Pages

Sunday, September 29, 2013

ಗುಜರಿ ಅಂಗಡಿ


ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ!
ಅದಕ್ಕೇ ಅಂತ ಕಾಣುತ್ತೆ  ಹಿರಿಯರು ಹೇಳ್ತಾರೆ "ಮಗುತ್ವ ಬೆಳೆಸಿಕೊಳ್ಳಿ". ಮಗುವಂತಾಗುವುದು ಅಷ್ಟು ಸುಲಭವಲ್ಲ. ನಮ್ಮ ಮನಸ್ಸು, ಹೃದಯ ಎಲ್ಲದರಲ್ಲೂ ನಮಗೆ ಗೊತ್ತಿಲ್ಲದಂತೆ ಕೊಳಕು ತುಂಬಿದೆ. ನಾನು...ನಾನು..ನಾನು...ಎಂಬ ಭಾವ ತುಂಬಿತುಳುಕುತ್ತಿರುತ್ತದೆ. ಎರಡಾಣೆ ಖರ್ಚು ಮಾಡಿ ಎರಡು ಲಕ್ಷದ ಪ್ರತಿಫಲ ಕೇಳೋ ನಾನು ಮಗುವಾಗಬೇಕಲ್ಲಾ! ನನ್ನೊಳಗಿನ ಕಸವನ್ನು ಕಿತ್ತು ದೂರ ಎಸೆಯ ಬೇಕಲ್ಲಾ! ಅದಕ್ಕಾಗಿ ಈ ಮಕ್ಕಳನ್ನು ಧ್ಯಾನಿಸುತ್ತಿದ್ದೇನೆ. ಮತ್ತೊಮ್ಮೆ ಐದು ದಶಕಗಳ ಹಿಂದಕ್ಕೆ ಹೋಗಬೇಕೆಂಬ ಆಸೆ. ಐದು ದಶಕಗಳು ಕ್ರಮಿಸುವಾಗ ಅದೆಷ್ಟು ಅಡಚಣೆಗಳು!! ಅದೆಲ್ಲವನ್ನೂ ಕ್ರಮಿಸಿ ಪಡೆದದ್ದು ಗುಜರಿ ಅಂಗಡಿ ಸಾಮಾನುಗಳು. ಈಗ ಅದರಿಂದ ಪ್ರಯೋಜನವಿಲ್ಲವೆಂದು ಗೊತ್ತಾಗಿದೆ. ಮತ್ತೆ ಐವತ್ತು ವರ್ಷ ಹಿಂದಕ್ಕೆ ಪ್ರಯಾಣಿಸಬೇಕಾಗಿದೆ. ಅದು ಇನ್ನೂ ಕಷ್ಟ. ನಮ್ಮ ಸ್ವಾಮೀಜಿ ಒಬ್ಬರು ಮೊನ್ನೆ ತಾನೇ ಹೇಳಿದ ಮಾತು ನೆನಪಾಗುತ್ತಿದೆ. ನಾವೇ ಹಾಕಿದ ಕಲ್ಲು ಚಪ್ಪಡಿಯನ್ನು ನಾವೇ ಎಡವಿ ಬೀಳುತ್ತಿದ್ದೇವೆ. ಎಡವಿ ಬೀಳುತ್ತಿರುವುದು ಗೊತ್ತಾಗುತ್ತಿದೆ. ಆದರೂ ಆ ಕಲ್ಲು ಚಪ್ಪಡಿಯ ಮೇಲೆ ವ್ಯಾಮೋಹ!! ಗುಜರಿ ಅಂಗಡಿಯ ಮೇಲೆ ವ್ಯಾಮೋಹ!!!