Pages

Saturday, May 22, 2010

ನಿಮಗೆ ಹೃತ್ಪೂರ್ವಕ ನಮಸ್ಕಾರಗಳು


ವೇದಸುಧೆಯ ಅಭಿಮಾನಿಗಳೇ,
ನಿಮಗೆ ಹೃತ್ಪೂರ್ವಕ ನಮಸ್ಕಾರಗಳು. ಕೇವಲ ಮೂರು ತಿಂಗಳ ಅವಧಿಯಲ್ಲಿ ಬ್ಲಾಗ್ ಇಣುಕಿದವರ ಸಂಖ್ಯೆ ಮೂರು ಸಹಸ್ರವನ್ನು ದಾಟಿದೆ! ಎಂದರೆ ವೇದದ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲ ಬಹಳ ಜನರಿಗಿದೆ, ಎಂದೇ ಅರ್ಥ, ಅಲ್ಲವೇ? ವೇದಸುಧೆಗೆ ವೇದಾಧ್ಯಾಯೀ ಸುಧಾಕರಶರ್ಮರೇ ಬಂಡವಾಳ.ನನಗೆ ಅವರ ಪರಿಚಯವಾಗಿ ಎರಡು ವರ್ಷ ದಾಟುತ್ತಿದೆ. ವೇದದ ಬಗ್ಗೆ ಅವರ ಅಧ್ಯಯನವು ಅವರನ್ನು ಅದರಲ್ಲಿ ನಿಷ್ಣಾತನನ್ನಾಗಿ ಮಾಡಿದೆ.ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾವು ಅನುಸರಿಸುತ್ತಿರುವ ಅನೇಕ ಸಂಗತಿಗಳು ಅಂಧಾನುಕರಣೆಯಾಗಿ ತೋರುತ್ತವೆ. ಅನೇಕ ಭಾರಿ ಗೊಂದಲ, ಸಂದೇಹವನ್ನೂ ಸೃಶ್ಟಿಸುತ್ತವೆ. ಜಿಜ್ಞಾಸೆ ಬೆಳೆದಂತೆಲ್ಲಾ ಇದು ಸಹಜ. ಸತ್ಯದ ಅರಿವಾದಾಗ ಗೊಂದಲಗಳು, ಸಂದೇಹಗಳು, ಭಯ, ಎಲ್ಲವೂ ದೂರವಾಗಿ ಜೀವನಕ್ಕೆ ಒಂದು ನಿಶ್ಚಿತ ಪಥ ಸಿಕ್ಕುವುದರಲ್ಲಿ ಸಂದೇಹವಿಲ್ಲ. ಈ ದಿಕ್ಕಿನಲ್ಲಿ ಸಾಗುವಾಗ ನಾನು ಕಾಣುತ್ತಿರುವ ಸತ್ಯವನ್ನು ಹಲವರಿಗೆ ತಿಳಿಸಬೇಕೆಂಬ ಆಶಯದೊಡನೆ ನನ್ನ ಪರಿಮಿತಿಯಲ್ಲಿ, ಇರುವ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಶರ್ಮರ ಧ್ವನಿ, ಅವರ ವೀಡಿಯೋ ದೃಶ್ಯಾವಳಿಯನ್ನು ವೇದಸುಧೆಯಲ್ಲಿ ಹಾಕುವ ಪ್ರಯತ್ನ ಮಾಡುತ್ತಿರುವೆ. ಹಾಗೆ ಮಾಡುವಾಗ ಎಡಿಟಿಂಗ್ ಮಾಡಲು ಬಾರದೆ ಹೇಗೆ ವೀಡಿಯೋ ಬಂದಿದೆಯೋ ಹಾಗೆಯೇ ಹಾಕಿರುವೆ. ಅದಕ್ಕಾಗಿ ಯಾವ ಎಚ್ಚರಿಕೆಯನ್ನೂ ತೆಗೆದುಕೊಂಡಿಲ್ಲ, ಅಥವಾ ಯಾವ ಸಂಸ್ಕಾರವನ್ನೂ ಮಾಡಿಲ್ಲ. ಹಾಗಾಗಿ ವೀಡಿಯೋ ಗುಣಮಟ್ಟವು ತೃಪ್ತಿಕರವಾಗಿಲ್ಲವೆಂಬ ಅರಿವು ನನಗಿದೆ. ಜೀವನುದ್ದಕ್ಕೂ ಕಲಿಯುವುದಿದ್ದೇ ಇದೆ. ವೇದಸುಧೆಯಲ್ಲಿ ವೀಡಿಯೋಆಡಿಯೋ ಅಪ್ ಲೋಡ್ ಮಾಡುವಾಗ ತಂತ್ರಗಳನ್ನು ಕಲಿಯಬೇಕಾದ್ದು ಬಹಳಷ್ಟಿದೆ. ನನ್ನ ಸಮಯಾವಕಾಶ ಕಲಿಯುವಸಾಮರ್ಥ್ಯ ಎಲ್ಲವನ್ನೂ ಪರಿಗಣಿಸಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಗುಣಮಟ್ಟ ಸುಧಾರಿಸಲು ಪ್ರಯತ್ನವಂತೂ ಇದ್ದೇ ಇರುತ್ತದೆ. ವೇದಸುಧೆಯ ಅಭಿಮಾನಿಗಳಲ್ಲಿ ಇದಕ್ಕೆ ಪೂರಕವಾದ ಜ್ಞಾನಹೊಂದಿದವರು ಕಾರ್ಯಕ್ಕೆ ಕೈಜೋಡಿಸಲು ವೇದಸುಧೆಗೆಈಮೇಲ್ ಮಾಡಬಹುದು.
ಚಿಕ್ಕಮಗಳೂರಿನಲ್ಲಿ ಅಗ್ನಿಹೋತ್ರ ಕಾರ್ಯಕ್ರಮ:

ದಿನಾಂಕ ೪.೬.೨೦೧೦ ರಂದು ಚಿಕ್ಕಮಗಳೂರಿನಲ್ಲಿ ಬೆಳಿಗ್ಗೆ ೭.೦೦ ಗಂಟೆಯಿಂದ ನಡೆಯುವ ಅಗ್ನಿಹೋತ್ರ ಕಾರ್ಯಕ್ರಮವನ್ನು ಶ್ರೀ ಸುಧಾಕರಶರ್ಮರು ನಡೆಸಿಕೊಡಲಿದ್ದು, ನಂತರ ಅವರ ಉಪನ್ಯಾಸವು ಇರುತ್ತದೆ. ಇಡೀ ಕಾರ್ಯಕ್ರಮವನ್ನು ವೀಡಿಯೋ ಚಿತ್ರೀಕರಿಸಿ ವೇದಸುಧೆಯಲ್ಲಿ ಹಾಕುವ ಉದ್ಧೇಶವಿದೆ. ಅದಕ್ಕಾಗಿಯೇ ಸೂಕ್ತ ಗುಣಮಟ್ಟದ ವೀಡಿಯೋ ಕ್ಯಾಮರಾ ಹೊಂದುವ ಪ್ರಯತ್ನ ಸಾಗಿದೆ.
ಹಾಸನದಲ್ಲಿ ನಡೆದ ಸುಧಾಕರಶರ್ಮರ ಉಪನ್ಯಾಸಕ್ಕೆ ಬಹಳ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಯೋಜಿಸಿದ ನನ್ನಂತವರಿಗೆ ಸಮಾಧಾನದ ಸಂಗತಿಯಾಗಿದೆ. ಹಾಸನದ ಶಂಕರ ಜಯಂತಿಯಲ್ಲಿ ನಡೆದ ಶಂಕರಾಚಾರ್ಯರ " ಪರಾಪೂಜೆ" "ಭಜಗೋವಿಂದಮ್" ಹಾಗೂ "ಮಣೀಷಾಪಂಚಕ" ಉಪನ್ಯಾಸಗಳು ಜನರ ಮೆಚ್ಚುಗೆ ಪಡೆದವು. ಸೂಕ್ತ ಸಮಯದಲ್ಲಿ ಎಲ್ಲವನ್ನೂ ವೇದಸುಧೆಯಲ್ಲಿ ಪೇರಿಸುವ ಪ್ರಯತ್ನ ಮಾಡಲಾಗುವುದು.
ಎಂದಿನಂತೆ ಸಹಕಾರ/ಉತ್ತೇಜನ ವಿರಲಿ.ನೀವು ಬರೆಯುವ ಪ್ರತಿಕ್ರಿಯೆಗಳು ವೇದಸುಧೆಯ ಸುಧಾರಣೆಗೆ ಕಾರಣವಾಗಬಲ್ಲದು. ಆದ್ದರಿಂದ ನಿಮ್ಮ ಪ್ರತಿಕ್ರಿಯೆಗಳು ಇರಲಿ. ಕನ್ನಡದಲ್ಲಿ ಬರೆಯಲು ಕಷ್ಟವಾದವರು ಇಂಗ್ಲೀಶ್ ನಲ್ಲಿ ಬರೆಯಲೂ ಬಹುದು.

Wednesday, May 19, 2010

ಬ್ರಹ್ಮ ಸತ್ಯ -ಜಗನ್ಮಿಥ್ಯ


ಕಳೆದ ವರ್ಷ ಹಾಸನದಲ್ಲಿ ನಡೆದ ಶ್ರೀಶಂಕರಜಯಂತಿ ಸಂದರ್ಭದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮಿಗಳು ಶಂಕರರ " ಬ್ರಹ್ಮ ಸತ್ಯ -ಜಗನ್ಮಿಥ್ಯ" ಎಂಬ ವಿಚಾರದ ಬಗ್ಗೆ ಬಹಳ ಸರಳವಾಗಿ ಪ್ರವಚನ ನೀಡಿದ್ದರು. ಕೇವಲ ಹತ್ತು ನಿಮಿಷಗಳ ಅವರಉಪನ್ಯಾಸವನ್ನು ಕೆಳಗಿನ ಕೊಂಡಿಯಲ್ಲಿ ಹಾಕಿದೆ. ಕೆಳಗಿನಕೊಂಡಿಯನ್ನು ಕಾಪಿಮಾಡಿ ಬ್ರೌಸರ್ ನಲ್ಲಿ ಪೇಸ್ಟ್ ಮಾಡಿ ಪೂಜ್ಯರಪ್ರವಚನವನ್ನು ಕೇಳಬಹುದು.

http://www.binfire.com/rel/index.php?page=public_share_new&link=c0fc8fb345fd9084b15671814c805b59

Thursday, April 22, 2010

ಭ್ರಮೆ

ಸ್ವರಚಿತಗೀತೆ: ಭ್ರಮೆ [ಕೆಳಗಿನ ಕೊಂಡಿಯನ್ನು ಚಿಟುಕಿಸಿ ಅಥವಾ ಕಾಪಿಮಾಡಿ ಅಡ್ರೆಸ್ ಬಾರ್ ಗೆ ಪೇಸ್ಟ್ ಮಾಡಿ ನೀವು ಕೇಳಬಹುದು]
ಗಾಯಕಿ: ಶ್ರೀಮತಿ ಲಲಿತಾರಮೇಶ್


http://www.binfire.com/rel/index.php?page=public_share_new&link=48ccec62840d76ccb3eb100374351c75

ಎಲ್ಲಿ ಹುಡುಕಲಿ ನಿನ್ನ

ಎಲ್ಲಿ ಹುಡುಕಲಿ ನಿನ್ನ
ನಾ ಹೇಗೆ ಅರ್ಚಿಸಲಿ?
ಯಾವ ಮಂತ್ರವಹೇಳಿ
ನಿನ್ನ ಮೆಚ್ಚಿಸಲಿ?

ನನ್ನಂತೆ ನಿನಗೂ
ಮಡಿಯಮಾಡಿಸಿ ನಾನು
ಹಸಿದು ಪೂಜೆಯ ಮಾಡಿ
ಪಡಿಯ ನಿಡುವೆ|

ಕಣ್ಮುಚ್ಚಿ ಕುಳಿತಿರುವ
ನಿನ್ನ ದೇಗುಲದಿ ಹುಡುಕಿ
ಕಾಣಲಾಗದೆ ಬಂದೆ
ಎಲ್ಲಿರುವೆ ತಂದೆ?

ಜಗವೆಲ್ಲ ಬೆಳಗುತ್ತ
ಜಗವ ರಕ್ಷಿಪ ನಿನ್ನ
ಹಣತೆಬೆಳಕಲಿ ಹುಡುಕಿ
ದೇಗುಲದಿ ಕೂಡಿಡುವೆ|

ಬಲ್ಲವರು ಹೇಳಿದರು
ಎಲ್ಲೆಲ್ಲು ನೀನಿರುವೆ|
ಅಹುದೇ ದೇವ ತೋರು
ನಿನ್ನ ರೂಪ|

ನನ್ನೊಳಗೆ ಇರುವಾ
ನಿನ್ನ ಮರೆತು ನಾನು
ಎಲ್ಲಿ ಕಾಣಲಿ ನಿನ್ನ
ನಿಜದ ರೂಪ?||

Wednesday, April 21, 2010

ಅರ್ಥಶೌಚ ಶ್ರೇಷ್ಠವಾದದ್ದು


ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪರಂ ಸ್ಮೃತಮ್|
ಯೋರ್ಥೇ ಶುಚಿ: ಸ ಹಿ ಶುಚಿರ್ನ ಮೃದ್ವಾದಿಶುಚಿ: ಶುಚಿ:||


ಎಲ್ಲಾ ರೀತಿಯ ಶೌಚಗಳಲ್ಲಿ ಅರ್ಥಶೌಚ ಶ್ರೇಷ್ಠವಾದದ್ದು, ಯಾರು ಹಣಕಾಸಿನ ವ್ಯವಹಾರದಲ್ಲಿ ಶುಚಿಯೋ ಅವನೇ ಶುಚಿ, ಮೃತ್ತಿಕೆನೀರಿನಿಂದ ತೊಳೆದುಕೊಂಡ ಮಾತ್ರಕ್ಕೆ ಶುಚಿಯಲ್ಲ.
ಶೌಚವೆಂದರೆ ಶುದ್ಧಿ. ಮೈ, ಮಾತು ಮತ್ತು ಮನಸ್ಸುಗಳ ಶುದ್ಧಿ! ಬಾಹ್ಯ ಕೊಳೆಯನ್ನು ಸ್ನಾನ ಮಾಡಿ ಶುದ್ಧಿ ಮಾಡಿಕೊಳ್ಳಬಹುದು. ಎರಡನೆಯದು ಮಾತಿನ ಶುದ್ಧಿ. ಮಾತನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ,ಎಂತಹ ಸಂದರ್ಭದಲ್ಲೂಇನ್ನೊಬ್ಬರಿಗೆ ನೋವುಂಟುಮಾಡದೆ ಸತ್ಯವೂ, ಪ್ರಿಯವೂ, ಹಿತವೂ ಆದ ಮಾತನ್ನಾಡುವುದು ವಾಕ್ ಶುದ್ಧಿ. ಇವೆರಡಕ್ಕಿಂತಕಠಿಣವಾದುದು ಮನ: ಶುದ್ಧಿ.ಈ ಮೂರೂ ಯಾರಿಗೆ ಶುದ್ಧವಾಗಿದೆಯೋ ಅವನು ತ್ರಿಕರಣಶುದ್ಧ.ಅರ್ಥಶೌಚವು ಮುಖ್ಯವಾಗಿಮನಸ್ಸಿಗೆ ಸಂಬಂಧಿಸಿದ್ದು. ಅನ್ಯಾಯ, ಮೋಸ, ವಂಚನೆ ಮಾಡದೆ ನ್ಯಾಯಯುತವಾದ ದುಡಿಮೆಯಿಂದ ಮನುಷ್ಯ ಜೀವನಮಾಡಿದರೆ, ಹಣಕಾಸಿನ ವ್ಯವಹಾರದ ಶುದ್ಧನಾಗಿದ್ದರೆ ಅವನೇ ಶುದ್ಧ.

Tuesday, April 20, 2010

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ

ನ ಗೃಹಂ ಗೃಹಮಿತ್ಯಾಹು: ಗೃಹಿಣೀ ಗೃಹ ಮುಚ್ಚ್ಯತೇ|
ಗೃಹಂ ತು ಗೃಹಿಣೀಹೀನಂ ಕಾಂತಾರಾದತಿರಿಚ್ಯತೇ||

ಗೃಹಿಣಿ ಇಲ್ಲದ ಮನೆಯು ಗೃಹವೆನಿಸುವುದಿಲ್ಲ. ಗೃಹಿಣಿ ಇದ್ದರೆ ಗೃಹವೆಂದು ಕರೆಯುತ್ತಾರೆ. ಗೃಹಿಣಿಯಿಲ್ಲದ ಮನೆಯು ಕಾಡಿಗಿಂತ ಕಡೆಯೇ ಸರಿ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ.
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ. ಈ ಹಾಡನ್ನು ತಮಾಶೆಗಾಗಿ ಹಾಡಿಲ್ಲ. ಹೆಂಡತಿಯ ಮಹತ್ವವನ್ನು ಈ ಹಾಡೂ ಕೂಡ ಸಾರಿ ಹೇಳುತ್ತೆ. ನಮ್ಮ ಪೂರ್ವಜರು ಮನೆಯೊಡತಿಯನ್ನು "ಗೃಹಲಕ್ಷ್ಮಿ" ಎಂದು ಕರೆದರು. ಗೃಹಿಣಿ ಎಂದೂ ಕರೆದರು. ಪತ್ನಿಯ ಪತಿಯನ್ನು ಗೃಹಸ್ತನೆಂದು ಕರೆದರೂ ಸಹ ಮನೆಯೊಂದು ಶೋಭಿಸಬೇಕಿದ್ದರೆ ಅದು ಮನೆಯೊಡತಿಯಿಂದ ಮಾತ್ರವೇ ಸಾಧ್ಯ ವೆಂಬುದು ಎಲ್ಲರ ಅನುಭವದ ಮಾತು. ಮನೆಯ ಯಜಮನನಾದರೋ ಮನೆಗೆ ಬೇಕಾದ ಎಲ್ಲವನ್ನೂ ತರಬಲ್ಲ. ಆದರೆ ಅದರ ಸದುಪಯೋಗ ಗೃಹಿಣಿಯಿಂದ ಮಾತ್ರ ಸಾಧ್ಯ. ಮನೆಗೆ ಬಂದ ಅತಿಥಿ ಸತ್ಕಾರ,ಮಕ್ಕಳ ಲಾಲನೆ ಪೋಷಣೆ, ಕುಟುಂಬದ ಯೋಗ ಕ್ಷೇಮ, ಮನೆಯ ಜೋಪಾನ, ಮನೆಯಲ್ಲಿ ಲವಲವಿಕೆ, ಹಾಡುಹಸೆ, ಪೂಜೆ-ಪುನಸ್ಕಾರ, ದಾನ-ಧರ್ಮ- ಯಾವ ಕೆಲಸವಾದರೂ ಅದು ಗೃಹಿಣಿಯಿಂದ ಮಾತ್ರ ಸಾಧ್ಯ. ಅಂತಹ ಮಹತ್ವದ ಹೊಣೆ ಇರುವ ಗೃಹಿಣಿಯರು ಗೃಹ ಬಿಟ್ಟು ಹೊರಗೆ ದುಡಿಯುವ ಪರಿಸ್ಥಿತಿ! ಅದು ಅನಿವಾರ್ಯವೋ ಅಥವ ಹಣದ ವ್ಯಾಮಹವೋ, ಅಂತೂ ಇಂದಿನ ದಿನಗಳಲ್ಲಿ ಅನೇಕ ಗೃಹಿಣಿಯರ ಹೊಣೆ ಹಿಂದಿಗಿಂತಲೂ ಅತಿ ಹೆಚ್ಚು. ಕೇವಲ ಹಣಬೇಕಾದರೆ ಮನೆಯ ನೆಮ್ಮದಿಯನ್ನೇ ಬಲಿಕೊಡಬೇಕಾಗುತ್ತದೆ. ಪತಿ-ಪತ್ನಿಯರಿಬ್ಬರೂ ಉದ್ಯೋಗಮಾಡುವ ಅನೇಕ ಕುಟುಂಬಗಳಲ್ಲಿ ಜೀವನ ಬಲು ಯಾಂತ್ರಿಕ. ಜೀವನ ಪೂರ್ತಿ ಹೀಗೆಯೇ ದುಡಿದು ನೆಮ್ಮದಿಯಿಂದ ಇರುವುದಾದರೂ ಎಂದು? ಈ ವಿಷಯದಲ್ಲಿ ಪತಿ-ಪತ್ನಿಯರಲ್ಲಿ ಚಿಂತನ-ಮಂಥನ ನಡೆಯಬೇಕು. ಏನಂತೀರಾ?
ನಮ್ಮ ಸಂಸ್ಕೃತಿಯಲ್ಲಿ ಗೃಹಿಣಿಯ ಮಹತ್ವದ ಬಗ್ಗೆ ಹೀಗೆ ಹೇಳಿದ್ದರೆ, ಅನ್ಯ ಸಂಸ್ಕೃತಿಯಲ್ಲಿ ಲಿವ್ ಟುಗೆದರ್, ಬೇಸರವಾದರೆ ಡೈವರ್ಸ್! ಯೋಚನೆ ಮಾಡಿ, ನಮ್ಮ ಕುಟುಂಬದ ಕಲ್ಪನೆ ಬೇರೆಲ್ಲಿ ಸಿಗಲು ಸಾಧ್ಯ? ಇಂತಹ ಶ್ರೇಷ್ಠ ಸಂಸ್ಕೃತಿಯು ನಮ್ಮದೆಂಬ ಬಗ್ಗೆ ಹೆಮ್ಮೆ ಪಡಬೇಡವೇ?