Pages

Friday, October 2, 2015

ಹೌದು, ಬಲು ಕಷ್ಟವಾಗುತ್ತೆ, ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪ್ರಶ್ನೆ ಮಾಡಲು ! ನಾನು ಸಂಪ್ರದಾಯ ವಿರೋಧಿಯಲ್ಲ! ಹಾಗೆ ತಪ್ಪು ತಿಳಿದೀರಿ! ಆದರೆ ಇಲ್ಲಿಯವರಗೆ ಯಾವುದಕ್ಕೂ ಯಾಕೆ? ಎನ್ನುವ ಪ್ರಶ್ನೆ ಮಾಡಬಾರದೆಂಬ  ಸಂಸ್ಕಾರದಲ್ಲಿ ನಾವೆಲ್ಲಾ     ಬೆಳೆದುಬಂದು ಬಿಟ್ಟಿದ್ದೇವೆ. ಯಾಕೆ ಹಾಗೆ ಬೆಳಸಿದರೋ ನಾನರಿಯೆ. ಆದರೆ ವೇದವನ್ನು ಅನುಸರಿಸುವ ನಮಗೆ ವೇದದಲ್ಲಿ ಹೇಳಿರುವ  ಪ್ರಶ್ನೆ ಮಾಡಿ ಅರ್ಥ ಮಾಡಿಕೋ, ಎಂಬುದನ್ನು ಮಾತ್ರ ಹೇಳಿಕೊಟ್ಟಿಲ್ಲ. ಹೀಗಾಗಿ ನಾನು ಸುಮಾರು ಏಳೆಂಟು ವರ್ಷಗಳು ವೇದಾಧ್ಯಾಯೀ ಶ್ರೀ ಸುಧಾಕರಶರ್ಮರೊಡನೆ ವಾದ ಮಾಡಿರುವೆ. ಅವರಿಗೆ ನಾನು ಕೇಳುತ್ತಿದ್ದೆ "  ನಮ್ಮ ಪೂರ್ವಜರು ಹಾಗಾದರೆ ದಡ್ದರೇ? ನೀವು ಮಾತ್ರವೇ ಬುದ್ಧಿವಂತರೋ?  

ಅದಕ್ಕೆ ಅವರು ಸ್ವಲ್ಪವೂ ಬೇಸರಿಸದೆ ಹೇಳುತ್ತಿದ್ದರು " ನಾನು ಸತ್ಯ  ಹೇಳಿದರೆ ನಿಮಗೆ ಬೇಸರವಾಗುತ್ತೆ. ನನ್ನ ಮೇಲೆ ಕೋಪವೂ ಬರಬಹುದು"

-ಏನು ಅಂತಾದ್ದು !!!?

- ಹೌದು, ನಮ್ಮ ಪೂರ್ವಜರು ಹಲವು ಸಂದರ್ಭಗಳಲ್ಲಿ  ಮೌಢ್ಯವನ್ನು ಪ್ರಶ್ನೆ ಮಾಡದೆ ತಾವೂ ಆಚರಿಸಿಕೊಂಡು ಬಂದು ಅದನ್ನೇ ಮುಂದುವರೆಯುವಂತೆ ಮಾಡಿದ್ದಾರೆ!!

-ಹೇಗೆ ಹೇಳ್ತೀರಾ? ನಮ್ಮ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಸಂಘದ ಸಾವಿರಾರು ಜನ  ಪ್ರಚಾರಕರುಗಳು ಇದ್ದಾರೆ. ಅವರೆಲ್ಲಾ ದಡ್ದರೆಂದು ನಿಮ್ಮ ಕಲ್ಪನೆಯೇ?

- ಮತ್ತೆ ಅದೇ ಪ್ರಶ್ನೆ ಕೇಳ್ತೀರಲ್ಲಾ!

- ನಾನಂತೂ ನಿಮ್ಮ ಮಾತು ಒಪ್ಪುವುದಿಲ್ಲ.

-ನನ್ನ ಮಾತು ಒಪ್ಪದಿದ್ದರೆ ಅದು ನಿಮ್ಮ ಖುಷಿ. ಆದರೆ ಸತ್ಯ ಎಂದಿದ್ದರೂ ಸತ್ಯವೇ. 

...............ಹೀಗೆ ಹಲವಾರು ವರ್ಷ ಶರ್ಮರೊಡನೆ ಗುದ್ದಾಡಿದರೂ ಅವರು ಬೇಸರಿಸಿಕೊಳ್ಳಲೇ ಇಲ್ಲ. ಪಂಡಿತ್  ಸುಧಾಕರಚತುರ್ವೇದಿಗಳ "ವೇದೋಕ್ತ ಜೀವನ ಪಥ" ಎಂಬ ಪುಟ್ಟ ಪುಸ್ತಕವನ್ನು ನನ್ನ ಕೈಗಿತ್ತರು. ಇದನ್ನು ಯಾವ ಪೂರ್ವಾಗ್ರಹವಿಲ್ಲದೆ ಓದಿ-ಎಂದರು.

ಮುಂದೆ ಕನ್ನಡ  ವೇದಭಾಷ್ಯದ ಎಲ್ಲಾ ಸಂಪುಟಗಳೂ ನನ್ನ ಮಿತ್ರ ಅಶೋಕ ರ  ಕೃಪೆಯಿಂದ ನನ್ನ ಕೊಠಡಿ ಸೇರಿದವು.  ಕಣ್ಣಾಡಿಸುತ್ತಾ ಹೋದಂತೆ ಹೊಸಬೆಳಕು ಕಾಣತೊಡಗಿತು. ಮಾನವೀಯ ಮೌಲ್ಯಗಳಿಗೆ ವಿರುದ್ಧವಾದದ್ದನ್ನು ನನ್ನ ಮನಸ್ಸು ಈಗ ಸುತಾರಾಮ್ ಒಪ್ಪುತ್ತಿಲ್ಲ. ಹಾಗಂತಾ ಎಲ್ಲವನ್ನೂ ವಿರೋಧಿಸಲೂ ಆಗ್ತಾ ಇಲ್ಲ. ಅದಕ್ಕೂ ಕಾರಣವಿದೆ. ನಾನು ಒಬ್ಬ ವೇದವಿದ್ವಾಂಸರ  ವೈಯಕ್ತಿಕ ಸಂಪರ್ಕಇಟ್ಟುಕೊಂಡು ಎಂಟು ಹತ್ತು ವರ್ಷ ಕಳೆದರೂ  ವೇದದ ಸತ್ಯ ಸಂದೇಶದಂತೆ ಇನ್ನೂ ನಡೆಯಲು ಸಾಧ್ಯ ಆಗ್ತಾ ಇಲ್ಲ. ಹೀಗಿರುವಾಗ  ನನ್ನ " ಜೀವನ ವೇದ ಪುಸ್ತಕ" ದಿಂದಲೋ ಅಥವಾ ನನ್ನ ಕೆಲವು ಬ್ಲಾಗ್ ಬರಹಗಳಿಂದಲೋ ಏನೋ ಬದಲಾವಣೆ ಆಗುತ್ತದೆಂಬ ಭ್ರಮೆ ನನಗಿಲ್ಲ. ಆದರೂ ಸತ್ಯವೆಂದು ಕಂಡಿದ್ದನ್ನು ನಿರ್ಭಯವಾಗಿ ಬರೆಯ ಬೇಕೆಂಬ ತುಡಿತವಂತೂ ಇದೆ.

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!!

ಮೌಢ್ಯದ ಪರಮಾವಧಿ!!!! ನಾಲ್ಕು ವರ್ಷದ ಬಾಲಕನ ಶಿರಚ್ಛೇದನ!!! ಮನೆಯಲ್ಲೆಲ್ಲಾ  ರಕ್ತ ಸಂಪ್ರೋಕ್ಷಣೆ!!!!
ಆಂದ್ರದ ಪ್ರಕಾಶಮ್ ಜಿಲ್ಲೆಯ ಪೋಕೂರಿನಲ್ಲಿ ನಡೆದಿರುವ ಬರ್ಬರ ಕೃತ್ಯ. ಬರ್ಬರವಾಗಿ ಮಗುವನ್ನು ಕೊಂದ ರಾಕ್ಷಸನ ಹೆಸರು ತಿರುಮಲರಾವ್. ಮಂತ್ರವಾದಿಯಂತೆ.
ಕಾಳಿಗೆ ಆಹುತಿಯಂತೆ!!!!

ಈ ರಕ್ಕಸನನ್ನು ಆ ಊರಿನ ಜನರು ಮರಕ್ಕೆ ಕಟ್ಟಿ   ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟರು. ಪೋಲೀಸರು ಬಂದು ಇವನ ಪ್ರಾಣ  ಉಳಿಸಿದರು.
ಗಾಂಧಿ ಜಯಂತಿಯ ಹೆಸರಲ್ಲಿ ಇಂದು ಪ್ರಾಣಿ ವಧೆ ನಿಷೇಧ! ಮನುಷ್ಯಹತ್ಯೆ ನಡೆಯಿತು!!

ಇಂದಿಗೂ "ಅಶ್ವಮೇಧ" ಎಂದರೆ ಯಜ್ಞಕ್ಕೆ ಕುದುರೆಯನ್ನು ಬಲಿ ಕೊಡಲೇ ಬೇಕೆನ್ನುವ ಪಂಡಿತೋತ್ತಮರೆನ್ನುವವರು ಈಗಲೂ ಇದ್ದಾರೆ!! ಹಾಸನದಲ್ಲಿ ನಡೆದ ಅಶ್ವಮೇಧಯಾಗ ನಡೆಸಲು ಬಂದಿದ್ದ    ಐದು ಜನ ಪಂಡಿತರೊಡನೆ ನಾನು ಅಶ್ಚಮೇಧದ ಅಹಿಂಸಾ  ವಿವರಣೆಯನ್ನು ವೇದದ ಆಧಾರದಲ್ಲಿ ವಿವರಿಸಿದಾಗ ಅದನ್ನು ಸ್ವೀಕರಿಸುವ ಮಾನಸಿಕತೆ ಇಲ್ಲದ ಪಂಡಿತೋತ್ತಮರು ವಿತಂಡವಾದಮಾಡಲು ಹೊರಟಾಗ ನಾನು ಅವರಿಗೆ ಕೇಳಿದ್ದು ಒಂದೇ ಪ್ರಶ್ನೆ ....

ಪ್ರಾಣಿ ಕೊಲೆಮಾಡಕೂಡದೆಂಬುದಕ್ಕೆ ನಾನು ನಾಲ್ಕಾರು ವೇದಮಂತ್ರಗಳ ಆಧಾರ ಕೊಟ್ಟಿದ್ದೇನೆ. ಕುದುರೆಯನ್ನಾಗಲೀ, ಹಸುವನ್ನಾಗಲೀ ಕೊಂದು ಅಶ್ವಮೇಧ/ಗೋ ಮೇಧ ಯಾಗಗಳನ್ನು ಮಾಡಲು ಯಾವ ವೇದ ಮಂತ್ರದಲ್ಲಿ ಹೇಳಿದೆ? ಆಧಾರ ಕೊಡಿ- ಎಂದಾಗ ನಾನು ನಿಮಗೆ ಅಂಚೆ ಮೂಲಕ ಕಳಿಸುವೆ ಅಥವಾ ಮೇಲ್ ಮಾಡುವೆ ಎಂದವರು ಇನ್ನೂ ಆ ಕೆಲಸ ಮಾಡಲೇ ಇಲ್ಲ!!!!!

ಮೌಢ್ಯವಿರೋಧೀ ಕಾನೂನು ಮಾಡಬೇಕೆಂದಾಗ ಸಾರಾಸಗಟಾಗಿ ವಿರೋಧಿಸುವ ಬದಲು  ಮೌಢ್ಯವಿರೋಧಿ ಶಾಸನದ ವಿರುದ್ಧ ಮಾತನಾಡುವವರು ಯಾಕೆ  ಯಾವುದು ಮಾನವೀಯತೆಗೆ ವಿರೋಧವಾಗಿದೆ ಅವನ್ನು ನಿಶೇಧಿಸಿ ! ಎಂದು ಪಟ್ಟಿ ಮಾಡಿ ಸಲಹೆ ಕೊಡಬಾರದು?

ಹೌದು, ನಾನೂ ಒಪ್ಪುತ್ತೇನೆ. ಮೌಢ್ಯವಿರೋಧೀ ಶಾಸನಕ್ಕೆ ಬೆಂಬಲ ಕೊಡುವವರು ಹಿಂದು ಧರ್ಮವನ್ನೇ ಸಾರಾಸಗಟಾಗಿ ವಿರೋಧಿಸುವ ಗುಂಪು. ಆದರೆ ಹಿಂದು ಪರ ಸಂಘಟನೆಗಳ ಕರ್ತವ್ಯವೂ ಇದೆಯಲ್ಲವೇ? ಯಾವುದು ಮಾನವ ವಿರೋಧಿ ಎನ್ನಿಸುತ್ತದೆ-ಅದನ್ನು ಮೊದಲು ಹಿಂದು ಪರ ಸಂಘಟನೆಗಳೇ    ವಿರೋಧಿಸಿ ಹಿಂದುಗಳಲ್ಲಿ ಜಾಗೃತಿಯನ್ನೇಕೆ ಉಂಟುಮಾಡಬಾರದು?

ಯಾವುದೋ ತಾತನ ಕಾಲದಲ್ಲಿ  ಯಾವುದನ್ನೋ ಆ ಕಾಲಕ್ಕೆ ತಕ್ಕಂತೆ ಆಚರಣೆಗೆ ತಂದಿರಬಹುದು. ಇಂದಿಗೆ ಅದು ಎಷ್ಟು ಸರಿ! ಎಂಬ  ಚಿಂತನ-ಮಂಥನ ನಡೆಯಬೇಡವೇ?

RSS ನ ಪೂಜ್ಯ ಸರಸಂಘಚಾಲಕರು ಕೊಟ್ಟಿರುವ ಕರೆಯ ಬಗ್ಗೆ ಹಿಂದು ಪರ ಸಂಘಟನೆಗಳು ಚಿಂತನ-ಮಂಥನ ಆರಂಭಿಸಬೇಕಲ್ಲವೇ?

ಈಗ ಕಾಲ ಪಕ್ವವಾಗಿದೆ. ಹಿಂದು ವಿರೋಧಿಗಳ ಬಾಯಿ  ಮುಚ್ಚಿಸಬೇಕಾದರೆ ಅವರಿಗೆ ಮಾತನಾಡಲು ಸರಕು ಸಿಗದಂತೆ ಆಮೂಲಾಗ್ರವಾಗಿ ಶುದ್ಧೀಕರಣ ಕೆಲಸವನ್ನು ಹಿಂದು ಸಂಘಟನೆಗಳೇ ಮಾಡಬೇಕು. ನಮ್ಮ ಋಷಿಮುನಿಗಳ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಯಾವುದು ಮಾನವೀಯತೆಗೆ ವಿರುದ್ಧವಾಗಿದೆ ಅದನ್ನು ಬಿಡಲೇ ಬೇಕು.ಮಾನವೀಯತೆಗೆ ಪೂರಕ ವಾಗಿರುವ , ನೈತಿಕ ಮೌಲ್ಯಗಳನ್ನು ಹೆಚ್ಚಿಸುವ , ಮನುಷ್ಯನನ್ನು ಆತ್ಮೋನ್ನತಿಯತ್ತ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲೇ ಬೇಕು.
ಇದು ಕಾಲದ ಕರೆ.