Pages

Friday, October 1, 2010

ಚಾತುರ್ವರ್ಣ- ಒಂದು ವಿಶ್ಲೇಷಣೆ ಭಾಗ-೧

ವೇದೋಕ್ತ ಜೀವನ ಪಥ-ಉಪನ್ಯಾಸ ಮಾಲಿಕೆ - 3




ಶರೀರದಲ್ಲಿ ಮುಖದ ಕೆಲಸದಂತೆ ಸಮಾಜದಲ್ಲಿ ಕೆಲಸ ಮಾಡುವವರು ಯಾರು? ಬಾಹುಗಳಂತೆ ಕೆಲಸ ಮಾಡುವವರು ಯಾರು? ತೊಡೆಗಳಂತೆ ಕೆಲಸಮಾಡುವವರು ಯಾರು?[ಅಥರ್ವ ವೇದದಲ್ಲಿ ಮಧ್ಯೋ ತದಸ್ಯ ಯದ್ ವೈಶ್ಯೋ , ಎಂದು ಹೇಳಿದೆ, ಅಂದರೆಶರೀರದ ಮಧ್ಯಭಾಗದಂತೆ ಕೆಲಸ ಮಾಡುವವರು ವೈಶ್ಯರು]
ಶರೀರದಲ್ಲಿ ಕಾಲುಗಳು ಕೆಲಸಮಾಡುವಂತೆ ಸಮಾಜದಲ್ಲಿಕೆಲಸವನ್ನು ಮಾಡುವವರು ಯಾರು?- ಇದು ಪ್ರಶ್ನೆ. ಮುಖದಂತೆ, ಕಾಲುಗಳಂತೆ ಕೆಲಸ ಮಾಡುವವರು ಯಾರು? ಎಂಬುದು ಪ್ರಶ್ನೆಹೊರತು, ಮುಖದಿಂದ ಯಾರು ಜನಿಸಿದರು? ಪಾದದಿಂದ ಯಾರು ಜನಿಸಿದರು? ಎಂಬ ವ್ಯಾಖ್ಯೆಯೇ ತಪ್ಪು.ಇದನ್ನು ನಾವುರಿಯಾಗಿ ತಿಳಿದುಕೊಳ್ಳಬೇಕು. ಇಲ್ಲಿ ಸ್ವಲ್ಪ ವ್ಯಾಕರಣವನ್ನು ಗಮನಿಸಬೇಕು. ಅದೇನೆಂದರೆ || ಪದ್ಭ್ಯಾಮ್ ಶೂದ್ರೋ ಅಜಾಯತ|| ಇಲ್ಲಿ ಗಮನಿಸಬೇಕಾದುದೇನೆಂದರೆ ಪದ್ಭ್ಯಾಮ್ ಎನ್ನುವ ಪದವು ಚತುರ್ಥಿ ವಿಭಕ್ತಿಯಲ್ಲಿ ಇದಕ್ಕೋಸ್ಕರ ಎಂದಾಗುತ್ತದೆ.ಅಂದರೆಪಾದಗಳು ಮಾಡುವ ಕೆಲಸಕ್ಕೋಸ್ಕರ ಎಂದಾಗುತ್ತದೆ. ಪಂಚಮಿ ವಿಭಕ್ತಿಯಲ್ಲಿ ಇದರಿಂದ ಎಂದಾಗುತ್ತದೆ, [ ಅಂದರೆ ಪಾದಗಳಿಂದ] ಎಂದಾಗುತ್ತದೆ. ಪ್ರಶ್ನೆ ಇರುವುದು ಯಾವ ಕೆಲಸಕ್ಕಾಗಿ? ಎಂದಾದ್ದರಿಂದ ಇಲ್ಲಿ ಚತುರ್ಥಿ ವಿಭಕ್ತಿಯನ್ನೇ ನಾವುತೆಗೆದುಕೊಳ್ಳಬೇಕು.ಕಾರಣ ಹಿಂದಿನ ಪ್ರಶ್ನೆಗೆ ಈ ಮಂತ್ರ ಉತ್ತರವಾಗಬೇಕಾದರೆ ಪಾದಗಳಿಗೋಸ್ಕರ ವೆಂದು ಅರ್ಥೈಸಬೇಕೇ ಹೊರತು ಪಾದಗಳಿಂದ ಶೂದ್ರ ಹುಟ್ಟಿದ ಎಂಬುದು ತಪ್ಪು. ಹಾಗೆಯೇ ಮುಖದಿಂದ ಬ್ರಾಹ್ಮಣನಾಗಲೀ,ಬಾಹುಗಳಿಂದಕ್ಷತ್ರಿಯನಾಗಲೀ, ತೊಡೆಗಳಿಂದ ವೈಶ್ಯನಾಗಲೀ ಜನಿಸಲಿಲ್ಲ. ಎಲ್ಲರ ಜನವಾಗಿರುವುದು ತಾಯಿಯ ಗರ್ಭದಿಂದಲೇ. ಸಮಾಜದನಾಲ್ಕು ಕೆಲಸಗಳನ್ನು ಈ ಮಂತ್ರದಲ್ಲಿ ಹೇಳಿದ್ದಾರೆ. ಮುಖದಲ್ಲಿ ಯಾವ ಕೆಲಸ ನಡೆಯುತ್ತದೆ? ಮುಖದಲ್ಲಿ ಗ್ರಹಿಸುವಅಂಗಾಂಗಗಳಿವೆ. ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಮಿದುಳುಗಳಿವೆ.ಇವೆಲ್ಲವೂ ಹೊರಜಗತ್ತಿನಿಂದ ವಿಷಯಗಳನ್ನು ಸಂಗ್ರಹಿಸುವಇಂದ್ರಿಯಗಳು.ಅಲ್ಲದೆ ಅವುಗಳನ್ನು ವಿಮರ್ಶೆಮಾಡುವ ಹಾಗೂ ನಿರ್ಣಯ ಕೊಡುವ ಮಿದುಳೂ ಕೂಡ ಮುಖದ ಭಾಗದಲ್ಲಿಯೇ ಇದೆ. ಆ ನಿರ್ಣಯಗಳನ್ನು ಉಚ್ಛರಿಸುವ ನಾಲಿಗೆಯೂ ಇಲ್ಲಿಯೇ ಇದೆ. ಆ ನಿರ್ಣಯಗಳನ್ನು ಶರೀರದ ಎಲ್ಲಾ ಅಂಗಾಂಗಗಳಿಗೂ ಕಳಿಸುವ ವ್ಯವಸ್ಥೆಯೂ ಇಲ್ಲೇ ಇದೆ. ಅಂದರೆ ಈ ಶಿರೋ ಭಾಗದಲ್ಲಿರುವ ಅನ್ಯಾನ್ಯ ಅಂಗಾಂಗಗಳು ಮಾಡುವ ಕೆಲಸಗಳನ್ನು ಸಮಾಜದಲ್ಲಿ ಯಾರು ಮಾಡುತ್ತಾರೋ ಅವರನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ಅಂದರೆ ಇದು ಜಾತಿಯಲ್ಲ. ಇದು ಜನ್ಮದಿಂದಬರುವಂತಹದ್ದಲ್ಲ. ಶರೀರದ ಶಿರೋ ಭಾಗವು ನಿರ್ವಹಿಸುವ ಕೆಲಸಗಳನ್ನು ಸಮಾಜದಲ್ಲಿ ಯಾರ್ಯಾರು ಮಾಡುತ್ತಾರೆ, ಅವರೆಲ್ಲಾಬ್ರಾಹ್ಮಣರೇ ಹೌದು.ಶರೀರದ ರಕ್ಷಣೆ ಮಾಡುವ ಅಂಗ ಯಾವುದು? ಒಂದು ವೇಳೆ ಮುಗ್ಗರಿಸಿ ಬೀಳುವ ಸ್ಥಿತಿ ಬಂದರೆ ಮೊದಲುಕೈಯ್ಯನ್ನು ನೆಲಕ್ಕೆ ಕೊಡುತ್ತೀವಲ್ಲವೇ? ತಲೆಯಮೇಲೆ ಏನಾದರೊಂದು ವಸ್ತು ಅಕಸ್ಮಾತ್ ಬಿತ್ತೆಂದರೆ ತಲೆಯನ್ನು ಮೊದಲು ರಕ್ಷಿಸಲು ಧಾವಿಸುವುದು ಕೈ ಅಲ್ಲವೇ? ಹಾಗೆಯೇ ಸಮಾಜದ ಮೇಲಿನ ಆಘಾತಗಳು, ಅನ್ಯಾಯ, ಅಧರ್ಮ, ಅತ್ಯಾಚಾರಗಳಿಂದ ಸಮಾಜವನ್ನು ರಕ್ಷಿಸುವವನು ಕ್ಷತ್ರಿಯ. ಶರೀರದಲ್ಲಿ ಮಧ್ಯಭಾಗದಲ್ಲಿರುವುದು ಶ್ವಾಸಕೋಶ, ಹೃದಯ ಮತ್ತು ಜಠರ ಹಾಗೂತೊಡೆಗಳು.ಶ್ವಾಸಕೋಶವು ತಾನು ತೆಗೆದುಕೊಂಡ ಗಾಳಿಯಿಂದ ಆಮ್ಲಜನಕವನ್ನು ಶರೀರದ ಎಲ್ಲಾ ಭಾಗಗಳಿಗೂ ಹಂಚಬೇಕು.ಹೃದಯವು ರಕ್ತವನ್ನು ಶರೀರದ ಕಣಕಣಗಳಿಗೂ ಹಂಚಬೇಕು. ಹೊಟ್ಟೆ ತನ್ನಲ್ಲಿರುವ ಆಹಾರವನ್ನು ಶರೀರರದ ಎಲ್ಲಾಭಾಗಗಳಿಗೂ ಹಂಚಬೇಕು. ಹೀಗೆ ತಯಾರಿ ಮತ್ತು ಹಂಚುವ ಕೆಲಸವನ್ನು ಮಾಡುವ ಶರೀರದ ಮಧ್ಯಭಾಗವೇನಿದೆ ಅವುಗಳ , ಹಾಗೂ ಶರೀರಕ್ಕೆ ಆಧಾರವನ್ನು ಕೊಡುವ ತೊಡೆಯ ಕಾರ್ಯವನ್ನು ಸಮಾಜದಲ್ಲಿ ಮಾಡುವವನು ವೈಶ್ಯ. ಪಾದವಾದರೋ ಶರೀರದ ಚಲನೆಗೆ ಕಾರಣವಾಗಿದೆ. ಅದಿಲ್ಲದಿದ್ದರೆ ಮನುಷ್ಯನನ್ನು ಹೆಳವನೆನ್ನುತ್ತಾರೆ. ಮನುಷ್ಯನ ಪ್ರಗತಿ ಇರುವುದೇ ಅವನ ಚಲನೆಯ ಶಕ್ತಿಯಿಂದ. ಹೀಗೆ ಸಮಾಜದ ಪ್ರಗತಿಗೆ ಯಾರು ಕಾರಣರೋ ಅವರು ಶೂದ್ರ.ಶರೀರಕ್ಕೆ ತಲೆ ಮಾತ್ರ ಇದ್ದರೆ ಸಾಕೇ? ಕಾಲೂ ಬೇಕಲ್ಲವೇ? ಶರೀರಕ್ಕೆ ತಲೆಯು ಎಷ್ಟು ಮುಖ್ಯವೋ ಕಾಲೂ ಅಷ್ಟೇ ಮುಖ್ಯ.ಕಾಲೆಷ್ಟು ಮುಖ್ಯವೋ ಹೊಟ್ಟೆಯೂ ಅಷ್ಟೇಮುಖ್ಯ, ಕೈಗಳೂ ಅಷ್ಟೇ ಮುಖ್ಯ. ಶರೀರಕ್ಕೆ ಎಲ್ಲಾ ಅಂಗಗಳೂ ಮುಖ್ಯವೇ.ಶರೀರದಲ್ಲಿ ಎಲ್ಲಾ ಅಂಗಗಳೂ ಒಂದಕ್ಕೊಂದುಹೊಂದಿಕೊಂಡು ಕೆಲಸವನ್ನು ಮಾಡಿದರೆ ಮಾತ್ರ ಶರೀರರದ ಕೆಲಸಗಳು ಸುಗಮವಾಗುತ್ತವೆ. ಹಾಗೆಯೇ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಪರಸ್ಪರ ಹೊಂದಿಕೊಂಡು ತಮ್ಮತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದಾಗ ಮಾತ್ರ ಈ ಸಮಾಜರಥವು ಸುಗಮವಾಗಿ ಚಲಿಸುತ್ತದೆ. ಇಲ್ಲಿ ಯಾರೂ ಹೆಚ್ಚೂ ಇಲ್ಲ. ಯಾರೂ ಕಡಿಮೆಯೂ ಇಲ್ಲ. ಇದು ವೇದದಲ್ಲಿನ ಮಾತು. ಇದಕ್ಕೆ ಪೂರಕವಾಗಿ ವೇದದಲ್ಲಿ ಇನ್ನೊಂದು ಮಂತ್ರವು ಇದೆ. || ಅಜ್ಯೇಷ್ಠಾ ಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ||[ಋಕ್.೫.೬೦.೫] ಈ ಮಂತ್ರದ ಅರ್ಥ ವೇನೆಂದರೆ ಹೇ ಮಾನವರೇ, ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ-ಯಾರೂಕನಿಷ್ಠರೂ ಅಲ್ಲ. ನೀವೆಲ್ಲರೂ ಪರಸ್ಪರ ಸೋದರರು.ಎಲ್ಲರೂ ಸೌಭಾಗ್ಯಕ್ಕಾಗಿ ಒಂದುಗೂಡಿ ನಡೆಯಬೇಕು. ಅಂದರೆ ಬ್ರಾಹ್ಮಣನಿಗೆಯಾವ ಸ್ಥಾನವೋ ಶೂದ್ರನಿಗೂ ಅದೇ ಸ್ಥಾನ. ಉಚ್ಛ-ನೀಚ ಭೇದ ಎಣಿಸುವವರು ವೇದವನ್ನು ಸರಿಯಾಗಿ ಓದಬೇಕು. ವೇದದಲ್ಲಿ ಇದು ಸ್ಪಷ್ಟವಾಗಿದೆ.
. . . . . . . . . . . . .ಮುಂದಿನ ಭಾಗವನ್ನು ೫.೧೦.೨೦೧೦ ಮಂಗಳವಾರ ನಿರೀಕ್ಷಿಸಿ

7 comments:

  1. ಅತ್ಯುತ್ತಮ ವಿಶ್ಲೇಷಣೆ

    ReplyDelete
  2. ಶರ್ಮರ ಮಾತುಗಳನ್ನು ಒಪ್ಪಬೇಕೆಂದೇನೂ ಇಲ್ಲ.ಆದರೆ ಇದು ಸರಿ ಅಥವಾ ತಪ್ಪು ಎಂದು ಹೇಳುವವರಿಲ್ಲದಿದ್ದರೆ ಈ ಪ್ರಯತ್ನ ವ್ಯರ್ಥವಾಯ್ತೇ? ಎನಿಸುತ್ತದೆ. ಆದರೆ ಹಾಗಾಗದಂತೆ ನಿಮ್ಮ ಒಂದು ಮಾತು ಮುಂದಿನ ಕಂತಿಗೆ ಪ್ರೇರಣೆ ಕೊಟ್ಟಿದೆ. ಧನ್ಯವಾದಗಳು.

    ReplyDelete
  3. ಶರ್ಮರ ವಿಶ್ಲೇಷಣೆ ಚೇತೋಹಾರಿ ಮತ್ತು ಒಪ್ಪತಕ್ಕದ್ದಾಗಿದೆ.

    ReplyDelete
  4. ಇವತ್ತು ಇದನ್ನು ವಿಶ್ಲೇಸಿಅ ಹೊರಟರೆ ನಮಗೆ ಕಾಣುವುದು ಕಾಲುಗಳ ಅಥವಾ ಪಾದಗಳು ಇರದ ಹೊರತು ಶರೀರ ನಿಲ್ಲುವಿದಿಲ್ಲ, ನಡೆಯುವುದಿಲ್ಲ, ತೊಡೆಗಳು, ತೋಳುಗಳು ಇದ್ದಹೊರತು ಸತುವಿರುವುದಿಲ್ಲ, ಕೆಲಸಮಾಡಲು ಸಾಧ್ಯವಾಗುವುದಿಲ್ಲ, ತಲೆ,ಮುಖ ಇದ್ದ ಹೊರತು ಅದು ಪೂರ್ಣ ಶರೀರವಲ್ಲ,ಹೀಗಾಗಿ ಎಲ್ಲಾ ಅಂಗಾಂಗಳೂ ಅಷ್ಟಷ್ಟೇ ಪ್ರಾಮುಖ್ಯವಾದುದರಿಂದ ಎಲ್ಲಕ್ಕೂ ಮಹತ್ವವಿದೆ, ಎಲ್ಲರಿಗೂ ಮಹತ್ವವಿದೆ.ಶರ್ಮರ ಹೇಳಿಕೆ ಮಾನ್ಯ. ಧನ್ಯವಾದಗಳು

    ReplyDelete
  5. ಪ್ರತಿಕ್ರಿಯಿಸಿರುವ ಶ್ರೀಯುತರುಗಳಾದ ಸೀತಾರಾಮ್, ನಾಗರಾಜ್ ಮತ್ತು ವಿಷ್ಣುಭಟ್,
    ನಿಮಗೆಲ್ಲಾ ಧನ್ಯವಾದಗಳು ,ಮುಂದಿನ ಕಂತನ್ನು ಇದೇ ಮಂಗಳವಾರ ನಿರೀಕ್ಷಿಸಿ.

    ReplyDelete
  6. ಸು೦ದರ ವಿಶ್ಲೇಷಣೆ ಹಾಗೂ ಅರ್ಥಪೂರ್ಣ ಕೂಡಾ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  7. ಶ್ರೀ ನಾವಡರೇ,
    ನಿಮಗೆಲ್ಲಾ ಧನ್ಯವಾದಗಳು ,ಮುಂದಿನ ಕಂತನ್ನು ಇದೇ ಮಂಗಳವಾರ ನಿರೀಕ್ಷಿಸಿ.

    ReplyDelete