Pages

Wednesday, October 27, 2010

ಮೂಢ ಉವಾಚ -9

ನಿಂದಕರ ವಂದಿಸುವೆ ನಡೆಯ ತೋರಿಹರು|
ಮನೆಮುರುಕರಿಂ ಮನವು ಮಟ್ಟವಾಗಿಹುದು||
ಕುಹಕಿಗಳ ಹರಸುವೆ ಮತ್ತೆ ಪೀಡಕರ|
ಜರೆವವರು ಗುರುವಾಗರೇ ಓ ಮೂಢ||


ಮರುಭೂಮಿಯಲೊಂದು ತರುವ ಕಾಣಲಹುದೆ?
ಖೂಳತನದ ಖಳರೊಳಿತು ಮಾಡುವರೇ?
ಕೊಂಕರಸುವ ಡೊಂಕ ಮನವೊಡೆವ ಕೆಡುಕನ|
ಹುಣ್ಣನರಸುವ ನೊಣನೆಂದೆಣಿಸು ಮೂಢ||


ವೇಷಭೂಷಣವನೊಪ್ಪೀತು ನೆರೆಗಡಣ|
ನೀತಿಪಠಣವ ಮೆಚ್ಚೀತು ಶ್ರೋತೃಗಣ||
ನುಡಿದಂತೆ ನಡೆದರದುವೆ ಆಭರಣ|
ಮೊದಲಂತರಂಗವನೊಪ್ಪಿಸೆಲೋ ಮೂಢ||


ಆವರಣ ಚೆಂದವಿರೆ ಹೂರಣಕೆ ರಕ್ಷಣ|
ಹೂರಣ ಚೆಂದವಿರೆ ಆವರಣಕೆ ಮನ್ನಣ||
ಆವರಣ ಹೂರಣ ಚೆಂದವಿರೆ ಪ್ರೇರಣ|
ಬದುಕು ಸುಂದರ ಪಯಣ ಕಾಣಾ ಮೂಢ||
**********************
-ಕವಿನಾಗರಾಜ್.

8 comments:

  1. ನಿಮ್ಮ ಒಂದೊಂದು ಮಾತನ್ನು ಓದುತ್ತಿದ್ದಾಗ ನಾನೆಂದುಕೊಳ್ಳುತ್ತೇನೆ-ನಾನು ಈ ಮಟ್ಟಕ್ಕೆ ಬೆಳೆಯುವುದು ಯಾವಾಗ?

    ReplyDelete
  2. ಸ್ನೇಹಭಾವ ನಿಮ್ಮಿಂದ ಈ ಮಾತನ್ನಾಡಿಸಿದೆ, ಶ್ರೀಧರ್. ನನಗೂ ನಿಮ್ಮ ಬಗ್ಗೆ ಹಾಗೆಯೇ ಅನ್ನಿಸುವುದು!

    ReplyDelete
  3. ಖುಷಿ ಕೊಟ್ಟ ಸಾಲುಗಳು. ಅ೦ತರಾರ್ಥ ಸೊಗಸಾಗಿದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  4. ಮೆಚ್ಚಿದ ನಾವಡರಿಗೆ ನಮಸ್ಕಾರಗಳು.

    ReplyDelete
  5. ಇಂದಷ್ಟೇ ಕೆಳದಿ ಕವಿ ಮನೆತನ ಬ್ಲಾಗ್ ನಲ್ಲಿ ಕವಿ ವೆಂಕಣ್ಣನ ಕೃತಿಯೊಂದನ್ನು ಪೋಸ್ಟ್ ಮಾಡಿದೆ. ಅದರಲ್ಲೂ ಶಿವಮಂತ್ರವ ಜಪಿಸೋ 'ಮೂಢ' ಎಂಬ ಪ್ರಸ್ತಾಪವಿದೆ. ಬಹುಶ: ಕವಿ ವಂಶಕ್ಕೂ 'ಮೂಢ'ನಿಗೂ ಗಾಢವಾದ ಸಂಬಂಧವಿರಬೇಕು! (ಹಾಸ್ಯಕ್ಕಾಗಿ ಹೇಳಿದೆ) ಮೂಢನ ಯಾತ್ರೆ ಚೆನ್ನಾಗಿ ಸಾಗಿದೆ. ಬೇಗ ಪುಸ್ತಕ ರೂಪ ಕಾಣಲಿ; ನನ್ನೆಲ್ಲ ಸಹಕಾರವಿದೆ.

    ReplyDelete
  6. ಆಗಲಿ, ಸುರೇಶ. ಪ್ರಯತ್ನಿಸುವೆ.

    ReplyDelete
  7. ಚೆನ್ನಾಗಿದೆ ಕವಿ ನಾಗರಾಜರೆ, ಅನುಭವದಿಂದ ಹೊರಬರದ್ದು ಯಾವುದು ಅಲ್ಲವೇ ?

    ReplyDelete
  8. ವಂದನೆಗಳು, ಭಟ್ಟರೇ. ನಿಮ್ಮ ಸಲಹೆಯಂತೆ ನನ್ನ ಬ್ಲಾಗ್ 'ಕವಿಮನ'ಕ್ಕೆ ಈಗ ಫಾಲೋಯರ್ಸ್ ಲಿಂಕ್ ಹಾಕಿರುವೆ. ನೋಡಿ ಏನಾದರೂ ಸಲಹೆಗಳಿದ್ದರೆ ಕೊಡಿರಿ.

    ReplyDelete