Pages

Sunday, March 4, 2012

ದ್ವಿತೀಯ ವಾರ್ಷಿಕೋತ್ಸವ



ವೇದಸುಧೆ ಅಂತರ್ಜಾಲತಾಣ

ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಪ್ರವಚನ ಮಾಲೆ

ಸ್ಥಳ: ಈಶಾವಾಸ್ಯಮ್,
ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ

ದಿನಾಂಕ: 3.3.2011 ರಿಂದ 6.3.2011
ಪ್ರತಿದಿನ ಸಂಜೆ 6.30 ರಿಂದ 7.30

ಪ್ರವಚನಕಾರರು:
ವೇ.ಬ್ರ.ಶ್ರೀ. ಲಕ್ಶ್ಮೀಶ ಭಟ್ಟ,
ಆಚಾರ್ಯರು,ಶ್ರೀ ಜಯೇಂದ್ರ ಸರಸ್ವತಿ ವೇದ ಮಂಡಲಮ್,ಸರ್ಜಾಪುರ, ಬೆಂಗಳೂರು
ಮತ್ತು
ವೇ.ಬ್ರ.ಶ್ರೀ ಪ್ರದೀಪ ಶರ್ಮಾ , ಬೆಂಗಳೂರು

ವಿಷಯ:
ಮನುಷ್ಯನ ನಿತ್ಯ ನೆಮ್ಮದಿಯ ಜೀವನಕ್ಕೆ ಉತ್ಸಾಹ ತುಂಬುವ
ಸಂಧ್ಯೋಪಾಸನೆಯ  ಮಂತ್ರ-ಅರ್ಥ-ವಿವರಣೆ

ತಮಗೆ ಆದರದ ಸ್ವಾಗತ

       ಕವಿನಾಗರಾಜ್,                   ಹರಿಹರಪುರಶ್ರೀಧರ್
ಗೌರವ ಸಂಪಾದಕರು                   ಸಂಪಾದಕರು
ವೇದಸುಧೆ ಅಂತರ್ಜಾಲ ತಾಣ

ಸುಮನಸ



ಮನೋ ಹ್ಲಾದಯತೆ ಯಸ್ಮಾತ್ ಶ್ರಿಯಶ್ಚಾಪಿ ದದಾತಿ ಚ |

ತಸ್ಮಾತ್ ಸುಮನಸಃ ಪ್ರೋಕ್ತಾ ನರೈ : ಸುಕೃತ ಕರ್ಮಭಿ : ||



ನಮ್ಮ ಸುಕೃತ ಕರ್ಮಗಳಿಂದ ಯಾವುದು ನಮಗೆ ಆಹ್ಲಾದವನ್ನು ನೀಡುತ್ತದೆಯೋ

ಯಾವುದು ನಮಗೆ ಶ್ರೇಯಸ್ಸನ್ನು ಬಯಸುತ್ತದೆಯೋ ಅದೇ ಸುಮನಸ ಎಂದು

ಕರೆಯಲ್ಪಟ್ಟಿದೆ


-ಸದ್ಯೋಜಾತ ಭಟ್ಟ

ವೇದ ಧರ್ಮವು ಪರಮ ಅಹಿಂಸಾಧರ್ಮ

     ಹಾಸನದ ಸಮೀಪ ದೊಡ್ದಪುರದಲ್ಲಿ ಸಾಂಕೇತಿಕ ಅಶ್ವಮೇಧಯಾಗ ನಡೆಯುತ್ತಿದೆ. ಅಲ್ಲಿಗೆ ಬಂದಿರುವ ಕೆಲವು ವೇದ ವಿದ್ವಾಂಸರನ್ನು ಭೇಟಿಮಾಡಿ " ಯಜ್ಞದಲ್ಲಿ  ಪ್ರಾಣಿಬಲಿಯನ್ನು ವೇದವು ಸಮ್ಮತಿಸುತ್ತದೆಯೇ? ಎಂದು ಕೇಳಿದರೆ "ಕೆಲವು ಯಜ್ಞಗಳು ಪ್ರಾಣಿಬಲಿ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲವೆನ್ನುತ್ತಾರೆ" . ಅಲ್ಲದೆ ನಾವು ಉಪಯೋಗಿಸುವ  ಹಲವು  ಔಷಧಿಗಳು  ಪ್ರಾಣಿಯನ್ನು ಕೊಂದು ತಯಾರಾಗುತ್ತವೆ ಎನ್ನುವ ವಿಚಾರ ನಿಮಗೆ ಗೊತ್ತೇ? ಎನ್ನುವ ತರ್ಕ ಕೂಡ ವಿದ್ವಾಂಸರು ಮಾಡುತ್ತಾರೆ. ಅಲ್ಲದೆ  ಯಜ್ಞಗಳಿಗೆ ಆಹುತಿಯಾದ ಪ್ರಾಣಿಗಳು ಮೋಕ್ಷ ಪಡೆಯುತ್ತವೆ ಎನ್ನುವ ತರ್ಕ ಕೂಡ ಮಾಡುತ್ತಾರೆ.ಹೀಗೆ ಚರ್ಚೆ ಸಾಗಿದಾಗ ನನಗೆ ಸಮಾಧಾವಾಗುವ ವಿಚಾರಗಳು ಇಲ್ಲಿ ಸಿಗುವುದಿಲ್ಲವೆಂದು ಮನಗಂಡಾಗ ನಾನು ಪಂ.ಸುಧಾಕರಚತುರ್ವೆದಿಗಳ ವೇದೋಕ್ತ ಜೀವನಪಥದಲ್ಲಿ ಉಲ್ಲೇಖಿಸಿರುವ ಹಲವು ಮಂತ್ರಗಳನ್ನು ಅವರ ಗಮನಕ್ಕೆ ತಂದು  ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವ ವೇದದ ಆಧಾರವನ್ನು ನನಗೆ ಕೊಡಲು ಕೋರಿ ನನ್ನ ಚರ್ಚೆಯನ್ನು ಮುಗಿಸಿದ್ದಾಯ್ತು. ಅಂತೂ ಸಾಂಕೇತಿಕ ಅಶ್ವಮೇಧಯಾಗದಲ್ಲಿ  ಪ್ರಾಣಿಬಲಿ ಯಾಗದಿದ್ದರೂ ಸಾಂಕೇತಿಕವಾಗಿ ಒಂದು ಬೊಂಬೆಯನ್ನಾದರೂ ಬಲಿಕೊಡಬಹುದು.

ಪ್ರತ್ಯಕ್ಷ  ಬಲಿ ಕೊಟ್ಟರೇನು?  ಸಾಂಕೇತಿಕವಾದರೇನು?  ಒಟ್ಟಿನಲ್ಲಿ ಪ್ರಾಣಿಬಲಿಯನ್ನು ಪೋಷಿಸಿದನ್ತಾಯ್ತು. ವೈಜ್ಞಾನಿಕವಾಗಿ ಇಷ್ಟು ಮುಂದುವರೆದಿರುವ ಕಾಲದಲ್ಲೂ  ಇಂತಹಾ ಒಂದು ಅವಿವೇಕಿ ವಿಚಾರಕ್ಕೆ ಅಂಟಿಕೊಂಡಿರುವ ವೇದ ವಿದ್ವಾಂಸರನ್ನು  ನನ್ನಂತಹ ಸಾಮಾನ್ಯನು ಬದಲಾಯಿಸಲು ಸಾಧ್ಯವೇ? ನನ್ನ ಮೂರ್ಖ ಪ್ರಯತ್ನ ಬಿಟ್ಟು ನಾನು ಯಾವ ವಿಚಾರವನ್ನು ಅವರ ಗಮನಕ್ಕೆ ತಂದೇನೋ ಆ ಅಂಶಗಳನ್ನು ವೇದಸುಧೆಯ ಅಭಿಮಾನಿಗಳ ಗಮನಕ್ಕೂ ತರುವೆ. ಆಸಕ್ತಿ ಇದ್ದವರು ಚರ್ಚೆಮಾಡಬಹುದು. 
----------------------------------------------------------------
ಯಜ್ಞದಲ್ಲಿ ಪ್ರಾಣಿ  ಬಲಿಯುಂಟು ಎಂಬ ಮಾತನ್ನು ಕೇಳುವಾಗ ನನ್ನ ಮನದೊಳಗೆ 
ತಡೆಯಲಾರದ ಸಂಕಟ .  ಹಾಗಾದರೆ ನಿಜವಾಗಿ ವೇದಗಳಲ್ಲಿ ಹೇಳಿದೆಯೇ? 
ಎಂದು  ಚಿಂತಿಸುವಾಗ ವೇದ ಗ್ರಂಥಗಳಲ್ಲಿ  ಪರಿಹಾರವನ್ನು ಹುಡುಕ ಬೇಕೆಂಬ 
ಕಾತುರತೆ. ಆದರೆ  ನನಗೆ ವೇದಜ್ಞಾನ ಇಲ್ಲವಲ್ಲ.  ನನ್ನಂತವರಿಗೆ ವೇದವು ಅರ್ಥ ವಾಗುತ್ತದೆಯೇ?  ಎಂದು ಯೋಚಿಸುವಾಗ ಕಣ್ಮುಂದೆ ಬಂದಿದ್ದು " ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ ಗ್ರಂಥ " ಈ ಪುಸ್ತಕದಲ್ಲಿ ಅಲ್ಲಲ್ಲಿ  ವೇದ ಮಂತ್ರಗಳಿಗೆ ಆಧಾರ ನೀಡಲಾಗಿದೆ. ಅದೇ ನನ್ನಂತಹ  ಸಾಮಾನ್ಯರಿಗೆ ಸುಲಭವಾಗಿ ನಿಲುಕುವ  ಗ್ರಂಥ.  

ನನ್ನ ಕಣ್ಮುಂದೆ  ಎರಡೇ ದಾರಿ.  ಒಂದು ವೇದೋಕ್ತ ಜೀವನ ಪಥದಲ್ಲಿ ಹೇಳಿರು  ವಂತೆ  ಯಜ್ಞದಲ್ಲಿ ಪ್ರಾಣಿಬಲಿ ಹೇಳಿಲ್ಲವೆಂಬ ವಿಚಾರವು   ಸತ್ಯವಾಗಿರ ಬೇಕು. ಅಥವಾ ಯಜ್ಞದಲ್ಲಿ ಪ್ರಾಣಿಬಲಿಗೆ ಅವಕಾಶವಿದೆ, ಕುದುರೆಯನ್ನು ವಧೆ ಮಾಡದೆ 
ಅಶ್ವಮೇಧಯಾಗವು ಪೂರ್ಣವಾಗುವುದಿಲ್ಲವೆಂಬ  ವಿಚಾರವು ಸತ್ಯವಾಗಿರಬೇಕು. 
ಸತ್ಯವು ಎರಡಾಗಿರಲು ಸಾಧ್ಯವಿಲ್ಲ. ಸತ್ಯ ಎಂಬುದು ಒಂದೆ. ನನಗೊಂದು ಸತ್ಯ ,
ಬೇರೊಬ್ಬರಿಗೊಂದು ಸತ್ಯ ಇರಲು ಸಾಧ್ಯವಿಲ್ಲ. ನಿಜವಾಗಿ ಯಾವುದು 
ಸತ್ಯವೆಂಬುದು ತಿಳಿಯ ಬೇಕಲ್ಲವೇ? 
ಈಗ ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ ಗ್ರಂಥದ ಆಧಾರದಲ್ಲಿ ಕೆಲವು ವಿಚಾರಗಳನ್ನು ಪರಿಶೀಲಿಸೋಣ.

ಪಂ.ಸುಧಾಕರ ಚತುರ್ವೆದಿಗಳು ಬರೆದಿರುವ  ವೇದೋಕ್ತ ಜೀವನ ಪಥ
ಪುಟ ಸಂಖ್ಯೆ: 55
------------------------------------------------------

ಆಧಾರ: ಋಗ್ವೇದ [7.103.8]

ಬ್ರಾಹ್ಮಣಾಸ:   ಸೋಮಿನೋ ವಾಚಮಕ್ರತ ಬ್ರಹ್ಮ  ಕೃಣ್ವ೦ತ:  ಪರಿವತ್ಸರೀಣಂ|
ಅಧ್ವರ್ಯವೋ  ಘರ್ಮಿಣ: ಸಿಷ್ವಿದಾನಾ  ಆವಿರ್ಭವ೦ತಿ  ಗುಹ್ಯಾ ನ ಕೆ ಚಿತ್ ||

ಸೋಮಿನ: = ಬ್ರಹ್ಮಾನಂದದ ಸವಿಯನ್ನು ಕಾಣುವವರು 
ಅಧ್ವರ್ಯವ: =  ಅಹಿಂಸಕರೂ
ಘರ್ಮಿಣ:= ತಪಸ್ವಿಗಳೂ
ಸಿಷ್ವಿದಾನಾ := ಪರಿಶ್ರಮದಿಂದ ಬೆವರುವವರೂ
ಬ್ರಾಹ್ಮಣಾಸ:=  ಬ್ರಾಹ್ಮಣರು 

ಪರಿವತ್ಸರೀಣಂ  ಬ್ರಹ್ಮಮ್   ಕೃಣ್ವ೦ತ: = ಸಮಸ್ತ ವಿಶ್ವದಲ್ಲಿಯೂ ವೇದ ಜ್ಞಾನವನ್ನು  ಪಸರಿಸುತ್ತಾ 

ಕೇ   ಚಿತ್ ಗುಹ್ಯಾ:  ನ =ಕೆಲವರು ಗುಪ್ತವಾಗಿದ್ದವರಂತೆ

ಆವಿರ್ಭವಂತಿ= ಬೆಳಕಿಗೆ ಬರುತ್ತಾರೆ.

ಭಗವದುಪಾಸನೆಯಿಂದ  ಆನಂದ ಪ್ರಾಪ್ತಿ , ಅಹಿಂಸಾ ತತ್ವ, ತಪಸ್ಸು ಮತ್ತು ಆಧ್ಯಾತ್ಮಿಕ ಸಾಧನೆಗಳು ,ಕಷ್ಟ ಸಹಿಷ್ಣುತೆ -ಇವು ಬ್ರಾಹ್ಮಣರ ಲಕ್ಷಣಗಳು. ಅಂದಮೇಲೆ  ಒಬ್ಬ ಬ್ರಾಹ್ಮಣ ಪುರೋಹಿತರು ಪ್ರಾಣಿ ಬಲಿಯನ್ನು  ಪ್ರೋತ್ಸಾಹಿಸುವುದು ಸರಿಯೇ? 
----------------------------------------------------
ವೇದ ಧರ್ಮವು ಪರಮ ಅಹಿಂಸಾಧರ್ಮ:

ವೇದದಲ್ಲಿ ಅಹಿಂಸಾ ಪ್ರತಿಪಾದನೆಯನ್ನು ಇನ್ನು ಮುಂದೆ ನೋಡೋಣ.

ಆಧಾರ: ಋಗ್ವೇದ [1.1.4]

ಅಗ್ನೇ  ಯಂ  ಯಜ್ಞಮಧ್ವರಂ ವಿಶ್ವತ: ಪರಿಭೂರಸಿ |
ಸ ಇದ್      ದೇವೇಷು ಗಚ್ಚತಿ| 

ಅಗ್ನೇ= ಓ ಜ್ಯೋತಿರ್ಮಯ 
ಯಂ ಅಧ್ವರಂ ಯಜ್ಞಮ್ = ಯಾವ ಹಿಮ್ಸಾರಹಿತವಾದ ಯಜ್ಞವನ್ನು 
ತ್ವಂ ವಿಶ್ವತ: ಪರಿಭೂರಸಿ= ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತೀಯೋ
ಸ ಇತ್ = ಅದೇ 
ದೇವೇಷು ಗಚ್ಚತಿ = ದಿವ್ಯತತ್ವಗಳನ್ನು  ಸೇರುತ್ತದೆ. [ ನನ್ನ ಮಾತು:   ಭಗವಂತನನ್ನು  ಸೇರುತ್ತದೆ] 
----------------------------------------
ಆಧಾರ: ಯಜುರ್ವೇದ [1.1]

ಯಜಮಾನಸ್ಯ  ಪಶೂನ್ ಪಾಹಿ =ಯಜ್ಞ ಕರ್ತನ ಪಶುಗಳನ್ನು ಪಾಲಿಸು 
----------------------------------------
ಆಧಾರ: ಯಜುರ್ವೇದ [13.41]

ಅಶ್ವಂ ಮಾ ಹಿಂಸೀ = ಕುದುರೆಯನ್ನು ಹಿಂಸಿಸಬೇಡ 
----------------------------------------------
ಆಧಾರ: ಯಜುರ್ವೇದ [13.43]

ಗಾಂ  ಮಾ ಹಿಂಸೀ = ಹಸುವನ್ನು ಹಿಂಸಿಸಬೇಡ 
-----------------------------------------------
ಆಧಾರ: ಯಜುರ್ವೇದ [13.44]

ಅವಿಂ  ಮಾ ಹಿಂಸೀ = ಮೇಕೆಯನ್ನು  ಹಿಂಸಿಸಬೇಡ 
-------------------------------------------
ಆಧಾರ: ಯಜುರ್ವೇದ [13.47]

ಇಮಂ ಮಾ ಹಿಂಸೀದ್ವಿರ್ ಪಾದಂ  ಪಶುಮ್ = 
ದ್ವಿಪಾದ ಪಶುವನ್ನು ಹಿಂಸಿಸಬೇಡ 
------------------------------------------

ಆಧಾರ: ಅಥರ್ವ ವೇದ  [10.1.29]

ಅನಾಗೋ  ಹತ್ಯಾ  ವೈ ಭೀಮಾ = ನಿಷ್ಪಾಪವಾದ ಪ್ರಾಣಿಯನ್ನು  ಕೊಲ್ಲುವುದು 
ಭಯಂಕರ ಪಾಪ 
-----------------------------------------------
ಆಧಾರ: ಅಥರ್ವ  ವೇದ  [8.2.25]

ಸರ್ವೋವೈ ತತ್ರ ಜೀವತಿ 
ಗೌರಶ್ವ: ಪುರುಷ: ಪಶು:|
ಯತ್ರೆದಂ ಬ್ರಹ್ಮ ಕ್ರಿಯತೇ
ಪರಿಧಿರ್ಜೀವನಾಯ ಕಮ್||

ಯತ್ರ = ಎಲ್ಲಿ
ಇದಂ ಬ್ರಹ್ಮ = ಈ ವೇದವು
ಕಮ್ = ಒಳಿತಾಗಿ
ಜೀವನಾಯ = ಜೀವನಕ್ಕೆ 
ಪರಿಧಿ: ಕ್ರಿಯತೇ = ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ 
ಗೌ: = ಹಸುವು
ಅಶ್ವ: =  ಕುದುರೆ
ಪುರುಷ: = ಮಾನವನು 
ಪಶು: = ಇತರ ಮೃಗಗಳು 
ಸರ್ವ: = ಎಲ್ಲವೂ
ವೈ = ನಿಜವಾಗಿ
ಜೀವತಿ = ಬದುಕುತ್ತವೆ.

 ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ  ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ "ಆವರಣ" ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು.                       " ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ" ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ" . ಎಷ್ಟು ವಿಶಾಲವಾದ ಅರ್ಥವಿದೆ! 

ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ? 

ಅಲ್ಲದೆ  ಒಂದು ಪದವನ್ನು ಸಮಯಕ್ಕೆ ತಕ್ಕಂತೆ ಅರ್ಥೈಸುತ್ತಾರಾದರೂ  ವಿಶ್ವದ ಒಳಿತಿಗಾಗಿಯೇ ಇರುವ ವೇದವನ್ನು ನಾವು ಹೀಗೆಯೇ ಅರ್ಥೈಸಬೇಕಲ್ಲವೇ? 

ವೇದದಲ್ಲಿ  ಈ ಮೇಲಿನ  ಅಂಶಗಳೆಲ್ಲಾ  ಇರುವುದನ್ನು ಆಧಾರ ಸಮೇತ  ಪಂ. ಸುಧಾಕರ ಚತುರ್ವೆದಿಗಳು  ಉಲ್ಲೇಖಿಸಿರುವುದರಿಂದ  ಮೂಲ ವೇದದಲ್ಲಿ  ಹಿಂಸೆ ಯನ್ನು ಪ್ರೋತ್ಸಾಹಿಸುವ  ಅಂಶಗಳು  ಕಾಣ ಬರುವುದಿಲ್ಲ ವೆಂಬ  ವಿಚಾರವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಈಗ  ಹೇಳಿ  ಈ ಆಧಾರಗಳು ಸುಳ್ಳೇ? 
ಸುಳ್ಳಾಗಿದ್ದರೆ ಸತ್ಯ ಯಾವುದು? 

ಕೊನೆಯ ಮಾತು:

ಮೂಲವೇದ ಗ್ರಂಥವು ಯಾವುದು? ಎನ್ನುವ ವಿಚಾರದಲ್ಲೂ ಗೊಂದಲಗಳು ಇರಬಹುದು. ಆದರೆ  ಇಡೀ ಪ್ರಪಂಚದ ನೆಮ್ಮದಿಗೆ "ಅಹಿಂಸಾ ಮಾರ್ಗವು  ಇಂದಿನ ಅತೀ ಅಗತ್ಯವಾದ  ವಿಚಾರವಾಗಿದ್ದು,  ಮನುಕುಲಕ್ಕೆ ಬೆಳಕಾಗಿರುವ ವೇದದ ಕಡೆ  ಇಡೀ ವಿಶ್ವವು  ನೋಡುತ್ತಿರುವ ಸಂದರ್ಭದಲ್ಲಿ  ಯಜ್ಞ ದಲ್ಲಿ ಪ್ರಾಣಿಬಲಿಯನ್ನು ಪ್ರೋತ್ಸಾಹಿಸುವುದು ತರವಲ್ಲವೆನ್ಬುದು ನನ್ನ ಸ್ಪಷ್ಟ ನಿಲುವು.