Pages

Friday, July 15, 2011

ಇಂದು ಗುರುಪೂರ್ಣಿಮಾ



ಇಂದು ಗುರುಪೂರ್ಣಿಮಾ. ಕಳೆದ ವರ್ಷ ಇದೇ ದಿನ ಹಾಸನದಲ್ಲಿ ಆರ್.ಎಸ್.ಎಸ್. ನ ಒಂದು ಶಾಖೆಯಲ್ಲಿ ಉತ್ಸವದ ನಿಮಿತ್ತ ನಾನು ಮಾಡಿದ ಭಾಷಣ ಇಲ್ಲಿದೆ.

ಹೀಗೊಂದು ವೇದೋಕ್ತ ವಿವಾಹ

ಸುಮಾರು ಒಂದು ವರ್ಷದ ಹಿಂದಿನ ಘಟನೆ. ಅವನ ಹೆಸರು ಸುನಿಲ, ಓರ್ವ ಸ್ಫುರದ್ರೂಪಿ ಹಿಂದೂ ತರುಣ, ಹಾಸನ ಮೂಲದವನು. ಅವಳು ಒಲಿವಿಯ, ಮನಮೋಹಕ ಚೆಲುವಿನ ಕ್ರಿಶ್ಚಿಯನ್ ನವಯುವತಿ, ಮಂಗಳೂರಿನ ಕಡೆಯವಳು. ಇಬ್ಬರಿಗೂ ಪರಿಚಯವಾಯಿತು, ಮಾತುಕಥೆಗಳಾದವು, ಪ್ರೇಮಾಂಕುರವಾಯಿತು. ಮದುವೆಯಾಗಲು ನಿರ್ಧರಿಸಿದರು. ಜಾತಿ ಬೇರೆಯಾದ್ದರಿಂದ ಎರಡೂ ಮನೆಯವರು ಪ್ರಾರಂಭದಲ್ಲಿ ಒಪ್ಪದಿದ್ದರೂ ಅವರ ಧೃಢ ನಿರ್ಧಾರದಿಂದಾಗಿ ಒಪ್ಪಿಗೆ ಸಿಕ್ಕಿತು. ಸುನಿಲನಪೂರ್ಣ ಸರಿಹೊಂದಿಸು ಇಚ್ಛೆಯಂತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಲಿವಿಯ ಸಮ್ಮತಿಸಿದಳು.

ವೇದೋಕ್ತ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸಿ ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರನ್ನು ಭೇಟಿಯಾದರು. ಅವರು ಒಲಿವಿಯಳನ್ನು ಆಕೆ ಇನ್ನುಮುಂದೆ ಸುನಿಲನಂತೆ ಸಸ್ಯಾಹಾರಿಯಾಗಿರಲು ಸಾಧ್ಯವೇ ಎಂದು ವಿಚಾರಿಸಿದರು. ಆಕೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಶರ್ಮರು ಹೇಳಿದರು -"ಆಹಾರ ಪದ್ಧತಿ ಬದಲಾಯಿಸಲು ನನ್ನ ಒತ್ತಾಯವಿಲ್ಲ. ಆದರೆ ಸಸ್ಯಾಹಾರಿಯಾಗಲು ನಿರ್ಧರಿಸಿದರೆ ಮಾತ್ರ ನಾನು ಮದುವೆ ಮಾಡಿಸುವೆ. ಇಲ್ಲದಿದ್ದರೆ ಬೇರೆಯವರ ಮಾರ್ಗದರ್ಶನದಲ್ಲಿ ಮದುವೆಯಾಗಬಹುದು. ನಿರ್ಧಾರವನ್ನು ಈ ಕೂಡಲೇ ತೆಗೆದುಕೊಳ್ಳಬೇಕಿಲ್ಲ. ನಿಧಾನವಾಗಿ ಯೋಚಿಸಿದ ನಂತರದಲ್ಲಿ ತಿಳಿಸಿ". ನಂತರ ತಿಳಿಸುವುದಾಗಿ ಹೋದ ಅವರು ಕೆಲವು ದಿನಗಳ ನಂತರ ಮತ್ತೆ ಬಂದು ಶರ್ಮರನ್ನು ಭೇಟಿ ಮಾಡಿದರು. ಒಲಿವಿಯ ಇನ್ನುಮುಂದೆ ಸಸ್ಯಾಹಾರಿಯಾಗಿರಲು ನಿರ್ಧರಿಸಿದ್ದಳು.



ಹಾಸನದ ಸುವರ್ಣ ರೀಜೆನ್ಸಿ ಹೋಟೆಲಿನ ಪಾರ್ಟಿಹಾಲಿನಲ್ಲಿ ವೇದೋಕ್ತ ರೀತಿಯಲ್ಲಿ ಮದುವೆಗೆ ವೇದಿಕೆ ಸಜ್ಜಾಯಿತು. ಸಭಾಭವನ ಬಂಧು-ಮಿತ್ರರೊಂದಿಗೆ ತುಂಬಿತ್ತು. ನನಗೆ ಅವರ ಪರಿಚಯವಿಲ್ಲದಿದ್ದರೂ ಶ್ರೀ ಸುಧಾಕರ ಶರ್ಮರವರಿಂದ ವಿಷಯ ತಿಳಿದ ನಾನು ಅಂತರ್ಜಾತೀಯ ಹಾಗೂ ವೇದೋಕ್ತ ರೀತಿಯ ವಿವಾಹ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲದಿಂದ ಆ ವಿವಾಹಕ್ಕೆ ನಾನೂ ಸಾಕ್ಷಿಯಾದೆ. ಮದುವೆ ಗಂಡು ಸುನಿಲ ಪಂಚೆ-ಶಲ್ಯ ಹೊದ್ದು ಸಿದ್ಧನಾಗಿದ್ದ. ಬಾಬ್ ಕಟ್ಟಿನ ಹುಡುಗಿ ಒಲಿವಿಯ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಅವರ ಜೋಡಿ ಹೇಳಿ ಮಾಡಿಸಿದಂತಿತ್ತು.

ಪ್ರಾರಂಭದಲ್ಲಿ ಶ್ರೀ ಶರ್ಮರು ದೇವರು ಮತ್ತು ಜಾತಿ ಕುರಿತು ನೀಡಿದ ವಿವರಣೆ ಮನ ಮುಟ್ಟುವಂತಿತ್ತು. ದೇವರು ಎಲ್ಲಾ ಜೀವಿಗಳಿಗೂ ಒಬ್ಬನೇ, ಬೇರೆ ಬೇರೆ ಜಾತಿಗಳವರಿಗೆ ಬೇರೆ ಬೇರೆ ದೇವರಿಲ್ಲ, ಅಲ್ಲದೆ ಮನುಷ್ಯರಿಗೆ, ಪ್ರಾಣಿಗಳಿಗೆ, ಗಿಡ-ಮರಗಳಿಗೆ ಪ್ರತ್ಯೇಕ ದೇವರುಗಳಿಲ್ಲವೆಂದ ಅವರು ಜಾತಿಗಳ ಸೃಷ್ಟಿ ಮನುಷ್ಯರು ಮಾಡಿಕೊಂಡದ್ದು ಎಂದರು. ಮದುವೆಯ ನಿಜವಾದ ಅರ್ಥವನ್ನು ವಿವರಿಸಿದ ಅವರು ಮದುವೆ ಅನ್ನುವುದು ಸುಖದಾಂಪತ್ಯ ನಡೆಸಲು ಬೇಕಾದ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಂಸ್ಕಾರ, ಮಾರ್ಗದರ್ಶನ ನೀಡುವ ಸರಳ ಸಮಾರಂಭ ಎಂದರು. ವೇದೋಕ್ತ ರೀತಿಯ ವಿವಾಹ ವಿಧಿಯಲ್ಲಿ ಭಗವಂತನ ಪ್ರಾರ್ಥನೆ, ಪಾಣಿಗ್ರಹಣ, ಯಜ್ಞ, ಪ್ರತಿಜ್ಞಾಮಂತ್ರ ಪಠಣ, ಲಾಜಾಹೋಮ. ಸಪ್ತಪದಿ ಮತ್ತು ಆಶೀರ್ವಾದಗಳು ಒಳಗೊಂಡಿರುತ್ತವೆ ಎಂದರು. ಬೆಂಗಳೂರಿನ ಕೃಷ್ಣಮೂರ್ತಿಯವರು ಪುರೋಹಿತರಾಗಿ ಕಾರ್ಯ ನಿರ್ವಹಿಸಿದರು. ಆ ಪುರೋಹಿತರು ಇತರ ಪುರೋಹಿತರಂತೆ ಇರದೆ, ಪಂಚೆ, ಜುಬ್ಬಾ ಮತ್ತು ಹೆಗಲ ಮೇಲೆ ಒಂದು ವಸ್ತ್ರ ಹಾಕಿಕೊಂಡಿದ್ದರು. ನಾವು ಸಾಮಾನ್ಯವಾಗಿ ನೋಡುವ ಮದುವೆಗಳಲ್ಲಿ ಪುರೋಹಿತರು ಅವರ ಪಾಡಿಗೆ ಅವರು ಮಂತ್ರಗಳನ್ನು ಹೇಳುತ್ತಿದ್ದರೆ ಅದನ್ನು ಬೇರೆಯವರು ಇರಲಿ, ಮದುವೆಯಾಗುವ ಗಂಡೂ-ಹೆಣ್ಣೂ ಸಹ ಅದನ್ನು ಕೇಳುವುದಿಲ್ಲ, ಮಂತ್ರದ ಅರ್ಥವೂ ಅವರಿಗೆ ಗೊತ್ತಿರುವುದಿಲ್ಲ, ಹೇಳುವ ಪುರೋಹಿತರಿಗೂ ತಿಳಿದಿರುತ್ತೋ ಇಲ್ಲವೋ!






ಪುರೋಹಿತರು ಮಂತ್ರಗಳನ್ನು ಹೇಳುತ್ತಿದ್ದರೆ ಅದರ ಅರ್ಥವನ್ನು ಕನ್ನಡದಲ್ಲಿ ಶರ್ಮರವರು ವಿವರಿಸಿ ಹೇಳುತ್ತಿದ್ದರು. ಮದುವೆಯ ವಿಧಿ-ವಿಧಾನಗಳ ನಿಜವಾದ ಪರಿಚಯ ಎಲ್ಲರಿಗೂ ಆದದ್ದು ವಿಶೇಷ. ಒಲಿವಿಯ ಸಸ್ಯಾಹಾರಿಯಾಗಿರಲು ನಿರ್ಧರಿಸಿದ ವಿಷಯ ಘೋಷಿಸಲಾಯಿತು. ವಧೂವರರು ಪೂರ್ಣ ಆಸಕ್ತಿಯಿಂದ ಕಲಾಪದಲ್ಲಿ ಭಾಗಿಯಾದರು, ನಾವೂ ಅಂತಹ ವಿಶೇಷವನ್ನು ಕಂಡು ಸಂತೋಷಿಸಿದೆವು. ವರನಿಂದ "ಜ್ಞಾನಪೂರ್ವಕವಾಗಿ ನಾನು ನಿನ್ನ ಕೈ ಹಿಡಿಯುತ್ತಿದ್ದೇನೆ, ನೀನೂ ಅಷ್ಟೆ. ನಾವಿಬ್ಬರೂ ಪ್ರಸನ್ನರಾಗಿ ಬಾಳೋಣ, ಉತ್ತಮ ಸಂತತಿಯನ್ನು ಪಡೆಯೋಣ. ಮುಪ್ಪಿನ ಕಾಲದವರೆಗೂ ಜೊತೆಯಾಗಿರೋಣ, ಪರಸ್ಪರ ಸುಪ್ರಸನ್ನರೂ, ಪರಸ್ಪರರಲ್ಲೇ ಆಸಕ್ತರೂ ಆಗಿ, ನೂರು ವರ್ಷಗಳ ಕಾಲ ಪ್ರೇಮದಿಂದ, ಆನಂದದಿಂದ, ಪ್ರಿಯವಚನಗಳನ್ನೇ ಆಡುತ್ತಾ ಬಾಳೋಣ" ಎಂಬ ಪ್ರತಿಜ್ಞಾ ವಚನ ಘೋಷಣೆ ಮಾಡಿಸಲಾಯಿತು. ಪ್ರತಿಯಾಗಿ ವಧುವೂ ಉತ್ತರವಾಗಿ ತನ್ನ ಬದ್ಧತೆಯನ್ನು ಘೋಷಿಸಿದಳು.



ಸಪ್ತಪದಿಯ ಮಹತ್ವ ತಿಳಿಸಿ ನೆರವೇರಿಸಲಾಯಿತು. ಅನ್ನಾಹಾರಗಳ, ಇಚ್ಛಾಶಕ್ತಿಗಳ ಸಲುವಾಗಿ ಮೊದಲ ಜೋಡಿಹೆಜ್ಜೆ, ಬಲ, ಆರೋಗ್ಯಗಳ ಸಲುವಾಗಿ ಎರಡನೆಯ ಜೋಡಿಹೆಜ್ಜೆ, ಸಾಧನ-ಸಂಪತ್ತಿನ ಸಲುವಾಗಿ ಮೂರನೆಯ ಜೋಡಿಹೆಜ್ಜೆ, ಸುಖ-ಆನಂದಗಳಿಗಾಗಿ ನಾಲ್ಕನೆಯ ಜೋಡಿಹೆಜ್ಜೆ, ಉತ್ತಮ ಸಂತಾನಕ್ಕಾಗಿ ಐದನೆಯ ಜೋಡಿಹೆಜ್ಜೆ, ನಿಯಮಿತ ಜೀವನಕ್ಕಾಗಿ ಆರನೆಯ ಜೋಡಿಹೆಜ್ಜೆ ಮತ್ತು ಸ್ನೇಹಕ್ಕಾಗಿ ಏಳನೆಯ ಜೋಡಿಹೆಜ್ಜೆಗಳನ್ನಿರಿಸಿದ ನಂತರ ವಧೂವರರು ದಂಪತಿಗಳೆನಿಸಿದರು. ಬಂದವರು ಮನಃಪೂರ್ವಕವಾಗಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಮಾರಂಭ ವೀಕ್ಷಿಸಿದ ನನಗೆ ಎಲ್ಲರೂ ಈರೀತಿ ಅರ್ಥಪೂರ್ಣ ಸಂಸ್ಕಾರ ಪಡೆಯುವ ವಿವಾಹಗಳನ್ನು ನಡೆಸಿದರೆ ಎಷ್ಟು ಚೆನ್ನ ಎಂದು ಅನ್ನಿಸಿತು. ಆ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ನೋಡುತ್ತಿದ್ದಾಗ ನೆನಪು ಮರುಕಳಿಸಿತು, ಈ ಲೇಖನವಾಗಿ ಹೊರಬಂದಿತು.
*************************
-ಕ.ವೆಂ.ನಾಗರಾಜ್.

ಸಂಕೀರ್ಣವಾಗುತ್ತಿರುವ ಸಂಬಂಧಗಳು

ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ ’ಹಾಯ್’ ’ಬಾಯ್’ ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲವೇ?

ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಮುಂದೆ ತನ್ನ ಮಕ್ಕಳಿಗೆ ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ಅದಕ್ಕಂದೇ ಮನೆಯೆ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರುವು ಎಂದು ಹೇಳಿರುವುದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ.

ಇನ್ನು ಮುಂದೆ ಅಣ್ಣ, ಅಕ್ಕ, ತಮ್ಮ, ತಂಗಿ ಸಂಬಂಧಗಳು ಅನುಭವಿಸಿದವರಿಗೆ ನೆನಪು ಮಾತ್ರಾ,. ಈಗಿನ ಪೀಳಿಗೆಗೆ ಈ ಅನುಬಂಧದ ಖುಷಿ ಬರೀ ಮರೀಚಿಕೆ ಅಷ್ಟೆ. ಏಕೆಂದರೆ ಪ್ರತಿ ಕುಟುಂಬದಲ್ಲೂ ಈಗ ಒಂದೇ ಮಗು. ಹಾಗಾಗಿ ಈ ಸಂಬಂಧಗಳು ಸಂಕೀರ್ಣವಾಗುವ ಬದಲು ಸಂಪೂರ್ಣ ಸ್ವಲ್ಪ ಕಾಲಾಂತರದಲ್ಲಿಯೇ ಮಾಯವಾದರೂ ಆಶ್ಚರ್ಯಪಡಬೇಕಾಗಿಲ್ಲ. ಮನೆಯಲ್ಲಿ ಸಹಜಾತರಿಲ್ಲದೇ ಬೆಳೆಯುವ ಒಂಟಿ ಮಗುವಿನ ಮನ:ಸ್ಥಿತಿ ಮತ್ತು ಇತರ ಸಂಬಂಧಿಗಳೊಡನೆ ಅದರ ವ್ಯವಹಾರ ಎಲ್ಲವೂ ಇದರಿಂದ ಪ್ರಭಾವಿತವಾಗುವುದಂತೂ ಶತ:ಸ್ಸಿದ್ಧ. ಸಹಬಾಳ್ವೆ ಮತ್ತು ಸಹಜೀವನದ ಸೌಖ್ಯ ಮತ್ತು ಅನುಭವದಿಂದ ವಂಚಿತವಾಗುವ ಈ ಮಕ್ಕಳ ಪರಿಸ್ಥಿತಿ ನೋಡಿದಾಗ ನಿಜವಾಗಿಯೂ ಖೇದವೆನಿಸುತ್ತದೆ.

ಮದುವೆ ಎಂದರೆ ಎರಡು ಮನಗಳ ಸಮಾಗಮ. ಗಂಡು-ಹೆಣ್ಣು ಪರಸ್ಪರ ಭಾವನೆಗಳಿಗೆ ಸ್ಪಂದಿಸುವ ಮತ್ತು ನೋವು-ನಲಿವುಗಳಿಗೆ ನಿರಂತರ ಭಾಗಿಯಾಗುವ ಒಂದು ಸಾಮಾಜಿಕ ವ್ಯವಸ್ಥೆ. ಆದರಿಂದು ಮದುವೆ ಮನ ಗಳ ಸಮಾಗಮವಲ್ಲ ಕೇವಲ ಮನಿ [money] ಗಳ ಸಮಾಗಮದ ವ್ಯವಸ್ಥೆಯಾಗಿದೆ. ಗಂಡ ತಿಂಗಳಿಗೆ ೧ ಲಕ್ಷಕ್ಕಿಂತಲೂ ಹೆಚ್ಚಿಗೆ ದುಡಿದರೂ ಹೆಂಡತಿ ಕೂಡಾ ಕೆಲಸಕ್ಕೆ ಹೋಗಲೇ ಬೇಕು. ಓದ್ದಿದ್ದೇವೆ ಎಂಬ ಏಕೈಕ ಕಾರಣದಿಂದ ದುಡಿಮೆ ಏಕೆ ಹೆಣ್ಣು ಮಕ್ಕಳಿಗೆ ಇಂದು ಅನಿವಾರ‍್ಯವಾಗಿದೆಯೋ ಅರ್ಥವಾಗದು. ಬದುಕಿನ ಗುರಿ ಅದಕ್ಕಿಂತ ಮಿಗಿಲಾಗಿ ಸಂಸಾರ ಬಂಧನದ ಗುರಿ ಮತ್ತು ಕರ್ತವ್ಯಗಳ ಪರಿಕಲ್ಪನೆಯ ಅಭಾವ ಇಂದು ಎದ್ದು ಕಾಣುತ್ತಿದೆ. ಹುಟ್ಟಿದ ಮಗುವಿಗೆ ತಾಯಿಯ ಮಡಿಲು ಮತ್ತು ಮಮತೆಯೇ ಇಂದು ಮರೀಚಿಕೆಯಾದರೆ, ಹೆತ್ತ-ತಾಯಿಗೆ ಮಗು ಪಾಲನೆ-ಪೋಷಣೆಯೇ ಹೊರೆಯಾದರೆ, ಕಾರ್ಯ ಒತ್ತಡದಿಂದ ಗಂಡ-ಹೆಂಡಿರ ಸಂಬಂಧಗಳೇ ಹಳಸುವುದಾದರೆ, ತಮ್ಮ ಹಾಗೂ ತಮ್ಮ ಏಕೈಕ ಸಂತಾನದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಲಿಪಶುವಾಗಬಹುದಾದರೆ, ಅಂತಹ ದುಡಿಮೆಯಿಂದ ಏನು ಸಾರ್ಥಕ ಎಂಬ ಸಾಮಾನ್ಯ ಪ್ರಶ್ನೆಗೆ ಈಗಿನ ಸುಶಿಕ್ಷಿತ ಯುವಕ/ಯುವತಿಯರಿಗೆ ಉತ್ತರ ಏಕೆ ಹೊಳೆಯುತ್ತಿಲ್ಲ ಎಂಬುದೇ ಸೋಜಿಗವೆನಿಸುತ್ತದೆ. ಗಂಡ-ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಂದು ಅಕ್ಷರಶ: ನಿಜವಾಗುತ್ತಿದೆ. ಸಂಬಂಧಗಳ ದೃಷ್ಟಿಯಲ್ಲಿ (ಪ್ರೀತಿ, ಪ್ರೇಮ) ಮಗು ಬಡವಾದರೂ ಬಲವಾದ ಆರ್ಥಿಕ ಬೆಂಬಲದಿಂದ ಮುಂದೆ ಅದು ಭಡವ ಆದರೂ ಆಶ್ಚರ್ಯ ಪಡಬೇಕಾಗಿಲ್ಲ.

ತಮ್ಮ ವೃತ್ತಿಜೀವನವೇ ಪ್ರಾಧಾನ್ಯವಾದರೆ ಅಮಾಯಕವಾದ ಒಂದು ಜೀವವನ್ನು ಈ ಪ್ರಪಂಚಕ್ಕೆ ತಂದು, ಅದನ್ನು ಅನ್ಯರ ಪಾಲನೆ-ಪೋಷಣೆಯಲ್ಲಿ ಬಿಟ್ಟು, ಅದರ ಜೀವನಕ್ಕೆ (ಅದರಲ್ಲೂ ವಿಶೇಷವಾಗಿ ಅದರ ಸಹಜ ಮಾನಸಿಕ ಬೆಳವಣಿಗೆಗೆ) ಕಲ್ಲು ಹಾಕುವ ಹಕ್ಕು ಕೂಡಾ ಇವರಿಗಿಲ್ಲವಷ್ಟೇ? ಒಂದು ಮಗು ಎಲ್ಲಾ ಐಷಾರಾಮಿ ವಸ್ತು-ಸೌಲಭ್ಯಗಳಿಗಿಂತಲೂ ಬೆಲೆ ಕಟ್ಟಲಾಗದಂತಹ ಆಸ್ತಿ. ಅಂತಹ ಅಮೂಲ್ಯವಾದ ಆಸ್ತಿಯನ್ನು ಜತನವಾಗಿ ಕಾಪಾಡಿ, ಪೋಷಿಸಿ, ಬೆಳೆಸಿದರೆ ಅದು ಕುಟುಂಬಕ್ಕಷ್ಟೇ ಅಲ್ಲ ಇಡೀ ದೇಶಕ್ಕೇ ಒಂದು ಅಪೂರ್ವವಾದ ಆಸ್ತಿಯಾಗಬಲ್ಲದು. ಪ್ರಮುಖವಾಗಿ ಮಕ್ಕಳ ಬಾಲ್ಯದಲ್ಲಿ ಹೆಜ್ಜೆ-ಹೆಜ್ಜೆಗೂ ಅದರ ನಡೆ-ನುಡಿಗಳನ್ನು ತಿದ್ದುವ ಕೆಲಸ ಪೋಷಕರದ್ದು; ಅದರಲ್ಲೂ ವಿಶೇಷವಾಗಿ ತಾಯಿಯದ್ದು. ಗಿಡವಾಗಿ ಬಗ್ಗದ್ದು ಖಂಡಿತವಾಗಿ ಮರವಾದ ಮೇಲೆ ಬಗ್ಗಲಾರದು. ಜೀವನ ನಿರ್ವಹಣೆಗೆ ಹೆಣ್ಣಿನ ದುಡಿಮೆ ಅನಿವಾರ್ಯವಾದಾಗ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ್ದು ಒಪ್ಪಬಹುದಾದ ಮಾತು. ಆದರಿಂದು ಕನಿಷ್ಠಪಕ್ಷ ದುಡಿಯುವ ಶೇ.೬೦-೭೦ ಕ್ಕಿಂತ ಹೆಚ್ಚು ಮಹಿಳೆಯರಿಗೆ ಅಂತಹ ಪರಿಸ್ಥಿತಿ ಇಲ್ಲ; ಅದು ಕೇವಲ ಷೋಕಿಯ ಮತ್ತು ಸಾಮಾಜಿಕ ಪ್ರತಿಷ್ಠೆಯ ಪ್ರತೀಕ ಮಾತ್ರಾ ಆಗಿ ಉಳಿದಿದೆ. ಈ ಪ್ರವೃತ್ತಿಯಿಂದ ಏನೂ ಅರಿಯದ ಮುಗ್ಧ ಕಂದಮ್ಮಗಳು ನರಳುವಂತಾಗಿದೆ. ಕೇವಲ ಹಣದಿಂದ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನೂ ನಾವು ಪೂರೈಸುತ್ತಿದ್ದೇವೆ ಎಂಬ ಭ್ರ,ಮೆಯಲ್ಲಿ ಇಂದು ಬಹುಮಂದಿ ಇದ್ದಾರೆ. ಮುಂದೆ ಬೆಳೆದು ನಿಂತ ಮಕ್ಕಳು ನಿಮ್ಮನ್ನು ಕೇವಲ ಒಂದು ATM ಆಗಿ ಮಾತ್ರಾ ನೋಡುತ್ತಾರೆ. ಅವರಲ್ಲಿ ನೀವವರ ತಂದೆ-ತಾಯಿಯರೆಂಬ ಭಾವನೆಗಳೂ ಕೂಡ ಇಲ್ಲದಿದ್ದಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ನೀವು ಅದರ ನಿಜವಾದ ತಂದೆ-ತಾಯಿಯರೆಂಬ ವಾತ್ಸಲ್ಯದಿಂದ ಅದನ್ನು ವಂಚಿಸಿದರ ಫಲ ಅದು. ವಿದೇಶಕ್ಕೆ ತೆರಳಿ, ಹೆತ್ತ ಮಗುವನ್ನು, ಅಜ್ಜ-ಅಜ್ಜಿಯರ ಅಥವಾ ಅನ್ಯರ ಪೋಷಣೆಯಲ್ಲಿ ಬಿಟ್ಟು ಧನದಾಹಿ ಗಳಾಗಿರುವ ಅನೇಕರನ್ನು ನಾವಿನ್ನು ನೋಡಬಹುದು. ಬಹುಶ: ಐದಾರು ವರ್ಷಗಳ ನಂತರ ಇವರೇ ನಿಮ್ಮ ತಾಯಿ-ತಂದೆ ಎಂದು ಅಜ್ಜ-ಅಜ್ಜಿಯರು ಮಗುವಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಕೂಡ ಖಂಡಿತ ಬಾರದಿರದು. ವೃದ್ಧಾಪ್ಯದಲ್ಲಿ ತಂದೆ-ತಾಯಿಯರನ್ನು ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದಿರಲಿ; ಅವರಿಗೆ ಆ ಕಾಲದಲ್ಲಿ ಪುನ: ಪೋಷಕರ ಜವಾಬ್ದಾರಿ ಹೊರಿಸುವ ಈ ನಿಷ್ಕರುಣಿಗಳಿಗೆ ಏನೆನ್ನಬೇಕೋ ತಿಳಿಯದಾಗಿದೆ. ಇದೇ ಧಾಟಿ ಮುಂದುವರಿದಲ್ಲಿ, ಬಹುಶ: ವೃದ್ಧಾಶ್ರಮ ಮತ್ತು ಅಬಲಾಶ್ರಮಗಳಂತೆ ಬಾಲಾಶ್ರಮಗಳೂ ಕಾಲಾನುಕ್ರಮದಲ್ಲಿ ತಲೆಯೆತ್ತಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಬೋರ್ಡಿಂಗ್ ಸ್ಕೂಲ್‌ಗಳೂ ಬಹುಶ: ಇದರ ಮುನ್ಸೂಚನೆಯಿರಬಹುದು! ದಿಕ್ಕೆಟ್ಟ ಮಕ್ಕಳಿಂದ ಮುಂದೆ ದಿಕ್ಕೆಟ್ಟ ಸಮಾಜವನ್ನು ಸೃಷ್ಟಿಸಿದ ಶಾಪಕ್ಕೂ ಅಂತಹವರು ಗುರಿಯಾಗಬೇಕಾಗುತ್ತದೆ. ಧನ ಮದ, ವಿದ್ಯಾಮದ ಮತ್ತು ಅದರೊಂದಿಗೆ ಮಿಳಿತವಾದ ಅಹಂ ಕಾರ ಇಂದಿನ ಈ ಪ್ರವೃತ್ತಿಗೆ ಬಹುಶ: ಪ್ರಮುಖ ಕಾರಣಗಳು ಎನ್ನಬಹುದು.

ಆರ್ಥಿಕ ಸ್ವಾತಂತ್ರ್ಯ ಮತ್ತು ಸಹಾಯ ಒಂದು ಮಟ್ಟದವರೆಗೆ ಗಂಡು-ಹೆಣ್ಣು ಇಬ್ಬರಿಗೂ ಅತ್ಯಂತ ಅವಶ್ಯ. ಆ ಮಟ್ಟ ಮುಟ್ಟಿದ ಕೂಡಲೇ ಅದು ನಮ್ಮ ಸಂಬಂಧಗಳ ಮೇಲೆ, ನಮ್ಮ ನೆಮ್ಮದಿಯ ಮೇಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮುಗ್ಧ ಎಳೆ ಜೀವಗಳ ಮೇಲೆ ಸವಾರಿ ಮಾಡಲು ಬಿಡಬಾರದು. ಹಣ ಕೇವಲ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಸಾಧನವಾಗಬೇಕಷ್ಟೇ ಅಲ್ಲದೇ ಅದು ನಮ್ಮ ಜೀವನ ಶೈಲಿಯನ್ನೇ ಪ್ರಭಾವಿಸುವ ಯಜಮಾನ ನಾಗಬಾರದು. ಅವಶ್ಯಕತೆಗೆ ಮೀರಿದ ಹಣ ನಮಗರಿವಿಲ್ಲದಂತೆಯೇ ನಮ್ಮ ಮೇಲೆ ಸವಾರಿ ಮಾಡಲುಪಕ್ರಮಿಸುತ್ತದೆ; ಸಂಬಂಧಗಳನ್ನು ಹದಗೆಡಿಸುತ್ತದೆ; ಅಂತಿಮವಾಗಿ ಮಾನವೀಯತೆ ಸಾಯುತ್ತದೆ. ಹಾಗಾಗಬಾರದೆಂದರೆ, ವಿಶೇಷವಾಗಿ ಇಂದಿನ ಯುವಕ-ಯುವತಿಯರು ತಮ್ಮ ಆದ್ಯತೆಗಳನ್ನು, ಅದರಲ್ಲೂ ಪ್ರಮುಖವಾಗಿ ಮದುವೆಯ ನಂತರದ ಜೀವನವನ್ನು ಸುಗಮವಾಗಿಸುವ ದೃಷ್ಟಿಯಿಂದ, ಬಹಳ ಜೋಪಾನವಾಗಿ ಗುರುತಿಸಿಕೊಳ್ಳಬೇಕು. ನಾಳಿನ ಸುಸಂಸ್ಕೃತ ಪ್ರಜೆಗಳನ್ನು ರೂಪುಗೊಳಿಸುವ ಗುರುತರ ಜವಾಬ್ದಾರಿಯನ್ನರಿತು ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ಸುಶಿಕ್ಷಿತ ಹೆಣ್ಣು ಮಕ್ಕಳು, ಅತೀ ಜಾಗರೂಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯತೆ ಮತ್ತು ಅನಿವಾರ್ಯತೆ. ಅಂತಹ ಒಂದು ಧೀರ ನಿರ್ಧಾರದಿಂದ ಸಂಸಾರ ಆನಂದ ಸಾಗರವಾಗುತ್ತದೆ; ಹಣ ಕೊಡಲಾರದ, ಕೊಳ್ಳಲಾರದ, ಅಪರಿಮಿತ ಸೌಖ್ಯ ಕುಟುಂಬದ ಎಲ್ಲ ಸದಸ್ಯರ ಪಾಲಾಗುತ್ತದೆ.

ಸಂಸಾರದ ಕರ್ತವ್ಯ ನಿರ್ವಹಣೆಗೆ ಹಣ ಅಗತ್ಯ ನಿಜ. ಎಷ್ಟು ಹಣ ಬೇಕು ಎಂಬುದು ಸುಶಿಕ್ಷಿತರು ತಾವೇ ನಿರ್ಧರಿಸಿಕೊಳ್ಳಬೇಕಾದ ವಿಚಾರ. ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲೇ ಇಂದಿನ ಅನೇಕ ಯುವಕ-ಯುವತಿಯರು ಎಡವುತ್ತಿರುವುದರಿಂದಲೇ ಸಾಂಸಾರಿಕ ನೆಮ್ಮದಿ-ಸುಖ ನೇಪಥ್ಯಕ್ಕೆ ಸರಿದಿದೆ. ಎಲ್ಲೋ ಒಂದು ಕಡೆ ‘full-stop’ ಹಾಕದಿದ್ದರೆ, ವಾಕ್ಯ ಅಪೂರ್ಣವಾಗುವಂತೆ, ಜೀವನವೂ ಅಪೂರ್ಣವಾಗುತ್ತದೆ; ಅಸಹನೀಯವಾಗುತ್ತದೆ. ಅಪರಿಮಿತ ಅಷ್ಟೈಶ್ವರ್ಯಗಳು ಬೇಕೋ - ಸಾಂಸಾರಿಕ ನೆಮ್ಮದಿ, ಸೌಖ್ಯ ಬೇಕೋ - ಆಯ್ಕೆ ನಿಮ್ಮದೇ!
-ಕವಿ ವೆಂ. ಸುರೇಶ್
8.7.2011
94489-32866 - Email: bsr_kavisuresh@yahoo.co.in

ಸಾಧನಾ ಪಂಚಕಮ್: ಭಾಗ -7

ಸಾಧನಾ ಪಂಚಕಂ -ಮೆಟ್ಟಲು- 21+22+23+24
21. ಬ್ರಹ್ಮಾಸ್ಮೀತಿ ವಿಭಾವ್ಯತಾಮ್
ಭಾವಾರ್ಥ: ಬ್ರಹ್ಮಾನುಭಾವದಲ್ಲಿ ತಲ್ಲೀನನಾಗು
22. ಅಹರಹರ್ಗರ್ವ: ಪರಿತ್ಯಜ್ಯತಾಮ್
ಯಾವತ್ತೂ ಗರ್ವವನ್ನು ಪರಿತ್ಯಜಿಸು
23. ದೇಹೇಹಂ ಮತಿರುಝ್ಯತಾಮ್
ಶರೀರವೇ ನಾನೆಂಬ ಮನಸ್ಸಿನ ತಪ್ಪು ಗ್ರಹಿಕೆಯನ್ನು ತೊರೆ
24. ಬುಧಜನೈರ್ವಾದ: ಪರಿತ್ಯಜ್ಯತಾಮ್
ವಿವೇಕಿಗಳೊಡನೆವಾದಮಾಡುವ ಪ್ರವೃತ್ತಿಯನ್ನು ಸಂಪೂರ್ಣವಾಗಿ ತೊರೆದುಬಿಡು