Pages

Tuesday, August 10, 2010

ಎಲ್ಲಿಯ ಸಂಬಂಧ ?


ಚಿತ್ರ ಋಣ : ಅಂತರ್ಜಾಲ

ಎಲ್ಲಿಯ ಸಂಬಂಧ ?

ಮಾನವ ಜೀವನ ಭಾವನೆಗಳ ಸರ
ಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ

ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು

ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !

ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?

ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !


--- [ ನಿಮ್ಮೊಡನೆ ವಿ.ಆರ್.ಭಟ್ ವಿಭಾಗದ ' ಚಿಂತನಶೀಲ ಕವನಗಳು' ಸಂಕಲನದಿಂದ ]

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು |
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು ||
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು |
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು |
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು ||
ಅರಿಯರವರು ಇತರರಿಗೆ ಬಯಸುವ ಕೇಡದು |
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ |
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ ||
ಬಯಕೆ ಜೀವನವು ಬಯಸುವುದು ತಪ್ಪಲ್ಲ |
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||

ನಮ್ಮ ಮನೆಯಲ್ಲಿ ಫ್ಯುನೆರಲ್ ಫಂಕ್ಷನ್!!

ಕೆ.ಪಿ.ಟಿ.ಸಿ.ಎಲ್ ಗೆ ಹೊಸದಾಗಿ ಆಯ್ಕೆಯಾಗಿರುವ ನಾಲ್ಕು ಜನ ಸಹಾಯಕ ಇಂಜಿನಿಯರ್ ಗಳು ನಾನು ಕೆಲಸ ಮಾಡುವ ಹಾಸನ ಪವರ್ ಸ್ಟೇಶನ್ ಗೆ ನಿನ್ನೆ ತರಬೇತಿಗಾಗಿ ಬಂದು ವರದಿಮಾಡಿಕೊಂಡರು. ಮದ್ಯಾಹ್ನ ೧.೩೦ ರಿಂದ ೨.೩೦ ರ ವರಗೆ ಅವರುಗಳಿಗೆ ಊಟಕ್ಕಾಗಿ ಬಿಡುವಿತ್ತು. ಮೂರು ಜನರು ಸಮಯಕ್ಕೆ ಸರಿಯಾಗಿ ಊಟ ಮುಗಿಸಿ ಸ್ಟೇಶನ್ ಗೆ ಬಂದರು. ಒಬ್ಬರು ಮಾತ್ರ ಐದು ನಿಮಿಷ ತಡವಾಗಿ ಬಂದರು. ಎಲ್ಲರೊಡನೆ ಮಾತನಾಡುತ್ತಾ ಸಹಜವಾಗಿ " ಎಲ್ಲರ ಊಟವಾಯ್ತಾ?’ ಎಂದೆ. ಎಲ್ಲರೂ ಆಯ್ತು ಎಂದರು. ತಡವಾಗಿ ಬಂದ ಆಕೆ ಮಾತ್ರ " ಊಟ ಆಗಿಲ್ಲ, ನಮ್ಮ ಮನೆಯಲ್ಲಿ ಏನೋ ಫಂಕ್ಷನ್ ಇದೆ ಸರ್, ಆದ್ದರಿಂದ ತಡವಾಗಿದೆ, ಎಂದರು. ಭೀಮನ ಅಮಾವಾಸ್ಯೆ ಹಬ್ಬವನ್ನು ಕೆಲವರು ನಿನ್ನೆ, ಕೆಲವರು ಇಂದು ಆಚರಿಸಿರುವುದರಿಂದ " ಹಬ್ಬದ ಗಡಿಬಿಡಿಯಿಂದ ತಡವಾಯ್ತಾ? ಅಂದೆ. " ಇಲ್ಲಾ ಸರ್ , ನಮ್ಮ ಮನೆಯಲ್ಲಿ ಫ್ಯುನೆರಲ್ ಫಂಕ್ಷನ್! "
ನನಗೋ ಗಾಭರಿ! ಪಾಪ, ಯಾರು ಮೃತರಾಗಿದ್ದಾರೋ! ಅಂತಹಾ ಪರಿಸ್ಥಿತಿಯಲ್ಲಿ ಬಂದುಬಿಟ್ಟಿದ್ದಾರಲ್ಲಾ! -ಅಂತಾ ಯೋಚಿಸಿದವನೇ " ಯಾರಮ್ಮಾ? ಅಂದೆ. "ನಮ್ಮ ಅಜ್ಜಿದೂ ಸರ್" ಅಂದರು.
-ಮುಖ ನೋಡಿದರೆ ಅಂತಾ ದು:ಖವೇನಿಲ್ಲಾ, ನಾನು ಊಹಿಸಿದೆ -ಹುಡುಗಿ ಏನೋ ತಪ್ಪಾಗಿ ಹೇಳಿದ್ದಾಳೆಂದು
- "ಮನೆಯಲ್ಲಿ ಅಜ್ಜಿಯ ಶ್ರಾದ್ಧವೇನಮ್ಮಾ?"-ಅಂದೆ
-ಹೌದು ಸಾರ್
-ಮತ್ತೆ ಫ್ಯುನೆರಲ್ ಅಂದ್ಯಲ್ಲಾ?
-ಏನು ಹೇಳಬೇಕು ,ಅಂತಾ ಗೊತ್ತಾಗಲಿಲ್ಲ ಸಾರ್.
----------------
ನೋಡಿ ನಮ್ಮ ವಿದ್ಯಾವಂತ ಯುವಕರ ಪರಿಸ್ಥಿತಿ!
ಬಿಇ ನಲ್ಲಿ ಒಳ್ಳೆಯ ಮಾರ್ಕ್ಸ್ ತಗೊಂಡು ಕೆಲಸ ದಕ್ಕಿಸಿದ್ದಾಗಿದೆ. ಆದರೆ ಸಾಮಾನ್ಯ ಜ್ಞಾನ!?

ಪಾಪ, ಆಕೆಗೆ ನಮ್ಮಜ್ಜಿ ತಿಥಿ ಅಂತಾನೋ, ವೈದೀಕ ಅಂತಾನೋ ಅಥವಾ ಶ್ರಾದ್ಧ ಅಂತಾನೋ ಹೇಳೋದಕ್ಕೆ ಸಂಕೋಚ, ಇಂಗ್ಲೀಶ್ ನಲ್ಲಿ ಹೇಳೋಕೇ ಹೋಗಿ ಆದ ಆಭಾಸ ಇದು! ಏನಂತೀರಾ?