Pages

Friday, October 15, 2010

ಸಂಪಾದಕೀಯ

ವೇದಸುಧೆಯ ಆತ್ಮೀಯ ಅಭಿಮಾನಿಗಳೇ,
ವೇದಾಧ್ಯಾಯೀ ಸುಧಾಕರಶರ್ಮರ "ಎಲ್ಲರಿಗಾಗಿ ವೇದ" ಪ್ರವಚನವು ವೇದಸುಧೆಯ ಆರಂಭಕ್ಕೆ ಕಾರಣವಾಯ್ತೆಂಬ ವಿಚಾರವನ್ನು ಹಲವು ಭಾರಿ ತಿಳಿಸಲಾಗಿದೆ. ೨೦೧೦ ಫೆಬ್ರವರಿ ತಿಂಗಳಲ್ಲಿ ವೇದಸುಧೆಯು  ಆರಂಭವಾದವಾದರೂ ಶ್ರೀ ಶರ್ಮರಿಂದ ಲೇಖನಗಳನ್ನು  ಬರೆಸುವುದಕ್ಕಾಗಲೀ ಅವರ ಉಪನ್ಯಾಸಗಳನ್ನು ಕೇಳಿಸುವುದಕ್ಕಾಗಲೀ ಅವರ ಕೆಲಸದ ಒತ್ತಡದಲ್ಲಿ ಶ್ರೀ ಶರ್ಮರು ಬಹಳ ದಿನಗಳು ವೇದಸುಧೆಗೆ ಲಭ್ಯವಿರಲಿಲ್ಲ. ಆ ಸಂದರ್ಭದಲ್ಲಿ ವೇದಸುಧೆಯ ಬಳಗವು ಒಂದಿಷ್ಟು ಲೇಖನಗಳನ್ನು ಪ್ರಕಟಿಸಿದರೂ ಶ್ರೀ ಶರ್ಮರು ಕೊಡಬೇಕಾಗಿದ್ದ ವಿಚಾರಗಳನ್ನು ಕೊಡಲಾಗಲಿಲ್ಲ. ಆದರೆ ಇತ್ತೀಚೆಗೆ ಕಳೆದ ಒಂದು ತಿಂಗಳಿನಿಂದ ಶ್ರೀ ಶರ್ಮರು ನಿರಂತರವಾಗಿ ವೇದಸುಧೆಗೆ ಲಭ್ಯವಿದ್ದಾರೆ. ಸಾಕಷ್ಟು ಆಡಿಯೋ/ ವೀಡಿಯೋ ಕ್ಲಿಪ್ ಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಪ್ರತಿ ಶುಕ್ರವಾರ ಮತ್ತು ಮಂಗಳವಾರಗಳಂದು ಶ್ರೀ ಶರ್ಮರು ವೇದದ ಬಗ್ಗೆ ತಿಳಿಸಿರುವ ವಿಚಾರಗಳನ್ನು ಪ್ರಕಟಿಸಲಾಗುತ್ತಿದೆ.ಆಡಿಯೋ ಕ್ಲಿಪ್ ಗಳನ್ನು ಪ್ರಕಟಿಸುವುದು ಅಷ್ಟು ಕಷ್ಟವಾಗುತ್ತಿಲ್ಲ. ಆದರೆ ವೀಡಿಯೋ ಕ್ಲಿಪ್ ಗಳನ್ನು ಪ್ರಕಟಿಸುವುದು ಸ್ವಲ್ಪ ಕಷ್ಟವಾಗಿದೆ. ಕಳೆದ ನಾಲ್ಕು ದಿನಗಳಿಂದ ಶ್ರೀ ಶರ್ಮರು ಹಾಸನದ ಶ್ರೀ ಶಂಕರ ಮಠದಲ್ಲಿ ವೇದಪಾಠವನ್ನೇ ಮಾಡುತ್ತಿದ್ದಾರೆಂದರೆ ತಪ್ಪಾಗಲಾರದು.ಪಾಲ್ಗೊಳ್ಳುತ್ತಿರುವ ೫೦-೬೦ ಜನರು ಸತತ ಎರಡು ಗಂಟೆಗಳು ಅವರ ಪ್ರವಚನವನ್ನು ತದೇಕಚಿತ್ತದಿಂದ ಕೇಳುತ್ತಿದ್ದಾರೆ. ಈ ಮಧ್ಯೆ ಶ್ರೀ ಶರ್ಮರಿಗೆ ಜ್ವರದ ಬಾಧೆ ಇದೆ. ಆದರೂ ಎರಡು ಗಂಟೆ ಪಾಠ ಮಾಡುವುದರ ಜೊತೆಗೆ ಉಳಿದ ಸಮಯದಲ್ಲಿ ಜಿಜ್ಞಾಸುಗಳ ಸಂದೇಹಗಳನ್ನು ಪರಿಹರಿಸುತ್ತಿದ್ದಾರೆ. ಅಂತೂ ಹಾಸನದ ಜನತೆಗೆ ಒಂದು ಅಪರೂಪದ ಅವಕಾಶವಂತೂ ಲಭ್ಯವಾಗಿದೆ. ಇದಕ್ಕೆ ಕಾರಣರಾಗಿರುವ ಹಾಸನ ಶಂಕರಮಠದ ಧರ್ಮಾಧಿಕಾರಿಗಳಾದಂತಹ ಶ್ರೀ ಎಂ.ಎಸ್. ಶ್ರೀಕಂಠಯ್ಯನವರಿಗೆ ವೇದಸುಧೆಯು ಆಭಾರಿಯಾಗಿದೆ.ಸತ್ಯದನಡೆ ಅಷ್ಟು ಸುಲಭವಲ್ಲ. ಆಚರಣೆಯ ಹೆಸರಲ್ಲಿ ಅನೇಕ ದೋಷಗಳನ್ನೇ ನಡೆಸಿಕೊಂಡು ಬರುತ್ತಿರುವ ಆಚಾರವಂತರಿಗೆ ಶ್ರೀ ಶಂಕರಮಠದಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಾಶ್ಚರ್ಯದ ಸಂಗತಿಯಾಗಿದೆ.ಎಲ್ಲವೂ ಶಂಕರ ನಿಜಚಿಂತನೆಯಂತೆಯೇ ಆಗಿದೆ. ಆದರೆ ಆಚರಣೆಗಳಿಗೂ ವೈದಿಕ ಚಿಂತನೆಗಳಿಗೂ ಅಜಗಜಾಂತರ ವೆತ್ಯಾಸ ಇರುವುದು ಸುಳ್ಳಲ್ಲ. ಆದರೆ ಆಚರಣೆಗಳಲ್ಲಿರುವ ದೋಷವನ್ನು " ಇದು ದೋಷ" ವೆಂದು ಹೇಳುವ ಧೈರ್ಯ ಬಹುಮಂದಿಗಿಲ್ಲ. ಈ ವಿಚಾರದಲ್ಲಿ ಶ್ರೀ ಶರ್ಮರು ವಿಶಿಷ್ಟವಾಗಿ ಕಾಣುತ್ತಾರೆ.  ನಾಲ್ಕು ತಿಂಗಳುಗಳಲ್ಲಿ ಮಾಡಬಹುದಾದ ಪಾಠವನ್ನು ಕಳೆದ ನಾಲ್ಕು ದಿನಗಳಲ್ಲಿ  ಮಾಡಿದ್ದಾರೆ. ವೇದಸುಧೆಯ ಅಭಿಮಾನಿಗಳಿಗೆ ಅವುಗಳನ್ನೆಲ್ಲಾ ನೂರಾರು ಕಂತುಗಳಲ್ಲಿ ಕೊಡಲಾಗುವುದು.ಶ್ರೀ ಶರ್ಮರು ಅರಕಲಗೂಡಿನಲ್ಲಿ ಮಾಡಿದ  ಉಪನ್ಯಾಸದ ಇಂದಿನ ಕಂತನ್ನು ಇಲ್ಲಿ ಪ್ರಕಟಿಸಿರುವೆ. ಎಲ್ಲಾ ಉಪನ್ಯಾಸಗಳು ಹಿಂದಿನ ಕಂತುಗಳಿಗೆ ಸಂಬಂಧವನ್ನು ಹೊಂದಿರುತ್ತವಾದ್ದರಿಂದ ಹಿಂದಿನ ಕಂತುಗಳನ್ನು ಕೇಳದಿದ್ದರೆ ಅವುಗಳನ್ನು ಕೇಳಿ ನಂತರ ಈ ಕಂತನ್ನು ಕೇಳುವುದು ಸೂಕ್ತ.
-ಹರಿಹರಪುರ ಶ್ರೀಧರ್
-----------------------------------------------------------
ಲಲಿತಾಸಹಸ್ರನಾಮ ಮತ್ತು ಸೌಂದರ್ಯ ಲಹರಿಗಳು ಶಂಕರರು ಬರೆದದ್ದೇ?


ವೇದಸುಧೆಬಳಗದ ಸನ್ಮಾನ್ಯ ಸದಸ್ಯರಲ್ಲಿ ಒಂದು ವಿನಂತಿ.

ಸಾಮಾನ್ಯವಾಗಿ ನಾವುಗಳು ಬರೆಯುವ ಬರಹಗಳಿಗೆ ಬೇರೆ ಬೇರೆ ಲೇಬಲ್ ಗಳನ್ನು ಹಾಕುತ್ತಿದ್ದು ಮಾಲಿಕೆಯ ಪಟ್ಟಿಯಲ್ಲಿ ಅವುಗಳು ಸೇರುತ್ತಿರುವುದರಿಂದ ಮಾಲಿಕೆಯ ಪಟ್ಟಿ ಬಲು ದೊಡ್ದದಾಗಿ ಬೆಳೆದು ಓದುಗರನೇಕರು ಲೇಬಲ್ ಗಳ ಸಂಖ್ಯೆ ಕಡಿಮೆಮಾಡಲು ದೂರವಾಣಿ ಮೂಲಕ ವಿನಂತಿಸಿದ್ದರಿಂದ ನಮ್ಮನಮ್ಮ ಹೆಸರಿನ ಒಂದೊಂದು ಲೇಬಲ್ ನಲ್ಲಿ ನಮ್ಮೆಲ್ಲಾ ಬರಹಗಳನ್ನು ಅಳವಡಿಸಲಾಗಿದೆ. ಇನ್ನು ಮುಂದೆ ಹೊಸದಾಗಿ ಲೇಬಲ್ ಕೊಡದೆ ನಮ್ಮ ನಮ್ಮ ಹೆಸರಿನ ಲೇಬಲ್ ಕೊಡುವುದರಿಂದ ನಮ್ಮೆಲ್ಲಾ ಬರಹಗಳನ್ನೂ ಒಂದೆಡೆ ಓದಲು ಓದುಗರಿಗೆ ಸಾಧ್ಯವಾಗುತ್ತದಾದ್ದರಿಂದ ದಯಮಾಡಿ ಸಹಕರಿಸಲು ಕೋರುವೆ.
-ಹರಿಹರಪುರಶ್ರೀಧರ್