Pages

Wednesday, August 1, 2012

ನಿಜದ ಹಾದಿಯಲ್ಲಿ ಸಾಗೋಣ

ವೇದಸುಧೆಯ ಆತ್ಮೀಯ ಬಂಧುಗಳೇ,

           ನಮ್ಮ  ಆಚರಣೆಗಳ ಬಗ್ಗೆ ಆಳವಾಗಿ ಚಿಂತನೆ ನಡೆಸಿದಾಗ ರೂಢಿಯಲ್ಲಿರುವ ನಮ್ಮ  ಹಲವು ಆಚರಣೆಗಳಿಗೆ ಅರ್ಥವಿಲ್ಲದಿರುವುದು ಮನವರಿಕೆ ಯಾಗುತ್ತದೆ. ಆದರೂ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆಗಳನ್ನು  ಬಿಡಲು  ಬಲು ಕಷ್ಟ.   ಈ ಸ್ಥಿತಿಯಲ್ಲಿ ನನ್ನನ್ನೂ ಸೇರಿದಂತೆ ಹಲವರು ತೊಳಲಾಡುತ್ತಿರುವುದು ಸುಳ್ಳಲ್ಲ. . ಹಲವರೊಡನೆ ಮಾತುಕತೆನಡೆಸಿದಾಗ ನನಗೆ  ಈ ಸಂಗತಿ ಮನವರಿಕೆಯಾಗಿದೆ.ಇರಲಿ. ಕೆಲವರು ಸತ್ಯದ ಮಾರ್ಗದಲ್ಲಿ ಚಿಂತನಾಶೀಲರಾಗಿರುವುದು ಒಳ್ಳೆಯ ಲಕ್ಷಣ ವಂತೂ ಹೌದು. ನಿಜವ ತಿಳಿಯುವ ಹಾದಿಯಲ್ಲಿ  ಪಂಡಿತ್  ಶ್ರೀ ಸುಧಾಕರ ಚತುರ್ವೇದಿಯವರು ಮತ್ತು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಹಾಗೂ ಇನ್ನೂ  ಕೆಲವರು   ಬೆರೆಳೆಣಿಕೆಯಲ್ಲಿ ನಮಗೆ ಕಾಣುತ್ತಾರೆ.ಒಮ್ಮೊಮ್ಮೆ  ಸತ್ಯವನ್ನು  ಕೇಳುವಾಗ ನಮಗೆ ಬಲು ಮುಜುಗರವಾಗುತ್ತದೆ. ಕಾರಣ    ನಾವು ಹಲವು ವರ್ಷಗಳಿಂದ ಕೆಲವು ಆಚರಣೆಗಳಿಗೆ ಅಂಟಿಕೊಂಡಿದ್ದೇವೆ. ಅದು ತಪ್ಪೆಂದು ನಾನು ಭಾವಿಸುವುದಿಲ್ಲ. ನಮ್ಮ ಹಿರಿಯರು ಆಚರಣೆಯಲ್ಲಿ ತಂದದ್ದನ್ನು ನಾವು ಆಚರಿಸಿಕೊಂಡು    ಬಂದಿದ್ದೇವೆ. ಅದರಿಂದಾಗಿ ನೂರಾರು ವರ್ಷಗಳ ಅನ್ಯ ಮತೀಯರ ದಾಳಿಯಾದರೂ   ನಮ್ಮ ಸಂಸ್ಕೃತಿ-ಪರಂಪರೆಗಳು  ಸಾವಿರಾರು ವರ್ಷಗಳಿಂದ  ಗಟ್ಟಿಯಾಗಿಯೇ ನಿಂತಿವೆ.ನಮ್ಮದು ವೇದ ಉದಿಸಿದ ನಾಡು. ವೇದವನ್ನು ಎಲ್ಲರೂ ಒಪ್ಪುವವರೇ. ಆದರೆ ವೇದವನ್ನು ಕೇವಲ ಮಂತ್ರಗಳ ರೂಪದಲ್ಲಿ ಕೇಳಿ ಅನಂದಿಸುವ ನಾವು ಅದರ ಅರ್ಥವನ್ನು ತಿಳಿಯುವ  ಸರಿಯಾದ ಪ್ರಯತ್ನ ಮಾಡುವಲ್ಲಿ ಸೋತಿದ್ದೇವೆ. ಹಾಗಾಗಿ ನಮಗೆ ವೇದದ ಬಗ್ಗೆ ಒಲವಿದ್ದರೂ ಅರ್ಥವನ್ನು ಸರಿಯಾಗಿ ಅರಿಯದ ಕಾರಣ ವೇದಬಾಹಿರವಾದ ಹಲವು ಆಚರಣೆಗಳನ್ನು ನಾವು ಮುಂದುವರೆಸಿಕೊಂಡೇ ಬಂದಿದ್ದೇವೆ. ವಿವಾಹ,ಉಪನಯನ ಮುಂತಾದ ಸಂಸ್ಕಾರ ನೀಡುವ ಸಂದರ್ಭದಲ್ಲೂ  ಅನಗತ್ಯವಾದ, ಅರ್ಥವಿಲ್ಲದ ಹಲವು ಆಚರಣೆಗಳನ್ನು ರೂಢಿಮಾಡಿಕೊಂಡು  ಮುಂದುವರೆಸಿಕೊಂಡು ಬಂದಿದ್ದೇವೆ. ಅದರಲ್ಲಿ ಇತ್ತೀಚಿನ ಆಚರಣೆ ಗಳೆಂದರೆ "ವೀಡಿಯೋ ತೆಗೆಯುವುದು" . ಎಷ್ಟರಮಟ್ಟಿಗೆ  ಇದು ದುಷ್ಪರಿಣಾಮ ಬೀರುತ್ತಿದೆ ಎಂದರೆ ಎಲ್ಲಾ ಕಾರ್ಯಕ್ರಮಗಳೂ  ವೀಡಿಯೋಗಾಗಿಯೇ ನಡೆಯುತ್ತವೆ. ವೀಡಿಯೋದಲ್ಲಿ ಚೆನ್ನಾಗಿ ಕಾಣಬೇಕೆಂಬ ಕಾರಣ ಕ್ಕಾಗಿಯೇ ಮದುವೆಯ ದಿನ   ಪಾರ್ಲರ್ ಗಳಿಗೆ ಹೋಗಿ ವಿವಾಹ ಮಂಟಪದಲ್ಲಿ ಕೂರಬೇಕಾದ ವಧು ಅಲಂಕಾರ ಮಾಡಿಕೊಂಡು ಬರುತ್ತಾಳೆ. ಅವಳ ತಲೆಕೂದಲನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಮುಖಕ್ಕೆಲ್ಲಾ ಬಣ್ಣ    ಬಳಿಸಿಕೊಂಡು, ತಲೆಗೂದಲನ್ನು ಡೈ ಮಾಡಿಕೊಂಡು ತಾನು ಚೆನ್ನಾಗಿಕಾಣುತ್ತಾಳೆಂದು ಕೊಳ್ಳುತ್ತಾಳೆ. ಮದುವೆಮನೆಯಲ್ಲಿ  ಪುರೋಹಿತರು ಮಾಡಿಸುವ ಶಾಸ್ತ್ರ ಮುಗಿದರೆ ಸಾಕು, ವೀಡಿಯೋ ಚಿತ್ರೀಕರಣಕ್ಕಾಗಿ ಎಲ್ಲರೂ    ಹಾತೊರೆಯುತ್ತಿರುತ್ತಾರೆ. ಇದು ಈಗ ನಡೆಯುತ್ತಿದೆ. ಮುಂದೆ ಇದೇ ಒಂದು ಆಚರಣೆಯಾಗಿ ಉಳಿಯುವುದಿಲ್ಲವೇ? 
ನಮ್ಮ ಹಿಂದಿನವರು ಮನುಷ್ಯನ ಉತ್ತಮ ಆರೋಗ್ಯಕರ ಬದುಕಿಗಾಗಿ ರಚಿಸಿದ ಶೋಡಷ ಕರ್ಮಗಳು ಅವುಗಳ ಅರ್ಥವನ್ನು ಕಳೆದುಕೊಳ್ಳುತ್ತಿಲ್ಲವೇ? ಒಮ್ಮೆ ನಾವು ನಮ್ಮ ಸಧ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ  ನಮ್ಮ ಕೌಟುಂಬಿಕ ನೆಮ್ಮದಿಯಬಗ್ಗೆ  ಆತ್ಮಾವಲೋಕನ ಮಾಡಿಕೊಳ್ಲ ಬೇಡವೇ? 
         ನಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆಯೇ? ಇದ್ದರೆ ಸಂತೋಷ. ನಾವು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇವೆಂದೇ ಅರ್ಥ. ನೆಮ್ಮದಿ ಎಂಬುದು  ನಿಜವಾದ ಅರ್ಥ ಉಳ್ಳದ್ದಾಗಿರಲೂ ಬೇಕು. ಒಂದು ವೇಳೆ ನೆಮ್ಮದಿ ಕಮ್ಮಿಯಾಗಿದ್ದರೆ ಆಗ ನಮಗೆ ಪ್ರಶ್ನೆ ಹಾಕಿಕೊಳ್ಳೋಣ. ನಮ್ಮ ನೆಮ್ಮದಿಯನ್ನು ಹಾಳು ಮಾಡಿದ ಸಂಗತಿಗಳು ಯಾವುವು? ನಮ್ಮ ಜೀವನ ಕ್ರಮ ಸರಿಯಾಗಿದೆಯೇ? ನಮ್ಮ ನಿತ್ಯ ಕರ್ಮಗಳು, ನಮ್ಮ ದೈನಂದಿನ ಜೀವನ ಕ್ರಮವು ನಮ್ಮ ಆರೋಗ್ಯ ಪೂರ್ಣ   ಬದುಕಿಗೆ  ಪೂರಕವಾಗಿದೆಯೇ?
ಯಾಕೆ ಇಷ್ಟೆಲ್ಲಾ ಹೇಳುತ್ತಿದ್ದೀನೆಂದರೆ  ವೇದದಲ್ಲಿ ಇರುವುದೇ ನೆಮ್ಮದಿಯ   ಜೀವನ ನಡೆಸುವ ಕಲೆ. ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಂತವರು ಸಾಕಷ್ಟು ಅಧ್ಯಯನ ಮಾಡಿ  ವೇದ ಮಂತ್ರಗಳ ಅರ್ಥವನ್ನು ನಮಗೆ ಸರಳ ವಾದ ರೀತಿಯಲ್ಲಿ ತಿಳಿಸುತ್ತಿದ್ದಾರೆ. ಅವರ ವಿಚಾರಗಳಿಗೆ ವೇದಸುಧೆಯು ಬಹಳ ಪ್ರಾಮುಖ್ಯತೆ ಕೊಟ್ಟಿದೆ. ಕಳೆದ ಒಂದು ವರ್ಷದಿಂದ ಅನಾರೋಗ್ಯ ದಿಂದ ನೆರಳಿ ಈಗ ಚೇತರಿಸಿಕೊಂಡು ವೇದಸುಧೆಯ ಓದುಗರಿಗಾಗಿ ಒಂದಿಷ್ಟು ವಿಚಾರಗನ್ನು ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ "ಶರ್ಮರ ಪುಟ" ದಲ್ಲಿ  ಸಾಕಷ್ಟು  ವೇದಮಂತ್ರಗಳ    ಅರ್ಥವಿವರಣೆಯ ಆಡಿಯೋ ಗಳು ಪ್ರಕಟವಾಗಿವೆ. ಅವೆಲ್ಲವೂ ನಮ್ಮ ಜೀವನಕ್ಕೆ ಉಪಯುಕ್ತವೇ ಆಗಿದೆ. ಇಷ್ಟಾದರೂ ಒಂದು ವಿಚಾರವನ್ನು            ಸ್ಪಷ್ಟ ಪಡಿಸಲು ಇಚ್ಛಿಸುತ್ತೇನೆ. ಶರ್ಮರು ಕೆಲವು ನಿಷ್ಟುರ ಮಾತುಗ ನ್ನಾಡುತ್ತಾರೆ. ಅವುಗಳನ್ನು ವೇದಮಂತ್ರದ ಆಧಾರದಿಂದ ಸಮರ್ಥಿಸುತ್ತಾರೆ. ಆದರೆ ಅವರ  ಯಾವುದೇ ವಿಚಾರಗಳು ವೇದಬಾಹಿರವಾಗಿದೆ, ಎಂದು ಯಾವುದೇ ವೇದ ಪಂಡಿತರು ಭಾವಿಸಿದರೆ, ದಯಮಾಡಿ ಅವರು ಆಧಾರಸಹಿತವಾಗಿ ವೇದಸುಧೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ವಿನಂತಿಸುತ್ತೇನೆ. ಅದಕ್ಕಾಗಿ ಅವರು ವೇದಸುಧೆಗೆ  ಒಂದು ಮೇಲ್ ಕಳಿಸಿದರೂ ಕೂಡ ಅದನ್ನು ಪ್ರಕಟಿಸಲು ವೇದಸುಧೆಯು ಬದ್ಧವಾಗಿದೆ. ಪೂರ್ವಾಗ್ರಹವನ್ನು ಬಿಟ್ಟು ನಿಜದ ಹಾದಿಯಲ್ಲಿ ಸಾಗೋಣವೆಂದು ವೇದಸುಧೆಯು ಬಯಸುತ್ತದೆ.

ಸುಕ್ಷೇತ್ರೇ ವಾಪಯೇದ್ ಬೀಜಂ

ಸುಕ್ಷೇತ್ರೇ  ವಾಪಯೇದ್ ಬೀಜಂ ಸುಪುತ್ರೇ ದಾಪಯೇದ್ ಧನಂ |
ಸುಕ್ಷೇತ್ರೆ ಚ ಸುಪುತ್ರೇಚ ಯತ್ ಕ್ಷಿಪ್ತಂ ನೈವ ನಶ್ಯತಿ ||


ಫಲವತ್ತಾದ ನೆಲದಲ್ಲಿ ಬೀಜವನ್ನು ಬಿತ್ತಬೇಕು, ಗುಣಶಾಲಿಯಾದ ಮಗನಿಗೆ ಹಣವನ್ನು ನೀಡಬೇಕು . ಒಳ್ಳೆಯ ನೆಲದಲ್ಲಿ ಮತ್ತು ಗುಣವಂತನಾದ ಮಗನಲ್ಲಿ ಇಟ್ಟದ್ದು, ಕೊಟ್ಟದ್ದು ಎಂದಿಗೂ ಸಹ ಹಾಳಾಗುವುದಿಲ್ಲ. ಕೊಡುವಾಗ ಮತ್ತು ತೆಗೆದು ಕೊಳ್ಳುವಾಗಲೂ    ಪಾತ್ರಾಪಾತ್ರ ವಿವೇಚನೆ ಯಿಂದಲೇ ಕೊಡಬೇಕು - ಶುಭೋದಯ