Pages

Monday, March 31, 2014

ನಿಮ್ಮ ಪ್ರಶ್ಮೆಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉತ್ತರ

ವೇದಧ್ಯಾಯಿ ಶ್ರೀಸುಧಾಕರ ಶರ್ಮ ರವರಿಗೆ ವಂದನೆಗಳು.
ತಮ್ಮ ವೇದೋಕ್ತವಾದ ನುಡಿಗಳಿಂದ ನಮ್ಮೆಲ್ಲರಿಗೂ ವೇದತತ್ವಗಳನ್ನ ಬೋಧಿಸುತ್ತಿದ್ದೀರಿ.  ಅದಕ್ಕಾಗಿ ಅಭಿನಂದನೆಗಳು-ಧನ್ಯವಾದಗಳು.   ಹಾಗುಬ್ಲಾಗ್.ವೇದಸುಧೆ ಗೌರವ ಸಂಪಾದಕರು: ಶ್ರೀ ಕವಿ ನಾಗರಾಜ್|ನಿರ್ವಾಹಕ ಸಂಪಾದಕರು:ಶ್ರೀ ಪ್ರಸನ್ನ.ಎಸ್.ಪಿ|ಸಂಪಾದಕರು:ಹರಿಹರಪುರಶ್ರೀಧರ್ ಇವರಿಗೂ
ಅಭಿನಂದನೆಗಳು-ಧನ್ಯವಾದಗಳು.
ಮಹರ್ಷಿ ದಯಾನಂದ ಸರಸ್ವತಿ ಯವರ ಜೀವನಕಥೆಯನ್ನು ಮತ್ತು ಅವರು ರಚಿಸಿದ  "ಸತ್ಯಾರ್ಥಪ್ರಕಾಶ"ಗ್ರಂಥವನ್ನು ಓದಿದ್ದೇನೆ.   ವೇದಸುಧೆ / ಚಂದನ ಟಿವಿ / ಶಂಕರ ಟಿವಿಮೂಲಕ ಹಲವು ವರ್ಷಗಳಿಂದ ನಿಮ್ಮ ಪ್ರವಚನಗಳನ್ನು ಆಲಿಸಿದ್ದೇನೆ.  ನನ್ನ ಎಲ್ಲಾ ತಳಮಳಗಳಿಗೂ ನಿಮ್ಮ ವೇದೋಕ್ತವಾದ ನುಡಿಗಳಿಂದ ಪರಿಹಾರ ಸಿಕ್ಕಿದೆ.
 
ಆದರೂ ಎರಡು ಪ್ರಶ್ನೆಗಳನ್ನು ಈ ಮೂಲಕ ಕೇಳುತ್ತಿದ್ದೇನೆ. ದಯವಿಟ್ಟು ಉತ್ತರಿಸಿ.
1.   ನಮ್ಮ ಮನೆ ಗುಡ್ಡಗಾಡು ಸ್ಥಳದಲ್ಲಿರುವುದರಿಂದ ವಿಷಜಂತುಗಳು ಸಾಮಾನ್ಯವಾಗಿ ಬರುತ್ತಿರುತ್ತವೆ.  ನಾಗರಹಾವನ್ನು ಬಿಟ್ಟು ಬೇರೆ ವಿಷವುಳ್ಳ ಹಾವುಗಳನ್ನು ನಮ್ಮ ಊರಿನಲ್ಲಿ ಕೊಲ್ಲುವ ಕ್ರಿಯೆ ನಡೆಯುತ್ತದೆ.  ಭಗವಂತನ ಈ ಅದ್ಭುತ ಸೃಷ್ಟಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿಲ್ಲವೇ? ಎಂದನಿಸುತ್ತಿದೆ.  ತಮ್ಮ ಅಭಿಪ್ರಾಯವೇನು?
2.   ಹೆಣ್ಣು ಮಕ್ಕಳ ತಲೆಗೂದಲು ಬಾಚುವಾಗ, ಹೇನುಗಳು ಸಿಗುತ್ತವೆ ಸಹಜ.  ಸಾಮಾನ್ಯವಾಗಿ ಸಿಕ್ಕಿದ ಹೇನುಗಳನ್ನು ಕೊಲ್ಲುವ ಪದ್ದತ್ತಿಯನ್ನು ರೂಢಿಸಿಕೊಂಡಿದ್ದೇವೆ. ಇದು ಸರಿಯೇ?
ದಯವಿಟ್ಟು ಉತ್ತರಿಸುವಿರಾ?
ಧನ್ಯವಾದಗಳೊಂದಿಗೆ,
ಸುರೇಂದ್ರ ಶೆಟ್ಟಿಗಾರ್

ಕೋಟ್ನಾಕಟ್ಟೆ, ಹಿರಿಯಡಕ, ಉಡುಪಿ.   Mobile: 9483931868

ಶ್ರೀಯುತ ಸುರೇಂದ್ರರೇ!
ನಿಮ್ಮ ಜಿಜ್ಞಾಸೆ ಸಾಧುವಾಗಿದೆ.
ಜೀವಕೊಡಲು ಸಾಧ್ಯವಿಲ್ಲದ ಮೇಲೆ ಜೀವ ತೆಗೆಯಲೂ ಹಕ್ಕಿಲ್ಲ.
ಸಕಲ ಜೀವರಾಶಿಗಳೊಡನೆ ಮೈತ್ರಿಯಿಂದ ಬಾಳಬೇಕೆಂಬುದೇ ಮಾನವೀಯತೆ.ದುಷ್ಟಜಂತುಗಳೊಂದಿಗೆ ಅಲಿಖಿತ  ಒಪ್ಪಂದ ಮಾಡಿಕೊಂಡು, ಗಡುಗಳನ್ನು ಗುರುತಿಸಿಕೊಂಡು ಬಾಳಬಹುದು.  ಕಾಡಿನಲ್ಲಿ ಈ ನಿಯಮವನ್ನು ಪ್ರಾಣಿಗಳು ಪಾಲಿಸುತ್ತವೆ.  ಮನುಷ್ಯನು ಕಾಡನ್ನು ಆಕ್ರಮಿಸಿದಾಗ, ಕಾಡುಪ್ರಾಣಿಗಳು - ಆನೆ ಇತ್ಯಾದಿ - ನಾಡಿಗೆ ನುಗ್ಗುವುದು ಅನಿವಾರ್ಯವಾಗುತ್ತದೆ.  ನಮ್ಮ  ಇರುವಿಕೆಗೆ, ಓಡಾಟಕ್ಕೆ ಸ್ಪಷ್ಟವಾದ ಸ್ಥಳಗಳನ್ನು ಗುರುತಿಸಿಕೊಂಡು, ಅದನ್ನು ದಾಟದೆ ಪಾಲಿಸಿದರೆ ಇತರ ಪ್ರಾಣಿಗಳೊಡನೆ - ಅವು ಕ್ರೂರ, ವಿಷಜಂತುಗಳಾದರೂ ಸಹಿತ - ಬದುಕುವುದು ಸಾಧ್ಯವಾಗುತ್ತದೆ.
ಕೂದಲಿನ ಸ್ವಚ್ಛತೆ ಕಾಪಾಡಿಕೊಂಡಾಗ ಹೇನು ಬರುವ ಸಾಧ್ಯತೆಯೇ ಕಡಿಮೆ.  ಹಾಗೂ ಬಂದರೆ ಅವನ್ನು ತೆಗೆದುಹಾಕುವುದೇ ಸರಿಯೇ ಹೊರತು ಸಾಯಿಸುವುದು ಸರಿಯಲ್ಲ.  
ಇದೇ ಪ್ರಶ್ನೆ ಸೊಳ್ಳೆ, ತಿಗಣೆ, ಜಿರಳೆ ಇತ್ಯಾದಿಗಳ ವಿಚಾರದಲ್ಲೂ ಉಂಟಾಗುತ್ತದೆ.  ಸ್ವಚ್ಛತೆ, ಪದಾರ್ಥಗಳ ಅತ್ಯಂತ ಕಡಿಮೆ ಸಂಗ್ರಹ, ಪದಾರ್ಥಗಳನ್ನು ಬಳಸುತ್ತಿರುವುದು, ಆಗಾಗ್ಗೆ ಶುಚಿಗೊಳಿಸುವುದು ಈ ಕ್ರಮವನ್ನು ಅನುಸರಿಸಿ ಅವುಗಳ ಕಾಟವನ್ನು ತಡೆಗಟ್ಟಬಹುದು.  ಅವುಗಳನ್ನು ಕೊಲ್ಲುವ ಬದಲಿಗೆ, ಅವು ಬಾರದಂತೆ ಹೊಗೆ ಇತ್ಯಾದಿಗಳನ್ನೂ ಬಳಸಬಹುದು.
ಅಹಿಂಸೆಯನ್ನು ಪಾಲಿಸಲೇಬೇಕೆಂಬ ಹಠವಿದ್ದಾಗ ಪರಿಹಾರಗಳನ್ನು ಕಂಡುಹಿಡಿಯಬಹುದು.
ತಮ್ಮವ,
ಸುಧಾಕರ ಶರ್ಮಾ