Pages

Friday, June 8, 2012

ದೇವರಿಗೆ ಹರಕೆ!

ಒಮ್ಮೊಮ್ಮೆ  ಕೆಲವು ಪೂಜೆ ಪುನಸ್ಕಾರ, ವ್ರತ ಕತೆಗಳನ್ನು ಆಚರಿಸುವ ರೀತಿ ನೋಡಿದಾಗ ನಿಜವಾಗಿ ನಗು ಬರುತ್ತದೆ. ಪೂಜೆ ಮಾಡುವುದನ್ನು ನೋಡಿ    ನಗು ಬರುತ್ತೆ ಅಂದಾಗ ಕೆಲವರಿಗೆ     ಕೂಡಲೇ ಸಿಟ್ಟು    ಬರಬಹುದು. ಆದರೆ ಸ್ವಲ್ಪ ಶಾಂತವಾಗಿ ಚಿಂತನ-ಮಂಥನ ಮಾಡಿದರೆ  ನಗಬೇಕೋ ಅಳಬೇಕೋ ಅನ್ನೋದನ್ನು ನಾವೇ ನಿರ್ಧರಿಸಬಹುದು.

ಯಾಕಪ್ಪಾ ನಗು ಬರುತ್ತೆ ಅಂದರೆ, ಹೊಟ್ಟೆ ಹಸಿವಾದಾಗ  ಏನು ಮಾಡಬೇಕು? ಅಂದರೆ  ಉತ್ತರ ಯಾರಿಗೆ ಗೊತ್ತಿಲ್ಲ?  ಊಟ ಮಾಡಬೇಕು" ಅಲ್ಲವೇ? ಅದು ಬಿಟ್ಟು ದೇವರಮುಂದೆ ಕುಳಿತು " ದೇವರೇ ನನಗೆ ಹೊಟ್ಟೆಹಸಿದಿದೆ,ಹೊಟ್ಟೆ ತುಂಬಿಸು, ಎಂದು ಪ್ರಾರ್ಥನೆ ಮಾಡುತ್ತಾ ದೇವರ ಮುಂದೆ ಕುಳಿತರೆ ಸ್ವಲ್ಪ ಸಮಯದಲ್ಲಿ ಹಸಿವು ಮರೆತು ಹೋಗಬಹುದು, ಅಷ್ಟೆ, ಅಲ್ಲವೇ? ಹಸಿವಾದಾಗ ಊಟಮಾಡಬೇಕು ತಾನೇ? ಅಷ್ಟೇ ಸರಳ ಇನ್ನುಳಿದ ಸಂಗತಿಗಳೂ ಕೂಡ. ಕಷ್ಟ  ಬಂತು ಅಂತಾ  ಅದನ್ನು ನೀಗಿಸಲು   ಮಾಡಬೇಕಾದ  ಪ್ರಯತ್ನವನ್ನು ಮಾಡದೆ ಕೇವಲ ವ್ರತಕತೆಗಳು,ಯಜ್ಞ ಯಾಗಾದಿಗಳು,ಪೂಜೆ ಪುನಸ್ಕಾರಗಳನ್ನು ಮಾಡಿದರೆ  ಅವನ ಕಷ್ಟ ಹೋಗುವುದಾದರೂ ಹೇಗೆ? ಅಥವಾ ಸಾಧ್ಯವೇ? ತನ್ನ ಕರ್ತವ್ಯವನ್ನು    ನಿರ್ವಹಿಸದೆ  ಪ್ರಾರ್ಥಿಸಿದಾಗಲೆಲ್ಲಾ ಬಂದು ಕಷ್ಟ ಪರಿಹರಿಸಲು ಭಗವಂತನೇನು ನಮ್ಮ ಸೇವಕನೇ? ಮೊನ್ನೆ ಒಬ್ಬ ಮಹಾಶಯರು ನಮ್ಮ ಮನೆಗೆ ಬಂದಿದ್ದರು. ಸಾರ್ ವ್ಯಾಪಾರದಲ್ಲಿ ಕೋಟ್ಯಾಂತರ ರೂಪಾಯಿ ಲಾಸ್ ಆಯಿತು ಸಾರ್, ಅದಕ್ಕಾಗಿ ಸುದರ್ಶನ ಹೋಮ,ನವಗ್ರಹಹೋಮ............ಇತ್ಯಾದಿ ಹತ್ತಾರು ಹೋಮಗಳನ್ನು ಮಾಡಿಸಿದೆ, ಎಲ್ಲಾ ಪುಣ್ಯ ಕ್ಷೇತ್ರಗಳಿಗೂ ಹೋಗಿ ಬಂದೆ, ಭಗವಂತಾ ಯಾಕೋ ಇನ್ನೂ ನಮ್ಮ ಮೇಲೆ ಕಣ್ಣು ಬಿಟ್ಟಿಲ್ಲ! ಎಂದರು. "ನಿಮ್ಮ ಮೇಲೆ ಭಗವಂತನು ಕಣ್ಣು ಬಿಡುವುದೂ ಇಲ್ಲ "ಎಂದು ಮನಸ್ಸಿನಲ್ಲೇ ಅಂದುಕೊಂಡೆ.  ವ್ಯಾಪಾರದಲ್ಲಿ ಲಾಸ್ ಆದ್ದರಿಂದ ಸಾಲಮಾಡಿ ಹೋಮಹವನಗಳನ್ನು ಮಾಡಿಸಿದ್ದಾರೆ, ಪುಣ್ಯ  ಕ್ಷೇತ್ರಗಳಿಗೆ ಹೋಗಿಬಂದಿದ್ದಾರೆ.
ಮೊದಲೇ ನಷ್ಟ,ಅದರೊಟ್ಟಿಗೆ ಮತ್ತೆ ಸಾಲ!! ಇಂತವರಿಗೆ ಏನೆನ್ನಬೇಕು? ಬಹಳ ಜನರು ಏನೂ ಅನ್ನುವುದಿಲ್ಲ. ಕಾರಣ ತಾವೂ ಅದನ್ನೇ ಮಾಡುತ್ತಾರೆ.

ವ್ಯ್ವಹಾರದಲ್ಲಿ ನಷ್ಟವಾಯಿತೆಂದರೆ ಅದಕ್ಕೆ ಕಾರಣ ಹುಡುಕಬೇಕಿತ್ತು, ಅಲ್ಲವೇ? ನಷ್ಟವಾಯ್ತೆಂದರೆ ಅದಕ್ಕೆ ನಾಲ್ಕಾರು ಕಾರಣಗಳು ಇರಬಹುದು. ೧] ವ್ಯವಹಾರದ ಮೇಲೆ ತಪ್ಪಿದ ಹತೋಟಿ. ೨] ಸೋಮಾರಿತನ ೩] ದುಂದು ವೆಚ್ಚ ೪] ಅತಿಯಾಸೆಯಿಂದ ಜೂಜಿಗೆ ಸಮಾನವಾದ ವ್ಯವಹಾರ ಮಾಡಿರುವುದು.

ನಿತ್ಯವೂ ವ್ಯವಹಾರವನ್ನು ಮಾನಿಟರ್ ಮಾಡಿದ್ದರೆ ಕೋಟ್ಯಾಂತರ ರೂಪಾಯಿ ಲಾಸ್  ಆಗಲು ಕಾರಣವೇ ಇಲ್ಲ. ಅಲ್ಲವೇ? ಏನೋ ಮೋಸ ಆಗುತ್ತಿದೆ ಎಂದು ಆರಂಭದಲ್ಲಿಯೇ ತಿಳಿದು ಸರಿಪಡಿಸಿಕೊಳ್ಲಬಹುದಿತ್ತು.   ಹತ್ತು ರೂಪಾಯಿಗೆ ನೂರು ರೂಪಾಯಿ ಲಾಭದ ದುರಾಸೆಯಲ್ಲಿ ವ್ಯವಹಾರಕ್ಕೆ ಹಣ ಚೆಲ್ಲಿದಾಗ ಆರಂಭದಲ್ಲಿ ಲಾಭದ ಆಸೆಹುಟ್ಟಿದರೂ ಒಮ್ಮೆಲೇ ಬಂದ ಲಾಭದ ಹತ್ತು ಪಟ್ಟು ನಷ್ಟ ನಂತರದಲ್ಲಿ ಆಗಬಾರದೆಂದೇನೂ ಇಲ್ಲವಲ್ಲಾ! 

ಒಬ್ಬನಿಗೆ ಹೃದಯ ಸಂಬಂಧಿಖಾಯಿಲೆ ಬಂತು. ಅದಕ್ಕಾಗಿ ಒಂದು ಹೋಮ ಮಾಡಿಯಾಯ್ತು. ಮಗ ಬಿ.ಇ. ತೇರ್ಗಡೆ ಯಾಗಲಿಲ್ಲ. ಅದಕ್ಕಾಗಿ ಯಾವುದೋ ದೇವರಿಗೆ ಹರಕೆ! ಹೀಗೆ ಬಂದ ಕಷ್ಟಗಳಿಗೆಲ್ಲಾ ದೇವರ ಮೊರೆ!!
ಎಲ್ಲವೂ ನಮ್ಮ ಕೈಲೇ ಇದೆ ಅಲ್ಲವೇ? ವಿವೇಕದಿಂದ ವ್ಯವಹಾರ ಮಾಡಬೇಕು, ಜಾಣ್ಮೆಯಿಂದ ಜೀವನ ಮಾ  ಬೇಕು, ಕಷ್ಟ ಪಟ್ಟು ಕೆಲಸ ಮಾಡಬೇಕು, ನಾವು ಮಾಡುವ ಊಟದಲ್ಲಿ ,ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲವೇ? ಶರೀರ ಒಪ್ಪದ ಆಹಾರವನ್ನು ತಿಂದು, ಶರೀರಕ್ಕೆ ಸೂಕ್ತ ವ್ಯಾಯಾಮವಿಲ್ಲದೆ, ಬೇಕಾಬಿಟ್ಟಿ    ಜೀವನ ಮಾಡಿದಾಗ ಆರೋಗ್ಯ ಹದಗೆಡಬಾರದೆ? 

ಬಹುಪಾಲು ಹೀಗೇ ನಡೆದಿದೆ ನಮ್ಮ ಜೀವನ. ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ನಂತರ ಫಲಾಫಲವನ್ನು ಆ ಭಗವಂತನಿಗೆ ಬಿಡುವುದು ಸರಿ.ಆಗಲೂ ಆಗುವ ಕಷ್ಟಗಳಿಗೆ ದೇವರಲ್ಲಿ ಪ್ರಾರ್ಥಿಸಬೇಕಾದುದೇನು? 
ಬಂದಿರುವ ಕಷ್ಟಗಳನ್ನು ನಿಭಾಯಿಸಲು ಶಕ್ತಿಯನ್ನು ದೇವರಲ್ಲಿ ಕೇಳಬೇಕಾದ್ದು, ಸರಿ. ಆದರೆ ನಿಭಾಯಿಸಬೇಕಾದವರು ನಾವೇ ತಾನೇ? 
ನಮ್ಮ ಮಿತ್ರರೊಬ್ಬರು ನನಗೆ ಹೇಳಿದರು" ನಮ್ಮ ಕಷ್ಟ ನಿಮಗೇನು ಗೊತ್ತಾಗಬೇಕು? ನೀವಾದರೂ ಒಳ್ಳೆಯ ಕೆಲಸದಲ್ಲಿದ್ದೀರಿ!"

 ಪಾಪ! ಅವರಿಗೇನು ಗೊತ್ತು ಮೊದಲ ಇಪ್ಪತ್ತೈದು ವರ್ಷಗಳು ಪಟ್ಟಿರುವ ಭವಣೆ!!
ಆಗಿನ ಕಾಲದಲ್ಲಿ ಮನೆಮಂದಿಯೆಲ್ಲಾ ನಿದ್ರೆಗೆಟ್ಟು ಊಟದ ಎಲೆ ಹಚ್ಚಿದರೂ  ಸಂಸಾರ ನಡೆಯುತ್ತಿರಲಿಲ್ಲ. ಹಸಿದಹೊಟ್ಟೆ ಯಲ್ಲಿ ಮಲಗಿದ ದಿನಗಳಿಗೇನೂ ಕಮ್ಮಿ ಇರಲಿಲ್ಲ. ಆದರೆ ನಮ್ಮ ತಾಯಿಯೊಡನೆ ನಿತ್ಯವೂ  ಮನೆಮಂದಿಯೆಲ್ಲಾ   ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಬಿಡದೆ ಭಗವಂತನ ಸ್ಮರಣೆಯನ್ನು ಮಾಡುವುದು ಮಾತ್ರ ತಪ್ಪುತ್ತಿರಲಿಲ್ಲ. ಆದರೆ ಸಾಲಮಾಡಿ ತೀರ್ಥಯಾತ್ರೆಯನ್ನೂ ಮಾಡಲಿಲ್ಲ! ಹವನ ಹೋಮದ ಹೆಸರೂ ಕೇಳಿರಲಿಲ್ಲ!!