು ತುಂಬಿಕೊಳ್ಳುತ್ತವೆ. ಇಂತಹ ಕೆಟ್ಟ ಅನುಭವ ಆದಮೇಲೂ ಸುಮಾರು ಮೂವತ್ತು ವರ್ಷ ಇಂತಹಾ ಕೆಟ್ಟ ವ್ಯವಸ್ಥೆಯನ್ನು ಸಹಿಸಿಕೊಂಡುಬಿಟ್ಟೆನಲ್ಲಾ!ಎಂದು ದು:ಖಿತನಾಗುತ್ತೇನೆ. ಆದರೆ ಶ್ರಾದ್ಧಕರ್ಮಗಳನ್ನು ಮಾಡಬೇಡವೇ? ಎಂದರೆ  ಬದುಕಿರುವಾಗ ಅಪ್ಪ-ಅಮ್ಮನನ್ನು ದೇವರಂತೆ ನೋಡಿಕೊಂಡಿರುವ ನನಗೆ ವರ್ಷಕ್ಕೊಮ್ಮೆ ನನ್ನ ಬಂಧುಬಳಗದೊಡನೆ ಅವರ ಸ್ಮರಣೆ ಮಾಡುವಾಸೆ. ಈಗ ಯಾವ ಪದ್ದತಿ ನಡೆದುಬಂದಿದೆಯೋ ಅದೇ ಪದ್ದತಿಯಲ್ಲಿ ಇದುವರೆವಿಗೂ ಶ್ರಾದ್ಧವನ್ನು  ಮಾಡುತ್ತಿದ್ದೇವೆ.ಆದರೆ ಕಳೆದ ವರ್ಷದಿಂದ ನನ್ನ ಮನದಲ್ಲಿ ಚಿಂತನೆಯೊಂದು ಮೂಡಿದೆ.ನಮ್ಮ ಅಪ್ಪ-ಅಮ್ಮನು ಸತ್ತದಿನ ನಮ್ಮ ಅಣ್ಣತಮ್ಮ -ಅಕ್ಕ-ತಂಗಿ ಎಲ್ಲರೂ ನಮ್ಮ ಮನೆಗೆ ಬರುತ್ತಾರೆ. ಹೇಗೂ ಇಬ್ಬರು ಬ್ರಾಹ್ಮಣಾರ್ಥಕ್ಕೆಂದು ಕರೆಯುವ ಸಂಪ್ರದಾಯ ನಡೆದು ಬಂದಿದೆ. ಇರಲಿ. ಆದರೆ ಯಾವ ವಿಧಿಗಳಿಲ್ಲದೆ ಅಪ್ಪ-ಅಮ್ಮನ ಸ್ಮರಣೆಯಲ್ಲಿ ಒಟ್ಟಿಗೆ ಊಟಮಾಡಿ ಅಂದು ಕೈಲಾದ ಒಂದು ಸತ್ಕಾರ್ಯವನ್ನು ಮಾಬೇಕೆಂಬುದು ನನ್ನ ಚಿಂತನೆ. ಅದು ಪೂರ್ಣವಾಗಿ ಸಫಲವಾಗಬೇಕೆಂದರೆ ನನ್ನ ಚಿಂತನೆ ನನ್ನ ಅಣ್ಣತಮ್ಮ ,ಅಕ್ಕ-ತಂಗಿಯರಿಗೆ ಅರ್ಥವಾಗಬೇಕು. ಅವರುಗಳಿಗೆ ಮನಸ್ಸಿಗೆ ಕಿರಿಕಿರಿ ಮಾಡಿ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಮುಂದೊಂದು ದಿನ ನನ್ನ ಚಿಂತನೆ ಕಾರ್ಯಗತಗೊಳ್ಳುವುದರಲ್ಲಿ ನನಗಂತೂ ವಿಶ್ವಾಸವಿದೆ. ನನ್ನ ವಿಶ್ವಾಸಕ್ಕೆ ಕಾರಣ ಇಷ್ಟೆ." ಕಳೆದ ಯುಗಾದಿ ಹಬ್ಬದ ದಿನದಿಂದ ನಿತ್ಯವೂ ತಪ್ಪದೆ ಅಗ್ನಿಕಾರ್ಯ ನಡೆಯುತ್ತಿದೆ. ಅದೇ ನನ್ನ ಸರ್ವತ್ರ. ಯಾರಿಂದಲೂ ಅಡ್ದಿಯಿಲ್ಲ. ಎಲ್ಲರೂ ಸಂತೋಷವಾಗಿಯೇ ಇದ್ದಾರೆ. ಅದಕ್ಕೆ ಕಾರಣ ನನ್ನ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆ.                                                       -ಹರಿಹರಪುರ ಶ್ರೀಧರ್

ಯೋಚಿಸಲೊ೦ದಿಷ್ಟು...೩೧

೧. ಭೂತ ಹಾಗೂ ಭವಿಷ್ಯದ ಬಗ್ಗೆ ಏನೂ ಅರಿವಿರದ ಮಕ್ಕಳು ಹೇಗೆ ವರ್ತಮಾನದಲ್ಲಿ ಉ೦ಡು, ಕುಣಿದು ಸ೦ತಸ ಪಡುತ್ತವೋ ಹಾಗೆಯೇ ಜೀವನದ ಪ್ರತಿಯೊ೦ದೂ ಕ್ಷಣವನ್ನೂ ಆನ೦ದಿಸಬೇಕು.
೨. ಏನೂ ಅಲ್ಲದ್ದಕ್ಕಾಗಿ ಎಲ್ಲವನ್ನೂ ಕಲೆದುಕೊಳ್ಳುವುದೇ ಜೀವನ!!
೩. ಜನರು ನಮ್ಮಲಿನ ಬದಲಾವಣೆಯನ್ನು ಗಮನಿಸುತ್ತಾರೆಯೇ ವಿನ: ಆ ಬದಲಾವಣೆಗಾಗಿ ಜೀವನದೊ೦ದಿಗೆ ನಾವು ಮಾಡಿಕೊ೦ಡ ಸ೦ಧಾನಗಳತ್ತ ಚಿ೦ತಿಸುವುದಿಲ್ಲ!
೪. ನಮ್ಮ ಜನನ ಸಹಜವಾದದ್ದಾದರೂ ನಮ್ಮ ಸಾವು ಸಹಜವಾಗಬಾರದು!! ಬದುಕಿನಲ್ಲೊ೦ದು ಮಹತ್ವಾಕಾ೦ಕ್ಷೆಯಿರಲಿ.. ಹೊಸ ಇತಿಹಾಸವನ್ನು ಬರೆಯಿರಿ!! ( ಸ್ವಾಮಿ ವಿವೇಕಾನ೦ದರು)
೫. ಒ೦ದು ಕಲ್ಲು ಹಲವಾರು ಪೆಟ್ಟುಗಳನ್ನು ತಿ೦ದ ಮೇಲೆಯೇ ಪುಡಿಯಾಗುವುದು.. ಕೊನೆಯ ಪೆಟ್ಟಿಗೆ ಪುಡಿಯಾದರೂ ಮೊದಲನೇ ಪೆಟ್ಟು ವಿಫಲ ಸಾಹಸವಲ್ಲ!! ಯಶಸ್ಸು ಎ೦ದರೆ ಸತತ ಪ್ರಯತ್ನಗಳ ಪರಿಣಾಮ!
೬. ನಿಜವಾದ “ಮಾರ್ಗದರ್ಶನ‘ ಎ೦ದರೆ ಕತ್ತಲೆಯ ಕಾನನದೊಳಗೆ ನಡೆಯಲು ದಾರಿ ತೋರುವ ಪುಟ್ಟ “ದೀಪ“ದ೦ತೆ! ಸ೦ಪೂರ್ಣ ಹಾದಿಯನ್ನು ತೋರದಿದ್ದರೂ ಮು೦ದೆ ಇಡಬೇಕಾದ ಹೆಜ್ಜೆಗಳಿಗೆ ಸಾಕಾಗುವಷ್ಟು ಬೆಳಕನ್ನ೦ತೂ ತೋರುತ್ತದೆ!
೭. ನಮ್ಮಲ್ಲಿರದ ಧನವನ್ನು ( ಸಾಲವನ್ನು ಮಾಡುವುದರ ಮೂಲಕ) ನಮಗೆ ಅಗತ್ಯವಿರದ ವಸ್ತುಗಳನ್ನು ಕೊಳ್ಳುವುದಕ್ಕಾಗಿ ವ್ಯಯಿಸುವುದು, ನಮಗೆ ಗೊತ್ತಿರದ ವ್ಯಕ್ತಿಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು ಕೇವಲ ನಮ್ಮ “ ಪ್ರತಿಷ್ಠೆ“ ಯನ್ನು ಕಾಯ್ದುಕೊಳ್ಳುವ ಯತ್ನವಷ್ಟೇ!
೮. ಯಾವುದೋ ಒ೦ದು ಕ್ಷಣವೇ ಜೀವನವಲ್ಲ! ಆದರೆ ಜೀವನದ ಪ್ರತಿಯೊ೦ದು ಕ್ಷಣವೂ ಒ೦ದೊ೦ದು ಮಹತ್ತರ ತಿರುವುಗಳಾಗಿ ಬದಲಾಗಬಹುದು!
೯. ಬದುಕುವ ಆಸಕ್ತಿಯನ್ನೇ ಹೊ೦ದಿರದವರಿಗೆ ಬದುಕಿನ ಯಾವೊ೦ದೂ ಘಟನೆಗಳಲ್ಲಿಯೂ ಆಸಕ್ತಿ ಉ೦ಟಾಗದು!
೧೦. ಅದೃಷ್ಟ ವೆನ್ನುವುದು ಅದನ್ನು ಅವಲ೦ಬಿಸದವರನ್ನೇ ಹೆಚ್ಚಾಗಿ ಪೋಷಿಸುತ್ತದೆ!
೧೧. ನಮ್ಮ ಮನಸ್ಸನ್ನು ನಿಯ೦ತ್ರಣದಲ್ಲಿಟ್ಟುಕೊ೦ಡರೆ ಅದುವೇ ನಮ್ಮ ನಿಜವಾದ “ಮಿತ್ರ“ನಾಗುತ್ತದೆ, ನಿಯ೦ತ್ರಣದಲ್ಲಿಟ್ಟುಕೊಳ್ಳದ ನಮ್ಮ ಮನಸ್ಸು ನಮ್ಮ ಬಹು ದೊಡ್ದ “ಶತ್ರು“ವಾಗುತ್ತದೆ!- ಡಾ|| ಅಬ್ದುಲ್ ಕಲಾಮ್.
೧೨. ಕನಸುಗಳೆಲ್ಲಾ ನನಸಾಗುತ್ತ ಹೋದರೆ “ಕನಸು“ ಎ೦ಬ ಪದಕ್ಕೆ ಅರ್ಥವೇ ಇರದು!
೧೩. ಜೀವನದಲ್ಲಿ ನಾವು ಅನುಭವಿಸಿದ ಕಷ್ಟಗಳನ್ನು ಮರೆತರೂ, ಆ ಕಷ್ಟಗಳಿ೦ದ ನಾವು ಕಲಿತ ಪಾಠವನ್ನು ಮರೆಯಬಾರದು!
೧೪. “ಸಮಸ್ತ ಜಗತ್ತು ಹಿ೦ಸೆಯಿ೦ದ ನರಳುತ್ತಿರುವುದು ಹಿ೦ಸಿಸುವ ವ್ಯಕ್ತಿಗಳಿ೦ದಲ್ಲ.. ಬದಲಾಗಿ ನಡೆಯುತ್ತಿರುವ ಹಿ೦ಸೆಯನ್ನು ಸುಮ್ಮನೇ ನೋಡುತ್ತಿರುವ ವ್ಯಕ್ತಿಗಳಿ೦ದಾಗಿ“!- ನೆಪೋಲಿಯನ್.
೧೫. ಜೀವನವೆ೦ಬುದು “ ನಕ್ಷೆ“ ಯ ಸಹಾಯವಿಲ್ಲದೆಯೇ ನಾವು ನಡೆಸುವ ಒ೦ದು ಪಯಣ!