Pages

Monday, July 5, 2010

ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ಆಚರಣೆಗಳು, ನಂಬಿಕೆಗಳನ್ನು ಅಲುಗಿಸುವ ಕೆಲಸ ?

-->
ಶ್ರೀ ಕವಿ ನಾಗರಾಜ್ ಇವರು ವೇದೋಕ್ತ ಜೀವನ ಪಥ ಮಾಲಿಕೆಯಲ್ಲಿ ಪಂ. ಸುಧಾಕರ ಚತುರ್ವೇದಿಗಳ ಬರಹಗಳನ್ನು ವೇದಸುಧೆಯಲ್ಲಿ ಬರೆಯುತ್ತಿದ್ದಾರೆ. ಅದನ್ನು ಓದುತ್ತಿರುವ ನಾನು ಅಲ್ಲಿ ಬರೆದ ನನ್ನ ಅನಿಸಿಕೆಯನ್ನು ಇಲ್ಲಿ ಮುಖ್ಯ ಲೇಖನವಾಗಿ ಪ್ರಕಟಿಸುತ್ತಿರುವೆ. ಸುಧಾಕರ ಶರ್ಮರು ಇದಕ್ಕೆ ಉತ್ತರಿಸಬೇಕೆಂಬುದು ಅಪೇಕ್ಷೆ.
ವೇದ ಜ್ಞಾನವು ಎಲ್ಲರಿಗಾಗಿ ಎಂದು ವೇದವು ಸಾರಿ ಹೇಳುತ್ತಿದ್ದರೂ ಅದು ಎಲ್ಲರಿಗೆ ತಲುಪಲಿಲ್ಲ. ಹೀಗೂ ಹೇಳಬಹುದು ಎಲ್ಲಾ ಜನಾಂಗಕ್ಕೂ ಕಲಿಯುವ ಆಸೆಯೂ ಇಲ್ಲ.ಆರ್ಯಸಮಾಜವು ಎಲ್ಲರಿಗಾಗಿ ವೇದವೆನ್ನುವ ಮಾತನ್ನು ಹೇಳುತ್ತಿದ್ದರೂ ಅದರ ಕಾರ್ಯ ಚಟುವಟಿಕೆಯು ಸಮಾಜದ ಉದ್ದಗಲಕ್ಕೂ ಮುಟ್ಟುವ ಸಾಮರ್ಥ್ಯ ಅದಕ್ಕಿಲ್ಲ. ಆರ್ಯ ಸಮಾಜವು ಮಾಡುತ್ತಿರುವ ಒಂದು ಕೆಲಸವೆಂದರೆ ಅದರ ಹತ್ತಿರ ಬಂದವರಲ್ಲಿ ಹಿಂದು ಸಮಾಜದಲ್ಲಿ ನಡೆದುಕೊಂಡು ಬಂದಿರುವ ವಿಗ್ರಹಾರಾಧನೆ, ಹಬ್ಬ ಹರಿದಿನಗಳ ಆಚರಣೆ, ವ್ರತ ಕಥೆಗಳು, ಪುರಾಣ, ಇತ್ಯಾದಿಯ ಬಗ್ಗೆ ಶ್ರಧ್ಧೆಯನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ವಾಗಿದೆ. [ಇಲ್ಲಿ ನಾನು ಶ್ರದ್ಧೆ ಎಂಬ ಪದವನ್ನು ನಂಬಿಕೆ ಎಂಬ ಅರ್ಥದಲ್ಲಿ ಉಪಯೋಗಿಸಿರುವೆ] ಹಿಂದು ಸಮಾಜಕ್ಕೆ ಅಂಟಿರುವ ಅಂಧಾಚರಣೆಗೆ ವಿರೋಧವಿರಲಿ, ಆದರೆ ಎಲ್ಲಾ ಆಚರಣೆಗಳಿಗೂ ವಿರೋಧವಿರುವುದರಿಂದ ಹಿಂದುಸಮಾಜವು ಆರ್ಯಸಮಾಜಿಗಳನ್ನು ಒಪ್ಪುವುದಾದರೂ ಹೇಗೆ? ಆರ್ಯಸಮಾಜಿಗಳು ಮಾಡುತ್ತಿರುವ ಕೆಲಸವು ಕೇವಲ ಹಿಂದು ಸಮಾಜಕ್ಕಲ್ಲ, ಇಡೀ ಮಾನವ ಸಮಾಜಕ್ಕೆ ಎಂದು ಅವರು ಹೇಳಿದರೂ ಅದರ ಬೇರು ಹಿಂದು ಸಮಾಜದಲ್ಲಿದೆ, ಎಂಬುದನ್ನು ಮರೆಯಬಾರದಲ್ಲವೇ? ಈ ದೃಷ್ಟಿಯಿಂದ ವೇದಾಧ್ಯಾಯೀ ಸುಧಾಕರ ಶರ್ಮರಂತಹ ವಿಚಾರಶೀಲರು ತಮ್ಮ ಚಟುವಟಿಕೆಗಳ ಬಗ್ಗೆ ಒಂದಿಷ್ಟು ಚಿಂತನೆ ಮಾಡುವುದು ಒಳ್ಳೆಯದು, ಎಂಬುದು ನನ್ನ ಅಭಿಪ್ರಾಯ.
-ಹರಿಹರಪುರ ಶ್ರೀಧರ್
--------------------------------------------------
Dr Gnanadev said...
ಹಿ೦ದೂ ಸಮಾಜದಲ್ಲಿ ನಿಜ, ಅನೇಕ ಅ೦ಧಾನುಚರಣೆ, ಅರ್ಥಹೀನ ವಿದಿವಿಧಾನಗಳು ಕಾಲಾ೦ತರದಲ್ಲಿ ನುಸುಳಿವೆ. ಅವುಗಳನ್ನು ಹಳಿಯುವ ತಿರಸ್ಕರಿಸುವ ಭರದಲ್ಲಿ ಹಿ೦ದೂ ಸ೦ಸ್ಕೃತಿಯಲ್ಲಿ ನೂರಾರು ಅರ್ಥಪೂರ್ಣ ಉದಾತ್ತವಾದ ಪವಿತ್ರವಾದ ಆಚರಣೆಗಳು ವಿದಿವಿದಾನಗಳೂ ಇವೆ ಎ೦ಬುದನ್ನು ಮರೆಯದಿರೋಣ. ಇ೦ಥಾ ಆಚರಣೆಗಳಿ೦ದ ಯಾರಿಗೂ ಹಾನಿ ತೊ೦ದರೆ ನಷ್ಟವಾಗಿಲ್ಲ. ಸಾವಿರಾರು ತಲೆಮಾರುಗಳ ಬದುಕನ್ನು ಸಾವಿರಾರು ವರ್ಷಗಳಿ೦ದ ಹಸನು ಮಾಡಿದೆ ನೆಮ್ಮದಿ ತ೦ದಿದೆ. ನೆಮ್ಮದಿ ತರುವ ಬದುಕಿನಲ್ಲಿ ಉಲ್ಲಾಸ ತರುವ ಆನ೦ದ ಅಲೌಕಿಕ ಆನ೦ದ ತರುವ ರಿಚ್ಯುಅಲ್ ವಿದಿವಿಧಾನಗಳು ಅವುಗಳನ್ನು ನ೦ಬಿ ಆಚರಿಸುತ್ತಿರುವ ಸಮುದಾಯದಲ್ಲಿ ಇರಲಿ. ಅವುಗಳನ್ನು ಖ೦ಡಿಸದಿರೋಣ. ಅಲ್ಲಿ ಮೌಢ್ಯವಿದ್ದರೆ ಖ೦ಡಿಸೋಣ.
ಈ ನಿಟ್ಟಿನಲ್ಲಿ ಭಾರತೀಯ ಸ೦ಸ್ಕೃತಿಯ ಆರಾಧಕರು ರಾಯಭಾರಿಗಳು ಮತ್ತೊಮ್ಮೆ ಯೋಚಿಸಲಿ.
--ಡಾ| ಜ್ಞಾನದೇವ್ ಮೊಳಕಾಲ್ಮುರು
-------------------------------------------------
ಆತ್ಮೀಯರಾದ ಡಾ| ಜ್ಞಾನದೇವ್,
ನಿಮ್ಮ ಅಭಿಪ್ರಾಯವು ಚಿಂತನೆಗೆ ಯೋಗ್ಯವಾಗಿದೆ.ಇಲ್ಲಿ ಶರ್ಮರ ಹೆಸರು ಪ್ರಸ್ಥಾಪಿಸಿರಲು ಕಾರಣವಿಷ್ಟೆ. ಈ ಬ್ಲಾಗನ್ನು ಶುರು ಮಾಡಿದ್ದೇ ಶರ್ಮರ ಎಲ್ಲರಿಗಾಗಿ ಪ್ರವಚನದ ಪ್ರೇರಣೆಯಿಂದ.ಕಳೆದೆರಡು ವರ್ಷಗಳಿಂದ ಶರ್ಮರ ಸಹವಾಸದಲ್ಲಿರುವ ನಾನು ಸೂಕ್ಷ್ಮವಾಗಿ ಆರ್ಯಸಮಾಜಿಗಳ ಚಟುವಟಿಕೆಯನ್ನು ಗಮನಿಸುತ್ತಿದ್ದೇನೆ. ಹಲವು ಉಪನ್ಯಾಸಗಳನ್ನು ಕೇಳಿದಮೇಲೆ, ಹಲವು ಸತ್ಸಂಗಗಳಲ್ಲಿ ಪಾಲ್ಗೊಂಡಮೇಲೆ ನನ್ನೊಳಗೆ ಚಿಂತನ-ಮಂಥನ ಹೆಚ್ಚಿರುವುದರ ಪರಿಣಾಮವಾಗಿ ಈ ಕಳಕಳಿಯ ಚರ್ಚೆ ಆರಂಭಿಸಿರುವೆ.ಶರ್ಮರೇ ಏಕೆ ನನ್ನ ಗುರಿ ಎಂಬ ಪ್ರಶ್ನೆ ಏಳಬಹುದು.ಶರ್ಮರು ವೇದವನ್ನು ಅಧ್ಯಯನಮಾಡುತ್ತಾ, ಅದರಂತೆ ತಮ್ಮ ಜೀವನವನ್ನೂ ರೂಢಿಸಿಕೊಂಡು ಸರಳಜೀವನ ಮಾಡುತ್ತಿರುವ ಸಜ್ಜನರು.ವೇದಕ್ಕಾಗಿ ಅವರ ಜೀವನ ಮುಡುಪಾಗಿದೆ, ಎಂದೇ ಭಾವಿಸುವೆ. ಇಂತವರ ಮಾತಿಗೆ ಸಮಾಜದಲ್ಲಿ ಗೌರವವಿದೆ,ಜನರು ಅವರಂತೆ ಇರಬೇಕೆಂದು ಬಯಸುವುದು ಸಹಜ.ಆದರೆ ಇಲ್ಲೊಂದು ಸಮಸ್ಯೆ ಇದೆ. ಇಂದು ಪಾಶ್ಚಿಮಾತ್ಯರೂ ಕೂಡ ನಮ್ಮ ದೇಶದತ್ತ ದೃಷ್ಟಿಹಾಯಿಸುತ್ತಾ ನಮ್ಮ ಸಂಸ್ಕೃತಿಯಮೇಲೆ ವಿಶ್ವಾಸವಿಟ್ಟು ತಮ್ಮಲ್ಲಿದ್ದ ಹಲವು ವಿಕೃತಿಗಳನ್ನು ಬಿಟ್ಟು ನಮ್ಮ ದೇಶದತ್ತ ಧಾವಿಸುತ್ತಿರುವುದು ,ಒಂದು ಕಡೆಯಾದರೆ ಇಲ್ಲಿನ ನಮ್ಮ ಯುವ ಜನಾಂಗವು ಪಾಶ್ಚಿಮಾತ್ಯರು ಬಿಟ್ಟ ಎಂಜಲನ್ನು ಅನುಕರಿಸತ್ತಾ ನಮ್ಮ ಸಂಸ್ಕೃತಿ-ಪರಂಪರೆಗಳನ್ನು ವಿರೋಧಿಸುತ್ತಿರುವ ಉಧಾಹರಣೆಗಳನ್ನು ನಮ್ಮ ಮಾಧ್ಯಮಗಳು ಬಿಂಬಿಸುತ್ತಿವೆ.ಇದೊಂದು ಸಂಧಿಕಾಲವೂ ಹೌದು, ವಿಷಮ ಕಾಲವೂ ಹೌದು. ಈ ಸಂದರ್ಭದಲ್ಲಿ ಶರ್ಮರಂತಹ ವಿದ್ವಜ್ಜನರ ಪಾತ್ರವು ಬಹಳ ಪ್ರಮುಖವಾಗುತ್ತದೆ.ನಮ್ಮ ಸಂಸ್ಕೃತಿ-ಪರಂಪರೆಗಳಲ್ಲಿ ಅಂಧಾನುಕರಣೆಗಳು, ಕಂದಾಚಾರಗಳು, ಸಮಾಜ ವಿರೋಧಿ ಆಚರಣೆಗಳೂ ನುಸುಳಿಕೊಂಡು ತಮ್ಮ ವಿಕೃತ ಚಾಯೆಯನ್ನು ಸಮಾಜದಲ್ಲಿ ಮೂಡಿಸಿರುವುದು ಸುಳ್ಳಲ್ಲ, ಬೆಳೆಯೊಡನೆ ಕಳೆ ಇದ್ದಂತೆ. ಕಳೆಯ ತೆಗೆಯಬೇಕು, ಬೆಳೆಗೆ ನೀರು-ಗೊಬ್ಬರ ಉಣಿಸುವ ಕೆಲಸವು ಶರ್ಮರಂತಹ ಮೇಧಾವಿಗಳಿಂದಾಗಬೇಕೆಂಬುದು ಸಮಾಜದ ಅಪೇಕ್ಷೆ.ಅವರೊಡನೆ ಅವರ ಜ್ಞಾನವನ್ನು ಮೆಚ್ಚುವ ನಮ್ಮಂತಹ ಸಾವಿರಾರು ಮನಸ್ಸುಗಳು ನಿಲ್ಲುವುದರಲ್ಲಿ ಸಂಶಯವಿಲ್ಲ.ಈ ನನ್ನ ಕಳಕಳಿಯನ್ನು ವೇದಾಧ್ಯಾಯೀ ಸುಧಾಕರಶರ್ಮರು ತಪ್ಪಾಗಿ ಭಾವಿಸದೆ ಸಮಾಜದ ಹಿತದೃಷ್ಟಿಯಿಂದ ಅರ ವಿಚಾರವನ್ನು ಮಂಡಿಸಬೇಕೆಂದು ಮತ್ತೊಮ್ಮೆ ಕೋರುವೆ.
-ಹರಿಹರಪುರಶ್ರೀಧರ್

ಜೀವನ ಬುನಾದಿ -೫-

ಸ್ವತಃ ಯಜುರ್ವೇಧ ಸ್ಪಷ್ಟವಾಗಿ ಸಾರುತ್ತಿದೆ:
ಯಥೇಮಾಂ ವಾಚಂ ಕಲ್ಯಾಣೇಮಾವದಾನಿ ಜನೇಭ್ಯಃ
ಬ್ರಹ್ಮ ರಾಜನ್ಯಾಭ್ಯಾಂ ಶೂದ್ರಾಯ ಚಾರ್ಯಾಯ ಚ ಸ್ವಾಯ ಚಾರಣಾಯ ಚ
ಪ್ರಿಯೋದೇವಾನಾಂ ದಕ್ಷಿಣಾಯೈ ದಾತುರಿಹನಭೂಯಾಸಮಯಂ
ಮೇ ಕಾಮಃ ಸಮೃಧ್ಯತಾಮುಪ ಮಾದೋ ನಮತು (ಯಜು.೨೬.೨)
ಸರ್ವಾಧಾರನಾದ ಸರ್ವಜ್ಞಾನ ಪ್ರಕಾಶಕನಾದ ಪರಮಾತ್ಮನು ಈ ಮಂತ್ರದ ಮೂಲಕ ಹೇಳುತ್ತಿದ್ದಾನೆ:
[ಇಹ] ಈ ಲೋಕದಲ್ಲಿ [ಯಥಾ ದೇವಾನಾಂ ದಕ್ಷಿಣಾಯೈ ದಾತುಃ ಭೂಯಾಸಂ] ನಾನು ವಿದ್ವಜ್ಜನರಿಗೂ, ಉದಾರಾತ್ಮರಿಗೂ ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ [ಇಮಾಂ ಕಲ್ಯಾಣೀಂ ವಾಚಂ] ಈ ಕಲ್ಯಾಣಕಾರಿಯಾದ ವಾಣೀಯನ್ನು [ಜನೇಭ್ಯಃ] ಮಾನವರೆಲ್ಲರ ಸಲುವಾಗಿ [ಬ್ರಹ್ಮರಾಜನಾಭ್ಯಾಂ] ಬ್ರಾಹ್ಮಣ ಕ್ಷತ್ರಿಯರಿಗಾಗಿ [ಶೂದ್ರಾಯ] ಶೂದ್ರನಿಗಾಗಿ [ಚ] ಮತ್ತು [ಆರ್ಯಾಯ] ವೈಶ್ಯನ ಸಲುವಾಗಿ [ಸ್ವಾಯ] ತನ್ನವನಿಗಾಗಿ [ಚ] ಅದೇ ರೀತಿ [ಅರಣಾಯ] ಬೇರೆಯವನ ಸಲುವಾಗಿ [ಅವದಾನಿ] ಉಪದೇಶಿಸುತ್ತೇನೆ. [ಅಯಂ ಮೇ ಕಾಮಃ] ಈ ನನ್ನ ಕಾಮನೆ [ಸಮೃಧ್ಯತಾಂ] ಸಮೃದ್ಧವಾಗಲಿ. [ಅದಃ] ಈ ಜಗತ್ತು [ಮಾ ಉಪನಮತು] ನನ್ನ ಬಳಿ ನಮ್ರವಾಗಿ ಬರಲಿ.
ಈ ಮಂತ್ರ ಮಾನವ ಸಮಾಜದಲ್ಲಿ ವೇದಗಳ ಸ್ಥಾವೇನೆಂಬುದನ್ನು ಅವುಗಳ ಉದ್ದೇಶವೇನೆಂಬುದನ್ನು ತೆರೆನುಡಿಗಳಲ್ಲಿ ಉಸುರುತ್ತಿದೆ.
ಕವಿ ನಾಗರಾಜ್