Pages

Saturday, July 17, 2010

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದಾರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ


[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !

ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

ವಿ.ಆರ್.ಭಟ್
---------------------------------------------------------------
ಭಟ್ಟರೇ,
ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.
ಹೃದಯಶೂನ್ಯ ರಾಜಕಾರಣಿಗಳ ಕೈಗೆ ನಮ್ಮ ಜುಟ್ಟನ್ನು ಕೊಟ್ಟು ಈಗ ಸಂಕಟಪಡುವ ಸ್ಥಿತಿ ಬಂದೊದಗಿದೆ. ಗೋಹತ್ಯಾ ನಿಷೇಧ ಕಾನೂನಿಗೆ ವಿರುದ್ಧವಾಗಿ ಹೋರಾಟಮಾಡಲು ನಮ್ಮ ಮಾಜಿ ಪ್ರಧಾನಿಗಳು ಹೊರಟಿದ್ದಾರೆ.ಯಾಕೆ ಹೀಗೆ? ಎಲ್ಲಕ್ಕೂ ರಾಜಕೀಯವೇ? ನಮಗೆ ಈ ರಾಜಕಾರಣಿಗಳಿಂದ ಇನ್ನೇನೂ ಬೇಡ, ಪ್ರತ್ಯಕ್ಷ ದೇವತೆಯಾದ ಗೋಮಾತೆಯ ಮೇಲೆ ಇಂತಹಾ ಅತ್ಯಾಚಾರವೆಸಗುವ ರಾಕ್ಷಸರನ್ನು ಬಗ್ಗುಬಡೆಯಬಾರದೇ? ಇಲ್ಲೂ ರಾಜಕೀಯ ಬೇಕೆ? ಕಣ್ಣಲ್ಲಿ ನೀರು ಬರುವುದರ ಜೊತೆಗೆ ರಕ್ತ ಕುದಿಯುತ್ತಿದೆ, ನಮ್ಮ ಯುವಜಜಾಂಗಕ್ಕೇನಾಗಿದೆ? ಶ್ರೀ ರಾಮಚಂದ್ರಾಪುರದ ಮಠದ ರಾಘವೇಶಭಾರತಿಗಳಂತೂ ಗೋರಕ್ಷಣೆಗಾಗಿ ಅದೆಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ! ಆದರೂ ನಿರಂತರ ಗೋಹತ್ಯೆ ನಡೆಯುತ್ತಿದೆಯಲ್ಲಾ! ಗೋಹತ್ಯಾ ನಿಶೇಧ ಕಾನೂನಿಗೆ ಪ್ರತಿಭಟಿಸುವ ನಮ್ಮ ರಾಜಕಾರಣಿಗಳ ಶೈಲಿ ಹೇಗಿದೆ, ಗೊತ್ತಾ? ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಗೋಮಾಂಸ ಭಕ್ಷಿಸಿ ಪ್ರತಿಭಟಿಸಿದ ಅಸಹ್ಯಕರ ಪ್ರತಿಭಟನೆ ನಡೆದಿದೆ!
ತಾಯಿಯ ಹಾಲುಂಡು ಬೆಳೆಯುವುದು ಮಗುವಾಗಿದ್ದಾಗ ೧-೨ ವರ್ಷಗಳು. ಇನ್ನು ಜೀವನ ಪರ್ಯಂತ ಗೋಮಾತೆಯ ಹಾಲಿನಿಂದಲೇ ಬೆಳೆವ ನಾವು ಎಂತಹಾ ನೀಚರಾಗಿ ವರ್ತಿಸುತ್ತಿದೇವೆ?!
ಹಾ!! ಈ ನೀಚ ಪ್ರತಿಭಟನೆಯೆಲ್ಲಾ ರಾಜಕೀಯ ಪ್ರೇರಿತ. ವೈಯಕ್ತಿಕವಾಗಿ ನೀವು ರಾಜಕಾರಣಿಗಳನ್ನು ಮಾತನಾಡಿಸಿದರೆ ನೂರಕ್ಕೆ ೯೫ ಜನ ರಾಜಕಾರಣಿಗಳಿಗೆ ಗೋಹತ್ಯೆ ನಿಷೇಧವಾಗಬೇಕೆಂಬ ಮನಸ್ಸು. ಆದರೆ ಇದು ಎಲ್ಲಿ ಬಿ.ಜೆ.ಪಿ ಯವರಿಗೆ ಇದರ ಲಾಭವಾಗುತ್ತದೋ ಎಂದು ಕೆಟ್ಟ ರಾಜಕಾರಣ!
ಜನಸಾಮಾನ್ಯರಾದ ನಮಗೆ ಈ ರಾಜಕಾರಣ ಬೇಕೆ? ಯಾವ ಪಕ್ಷವಾದರೇನು? ಉತ್ತಮ ಆಡಳಿತ ಮಾಡಿದರಾಯ್ತು. ಈಗಿನ ಬಿ.ಜೆ.ಪಿ ಆಡಳಿತದಲ್ಲಿ ಜನರಿಗೆ ಬೇಸರಮೂಡಿಯಾಗಿದೆ.ಮುಂದೆ ವಿರೋಧ ಪಕ್ಷದವರೇ ಆಳಲು ಅವಕಾಶವಿದ್ದೇ ಇದೆ. ಜನ ಜಾಗೃತಿ ಮೂಡಿಸಿ ಬೇರೆ ಸರ್ಕಾರದ ರಚನೆಯಾಗಲಿ. ಆದರೆ ಯಾವ ಪಕ್ಷದ ಸರ್ಕಾರವಾದರೂ ಇರಲಿ, ಇಲ್ಲಿ ನೆಲದ ಸಂಸ್ಕೃತಿಯುಳಿಸುವ ಹೊಣೆ ಎಲ್ಲರದ್ದೂ ಅಲ್ಲವೇ? ಅದು ಯಾವ ಪಕ್ಷದ ಗುತ್ತಿಗೆಯೂ ಅಲ್ಲ. ಹಾಗೆ ನೋಡಿದರೆ ವಿರೋಧ ಪಕ್ಷಗಳು ಗೋಹತ್ಯಾ ನಿಷೇಧಕಾನೂನಿಗೆ ಬೆಂಬಲಿಸಿ ಜನರ ಒಲವು ಪಡೆಯಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ನೆಲದ ಪರಂಪರೆಗೆ ಮಾರಕವಾಗುವ ಯಾವುದೇ ವಿಷಯದಲ್ಲಿ ಪಕ್ಷಬೇಧಮರೆತು ಹೋರಾಡಿದರೆ ದೇಶಕ್ಕೂ ಒಳ್ಳೆಯದು, ಜನರ ಒಲವನ್ನೂ ವಿರೋಧಪಕ್ಷಗಳು ಜಾಣತನದಿಂದ ಪಡೆಯಲೂಬಹುದು. ರಾಜಕೀಯ ಮಾತು ಬೇಡವೆಂದರೂ ಅದಿಲ್ಲದೆ ಏನೂ ಇಲ್ಲ. ಹಾಗಾಗಿ ಕ್ಷಮೆ ಇರಲಿ.
-ಹರಿಹರಪುರಶ್ರೀಧರ್
------------------------------------------
ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,
ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,
ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.
ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -
ಶ್ರೀ ರಾಜು - 98447 48501
ಮತ್ತು
ಗೋಶಾಲೆ - 08182 260947.
ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.
- ಸುಧಾಕರ ಶರ್ಮಾ

4 comments:

  1. ಭಟ್ಟರೇ,
    ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.

    ReplyDelete
  2. ಸ೦ಪೂರ್ಣ ಲೇಖನ, ಲೇಖನದೊ೦ದಿಗಿನ ಚಿತ್ರ, ಚಿತ್ರದೊ೦ದಿಗಿನ ಕವನ ಎಲ್ಲವೂ ಕಣ್ಣಲ್ಲಿ ನೀರು ಬರಿಸಿತು.

    ReplyDelete
  3. ಮಿತ್ರರೇ, ನಿಮ್ಮೆಲ್ಲರ ಕಳಕಳಿ ನೋಡಿ ನನ್ನ ವೈಯಕ್ತಿಕ ರೋದನವನ್ನು ತುಸು ಕಮ್ಮಿಮಾಡಿಕೊಂಡಿದ್ದೇನೆ. ಆದರೂ ಈ ವಿಷಯ ನಮ್ಮ ಕಣ್ಣಿಗೆ ರಪ್ಪನೆ ರಾಚಿ -ಮನ ಕೆದಕಿ-ದಿಗಿಲೆದ್ದು,ಕಾಣದ ಕೋಪ ಭುಗಿಲೆದ್ದು ಸುಡುವ ಕೆನ್ನಾಲಿಗೆಗಳು ನಮ್ಮ ಮನಸ್ಸನ್ನೇ ತಿನ್ನುವ ಹಂತಕ್ಕೆ ಬೆಳೆಯುತ್ತವೆ ಅಲ್ಲವೇ ? ಅಮ್ಮನ ತರುವಾಯ ಜೀವನ ಪೂರ್ತಿ ಪ್ಯಾಕೆಟ್ ಮೂಲಕವೋ ಪಾತ್ರೆ ಮೂಲಕವೋ ನಮಗೆಲ್ಲ ತನ್ನ ಶುದ್ಧ ಅಮೃತವನ್ನು ಧಾರೆ ಎರೆಯುವ ಇಂತಹ ಕಾಮಧೇನುಗಳನ್ನು ಯಾರೋ ಒಂದಷ್ಟು ಜನ ರಾಕ್ಷಸರು ತಿನ್ನುವ ಹಂತದಲ್ಲಿ ಮಾರುವ ಮಾರೀಚರಿಗಾದರೂ ಬುದ್ಧಿಬೇಡವೇ ? ತಿನ್ನಲೇ ಖರೀದಿಸಿದರೂ ಕತ್ತರಿಸುವವರೆಗೆ ಆ ಕಟುಕರಿಗೆ ಅದು ಸುಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಲಾಗುತ್ತಿರಲಿಲ್ಲವೇ? ಕೆಲದಿನಗಳ ಹಿಂದೆ ಬೆಂಗಳೂರಿನ ಶಿವಾಜಿನಗರದ ಶಿವಾಜಿ ವೃತ್ತದ ಬಳಿ ಒಂದು ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಹೊರಟಿದ್ದೆ, ಅಲ್ಲಿ ಒಂದು ಮುದ್ದಾದ ಬಿಳಿಯ ಕಿಲಾರಿ ತಳಿಯ ಹೋರಿಗರುವೊಂದನ್ನು ಬಿರುಬಿಸಿಲಲ್ಲಿ ಕಟ್ಟಿನಿಲ್ಲಿಸಿದ್ದರು, ಅದು ವಧೆಗಾಗಿಯೇ ಅಲ್ಲಿಗೆ ತರಲ್ಪಟ್ಟಿದ್ದು ಎಂದು ತಕ್ಷಣಕ್ಕೆ ಅರ್ಥವಾದರೂ ಕೆಲವರಿಗೆ ಸುದ್ದಿ ತಲ್ಪಿಸಿದೆ, ಆದರೆ ಅಲ್ಲೆಲ್ಲ ಹಾಗೇ ಗುಲ್ಲೆಬ್ಬಿಸಿದರೆ, ಜಗಳವಾಡಿದರೆ ರಾಜಕೀಯ ಮುಖಂಡರು ಸುಮ್ಮನಿರುತ್ತಾರೆಯೇ? ಹಾಗಂತ ಎಷ್ಟುದಿನ ತಡೆದು ಕೊಳ್ಳಲಾದೀತು? ಸಾಹಿತಿಗಳಾದ ಕಾರ್ನಾಡ, ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ ಇವರೆಲ್ಲ ಹಸುಗಳು ತಮ್ಮ ಜೀವನದಲ್ಲಿ ಕಂಡ, ಓದಿಕೊಂಡ ಖಳನಾಯಕರು ! ಅವರು ದಿನಬೆಳಗಾದರೆ ಕತ್ತೆಯ ಹಾಲನ್ನು ಕುಡಿದು ಬದುಕುತ್ತಾರೆ. ಇಂತಹ ಮಾನಗೆಡೀ ರಾಜಕೀಯ ಮಾಡುವ ವ್ಯವಹಾರಕ್ಕೆ ಮೂತಿ ತೂರಿಸಿ ಮೊದಲು ರಾಜಕೀಯಮಾಡಿ ಪಡೆದ ಪ್ರಶಸ್ತಿಗಳ ಆ ಮೌಲ್ಯವನ್ನೂ [ಮೊದಲೇ ಇಲ್ಲ ಅನ್ನಿ, ಆದರೂ]ಕಡಿಮೆಮಾಡಿಕೊಳ್ಳುವ ಬದಲು ತೆಪ್ಪಗೆ ಕುಳಿತುಕೊಳ್ಳಬಾರದೇ? ರೈತನಲ್ಲಿ ಹಲವು ಸಮಸ್ಯೆಗಳಿವೆ-ಬರೇ ಮುದಿಹಸುಗಳನ್ನು ಮಾರುವುದರಿಂದ ಅವರ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕಿಬಿಡುತ್ತದೆಯೇ? ಹಾಗಿದ್ದರೆ ಈಗೀಗ ಮುದುಕಾಗುತ್ತಿರುವ ಮೇಲೆಹೇಳಿದ ಎಲ್ಲಾ ಸಾಹಿತಿಗಳನ್ನೂ {?] ಕಸಾಯಿಖಾನೆ ಹಾಕಿ ಅವರವರ ಮಕ್ಕಳ-ಮನೆಯ ಭಾರ ಕಮ್ಮಿ ಮಾಡಿ ! ರಾಸುಗಳಿಗಾಗುವ ಈ ದುರಂತವನ್ನು ಮನದಂದು ಶ್ರೀ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿಗಳಂತೂ ಗೋರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ- ಆದರೆ ಅದನ್ನು ಕಂಡ ಪಂಕ್ಚರ್ದ್ ಸೈಕಲ್ ನ ಬಂಗಾರಪ್ಪ ಬೀದಿನಾಯಿ ಬೊಗಳಿದ ಹಾಗೇ ಆಡಬಾರದ ಮಾತನ್ನೆಲ್ಲ ಆಡಿದ್ದಾನೆ, ಇಂತಹ ಧೂರ್ತ,ಕುತ್ಸಿತ ರಾಜಕಾರಣಿಗಳನ್ನೆಲ್ಲಾ ನಾವು ಸಾಕುತ್ತೆವಲ್ಲಾ ನಮಗೆ ಬುದ್ಧಿ ಇದೆಯೇ ?

    ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತಲೆಬಾಗಿದ್ದೇನೆ. ಹೆಚ್ಚಿಗೆ ಬರೆಯುವ ಮನಸ್ಸಾಗುತ್ತಿಲ್ಲ, ಎಲ್ಲೇ ಹೋದರೂ ನಿಂತರೂ ಕುಂತರೂ ಹಸುಗಳದೇ ಧ್ಯಾನ. ನಿಮ್ಮ ಒಬ್ಬೊಬ್ಬರ ಅನಿಸಿಕೆಯೂ ಮನದಾಳಕ್ಕೆ ಇಳಿಯುತ್ತದೆ, ಅಂಬಿನ ಅಲುಗು ನಾಟಿದಂತೆ ನಾಟುತ್ತದೆ! ನನ್ನ ಈ ಅನಿಸಿಕೆಗೆ ದುಃಖಪೂರಿತವಾಗಿ ಸ್ಪಂದಿಸಿದ ನಿಮ್ಮೆಲ್ಲರ ಪ್ರತಿಕ್ರಿಯೆ ಓದಿ ನೋವಾಗುತ್ತದೆ. ನಾವು ಇನ್ನೂ ಹೀಗೇ ಕುಳಿತುಕೊಳ್ಳಬೇಕೆ ಅಥವಾ ವಿಧಾನಸೌಧಕ್ಕೆ ನುಗ್ಗಿ ಪಾಠ ಕಲಿಸಲು ಸಜ್ಜಾಗಬೇಕೆ ನೀವೇ ಯೋಚಿಸಿ. ನಮ್ಮದಾದ ಗೋವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ-ಇದು ಮಾನವ ಧರ್ಮ, ಮಾನವ ಸಹಜ ಪ್ರವೃತ್ತಿ ಇರುವವರಿಗೆ ಇರಬೇಕಾದ ಧರ್ಮ. ಬನ್ನಿ ಮಿತ್ರರೇ, ಇನ್ನಾದರೂ ಈ ವಿಷಯದಲ್ಲಿ ತುಸು ಚಿಂತಿಸೋಣ, ನಮ್ಮ ಮಠಗಳು ರಾಜಕಾರಣ ಮಾಡುತ್ತಿಲ್ಲ, ಧರ್ಮಕಾರಣ ಮಾಡುತ್ತಿಲ್ಲ ಬದಲಾಗಿ ಮಾನವಧರ್ಮಕಾರಣ ಮಾಡುತ್ತಿದ್ದಾರೆ, ಇದು ಬೇಕಾದದ್ದೇ, ಇದರಿಂದ ಯಾರಿಗೂ ಹಾನಿ ಇಲ್ಲ. ಧನ್ಯವಾದಗಳು

    ReplyDelete
  4. ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,
    ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,
    ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.
    ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -
    ಶ್ರೀ ರಾಜು - 98447 48501
    ಮತ್ತು
    ಗೋಶಾಲೆ - 08182 260947.
    ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.
    - ಸುಧಾಕರ ಶರ್ಮಾ

    ReplyDelete