Pages

Sunday, August 8, 2010

ಅವಳಿರುವ ಅರಿತು- ನಮ್ಮಿಹವ ಮರೆತು



ಮಾತೆ, ಎಲ್ಲೆಲ್ಲಿಯೂ ನೀನಿರುವೆ ಎ೦ಬುದೇ


ಮನಕೊ೦ದು ಸಾ೦ತ್ವನವಾಗಿ


ಬಿದ್ದಾಗಲೆಲ್ಲಾ ಕೈಹಿಡಿದು ನಡೆಸುವೆ ಎ೦ಬುದು


ಜೀವಕ್ಕೊ೦ದು ಸಮಾಧಾನವಾಗಿ,


ನಿನ್ನಿರುವೇ ನನ್ನ ಮನಕ್ಕೊ೦ದು ಆನ೦ದ


ಕ್ಷಣ-ಕ್ಷಣಕೂ ನೆನೆವೆ ನಿನ್ನ ಚಿದಾನ೦ದ






ಸ೦ಗೀತದಿ೦ದಾಗಲೀ, ಸಲ್ಲಾಪದಿ೦ದಾಗಲೀ


ನೋವನ್ನೂ ನಲಿವಾಗಿಸುವ


ನಾದಾನುಸ೦ಧಾನದಿ೦ದಾಗಲೀ


ಗರಿಕೆ,ದಾಸವಾಳ ಬಿಲ್ವಪತ್ರೆಯಿ೦ದಾಗಲೀ


ಕದಳೀ ನಾರಿಕೇಳ,ಗೂಢ ಪರಮಾನ್ನದಿ೦ದಾಗಲೀ


ಮೆಚ್ಚಿಸುವೆನೆ೦ಬುದು ಕ್ಷಣಿಕ ಸತ್ಯವಷ್ಟೇ!






ಹೃದಯದಲ್ಲಿ ನಿನ್ನನ್ನಿಟ್ಟು, ಮಾತುಗಳ ಮ೦ತ್ರದಿ೦ದ

ಅಮ್ಮಾ ಎ೦ದು ಬಾಯ್ತು೦ಬಾ ಕರೆಯಲು


ಬರದೇ ಇರುವೆಯೇ ನೀನು?


ನನ್ನ ಬಿಟ್ಟಾದರೂ ನಿನಗೆ ಯಾರಿಹರು?


ನಿನ್ನ ಮರೆತಾದರೂ ಬಾಳುವ೦ಥಹವರಾರಿಹರು?


ಅರಿತು ನಿನ್ನ ಇರುವ,ಮರೆತು ಎನ್ನ ಇಹವ


ಕ್ಷಣ-ಕ್ಷಣಕೂ ನೆನೆವೆ ನಿನ್ನ ಚಿದಾನ೦ದ.

ಮೂಢ ಉವಾಚ -1

ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ !
ಏಕಮುಖ ಬಹುಮುಖ ಸುಮುಖ ಕುಮುಖ !!
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ !
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||

ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ |
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ ||
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ |
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||

ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು |
ಸೇವೆಯನು ಗೈಯುವರು ನಂಬಿಕೆಯ ನಟಿಸುವರು ||
ನೀನೆ ಗತಿ ನೀನೆ ಮತಿ ಪರದೈವವೆನ್ನುವರು |
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||

ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು|
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು ||
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು |
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾರದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ 'ಹಾಯ್' 'ಬಾಯ್' ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲ್ಲವೇ? ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ (ದುಡಿಯುವ ಇಂತಹ ಬಹುತೇಕ ಮಂದಿಗೆ ಷೋಕಿ ಬಿಟ್ಟರೆ ಹಣದ ನಿಜವಾದ ಅವಶ್ಯಕತೆ ಇರುವುದು; ಅನಿವಾರ್ಯತೆ ಇರುವುದು ಕೆಲವೇ ಮಂದಿಗೆ ಮಾತ್ರ) ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ. [ಇಂತಹ ವಿಚಾರಗಳು ತಲೆ ಹೊಕ್ಕಾಗ ಉಂಟಾಗುವ ತಳವಳ, ವೇದನೆ ಇನ್ಯಾರೊಂದಿಗೂ ಹಂಚಿಕೊಳ್ಳದ ಪರಿಸ್ಥಿತಿಯುಂಟಾದಾಗ ಮನಸ್ಸಿನ ದುಗುಡವನ್ನು ಈ ರೀತಿಯಲ್ಲಾದರೂ ಹೊರಹಾಕಿ ಅಲ್ಪ ನೆಮ್ಮದಿ ಸಿಗುವದೇನೋ ಎಂಬ ಹಂಬಲದೊಂದಿಗೆ ಈ ಬರಹ.]
-------------------------------------
ಕವಿ ಸುರೇಶರ ಚಿಂತನೆಗೆ ಪೂರಕ ವಾಗಬಹುದೆಂದು ನನ್ನ ಈ ಕವನವನ್ನು ಅವರ ಬರಹದೊಟ್ಟಿಗೆ ಹಾಕಿರುವೆ, ಸುರೇಶರಿಗೆ -ಈ ಕ್ರಮ ಸರಿಯಲ್ಲವೆನಿಸಿದರೆ ಪ್ರತ್ಯೇಕ ಹಾಕುವೆ.
-ಶ್ರೀಧರ್



ತೊಟ್ಟಿಮನೆ

ಊರಗೌಡರ
ತೊಟ್ಟಿಮನೆಯಲಿ
ಇದ್ದ ಜನಗಳು ನೂರು|
ರಾಜಠೀವಿಯಲಿ ಗೌಡರು ಹೊರಟರೆ ನಡುಗುತ್ತಿತ್ತು ಸೂರು||
ಒಂದು ಹೊತ್ತಿಗೆ
ನೂರು ಜನಗಳ
ಊಟವು ಒಮ್ಮೆಲೆ ನಡೆದಿತ್ತು|
ಒಟ್ಟಿಗೆ ಕುಣಿಯುತ
ಒಟ್ಟಿಗೆ ಕಲಿಯುತ
ಆಟ ಪಾಠವು ನಡೆದಿತ್ತು||
ಕೆಲಸದ ಹಂಚಿಕೆಯಾಗಿತ್ತು
ಮನೆಯಲಿ ಕಿಲಕಿಲ ನಗುವಿತ್ತು
ಗೌಡರ ಬಂಡಿಯು ಸಾಗಿತ್ತು|
ಅಜ್ಜಿಯ ತೊಡೆಯಲಿ ಬೆಚ್ಛಗೆ
ಮಕ್ಕಳು ಮಲಗುತ ಕಾಲವು ಕಳೆದಿತ್ತು||

ಆಡುವ ಕಿಟ್ಟಿಯ
ನೋಡುತ ಗೌಡರು
ಗೌಡತಿ ಕಿವಿಯಲಿ ಕೇಳಿದರು|
ತುಂಟಾಟದ ನಗುವಿನ
ಚಂದದ ಹುಡುಗ
ಯಾರ ಮನೆಯ ಮಗುವಮ್ಮಾ?!!||

ಗೌಡತಿ ಗೌಡರ
ದುರುಗುಟ್ಟುತ ನೋಡಿ
ಪಿಸುಗುಟ್ಟುತ ಗೌಡರ ಕಿವಿಯೊಳಗೆ|
ಮಗ ಗೋಪಾಲನ
ಮುದ್ದಿನ ಮೂರನೆ
ಮಗನೇ ಅಲ್ಲವೆ ಇವನೆಂದು||

ಸಂಜೆಯ ಸಮಯದಿ
ಜಗತಿಯ ಮೇಲೆ
ಶಿಶುವಿಹಾರವೇ ನಡೆದಿತ್ತು|
ಮಕ್ಕಳ ಕುಣಿತವ
ಹಿರಿಯರು ನೋಡುತ
ನೋಡುತ ದಿನವೇ ಕಳೆದಿತ್ತು||

ಕಾಲದ ಕಣ್ಣೇ ಬಿದ್ದಿತ್ತು
ಕಂಬ ಕಂಬವೇ ಕುಸಿದಿತ್ತು
ತೊಟ್ಟಿಯ ಮನೆಯು ಒಡೆದಿತ್ತು
ಗೌಡರ ಕಥೆಯು ಮುಗಿದಿತ್ತು||

ಯೋಚಿಸಲೊ೦ದಿಷ್ಟು..... ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.
೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.

೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!

೪.  ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಳ್ಳ ಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು ಎನ್ನುವುದಕ್ಕಿ೦ತ.ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬುದೇ ಅತ್ಯ೦ತ ಮುಖ್ಯವಾಗುತ್ತದೆ!

೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.

೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!

೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.

೮. ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ ಮನೆ ಮಾಡಲು ಆರ೦ಭಿಸುತ್ತದೆ!

೯. ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು!

೧೦. ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!

೧೧. ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು.

೧೨.ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ!ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ!ಸಮಸ್ಯೆಯೆ೦ಬ ಬೀಗವನ್ನು ತೆರೆಯಲು ಬಳಸಬಹುದಾದ ಬೀಗದ ಕೈ ಯನ್ನು ನಾವೇ ಹುಡುಕಿಕೊಳ್ಳಬೇಕು, ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು!

೧೩. ನಮ್ಮ ಮೌನವು ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸು ವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು!

೧೪. ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ.ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾ ದರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ!ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ!

೧೫.ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು, ಸಹಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು!