Pages

Sunday, July 8, 2012

ಚಿರಂತನ ಸತ್ಯ


ಚಿರಂತನ ಸತ್ಯ

ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಭಾಷಣ ಮಾಡುತ್ತಿರುವಾಗ ಒಬ್ಬ ಮಹನೀಯರು ಎದ್ದು ನಿಂತು " ಸ್ವಾಮಿಜಿ, ನೀವು ಒಂದು ಬಗೆಯ ಸಂಮೊಹನವನ್ನು  ಬೋಧಿಸುತ್ತಿಲ್ಲಾ ತಾನೇ? " ಎಂದು ಪ್ರಶ್ನಿಸಿದರು. ಸ್ವಾಮಿಜಿ ನಸುನಗುತ್ತ    " ಇಲ್ಲ. ನಾನು ನಿಮ್ಮನ್ನು ಸಂಮೊಹನಾವಸ್ಥೆಯಿಂದ ಬಿಡಿಸುತ್ತಿದ್ದೇನೆ.  ನೀವು ಈಗಾಗಲೇ ಸಮ್ಮೋಹನಕ್ಕೆ ಒಳಗಾಗಿ ಬಿಟ್ಟಿದ್ದಿರಿ.  ನಾನು ಬಿಳಿಯ, ಅವನು ಕರಿಯ, ನಾನು ಶ್ರೀಮಂತ, ಅವನು ಬಡವ, ನಾನು ಅಧಿಕಾರಿ, ಅವನು ಜವಾನ ಇತ್ಯಾದಿ ಇತ್ಯಾದಿಗಳಲ್ಲಿ ತೊಳಲಾಡುತ್ತಾ ಇದ್ದೀರಿ.  ವಾಸ್ತವದಲ್ಲಿ ಈ ಯಾವ ಸ್ಥಿತಿಯು ನಿಮ್ಮದ್ದಲ್ಲ.  ನೀವು ಆ ಚಿರಂತನ ಸತ್ಯವಾದ ಆತ್ಮ ಮಾತ್ರ.  ಈ ಸತ್ಯವನ್ನು ಅರಿಯಬೇಕಾದರೆ, ನೀವು ಈಗಾಗಲೇ ಒಳಗಾಗಿರುವ ಸಮ್ಮೋಹನ ಸ್ಥಿತಿಯಿಂದ ಹೊರಬರಬೇಕಾಗಿದೆ.  ಈ ಕೆಲಸವನ್ನು ನಾನು ಮಾಡುತ್ತಿದ್ದೇನೆ. "  ಎಂದು ಚಾಟಿ ಎಟಿನಂತಹ ಉತ್ತರವನ್ನು ಕೊಟ್ಟರು.

ಇಂದಿನ ನಮ್ಮ ಸ್ಥಿತಿಯು ಇದಕ್ಕೆ ಹೊರತೇನಲ್ಲ. ನಾವು ಒಂದು ರೀತಿಯ ಸಮ್ಮೋಹನ ಸ್ಥಿತಿಯಲ್ಲೇ ತೊಳಲಾಡುತ್ತಿದ್ದೇವೆ.  ನಮ್ಮೊಳಗಿರುವ ಲೆಕ್ಕವಿಲ್ಲದಷ್ಟು ನಂಬಿಕೆಗಳು, ನಮ್ಮನ್ನು ಅಧೋಗತಿಗೆ ತಳ್ಳುತ್ತಿವೆ. ಧರ್ಮದ ಸತ್ಯವನ್ನು ಅರ್ಥಮಾಡಿಕೊಳ್ಳದೆ ಇಂದು ನಾವು ಕಚ್ಚಾಡುತ್ತಿದ್ದೇವೆ.  ನನ್ನ ಮತ ಹಿರಿದು, ನಿನ್ನ ಮತ ಕಿರಿದು, ನಾನು ಉತ್ಕೃಷ್ಟ, ನೀನು ನಿಕೃಷ್ಟ ಇತ್ಯಾದಿಗಳಲ್ಲಿ ಕಿರುಚಾಡುತ್ತಿದ್ದೇವೆ.  ಆದರೆ, ಆ ದಿವ್ಯ ಸತ್ಯದ ಎದುರು ನಾವೆಲ್ಲಾ ಒಂದು, ಎಂಬುದನ್ನು ನಾವು ಮರತೇ ಬಿಟ್ಟಿದ್ದೇವೆ.   ನಮ್ಮ ಆಚರಣೆಗಳು, ನಂಬಿಕೆಗಳು, ವಿಚಾರಗಳು ಬೇರೆಯಾದ ಮಾತ್ರಕ್ಕೆ  ಸತ್ಯವು ಬದಲಾಗುತ್ತದೆಯೇ?  ಯಾವ ರೀತಿ ದೈಹಿಕವಾಗಿ, ಮಾನಸಿಕವಾಗಿ ನಮ್ಮನ್ನು ನಾವು ಬದಲು ಮಾಡಿಕೊಂಡರೂ ಸತ್ಯ ಮಾತ್ರ ಯಾವಕಾಲಕ್ಕೂ ಒಂದೇ ಎಂಬುದನ್ನು ನಾವು  ಅರಿಯಲು ಅಸಮರ್ಥರಾಗಿದ್ದೇವೆ.  ಭಗವಂತನ ಸೃಷ್ಟಿಯಲ್ಲಿ ನಾವೆಲ್ಲ ಒಂದೇ ಅಲ್ಲವೇ?  ಅವರವರ ಕರ್ಮಾನುಸಾರ ಜನ್ಮ ತಳೆಯಲು ಸಾಧ್ಯವಾಗಿರುತ್ತದೆಯ ವಿನಃ ಬೇರೇನೂ ಅಲ್ಲ.  ಯಾರು ಯಾವುದೇ ಮತದಿಂದಾಗಲಿ, ಧರ್ಮದಿಂದಾಗಲಿ ದೊಡ್ದವರಾಗಲು   ಸಾಧ್ಯವಿಲ್ಲ.  ಧರ್ಮದಲ್ಲಿರುವಂತಹ ಚಿರಂತನ ಸತ್ಯವನ್ನು ಅರಿತು ದಿನ ನಿತ್ಯದಲ್ಲಿ ಆಚರಣೆಗೆ ತಂದರೆ ಆಗ ಮಾತ್ರ  ದೊಡ್ಡ ವ್ಯಕ್ತಿಯಾಗಲು ಸಾಧ್ಯ.. 

ನೀವೇನು ಹೇಳುತ್ತೀರಾ ?.............

ಹೆಚ್ ಏನ್ ಪ್ರಕಾಶ್