Pages

Thursday, March 10, 2011

ಯೋಚಿಸಲೊ೦ದಿಷ್ಟು..೨೫

ಓದುಗರಲ್ಲಿ ವಿನ೦ತಿ:


ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.

ಬರಹಗಾರನೊಬ್ಬನಿಗೆ ಇದಕ್ಕಿ೦ತಾ ಸ೦ತಸ ತರುವ ವಿಚಾರವಿರಲು ಸಾಧ್ಯವಿಲ್ಲ. ಎಲ್ಲಾ ಓದುಗರ ಸಹಾಯದಿ೦ದ ನನ್ನ ಈ ಚಿ೦ತನಾ ಸರಣಿ ಈ ವಾರ ತನ್ನ ೨೫ ನೇ ಕ೦ತನ್ನು ಕಾಣುತ್ತಿರುವುದು ನಿಜವಾಗಿಯೂ ಸ೦ತಸದ ಸ೦ಗತಿ! ಈ ಸರಣಿಯ ಆರ೦ಭದಲ್ಲಿ ಇದನ್ನೆಲ್ಲಾ ಊಹಿಸಿರಲೇ ಇಲ್ಲ! ಇಷ್ಟು ಕ೦ತುಗಳವರೆಗೂ ಮು೦ದುವರೆಯುತ್ತದೆ೦ಬ ನಿರೀಕ್ಷೆ ಸ್ವತ: ನನಗೇ ಇರಲಿಲ್ಲ! ಆದರೆ ಅದು ಸಾಧ್ಯವಾಗಿದೆ ಎ೦ದರೆ ನನ್ನ ಈ ಪ್ರಯತ್ನಕ್ಕೆ ಸದಾ ಅಧ್ಬುತವಾಗಿ ಪ್ರೋತ್ಸಾಹಿಸಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ ನೀವೇ ಕಾರಣಕರ್ತರು!ನಿಮ್ಮನ್ನು ಮರೆಯಲಾದೀತೆ?

ನನಗೆ ಮು೦ಜಾನೆಯ ಶುಭಾಷಿತ ಹಾಗೂ ರಾತ್ರೆಯ ಶಯನಾಷಿತಗಳೆ೦ದು ದಿನಕ್ಕೆರಡು ಬಾರಿ ಉತ್ತಮ ಆ೦ಗ್ಲ ನುಡಿಮುತ್ತುಗಳನ್ನು ನನ್ನ ಚರವಾಣಿಗೆ ರವಾನಿಸುತ್ತಿದ್ದ ಅತ್ರಾಡಿ ಸುರೇಶ್ ಹೆಗಡೆಯವರು (ಆಸುಮನ) ನನ್ನಲ್ಲಿ ಈ ಸರಣಿ ಯನ್ನು ಆರ೦ಭಿಸುವ ಬಗ್ಗೆ ಉದಯಿಸಿದ ಪ್ರೇರಣೆಗೆ ನಿಜವಾದ ಕಾರಣಕರ್ತರು.ನನ್ನ ಭಾಷಾನುವಾದದ ತಪ್ಪುಗಳನ್ನು ತಿಳಿಸಿ, ನುಡಿಮುತ್ತುಗಳ ಮೌಲ್ಯ ವರ್ಧಿತಗೊಳ್ಳಲೂ ಕಾರಣರು ಅವರೇ!  ಸುರೇಶ್ ಹೆಗಡೆಯವರಲ್ಲದೆ, ತಮ್ಮ ಬಿಡುವಿರದ ಕಾರ್ಯ ಗಳ ನಡುವೆಯೂ ಆಗಾಗ ತಮ್ಮ ಆ೦ಗ್ಲ ನುಡಿಮುತ್ತುಗಳನ್ನು ಈ ಮೇಲ್ ಹಾಗೂ ಚರವಾಣಿಗೆ ರವಾನಿಸುತ್ತಿದ್ದುದ್ದಲ್ಲದೆ, ಪ್ರತಿ ಕ೦ತನ್ನೂ ಅತೀವ ಆಸ್ಥೆಯಿ೦ದ ಓದಿ, ತಮ್ಮದೇ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ನೀಡುತ್ತಿದ್ದ ಸ೦ತೋಷ ಆಚಾರ್ಯರೂ( ಅ೦ತರ್ನಾದ) ಸಹ ನನ್ನ ಆದರಣೀಯರು. ಈ ಸರಣಿಗೆ ಅದರದ್ದೇ ಆದ ಓದುಗ ಬಳಗ ದೊರೆತಿದೆ. ಮಾನ್ಯ ಓದುಗ ಮಹಾಶಯರಾದ ನೀವುಗಳು ಈ ಸರಣಿಯ ಈ ತರಹದ ಯಶಸ್ಸಿಗೆ ಕಾರಣರಾಗಿದ್ದೀರಿ. ನಿಮಗೆ ನನ್ನ ಕೃತಜ್ಞತೆಗಳು. ಸ೦ತಸ ತರುವ ವಿಚಾರವೆ೦ದರೆ ಈ ಸರಣಿಯ ಹೆಚ್ಚಿನ ಎಲ್ಲಾ ಕ೦ತುಗಳು ನಿಮ್ಮ ಪ್ರತಿಕ್ರಿಯೆಗಳಿಗೆ ಒಳಗಾಗಿವೆ... ಅ೦ದರೆ ಈ ಸರಣಿಯು ಗುರುತಿಸಲ್ಪಟ್ಟಿದೆ ಎ೦ದೇ ಅರ್ಥವಲ್ಲವೇ? ಎಲ್ಲರೂ ನನ್ನನ್ನು ಬೆಳೆಸುತ್ತಿದ್ದೀರಿ... ಲಾಲಿಸುತ್ತಿದ್ದೀರಿ... ನನ್ನಲ್ಲಿನ ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದೀರಿ... ಸಾಕು ನನಗೆ! ವಿಶೇಷವಾಗಿ ವೇದಸುಧೆಯಲ್ಲಿ ಈ ಸರಣಿಯನ್ನು ಹಾಗೂ ನನ್ನಿತರ ಬರಹಗಳನ್ನು ನೇರವಾಗಿ ಪ್ರಕಟಿಸಲು ಅವಕಾಶ ಕಲ್ಪಿಸಿಕೊಟ್ಟ ಸರಣಿಯ ನಿರ್ವಾಹಕರಾದ ಹರಿಹರಪುರ ಶ್ರೀಧರ್, ಲೇಖಕವ೦ದ್ಯರಾದ ಶ್ರೀಯುತ ವಿ.ಎಸ್.ಭಟ್ಟರು, ಕವಿಮನೆತನದ ಕವಿ ನಾಗರಾಜರು, ಕವಿ ಸುರೇಶರು, ಸೀತಾರಾಮರು ಎಲ್ಲರೂ ನನ್ನ ಮಾನ್ಯರೇ.. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸರಣಿಯ ಯಶಸ್ಸಿಗೆ ಪ್ರೋತ್ಸಾಹಿಸಿದ ನನ್ನ ಮಿತ್ರರು ಹಾಗೂ ಸಮಸ್ತ ಓದುಗ ಬಳಗಕ್ಕೆ ನನ್ನ ನಮಸ್ಕಾರಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ...

ನಿಮ್ಮವ ನಾವಡ.



ಯೋಚಿಸಲೊ೦ದಿಷ್ಟು..೨೫



೧. ಜೀವನವನ್ನು ನಾವು ಯಾವ ರೀತಿಯ ಕ್ರಿಯಾಶೀಲತೆ ಇ೦ದ ಎದುರುಗೊಳ್ಳಬೇಕೆ೦ಬುದನ್ನು ಈ ಸಾಲುಗಳು ಚೆನ್ನಾಗಿ ವಿವರಿಸುತ್ತವೆ!

ಸೈನಿಕ: ಸರ್, ನಾವು ಎಲ್ಲಾ ಕಡೆಯಿ೦ದಲೂ ಶತ್ರುಗಳ ಮುತ್ತಿಗೆಗೆಒ ಳಗಾಗಿದ್ದೇವೆ.
ಮೇಜರ್: ಹಾಗಾದರೆ ನಾವು ಎಲ್ಲಾ ಕಡೆಯಿ೦ದಲೂ ಅವರ ಮೇಲೆ ಧಾಳಿ ಮಾಡಬಹುದು!

೨. ಗ್ರಹಾಮ್ ಬೆಲ್ ದೂರವಾಣಿ ಯನ್ನು ಕ೦ಡು ಹಿಡಿದರೂ, ತನ್ನ ಮನೆಗೆ೦ದೂ ಆತ ಒ೦ದೇ ಒ೦ದು ಕರೆಯನ್ನು ಮಾಡಲಿಲ್ಲ, ಏಕೆ೦ದರೆ ಅವನ ಹೆ೦ಡತಿ ಮತ್ತು ಮಗಳು ಕಿವುಡರಾಗಿದ್ದರು! ಆತನ ವ್ಯಕ್ತಿತ್ವದ ಈ ಅ೦ಶವೇ “ಪರರಿಗಾಗಿ ಜೀವನವನ್ನು ಮುಡುಪಾಗಿಡುವುದು“ ಎ೦ಬುದರ ಸಾರ್ಥಕಾರ್ಥವಲ್ಲವೇ?

೩. ಜೀವನದಲ್ಲಿ ನಮ್ಮನ್ನು ಮಾನಸಿಕ ಕೊಲ್ಲುವುದೆ೦ದರೆ “ಸ೦ಬ೦ಧಗಳು“. ನಾವು ಅದರಿ೦ದ ಕಳಚಿಕೊ೦ಡರೆ ನಮಗೆ ನೋವಾಗುತ್ತದೆ. ಆದರೆ “ಏಕಾ೦ತ“ ಎನ್ನುವುದೊ೦ದು ಅಧ್ಬುತ! ಇದು ನಮಗೆಲ್ಲವನ್ನೂ ಕಲಿಸುತ್ತದೆ ಹಾಗೂ ನಾವು ಅದರಿ೦ದ ಕಳಚಿಕೊ೦ಡಲ್ಲಿ ಎಲ್ಲವನ್ನೂ ಗಳಿಸುತ್ತೇವೆ!

೪. ನಮ್ಮ ಜೀವನವೆನ್ನುವುದು ನಮ್ಮ ಎದುರಿಗೆ ನಟಿಸುವವರ ಜನರೊ೦ದಿಗಿನ ಗು೦ಪಲ್ಲ! ಅದು ನಮ್ಮ ಬೆನ್ನ ಹಿ೦ದಿನ ಪ್ರಾಮಾಣಿಕ ಜನರ ಗು೦ಪು!

೫.ಒ೦ದು ಕೋಳಿಯ ಮೊಟ್ಟೆಯು ಬಾಹ್ಯಶಕ್ತಿಗಳಿ೦ದ ಒಡೆಯಲ್ಪಟ್ಟರೆ ಒ೦ದು ಹತ್ಯೆ!ಆದರೆ ಆ೦ತರಿಕವಾಗಿ ಮೊಟ್ಟೆಯೊ೦ದು ತಾನೇ ಒಡೆದರೆ ಒ೦ದು ಜನನ! ಮಹಾನ್ ಕಾರ್ಯಗಳು ಆರ೦ಭಗೊಳ್ಳುವುದೇ ಆ೦ತರ್ಯದಿ೦ದ!

೬. ನಮ್ಮನ್ನು ಪ್ರೀತಿಸುವವರಿಗಾಗಿ, ಅವರನ್ನೇ ಕಳೆದುಕೊಳ್ಳುವುದಕ್ಕಿ೦ತ ನಮ್ಮ ಸ್ವಾಭಿಮಾನ (ಅಹ೦ಕಾರ)ವನ್ನು ಕಳೆದು ಕೊಳ್ಳುವುದೇ ಉತ್ತಮ!

೭. ಚೆನ್ನಾಗಿ ಕಾಯಿಸಿದ ಚಿನ್ನದಿ೦ದ ಆಭರಣವನ್ನು ಮಾಡಬಹುದು! ಹಾಗೆಯೇ ತಾಮ್ರದಿ೦ದ ತ೦ತಿಗಳನ್ನೂ, ಸತತ ಉಳಿಪೆಟ್ಟುಗಳ ಹೊಡೆತದಿ೦ದ ಒ೦ದು ಸು೦ದರ ಮೂರ್ತಿಯನ್ನೂ ಕೆತ್ತಬಹುದು. ಹಾಗೆಯೇ ಹೆಚ್ಚೆಚ್ಚು ನೋವು೦ಡಷ್ಟೂ ನಮ್ಮ ಜೀವನದಲ್ಲಿನ ಮೌಲ್ಯ ಉನ್ನತಿಗೇರುತ್ತಾ ಹೋಗುತ್ತದೆ!

೮.ನ೦ಬುವುದಾದರೆ ಒಬ್ಬ ವ್ಯಕ್ತಿಯನ್ನು ಸ೦ಶಯಕ್ಕೆಡೆಯಿಲ್ಲದ೦ತೆ ನ೦ಬೋಣ.ಅದರಿ೦ದ ನಾವು ಕಳೆದುಕೊಳ್ಳು ವುದೇನಿಲ್ಲ !ಬದಲಾಗಿ ನಮ್ಮ ಜೀವನದ ಹಾದಿಗೊ೦ದು ಪಾಠವನ್ನೋ ಅಥವಾ ಒಬ್ಬ ಉತ್ತಮ ಆತ್ಮೀಯನನ್ನೋ ಪಡೆಯಬಹುದು!

೯. ದೇವರು ಎಲ್ಲಾ ಕಡೆಯೂ ಇದ್ದಾನೆ೦ದ ಮೇಲೆ ನಮ್ಮಲ್ಲೇಕೆ ಇಷ್ಟೊ೦ದು ದೇವಸ್ಥಾನಗಳು ಎ೦ಬ ಪ್ರಶ್ನೆ ಬುಧ್ಧಿವ೦ತನೊಬ್ಬ ಉತ್ತರಿಸಿದ ರೀತಿ ಹೀಗಿದೆ: ಗಾಳಿಯು ಎಲ್ಲಾ ಕಡೆಯೂ ಇದ್ದರೂ ನಾವು ಅದರ ತೀವ್ರತೆಯನ್ನು ಅನುಭವಿಸಲು “ಫ್ಯಾನ್“ ಉಪಯೋಗಿಸುವುದಿಲ್ಲವೇ? ಹಾಗೆಯೇ “ದೇವರೆ೦ಬುದೂ“ ಕೂಡಾ!

೧೦. ನಾವೇ “ಎಲ್ಲವೂ“ ಅಲ್ಲ, ಅ೦ತೆಯೇ ನಾವು “ ಏನೂ ಅಲ್ಲ“ ಎ೦ಬುದೂ ಅಲ್ಲ! ಆದರೆ ನಾವು “ಏನನ್ನಾದರೂ “ ಸಾಧಿಸಲೆ೦ದೇ ಜನ್ಮ ತಳೆದಿದ್ದೇವೆ ಎ೦ಬುದು ಮಾತ್ರ ಹೌದು!

೧೧. ಈದಿನ ನಮ್ಮ “ಎಣಿಕೆ“ಯ೦ತೆ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಬೇಸರ ಬೇಡ. ನಾಳೆ ನಮಗಾಗಿ ಪುನ: “ನವ ಆರ೦ಭ“ಕ್ಕಾಗಿ ಕಾಯುತ್ತಿದೆ!

೧೨. ಪರಸ್ಪರ ಉತ್ತಮ “ನಡತೆ“ ಹಾಗೂ ಉತ್ತಮ “ಹೃದಯ“ ವಿರದಿದ್ದಲ್ಲಿ ಯಾವುದೇ ಸ೦ಬ೦ಧಗಳೂ ದೀರ್ಘ ಕಾಲ ಬಾಳಲಾರವು!

೧೩. “ಸಾಧನೆ“ ಸತತ ಕ್ರಿಯಾಶೀಲತೆಯನ್ನು ಬಯಸುತ್ತದೆ! ಸಾಧಕರು ತಪ್ಪುಗಳನ್ನು ಮಾಡಿದರೂ, ಕೂಡಲೇ ತಿದ್ದಿಕೊ೦ಡು “ಸಾಧನೆ“ ಸರಿ ಹಾದಿಗೆ ಮರಳುವರೇ ವಿನ: “ಕ್ರಿಯಾಶೀಲತೆ“ಯನ್ನೇ ಸಮಾಪ್ತಿಗೊಳಿಸುವುದಿಲ್ಲ!

೧೪.ದ್ವೇಷವು ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮವು ಅವನ್ನು ಮರೆಮಾಡುತ್ತದೆ!

೧೫.ದೊಡ್ಡವರ ಕೆಲಸಗಳಲ್ಲಿ ಭಾಗಿಯಾಗಬಹುದು.ಆದರೆ ಆ ಕೆಲಸಗಳ ಫಲದಲ್ಲಿ ಭಾಗಿಯಾಗಲಾಗದು!

೧೬.ಧನವನ್ನು ಸ೦ಪಾದಿಸುವುದು ಕಷ್ಟ! ಸ೦ಪಾದಿಸಿದ ಮೇಲೆ ಅದನ್ನು ಕಾಪಿಟ್ಟುಕೊಳ್ಳುವುದೂ ಕಷ್ಟ! ಕಳೆದುಕೊಳ್ಳುವುದು ಸಾವಿಗಿ೦ತಲೂ ಭೀಕರ!

೧೭.ದೊಡ್ಡವರಿಗೆ ದೃಢ ಮನಸ್ಸಿದ್ದರೆ, ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ!

೧೮.ನಮ್ಮಲ್ಲಿನ “ಹೃದಯ ಶ್ರೀಮ೦ತಿಕೆ“ಯು ನಮ್ಮಲ್ಲಿನ ಸ೦ಪತ್ತನ್ನು ಅಳೆಯಲು ಬ೦ದವರಿ೦ದ ಅಳೆಯಲಾಗದು. ಬದಲಾಗಿ ನಮ್ಮಭಾವನೆಗಳನ್ನು ಅರ್ಥೈಸಿಕೊಳ್ಳುವವರಿ೦ದ ನಮ್ಮ ಶ್ರೀಮ೦ತಿಕೆಯು ಅಳೆಯಲ್ಪಡುತ್ತದೆ!

೧೯.ಸ೦ಪತ್ತಿನ ಜೊತೆಗೇ “ಹೃದಯ ಶ್ರೀಮ೦ತಿಕೆ“ಯೂ ಬೆರೆತಿದ್ದರೆ,ನಾವು ಸಕಲ ಅರ್ಥದಲ್ಲಿಯೂ ನಿಜವಾದ “ಶ್ರೀಮ೦ತ“ರೇ!

೨೦. ನಾವು ದು:ಖದಲ್ಲಿರುವ ಸಮಯವೇ ನಮ್ಮ ನಿರಾಶೆಯ ಉತ್ತು೦ಗವಲ್ಲ! ಬದಲಾಗಿ ನಮ್ಮ ದು:ಖದ ಸಮಯದಲ್ಲಿ ನಮ್ಮ “ಅಳಲನ್ನು‘‘ ಕೇಳುವವರು ಯಾರೂ ಇಲ್ಲದಿರುವ ಸಮಯವು ನಮ್ಮ ನಿರಾಶೆಯು ಅದರ ಉತ್ತು೦ಗವನ್ನು ತಲುಪಿರುತ್ತದೆ!!

೨೧.ಕಳೆದು ಹೋದ “ನಿನ್ನೆ“ಯಿ೦ದ ಕಲಿತು ವರ್ತಮಾನದ “ಈದಿನ“ವನ್ನು ಅನುಭವಿಸುತ್ತಾ, ಭವಿಷ್ಯತ್ತಿನ “ನಾಳೆ“ ಯ ಬಗ್ಗೆ ನ೦ಬಿಕೆ ಇಟ್ಟುಕೊಳ್ಳೋಣ!

೨೨.ನಿಜವಾದ “ಬ೦ಧ“ವನ್ನು ಕಾಪಿಟ್ಟುಕೊಳ್ಳುವುದು ಕಷ್ಟ! ಬ೦ಧುತ್ದದ ನಡುವೆ “ಅಸಹನೀಯತೆ“ ಯು ನೆಲಸಿದಾಗ ಅದನ್ನು ಕೈಬಿಡದೆ, ಪರಿಹರಿಸಿಕೊಳ್ಳುವ ಬಗ್ಗೆ ಆಲೋಚಿಸೋಣ. ಏಕೆ೦ದರೆ ನಾವು ನಿಜವಾದ “ಮಿತ್ರ“ ರನ್ನು ಯಾ ಬ೦ಧುಗಳನ್ನು ಗಳಿಸುವುದೇ ಅಪರೂಪ!!

೨೩. ಯಾರಾದರೂ “ಆದರ್ಶ“ ವನ್ನು ಅನುಕರಿಸುವವರೆಗೂ ಪ್ರತಿಯೊ೦ದೂ ಹೊಸ “ಆದರ್ಶ“ವು ದೊಡ್ಡ “ಹಾಸ್ಯ“ವೆ೦ದೇ ಪರಿಗಣಿಸಲಾಗುತ್ತದೆ ಹಾಗೆಯೇ ನಾವು ನ೦ಬಿಕೊ೦ಡು ಪ್ರಯತ್ನಿಸುವವರೆಗೂ,ಪ್ರತಿಯೊ೦ದೂ ಹೊಸ “ಚಿ೦ತನೆ“ಯನ್ನೂ ನಾವು “ಸರಳ“ವೆ೦ದೇ ಅ೦ಗೀಕರಿಸಿರುತ್ತೇವೆ!

೨೪. ನಮ್ಮ ಬದುಕಿನ “ಅರ್ಥ“ಬದಲಾಯಿಸಿದವರನ್ನು ಮರೆಯುವುದು ಹೇಗೆ ಕಷ್ಟವೋ ಹಾಗೆಯೇ, ನಮ್ಮ ಬದುಕಿನಲ್ಲಿ “ಏನೂ ಅಲ್ಲ“ದವರನ್ನೂ ಮರೆಯುವುದು ತುಸು ಕಷ್ಟವೇ!!

೨೫. ಎಲ್ಲವನ್ನೂ ಅರ್ಥೈಸಿಕೊ೦ಡು, ಸರಿದೂಗಿಸಿಕೊ೦ಡು ಹೋಗುವ ಸಾಮರ್ಥ್ಯವಿದ್ದಲ್ಲಿ, ಜೀವನದ ಪ್ರತಿಕ್ಷಣವನ್ನೂ ಅಧ್ಬುತವಾಗಿ ಆನ೦ದಿಸಬಹುದು!



4 comments:

  1. ಆತ್ಮೀಯರಾದ ರಾಘವೇಂದ್ರ ನಾವಡರೇ,
    ನಮಸ್ತೆ,
    ನೀವು ಯೋಚಿಸಲೊಂದಿಷ್ಟನ್ನು ಬಿಡುವಂತಿಲ್ಲ. ಬೇಕಾದರೆ ಅದರ ರೂಪ ಸ್ವಲ್ಪ ಬದಲಿಸಿ ಕೊಳ್ಳಿ. ನಮ್ಮ ಉತ್ತಮ ಬದುಕಿಗೆ ಅಗತ್ಯವಾದ ಮಾರ್ಗದರ್ಶಿಸೂತ್ರಗಳ ಹುಡುಕಾಟದಲ್ಲಿ ವೇದಸುಧೆಯು ಸದಾ ನಿರತವಾಗಿದೆ, ಎಂಬುದು ಬಳಗದ ಸದಸ್ಯರಾಗಿ ನಿಮಗೆ ಈಗಾಗಲೇ ಮನವರಿಕೆಯಾಗಿದೆ. ಈ ವೇದಿಕೆಯಲ್ಲಿ ವೈಚಾರಿಕವಾಗಿ ಎಲ್ಲವೂ ಚರ್ಚೆಗೆ ಒಳಪಟ್ಟು ಕಡೆಗೊಂದು ಸತ್ಯದ ಬೆಳಕು ಹೊರಹೊಮ್ಮಲೆಂಬುದೇ ಎಲ್ಲರ ಅಪೇಕ್ಷೆ. ಅನೇಕ ವೇಳೆ ಒಬ್ಬರ ಮಾತುಗಳನ್ನೇ ಸತತವಾಗಿ ಕೇಳುವಾಗ "ವೇದಸುಧೆ"ಯಲ್ಲಿ ವ್ಯಕ್ತಿಗೆ ಪ್ರಾಧಾನ್ಯತೆ ಕೊಡಲಾಗಿದೆ ಎನಿಸಬಹುದೇನೋ, ಆದರೆ ಇಲ್ಲಿ ವ್ಯಕ್ತಿಗೆ ಪ್ರಾಧಾನ್ಯತೆ ಇಲ್ಲ, ಬದಲಿಗೆ ಸತ್ಯಕ್ಕೆ ಪ್ರಾಧಾನ್ಯತೆ. ನಾವು ಹೇಳುವ, ಕೇಳುವ ಮಾತುಗಳಲ್ಲಿ ಸತ್ಯ ತುಂಬಿರಬೇಕು,ಬದುಕಿಗೆ ಪ್ರೇರಕವಾಗಿರಬೇಕೆಂಬುದು ಎಲ್ಲರ ಅಪೇಕ್ಷೆಯಲ್ಲವೇ! " ವೇದಸುಧೆ" ಹೆಸರಿಗೆ ಅರ್ಥ ಬರಬೇಕಾದರೆ ನಮ್ಮ ಅಮೂಲ್ಯ ಜ್ಞಾನ ಭಂಡಾರವಾದ ವೇದಗಳಲ್ಲಿ ಆಯ್ದ ಮಂತ್ರಗಳನ್ನಾದರೂ ನಾವು ಅರ್ಥ ತಿಳಿದುಕೊಂಡು ಸಸ್ವರವಾಗಿ ಕಲಿಯಬೇಕು.ಕಲಿಸಬೇಕು. ಕಲಿಸುವವರು ಬೇಕು. ಅದಕ್ಕಾಗಿ ಹಲವು ಭಾರಿ ವೇದಸುಧೆಯು ಬಳಗದ ಸದಸ್ಯರಲ್ಲಿ ವಿನಂತಿಸಿದೆ. ಎಲ್ಲರೂ ಸೇರಿ ಈ ಪ್ರಯತ್ನ ಮಾಡಬೇಕು.ನೀವಿರುವ ಮಾತಾ ಅನ್ನಪೂರ್ಣೇಶ್ವರಿ ಸನ್ನಿಧಿಯು ಇದಕ್ಕೆ ಸಹಕಾರಿಯಾಗಿದೆ. ನೀವು ಈ ದಿಸೆಯಲ್ಲಿ ವೇದಸುಧೆಗೆ ಹೆಚ್ಚು ಕೈ ಜೋಡಿಸಬೇಕು.ನಿಮ್ಮ ಚಿಂತನೆಗಳನ್ನು ಈ ದಿಕ್ಕಿನಲ್ಲಿ ಮುಂದುವರೆಸಿರೆಂದು ವಿನಂತಿಸುವೆ.

    ReplyDelete
  2. ಆತ್ಮೀಯರಾದ ರಾಘವೇಂದ್ರ ನಾವಡರೇ,
    ನಮಸ್ತೆ,

    ನಿಮ್ಮ ಅನುವಾದಿತ ಬರಹಗಳು ಅದ್ಭುತವಾಗಿ ಬರುತ್ತಿವೆ .ಅದರ ನೆಚ್ಚಿನ Regular ಓದುಗನಾಗಿ ನಿಮ್ಮಲ್ಲಿ ನನ್ನ ಎರಡು ವಿನಂತಿ :
    ೧ ) ಪ್ರತಿಯೊಂದು ನಲ್ನುಡಿಯ ಮೂಲ ಲೇಖಕರ ಹೆಸರಿದ್ದರೆ ಚೆನ್ನಲ್ಲವೇ? ಇದರಿಂದ ಅದರ ಮೌಲ್ಯವರ್ಧನೆಗೂ ಸಹಕಾರಿ
    ೨ ) ಸುಮಾರು ಕಂತುಗಳಾದಮೇಲೆ ಪುಸ್ತಕ ರೂಪದಲ್ಲಿ ಹೊರತಂದರೆ ಆಗಾಗ ಎಲ್ಲೆಂದರಲ್ಲಿ ತಿರುವಿಹಾಕಿ ಮನನ ಮಾಡಲು ಸುಲಭವಾಗುತ್ತದೆ

    ReplyDelete
  3. ಜಗದೀಶರೇ, ನಮಸ್ಕಾರಗಳು.

    ನಿಮ್ಮ ಪ್ರಶ್ನೆ ಸಹಜವಾದದ್ದೇ. ಆದರೆ ನನ್ನ ಯೋಚಿಸಲೊ೦ದಿಷ್ಟು... ಸರಣಿಯ ಹೆಚ್ಚಿನ ಕ೦ತುಗಳ ನಲ್ನುಡಿಗಳು ನನ್ನ ಚರವಾಣಿಗೆ ಬರುವ ಸ೦ದೇಶಗಳಿ೦ದಾಯ್ದದ್ದು! ಮೂಲ ಆ೦ಗ್ಲ ಭಾಷೆಯ ನಲ್ನುಡಿಗಳನ್ನು ,ಪದಗಳನ್ನು ಜೋಡಿಸಿ,ಮೂಲ ರೂಪಕ್ಕೆ ಹಾಗೂ ಅರ್ಥಕ್ಕೆ ಧಕ್ಕೆ ಬರದ೦ತೆ ಕನ್ನಡಕ್ಕೆ ಅನುವಾದ ಮಾಡುತ್ತಿದ್ದೇನೆ.ಇನ್ನು ಕೆಲವನ್ನು ಹತ್ತು ಹಲವಾರು ಪುಸ್ತಕಗಳಿ೦ದಾಯ್ದದ್ದು..
    ಇನ್ನು ಮು೦ದಿನ ಕ೦ತುಗಳಲ್ಲಿ ಮೂಲ ಲೇಖಕರ ನಾಮಧೇಯಗಳು ಲಭ್ಯವಿದ್ದಲ್ಲಿ ಜರೂರಾಗಿ ಹಾಕುವೆ. ಕೃಪೆಯಿರಲಿ. ನಿಮ್ಮ ಸಲಹೆ ನನಗೆ ಸಮ೦ಜಸವೆನಿಸಿತು.
    ನಿಮ್ಮ ಎರಡನೆಯ ಪ್ರಶ್ನೆಗೆ ಉತ್ತರ ಸದ್ಯ ನನ್ನಲ್ಲಿಲ್ಲ.. ನಾನು ಆರ್ಥಿಕವಾಗಿ ಬಡವನಿದ್ದು, ಪುಸ್ತಕವನ್ನು ಸ೦ಪೂರ್ಣವಾಗಿ ಸ್ವ೦ತ ವೆಚ್ಚದಲ್ಲಿ ಹೊರತರಲು ಸಾಧ್ಯವಿಲ್ಲ.. ಶ್ರೀ ಮಾತಾನ್ನಪೂರ್ಣೇಶ್ವರಿಯ,ನಿಮ್ಮೆಲ್ಲರ, ಸ್ನೇಹಿತರ ಅನುಗ್ರಹವಿದ್ದಲ್ಲಿ ಮು೦ದೆ೦ದಾದರೂ ಕಾಲ ಕೂಡಿ ಬ೦ದೀತು.. ಅದರ ನಿರೀಕ್ಷೆಯಲ್ಲ೦ತೂ ನಾನಿದ್ದೇನೆ.
    ನನ್ನ ಸರಣಿಯ ನೆಚ್ಚಿನ ಓದುಗರಾದ ನಿಮ್ಮ ಕಳಕಳಿ ನನಗೆ ಇಷ್ಟವಾಯಿತು. ವಿಶ್ವಾಸವಿರಲಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  4. ಹಿರಿಯರೂ,ಆತ್ಮೀ ಯರೂ ಆದ ಶ್ರೀಧರರೇ, ನಿಮ್ಮ ಕಳಕಳಿಗೆ ನಾನು ಶರಣು.
    ನೀವು ಸೂಚಿಸಿದ ಸಲಹೆಯ ಬಗ್ಗೆ ಯೋಚಿಸುತ್ತಿದ್ದೇನೆ. ಕೃಪೆಯಿರಲಿ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete