Pages

Sunday, August 21, 2011

ಶ್ರೀ ಕೃಷ್ಣಜನ್ಮಾಷ್ಟಮಿ

ವೇದಸುಧೆಯ ಓದುಗರೆಲ್ಲರಿಗೆ ದೇವಮಾನವ ಶ್ರೀಕೃಷ್ಣನ ಜನ್ಮದಿನದ ಶುಭಾಶಯಗಳು.

ಇದೀಗ ಗಮನಿಸಿದೆ. ಇದು ವೇದಸುಧೆಯ 600ನೆಯ ಪೋಸ್ಟ್!

ಎಂದೂ ಮುಗಿಯದು ಹರಿಕಥೆಯು !

ಚಿತ್ರಕೃಪೆ: ಅಂತರ್ಜಾಲ

ಎಂದೂ ಮುಗಿಯದು ಹರಿಕಥೆಯು !


ಮುರಳಿಯ ಮೋಹಕ ನಾದಕೆ ಗೋಕುಲ
ತಲೆದೂಗಿತು ಒಲೆದಾಡುತಲಿ
ತರಳನ ಮೋಡಿಯ ದಾಳಕೆ ವ್ಯಾಕುಲ
ಚಿತ್ತತೊರೆದು ನಲಿದಾಡುತಲಿ

ಹುಟ್ಟಿದ ಮಥುರೆಯ ತೊರೆಯುತಲಲ್ಲಿಗೆ
ಸಟ್ಟನೆ ಸಾಗುತ ಬಂದನವ
ತಟ್ಟಿದ ಎಲ್ಲರ ಹೃದಯವ ಮೆಲ್ಲಗೆ
ಬೆಟ್ಟವನೆತ್ತುತ ಕಂದನವ !!

ಗಡಿಗೆಯನೊಡೆದಾ ಬೆಣ್ಣೆಯಕದ್ದಾ
ಅಡಗಿಸಿ ಗೋಪಿಕೆ
ವಶನಗಳ
ಬೆಡಗಿಯರೆಲ್ಲರ ಹೆಣ್ಣಿಮೆಗೆದ್ದಾ
ಒಡನಾಡುತ ತಿಂದಶನಗಳ

ಜಾವದಿ ಕರೆದಾ ಗೋವುಗಳೆಲ್ಲವ
ಭಾವದಿ ಬಂದವು ಕರುಗಳವು
ಹಾವನು ತುಳಿದಾ ಜೀವಗಳೆಲ್ಲವ
ಸಾವಿನಿಂದ ತಾ ಹೊರಗೆಳೆದೂ

ಎಳೆತನದಲಿ ತಾ ಕುಚೇಲಗೊಲಿದಾ
ಗೆಳೆತನವಾಯಿತು ಹೆಮ್ಮರವು
ಗಳಿಕೆಯ ಹಿಡಿಯವಲಕ್ಕಿಯಪಡೆದಾ
ಅಳಿಸುತ ಬಡತನ ಸುಮ್ಮನವ

ಕರೆಯಲು ಬಂದಾ ಅಕ್ರೂರನ ಮನ
ಒರೆಗೆ ಹಚ್ಚಿ ತಾ ಪರಿಗಣಿಸಿ
ಅರಿವಲಿ ಭಕ್ತಗೆ ತಾ ಭಗವಂತನೇ
ಹೊರಗಡೆ ಬಂಧುವು ಎಂದೆನಿಸಿ

ಒದೆಯುತ ಮಾವನ ವಧಿಸಿದ ಅಳಿಯನು
ಸದೆಬಡಿಯುತ ಚಾಣೂರನನು
ಗದೆಯನು ನೀಡುತ ತಾತನ ಕೂರಿಸಿ
ಬದಲಿಸಿದನು ರಾಜ್ಯಭಾರವನು

ಪಾಂಚಾಲಿಯ ವೇದನೆಯನು ಗ್ರಹಿಸಿದ
ಪಾಂಚಜನ್ಯಧಾರಿಯು ಒಳಗೆ
ಕಾಂಚಾಣದ ಮದ ಹರಿದಾವೇಳೆಗೆ
ವಾಂಛಿತಕ್ಷಯಾಂಬರ ಹೊರಗೆ

ನಡೆಸಿದ ಭಾರತ ತರಿಯುತ ಹಲವರ
ಜಡದೇಹಕೆ ಅಂತ್ಯವ ಕರೆದು
ಗುಡಿಸಿ ಅಧರ್ಮವ ಬಡಿಸಿದ ಗೀತೆಯ
ತಡಮಾಡದೆ ಸತ್ಯವ ತೆರೆದು

ಒಂದೇ ಎರಡೇ ಘಟನೆಯು ಸಾವಿರ
ಎಂದೂ ಮುಗಿಯದು ಹರಿಕಥೆಯು !
ಚಂದದಿ ನೀವಿದ ಕೇಳಿದ ರೀತಿಗೆ
ಅಂದದ ಮಂಗಳ ಸಾರುವೆನು

---ವಿ. ಆರ್.ಭಟ್