Pages

Friday, October 24, 2014

ಎಚ್ಚರ! ಎಚ್ಚರ!! ಎಚ್ಚರ!!!

ವೇದ,ಉಪನಿಷತ್ತು,ಭಗವದ್ಗೀತೆ - ಇವುಗಳು ಪವಿತ್ರ ಗ್ರಂಥಗಳೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುತ್ತಾರೆ. ಅವಕ್ಕೆ ಪೂಜ್ಯ ಸ್ಥಾನವನ್ನು ಕೊಟ್ಟು ದೂರವಿಡುತ್ತಾರೆ.ಇನ್ನು ಇಂದಿನ ಕಾಲದ ಯುವಕರಿಗೆ ಅಂತರ್ಜಾಲ, ದೂರದರ್ಶನಗಳಿಂದ  ಹಲವು ಆಕರ್ಷಣೆಗಳು! ಇವರೂ ಕೂಡ ಈ ಗ್ರಂಥಗಳನ್ನೆಲ್ಲಾ ವಿರೋಧಿಸದಿದ್ದರೂ ಅದು ನಮ್ಮ ಈ ವಯಸ್ಸಿಗಲ್ಲಾ!! ಎಂಬ ಭಾವನೆ!!

   ಯಾವ ಕೆಲವು ವಿದ್ಯಾವಂತ ಯುವಕರು ವೇದ-ಭಗವದ್ಗೀತೆ ಗ್ರಂಥಗಳ ಪುಟ ತೆರೆದು ನೋಡಲು  ನಮಗೆ ಇನ್ನೂ  "ಆ ಕಾಲ ಬಂದಿಲ್ಲ "  ಎಂಬ ದೋರಣೆಯ ಕಂಡು  ನನಗೆ ಅಚ್ಚರಿ ಮತ್ತು ಕರುಣೆ ಒಟ್ಟೊಟ್ಟಿಗೆ ಬರುತ್ತದೆ. ಯಾವಾಗಲೂ ಹಾಗೆಯೇ ಶರೀರ ರೋಗಗ್ರಸ್ತವಾಗುವವರೆಗೂ ಯೋಗದ ಮಹತ್ವ ತಿಳಿಯುವುದಿಲ್ಲ, ನಮ್ಮ ಪರಂಪರಾಗತವಾದ ಆಹಾರ ಪದ್ದತಿಯ ಮಹತ್ವ ತಿಳಿಯುವುದಿಲ್ಲ, ಅದಕ್ಕಿಂತ ಹೆಚ್ಚಾಗಿ ಈ ಗ್ರಂಥಗಳ ಮಹತ್ವ ತಿಳಿಯುವುದಿಲ್ಲ.

ನನ್ನ ಹಾಗೆ ವಯಸ್ಸು ಅರವತ್ತು ದಾಟುವಾಗ ಅಲ್ಪಸ್ವಲ್ಪ ಆಸಕ್ತಿ ಉಂಟಾದಾಗ " ಅಯ್ಯೋ ರಾಮ, ಇವೆಲ್ಲಾ ನಮಗೆ ಬಾಲ್ಯ-ಯೌವ್ವನದಲ್ಲೇ ತಿಳಿಯಬೇಕಾಗಿದ್ದ ಸಂಗತಿಗಳೆಂಬ ಅರಿವಾಗಿ ಪಶ್ಚಾತ್ತಾಪ ಪಡುವಂತಾಗುತ್ತದೆ.

ಇಪ್ಪತ್ತು-ನಲವತ್ತರ ನಡುವಿನ ಯುವಕ-ಯುವತಿಯರೇ , ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಆಸೆ ನಿಮಗಿದೆಯಲ್ಲವೇ? ಕೇವಲ ಇಂಗ್ಳೀಶ್ ಕಾನ್ವೆಂಟ್ ಶಿಕ್ಷಣದಿಂದ  ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆಂಬ ಭ್ರಮೆ ಬಿಡಿ.

ನಿಮ್ಮ ಮಕ್ಕಳು ಆರೋಗ್ಯವಂತರಾಗಿ, ದೃಢಕಾಯರಾಗಿ, ಗುಣವಂತರಾಗಿ, ಬುದ್ಧಿವಂತರಾಗಿ ಬೆಳೆಯಬೇಕೆಂದರೆ ಅದಕ್ಕೆ ಪೂರಕವಾದ ಹಲವಾರು ಮಾರ್ಗದರ್ಶೀ ಸೂತ್ರಗಳು ವೇದದಲ್ಲಿದೆ. ಶೋಡಷ ಸಂಸ್ಕಾರಗಳಿವೆಯಲ್ಲಾ ! ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಂಸ್ಕಾರ ನೀಡುತ್ತಾ ಬನ್ನಿ, ನಿಮ್ಮ ಮಕ್ಕಳು  ಎಷ್ಟು ಚುರುಕಾಗಿ, ಗುಣವಂತರಾಗಿ, ಧೈರ್ಯವಂತರಾಗಿ, ಬುದ್ಧಿವಂತರಾಗಿ ಬೆಳೆಯುತ್ತಾರೆಂಬುದು ನಿಮಗೇ ಗೊತ್ತಾಗುತ್ತದೆ. ವಯಸ್ಸಿಗೆ ಬಂದಿರುವ  ಗಂಡು-ಹೆಣ್ಣುಗಳ ಸಾವಿರಾರು ಅಪ್ಪ-ಅಮ್ಮಂದಿರು   ಇಂದು  ಕಣ್ಣೀರಲ್ಲಿ ಕೈತೊಳೆಯುತ್ತಿರುವುದು ನಮ್ಮೆಲ್ಲರ ಕಣ್ಣು ತೆರಸಬೇಕು. ಮುಂದಿನ ದಿನಗಳಲ್ಲಿ  ಅಂತಾಸ್ಥಿತಿ ನಿಮಗೆ ಬರಬಾರದೆಂದರೆ ಈಗಿನಿಂದಲೇ ನಮ್ಮ ಋಷಿಮುನಿಗಳು ತಮ್ಮ ಸಾವಿರಾರು ವರ್ಷಗಳ ತಪ್ಪಸ್ಸಿನ ಫಲದಿಂದ, ಅನುಭವದ ಮೂಸೆಯಿಂದ ನಮಗೆ ಕೊಟ್ಟಿರುವ ಗ್ರಂಥಗಳನ್ನು ಓದುವ ,ಆಧ್ಯಾತ್ಮಿಕ ಉಪನ್ಯಾಸಗಳನ್ನು ಕೇಳುವ ಸ್ವಭಾವವನ್ನು ಬೆಳೆಸಿಕೊಳ್ಳಿ.ಅದು ಬಿಟ್ಟು  ಬೇರೆ ಮಾರ್ಗವೇ ಇಲ್ಲ.
ಇಂದಿನ ಈ ಸಿನೆಮಾಗಳು, ದಾರವಾಹಿಗಳ  ಸೆಳೆತಕ್ಕೆ ಸಿಲುಕಿ ಮುಂದಿನ ಭವಿಷ್ಯ ಹಾಳಾಗದಿರಲಿ.ಎಚ್ಚರ! ಎಚ್ಚರ!! ಎಚ್ಚರ!!!