Pages

Thursday, March 31, 2011

ಎಲ್ಲರ ಸಹಕಾರ ಎಂದಿನಂತಿರಲಿ

ಮನೆಯನ್ನು ವಿಸ್ತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ವೇದಸುಧೆಯಲ್ಲಿ ನನ್ನಿಂದ ಹೊಸ ಬರಹಗಳು ವಿರಳವಾಗಬಹುದು.ಶ್ರೀ ಕವಿನಾಗರಾಜ್ ಮತ್ತು ಶ್ರೀ ರಾಘವೇಂದ್ರನಾವಡರು ಹಾಗೂ ಶ್ರೀ ವಿ.ಆರ್.ಭಟ್ಟರು ಮತ್ತು ಕವಿಸುರೇಶ್ ಇವರುಗಳ ಲೇಖನಗಳು ಇರುತ್ತವೆ.ಬರುವ ೧೦.೪.೨೦೧೧ ರಿಂದ ೨೦.೪.೨೦೧೧ ರವರಗೆ "ಯೋಗ- ವೇದ-ಸಂಸ್ಕೃತ-"ಶಿಬಿರವೊಂದನ್ನು ಹಾಸನದಲ್ಲಿ ಆಯೋಜಿಸಲಾಗಿದೆ.ಅದರ ಚಟುವಟಿಕೆಗಳನ್ನು ಸಾಧ್ಯವಾದಮಟ್ಟಿಗೂ ಅಪ್ಡೇಟ್ ಮಾಡಲಾಗುವುದು. ಉಳಿದಂತೆ ಶರ್ಮರಪುಟ, ವೇದಮಂತ್ರ, ವೇದಪಥ ಹಾಗೂ ಇನ್ನಿತರ ಪುಟಗಳು ಸದಾಕಾಲ ಹೊಸದಾಗಿಯೇ ಇರುತ್ತವೆ. ವೇದಸುಧೆಯ ಅಭಿಮಾನಿಗಳಿಗೆ ಮುಂದೆ ಇನ್ನೂ ಹೆಚ್ಚು ವಿಚಾರಗಳನ್ನು ಕೊಡಬೇಕೆಂಬ ಪ್ರಯತ್ನ ನಡೆಯುತ್ತಲೇ ಇದೆ. ಎಲ್ಲರ ಸಹಕಾರ ಎಂದಿನಂತಿರಲಿ.
-ಹರಿಹರಪುರಶ್ರೀಧರ್
ಸಂಪಾದಕ

Wednesday, March 30, 2011

ಯೋಚಿಸಲೊ೦ದಿಷ್ಟು...೨೮

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!

೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ ನುಡಿದ ಮಾತನ್ನು ಹೇಗಾದರೂ ಪಾಲಿಸಲೇ ಬೇಕು!

೪.ಸಮಯವು ನಮ್ಮನ್ನು ಕಾಯುವುದಿಲ್ಲವೆ೦ಬ ಅರಿವಿದ್ದರೂ “ ಸರಿಯಾದ ಸಮಯ“ ಕ್ಕೆ ಕಾಯುವುದು ಏಕೆ? ಎಲ್ಲಾ ಸಮಯವೂ ಸರಿಯಾದದ್ದೇ! ನಮ್ಮ ಗುರಿ ಸಾಧಿಸುವೆಡೆಗಿನ ಮತ್ತು ಕಾಲದೊ೦ದಿಗಿನ ಪಯಣದ “ತಯಾರಿ“ ಸರಿಯಾಗಿರಬೇಕಷ್ಟೇ!

೫.ಪ್ರತಿದಿನವೂ ಹೊಸ- ಹೊಸ “ನಿರೀಕ್ಷೆ“ ಗಳು ಹಾಗೂ “ನಿರಾಶೆ“ ಗಳೊ೦ದಿಗೆ ಆರ೦ಭವಾದರೂ, ಹೊಸ “ಅನುಭವ“ ಮತ್ತು ನಾಳೆಯ ಬಗ್ಗೆಗಿನ‘ ಮತ್ತಷ್ಟು ಹೊಸ “ಕನಸು“ಗಳೊ೦ದಿಗೆ ಅ೦ತ್ಯಗೊಳ್ಳುತ್ತದೆ!

೬.ಸದಾ “ಹುಡುಗಾಟ“ ವಾಡುತ್ತಲೇ ಕಾಲದೊ೦ದಿಗೆ ನಾವು ಆಟವಾಡುತ್ತಿದ್ದರೆ, ನಾವು ಗ೦ಭೀರವಾಗಿ ಜೀವನವೆನ್ನುವುದರ ಬಗ್ಗೆ ಚಿ೦ತಿಸತೊಡಗಿದಾಗ ಕಾಲವೆ೦ಬುದು ನಮ್ಮೊ೦ದಿಗೆ “ಹುಡುಗಾಟ“ ವಾಡಲು ಆರ೦ಭಿಸಿರುತ್ತದೆ!

೭. ಏನನ್ನೂ ಯೋಚಿಸದೆ ಸಮಸ್ಯೆಗಳೊ೦ದಿಗೆ ಎಡತಾಕುವುದರಿ೦ದಲೂ, ಯೋಚಿಸಿಯೂ ಅದಕ್ಕೆ ತಕ್ಕ೦ತೆ ಹೋರಾಡದಿದ್ದುದ ರಿ೦ದ ಲೂ ನಮ್ಮ ಸಮಸ್ಯೆಗಳು ನಮಗೆ ಸದಾ ಬಿಡಿಸಲಾರದ ಕಗ್ಗ೦ಟಾಗಿಯೇ ಗೋಚರಿಸುತ್ತವೆ!

೮. ನಮ್ಮ ಉತ್ತಮ ಜೀವನಕ್ಕಾಗಿ ಯಾವುದನ್ನು ಬೇಕಾದರೂ ಕಳೆದುಕೊಳ್ಳಲು ಸಿಧ್ಧರಾಗಬೇಕೆ ವಿನ, ಯಾವುದೋ ಒ೦ದಕ್ಕಾಗಿ ನಮ್ಮ ಉತ್ತಮ ಜೀವನವನ್ನಲ್ಲ!

೯. ಯಾರನ್ನಾದರೂ ತಪ್ಪು ತಿಳಿದುಕೊಳ್ಳುವುದು ಬಲು ಸುಲಭ! ಆದರೆ ನಾವು ಅವರನ್ನು “ತಪ್ಪು ತಿಳಿದುಕೊ೦ಡಿದ್ದೇವೆ‘ ಎ೦ದು ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸ!

೧೦. ನಮ್ಮ ಸಮಸ್ಯೆಗಳ ಬಗ್ಗೆ ಸುಮ್ಮನೆ ಕೇಳಿ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ಸುಮ್ಮನೇ ವಿಮರ್ಶಿಸುವ ಜನರೇ ಹೆಚ್ಚಾಗಿದ್ದು, ನಿಜವಾಗಿಯೂ ನಮ್ಮ ಸಮಸ್ಯೆಗಳ ಬಗ್ಗೆ ಸ್ಪ೦ದಿಸುವ ಮನೋಭಾವವನ್ನು ಹೊ೦ದಬಲ್ಲವರು ಕೆಲವರು ಮಾತ್ರ!

೧೧. ಮಾಡಿದ ತಪ್ಪುಗಳ ಬಗ್ಗೆ ಚಿ೦ತಿಸುತ್ತಾ ಕಾಲ ಕಳೆಯುವ ಬದಲು ತಪ್ಪುಗಳನ್ನು ಮೆಟ್ಟಿಲುಗಳನ್ನಾಗಿಸಿಕೊ೦ಡು ವಿಜಯದ ಶಿಖರ ತಲುಪುವುದೇ ಸಾಧಕನ ಲಕ್ಷಣ!

೧೨. ನೋವು ಎ೦ಬುದು ಚ೦ದಿರನ೦ತೆ! ಒಮ್ಮೆ ಅದೃಶ್ಯವಾದರೆ ಮತ್ತೊಮ್ಮೆ ಗೋಚರಿಸುತ್ತದೆ, ಒಮ್ಮೆ ಸ೦ಪೂರ್ಣವಾಗಿ ಕ೦ಡರೂ ಮತ್ತೊಮ್ಮೆ ಕಾಣಿಸಿಕೊಳ್ಳುವುದೇ ಇಲ್ಲ!

೧೩. ಸೋಮಾರಿತನವೇ ನಮ್ಮ ಅತಿ ದೊಡ್ಡ ಶತ್ರು!- ಸ್ವಾಮಿ ವಿವೇಕಾನ೦ದ

೧೪. “ಸ್ನೇಹ“ ವನ್ನು ಅನುಭವಿಸುವುದೆ೦ದರೆ, ಜೀವನಾನ೦ದಕ್ಕೆ ನಮಗೆ ದೇವರು ನೀಡಿದ ಬಲು ದೊಡ್ದ “ಆಶೀರ್ವಾದ“!

೧೫. ಪ್ರತಿಯೊ೦ದು ಸ೦ಬ೦ಧವೂ ಒ೦ದು “ಕನ್ನಡಿ“ ಇದ್ದ೦ತೆ ! ಯಾವ ಭಾಗದಲ್ಲಿ ಗುರುತಾದರೂ ಅದು ಮತ್ತೊ೦ದು ಭಾಗವನ್ನೂ ಹಾನಿಗೊಳಿಸುತ್ತದೆ!

ಗಮನಿಸಿ-ಸಹಕರಿಸಿ

ನಿತ್ಯ ಜೀವನಕ್ಕೆ ಉಪಯುಕ್ತವಾದ ಯಾವುದೇ ವೇದಮಂತ್ರಗಳು ಮತ್ತು ಅದರ  ಅರ್ಥ ಮತ್ತು ವಿವರಣೆಯನ್ನು ಯಾರೇ ಅಭಿಮಾನಿಗಳು ಲೇಖನ ರೂಪವಾಗಿ ಬರೆದು ವೇದಸುಧೆಗೆ ಕಳುಹಿಸಿಕೊಟ್ಟರೆ ಕೃತಜ್ಞತಾಪೂರ್ಕವಾಗಿ ಪ್ರಕಟಿಸಲಾಗಿವುದು.

Tuesday, March 29, 2011

ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ?

ಗೃಹಪ್ರವೇಶ ಮಾಡಿಕೊಳ್ಳಲು ವಾಸ್ತು ಹೋಮ/ಗಣಪತಿ ಹೋಮಗಳು ಅನಿವಾರ್ಯವೇ? ಅಥವಾ ವೇದೋಕ್ತವಾಗಿ ಗೃಹಪ್ರವೇಶ ಮಾಡಿಕೊಳ್ಳಲು ವೇದೋಕ್ತ ವಿಧಾನ ಹೇಗೆ? ದಯಮಾಡಿ ತಿಳಿಸುವಿರಾ? 
-ಶ್ರೀಧರ್
----------------------------------------------------------
 ಶ್ರೀ ಶ್ರೀಧರ್ ಜೀ!
ವೇದೋಕ್ತ ರೀತ್ಯಾ ಗೃಹಪ್ರವೇಶ ಮಾಡಿಸುವ ಕ್ರಮವಿದೆ. ಅದನ್ನು "ಶಾಲಾಕರ್ಮ ವಿಧಿ' ಎಂದು ಕರೆಯಲಾಗುತ್ತದೆ. ಅಗ್ನಿಹೋತ್ರವು ಅದರ ಪ್ರಧಾನ ಅಂಗ. ಅದರಲ್ಲಿ ವಾಸ್ತುಹೋಮ ಖಂಡಿತವಾಗಿ ಇರುತ್ತದೆ.
ಅದರ ನಿಜವಾದ ಅರ್ಥ ಆ ಸಂದರ್ಭದಲ್ಲಿ ವಿವರಿಸಲಾಗುವುದು.  ಅದರ ಸ್ವಲ್ಪ ಭಾಗ "ವಾಸ್ತು ಬೀಳದಿರಿ ಬೇಸ್ತು" ಪುಸ್ತಕದಲ್ಲಿದೆ.
              ಇಲ್ಲಿ ಇದುವರೆಗೂ ಬಂದ ಆಚರಣೆಗಳನ್ನು ಬಿಡುವ ಪ್ರಶ್ನೆಯಲ್ಲ ಇರುವುದು.  ಆ ಆಚರಣೆಗಳಲ್ಲಿ ಅರ್ಥವಿರುವುದನ್ನು ತಿಳಿದು ಮಾಡುವುದು ಮತ್ತು ಅರ್ಥವಿಲ್ಲದ್ದನ್ನು ಬಿಡುವುದು ಅಷ್ಟೇ.  ಅರ್ಥವಿಲ್ಲದ ಆಚರಣೆಗಳಿಂದ   ನಾವು ನಮ್ಮ ಸಾಮಾನ್ಯ ತಿಳಿವಳಿಕೆಗೂ ಅವಮಾನ ಮಾಡುತ್ತಿರುತ್ತೇವೆ.
ಈ ಬದಲಾವಣೆಯನ್ನು ಈ ವಿಷಯಗಳಿಗೆ ಇಷ್ಟಾದರೂ ತೆರೆದುಕೊಂಡಿರುವ ನಾವು, ನಮ್ಮ ಕುಟುಂಬವರ್ಗದವರೂ ಸಹಕರಿಸದಿದ್ದರೆ, ಸಾಮಾಜಿ ಸುಧಾರಣೆ ಆಗುವುದಾದರೂ ಎಂತು?
ನಿಮ್ಮ ಕುಟುಂಬವರ್ಗದವರ ಸಮಾಧಾನಕ್ಕಾಗಿ ಬೇಕಾದರೆ 'ಗಣಪತಿ' ಪೂಜೆಯನ್ನೂ ಮಾಡಬಹುದು.  (ವೇದೋಕ್ತ ಗಣಪತಿ ಬೇರೆ, ರೂಢಿಯ ಗಣಪತಿ ಬೇರೆ.  ಆ ಬಗ್ಗೆ ಅಲ್ಲಿ ಆಗ ವಿವರಣೆ ನೀಡಿದರೆ ಆಯಿತು.)
ಅವರ ಸಮಾಧಾನಕ್ಕಾಗಿ ಸತ್ಯನಾರಾಯಣ ಪೂಜೆ = ಸತ್ಯನಾರಾಯಣ ಯಜ್ಞವನ್ನೂ ಮಾಡೋಣ. ಅದಕ್ಕೇನಂತೆ.
ಹಿಂದೊಮ್ಮೆ ವೈದಿಕ ಸತ್ಯನಾರಾಯಣ ಪೂಜೆಯನ್ನು ಪುತ್ತಿಗೆ ಸ್ವಾಮೀಜಿಯವರ ಸಾನ್ನಿದ್ಧ್ಯದಲ್ಲಿ ಮಾಡಿರುತ್ತೇನೆ.  ಸಣ್ಣ ವ್ಯತ್ಯಾಸ.  ಫೋಟೋ ಬದಲಿಗೆ ಯಜ್ಞ.  ನಿಜವಾಗಿ ಸತ್ಯಕ್ಕೆ ಸಂಬಂಧಪಟ್ಟ ವೈದಿಕ ಮಂತ್ರಗಳ ವಿನಿಯೋಗ ಅಷ್ಟೇ.  ಎಲ್ಲವೂ ಅರ್ಥಸಹಿತವಾದ್ದರಿಂದ ಇವುಗಳ ಶ್ರೇಷ್ಠತೆ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರ ಮನಸ್ಸನ್ನೂ ಸೂರೆಗೊಳ್ಳುವುದು ಖಚಿತವೆಂದು ಹಿಂದಿನ ಅನುಭವಗಳ ಆಧಾರದ ಮೇಲೆ ಹೇಳಬಹುದು.  (ನಿಜ.  ಹಿಂದೆ ಆಗಿದೆ ಎಂದ ಮೇಲೆ ಈ ಸಲವೂ ಆಗುತ್ತದೆಂಬ ಖಾತರಿ ಇಲ್ಲ. ಆದರೆ ಖಂಡಿತವಾಗಿಯೂ ಸಾಧ್ಯತೆ ಹೆಚ್ಚಿದೆ.  ಶುದ್ಧ ಮನಸ್ಸಿನಿಂದ ಪ್ರಯತ್ನಿಸೊಣ.) 
-ಸುಧಾಕರ ಶರ್ಮಾ.

Monday, March 28, 2011

ಸಾರ್ಥಕಪಡಿಸಿಕೊಳ್ಳೋಣ

ವೇದಸುಧೆಯ  ಅಭಿಮಾನಿಗಳೇ,
ಈಗಾಗಲೇ ಹಲವು ಭಾರಿ ವೇದಸುಧೆಯ ಉದ್ಧೇಶವನ್ನು ತಿಳಿಸಿದ್ದಾಗಿದೆ. ಬಹುಶ: ಇಂದಿನ ದಿನಗಳಲ್ಲಿ ಇದು ಒಂದು ವಿಶಿಷ್ಟ ಪ್ರಯೋಗ.  ಹಲವು ನೂರು ವರ್ಷಗಳಿಂದ ನಾವು ಅನುಸರಿಸಿಕೊಂಡುಬಂದಿರುವ ಪೂಜಾಪದ್ದತಿಗಳಬಗೆಗಾಗಲೀ ವ್ರತಕಥೆಗಳಬಗೆಗಾಗಲೀ, ಆಚಾರಪದ್ದತಿಗಳ ಬಗೆಗಾಗಲೀ ನಮಗೆ ಪ್ರಶ್ನೆಮಾಡಿಯೇ ಗೊತ್ತಿಲ್ಲ.ಅರ್ಥವನ್ನು ಹೇಳಿಕೊಟ್ಟವರಿಲ್ಲ.  ಗುರುವಿನ ಮೂಲ, ಋಷಿಯ ಮೂಲ, ನದಿಯಮೂಲವನ್ನು ಹುಡುಕಬಾರದೆಂಬ[ಕೆದಕಬಾರದೆಂಬ] ದೊಡ್ದವರೆನಿಸಿಕೊಂಡವರ ಮಾತನ್ನು ಇದುವರೆವಿಗೂ ಚಾಚೂತಪ್ಪದೆ ಪಾಲಿಸಿಕೊಂಡುಬಂದ ಪರಿಣಾಮವಾಗಿ ಎಲ್ಲಾ ಕ್ಷೇತ್ರದಲ್ಲೂ ಅನೀತಿ ತಾಂಡವವಾಡುತ್ತಿರುವುದನ್ನು ಯಾರೂ ಗಮನಿಸಬಹುದಾಗಿದೆಯಲ್ಲವೇ? ನಮ್ಮ ಸುದೈವಕ್ಕೆ ಸುಧಾಕರಶರ್ಮರಂತಹವರು ವೇದದ ಅರ್ಥವನ್ನು ತಿಳಿಸುತ್ತಾ ನಿಜವಾದ ಭಗವಂತನ ಅಸ್ತಿತ್ವವನ್ನು ವೇದದ ಆಧಾರದಲ್ಲಿ ಪ್ರತಿಪಾದಿಸುತ್ತಾ ನಮಗೆ ಒಂದು ಉತ್ತಮ ಮಾರ್ಗವನ್ನು ತೋರಿಸುತ್ತಿದ್ದಾರೆ. ನಮಗೆ ನಿಜವಾಗಿ ಅಡ್ಡಿಯಾಗುತ್ತಿರುವ ಆಚರಣೆಗಳಬಗೆಗೆ ಅಂತಹವರಿಂದ ತಿಳಿದುಕೊಳ್ಳಲು ಅವಕಾಶವಿದೆ. ಸಾರ್ಥಕಪಡಿಸಿಕೊಳ್ಳೋಣ.

ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ

ಶ್ರೀ ಮಂಜುನಾಥಶರ್ಮರ ಪ್ರಶ್ನೆಗಳಿಗೆ ಶ್ರೀ ಸುಧಾಕರಶರ್ಮರು ಅಭಿಮತ ಪುಟದಲ್ಲಿ ನೀಡಿರುವ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಶ್ನೆಯನ್ನು ಯಾರೇ ಆಗಲೀ ದಯಮಾಡಿ ತಮ್ಮ ಈ ಮೇಲ್ ವಿಳಾಸವನ್ನು ಕೊಟ್ಟು ವೇದಸುಧೆಯೊಡನೆ ಸಂಪರ್ಕದಲ್ಲಿದ್ದರೆ ಒಳ್ಳೆಯದು, ಇನ್ನು ಮುಂದೆ ಈ ಮೇಲ್ ವಿಳಾಸವಿಲ್ಲದೆ ಅನಾನಿಮಸ್ ಹೆಸರಿನಲ್ಲಿ ಕೇಳಿದ ಪ್ರಶ್ನೆಗಳನ್ನು ಗಮನಿಸಲಾಗುವುದಿಲ್ಲವೆಂದು ಅನಿವಾರ್ಯವಾಗಿ ಹೇಳಬೇಕಾಗಿದೆ. ಕಾರಣ ಶ್ರೀ ಮಂಜುನಾಥಶರ್ಮರಿಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಲು ವಿನಂತಿಸಿದ್ದರೂ ಈವರಗೆ ವೇದಸುಧೆಗೆ ತಮ್ಮ ಈ ಮೇಲ್ ವಿಳಾಸವನ್ನು ನೀಡಿರುವುದಿಲ್ಲ. ಅಥವಾ ಅವರು ವೇದಸುಧೆಯಲ್ಲಿ ಪ್ರಶ್ನೆಯನ್ನು ಕೇಳಿದನಂತರ ವೇದಸುಧೆಗೆ  ಪುನ: ಭೇಟಿನೀಡಿದ್ದರೋ ಇಲ್ಲವೋ ತಿಳಿಯದು. ಈಗಲಾದರೂ ದಯಮಾಡಿ ಶ್ರೀ ಮಂಜುನಾಥಶರ್ಮರು ತಮ್ಮ ಈಮೇಲ್ ವಿಳಾಸವನ್ನು ನೀಡಲು ಕೋರಿಕೆ.
---------------------------------------------------------               
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ 
------------------------------------------------------
 ಶ್ರೀ ಸುಧಾಕರಶರ್ಮರ ಪ್ರತಿಕ್ರಿಯೆ
.
ನಾಲ್ಕೂ ವೇದಗಳಿಂದ ಆಯ್ದ ನೂರು ನೂರು ಮಂತ್ರಗಳ (ಒಟ್ಟು 400 ಮಂತ್ರಗಳು) ಪುಸ್ತಕ `ವೇದಜ್ಯೋತಿ' ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಪ್ರತಿಗಳು ಮುಗಿದಿರುವುದರಿಂದ ಪುನಃ ಮುದ್ರಣ ಮಾಡುವ ಸಿದ್ಧತೆ ನಡೆಯುತ್ತಿದೆ. ಆದಾಗ ತಿಳಿಸಲಾಗುವುದು. ವಯಸ್ಸಿನ ಚಿಂತೆ ಮಾಡದೇ ಇಂದಿನಿಂದಲೇ ವೇದಾಧ್ಯಯನ ಪ್ರಾರಂಭಿಸಿ. ನಮ್ಮ ಸಾಧನೆಯು ಸಂಸ್ಕಾರರೂಪದಲ್ಲಿ ನಮ್ಮೊಂದಿಗೆ ಮುಂದಿನ ಜನ್ಮಗಳಿಗೂ ಬರುವದರಿಂದ ನಷ್ಟವೇನಿಲ್ಲ! ಹಿಂದಿನಿಂದ ಬಂದಿರುವ ಪೂಜಾಪದ್ಧತಿಯ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆಂದು ಪ್ರತಿಕ್ರಿಯೆ ನೀಡಿದ್ದೀರಿ. ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಮೊದಲು ಧನ್ಯವಾದಗಳು. ಯಾವುದೇ ಆದಾರವಿಲ್ಲದೇ, ನಮ್ಮ ವೈಯಕ್ತಿಕ ಅಭಿಪ್ರಾಯದಿಂದ ಪ್ರೇರಿತರಾಗಿ, ಅದರ pros and cons ಏನು ಎಂಬುದರ ಬಗ್ಗೆ ನಿರ್ಲಕ್ಷ್ಯದಿಂದ ಮಾತನಾಡುವುದನ್ನು `ಹಗುರ' ಎಂದು ತಿಳಿಯಬಹುದೇ? ನಾನಾಡಿದ ಮಾತುಗಳು ಅತ್ಯಂತ ಗಂಭೀರ, ಖಂಡಿತರಾಗಿಯೂ ಹಗುರವಲ್ಲ. ದೇವಾನುದೇವತೆಗಳು, ಅವುಗಳಿಗೆ ಚಿತ್ರ-ವಿಚಿತ್ರ ಆಕಾರಗಳ ಕಲ್ಪನೆ, ವಿಧ-ವಿಧವಾದ ಪೂಜಾವಿಧಾನಗಳು (ಕುರಿ-ಕೋಳಿ ಕತ್ತರಿಸುವವರೆಗೂ) ಹುಟ್ಟಿಕೊಂಡು ಒಂದಾಗಿರಬೇಕಾಗಿದ್ದ ಮಾನವ ಸಮಾಜ ಒಡೆದು ಚೂರಾಗಿರುವುದು ಕಾಣುತ್ತಿಲ್ಲವೇ ಸ್ವಾಮಿ! ಇವುಗಳ ಹೆಸರಿನಲ್ಲಿ ಇಂದಿನವರೆಗೂ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ, ಶೋಷಣೆ, ರಕ್ತಪಾತಗಳು ಸಾಲದೇ?! ನೀವೇನೋ ಸಾತ್ವಿಕ ಪೂಜಕರಿರಬಹುದು, ಆದರೆ ವೇದವಿರುದ್ಧವಾದ, ಮಾನವೀಯತೆಯನ್ನು ಒಳಗೊಳ್ಳದ, ಜ್ಞಾನಕ್ಕೆ ಜಾಗವಿಲ್ಲದ ಮೌಢ್ಯ ಆಚರಣೆಗಳನ್ನು ತಿರಸ್ಕರಿಸದೇ ವಿಧಿಯಿಲ್ಲ. ಹಾಗೆ ಮಾಡದೇ ಹೋದರೆ, ಮತ್ತೊಬ್ಬರ ಹಾನಿಕಾರಕ, ಅಮಾನವೀಯ ಪೂಜಾವಿಧಾನಗಳಿಂದ ಸಮಾಜವನ್ನು ರಕ್ಷಿಸುವುದಾದರೂ ಹೇಗೆ? ಇಲ್ಲಿ ನಮ್ಮ ಕರ್ತವ್ಯವೇನೂ ಇಲ್ಲವೇ? `ಆಗಮಾರ್ಥಂತು ದೇವಾನಾಂ ..' ವೇದಮಂತ್ರವಲ್ಲ! ನಾಲ್ಕೂ ವೇದಗಳಲ್ಲಿ ಎಲ್ಲಿಯೂ ಇಲ್ಲ!! ಸಂಸ್ಕೃತದಲ್ಲಿ ಯಾರೋ ಮಾಡಿರುವ ಅವೈಜ್ಞಾನಿಕ ಶ್ಲೋಕ. ದೇವ ಎಂದಾಗ ಭಗವಂತನೆಂದು ಗ್ರಹಿಸುವುದಾದರೆ ಆ ಭಗವಂತನು ಸರ್ವವ್ಯಾಪಿ ಹೊಸದಾಗಿ ಬರುವ ಪ್ರಸಂಗವಿಲ್ಲ! ದೇವ ಎಂದರೆ ದಿವ್ಯಜನ, ದಿವ್ಯಗುಣ ಎಂದು ಅರ್ಥ ಮಾಡಿಕೊಳ್ಳುವುದಾದರೆ, ಅದಕ್ಕೆ ಬಾಹ್ಯ ಕೊಂಬು, ಕಹಳೆ, ಘಂಟೆ, ಜಾಗಟೆಗಳು ಬೇಕಿಲ್ಲ. ನಿಜವಾದ ಸಜ್ಜನರು (ದೇವಜನರು) ಅದನ್ನೆಂದಿಗೂ ನಿರೀಕ್ಷೆ ಮಾಡುವುದಿಲ್ಲ. ಅಂತರಂಗಶುದ್ಧಿಯಿಂದ ನಮ್ಮೊಳಗೆ ಮೂಡಿಸಿಕೊಳ್ಳಬೇಕಾದ್ದು ದಿವ್ಯಗುಣಗಳು. ಘಂಟೆ-ಜಾಗಟೆಗಳಿಂದ ಮನುಷ್ಯರು ಸಜ್ಜನರಾಗುತ್ತಾರೆ ಎಂಬ ಬುಡರಹಿತ ತರ್ಕವನ್ನು ತಾವು ಮಾಡುವುದಿಲ್ಲ ಎಂದು ಭಾವಿಸಿದ್ದೇನೆ. Concentrationಗೆ ಬೇಕಾದ್ದು "ಏಕಾಗ್ರ", A very fine point. ಯೋಗಶಾಸ್ತ್ರದಲ್ಲಿ ಇದಕ್ಕಾಗಿ "ಭ್ರೂಮಧ್ಯ ಭಾಗ" "ನಾಸಿಕಾಗ್ರ" ಹೇಳಿರುವಾಗ ವಿವಿಧ ಗಾತ್ರದ ಬೊಂಬೆಗಳೇ ಬೇಕೆಂಬುದು ಎಷ್ಟು ಸಮಂಜಸ? ಭಗವಂತನ ಸ್ವರೂಪದ ಬಗ್ಗೆ ವೇದಗಳು ಹೇಳಿರುವುದನ್ನು ಸಾಧಾರವಾಗಿ ನಿಮ್ಮ, ನಿಮ್ಮಂತಹವರ ಮುಂದೆ ಯಥಾಶಕ್ತಿ, ಯಥಾಮತಿ ಮುಂದೆ ಇಡಬಲ್ಲೆ. ಒಪ್ಪುವ, ಒಪ್ಪದಿರುವ, ಭಾಗಶಃ ಒಪ್ಪುವ ನಿಮ್ಮ ವೈಚಾರಿಕ ಸ್ವಾತಂತ್ರ್ಯವನ್ನು ಸದಾಕಾಲ ಗೌರವಿಸುತ್ತೇನೆ. ಸತ್ಯದೊಂದಿಗೆ, ಒಂಟಿಯಾಗಾದರೂ ಸರಿ, ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅಥವಾ ಸತ್ಯವೋ, ಮಿಧ್ಯೆಯೋ ಆ ಚಿಂತೆಯಿಲ್ಲದೆ, ಗುಂಪಿನೊಂದಿಗೆ ಇರಬೇಕೆಂಬುದು ನಿಮ್ಮ ಆಯ್ಕೆಯೋ, ಅದು ನಿಮ್ಮ ನಿರ್ಣಯಕ್ಕೆ ಬಿಟ್ಟ ವಿಷಯ. ನನ್ನ ವೈಯಕ್ತಿಕ ಆಯ್ಕೆ ಮೊದಲನೆಯದು ಎಂದು ಹೇಳಬೇಕಾದ್ದಿಲ್ಲ! ಅದರ ಫಲಾಫಲಗಳಿಗೆ ಅವರವರೇ ಹೊಣೆ. 
ಉಪನಯನವಿರುವುದೇ ವ್ಯಕ್ತಿಯನ್ನು ಅಹಿಂಸೆ, ಸತ್ಯ, ಅಸ್ತೇಯ ಮೊದಲಾದ ಮಾನವೀಯ ಮೌಲ್ಯಗಳ ಆಧಾರದ ಮೇಲೆ ರೂಪಿಸುವುದೇ ಆಗಿರುವಾಗ,ಅದಕ್ಕೆ ಹೊಂದುವ ನಿಯಮಗಳನ್ನು ಕಡ್ಡಾಯ ಮಾಡುವುದು ಅನಿವಾರ್ಯವಾಗುತ್ತದೆ. ನಿಮ್ಮ ಮಾತು ಹೇಗಿದೆಯೆಂದರೆ, ನ್ಯಾಯಾಧೀಶರಾಗುವವರಿಗೆ, ಪಕ್ಷಪಾತ ಮಾಡಬಾರದು ಎಂಬ ನಿಯಮವನ್ನು ಹೇರಬಾರದು ಎಂಬಂತಿದೆ!! ಅವರನ್ನು ದೂರವಿಡುವ ಪ್ರಶ್ನೆಯಿಲ್ಲ. ಆಹಿಂಸೆಯನ್ನು ಇನ್ನು ಮುಂದಾದರೂ ಪಾಲಿಸುವ ಸಂಕಲ್ಪ ಮಾಡಿದಲ್ಲಿ One and only condition, ಅವರನ್ನು ಎಲ್ಲ ರೀತಿಯಿಂದಲೂ ನಮ್ಮೊಡನೆ ಸೇರಿಸಿಕೊಂಡು ಕೆಲಸ ಮಾಡುತ್ತೇವೆ. ಇಷ್ಟು ವಿಶಾಲವಾದ ಮನೋಭಾವವನ್ನು, ನೀವು ಇಂದು ಸಮರ್ಥಿಸುತ್ತಿರುವ ಯಾವುದೇ ಸಂಪ್ರದಾಯದಲ್ಲಿ ತೋರಿಸಬಲ್ಲಿರಾ? ಅಥವಾ ನೀವಾದರೂ ಪಾಲಿಸಬಲ್ಲಿರಾ? ಇದು 100% ಪ್ರಾಕ್ಡಿಕಲ್. ಅಂತಹ ಪರಿವರ್ತನೆಗೆ ಸಂಕಲ್ಪ ಮಾಡಿದ ಅನೇಕರಿಗೆ ಉಪನಯನ, ವೇದಾರಂಭ ಸಂಸ್ಕಾರಗಳನ್ನು ನೀಡಿ ಅವರು ಯೋಗ್ರ ಪ್ರಜೆಗಳಾಗಿ ಬಾಳುತ್ತಿರುವ ಸಾಕ್ಷಿಗಳು ನಮ್ಮ ಮುಂದಿವೆ. ಕನಿಕರ ಉಪಯೋಗವಿಲ್ಲ ಮಂಜುನಾಥರೇ! ಅಸತ್ಯವನ್ನೇನಾದರೂ ಆಡಿದ್ದರೆ ತಿದ್ದಿ. ತಿದ್ದಿಕೊಳ್ಳುವೆ. ಯಾರಿಗೋ ಅಪ್ರಿಯವಾಗುತ್ತದೆಂದು (Actually ತಿದ್ದಿಕೊಳ್ಳಬೇಕಾದವರು ಅವರಿರಬಹುದು!)ಸತ್ಯವನ್ನು ಆಡುವುದರಿಂದ ಹಿಂದೆ ಸರಿಯುವ ಸಲಹೆ ನೀಡುತ್ತೀರಾ? ಆದಷ್ಟು ಪ್ರಿಯವಾಗಿ ಹೇಳಬೇಕೆಂಬುದನ್ನು ಒಪ್ಪಿಯಾಗಿದೆ, ನಿರಂತರ ಆ ಪ್ರಯತ್ನದಲ್ಲಿದ್ದೇನೆ, ಇತರರಿಗೂ ಅದನ್ನೇ ವಿನಂತಿಸಿಕೊಳ್ಳುತ್ತಿರುತ್ತೇನೆ. ಸಂಗೀತಕ್ಕೆ ಎರಡು ಮುಖ. ರಾಗ-ಭಾವ ಒಂದು ಮತ್ತೊಂದು ಇವುಗಳ ಹಿಂದಿರುವ ಸ+ಹಿತವಾದ ಸಾಹಿತ್ಯ, ಜ್ಞಾನ. ಎರಡೂ ಕೂಡಿದಲ್ಲಿ ಲಾಭ ಹೆಚ್ಚು - ಹಾಡುವವರಿಗೂ, ಕೇಳುವವರಿಗೂ. ಉತ್ತಮ ಸಂಗೀತ ಕೇಳಿದ ಅಣ್ಣ-ತಮ್ಮಂದಿರು ತಮ್ಮ Court case ಹಿಂದಕ್ಕೆ ಪಡೆಯಬೇಕು! ಅತ್ತೆ-ಸೊಸೆ ಜಗಳ ನಿಲ್ಲಬೇಕು!! ಅಪ್ಪ-ಅಮ್ಮ ಮಕ್ಕಳ ನಡುವೆ ಪ್ರೀತಿಯ ವಾತಾವರಣ ನಿರ್ಮಾಣವಾಗಬೇಕು!!! ಕಲ್ಪನೆಯಲ್ಲ, ಸಾಮಗಾನದಿಂದ ಇದನ್ನು ಸಾಧಿಸಬಹುದು. (ಒಂದಷ್ಟು ಪ್ರಯೋಗ, ಪರೀಕ್ಷೆಗಳ ಅಗತ್ಯವಿದೆ. ಆಸಕ್ರ ಸಂಶೋಧಕರಿದ್ದೆರೆ ನನ್ನ ಬಳಿ ಇರುವ ಮಾಹಿತಿಯನ್ನು ನೀಡುತ್ತೇನೆ. ವೇದವೇ ಎಲ್ಲದಕ್ಕೂ ಅಂತಿಮ ಎಂಬುದು ನನ್ನ ನಂಬಿಕೆಯಲ್ಲ. ಸತ್ಯಾಸತ್ಯತೆಯ ಪರೀಕ್ಷೆಗಾಗಿ ಮುಕ್ತಮನಸ್ಸಿನಿಂದ ಯಾರೂ ಬೇಕಾದರೂ ವೇದಗಳ ಅಧ್ಯಯನವನ್ನು ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಮಾಡಿನೋಡಲಿ. ನಿಮ್ಮ ಮಾತುಗಳ ಮೊದಲಲ್ಲಿ ನೀವು ಹೇಳಿದ 'ಪೂರ್ವದಿಂದ ಬಂದುದಕ್ಕೆ' ಸಿಲುಕಿಕೊಂಡೇ, ಅದರ ನೇರಕ್ಕೇ ನಮಗೆ ಉತ್ತರ ಬೇಕು ಎನ್ನುವುದಾದರೆ, 'ಪೂರ್ವದಿಂದ ಬಂದುದು' ಅಂತಿಮವಾಗುವುದಕ್ಕೆ ಏನು ಯೋಗ್ಯತೆ ಪಡೆದಿದೆ ಎಂದು ಪ್ರಶ್ನಿಸದೇ ವಿಧಿಯಿಲ್ಲ! ಇಷ್ಟಂತೂ ನಿಜ ಎಲ್ಲ ಪೂರ್ವಗಳಿಗೂ ಪೂರ್ವವಾದದ್ದೇ ವೇದ = ಜ್ಞಾನ!!!

Friday, March 25, 2011

ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಕಳೆದ ಒಂದು ಸಾರ್ಥಕ ಸಂಜೆ

ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು

ಪಂಡಿತರ ಸಾನ್ನಿಧ್ಯದಲ್ಲಿನ ಸಂತಸ - ಕವಿ ನಾಗರಾಜ್ ಪತ್ನಿ ಭಾರತಿಯೊಂದಿಗೆ


      ಪಂ. ಸುಧಾಕರ ಚತುರ್ವೇದಿಯವರು ೧೮೯೭ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, ೧೩ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಅವರು ಹಿಂದೊಮ್ಮೆ ’ವಿಜಯ ಕರ್ನಾಟಕ’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. ’ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್’ - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಬರಲಿರುವ ರಾಮನವಮಿಗೆ ೧೧೫ ವರ್ಷಗಳಿಗೆ ಕಾಲಿರಿಸಲಿರುವ ಇವರು ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನಲ್ಲಿ ಶ್ರೀ ಕೃಷ್ಣಸೇವಾಶ್ರಮದ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ಇವರ ಮನೆಯಲ್ಲಿ ಸತ್ಸಂಗ ಇದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಳೆದ ೧೯-೦೩-೨೦೧೧ರಂದು ನನ್ನ ಪತ್ನಿ ಮತ್ತು ಮಗನೊಂದಿಗೆ ಅಂತಹ ಒಂದು ಸತ್ಸಂಗದಲ್ಲಿ ಪಾಲುಗೊಂಡದ್ದು ನನ್ನ ಪುಣ್ಯವಿಶೇಷ.





     ಸರಿಯಾಗಿ ಸಾಯಂಕಾಲ ೫-೩೦ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ (೫-೨೫ರಲ್ಲಿ ಸಮಯ ವಿಚಾರಿಸಿದ ಅವರು, ಇನ್ನೂ ೫ ನಿಮಿಷವಿದೆ ಎಂದು ಹೇಳಿದ್ದರು) ಮೊದಲಿಗೆ ಸುಮಾರು ೧೫-೨೦ ನಿಮಿಷಗಳ ಕಾಲ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಭಾಗವಹಿಸಿದ ಅಗ್ನಿಹೋತ್ರಕ್ಕೆ ನಾವು ಸಾಕ್ಷಿಯಾದೆವು. ನಂತರದಲ್ಲಿ ಸುಮಾರು ೪೫-೫೦ ನಿಮಿಷಗಳ ಕಾಲ ಪಂ. ಸುಧಾಕರ ಚತುರ್ವೇದಿಯವರು ಬಂದಿದ್ದವರಿಗೆ ತಮ್ಮ ವಿಚಾರಗಳನ್ನು ಮುಂದಿಟ್ಟರು. ವಯೋಮಾನದ ಕಾರಣ ಕೆಲವು ಪದಗಳು ಅಸ್ಪಷ್ಟವೆಂದೆನಿಸಿದರೂ ಗಮನವಿರಿಸಿದರೆ ಅರ್ಥವಾಗುತ್ತಿತ್ತು. ಅವರು ತಿಳಿಸಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸಿ ಈ ಲೇಖನ. ಅವರ ಅಂದಿನ ವಿಚಾರದ ತುಣುಕುಗಳು, ಇದೋ ನಿಮ್ಮ ಮುಂದೆ:

ವಿಚಾರ ಮಾಡೋಣ

     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ.
     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ||

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ. [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು 'ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು' ಎಂದು ಹೇಳಿದ್ದರು.

     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.

     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು,'ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ?' ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ? ಹಸಿವಾದಾಗ 'ಭವತಿ ಭಿಕ್ಷಾಂದೇಹಿ'ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ? ಸ್ವಾಮಿ ಶ್ರದ್ಧಾನಂದರು ಹಾಸ್ಯವಾಗಿ ಹೇಳುತ್ತಿದ್ದರು - 'ದೇಶಕ್ಕೆ ಸ್ವಾತಂತ್ರ್ಯ ಬಂದು ನಾನು ಪ್ರಧಾನ ಮಂತ್ರಿಯಾದರೆ ಮಾಡುವ ಮೊದಲ ಕೆಲಸವೆಂದರೆ ಸಾಧು-ಸಂತರೆನಿಸಿಕೊಂಡವರನ್ನೆಲ್ಲಾ ಹಿಡಿದು ಮಿಲಿಟರಿಗೆ ಸೇರಿಸಿಬಿಡುತ್ತಿದ್ದೆ! ಮೊದಲೇ ಬಡ ದೇಶ, ಒಂದಿಷ್ಟು ಭಿಕ್ಷುಕರು ಕಡಿಮೆಯಾಗಲಿ!'

     ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಹೇಳುವವರನ್ನು ನೋಡಿದ್ದೇನೆ - ಅವರು ಕಂಡೆವೆಂದು ಹೇಳುವ ಪರಮಾತ್ಮ ಅಂದರೆ ಮೂರು ಕಣ್ಣಿನ ಶಿವ, ನಾಲ್ಕು ತಲೆಯ ಬ್ರಹ್ಮ, ಹೀಗೆ. ಇದೆಲ್ಲಾ ಬುರುಡೆ. ನಿರಾಕಾರ ಪರಮಾತ್ಮ ಎಂದೂ ಸಾಕಾರನಾಗಿರಲಿಲ್ಲ, ಆಗುವುದೂ ಇಲ್ಲ. ಕೃಷ್ಣನನ್ನು ವಿಷ್ಣುವಿನ ಅವತಾರ ಅನ್ನುತ್ತಾರೆ. ಅವತಾರ ಎಂದರೆ ಮೇಲಿನಿಂದ ಕೆಳಗೆ ಅವತರಿಸಿದವನು ಎಂದು. ಆ ಪರಮಾತ್ಮ ಮೇಲಿನಿಂದ ಕೆಳಗೆ ಇಳಿದು ಬಂದನೆಂದರೆ ಆತ ಮೊದಲು ಕೆಳಗೆ ಇರಲಿಲ್ಲವೇ? ಕೌಸಲ್ಯೆಯ ಮಗನಾಗಿ ಪರಮಾತ್ಮ ರಾಮನ ಅವತಾರದಲ್ಲಿ ಬಂದನೆಂದರೆ ಅದಕ್ಕೂ ಮೊದಲು ಭೂಮಿಯಲ್ಲಿ ದೇವರಿರಲಿಲ್ಲವೆ? ಸಾಕ್ಷಾತ್ಕಾರ ಎನ್ನುವ ಪದವನ್ನೇ ನಾನು ಬಳಸಲು ಇಚ್ಛಿಸುವುದಿಲ್ಲ. ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಪರಮಾತ್ಮ ರಾಮನೆಂದರೆ ಹೃದಯದಲ್ಲಿ ನೆಲೆಸಿರುವ, ರಮಿಸುವ ಭಗವಂತನೇ ಹೊರತು ಕೌಸಲ್ಯಾಸುತನೆಂದಲ್ಲ. ರುದ್ರನೆಂದರೆ ಲಯಕಾರಕನೆಂದು ಬಿಂಬಿಸಲ್ಪಟ್ಟವನಲ್ಲ, ಪರರ ಸಂಕಷ್ಟಗಳನ್ನು ಕಂಡು ಕಣ್ಣೀರು ಸುರಿಸುವವನು, ಪರಿಹರಿಸಲು ಸಹಕರಿಸುವವನು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು, ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ!
-0-0-0-0-0-

Thursday, March 24, 2011

ಯೋಚಿಸಲೊ೦ದಿಷ್ಟು...೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩. ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!
೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬು ದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

೬. ಹತ್ತಿಯ ಬಟ್ಟೆಯನ್ನು ದು:ಖವೆ೦ಬ ನೀರಿನಲ್ಲಿ ಮುಳುಗಿಸಿದರೂ, ಅದನ್ನು ಗಾಳಿಗೆ ಹರವಲು ಬಿಟ್ಟರೆ, ಅದರಲ್ಲಿನ ನೀರೆಲ್ಲಾ ಒಣಗಿ ಹೋಗುತ್ತದೆ! ಅ೦ತೆಯೇ ಜೀವನವೂ ಕೂಡಾ ಒ೦ದು ಹತ್ತಿ ಬಟ್ಟೆಯ೦ತೆಯೇ!

೭. ಇನ್ನೊಬ್ಬರ ತಪ್ಪುಗಳನ್ನು ಕ೦ಡೂ ಪ್ರತಿಭಟಿಸದೇ ಮೌನವಾಗಿರುವುದೆ೦ದರೆ, ತಪ್ಪು ಮಾಡುವವರಿಗೆ ಮತ್ತಷ್ಟು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದ೦ತೆಯೇ!

೮. ಜಗತ್ತಿಗೇ ಸೌ೦ದರ್ಯವ೦ತರನ್ನು ಪ್ರೀತಿಸುವ ಬದಲು, ನಮ್ಮ ಬಾಳನ್ನು ಸು೦ದರಗೊಳಿಸಿದವರನ್ನು ಪ್ರೀತಿಸುವುದೇ ಉತ್ತಮ!

೯. ಯಾರು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಾರೆಯೋ, ಅವರಾಗಲೇ ನಿಮ್ಮಿ೦ದ “ಆಕರ್ಷಿತ“ ರಾಗಿದ್ದಾರೆ೦ದು ಅರ್ಥ!

೧೦. ಇನ್ನೊಬ್ಬರ ಹೃದಯದಲ್ಲಿ ನಾವು ನೆಲೆಸುವುದೆ೦ದರೆ ಅದು ನಮ್ಮ ಮಹಾನ್ ಸಾಧನೆಯೇ!

೧೧. ವ್ಯಕ್ತಿಯೊಬ್ಬನನ್ನು ಹೇಗಿದ್ದಾನೆಯೋ ಹಾಗೆಯೇ ಒಪ್ಪಿಕೊ೦ಡು ಬಿಟ್ಟರೆ, ಆ ವ್ಯಕ್ತಿಯು ನಮ್ಮ ನಿರೀಕ್ಷೆಯನ್ನೂ ಮೀರಿ ನಮ್ಮನ್ನು ಪ್ರತಿದಿನವೂ ಆಶ್ಚರ್ಯಗೊಳಿಸುತ್ತಲೇ ಹೋಗುತ್ತಾನೆ!!

೧೨.“ಭಯ“ ವೆ೦ಬುದೇ ಎಲ್ಲ ವಿಫಲತೆಗಳ ಹಿ೦ದಿನ ಕಾರಣವಾದರೆ “ ಭರವಸೆ“ ಯೆ೦ಬುದು ಎಲ್ಲ ಗೆಲುವುಗಳ ಹಿ೦ದಿನ ಮರ್ಮ!

೧೩. ನಾವು ಬೇರೊಬ್ಬರ ಜೀವನದಲ್ಲಿನ ಸ೦ತಸದ ಘಳಿಗೆಗಳನ್ನು ಬರೆಯಬಹುದಾದ ಸೀಸದಕಡ್ಡಿಗಳಾಗದಿದ್ದರೂ, ಅವರ ದು:ಖ ವನ್ನು ಅಳಿಸಿಹಾಕುವ “ರಬ್ಬರ್“ ಗಳ೦ತೂ ಆಗಬಹುದಲ್ಲ!

೧೪.ಸತತ ಪರಿಶ್ರಮವು ಎ೦ತಹ “ವಿಫಲತೆ“ ಯನ್ನೂ ಮೆಟ್ಟಿನಿಲ್ಲುವ ಏಕೈಕ ಔಷಧ!

೧೫. ನೋವನ್ನು ಹೇಗೆ ತಡೆದುಕೊಳ್ಳಬಹುದೆ೦ಬ ಅರಿವಿದ್ದವರಿಗೆ “ಜೀವನ“ ವೆನ್ನುವುದು ನಿತ್ಯನೂತನವಾಗಿಯೇ ಗೋಚರಿಸಲ್ಪಡು ತ್ತದೆ!

Monday, March 21, 2011

ಅನುಮಾನದ ಮೇಲ್

ವೇದಸುಧೆಯ ಬಂಧುಗಳೇ,
ಇತ್ತೀಚೆಗೆ ಪರಿಚಿತರ ಮೇಲ್ ವಿಳಾಸದಿಂದ ಬರುವ  ಕೆಲವು ಮೇಲ್ ಗಳೂ ಕೂಡ ಸಂಶಯಕ್ಕೆಎಡೆಮಾಡಿಕೊಡುತ್ತಿದೆ. ವೇದಸುಧೆಯ ಬಳಗದ ಶ್ರೀ ಲಕ್ಷ್ಮೀನಾರಾಯಣ್ ರವರಿಗೆ ಹೀಗೊಂದು ಅನುಮಾನದ ಮೇಲ್ ಬಂದಿದೆ. ಶ್ರೀ ವಿಶ್ವನಾಥ ಶರ್ಮರ ಮೇಲ್ ವಿಳಾಸದಿಂದ ನನಗೂ ಇಂತದೇ ಮೇಲ್ ಬಂದಿದೆ.ಈ ಬಗ್ಗೆ ಚಿಂತನೆ ಮಾಡುವುದು ಸೂಕ್ತವೆಂದು ಕಾಣುತ್ತದೆ. ಹಾಗೊಂದು ವೇಳೆ ನಿಮ್ಮ ಪಾಸ್ ವರ್ಡ್ ನ್ನು ಯಾರಾದರೂ ಕದ್ದಿದ್ದಾರೆಂದು ನಿಮಗೆ ನಿಮಗೆ ಸಂಶಯ ಬಂದರೆ ಪಾಸ್ ವರ್ಡ್ ಕೂಡಲೇ ಬದಲಿಸಿಕೊಳ್ಳುವುದು ಸೂಕ್ತ. ಶ್ರೀ ಲಕ್ಷ್ಮೀ ನಾರಾಯಣರಿಂದ ವೇದಸುಧೆಗೆ ಬಂದಿರುವ ಈ ಮೇಲ್ ಎಲ್ಲರ ಗಮನಕ್ಕಾಗಿ ಈ ಕೆಳಗೆ ಪ್ರಕಟಿಸಲಾಗಿದೆ.

ಪ್ರಿಯ ಶ್ರೀಧರ್,
ನನಗೊಂದು ಮೇಲ್ ಬಂದಿದೆ. ಅದು ಹೀಗಿದೆ.
read message ಮೇಲೆ ಕ್ಲಿಕ್ ಮಾಡಿದರೆ , ಅದು ನನ್ನ ಬಗೆಗಿನ ಎಲ್ಲ details ಕೇಳಿ ನಂತರ ನನ್ನ ಮೇಲ್ ಅಡ್ರೆಸ್  ಮತ್ತು password ಕೇಳುತ್ತಿದೆ.
 ನೋಡುವ ಎಂದು ಹೊಸ ಪಾಸ್ವರ್ಡ್ ಕೊಟ್ಟರೆ , invalid ಎನ್ನುವ ಸೂಚನೆ ಬರಿತ್ತಿದೆ. ನನ್ನ gmail na paasword ಕೊಡಲು ಯೋಚಿಸುವಂತಾಯಿತು. ಹಾಗಾಗಿ ಇದು ಏನು , ನಿಮ್ಮ ಗಮನಕ್ಕೆ , ಬಂದಿರದ  ವಿಷಯವೇ ಹೇಗೆ , ನನ್ನ ಪಾಸ್ವರ್ಡ್  ಪಡೆಯಲು ಬೇರೆ ಯಾರೋ ಮಾಡುತ್ತಿರುವ , ವಿಷಯವೇ  ಹೇಗೆ ?
ಇದು ನಿಮಗೆ ತಿಳಿಸುವುದು ಸೂಕ್ತವೆಂದು   ನಿಮಗೆ ಬರೆಯತ್ತಿರುವೆ.,
ವಂದನೆಗಳೊಂದಿಗೆ,
ಬಿ ಎಸ್ಸ್ ಲಕಶ್ಮೀ ನಾರಾಯಣ ರಾವ್.

-----------------------------------------

ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.

ಬೆಕ್ಕಿನಮರಿಯ ಕುತೂಹಲದಿಂದಾಗಿ ಇತ್ತೀಚಿಗೆ ನನ್ನ ಆರ್ಕುಟ್ ಪ್ರೊಫೈಲ್ ಕನ್ನಕೊರಕರ ದಾಳಿಗೆ ಗುರಿಯಾಯಿತು. ಆ ಕನ್ನಕೊರಕರಿಗೆ ಕೋಟೆಯ ಹೆಬ್ಬಾಗಿಲಿನ ಬೀಗ ತೋರಿಸಿ ಕೀಲಿ ಕೈಯೆತ್ತಿ ಕೊಟ್ಟವರು ನಾವೇ ಅನ್ನುವುದು ನೂರಕ್ಕೆ ನೂರು ಸತ್ಯ. ನಾವು ಹೇಗೆ ಮಂಗಗಳು ಆದೆವೆಂಬುದನ್ನು ಮುಂದೆ ಓದಿ.
     ಹಿಂದೊಮ್ಮೆ ಸರಿಯಾಗಿ ಏಟು ತಿಂದ ಮೇಲೆ ಜಾಲ ತಾಣ ಕ್ಲಿಕ್ ಮಾಡುವ ವಿಷಯದಲ್ಲಿ ನಾನು ತುಂಬಾ ಎಚ್ಚರವಾಗಿರುತ್ತೇನೆ. ಇಂಟರ್ನೆಟ್ ಹಾಗು ಕಂಪ್ಯೂಟರ್ ಬಂದ ಹೊಸತರಲ್ಲಿ ಏನೇನೋ ಹುಡುಕಿ ಯಾವುದೋ ವೆಬ್ ಸೈಟ್ಗೆ ಹೋಗಿ ಅವಾಂತರ ಪಟ್ಟಿದ್ದೆ.(ಹಾವು ಬಿಡುವವರು ಅವರೇ ದುಡ್ಡಿಗೆ ಹಾವು ಹಿಡಿಯುವವರೂ ಅವರೇ – ಎಂಬ ಮಾತಿನ ಸಾಕ್ಷಾತ್ ಅನುಭವವಾಗಿತ್ತು.) ಡೈಲ್ ಅಪ್ ಇಂಟರ್ನೆಟ್ ನಲ್ಲೇ ತುಂಬಾ ಹಾನಿಯಾಗಿತ್ತು. ಕಂಪ್ಯೂಟರ್ ರಿ ಫಾರ್ಮೆಟ್ ಮಾಡಬೇಕಾಯಿತು. ಆಗ ಡಿಜಿಟಲ್ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕೆಲವೊಂದು ಹಾಡುಗಳನ್ನ ಬಿಟ್ಟರೆ ಹೆಚ್ಹೇನನ್ನು ಕಳೆದುಕೊಂಡಿರಲಿಲ್ಲ. ಒಮ್ಮೆ ಹಾಗೆ ಆದಮೇಲೆ ಮತ್ತೆ ಹಾಗೆಂದೂ ಆಗಿರಲಿಲ್ಲ. ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಿದ್ದರೂ ಏನೂ ಆಗಿರಲಿಲ್ಲ.
        ಆದರೆ ಮೊನ್ನೆ ಮಾತ್ರ ಆರ್ಕುಟ್ನಲ್ಲಿ ಏನಾಯಿತೆಂದರೆ —
ಅರವತ್ತಕ್ಕಿಂತ ಹೆಚ್ಚು ವಯಸ್ಸಾದ, ದೊಡ್ಡ ಶಾಲೆಯೊಂದರ ನಿರ್ದೇಶಕರಾದ, ಜ್ಯೋತಿಷ್ಯ ವಿಶಾರದರಾದ, ನನ್ನ ಕಸಿನ್ ಹೆಂಡತಿಯ ನೆಂಟರಾದ, ದೊಡ್ಡ ಫೋಟೋಗ್ರಾಫರ್ ಆದ ನನ್ನ ಆರ್ಕುಟ್ ಸ್ನೇಹಿತರೊಬ್ಬರ (ನನ್ನ ಹೋಂ ಪೇಜ್ನಲ್ಲಿ ಕಂಡ) ಅಪ್ ಡೆಟ್ ನ ಲಿಂಕ್ ಒಂದರ ಮೇಲೆ ಬೆಕ್ಕಿನ ಮರಿಯ ಕುತೂಹಲದಿಂದ ಕ್ಲಿಕ್ ಮಾಡಿದೆ.(ಅವರು ವಿನೋದಕ್ಕೆ ಆ ಸೈಟಿನ ಲಿಂಕ್ ಅಪ್ ಡೆಟ್ ಮಾಡಿಕೊಂದಿದ್ದರೆನೋ. ಬೇರೆ ಹುಡುಗ ಬುದ್ದಿಯವರು ಆ ವೆಬ್ ಸೈಟ್ ಲಿಂಕ್ ಅಪ್ ಡೆಟ್ ಮಾಡಿದ್ದರೆ ಕಣ್ಣೆತ್ತಿಯೂ ನೋಡುತ್ತುರಲಿಲ್ಲ.) ಅಷ್ಟು ಮಾಡಿದ್ದೆ ತಡ ಆರ್ಕುಟ್ ಹೋಂ ಪೇಜ್ ಪ್ರತ್ಯಕ್ಷವಾಯಿತು. ಕೆಲವೊಮ್ಮೆ ಬೇರೆ ಟ್ಯಾಬ್ ನಲ್ಲಿ ಗೂಗಲ್ ನವರ ಇತರ ಸೇವೆಗಳು ಅಂದರೆ ಬ್ಲಾಗರ್, ಜಿ ಮೇಲ್ ಕೆಲಸ ಮಾಡುತ್ತಿದ್ದು ಅಲ್ಲಿ ನಾವು ಸೈನ್ ಔಟ್ ಮಾಡಿ ಆರ್ಕುಟ್ ನ ನಮ್ಮ ಪೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದಾಗ ಅಲ್ಲೂ ಹಾಗೇ ಆಗಿ ಆರ್ಕುಟ್ ಹೋಂ ಪೇಜ್ ಬರುತ್ತಿತ್ತು. ನಾವು ಮತ್ತೊಮ್ಮೆ ನಮ್ಮ ಯುಸರ್ ನೇಮ್ ಪಾಸ್ ವರ್ಡ್ ಕೊಟ್ಟು ಮತ್ತೊಮ್ಮೆ ಲಾಗಿನ್ ಆಗಬೇಕಿತ್ತು. ಹಾಗೇನೂ ಆಯಿತೇನೋ ಎಂದು ತಿಳಿದು ಪ್ರತ್ಯಕ್ಷವಾದ ಆರ್ಕುಟ್ ಹೋಂ ಪೇಜ್ ನಲ್ಲಿ ನನ್ನ ಯುಸರ್ ನೇಮ್, ಪಾಸ್ ವರ್ಡ್ ಕೊಟ್ಟು ಎಂಟರ್ ಒತ್ತಿ ನನ್ನ ಪೇಜ್ ತೆರೆಯುವುದೇ ಕಾಯುತ್ತಿದ್ದೆ. ತೆರೆಯದಿದ್ದಾಗ ಅನುಮಾನ ಬಂದು ಆ ಸೈಟನ್ನು ಕ್ಲೋಸ್ ಮಾಡಿ ಲ್ಯಾಪ್ ಟಾಪ್ ಆಫ್ ಮಾಡಿದೆ. ಅಷ್ಟರಲ್ಲಾಗಲೇ ಬೀಗ ಮತ್ತು ಬೀಗದ ಕೈ ಕನ್ನಕೊರಕರ ಕೈ ಸೇರಿಯಾಗಿದೆ.
           ನಾನು ಮೊನ್ನೆ ರಾತ್ರಿ ಮನೆ ಸೇರುತ್ತಿದ್ದಂತೆಯೇ ಹೆಂಡತಿ ಮೊದಲು ಹೇಳಿದ ವಿಷಯ ಇಂಜಿನಿಯರ್ ಓದುತ್ತಿರುವ ನನ್ನ ಅಕ್ಕನ (ಕಸಿನ್) ಮಗ ನಮ್ಮನೆಗೆ ಫೋನ್ ಮಾಡಿ ನನ್ನ ಪ್ರೊಫೈಲ್ ಹ್ಯಾಕ್ ಆಗಿದೆಯೆಂದು ಹೇಳಿದ್ದು. ಸಾದಾರಣ ಉಟವಾದಮೇಲೆ ನೆಟ್ ತೆರೆಯುವವನು ಅಂದು ಕೂಡಲೇ ಕನೆಕ್ಟ್ ಮಾಡಿ ನನ್ನ ಆರ್ಕುಟ್ ಪೇಜ್ ನೋಡ್ತೀನಿ. ಏನಿದೆ ಅಲ್ಲಿ? ನನ್ನ ಫೋಟೋ ಬದಲು ಜೀನ್ಸ್ – ಟಿ ಶರ್ಟ್ ಧಾರಿ ನಗುಮೊಗದ ಚೆಲುವೆಯ ಚಿತ್ರ!! ಹೆಸರೂ ತುಂಬ ರಮ್ಯ."Call girl for sex"-ಅಂತ. (ಅಷ್ಟರಲ್ಲಾಗಲೇ ಕೊಂಗನೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬೇರೆ!!) ಹ್ಯಾಕ್ ಆಗಿದೆಯೆಂದು ನನ್ನ ಕೆಲವು ಮಿತ್ರರ ಹೇಳಿಕೆಗಳು. ಕೂಡಲೇ ಆನ್ ಲೈನಲ್ಲಿ ಕಾಣಿಸಿಕೊಂಡ ಒಂದಿಬ್ಬರು ಮಿತ್ರರು ಹ್ಯಾಗಾಯಿತೆಂಬ ಪ್ರಶ್ನೆ. ಒಮ್ಮೆಲೇ ಜೋರು ನಗುಬಂತು. ಸದ್ಯ ೫-೬ ಘಂಟೆ ಮಾತ್ರ ಆಗಿದ್ದದರಿಂದ ಹೆಚ್ಚಿನ ಜನ ನೋಡಿರಲಿಲ್ಲ.
 ಹತ್ತು ನಿಮಿಷದಲ್ಲೇ ಎಲ್ಲಾ ಸರಿಮಾಡಿಕೊಂಡೆ. ನಾನು ಏನೇನು ಮಾಡಿದೆನೆಂದು ಹೇಳುತ್ತೇನೆ. ನಾಳೆ ನಿಮ್ಮ ಪ್ರೋಫೈಲೂ ಹ್ಯಾಕ್ ಆಗಬಹುದು. ನೀವೂ ಹೀಗೇ ಮಾಡಿಕೊಳ್ಳಬಹುದು.
-ಆರ್ಕುಟ್ ನಿಂದ ಸೈನ್ ಔಟ್ ಮಾಡಿ ಗೂಗಲ್ ಅಕೌಂಟ್ಗೆ ಹೋಗಿ ಸೈನ್ ಇನ್ ಮಾಡಿದೆ.
-ಪಾಸ್ ವರ್ಡ್ ಚೇಂಜ್ ಕ್ಲಿಕ್ ಮಾಡಿ ಹೊಸ ಪಾಸ್ ವರ್ಡ್ ಪಡೆದೆ.
-ಈಗ ಮತ್ತೆ ಹೊಸ ಪಾಸ್ ವರ್ಡ್ ನಿಂದ ಆರ್ಕುಟ್ ಲಾಗ್ ಇನ್ ಆಗಿ ಪ್ರೊಫೈಲನ್ನು ಹೊಸದಾಗಿ ಎಡಿಟ್ ಮಾಡಿ ಹಾರ್ಡ್ ಡಿಸ್ಕ್ ನಿಂದ ನನ್ನ ಫೋಟೋ ಅಪ್ ಲೋಡ್ ಮಾಡಿಕೊಂಡೆ. ಸ್ನೇಹಿತರಿಗೆಲ್ಲ ಸುದ್ದಿ ಮುಟ್ಟಿಸಿದ್ದಕ್ಕೆ ಧನ್ಯವಾದ ಹೇಳಿದೆ.
-ಹ್ಯಾಕರ್ ನನ್ನನ್ನು ಸೇರಿಸಿದ ಯಾವ್ಯಾವುದೋ ಕಮ್ಯೂನಿಟಿಯಿಂದ ಹೊರಬಂದೆ.
      ಇಲ್ಲಿ ನಾನು (ನಾವು) ತಪ್ಪದೇ ಧನ್ಯವಾದ ಹೇಳಬೇಕಾಗಿರುವುದು ಆ ಪುಣ್ಯಾತ್ಮ ಹ್ಯಾಕರ್ ನಿಗೆ!!!! ನಿಜಕ್ಕೂ ಪುಣ್ಯಾತ್ಮ. ಆತ ಏನು ಬೇಕಾದರೂ ಮಾಡಬಹುದಿತ್ತು. ಬ್ಲಾಗುಗಳನ್ನ, ಮೇಲ್ಗಳನ್ನ ಹಾಗೂ ಪಿಕಾಸದಲ್ಲಿದ್ದ ಅನೇಕ ನೂರು ಫೋಟೋಗಳನ್ನ ಅಳಿಸಿ ಹಾಕಬಹುದಿತ್ತು. ಆದರೆ ಹಾಗಾಗಿರಲಿಲ್ಲ.

         ನೀವೂ ಹ್ಯಾಕರ್ ದಾಳಿ ಅನುಭವ ಪಡೆಯಬೇಕೇ? ಅಥವಾ ನಿಮ್ಮ ಸ್ನೇಹಿತರಿಗೆ ಆ ಅನುಭವ ಕೊಡಬೇಕೇ?

ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು, ನಿಮ್ಮ ಸಮಝಾಯಿಶಿ ಬೇಕು.

ಶ್ರೀ ಮಂಜುನಾಥಶರ್ಮರು ಅಭಿಮತದಲ್ಲಿ ಬರೆದಿರುವ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಇದನ್ನು ಶರ್ಮರ ಗಮನಕ್ಕೆ ತರಲಾಗುವುದು.
----------------------------------------
ಶ್ರೀ ಮಂಜುನಾಥಶರ್ಮರೇ, 
ನಿಮ್ಮ ಮೇಲ್ ವಿಳಾಸ ಕೊಟ್ಟಿದ್ದರೆ ಚೆನ್ನಿತ್ತು. ಶ್ರೀ ಸುಧಾಕರ ಶರ್ಮರು ತುಂಬಾ ಕೆಲಸಗಳ ಒತ್ತಡದಲ್ಲಿದ್ದಾರೆ.ವೇದಸುಧೆಯನ್ನು ವಾರಕ್ಕೊಮ್ಮೆಯೂ ಇಣುಕಲು ಅವರಿಗೆ ಪುರಸೊತ್ತಿಲ್ಲವಾಗಿದೆ.ಆದರೂ ಶ್ರೀ ಶರ್ಮರಿಗೆ ದೂರವಾಣಿಮೂಲಕ ವಾದರೂ ವಿನಂತಿಸುವೆ.ಸ್ವಲ್ಪ ತಾಳ್ಮೆ ಇರಲಿ. ನಿಮ್ಮ ಸಂದೇಹಗಳು ನಿಮ್ಮೊಬ್ಬರದೇ ಅಲ್ಲ. ಹಲವರ ಅಭಿಪ್ರಾಯಗಳು ನಿಮ್ಮಿಂದ ಧ್ವನಿಸಿವೆ ಅಷ್ಟೆ.ನೂರಾರು ವರ್ಷಗಳಿಂದ ಇದೇ ಸತ್ಯವೆಂದು ನಂಬಿ ಆಚರಿಸಿಕೊಂಡು ಬಂದಿರುವ ಬಹುಪಾಲು ಎಲ್ಲರಿಗೂ  ಇಂತಹ ದ್ವಂದ್ವಗಳಿದ್ದೇ ಇದೆ. ಪರವಾಗಿಲ್ಲ. ಈ ದ್ವಂದ್ವಗಳು ನಮ್ಮ ನೆಮ್ಮದಿ ಹಾಳುಮಾಡದಂತೆ ಎಚ್ಚರವಿರಲಿ, ಅಷ್ಟೆ. ನಿಮಗೆ ಸತ್ಯವೆನಿಸಿದ ವಿಚಾರಗಳನ್ನು ನಂಬಿ ಅದರಂತೆ ನಡೆಯಿರಿ, ಅನುಮಾನವಿದ್ದ ವಿಚಾರಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ನಿಧಾನವಾಗಿ ನಮಗೆ ಸತ್ಯದ ಅರಿವಾಗುವುದರಲ್ಲಿ ಸಂದೇಹವಿಲ್ಲ.ಸಧ್ಯಕ್ಕೆ ಒಂದು ಪುಸ್ತಕದ ಬಗ್ಗೆ ತಿಳಿಸಬಹುದು. ಪಂ|| ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ ಓದಿ ನೋಡಿ.ಪುಸ್ತಕವು ಬೆಂಗಳೂರಿನ ಆರ್ಯ ಸಮಾಜದಲ್ಲಿ ಲಭ್ಯ.
-----------------------------
ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ:
ಶ್ರೀ ಮಂಜುನಾಥಶರ್ಮರು ಯೋಚಿಸಬೇಕಾದ ಒಂದಿಷ್ಟು ವಿಚಾರಗಳನ್ನು ಹೊರಹಾಕಿದ್ದಾರೆ.ನಿಮ್ಮ ಮನದ ವಿಚಾರಗಳನ್ನು
 ನೀವು ಪ್ರತಿಕ್ರಿಯಿಸಿದರೆ  ಶ್ರೀ ಸುಧಾಕರ ಶರ್ಮರಿಂದ ಕಡೆಗಾದರೂ ಸಮಝಾಯಿಶಿ ಪಡೆಯಬಹುದು.
-ಹರಿಹರಪುರಶ್ರೀಧರ್
ಸಂಪಾದಕ
--------------------------------------------------------------------------------
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ

Sunday, March 20, 2011

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ

ಈ ಮಗುವಿನ ಕಂಠದಲ್ಲಿ ಹೊರಹೊಮ್ಮಿರುವ ಈ ಹಾಡು ನಿಮಗೆ ಖಂಡಿತವಾಗಿಯೂ ಸಂತೋಷ ಕೊಡುವುದರಲ್ಲಿ ಸಂಶಯವಿಲ್ಲ.

Thursday, March 17, 2011

ಯೋಚಿಸಲೊ೦ದಿಷ್ಟು..೨೬

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!

೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶ ಕೊರತೆ ಕಾಣಿಸದು!

೩. ದುಷ್ಟನು ಉಪಕಾರ ಮಾತ್ರದಿ೦ದಲೇ ಶಾ೦ತನಾಗಲಾರ!

೪. ಕೆಡುಕನ ಕೈಯಲ್ಲಿ ಯಾವ ಆಯುಧವಿದ್ದರೂ ಕೆಡುಕೇ ಸ೦ಭವಿಸುತ್ತದೆ! ಆಯುಧ ಹರಿತವಿದ್ದಷ್ಟೂ ಅಪಾಯಗಳು ಜಾಸ್ತಿ!

೫. ದುರದೃಷ್ಟ ಎಲ್ಲರನ್ನೂ ತಟ್ಟಿದಾಗಲೇ ಒಗ್ಗಟ್ಟು ಉ೦ಟಾಗುತ್ತದೆ!

೬. ನಿಜವಾಗಿ ಕೊಡುವುದೆ೦ದರೆ ನಮ್ಮಲ್ಲಿಯ ಯಾವುದಾದರೂ ವಸ್ತುವೊ೦ದನ್ನು ಕೊಡುವುದಲ್ಲ. ನಮ್ಮನ್ನು ನಾವೇ ಕೊಟ್ಟು ಕೊಳ್ಳುವುದು!! ( ಖಲೀಲ್ ಗಿಬ್ರಾನ್)

೭. ಅದೃಷ್ಟಹೀನರೊ೦ದಿಗೆ ಸದಾ ಸ೦ಗಾತಿಯಾಗಿರುವುದೆ೦ದರೆ ವಿಪತ್ತು ಮಾತ್ರ!

೮. ನಾವು ಬೆಳಕಿನಲ್ಲಿದ್ದಾಗ ಎಲ್ಲರೂ ನಮ್ಮನ್ನು ಅನುಸರಿಸುವವರೇ. ಆದರೆ ನಾವು ಕತ್ತಲೆಯಲ್ಲಿದ್ದಾಗ ನಮ್ಮ ನೆರಳೂ ನಮ್ಮನ್ನು ಬಿಟ್ಟು ಹೋಗುತ್ತದೆ!!

೯. ಭರವಸೆಯೊ೦ದಿದ್ದರೆ, ಅತ್ಯ೦ತ ಎತ್ತರದ ಪರ್ವತವೂ ನಮ್ಮ ಕಾಲಡಿಯಲ್ಲಿಯೇ! ಎಲ್ಲಾ ಕಾರ್ಯದಲ್ಲಿಯೂ “ಸ೦ಪೂರ್ಣ ಭರವಸೆ“ ಇರಬೇಕು.

೧೦. ಆತ್ಮೀಯರು ಹತ್ತಿರದಲ್ಲಿದ್ದಾಗ ನಾವು ಅನುಭವಿಸುವ ಸ೦ತಸಕ್ಕಿ೦ತ, ಅವರ ಗೈರಿನಲ್ಲಿ ನಾವು ಅನುಭವಿಸುವ ವಿರಹವೇ ಅತ್ಯ೦ತ ನೋವು ನೀಡುವ೦ಥಾದ್ದು!

೧೧. ಯಾವುದೇ ಕಾರ್ಯದಲ್ಲಿನ ನಮ್ಮ “ಅನುಭವ“ ವು ನಮ್ಮನ್ನು “ಸುಧಾರಿತ“ ವ್ಯಕ್ತಿಗಳನ್ನಾಗಿಸಿದರೆ,“ತರಬೇತಿ“ ನಮ್ಮನ್ನು ಉತ್ತೀರ್ಣರನ್ನಾಗಿಸುತ್ತದೆ.ಆದರೆ ನಮ್ಮನ್ನು ತೃಪ್ತಿಗೊಳಿಸುವುದೆ೦ದರೆ ನಾವು ಅದರಲ್ಲಿ ತೊಡಗಿಸಿಕೊಳ್ಳಬಹುದಾದ “ತನ್ಮಯತೆ“!

೧೨. ನಿಜವಾಗಿಯೂ “ತಪ್ಪು“ಗಳು ಸ೦ಭವಿಸಿದಾಗ ಮಾತ್ರವೇ “ಕ್ಷಮೆ“ ಎ೦ಬ ಪದವು ತನ್ನ ಕಾರ್ಯವನ್ನು ಮಾಡುವುದು! ಆದರೆ ಸ೦ಭ೦ಧಗಳ ನಡುವೆ ಬಿರುಕು ಮೂಡಿದಾಗ ತಪ್ಪಿತಸ್ಥರಾಗಲೀ ಯಾ ತಪ್ಪಿನ ಪರಿಣಾಮವನ್ನು ಅನುಭವಿಸಿದವರಿ೦ದಾಗಲೀ ಪರಸ್ಪರ “ಕ್ಷಮೆ“ ಕೋರುವುದರಿ೦ದ ಯಾ ಕ್ಷಮಿಸುವುದರಿ೦ದ ಯಾವುದೇ ಬೆಳವಣಿಗೆಗಳು ಉ೦ಟಾಗಲಾರದು!

೧೩. “ಕಣ್ಣೀರು“ ಮಾಡಿದ ತಪ್ಪಿಗೆ ಪಶ್ಚಾತಾಪದ ಪ್ರತಿರೂಪವಾದರೆ “ಮೌನ“ ವು ಸ೦ಧಾನದ ಲಕ್ಷಣ! ಹಾಗೆಯೇ “ನಗು“ ವೆ೦ಬುದು ಆ ವಿಚಾರವನ್ನು “ಒಪ್ಪಿಕೊಳ್ಳು“ ವುದರ ಸ೦ಕೇತ!

೧೪. “ಭಾವನೆ“ಗಳಿಗೆ ಬೆಲೆ ಇರದ ಪಕ್ಷದಲ್ಲಿ “ಖ೦ಡಿತವಾದಿ“ ಯಾಗುವುದೇ ಉತ್ತಮ!

೧೫. ನಮ್ಮ “ಗೈರು“ ನಮ್ಮ ಆತ್ಮೀಯರ ಜೀವನವನ್ನು ಬದಲಿಸಲಾರದಾದರೆ, ನಮ್ಮ “ಪ್ರಸ್ತುತ“ ತೆಯೂ ಕೂಡ ಏನನ್ನೂ ಸಾಧಿಸಲಾರದು!

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ನಿನ್ನೆ ರಾತ್ರಿ ೯.೦೦ರಿಂದ ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ಶ್ರೀ ಶಂಕರ ಟಿ.ವಿ. ಚಾನಲ್ ಗಾಗಲೀ ಅಥವಾ ವೇದಸುಧೆಗಾಗಲೀ ಬರೆಯುವುದನ್ನು ಮರೆಯದಿರಿ.

ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್



Monday, March 14, 2011

ನಾ ನಿನ್ನ ಧ್ಯಾನದೊಳಿರಲು.

ಇದು ನನ್ನ ಬದುಕು. ನನ್ನ ಆತ್ಮ ನಿರ್ದೇಶಿಸಿದಂತೆ ನಿಸ್ಸಂಕೋಚದಿಂದ, ನಿರ್ಭಯದಿಂದ ಮತ್ತು ದ್ವಂದ್ವ ರಹಿತನಾಗಿ ಮುನ್ನಡೆಯುತ್ತೇನೆ. ನನ್ನ ಆಚರಣೆಗಳು, ನಂಬಿಕೆಗಳು ಮತ್ತು ನಡವಳಿಕೆಗಳು ನನ್ನಾತ್ಮಕ್ಕೆ ಮೆಚ್ಚುಗೆಯಾದರಷ್ಟೇ ಸಾಕು. ಪರರ ಮೆಚ್ಚುಗೆ, ಹೊಗಳ್ನುಡಿಗಳು ನನಗೆ ಬೇಡ, ಪರ-ನಿಂದೆ, ಪರಪೀಡನೆ ನನಗೆ ಬೇಡ,   ನಿನ್ನ ಕರುಣೆ ಸದಾ ಎಲ್ಲರ ಮೇಲಿರಲಿ ಎಂಬುದು ನಮ್ಮ ನಿತ್ಯ ಪ್ರಾರ್ಥನೆಯಾಗಬೇಕು. ಅದುವೇ ಭಕ್ತ-ಭಗವಂತನ ನಿಜವಾದ ನಿರ್ಮಲ ಉಭಯ ಕುಶಲೋಪರಿ! 

             ಲೌಕಿಕ ಜಗತ್ತಿನಲ್ಲಿ ತಾನು ಮಾಡಿದ್ದೆಲ್ಲವನ್ನೂ ಇತರರು ಗಮನಿಸಬೇಕು, ಮೆಚ್ಚಬೇಕು ಮತ್ತು ಬೆನ್ನು ತಟ್ಟಬೇಕೆಂಬ ಬಯಕೆ ಮಾನವ ಸಹಜವಾದದ್ದು. ಪುಟ್ಟ ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನವರಲ್ಲಿಯೂ ನಾವು ಈ ಪ್ರವೃತ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಎಲ್ಲರೂ ಎಲ್ಲರ ಗಮನ ತಮ್ಮತ್ತ ಸೆಳೆಯಲು ಅನವರತ ಪ್ರಯತ್ನ ನಡೆಸಿಯೇ ಇರುತ್ತಾರೆ. ಆದರೆ ಕೇವಲ ಕೆಲವರತ್ತ ಮಾತ್ರಾ ಎಲ್ಲರ ಗಮನ ಅವರು ಸೆಳೆಯದೆಯೇ ಹೋಗುತ್ತದೆಯೆಂಬುದೂ ಸತ್ಯವೇ! ಅನೇಕ ಸಂದರ್ಭಗಳಲ್ಲಿ ನಮ್ಮ ಚಟುವಟಿಕೆಗಳ ಬಗ್ಗೆ ಇತರರ ಕಾಳಜಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಾಯಕ ನಡೆಗಳು ನಾವು ಅನೇಕ ಕಾರ್ಯಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು, ಇನ್ನೂ ಹೆಚ್ಚಿನ ಸಾಧನೆ ಮಾಡಲು ಅತ್ಯಂತ ಪೂರಕವೂ ಆಗಿರುತ್ತದೆ ಎಂಬ ಬಗ್ಗೆ ಎರಡು ಮಾತಿಲ್ಲ. ಮನುಷ್ಯನ ಇಂತಹ ಸಾಧನೆಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಒಂದು ಆರೋಗ್ಯಕರ ಸಮಾಜದ ಲಕ್ಷಣವೂ ಹೌದು.  ಹಾಗಾಗಿ ನಮ್ಮ ನಮ್ಮ ಚಟುವಟಿಕೆಗಳು ನಮಗೂ ಮತ್ತು ಇತರರಿಗೂ ಚೇತೋಹಾರಿಯಾಗಿರಬೇಕು; ಪರಸ್ಪರ ಪೂರಕವಾಗಿರಬೇಕು. ಆಗಲೇ ಸಾಧನೆ ಮತ್ತು ಆ ಸಾಧನೆಗೆ ಸಿಕ್ಕ ಪ್ರತಿಫಲಕ್ಕೆ ನಿಜವಾದ ಅರ್ಥ ಬಂದೀತು.
ಪ್ರಾಯಶ: ಇಂತಹ ಪ್ರವೃತ್ತಿಯನ್ನು ಮಾನವನಲ್ಲಿ ಒಂದು ಹಂತದಲ್ಲಿಯಾದರೂ ಪ್ರಬುದ್ಧತೆ ಮೂಡುವವರೆಗಾದರೂ ನಾವು ಗಮನಿಸಬಹುದು. ಪ್ರಸ್ತುತದಲ್ಲಿ ಪ್ರಬುದ್ಧತೆ ಎಂದರೆ ಇತರರನ್ನು ಮೆಚ್ಚಿಸುವ ಕಾಯಕಗಳು ನಿರರ್ಥಕ, ಅರ್ಥಹೀನ ಮತ್ತು ಅನವಶ್ಯ ಎಂಬ ಪ್ರಜ್ಞೆ ಎಂದು ಅರ್ಥೈಸಬಹುದು. ಆದರೆ ಅಂತಹ ಪ್ರಬುದ್ಧತೆ ಯಾವಾಗ ಮತ್ತು ಎಷ್ಟು ಜನರಲ್ಲಿ ಪ್ರಕಟವಾದೀತೆಂಬುದು ಮಾತ್ರಾ ತಿಳಿಯದ ವಿಷಯ. ಅದು ಅವರವರ ಸಂಸ್ಕಾರ, ಜೀವನಶೈಲಿ, ಜೀವನಾರ್ಥವನ್ನು ಅರಿಯುವ ನಿಜವಾದ ಹಸಿವು, ಪ್ರದರ್ಶನ ಜೀವನದ ಟೊಳ್ಳುತನದ ಅರಿವು ಮುಂತಾದ ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಭಗವದ್ಗೀತೆಯಲ್ಲಿನ ಕರ್ಮ ಸಿದ್ಧಾಂತವನ್ನು ಒಮ್ಮೆಗೇ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ. ಅದು ಸ್ವ-ಬುದ್ಧಿಯಿಂದ, ಜೀವನದ ಅನೇಕ ಅನುಭವಗಳಿಂದ ಕಲಿತ ಪಾಠಗಳಿಂದ ಮತ್ತು ಗುರು-ಹಿರಿಯರ ಮಾರ್ಗದರ್ಶನದಿಂದ ಕಾಲಾನುಕ್ರಮದಲ್ಲಿ ಅಳವಡಿಸಿಕೊಳ್ಳಬಹುದಾದ ಒಂದು ಸನ್ನಡತೆ.  ಹಾಗಾಗಿಯೇ ನಾವು ಗುಡ್ಡದಷ್ಟು ಮಾಡಿದ್ದನ್ನು ಬೆಟ್ಟದಷ್ಟು ಮಾಡಿದ್ದೇವೆಂದು ತೋರಿಸಿಕೊಂಡು ಒಣ ಜಂಭ ಪಡುವುದು ಸಾಮಾನ್ಯವಾಗಿದೆ.  ಸಾಧನೆಗಳೆಂದು ಕೊಂಡು ನಾವು ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಂಡದ್ದೆಲ್ಲವನ್ನೂ ಸಮಾಜ ಹಾಗೆಯೇ ಸ್ವೀಕರಿಸುತ್ತದೆಂಬುದು ಕೇವಲ ನಮ್ಮ ಭ್ರಮೆ ಅಥವಾ ಮೂಢತನವಷ್ಟೇ ಅದೀತು. ಮುಖಸ್ತುತಿಗಾದರೂ ನಮ್ಮ ಕಾರ್ಯಗಳನ್ನು ಮೆಚ್ಚಿಕೊಂಡಂತೆ ಕೆಲವರು ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರು ನಮ್ಮಿಂದ ಬೇರೇನಾದರೂ ಸಹಾಯ ಪಡೆಯಬಹುದೆಂಬ ದೂ(ದು)ರಾಲೋಚನೆಯಿಂದ ನಮ್ಮನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿಬಿಡುವರು. ಇಂತಹ ಒಂದು ಭ್ರಮಾಲೋಕದಲ್ಲಿ ನಾವು ಸಿಲುಕಿದಾಗ ನಮ್ಮ ವಿವೇಕ ಮಂಕಾಗುತ್ತದೆ; ನಾನೇನೋ ಅಸಾಧ್ಯವಾದುದನ್ನು/ಅಸಾಧಾರಣವಾದುದನ್ನು ಸಾಧಿಸಿ ಬಿಟ್ಟೆ ಎಂಬ ನೀರ‍್ಗುಳ್ಳೆಯಲ್ಲಿ ತೇಲಾಡುತ್ತೇವೆ. ಆದರೆ ಸತ್ಯಾಂಶವೆಂದರೆ ಇಂದು ನಾವು ದೇವರನ್ನಾದರೂ ಮೆಚ್ಚಿಸಬಹುದು; ಮನುಷ್ಯರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸ್ವಾರ್ಥಪರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ, ತನ್ನನ್ನು ತಾನು ಇನ್ನಷ್ಟು ಬಣ್ಣಕಟ್ಟಿ ಪ್ರದರ್ಶಿಸುವ ಹುಚ್ಚು ಓಟದಲ್ಲಿ, ಇತರರ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಯಾರಿಗೂ ಸಮಯವೂ ಇಲ್ಲ, ವ್ಯವಧಾನವೂ ಇಲ್ಲ ಮತ್ತು ಮಿಗಿಲಾಗಿ ನಿರ್ಮಲವಾದ ಮನಸ್ಸೂ ಇಲ್ಲ! ಹಾಗಾಗಿ ಇತರರನ್ನು ಮೆಚ್ಚಿಸುವ ಕಾಯಕಗಳು ಅರ್ಥಹೀನವೇ ಸರಿ.  ಇಂತಹ ಸನ್ನಿವೇಶದಲ್ಲಿ ನಮ್ಮ ಕಾರ್ಯ ಚಟುವಟಿಕೆಗಳನ್ನು ಇತರರನ್ನು ಮೆಚ್ಚಿಸಲಿಕ್ಕಾಗಿ ರೂಪಿಸಿಕೊಂಡು ಮುನ್ನಡೆಯುವುದು ಮತ್ತು ಅದಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸೂಕ್ತ, ಪ್ರಸ್ತುತ ಮತ್ತು ಫಲಕಾರಿ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ಇಂತಹ ಒಂದು ಜೀವನಶೈಲಿ ತಾತ್ಕಾಲಿಕವಾಗಷ್ಟೇ ಸಮಾಜದ ಮತ್ತಿತರರ ಗಮನವನ್ನು ಸೆಳೆದೀತು. ಜನರ ಮೆಚ್ಚುಗೆ ಮತ್ತು ಮನ್ನಣೆ ಕೇವಲ ನಮ್ಮ ಪ್ರಚಾರದ ಅಬ್ಬರವಿರುವ ತನಕ ಮಾತ್ರಾ. ಅದರಿಂದಲೇ ಅಂತಹ ಗಮನವನ್ನು ಸದಾ ಕಾಲ ಹಿಡಿದಿಟ್ಟಿರಲು ಇನ್ನಿಲ್ಲದ ಕಾರ್ಯತಂತ್ರಗಳನ್ನು ಬಳಸುವಲ್ಲೇ ಅನೇಕರು ತಮ್ಮ ಜೀವನದ ಅತ್ಯಧಿಕ ಕಾಲವನ್ನೇ ವ್ಯಯಿಸಿ ಬಿಟ್ಟಿರುತ್ತಾರೆ.  ಸ್ವಲ್ಪವಾದರೂ ಆತ್ಮ ಚಿಂತನೆಯ ಕಾಲ ಮತ್ತು ಪರಿಜ್ಞಾನ ಬಂದಾಗ, ತಾನೆಲ್ಲಾ ಈವರೆಗೆ ಬರೀ ತೋರಿಕೆಯ ಜೀವನವನ್ನೇ ನಡೆಸಿದೆನಲ್ಲ, ಏನೂ ಶಾಶ್ವತವಾದುದನ್ನು ಸಾಧಿಸಲಾಗಲಿಲ್ಲವಲ್ಲ ಎಂಬ ಕೊರಗು ಮೂಡುತ್ತದೆ. ಪಾಪಪ್ರಜ್ಞೆ ನಿರಂತರ ಕಾಡುತ್ತದೆ. ಕೆಟ್ಟ ಮೇಲೆ ಬುದ್ಧಿ ಬಂದಂತೆ!
               ಜೀವನದಲ್ಲಿ ಏನನ್ನು ಸಾಧಿಸಬೇಕೆಂದರೂ ದೈವಕೃಪೆ ಮತ್ತು ಗುರುಕೃಪೆ ಇರಬೇಕೆಂಬುದು ಆಸ್ತಿಕರ ದೃಢವಾದ ನಂಬಿಕೆ. ಪ್ರಪಂಚದ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು, ಅನುಭವಗಳನ್ನು ಮತ್ತು ಅವರ ಜೀವನಶೈಲಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇಂತಹ ಒಂದು ನಂಬಿಕೆ ಸರಿಯೆನಿಸದೇ ಇರಲಾರದು. ಅಂತೆಯೇ ಈ ದೈವಕೃಪೆಗಾಗಿ ನಾವು ಅನೇಕ ಮಾರ್ಗಗಳನ್ನು ಅನುಸರಿಸುತ್ತೇವೆ - ನಿತ್ಯಾನುಷ್ಠಾನ, ಪೂಜೆ, ಜಪ-ತಪ, ಹೋಮ, ಹವನ, ಧ್ಯಾನ ಇತ್ಯಾದಿ. ಕಲಿಯುಗದ ಮಹಿಮೆಯೋ ಏನೋ ದುರದೃಷ್ಟವಶಾತ್ ಇಂದು ಇಂತಹ ಆಚರಣೆಗಳು ಕೂಡಾ ಡಾಂಭಿಕತನದ, ಹಣದ ಮತ್ತು ವೈಯುಕ್ತಿಕ ಹಿತಸಾಧನೆಗಾಗಿ ಮಾಡುವ ಪ್ರದರ್ಶನ ವಸ್ತುವಾಗಿ ಬಿಟ್ಟಿದೆ. ನಾನು ಇಂತಹ ಧರ್ಮಕಾರ್ಯಕ್ಕಾಗಿ ಇಷ್ಟು ಹಣ ಕೊಟ್ಟೆ (ಫೋಟೋದೊಂದಿಗೆ ಪತ್ರಿಕೆಗಳಲ್ಲಿ ಪ್ರಚಾರದಿಂದ ಹಿಡಿದು ದೊಡ್ಡ ದೊಡ್ಡ ಫ್ಲೆಕ್ಸ್ ಪಟಗಳಲ್ಲೂ ರಾರಾಜಿಸುವವರೆಗೆ!), ನಾನು ಪ್ರತಿ ದಿವಸ ಇಷ್ಟು ಗಂಟೆ ಪೂಜೆ ಮಾಡುತ್ತೇನೆ, ಇಷ್ಟು ಜಪ ಮಾಡುತ್ತೇನೆ, ಇಷ್ಟು ದೇವಸ್ಥಾನಗಳಿಗೆ ಹೋಗುತ್ತೇನೆ, ಇಷ್ಟು ಇತರರಿಗೆ ಸಹಾಯ ಮಾಡಿದ್ದೇನೆ ಇತ್ಯಾದಿ ಇತ್ಯಾದಿ ಹೇಳಿಕೊಂಡು ತಿರುಗುವವರೇ ಇಂದು ಬಹು ಮಂದಿ. ಇಂತಹ ವಿಷಯಗಳಿಂದ ಇತರರಿಗೆ ಆಗಬೇಕಾದ್ದೇನೂ ಇಲ್ಲ ಮತ್ತು ಬಹುಮಂದಿಗೆ ಈ ವಿಚಾರಗಳಲ್ಲಿ ಆಸಕ್ತಿಯೂ ಇರುವುದಿಲ್ಲ. ಇದರಿಂದ ದೈವ ಕೃಪೆಗಿಂತ ದೇವರ ಅವಕೃಪೆಯೇ ಹೆಚ್ಚಾದೀತೆಂಬುದನ್ನೂ ಇವರು ಅರಿಯರು. ಎಂತಲೇ ಅಷ್ಟವಿಧದರ್ಚನೆಯನೆಷ್ಟು ಮಾಡಿದಡೇನು ನಿಷ್ಠೆ ನೆಲೆಗೊಳದೆ ಭಜಿಸುವ ಪೂಜೆಯದು ನಷ್ಟ ಕಾಣಯ್ಯ ಎಂದು ಸರ್ವಜ್ಞ ಹೇಳಿರುವುದು. ಹೊರಗಿನ ದೇವರೇಕೆ? ಒಳದೈವಕೆ ಕಿವಿಗೊಡು ಎಂಬ ದ.ರಾ.ಬೇಂದ್ರೆಯವರ ಮಾತು ಕೂಡ ಪ್ರಸ್ತುತವೇ.
ನೇರವಾಗಿ ಹೇಳಬೇಕೆಂದರೆ, ಭಗವಂತನ ಆರಾಧನೆ  ಅದು ಯಾವ ರೂಪದಲ್ಲಿ ಬೇಕಾದರೂ ಇರಲಿ - ಅದು ಭಕ್ತ ಮತ್ತು ಭಗವಂತನ ಮಧ್ಯೆ ಮಾತ್ರಾ ನಡೆಯುವ ಒಂದು ಆಪ್ತ ಪ್ರಕ್ರಿಯೆ; ಸಂವಾದ ಮತ್ತು ವಿನಿಮಯ. ನಿಜವಾದ ಭಕ್ತ ತನ್ನ ಅಳಲು ಆ ಭಗವಂತನಿಗೆ ತಲುಪಿದರಷ್ಟೇ ಸಾಕೆಂಬ ಅರಿವನ್ನು ಹೊಂದಿರುತ್ತಾನೆ. ಅಂತಹ ಅರಿವೇ ಆತನಿಗೆ ಅಂತಿಮವಾಗಿ ಜಯವನ್ನೂ ತಂದೇ ಕೊಡುತ್ತದೆ. ಬದಲಾಗಿ ತನ್ನ ಆಚರಣೆಗಳಿಗೆ ಬಣ್ಣ ಕಟ್ಟಿ, ನಾಲ್ಕು ಜನರನ್ನು ಮೆಚ್ಚಿಸಲಿಕ್ಕಾಗಿ ಎಂದು ಆತ ಮುಂದಾಗುತ್ತಾನೋ, ಎಂದು ಧಾರ್ಮಿಕ ಆಚರಣೆಗಳು ಪ್ರದರ್ಶನದ ಸಲಕರಣೆಗಳಾಗುತ್ತವೆಯೋ ಅಂದಿನಿಂದಲೇ ಆತನ ಅವನತಿ ಕೂಡಾ ಪ್ರಾರಂಭವಾಗುವುದಲ್ಲಿ ಸಂಶಯವಿಲ್ಲ. ತೋರಿಕೆಯ ಆಚರಣೆಗಳು ನಾಲ್ಕು ಜನರ ಮೆಚ್ಚುಗೆಯ ಮಾತುಗಳಿಂದ ತೃಪ್ತಿ (ಅಲ್ಪ ಕಾಲಿಕ) ತರಬಹುದು. ನಾನೂ ಭಗವಂತನ ಸೇವೆ ಮಾಡಿದೆನೆಂಬ ಸಮಾಧಾನವನ್ನೂ ತರಬಹುದು. ಆದರೆ ನಿಜಾರ್ಥದಲ್ಲಿ ಆ ಆಚರಣೆಗಳು ಭಗವಂತನ ಸಮೀಪವೂ ಸುಳಿದಿರವು. ಇಂದು ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ದೊಡ್ಡ ಮೊತ್ತವನ್ನು ತಮ್ಮ ಹೆಸರನ್ನು ಎಲ್ಲಿಯೂ ತರಬಾರದೆಂಬ ಷರತ್ತಿಗೊಳಪಟ್ಟು ದಾನ ಮಾಡುವ ಅನೇಕ ಮಹನೀಯರನ್ನೂ ನೋಡಬಹುದು; ಅಂತೆಯೇ ಒಂದು ಟ್ಯೂಬ್ ಲೈಟ್ ಮೇಲೆ ದಾನಿಗಳು ಇಂತಹವರು ಎಂದು ದೊಡ್ಡದಾಗಿ ಹೆಸರು ಬರೆಸಿಕೊಳ್ಳುವ ಮಹಾನುಭಾವರನ್ನೂ ನೋಡಬಹುದು!  ಟ್ಯೂಬ್ ಲೈಟ್ ಮೇಲೆ ದಾನಿಗಳ ಹೆಸರನ್ನು ನೋಡಿ ಯಾರೂ ಪ್ರಶಂಸೆ ಮಾಡಲಾರರು; ಬದಲಾಗಿ ಅದೊಂದು ನಗೆಪಾಟಲಿನ ವಿಷಯವಷ್ಟೇ ಅದೀತು.
ಹಾಗಾಗಿ ಈ ಮೇಲೆ ಹೇಳಿದಂತೆ ವೈಯುಕ್ತಿಕ ಧಾರ್ಮಿಕ ಆಚರಣೆಗಳು ನಮ್ಮ ನಮ್ಮ ದೇವರ ಖಾಸಗೀ ಕೋಣೆಗಷ್ಟೇ ಮತ್ತು ನಮ್ಮ ಮತ್ತು ನಮ್ಮ ಆರಾಧ್ಯ ದೇವರ ನಡುವೆಯಷ್ಟೇ ಸೀಮಿತವಾಗಿದ್ದರೆ ಚೆನ್ನ. ಭಕ್ತ ಮತ್ತು ಭಗವಂತನ ಸಂಭಾಷಣೆ ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಸಂಭಾಷಣೆಯಂತೆಯೇ. ಅದು ಅವರವರಿಗೆ ಅರ್ಥವಾದರಷ್ಟೇ, ಅನುಭವವಾದರಷ್ಟೇ ಸಾಕು. ಪ್ರಿಯಕರ ಮತ್ತು ಪ್ರೇಯಸಿಯ ನಡುವೆ ನಡೆಯುವ ಎಲ್ಲವನ್ನೂ ಅವರು ಎಲ್ಲರೊಂದಿಗೂ ವೈಭವೀಕರಿಸಿ ಹೇಳಿಕೊಳ್ಳುವುದಿಲ್ಲ; ಹಾಗೆ ಮಾಡಿದರೆ ಅದು ಹಾಸ್ಯಾಸ್ಪದವಾದೀತು. ಅಂತೆಯೇ ಭಕ್ತ ಮತ್ತು ಭಗವಂತನ ಸಂಬಂಧ ಕೂಡ ಬಲು ಸೂಕ್ಷ್ಮವಾದುದು; ವೈಯುಕ್ತಿಕವಾದುದು. ಆದು ಬೇರೆಯವರಿಗೆ ತಿಳಿಯುವ, ತಿಳಿಸುವ ಮತ್ತು ವೈಭವೀಕರಿಸುವ ಅಗತ್ಯವಿಲ್ಲ.  ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನ ಮಾಡಬಲ್ಲರೋ ರಂಗ ಎಂದು ಪುರಂದರದಾಸರು ನುಡಿದಂತೆ ಆ ಭಗವಂತನ  ನಿರಂತರ ಏಕಾಂತ ನಾಮಸ್ಮರಣೆಯೇ ಸಾಕು. ಭಗವಂತನ ನಿತ್ಯಾರಾಧನೆ ಆತನ ಕೃಪೆಯೊಂದಿಗೆ ದಿನನಿತ್ಯದ ಸಂಕಷ್ಟಗಳನ್ನು ಧೈರ್ಯದಿಂದ ಮತ್ತು ಸಮಾಧಾನ ಚಿತ್ತದಿಂದ ಎದುರಿಸುವಲ್ಲಿ ಖಂಡಿತಾ ನಮ್ಮ ಸಹಾಯಕ್ಕೆ ಬಂದೇ ಬರುತ್ತದೆ. ನನ್ನ ನೆರವಿಗೆ ಭಗವಂತನಿದ್ದಾನೆ, ಎಂದಿಗೂ ಆತ ನನ್ನ ಕೈ ಬಿಡನು ಎಂಬ ದೃಢವಾದ ನಂಬಿಕೆಯೇ ನಮ್ಮ ಸುಗಮ ಜೀವನಕ್ಕೆ ಮತ್ತು ಸಂತೋಷಕ್ಕೆ ಮೂಲವಾಗುತ್ತದೆ. ಇದು ಅನೇಕರ ಅನುಭವವೇದ್ಯವಾದ ಮಾತು. ಎಲ್ಲಾ ಸದ್ಗುರುಗಳ ಮೂಲಮಂತ್ರ. ಸತ್ಯವಾದ ಮಾತೆಂದರೆ ಭಗವಂತನಿಗೆ ನಾವು ಅರ್ಪಿಸುವ ಯಾವುದೇ ಲೌಕಿಕ ವಸ್ತುಗಳೂ ಆತನಿಗೆ ಬೇಕಾಗಿಲ್ಲ. ಅದು ಕೇವಲ ನಮ್ಮ ಮಾನಸಿಕ ತೃಪ್ತಿಗಷ್ಟೇ. ಅಗತ್ಯಕ್ಕಿಂತ ಮಿಗಿಲಾದ ಅಲಂಕಾರವೂ ಆತನಿಗೆ ಬೇಡ. ಅಚಂಚಲ ಭಕ್ತಿ, ಶರಣಾಗತಿಯ ಮತ್ತು ಅರ್ಪಣಾ ಮನೋಭಾವವಷ್ಟಿದ್ದರೆ ಸಾಕು ಆತನ ಒಲುಮೆ ಸಂಪಾದಿಸಲು. ಇವುಗಳನ್ನು ಬಿಟ್ಟು ಉಳಿದೆಲ್ಲ ಪ್ರದರ್ಶನದ ಆಚರಣೆಗಳು ಅರ್ಥಹೀನವಷ್ಟೇ ಅಲ್ಲ ಬರೀ ವ್ಯರ್ಥ ಶ್ರಮವೂ ಹೌದು.

|| ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||

PÀ« ªÉA. ¸ÀÄgÉñï
20.03.10- 94489-32866 - Email: bsr_kavisuresh@yahoo.co.in

Saturday, March 12, 2011

ಕಾಲಾಧೀನಂ ಜಗತ್ ಸರ್ವಂ- 2

ಕಾಲಾಧೀನಂ ಜಗತ್ ಸರ್ವಂ- 1


ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಯತಿಗಳಾದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿಯವರು ಒಂದು ದೇವಾಲಯದ ಕುಂಭಾಭಿಷೇಕವನ್ನು ನೆರವೇರಿಸಲು ಇಂದು ಹಾಸನಕ್ಕೆ ಆಗಮಿಸಿದ್ದರು.ಸರಳ ಸ್ವಭಾವದ ಸ್ವಾಮೀಜಿಯವರ ಮಾತುಗಳು ಭಕ್ತರನ್ನು ಆಕರ್ಷಿಸುತ್ತವೆ. ಅವರ ಪ್ರವಚನದ ಭಾಗಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಎರಡು ಮೂರು ಕಂತುಗಳಲ್ಲಿ ಇಂದಿನಿಂದ ಪ್ರಕಟಿಸಲಾಗುತ್ತಿದೆ.


Thursday, March 10, 2011

ಯೋಚಿಸಲೊ೦ದಿಷ್ಟು..೨೫

ಓದುಗರಲ್ಲಿ ವಿನ೦ತಿ:


ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.

ಬರಹಗಾರನೊಬ್ಬನಿಗೆ ಇದಕ್ಕಿ೦ತಾ ಸ೦ತಸ ತರುವ ವಿಚಾರವಿರಲು ಸಾಧ್ಯವಿಲ್ಲ. ಎಲ್ಲಾ ಓದುಗರ ಸಹಾಯದಿ೦ದ ನನ್ನ ಈ ಚಿ೦ತನಾ ಸರಣಿ ಈ ವಾರ ತನ್ನ ೨೫ ನೇ ಕ೦ತನ್ನು ಕಾಣುತ್ತಿರುವುದು ನಿಜವಾಗಿಯೂ ಸ೦ತಸದ ಸ೦ಗತಿ! ಈ ಸರಣಿಯ ಆರ೦ಭದಲ್ಲಿ ಇದನ್ನೆಲ್ಲಾ ಊಹಿಸಿರಲೇ ಇಲ್ಲ! ಇಷ್ಟು ಕ೦ತುಗಳವರೆಗೂ ಮು೦ದುವರೆಯುತ್ತದೆ೦ಬ ನಿರೀಕ್ಷೆ ಸ್ವತ: ನನಗೇ ಇರಲಿಲ್ಲ! ಆದರೆ ಅದು ಸಾಧ್ಯವಾಗಿದೆ ಎ೦ದರೆ ನನ್ನ ಈ ಪ್ರಯತ್ನಕ್ಕೆ ಸದಾ ಅಧ್ಬುತವಾಗಿ ಪ್ರೋತ್ಸಾಹಿಸಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ ನೀವೇ ಕಾರಣಕರ್ತರು!ನಿಮ್ಮನ್ನು ಮರೆಯಲಾದೀತೆ?

ನನಗೆ ಮು೦ಜಾನೆಯ ಶುಭಾಷಿತ ಹಾಗೂ ರಾತ್ರೆಯ ಶಯನಾಷಿತಗಳೆ೦ದು ದಿನಕ್ಕೆರಡು ಬಾರಿ ಉತ್ತಮ ಆ೦ಗ್ಲ ನುಡಿಮುತ್ತುಗಳನ್ನು ನನ್ನ ಚರವಾಣಿಗೆ ರವಾನಿಸುತ್ತಿದ್ದ ಅತ್ರಾಡಿ ಸುರೇಶ್ ಹೆಗಡೆಯವರು (ಆಸುಮನ) ನನ್ನಲ್ಲಿ ಈ ಸರಣಿ ಯನ್ನು ಆರ೦ಭಿಸುವ ಬಗ್ಗೆ ಉದಯಿಸಿದ ಪ್ರೇರಣೆಗೆ ನಿಜವಾದ ಕಾರಣಕರ್ತರು.ನನ್ನ ಭಾಷಾನುವಾದದ ತಪ್ಪುಗಳನ್ನು ತಿಳಿಸಿ, ನುಡಿಮುತ್ತುಗಳ ಮೌಲ್ಯ ವರ್ಧಿತಗೊಳ್ಳಲೂ ಕಾರಣರು ಅವರೇ!  ಸುರೇಶ್ ಹೆಗಡೆಯವರಲ್ಲದೆ, ತಮ್ಮ ಬಿಡುವಿರದ ಕಾರ್ಯ ಗಳ ನಡುವೆಯೂ ಆಗಾಗ ತಮ್ಮ ಆ೦ಗ್ಲ ನುಡಿಮುತ್ತುಗಳನ್ನು ಈ ಮೇಲ್ ಹಾಗೂ ಚರವಾಣಿಗೆ ರವಾನಿಸುತ್ತಿದ್ದುದ್ದಲ್ಲದೆ, ಪ್ರತಿ ಕ೦ತನ್ನೂ ಅತೀವ ಆಸ್ಥೆಯಿ೦ದ ಓದಿ, ತಮ್ಮದೇ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ನೀಡುತ್ತಿದ್ದ ಸ೦ತೋಷ ಆಚಾರ್ಯರೂ( ಅ೦ತರ್ನಾದ) ಸಹ ನನ್ನ ಆದರಣೀಯರು. ಈ ಸರಣಿಗೆ ಅದರದ್ದೇ ಆದ ಓದುಗ ಬಳಗ ದೊರೆತಿದೆ. ಮಾನ್ಯ ಓದುಗ ಮಹಾಶಯರಾದ ನೀವುಗಳು ಈ ಸರಣಿಯ ಈ ತರಹದ ಯಶಸ್ಸಿಗೆ ಕಾರಣರಾಗಿದ್ದೀರಿ. ನಿಮಗೆ ನನ್ನ ಕೃತಜ್ಞತೆಗಳು. ಸ೦ತಸ ತರುವ ವಿಚಾರವೆ೦ದರೆ ಈ ಸರಣಿಯ ಹೆಚ್ಚಿನ ಎಲ್ಲಾ ಕ೦ತುಗಳು ನಿಮ್ಮ ಪ್ರತಿಕ್ರಿಯೆಗಳಿಗೆ ಒಳಗಾಗಿವೆ... ಅ೦ದರೆ ಈ ಸರಣಿಯು ಗುರುತಿಸಲ್ಪಟ್ಟಿದೆ ಎ೦ದೇ ಅರ್ಥವಲ್ಲವೇ? ಎಲ್ಲರೂ ನನ್ನನ್ನು ಬೆಳೆಸುತ್ತಿದ್ದೀರಿ... ಲಾಲಿಸುತ್ತಿದ್ದೀರಿ... ನನ್ನಲ್ಲಿನ ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದೀರಿ... ಸಾಕು ನನಗೆ! ವಿಶೇಷವಾಗಿ ವೇದಸುಧೆಯಲ್ಲಿ ಈ ಸರಣಿಯನ್ನು ಹಾಗೂ ನನ್ನಿತರ ಬರಹಗಳನ್ನು ನೇರವಾಗಿ ಪ್ರಕಟಿಸಲು ಅವಕಾಶ ಕಲ್ಪಿಸಿಕೊಟ್ಟ ಸರಣಿಯ ನಿರ್ವಾಹಕರಾದ ಹರಿಹರಪುರ ಶ್ರೀಧರ್, ಲೇಖಕವ೦ದ್ಯರಾದ ಶ್ರೀಯುತ ವಿ.ಎಸ್.ಭಟ್ಟರು, ಕವಿಮನೆತನದ ಕವಿ ನಾಗರಾಜರು, ಕವಿ ಸುರೇಶರು, ಸೀತಾರಾಮರು ಎಲ್ಲರೂ ನನ್ನ ಮಾನ್ಯರೇ.. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸರಣಿಯ ಯಶಸ್ಸಿಗೆ ಪ್ರೋತ್ಸಾಹಿಸಿದ ನನ್ನ ಮಿತ್ರರು ಹಾಗೂ ಸಮಸ್ತ ಓದುಗ ಬಳಗಕ್ಕೆ ನನ್ನ ನಮಸ್ಕಾರಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ...

ನಿಮ್ಮವ ನಾವಡ.



ಯೋಚಿಸಲೊ೦ದಿಷ್ಟು..೨೫



೧. ಜೀವನವನ್ನು ನಾವು ಯಾವ ರೀತಿಯ ಕ್ರಿಯಾಶೀಲತೆ ಇ೦ದ ಎದುರುಗೊಳ್ಳಬೇಕೆ೦ಬುದನ್ನು ಈ ಸಾಲುಗಳು ಚೆನ್ನಾಗಿ ವಿವರಿಸುತ್ತವೆ!

ಸೈನಿಕ: ಸರ್, ನಾವು ಎಲ್ಲಾ ಕಡೆಯಿ೦ದಲೂ ಶತ್ರುಗಳ ಮುತ್ತಿಗೆಗೆಒ ಳಗಾಗಿದ್ದೇವೆ.
ಮೇಜರ್: ಹಾಗಾದರೆ ನಾವು ಎಲ್ಲಾ ಕಡೆಯಿ೦ದಲೂ ಅವರ ಮೇಲೆ ಧಾಳಿ ಮಾಡಬಹುದು!

೨. ಗ್ರಹಾಮ್ ಬೆಲ್ ದೂರವಾಣಿ ಯನ್ನು ಕ೦ಡು ಹಿಡಿದರೂ, ತನ್ನ ಮನೆಗೆ೦ದೂ ಆತ ಒ೦ದೇ ಒ೦ದು ಕರೆಯನ್ನು ಮಾಡಲಿಲ್ಲ, ಏಕೆ೦ದರೆ ಅವನ ಹೆ೦ಡತಿ ಮತ್ತು ಮಗಳು ಕಿವುಡರಾಗಿದ್ದರು! ಆತನ ವ್ಯಕ್ತಿತ್ವದ ಈ ಅ೦ಶವೇ “ಪರರಿಗಾಗಿ ಜೀವನವನ್ನು ಮುಡುಪಾಗಿಡುವುದು“ ಎ೦ಬುದರ ಸಾರ್ಥಕಾರ್ಥವಲ್ಲವೇ?

೩. ಜೀವನದಲ್ಲಿ ನಮ್ಮನ್ನು ಮಾನಸಿಕ ಕೊಲ್ಲುವುದೆ೦ದರೆ “ಸ೦ಬ೦ಧಗಳು“. ನಾವು ಅದರಿ೦ದ ಕಳಚಿಕೊ೦ಡರೆ ನಮಗೆ ನೋವಾಗುತ್ತದೆ. ಆದರೆ “ಏಕಾ೦ತ“ ಎನ್ನುವುದೊ೦ದು ಅಧ್ಬುತ! ಇದು ನಮಗೆಲ್ಲವನ್ನೂ ಕಲಿಸುತ್ತದೆ ಹಾಗೂ ನಾವು ಅದರಿ೦ದ ಕಳಚಿಕೊ೦ಡಲ್ಲಿ ಎಲ್ಲವನ್ನೂ ಗಳಿಸುತ್ತೇವೆ!

೪. ನಮ್ಮ ಜೀವನವೆನ್ನುವುದು ನಮ್ಮ ಎದುರಿಗೆ ನಟಿಸುವವರ ಜನರೊ೦ದಿಗಿನ ಗು೦ಪಲ್ಲ! ಅದು ನಮ್ಮ ಬೆನ್ನ ಹಿ೦ದಿನ ಪ್ರಾಮಾಣಿಕ ಜನರ ಗು೦ಪು!

೫.ಒ೦ದು ಕೋಳಿಯ ಮೊಟ್ಟೆಯು ಬಾಹ್ಯಶಕ್ತಿಗಳಿ೦ದ ಒಡೆಯಲ್ಪಟ್ಟರೆ ಒ೦ದು ಹತ್ಯೆ!ಆದರೆ ಆ೦ತರಿಕವಾಗಿ ಮೊಟ್ಟೆಯೊ೦ದು ತಾನೇ ಒಡೆದರೆ ಒ೦ದು ಜನನ! ಮಹಾನ್ ಕಾರ್ಯಗಳು ಆರ೦ಭಗೊಳ್ಳುವುದೇ ಆ೦ತರ್ಯದಿ೦ದ!

೬. ನಮ್ಮನ್ನು ಪ್ರೀತಿಸುವವರಿಗಾಗಿ, ಅವರನ್ನೇ ಕಳೆದುಕೊಳ್ಳುವುದಕ್ಕಿ೦ತ ನಮ್ಮ ಸ್ವಾಭಿಮಾನ (ಅಹ೦ಕಾರ)ವನ್ನು ಕಳೆದು ಕೊಳ್ಳುವುದೇ ಉತ್ತಮ!

೭. ಚೆನ್ನಾಗಿ ಕಾಯಿಸಿದ ಚಿನ್ನದಿ೦ದ ಆಭರಣವನ್ನು ಮಾಡಬಹುದು! ಹಾಗೆಯೇ ತಾಮ್ರದಿ೦ದ ತ೦ತಿಗಳನ್ನೂ, ಸತತ ಉಳಿಪೆಟ್ಟುಗಳ ಹೊಡೆತದಿ೦ದ ಒ೦ದು ಸು೦ದರ ಮೂರ್ತಿಯನ್ನೂ ಕೆತ್ತಬಹುದು. ಹಾಗೆಯೇ ಹೆಚ್ಚೆಚ್ಚು ನೋವು೦ಡಷ್ಟೂ ನಮ್ಮ ಜೀವನದಲ್ಲಿನ ಮೌಲ್ಯ ಉನ್ನತಿಗೇರುತ್ತಾ ಹೋಗುತ್ತದೆ!

೮.ನ೦ಬುವುದಾದರೆ ಒಬ್ಬ ವ್ಯಕ್ತಿಯನ್ನು ಸ೦ಶಯಕ್ಕೆಡೆಯಿಲ್ಲದ೦ತೆ ನ೦ಬೋಣ.ಅದರಿ೦ದ ನಾವು ಕಳೆದುಕೊಳ್ಳು ವುದೇನಿಲ್ಲ !ಬದಲಾಗಿ ನಮ್ಮ ಜೀವನದ ಹಾದಿಗೊ೦ದು ಪಾಠವನ್ನೋ ಅಥವಾ ಒಬ್ಬ ಉತ್ತಮ ಆತ್ಮೀಯನನ್ನೋ ಪಡೆಯಬಹುದು!

೯. ದೇವರು ಎಲ್ಲಾ ಕಡೆಯೂ ಇದ್ದಾನೆ೦ದ ಮೇಲೆ ನಮ್ಮಲ್ಲೇಕೆ ಇಷ್ಟೊ೦ದು ದೇವಸ್ಥಾನಗಳು ಎ೦ಬ ಪ್ರಶ್ನೆ ಬುಧ್ಧಿವ೦ತನೊಬ್ಬ ಉತ್ತರಿಸಿದ ರೀತಿ ಹೀಗಿದೆ: ಗಾಳಿಯು ಎಲ್ಲಾ ಕಡೆಯೂ ಇದ್ದರೂ ನಾವು ಅದರ ತೀವ್ರತೆಯನ್ನು ಅನುಭವಿಸಲು “ಫ್ಯಾನ್“ ಉಪಯೋಗಿಸುವುದಿಲ್ಲವೇ? ಹಾಗೆಯೇ “ದೇವರೆ೦ಬುದೂ“ ಕೂಡಾ!

೧೦. ನಾವೇ “ಎಲ್ಲವೂ“ ಅಲ್ಲ, ಅ೦ತೆಯೇ ನಾವು “ ಏನೂ ಅಲ್ಲ“ ಎ೦ಬುದೂ ಅಲ್ಲ! ಆದರೆ ನಾವು “ಏನನ್ನಾದರೂ “ ಸಾಧಿಸಲೆ೦ದೇ ಜನ್ಮ ತಳೆದಿದ್ದೇವೆ ಎ೦ಬುದು ಮಾತ್ರ ಹೌದು!

೧೧. ಈದಿನ ನಮ್ಮ “ಎಣಿಕೆ“ಯ೦ತೆ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಬೇಸರ ಬೇಡ. ನಾಳೆ ನಮಗಾಗಿ ಪುನ: “ನವ ಆರ೦ಭ“ಕ್ಕಾಗಿ ಕಾಯುತ್ತಿದೆ!

೧೨. ಪರಸ್ಪರ ಉತ್ತಮ “ನಡತೆ“ ಹಾಗೂ ಉತ್ತಮ “ಹೃದಯ“ ವಿರದಿದ್ದಲ್ಲಿ ಯಾವುದೇ ಸ೦ಬ೦ಧಗಳೂ ದೀರ್ಘ ಕಾಲ ಬಾಳಲಾರವು!

೧೩. “ಸಾಧನೆ“ ಸತತ ಕ್ರಿಯಾಶೀಲತೆಯನ್ನು ಬಯಸುತ್ತದೆ! ಸಾಧಕರು ತಪ್ಪುಗಳನ್ನು ಮಾಡಿದರೂ, ಕೂಡಲೇ ತಿದ್ದಿಕೊ೦ಡು “ಸಾಧನೆ“ ಸರಿ ಹಾದಿಗೆ ಮರಳುವರೇ ವಿನ: “ಕ್ರಿಯಾಶೀಲತೆ“ಯನ್ನೇ ಸಮಾಪ್ತಿಗೊಳಿಸುವುದಿಲ್ಲ!

೧೪.ದ್ವೇಷವು ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮವು ಅವನ್ನು ಮರೆಮಾಡುತ್ತದೆ!

೧೫.ದೊಡ್ಡವರ ಕೆಲಸಗಳಲ್ಲಿ ಭಾಗಿಯಾಗಬಹುದು.ಆದರೆ ಆ ಕೆಲಸಗಳ ಫಲದಲ್ಲಿ ಭಾಗಿಯಾಗಲಾಗದು!

೧೬.ಧನವನ್ನು ಸ೦ಪಾದಿಸುವುದು ಕಷ್ಟ! ಸ೦ಪಾದಿಸಿದ ಮೇಲೆ ಅದನ್ನು ಕಾಪಿಟ್ಟುಕೊಳ್ಳುವುದೂ ಕಷ್ಟ! ಕಳೆದುಕೊಳ್ಳುವುದು ಸಾವಿಗಿ೦ತಲೂ ಭೀಕರ!

೧೭.ದೊಡ್ಡವರಿಗೆ ದೃಢ ಮನಸ್ಸಿದ್ದರೆ, ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ!

೧೮.ನಮ್ಮಲ್ಲಿನ “ಹೃದಯ ಶ್ರೀಮ೦ತಿಕೆ“ಯು ನಮ್ಮಲ್ಲಿನ ಸ೦ಪತ್ತನ್ನು ಅಳೆಯಲು ಬ೦ದವರಿ೦ದ ಅಳೆಯಲಾಗದು. ಬದಲಾಗಿ ನಮ್ಮಭಾವನೆಗಳನ್ನು ಅರ್ಥೈಸಿಕೊಳ್ಳುವವರಿ೦ದ ನಮ್ಮ ಶ್ರೀಮ೦ತಿಕೆಯು ಅಳೆಯಲ್ಪಡುತ್ತದೆ!

೧೯.ಸ೦ಪತ್ತಿನ ಜೊತೆಗೇ “ಹೃದಯ ಶ್ರೀಮ೦ತಿಕೆ“ಯೂ ಬೆರೆತಿದ್ದರೆ,ನಾವು ಸಕಲ ಅರ್ಥದಲ್ಲಿಯೂ ನಿಜವಾದ “ಶ್ರೀಮ೦ತ“ರೇ!

೨೦. ನಾವು ದು:ಖದಲ್ಲಿರುವ ಸಮಯವೇ ನಮ್ಮ ನಿರಾಶೆಯ ಉತ್ತು೦ಗವಲ್ಲ! ಬದಲಾಗಿ ನಮ್ಮ ದು:ಖದ ಸಮಯದಲ್ಲಿ ನಮ್ಮ “ಅಳಲನ್ನು‘‘ ಕೇಳುವವರು ಯಾರೂ ಇಲ್ಲದಿರುವ ಸಮಯವು ನಮ್ಮ ನಿರಾಶೆಯು ಅದರ ಉತ್ತು೦ಗವನ್ನು ತಲುಪಿರುತ್ತದೆ!!

೨೧.ಕಳೆದು ಹೋದ “ನಿನ್ನೆ“ಯಿ೦ದ ಕಲಿತು ವರ್ತಮಾನದ “ಈದಿನ“ವನ್ನು ಅನುಭವಿಸುತ್ತಾ, ಭವಿಷ್ಯತ್ತಿನ “ನಾಳೆ“ ಯ ಬಗ್ಗೆ ನ೦ಬಿಕೆ ಇಟ್ಟುಕೊಳ್ಳೋಣ!

೨೨.ನಿಜವಾದ “ಬ೦ಧ“ವನ್ನು ಕಾಪಿಟ್ಟುಕೊಳ್ಳುವುದು ಕಷ್ಟ! ಬ೦ಧುತ್ದದ ನಡುವೆ “ಅಸಹನೀಯತೆ“ ಯು ನೆಲಸಿದಾಗ ಅದನ್ನು ಕೈಬಿಡದೆ, ಪರಿಹರಿಸಿಕೊಳ್ಳುವ ಬಗ್ಗೆ ಆಲೋಚಿಸೋಣ. ಏಕೆ೦ದರೆ ನಾವು ನಿಜವಾದ “ಮಿತ್ರ“ ರನ್ನು ಯಾ ಬ೦ಧುಗಳನ್ನು ಗಳಿಸುವುದೇ ಅಪರೂಪ!!

೨೩. ಯಾರಾದರೂ “ಆದರ್ಶ“ ವನ್ನು ಅನುಕರಿಸುವವರೆಗೂ ಪ್ರತಿಯೊ೦ದೂ ಹೊಸ “ಆದರ್ಶ“ವು ದೊಡ್ಡ “ಹಾಸ್ಯ“ವೆ೦ದೇ ಪರಿಗಣಿಸಲಾಗುತ್ತದೆ ಹಾಗೆಯೇ ನಾವು ನ೦ಬಿಕೊ೦ಡು ಪ್ರಯತ್ನಿಸುವವರೆಗೂ,ಪ್ರತಿಯೊ೦ದೂ ಹೊಸ “ಚಿ೦ತನೆ“ಯನ್ನೂ ನಾವು “ಸರಳ“ವೆ೦ದೇ ಅ೦ಗೀಕರಿಸಿರುತ್ತೇವೆ!

೨೪. ನಮ್ಮ ಬದುಕಿನ “ಅರ್ಥ“ಬದಲಾಯಿಸಿದವರನ್ನು ಮರೆಯುವುದು ಹೇಗೆ ಕಷ್ಟವೋ ಹಾಗೆಯೇ, ನಮ್ಮ ಬದುಕಿನಲ್ಲಿ “ಏನೂ ಅಲ್ಲ“ದವರನ್ನೂ ಮರೆಯುವುದು ತುಸು ಕಷ್ಟವೇ!!

೨೫. ಎಲ್ಲವನ್ನೂ ಅರ್ಥೈಸಿಕೊ೦ಡು, ಸರಿದೂಗಿಸಿಕೊ೦ಡು ಹೋಗುವ ಸಾಮರ್ಥ್ಯವಿದ್ದಲ್ಲಿ, ಜೀವನದ ಪ್ರತಿಕ್ಷಣವನ್ನೂ ಅಧ್ಬುತವಾಗಿ ಆನ೦ದಿಸಬಹುದು!



Tuesday, March 8, 2011

ವೇದೋಕ್ತ ಜೀವನ ಪಥ - ಜೀವಾತ್ಮ ಸ್ವರೂಪ -6

     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ನೋಡಿರಿ:-


ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |

ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)

     [ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಯಿಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.

     ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ತಾನು ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಈ ಬಗ್ಗೆ ಅಜ್ಞಾನದಿಂದ ದೂರ ಸರಿಯಬೇಕು. ಮಾನವನು ಹುಟ್ಟಿನಿಂದಲೇ ಪಾಪಿ, ಆದುದರಿಂದ ಅವನು ಯಾವನೋ ದೇವಪುತ್ರನ ನೆರವಿಲ್ಲದೆ ಭಗವ0ತನ ರಾಜ್ಯದಲ್ಲಿ ಪ್ರವೇಶಿಸಲಾರ - ಎನ್ನುವುದಕ್ಕಿಂತ ಘೋರ ಪಾತಕವಿಲ್ಲ. ಭಗವಂತನ ರಾಜ್ಯ ಬೇರೆಲ್ಲೋ ತೇಲಾಡುತ್ತಿಲ್ಲ. ಸರ್ವವ್ಯಾಪಕನಾದ ಪ್ರಭುವಿನ ರಾಜ್ಯ ಇಲ್ಲಿಯೇ ಇದೆ. ವೇದಗಳು ಮೋಕ್ಷದ ಮಾರ್ಗವನ್ನು ಹೀಗೆ ವರ್ಣಿಸುತ್ತವೆ:


ಶುನಃಶೇಪೋ ಹ್ಯಹ್ವದ್ ಗೃಭೀತಸ್ ತ್ರ್ರಿಷ್ವಾದಿತ್ಯಂ ದ್ರುಪದೇಷು ಬದ್ಧಃ |
ಅವೈನಂ ರಾಜಾ ವರುಣಃ ಸಸೃಜ್ಯಾದ್ ವಿದ್ವಾನ್ ಅದಬ್ಧೋ ವಿ ಮುಮೋಕ್ತು ಪಾಶಾನ್ || (ಋಕ್.೧.೨೪.೧೩)


     [ತ್ರಿಷು ದ್ರುಪದೇಷು ಗೃಭೀತಸ್ ಬದ್ಧಃ] ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳ ಅಥವಾ ತನು-ಮನ-ವಚನ ಎಂಬ ಮೂರು ಗೂಟಗಳಿಗೆ ಕಟ್ಟುಬಿದ್ದ, [ಶುನಃಶೇಪಃ] ಸುಖಾಭಿಲಾಷಿಯಾದ ಜೀವನು [ಆದಿತ್ಯಂ ಹಿ ಅಹ್ವತ್] ಅಖಂಡನಾದ ಪ್ರಭುವಿಗೆ ಮೊರೆಯಿಡುತ್ತಾನೆ. [ರಾಜಾ ವರುಣಃ] ವಿಶ್ವಸಾಮ್ರಾಟ್ ವರಣೀಯ ಪ್ರಭುವು [ಏನಂ ಅವ ಸಸೃಜಾತ್] ಇವನನ್ನು ಸಡಿಲಗೊಳಿಸುತ್ತಾನೆ. [ಅದಬ್ಧಃ ವಿದ್ವಾನ್] ಪ್ರಾಕೃತ ಮೋಹಕ್ಕೆ ಅಡಿಯಾಳಾಗದ ವಿದ್ವಾನ್ ಜೀವನು [ಪಾಶಾನ್ ವಿ ಮುಮೋಕ್ತು] ತನ್ನ ಬಂಧನಗಳನ್ನು ತಾನೇ ಕಡಿದುಹಾಕಬೇಕು.

     ಹೌದು, ಮಧ್ಯಸ್ಥನಿಗೆ ಇಲ್ಲಿ ಎಡೆಯೇ ಇಲ್ಲ. ಪ್ರಭೂಪಾಸನೆ ಮಾಡಬೇಕು. ಆಗ ಪ್ರಭು ಭೋಗವಿಲಾಸದ ಕಟ್ಟನ್ನು ಸಡಿಲಿಸುತ್ತಾನೆ. ಜ್ಞಾನಿಯಾದ ಜೀವನು ತನ್ನ ಪಾಶಗಳನ್ನು ತಾನೇ ಕಡಿಯಬೇಕು. ಒಬ್ಬನೇ ಏನು ದೇವಪುತ್ರ? ದೇವಪುತ್ರಾ ಋಷಯಃ (ಋಕ್. ೧೦.೬೨.೪) - ದೇವಪುತ್ರರೇ! ತತ್ವದರ್ಶಿಗಳೇ - ಎಂದು ಎಲ್ಲರನ್ನೂ ವೇದ ಸಂಬೋಧಿಸಿರುವುದನ್ನು ಪಾಠಕರಾಗಲೇ ಓದಿದ್ದಾರೆ. ಮಾನವ, ಜನ್ಮದಿಂದಲೇ ಪಾಪಿ ಎನ್ನುವುದು ಅಜ್ಞಾನದ ಪರಮಾವಧಿ. ವೇದದ ಈ ಉದ್ಭೋದನವನ್ನು ಆಲಿಸಿ, ಮುಂದಿನ ಅಧ್ಯಾಯ ಪ್ರಾರಂಭಿಸೋಣ.

ಶುಕ್ರೋಸಿ ಭ್ರಾಜೋಸಿ ಸ್ವಶಸಿ ಜ್ಯೋತಿರಸಿ  |
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ  || (ಅಥರ್ವ. ೨.೧೧.೫)


     ಓ ಮಾನವ! [ಶುಕ್ರಃ ಅಸಿ] ನೀನು ನಿರ್ಮಲನಾಗಿದ್ದೀಯೆ. [ಭ್ರಾಜಃ ಅಸಿ] ಪಾಪದಾಹಕ ಪ್ರಕಾಶವಾಗಿದ್ದೀಯೆ. [ಸ್ವಃ ಅಸಿ] ಸುಖಸ್ವರೂಪನಾಗಿದ್ದೀಯೆ. [ಜ್ಯೋತಿಃ ಅಸಿ] ಜ್ಞಾನದ ಜ್ಯೋತಿಯಾಗಿದ್ದೀಯೆ. [ಶ್ರೇಯಾಂಸಂ ಆಪ್ನುಹಿ] ಶ್ರೇಯಸ್ಸನ್ನು ಸಾಧಿಸಿಕೋ. [ಸಮಂ ಅತಿಕ್ರಾಮ] ಆಧ್ಯಾತ್ಮ ಪಥದಲ್ಲಿ ಸಮನಾದವನನ್ನು ಮೀರಿಸಿ ಮುಂದೆ ನಡೆ.
-೦-೦-೦-೦-

Saturday, March 5, 2011

ವೇದಗಳ ಬಗ್ಗೆ ಒಂದು ಚಿಂತನೆ - ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ



 ಕಳೆದ ವರ್ಷ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 19 ರಿಂದ 28 ರವರೆಗೆ ಹಾಸನದ ಶಂಕರ ಮಠದಲ್ಲಿ ನಡೆದ ಉಪನ್ಯಾಸ ಮಾಲೆಯಲ್ಲಿ ವೇದಾಧ್ಯಾಯಿಗಳಾದ ಬೆಂಗಳೂರಿನ ಶ್ರೀ ಸುಧಾಕರ ಶರ್ಮರು  ಸೆ.21 ರಿಂದ 23 ರವರೆಗೆ `ವೇದ- ಎಲ್ಲರಿಗಾಗಿ' ವಿಷಯವಾಗಿ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಹಾಸನದ ಪತ್ರಕರ್ತ ಎಚ್.ಎಸ್. ಪ್ರಭಾಕರ-ಅಂದರೆ ನಾನು ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ ನಡೆಸಿದೆ. ಅದರ ಸಾರಾಂಶವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ವೇದಗಳು: ಅಲ್ಲಿ ಎಲ್ಲವೂ ಇದೆ; ಎಲ್ಲರಿಗಾಗಿಯೂ ಇದೆ!

ಲೋಕಾ ಸಮಸ್ತಾಃ ಸುಖಿನೋ ಭವಂತು||
ಸರ್ವಃ ಸರ್ವತ್ರ ನಂದತು||
ಮಾ ಕಶ್ಚಿತ್ ದುಃಖಮಾಪ್ನುಯಾತ್||
ಸರ್ವೇ ಜನಾಃ ಸುಖಿನೋ ಭವಂತು||
ಸರ್ವೇ ಭದ್ರಾಣಿ ಪಶ್ಯಂತು||
ಸರ್ವಸ್ತರತು ದುರ್ಗಾಣಿ||
ಸರ್ವೇ ಸಂತು ನಿರಾಮಯಾಃ||

ನಮ್ಮ ತಲೆ ತಲೆಮಾರುಗಳಷ್ಟು ಹಿಂದಿನ ಜನರು ಪ್ರತಿದಿನ ಉಷಾಃ ಕಾಲದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಕೈಮುಗಿದುಕೊಂಡು ಋಷಿ ಮುನಿಗಳು ರಚಿಸಿದ ಮೇಲ್ಕಂಡ ವೇದ ಮಂತ್ರಗಳನ್ನು ಪಠಿಸುತ್ತಾ ಪ್ರಾರ್ಥಿಸುತ್ತಿದ್ದರು. ಪಂಚ ಭೂತಗಳೂ ಸುಸ್ಥಿತಿಯಲ್ಲಿರಲಿ; ಸಮಸ್ತ ಲೋಕವೂ ಚೆನ್ನಾಗಿರಲಿ; ಸರ್ವರಿಗೂ ಮಂಗಳವಾಗಲಿ ಎಂಬ ಉದಾತ್ತ ವಿಶಾಲ ಮನೋಭಾವ ಅಂದಿನ ಜನರಿಗಿತ್ತು.
ಆದರೆ ಈಗೇನಾಗಿದೆ? ಹಾಗಾದರೆ ವೇದಗಳು ಅಪ್ರಸ್ತುತವೆ?
ಚತುರ್ವೇದಗಳನ್ನೂ ಅರಗಿಸಿಕೊಂಡಿರುವ ಮಹಾನ್ ಚೇತನ ಶತಾಯುಷಿ ಶ್ರೀ ಸುಧಾಕರ ಚತುರ್ವೇದಿ ಅವರ ಶಿಷ್ಯರೂ ಹಾಗೂ ವೇದಾಧ್ಯಾಯಿಗಳೂ ಆಗಿರುವ ಬೆಂಗಳೂರಿನ ಸುಧಾಕರ ಶರ್ಮ ಅವರ ಪ್ರಕಾರ ವೇದಗಳು ಖಂಡಿತ ಅಪ್ರಸ್ತುತವಲ್ಲ! ಅಜ್ಞಾನಿಗಳೂ, ಜಗತ್ತಿನ ನಿತ್ಯ ಸತ್ಯಗಳನ್ನು ಅರಗಿಸಿಕೊಳ್ಳಲಾಗದವರು; ಅದರಂತೆ ನಡೆಯುವ ಸಾಮಥ್ರ್ಯವಿಲ್ಲದವರು ಈ ಪಲಾಯನ ವಾದ ಮಂಡಿಸುತ್ತಾರಷ್ಟೆ. ಈ ಒಂದೇ ಭೂಮಿಯ ಮೇಲೆ ಮನುಷ್ಯ ಹೇಗೆ ಬದುಕಬೇಕು; ಅವನ ರೀತಿ ನೀತಿಗಳು ಹೇಗಿರಬೇಕು; ಅವನ ಅಂತಿಮ ಗುರಿ ಏನು ಎಂಬುದನ್ನು ತಿಳಿಸಿಕೊಡುವ ವೇದಗಳು ``ಮನು ಕುಲದ ಸಂವಿಧಾನ''ವಾಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳ ಜತೆಗೆ 6 ವೇದಾಂಗಗಳಿವೆ. ಅವು- ಛಂದಸ್ಸು, ಶಿಕ್ಷಾ, ವ್ಯಾಕರಣ, ನಿರುಕ್ತಿ, ಜ್ಯೋತಿಷ ಹಾಗೂ ಕಲ್ಪ. ಜತೆಗೆ 6 ದರ್ಶನಗಳಿವೆ- ಅವು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ ಹಾಗೂ ಉತ್ತರ ಮೀಮಾಂಸ. ಇದಲ್ಲದೆ ಆಯುರ್ವೇದ  ಮತ್ತಿತರ ಉಪ ವೇದಗಳೂ ಇವೆ. ಇವೆಲ್ಲವನ್ನೂ ಒಳಗೊಂಡ `ವೇದ ವೇದಾಂಗ ದರ್ಶನಗಳ' ವಿಷಯಗಳೇ ಜಗತ್ತಿನ ನಿತ್ಯ ಸತ್ಯಗಳು. ಉಳಿದಂತೆ ಪುರಾಣಗಳು, ಪುಣ್ಯ ಕಥೆಗಳು, ನಂಬಿಕೆಗಳು, ಆಚರಣೆಗಳು, ಪದ್ಧತಿಗಳು ಇತ್ಯಾದಿ ಅಪಭ್ರಂಶಗಳೆಲ್ಲ ನಾವು ಸೃಷ್ಟಿಸಿಕೊಂಡ ಮಿಥ್ಯಗಳೇ ಆಗಿವೆ. ದುರದೃಷ್ಟವಶಾತ್ ಭಾರತವೂ ಸೇರಿದಂತೆ ಈಗ ಜಗತ್ತು ಇಂತಹ ಮಿಥ್ಯಗಳ ಹಾದಿಯಲ್ಲೇ ನಡೆಯುತ್ತಿದೆ! `ವೈದಿಕ ಸಿದ್ಧಾಂತ ಹಾಗೂ ಮಾನವೀಯ ಧರ್ಮ' ಮುಖ್ಯವೇ ಹೊರತು ಯಾವುದೇ ವ್ಯಕ್ತಿಗಳಲ್ಲ. ಆದರೆ ಇಂದು ಎಲ್ಲವೂ ವ್ಯಕ್ತಿ ಪ್ರಧಾನ್ಯತೆ ಮೇಲೆಯೇ ಸಾಗುತ್ತಿವೆ. ಇದು ಸಲ್ಲದು ಎಂಬ ಪ್ರಖರ ಹಾಗೂ ಕ್ರಾಂತಿಕಾರಿ ಸತ್ಯಗಳನ್ನು ಅವರು ಮುಂದಿಡುತ್ತಾರೆ.
ತಪ್ಪು ಕಲ್ಪನೆಗಳು:
ವೇದಗಳ ಕುರಿತು ಇಂದು ಅನೇಕ ತಪ್ಪು ಕಲ್ಪನೆಗಳಿವೆ. ಈ ನಕಾರಾತ್ಮಕ ಕಲ್ಪನೆಗಳದ್ದೇ ಸಾಮ್ರಾಜ್ಯ. ವೇದ ಎಂದರೆ `ಜ್ಞಾನ' ಎಂಬ ಅರ್ಥವಷ್ಟೆ. ಈ ಜ್ಞಾನ ರಾಶಿ ಜಗತ್ತಿನ ಯಾರ ಸ್ವತ್ತೂ ಅಲ್ಲ; ವೇದಗಳಲ್ಲಿ ಯಾವುದೇ ನಿರ್ದಿಷ್ಟ ಜಾತಿ, ಮತ, ಪಂಥಗಳ ಉಲ್ಲೇಖವಿಲ್ಲ. ವೇದಗಳ ಮೇಲೆ ಯಾರಿಗೂ ಅಧಿಕಾರ ಸ್ಥಾಪಿಸುವ ಹಕ್ಕಿಲ್ಲ. ಈ ಜಗತ್ತಿನೊಂದಿಗೇ ಸೃಷ್ಟಿಯಾದ ವೇದಗಳಲ್ಲಿ ಎಲ್ಲವೂ ಅಡಗಿದೆ ಹಾಗೂ ಅವು ಜಗತ್ತಿನ ಎಲ್ಲರಿಗಾಗಿಯೂ ಇವೆ. ವೇದಗಳು ಪುರೋಹಿತಶಾಹಿಯೂ ಅಲ್ಲ; ಮಂತ್ರ ಹೇಳುವ ಪುರೋಹಿತರಿಗಾಗಿ ಸೃಷ್ಟಿಯಾದದ್ದೂ ಅಲ್ಲ. ಕೇವಲ ಒಂದು ವರ್ಗ ಅಥವಾ ಜಾತಿಗೆ ಸೀಮಿತವಂತೂ ಅಲ್ಲವೇ ಅಲ್ಲ! ಯಾವುದೇ ವೇದದಲ್ಲೂ `ಹಿಂದೂ' ಎಂಬ ಶಬ್ದ ಇಲ್ಲ. `ಆರ್ಯ' ಎಂಬ ಶಬ್ದ ಮಾತ್ರ ಸಿಗುತ್ತದೆ. ಆರ್ಯ ಎಂಬುದು ಇಂಗ್ಲೀಷಿನ `ಜಂಟ್ಲ್ಮನ್ (ಸಂಭಾವಿತ) ಎಂಬ ಪದಕ್ಕೆ ಸಮಾನ ಅರ್ಥ ಹೊಂದಿದೆ. ಈ ಅರ್ಥದಲ್ಲಿ ಇಡೀ ಮನುಕುಲ `ಆರ್ಯ ಕುಲ'ವಾಗಬೇಕೇ ಹೊರತು, `ಆರ್ಯ-ದ್ರಾವಿಡ ಎಂಬ ವಿಚ್ಛಿದ್ರಕಾರಿ ಸುಳ್ಳು ಸುಳ್ಳೇ ತಪ್ಪು ಕಲ್ಪನೆಗಳಿಗೆ ಈಡಾಗಬಾರದು.
`ಪ್ರಗತಿಪರ'ರು, `ಜಾತ್ಯತೀತ'ವಾದಿಗಳೆಂದು ಕರೆಸಿಕೊಳ್ಳುವವರಿಂದ ಈಗೀಗ ಹೆಚ್ಚು ಟೀಕೆಗೆ ಒಳಗಾಗಿರುವ `ಮನು' ಹೇಳಿದನೆಂದು ಉಲ್ಲೇಖಿಸಲಾಗುತ್ತಿರುವ `ನಃ ಸ್ತ್ರೀ  ಸ್ವಾತಂತ್ಯ್ರಮರ್ಹತಿಃ' (ಹೆಣ್ಣಿಗೆ ಸ್ವಾತಂತ್ಯವಿಲ್ಲ) ಎಂಬುದಾಗಲಿ, ಪ್ರಾಣಿ ಬಲಿಯಾಗಲಿ (ಹಿಂಸೆ),  ಜಾತಿಗಳ ಕುರಿತಾಗಲಿ, ಮೇಲು ಕೀಳು ಅಸ್ಪೃಶ್ಯತೆಗಳಾಗಲಿ ಅಥವಾ ಇನ್ಯಾವುದೇ ನಕಾರಾತ್ಮಕ ಅಂಶಗಳಾಗಲಿ ವೇದಗಳಲ್ಲಿ ಇಲ್ಲ. ಪರಂಪರೆ ಸಾಗಿಬಂದಂತೆ ಕಾಲಾನುಕ್ರಮವಾಗಿ ಇವೆಲ್ಲವೂ ಸ್ವಾರ್ಥ ಸಾಧಕರ ಹುನ್ನಾರದಿಂದಾಗಿ ಸಮಾಜದಲ್ಲಿ ಸೇರಿಕೊಂಡ ವಿಕೃತಿಗಳಾಗಿವೆ. ವಾಸ್ತವವಾಗಿ ವೇದಗಳಲ್ಲಿ ಸ್ತ್ರೀಯರಿಗೆ ಸಮಾನತೆ ಸಾರಲಾಗಿದೆ. ಅವರಿಗೂ ಶೋಡಷ ಸಂಸ್ಕಾರಗಳು ಹಾಗೂ ವೇದಾಧ್ಯಯನ ಹಕ್ಕು ಇದೆ. ದುರದೃಷ್ಟವಶಾತ್ ಇಂದಿನ ಯಾವುದೇ ಪೀಠಾಧಿಪತಿಗಳೂ ಸಹ ಇದನ್ನು ನೇರವಾಗಿ ಬಾಯಿಬಿಟ್ಟು ಹೇಳುತ್ತಿಲ್ಲ!
ವೇದಗಳಲ್ಲಿ ಜಾತಿಯ ಬದಲು `ವರ್ಣ'ವಿದೆ. ವರ್ಣ ಎಂದರೆ ವರ್ಗ ಅಷ್ಟೆ. ಇದೊಂದು ಸಾಮಾಜಿಕ ವ್ಯವಸ್ಥೆ. ಇಂದೂ ಸಹ ವೈದ್ಯರ ವರ್ಗ, ವಕೀಲರ ವರ್ಗ, ಇಂಜಿನಿಯರುಗಳ ವರ್ಗ, ಸೇವಾ ವರ್ಗ ಎಂದಿಲ್ಲವೇ ಹಾಗೆಯೇ ಅವರವರು ಕೈಗೊಳ್ಳುವ ವೃತ್ತಿಗಳಿಗೆ ಅನುಗುಣವಾಗಿ ಅವನ್ನು ವಿಂಗಡಿಸಬಹುದು. ಹಿಂದೆ ಅವರವರ ಸ್ವಭಾವ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ವೇದಾಧ್ಯಯನ ಹಾಗೂ ವೃತ್ತಿಗಳಲ್ಲಿ ಪರಿಣತಿ ಪಡೆಯಲು ಅವಕಾಶವಿತ್ತು. ಆ ದೃಷ್ಟಿಯಲ್ಲಿ ವರ್ಣ ಎಂಬುದು ಜಗತ್ತಿನ ಎಲ್ಲೆಡೆಯೂ ಇಂದಿಗೂ ಪ್ರಚಲಿತವೇ ಆಗಿದೆ. ಅದರ ಬದಲು ವರ್ಣಗಳನ್ನು ವಿಕೃತಗೊಳಿಸಿ ಜಾತಿಗಳ ಹೆಸರಿನಲ್ಲಿ ಗುಂಪುಗಾರಿಕೆ ಮಾಡಿ ಶೋಷಣೆಗೆ ಒಳಪಡಿಸಿದ್ದರೆ ಅದು ಸ್ವಾರ್ಥಕ್ಕಾಗಿ ಮಾಡಿಕೊಂಡ ಅಮಾನವೀಯ ವ್ಯವಸ್ಥೆಯಷ್ಟೆ.
ಒಟ್ಟು ರಾಶಿಯಾಗಿ ಬಿದ್ದಿದ್ದ ವೇದ ಜ್ಞಾನವನ್ನು ವ್ಯಾಸ ಮಹರ್ಷಿಗಳು ಚತುರ್ವೇದಗಳಾಗುವಂತೆ ವಿಂಗಡಿಸಿದರೆಂಬ ಸಿದ್ಧಾಂತವೂ ಸಹ ತಪ್ಪು ಕಲ್ಪನೆಯಾಗಿದೆ! ವೇದದ ಮೂಲ ಮಂತ್ರವೊಂದರಲ್ಲಿ `ಋಗ್ವೇದ, ಯಜುರ್ವೇದ, ಸಾಮ ವೇದ ಹಾಗೂ ಅಥರ್ವಣ ವೇದ' ಎಂದು ನಾಲ್ಕು ಭಾಗ ಮಾಡಿಯೇ ಹೆಸರಿಸಿರುವ ಉಲ್ಲೇಖವಿದೆ!! ಅಂದ ಮೇಲೆ ನಂತರ ಅವನ್ನು ವಿಂಗಡಿಸಿಡುವ ಮಾತೆಲ್ಲಿ ಬಂತು? ಆದರೆ ವ್ಯಾಸರು ಚತುರ್ವೇದಗಳನ್ನೂ ಆಳವಾಗಿ ಅಧ್ಯಯನ ಮಾಡಿದರು ಎಂಬುದು ಮಾತ್ರ ನಿತ್ಯ ಸತ್ಯ. ಹೀಗಾಗಿಯೇ ಅವರಿಗೆ `ವೇದ ವ್ಯಾಸರು' ಎಂಬ ಹೆಸರಾಗಿದೆ.
ಇನ್ನು, `ವೇದ ಕಾಲ' ಎಂಬುದೂ ಸಹ ಇತಿಹಾಸ ತಿರುಚುವ ಯತ್ನದ ಸುಳ್ಳು ಕಲ್ಪನೆಯಾಗಿದೆ. ವೇದ ಜ್ಞಾನವನ್ನು ನಾಶಪಡಿಸಿ ತಮ್ಮ ಪ್ರಭುತ್ವ ಸ್ಥಾಪಿಸಲು ಬ್ರಿಟೀಷರು ಮಾಡಿದ ಕುತಂತ್ರ ಇದಾಗಿದೆ. ಸರ್ವ ಕಾಲವೂ ವೇದ ಕಾಲವೇ! ನಾವು ಕಲ್ಲಿಗೊಂದು-ಗಲ್ಲಿಗೊಂದು ಸೃಷ್ಟಿಸಿರುವ `ದೇವತೆಗಳು' ಸಹ ತಪ್ಪು ಕಲ್ಪನೆಯೇ ಆಗಿದೆ. ಇತರ ಧರ್ಮಗಳು ಹೇಳುವಂತೆ ವೇದಗಳೂ ಸಹ ಏಕ ದೈವವನ್ನೇ ಪ್ರತಿಪಾದಿಸಿವೆ. ದೇವರು ಒಬ್ಬನೇ; ಅವನು ಸವಾಂತರ್ಯಾಮಿ; ನಿರಾಕಾರ; ನಿರ್ಗುಣ ಎಂದೇ ಸಾರಿವೆ. ಹಾಗಿದ್ದ ಮೇಲೆ ಉಳಿದಂತೆ ಸೃಷ್ಟಿಯಾದ ಪುರಾಣಗಳು, ಪುಣ್ಯ ಕಥೆಗಳು, ಮುಕ್ಕೋಟಿ ದೇವತೆಗಳು, ದಶಾವತಾರಗಳ ಕಲ್ಪನೆ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಈಗಿನ ಜ್ಯೋತಿಷ್ಯ, ವಾಸ್ತು ಇತ್ಯಾದಿಗಳೆಲ್ಲವೂ ಸುಳ್ಳು. ಸ್ವಾರ್ಥಕ್ಕಾಗಿ ಮತ್ತು ಅಜ್ಞಾನದಿಂದ ಸಮಾಜ ಘಾತುಕರು ಕಾಲಾನುಕ್ರಮವಾಗಿ ಇವೆಲ್ಲವನ್ನೂ ಸೃಷ್ಟಿಸಿದ್ದಾರೆ!
ವೇದಗಳಲ್ಲಿ ಜ್ಯೋತಿಷ ಇದೆ ನಿಜ; ಆದರೆ ಅದು ಈಗಿನ ಡೋಂಗಿ ಜ್ಯೋತಿಷಿಗಳು ಹೇಳುವ ಫಲ ಜ್ಯೋತಿಷ್ಯವಲ್ಲ; ಅಲ್ಲಿರುವುದು ಅಪ್ಪಟ ಖಗೋಳ ವಿಜ್ಞಾನ (ಆರ್ಯಭಟನಂತಹ ವಿಜ್ಞಾನಿಗಳು ಅಭ್ಯಸಿಸಿದ ಶಾಸ್ತ್ರ). ಅದು `ಆಸ್ಟ್ರಾನಮಿ'ಯೇ ಹೊರತು ಈಗಿನ `ಆಸ್ಟ್ರಾಲಜಿ' ಅಲ್ಲ! ಈಗಿನವರು ವೇದದಲ್ಲಿನ `ಜ್ಯೋತಿಷ್ಯ' ಎಂಬ ಪದವನ್ನಷ್ಟೇ ಕದ್ದು, ಅದರ ಹೆಸರಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ.
ಅದೇ ರೀತಿ ಈಗ ದೊಡ್ಡ ಪಿಡುಗಾಗಿರುವ, ಅಮಾಯಕರನ್ನು ಹೆದರಿಸಿ ಸುಲಿಗೆ ಮಾಡುತ್ತಿರುವ `ವಾಸ್ತು'ವೂ ಸಹ ವೇದಗಳಲ್ಲಿ ಇಲ್ಲ. ವಾಸ್ತು ಎಂದರೆ ಮನೆಯ ಹೊಸ್ತಿಲು ಎಂದಷ್ಟೇ ಅರ್ಥ. ವೇದಗಳಲ್ಲಿ `ವಾಸ್ತೋಷ್ಪತಿ' ಎಂದು ಕರೆಸಿಕೊಳ್ಳುವ ಆ ಒಬ್ಬನೇ ಭಗವಂತನನ್ನು ಕುರಿತು `ನಾನು ಕಟ್ಟಿಸಿರುವ ಹೊಸ ಮನೆ, ಮಡದಿ, ಮಕ್ಕಳು, ಪಶು ಮತ್ತಿತರ ಸಂಪತ್ತನ್ನು ಕಾಪಾಡು ದೇವಾ' ಎಂದು ಪ್ರಾರ್ಥಿಸುವ ಅನೇಕ ಮಂತ್ರಗಳನ್ನು ಕಾಣಬಹುದು. ಯಥಾಪ್ರಕಾರ `ವಾಸ್ತು' ಎಂಬ ಪದವನ್ನಷ್ಟೆ ಕದ್ದು ಅದರ ದುರುಪಯೋಗದೊಂದಿಗೆ ಅಮಾಯಕರ ಸುಲಿಗೆ ನಡೆದಿದೆ ಎಂದು ಸುಧಾಕರ ಶರ್ಮರು ಹಲವು ವೇದ ಮಂತ್ರಗಳನ್ನು ಉಲ್ಲೇಖಿಸಿ ಪ್ರಸ್ತುತ ಸ್ಥಿತಿಗತಿ ಖಂಡಿಸುತ್ತಾರೆ.

ತಿರುಚುವ ಎಚ್ಚರಿಕೆ:
ಭಗವದ್ಗೀತೆಯೂ ಸಹ ವೇದೋಪನಿಷತ್ತುಗಳ ಸಾರವೇ ಆಗಿದೆ. ಬಹಳ ಹಿಂದಕ್ಕೆ ಹೋದರೆ ರಾಮ ಹಾಗೂ ಕೃಷ್ಣರು ಐತಿಹಾಸಿಕ ವ್ಯಕ್ತಿಗಳೆಂಬುದು ಮಾತ್ರ ನಿಜ; ಉಳಿದವರು ಹಾಗೂ ಉಳಿದದ್ದೆಲ್ಲವೂ ಕಾಲ್ಪನಿಕ ಕಥೆಗಳಷ್ಟೆ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸರಳ ಕನ್ನಡದಲ್ಲಿ ಹೇಳಿರುವ ಸತ್ಯಗಳೂ ಸಹ ವೇದೋಪನಿಷತ್ತುಗಳ ಸಾರವಾದ ಭಗವದ್ಗೀತೆಯಲ್ಲಿ ಇರುವಂಥವೇ ಆಗಿವೆ.
ಬಸವ ಹಾಗೂ ಬುದ್ಧರು ವೇದಗಳನ್ನು ಎಂದೂ ವಿರೋಧಿಸಲಿಲ್ಲ. ಬದಲಿಗೆ ಅವುಗಳ ಜತೆ ಸಾಗಿ ಬಂದ ಅಪಭ್ರಂಶಗಳನ್ನಷ್ಟೇ ವಿರೋಧಿಸಿದರು. ವೇದಗಳೊಂದಿಗೆ ಸಾಗಿಬಂದ ವಿಕೃತಿ, ವಿರೋಧಾಭಾಸ, ವಿಪರ್ಯಾಸ, ಅಪಾರ್ಥ ಅಪಭ್ರಂಶಗಳೆಲ್ಲ ಮಹಾ ಭಾರತವೆಂಬ `ಜಾಗತಿಕ ಸಮರ' ಹಾಗೂ ನಂತರದ ದುಷ್ಪರಿಣಾಮಗಳಾಗಿವೆ. ವೇದಾಂಗಗಳು ಹಾಗೂ ಅದರಲ್ಲಿನ `ವ್ಯವಸ್ಥೆ'ಯನ್ನು ಕಡೆಗಣಿಸಿ ಕೇವಲ ಊಹೆಗಳು, ಕಲ್ಪನೆಗಳು ಅಥವಾ ಈಗಿನ ಮಾಮೂಲಿ `ಪದ ಕೋಶ' (ಡಿಕ್ಷನರಿ) ಆಧಾರದ ಮೇಲೆ ವೇದಗಳನ್ನು ಸರಳೀಕರಿಸುವ ಪ್ರಕ್ರಿಯೆಗೆ ತೊಡಗಿದರೆ ದಾರಿ ತಪ್ಪುವುದು ಖಚಿತ! ಆಗ ವೇದಗಳ ಗಾಂಭೀರ್ಯ ಹಾಗೂ ನಿಜಾರ್ಥಗಳು ಕಳೆದುಹೋಗಿ ಅಪಾರ್ಥಗಳೊಂದಿಗೆ ತಿರುಚಲ್ಪಡುವ ಅಪಾಯವಿದೆ. ಅದು ಅಸಾಧ್ಯ. ಹಿಂದೆ ನಡೆದ ಅಂತಹ ಪ್ರಯತ್ನಗಳ ಫಲವನ್ನು ಇದೀಗ ಸಮಾಜ ಅನುಭವಿಸುತ್ತಿದೆ. ಈ ಕುರಿತು ತುಂಬಾ ಎಚ್ಚರವಾಗಿರಬೇಕು ಎಂದು ಶರ್ಮರು ಮುನ್ನೆಚ್ಚರಿಕೆ ನೀಡುತ್ತಾರೆ.

`ಸೌಧನ್ವನಾಸಹಃ:
ವೇದಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವ್ಯಾಪಕವಾದ ವಿವರಗಳು ಇವೆ. ಅದರಂತೆ- 1) `ವಿಶ್ವ ಚೇತನ ದೇವ' ಎಂದರೆ ನಮ್ಮ ಕಣ್ಣಿಗೆ ಕಾಣದ ಒಂದು ಸರ್ವ ಶಕ್ತ ದೈವ. 2) `ಚೈತನ್ಯ ದೇವತಾ' ಎಂದರೆ `ಅರಿವು' ಇರುವ ಜೀವಂತ ಜ್ಞಾನಿಗಳು; ಮಾನವರು ಅಥವಾ ಜೀವಾತ್ಮಗಳು ಮತ್ತು 3) `ಜಡ ದೇವತೆಗಳು' ಎಂದರೆ ಪಂಚ ಭೂತಗಳು (ಆಕಾಶ, ನೀರು, ವಾಯು, ಅಗ್ನಿ ಮತ್ತು ಭೂಗೋಳ). ವೇದದಲ್ಲಿ ಈ ಪಂಚ ಭೂತಗಳನ್ನೂ ಸೇರಿಸಿಯೇ ಈ ಭೂಮಿಯನ್ನು ಇಡಿಯಾಗಿ ಪರಿಗಣಿಸಲಾಗಿದೆ. ಇಲ್ಲಿ `ಸೌಧನ್ವನಾಸಹಃ' ಎಂಬ ಮಾತು ಬರುತ್ತದೆ. `ಸುಧನ್ವ' ಎಂದರೆ `ಒಳ್ಳೆಯ ಭೂಮಿ'. ಸೌಧನ್ವನಾಸಹಃ ಎಂಬ ಶಬ್ದದ ಅರ್ಥ ಬಿಡಿಸಿದಾಗ `ಒಳ್ಳೆಯ ಭೂಮಿಯ ಒಳ್ಳೆಯ ಮಕ್ಕಳು' ಎಂದಾಗುತ್ತದೆ! ಹಾಗೆ ಒಳ್ಳೆಯ ಮಕ್ಕಳಾಗಬೇಕೆಂದರೆ ಈ ಭೂಮಿಗೆ ಸಂಬಂಧಿಸಿದ ಈ ಪಂಚ ಭೂತಗಳ ತಂಟೆಗೆ ಯಾರೂ ಹೋಗಬಾರದು; ಅವು ಏನೇನು ನೀಡುತ್ತವೆಯೋ ಅವನ್ನು ಹಾಗೆಯೇ ಪಡೆದುಕೊಂಡು, ಅವುಗಳ ಜತೆಯಲ್ಲೇ ಹೊಂದಿಕೊಂಡು ಮನುಷ್ಯ ಜೀವಿಸಬೇಕು; ಹಾಗಿದ್ದರೆ ಮಾತ್ರ ನಾವು `ಸೌಧನ್ವನಾಸಹಃ' ಆಗುತ್ತೇವೆ; ಈ ಪರಿಸರ ಚೆನ್ನಾಗಿರುತ್ತದೆ!!
ಈಗ ಯೋಚಿಸಿ: ನಾವು ಹಾಗಿದ್ದೇವೆಯೇ!? ಹಾಗೆ ಇರಬೇಕು ಎಂದು ಸಂಕಲ್ಪಿಸುವುದಾದರೆ ಅದಕ್ಕೆ ಅಗತ್ಯವಾದ 3 ಅರ್ಹತೆಗಳನ್ನು ಮೊದಲು ಹೊಂದಬೇಕಾಗುತ್ತದೆ. 1) `ರೋಗ-ಭೋಗ-ಯೋಗ'- ಈ ಮೂರರ ನಿಜವಾದ ಅರ್ಥ ಏನು ಎಂದು ತಿಳಿಯಬೇಕು; ನಂತರ ಈ ಮೂರನ್ನೂ ಸರಿಯಾಗಿ ಗುರುತಿಸಿಕೊಂಡು ಅದರಂತೆ ನಡೆಯುವ ಸಾಮಥ್ರ್ಯ ಪಡೆಯಬೇಕು. 2) ಪಂಚ ಭೂತಗಳನ್ನೂ ಹಿತ ಮಿತವಾಗಿ-ಸಮರ್ಪಕವಾಗಿ ಬಳಸಿಕೊಳ್ಳುವ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಮತ್ತು 3) `ಈತ ನಿಜವಾಗಿಯೂ ಯೋಗ್ಯ ವ್ಯಕ್ತಿ' ಎಂದು ನಿಮ್ಮ ಬಗ್ಗೆ ಇನ್ನೊಬ್ಬರು ಮತ್ತೊಬ್ಬರತ್ತ ಬೆಟ್ಟುಮಾಡಿ ತೋರಿಸುವಂತಹ ಉತ್ತಮ ಚಾರಿತ್ರ್ಯ (ಪ್ರಾಮಾಣಿಕತೆ) ರೂಢಿಸಿಕೊಳ್ಳಬೇಕು. ಈ ಅರ್ಹತೆಗಳನ್ನು ಪಡೆದವರು ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ. ಈ ದೃಷ್ಟಿಯಲ್ಲಿ ನೋಡಿದಾಗ ಪ್ರಸ್ತುತ ಪ್ರಪಂಚದ 600 ಕೋಟಿಗೂ ಹೆಚ್ಚು ಜನ ಸಂಖ್ಯೆಯಲ್ಲಿ ಇಂತಹ ಅರ್ಹ `ಸೌಧನ್ವನಾಸಹಃ' ಬೆರಳೆಣಿಕೆಯಷ್ಟೂ ಸಿಗಲಾರರೇನೋ....!?

ಡೈನಮಿಕ್ ಕಮ್ಯುನಿಸಂ:
ಈಗಿನ `ಕಮ್ಯುನಿಸಂ' (ಸಮತಾ ವಾದ) ಪ್ರಕಾರ `ಜಗತ್ತಿನಲ್ಲಿ ಎಲ್ಲೆಲ್ಲೂ ಸಮಾನತೆ ಬರಬೇಕು'. ಸರಿ! ಸಮಾನತೆ ಬಂತು; ಎಲ್ಲರೂ ಸಮಾನರಾದರು; ಗುರಿ ಸಾಧಿಸಿಯಾಯ್ತು ಎಂದಿಟ್ಟುಕೊಳ್ಳೋಣ. ಮುಂದೇನು? ಈ ಪ್ರಶ್ನೆಗೆ ಕಮ್ಯುನಿಸಂನಲ್ಲಿ ಉತ್ತರವಿಲ್ಲ. ಆದರೆ ವೇದಗಳಲ್ಲಿ ಇದಕ್ಕೆ ಉತ್ತರವಿದೆ- ಹೌದು; ವೇದಗಳಲ್ಲೂ ಕಮ್ಯುನಿಸಂ ಇದೆ! ಅದು ಡೈನಮಿಕ್ ಕಮ್ಯುನಿಸಂ!! ಅಂದರೆ- ನಿನಗಿಂತ ಹಿಂದುಳಿದವರನ್ನು ನಿನ್ನ ಸಮಕ್ಕೆ ಎಳೆದುಕೋ; ಆದರೆ ನಂತರ ನೀನು ಸುಮ್ಮನಿರಬೇಡ; ನಾಲ್ಕು ಹೆಜ್ಜೆ ಮುಂದೆ ಹೋಗು; ಆಗ ಮತ್ತೆ ನಿನ್ನ ಜತೆಯವ ಹಿಂದುಳಿಯುತ್ತಾನೆ; ಪುನಃ ಆತನನ್ನು ನಿನ್ನ ಸಮಕ್ಕೆ ಎಳೆದುಕೋ....! ಇದೇ ಪ್ರಕ್ರಿಯೆ ಮುಂದುವರೆಸಿಕೊಳ್ಳುತ್ತಾ ಸಾಗಿದಾಗ ನೀನು ಮತ್ತು ನಿನ್ನ ಜತೆಯವ ಇಬ್ಬರೂ ಅಂತಿಮ ಗುರಿ ತಲುಪಲು ಸಾಧ್ಯ; ನೀನು ಹೀಗೆ ನಿನ್ನ ಜತೆಯವನನ್ನು ಮೂರ್ನಾಲ್ಕು ಬಾರಿ ನಿನ್ನ ಸಮಕ್ಕೆ ಎಳೆದುಕೊಳ್ಳುವ ವೇಳೆಗೆ ಅವನಿಗೇ ಸ್ವತಃ ನಿನ್ನಷ್ಟೇ ಶಕ್ತಿ ಬಂದಾಗಿರುತ್ತದೆ; ಅವನೇ ನಿನ್ನ ಸಮಕ್ಕೆ ಬರುವ ಸಾಧ್ಯತೆಗಳಿವೆ!!

ಅರಿಷಡ್ವರ್ಗಗಳ ಪಳಗಿಸುವಿಕೆ:
ಈ ಕಲಿಯುಗ ಸಾಗುತ್ತಿರುವ ವಿನಾಶಕಾರಿ ರೀತಿ-ನೀತಿಗಳನ್ನು ಕಂಡರೆ ದಿಗಿಲಾಗುತ್ತದೆ. ಎಲ್ಲೆಲ್ಲೂ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರ ಅನಾಚಾರಗಳ ತಾಂಡವ ನಡೆದಿದೆ. ಇದೆಲ್ಲದಕ್ಕೂ ಮೂಲ ಕಾರಣ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮಾತ್ಸರ್ಯ ಎಂಬ ಅರಿಷಡ್ವರ್ಗಗಳೇ ಆಗಿವೆ. ಇವನ್ನು ತೊಡೆಯುವುದು ಹೇಗೆ? ಇಲ್ಲ ಬಿಡಿ! ಇವು ಪ್ರಕೃತಿ ಸಹಜವಾಗಿರುವ ಜೀವಾತ್ಮನ ಲಕ್ಷಣಗಳಾಗಿರುವುದರಿಂದ ಇವನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳ ಜತೆಗೇ ಬದುಕುವುದು ಅನಿವಾರ್ಯ ಕರ್ಮ. ಆದರೆ ಅವುಗಳ ಸಹಜ ಲಕ್ಷಣಗಳೊಂದಿಗೇ ಯಥಾವತ್ತಾಗಿ ಬದುಕಿದರೆ ಅವನು ಮನುಷ್ಯನಾಗಿರಲು ಸಾಧ್ಯವಾಗದೆ ರಾಕ್ಷಸನಾಗುತ್ತಾನಷ್ಟೆ; ಹಾಗಾದರೆ ಉಪಾಯವೇನು? ಇದೆ! ಇವನ್ನು ಪೂರ್ಣ ನಿವಾರಿಸಲು ಸಾಧ್ಯವಾಗದಿದ್ದರೂ, `ನಕಾರಾತ್ಮಕ' ಆಗಿರುವ ಇವನ್ನು `ಸಕಾರಾತ್ಮಕ' ಮಾಡಿಕೊಳ್ಳಬೇಕಷ್ಟೆ!! ಅದು ಹೀಗೆ:

ಕಾಮ: ಅಂದರೆ ಆಸೆ-ಇಚ್ಛೆ. ಇದನ್ನು ವೇದದಲ್ಲಿ ಕೋಕಯ (ನೈಟಿಂಗೇಲ್) ಪಕ್ಷಿಗೆ ಹೋಲಿಸಲಾಗಿದೆ. ಈ ಕಾಮದ ಮುಂದೆ ಜ್ಞಾನವನ್ನು ಹಾಕಿ! ಆಸೆ...ಆಸೆ...ಆಸೆ; ಜಗತ್ತಿನ ಎಲ್ಲ ಜ್ಞಾನವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಅತ್ಯಾಸೆ; ಓದು...ಓದು...ಓದುತ್ತಾ ನಿನ್ನ ಆಸೆ ಪೂರೈಸಿಕೋ. ಇಲ್ಲಿ ಆಸೆ ಇದ್ದೇ ಇದೆ. ಆದರೆ ಅದು ಸಕಾರಾತ್ಮಕವಾಗಿ ಬದಲಾವಣೆಗೊಂಡಿದೆ.

ಕ್ರೋಧ: ಇದನ್ನು ವೇದಗಳಲ್ಲಿ ತೋಳಕ್ಕೆ ಹೋಲಿಸಲಾಗಿದೆ. ಕ್ರೋಧವನ್ನು ನಾವು `ಮನ್ಯು'ವಾಗಿಸಬೇಕು. ಅಂದರೆ `ಚಿಂತನಾ ಸಹಿತವಾದ ಕೋಪ' ಇಟ್ಟುಕೊಳ್ಳಬೇಕು. ಉದಾಹರಣೆಗೆ- ಅನ್ಯಾಯ, ಅಕ್ರಮ ಕಂಡಾಗ ಸಿಡಿದು ಬೀಳುವುದು. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ; ನಾನೂ ಭ್ರಷ್ಟನಾಗುವುದಿಲ್ಲ; ಅನೀತಿ ಕೆಲಸ ಮಾಡುವುದಿಲ್ಲ ಎಂಬಂತಹ ಹಠದ ಕೋಪ ಬೆಳೆಸಿಕೊಳ್ಳುವುದು. ಇಲ್ಲಿ ಕೋಪ ಇದ್ದೇ ಇದೆ. ಆದರೆ ಅದು `ಮನ್ಯು'ವಾಗಿದೆ.

ಲೋಭ: ವೇದಗಳಲ್ಲಿ ಇದನ್ನು ಹದ್ದಿಗೆ ಹೋಲಿಸಲಾಗಿದೆ. ಯಥಾಪ್ರಕಾರ ಇದಕ್ಕೆ ಜ್ಞಾನವನ್ನೇ ಮೇವಾಗಿ ಹಾಕಿದರಾಯಿತು.

ಮೋಹ: ವೇದಗಳಲ್ಲಿ ಇದು ಗೂಬೆಗೆ ಸಮಾನ! ಗೂಬೆ ನಿಶಾಚರಿ. ಕತ್ತಲು ಎಂದರೆ ಅದಕ್ಕೆ ವಿಪರೀತ ಮೋಹ. ಮನುಷ್ಯ ತನ್ನ ಒಂದು ವಸ್ತು ಅಥವಾ ಪ್ರೀತಿ ಪಾತ್ರರ ಮೇಲಿಟ್ಟಿರುವ ಮೋಹವನ್ನು ಜಗತ್ತಿನ ಕಡೆಗೆ ತಿರುಗಿಸಬೇಕು. ಅಂದರೆ ಇಡೀ ಜಗತ್ತಿನಲ್ಲಿರುವವರೆಲ್ಲ ನನ್ನವರೇ ಎಂಬ ವ್ಯಾಪಕ- ವಿಶಾಲ ಹೃದಯದ ಮೋಹವಾಗಿ ಪರಿವತರ್ಿಸಿಕೊಳ್ಳಬೇಕು.

ಮದ: ಇದು ಸುಪರ್ಣ- ಎಂದರೆ ಗರುಡನಿಗೆ ಸಮಾನವೆಂದು ವೇದ ಹೇಳಿದೆ. `ನನ್ನ ಸಮಾನರಾರಿಹರು' ಎಂಬ ಮದ ಗರುಡ ಪಕ್ಷಿಗೆ ಹೆಚ್ಚಾಗಿರುತ್ತದೆ. ಹಾರುವುದಾದರೆ ಬಹು ಎತ್ತರಕ್ಕೇ ಹಾರುತ್ತದೆ; ಇಳಿದಾಗ ಕುಳಿತುಕೊಳ್ಳುವುದೂ ಸಹ ಎತ್ತರದಲ್ಲಿಯೇ! ಮನುಷ್ಯನ ಸ್ವಭಾವವೂ ಅದೇ ಆಗಿದೆ. ಇದನ್ನು ಹೋಗಲಾಡಿಸಲು ಅಂತಹವರು ಯಾವುದಾದರೊಂದು ವ್ರತ ನಿಷ್ಠರಾಗಬೇಕು. `ಸತ್ಯವನ್ನೇ ಹೇಳುತ್ತೇನೆ; ಹೌದು ನಾನಿರುವುದೇ ಹೀಗೆ; ನಾನು ಸತ್ಯವನ್ನಷ್ಟೇ ಹೇಳುವುದು'- ಇದು ಸತ್ಯ ವ್ರತದ ಮದ! ಗಾಂಧೀಜಿ ಕೈಗೊಂಡ ಸತ್ಯ-ಅಹಿಂಸಾ ವ್ರತಗಳು ನಮ್ಮ ಕಣ್ಣ ಮುಂದಿವೆ!

ಮಾತ್ಸರ್ಯ: ಇದು ನಾಯಿಗೆ ಸಮಾನವಾದ್ದು ಎಂದು ವೇದ ಹೇಳುತ್ತದೆ. ಯಾರಾದರೂ ನಮ್ಮ ಕಣ್ಣ ಮುಂದೆಯೇ ಉದ್ಧಾರವಾದರೆ, ಒಳಿತಾದರೆ ಅಥವಾ ಸಿರಿವಂತರಾದರೆ ಅದಕ್ಕೆ ನಾವು ಮಾತ್ಸರ್ಯಪಡುವುದು. ಈ ದುರ್ಗುಣವನ್ನು ಹೋಗಲಾಡಿಸಲು ಸ್ವಲ್ಪ ಮುಂದಾಲೋಚನೆ ಬೇಕಷ್ಟೆ. ಅಂದರೆ `ಫಲವನ್ನು ಕೈಬಿಟ್ಟು ಅದರ ಹಿಂದಿರುವ ಪ್ರಯತ್ನ'ವನ್ನು ಚಿಂತಿಸಬೇಕು. ಯಾರಾದರೂ ಹೊಸ ಮನೆ ಕಟ್ಟಿಸಿದನೆಂದರೆ, `ನ್ಯಾಯವಾಗಿ ಸಂಪಾದಿಸಿದ್ದಂತೂ ಅಲ್ಲ ಬಿಡಿ; ಯಾರ ತಲೆ ಒಡೆದು ಈ ಮನೆ ಕಟ್ಟಿಸಿದನೋ...' ಎಂದು ಮಾತ್ಸರ್ಯಪಡುವ ಬದಲು ಈ ಮನೆ ಕಟ್ಟಲು ಆತ ಎಷ್ಟು ಕಷ್ಟಪಟ್ಟಿರಬಹುದು; ಏನೇನು ಪ್ರಯತ್ನ ಮಾಡಿರಬಹುದು ಎಂದು ಉದಾರವಾಗಿ ಚಿಂತಿಸಿ ಅದನ್ನು ತಿಳಿದುಕೊಳ್ಳಬೇಕು. ಆಗ ಮುಂದೆ ನಾವೂ ಸಹ ಸಮಯ ಬಂದಾಗ ಅಂತಹ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ವೇದ ವಿ.ವಿ. ಪಠ್ಯ ಕ್ರಮ:
ಕರ್ನಾಟಕ ಸರ್ಕಾರದ ಉದ್ದೇಶಿತ `ವೇದ-ಸಂಸ್ಕೃತ ವಿ.ವಿ.' ಔಚಿತ್ಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುಧಾಕರ ಶರ್ಮ ಅವರು ಉತ್ತರಿಸಿ, ವೇದ-ಸಂಸ್ಕೃತ ವಿಶ್ವ ವಿದ್ಯಾಲಯ ಸ್ಥಾಪನೆಗೂ ಮುನ್ನ ಅಲ್ಲಿ ಏನೇನು ಕಲಿಸಲಾಗುತ್ತೆ ಎಂಬ ನಿರ್ದಿಷ್ಟ ಪಠ್ಯ ಕ್ರಮವನ್ನು (ಸಿಲಬಸ್) ಸರ್ಕಾರ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು!
`ಮನು ಕುಲದ ಸಂವಿಧಾನ' ಎನಿಸಿರುವ ಮೂಲ ಚತುರ್ವೇದಗಳು, 6 ವೇದಾಂಗಳು ಹಾಗೂ 6 ದರ್ಶನಗಳನ್ನು ಒಳಗೊಂಡ `ವೇದ-ವೇದಾಂಗ-ದರ್ಶನಗಳನ್ನು' ಯಥಾವತ್ತಾಗಿ ಕಲಿಸುವುದಾದರೆ ಮಾತ್ರ ವೇದ ವಿ.ವಿ.ಗೆ ನಮ್ಮ ಸ್ವಾಗತವಿದೆ. ಅದು ಬಿಟ್ಟು ಅಮಾಯಕ ಜನರನ್ನು ಸುಲಿಗೆ ಮಾಡುವ ಮತ್ತದೇ `ಡೋಂಗಿ ಜ್ಯೋತಿಷಿ'ಗಳು ಹಾಗೂ ಬಡಾಯಿ ಕೊಚ್ಚುವ `ವಾಸ್ತು ಶಾಸ್ತ್ರಿ'ಗಳನ್ನು ಸೃಷ್ಟಿಸುವುದೇ ಉದ್ದೇಶವಾಗಿದ್ದಲ್ಲಿ ಖಂಡಿತ ಈ ವಿ.ವಿ. ಅಗತ್ಯವಿಲ್ಲ; ಭಾರತೀಯ ಪರಂಪರೆ ಜತೆಗೇ ಮಗ್ಗುಲ ಮುಳ್ಳಾಗಿ ಬೆಳೆದು ಬಂದಿರುವ ಪುರಾಣಗಳು, ಪುಣ್ಯ ಕಥೆಗಳು, ಶೃಂಗಾರ ಸಾಹಿತ್ಯ ಇತ್ಯಾದಿ ಮಾತ್ರ ಹೇಳಿಕೊಡುವುದಾದರೆ ಖಂಡಿತ ಈ ವಿ.ವಿ. ಬೇಕಾಗಿಲ್ಲ. ಹೀಗಾಗಿಯೇ ಮೊದಲು ಈ ಉದ್ದೇಶಿತ ವಿ.ವಿ.ಯಲ್ಲಿ ಏನು ಕಲಿಸಲಾಗುತ್ತದೆ ಎಂಬ ನಿರ್ಧಿಷ್ಟ ಪಠ್ಯ ಕ್ರಮ ಪ್ರಕಟಿಸಲಿ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಆದರೆ ಸರ್ಕಾರವು ಇತ್ತ ಗಮನ ಹರಿಸಿದಂತೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಏಕೆಂದರೆ ಕೆಲವು ಸತ್ಯಗಳು ಎಂದೂ ಕಹಿಯಾಗಿಯೇ ಇರುತ್ತವೆ!

ವೇದ ವೇದಾಂಗ ದರ್ಶನಗಳ ಕುರಿತು ಇನ್ನಷ್ಟು ಮಾಹಿತಿ ಹಾಗೂ ಉಪನ್ಯಾಸಗಳಿಗಾಗಿ ಆಸಕ್ತರು ಸುಧಾಕರ ಶರ್ಮರ ದೂರವಾಣಿ 9448842474 ಸಂಖ್ಯೆಗೆ ಸಂಪರ್ಕಿಸಬಹುದು
-ಎಚ್.ಎಸ್. ಪ್ರಭಾಕರ, ಪತ್ರಕರ್ತರು,
ಎಚ್.ಆರ್.ಎಸ್. ಕಾಂಪೌಂಡ್,
6ನೇ ಕ್ರಾಸ್, ಕೆ.ಆರ್. ಪುರಂ,
ಹಾಸನ-573201
ದೂರವಾಣಿ: 9448365816

Thursday, March 3, 2011

ಯೋಚಿಸಲೊ೦ದಿಷ್ಟು..೨೪

೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ,ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!

೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!

೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!

೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!

೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!

೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!

೭.ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದ ರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!

೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!

೯.ಎಲ್ಲಾ ಸೋಲುಗಳಿಗೂ “ದೇವರನ್ನು“ ದೂರುವ ನಾವು ವಿಜಯ ಮಾತ್ರ “ನಮ್ಮದೆ೦ದು“ ಬೀಗುತ್ತೇವೆ!

೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ “ಕಪಟ“ವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!

೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!

೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)

೧೩.ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!

೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!

೧೪. ಬುಧ್ಧಿವ೦ತಿಕೆ ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!

೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು
---- ವಿ.ಆರ್ ಭಟ್