Pages

Saturday, April 16, 2011

“ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....”

 “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ.....” ಎನ್ನುವ ಶ್ರಿ ಕನಕದಾಸರ ಕೃತಿ ಮಾಯೆಯ ಮಾಯಾಜಾಲವನ್ನು ವಿಧವಿಧವಾದ ಉಪಮೆಗಳೊಂದಿಗೆ ಬಿಂಬಿಸುತ್ತದೆ. ಮಾಯೆಯ ಮೋಡಿಗೆ ಒಳಗಾಗದವರಿಲ್ಲ; ಮಾಯೆಯ ಜಾಲಕ್ಕೆ ಸಿಲುಕದವರಿಲ್ಲ ಮತ್ತು ಮಾಯೆಯ ಬಲೆಗೆ ಬಿದ್ದು ಸಂಕಟಕ್ಕೀಡಾಗದವರಿಲ್ಲ. ವಿಪರ್ಯಾಸವೆಂದರೆ, ಮಾಯೆಯೆಂದು ತಿಳಿದೂ ಅದರ ಪಾಶದಲ್ಲಿ ಸಿಲುಕಿಕೊಳ್ಳುವ ಮಾಯೆಯ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಒಂದು ರೀತಿ ಸತ್ಯವನ್ನು, ವಾಸ್ತವವನ್ನು ಮತ್ತು ನಿಜಸ್ಥಿತಿಯನ್ನು ಮರೆ ಮಾಚಿ, ಅಸತ್ಯದ ಕಡೆಗೆ, ಅವಾಸ್ತವದ ಕಡೆಗೆ ಮತ್ತು ಮಿಥ್ಯದ ಕಡೆಗೆ ನಮ್ಮನ್ನು ಹೊರಳಿಸುವ ಈ ಮಾಯೆಯ ಪ್ರಭಾವ ಅಗಾಧವಾದದ್ದು. ಮಾಯೆಗೆ ವ್ಯಾಖ್ಯಾನಗಳು ಹಲವಾರು. ಕೆಲವರಿಗೆ ಅದು ಬಂಧನವೆಂದಾದರೆ ಮತ್ತೆ ಕೆಲವರಿಗೆ ಅದು ದುರ್ಮಾರ್ಗದೆಡೆಗೆ ಒಯ್ಯುವ ಸಾಧನವೆನಿಸಬಹುದು. ಏನೇ ಆಗಲಿ, ಮಾಯೆಯ ಆಟಕ್ಕೆ ತಲೆ ಬಾಗಿದವನಿಗೆ ಅಪಾಯ, ನಷ್ಟ, ಮಾನಹಾನಿ, ದೇಹಹಾನಿ ಮುಂತಾದ ತೊಂದರೆಗಳು ಕಟ್ಟಿಟ್ಟ ಬುತ್ತಿ. ಬಂಗಾರದ ಜಿಂಕೆಯ ವೇಷದ ರಾವಣನ ಮಾಯಕ್ಕೆ ಬಲಿ ಬಿದ್ದು ನಂತರ ಕೋಟಲೆಗಳ ಸರಮಾಲೆಯನ್ನೇ ಎದುರಿಸಿದ ಸೀತಾಮಾತೆ, ಮೇನಕೆಯ ವೈಯಾರಕ್ಕೆ ಮರುಳಾಗಿ, ಬಾಗಿ, ತಪೋಭಂಗವನ್ನನುಭವಿಸಿದ ವಿಶ್ವಾಮಿತ್ರ ಋಷಿಯಿಂದ ಹಿಡಿದು ಹಗ್ಗವನ್ನು ಹಾವೆಂದು ಭ್ರಮಿಸಿ ಗೋಳಿಡುವ ಪಾಮರರ ಪರಿಪಾಟಲು ಈ ಮಾಯೆ ಯಾರನ್ನೂ ಕೈಬಿಟ್ಟಿಲ್ಲ (ಶನಿ ಗ್ರಹದ ಹಾಗೆ!) ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಜೀವನದಲ್ಲಿ ಇಂತಹ ಮೋಹ-ಪಾಶಗಳೆಂಬ ಬಲೆಗಳು ಎದುರಾದಾಗ ಜಾಗರೂಕರಾಗಿ ಅವುಗಳ ನಿಜ ಸ್ವರೂಪವನ್ನರಿತು ಮುಂದುವರೆಯುವುದು ಅತ್ಯಂತ ಅವಶ್ಯಕ.

ಮಾಯೆಯ ಪರಿಕಲ್ಪನೆ ಕೂಡಾ ಒಬ್ಬೊಬ್ಬರಿಗೆ ಒಂದೊಂದು. ಮಾಯೆ ಕುರಿತು ಸರ್ವಜ್ಞನ ಈ ವಚನ ನೋಡಿ: “ಮಾಯೆ ಗೆದ್ದಿಹ ಸೊಲ್ಲು ಬಾಯಿ ಮಾತಲ್ಲವೇ? ಮಾಯೆಯಿಂ ಕಾಯ ಆಗಿರಲು, ಇವರುಗಳಾ! ಮಾಯೆ ಗೆಲಲುಂಟೆ ಸರ್ವಜ್ಞ.” ಅರ್ಥಾತ್ ಮಾಯೆಯನ್ನು ಅಂದರೆ ಹೆಣ್ಣನ್ನು ಗೆದ್ದೆನೆಂದು ಹೇಳುವವರು ಬರೀ ಬಾಯಿ ಮಾತಿನ ಶೂರರು. ನಮ್ಮ ಶರೀರ ಸೃಷ್ಠಿ ಆಗಿರುವುದೇ ಮಾಯೆ. ಅಂದರೆ ಹೆಣ್ಣಿನಿಂದ. ಆದುದರಿಂದ ಮಾಯೆ ಗೆಲಲು ಸಾಧ್ಯವೇ? [ಹೆಣ್ಣಿಗೂ ಗಂಡು ಮಾಯೆಯೇ ಆಗಿರಬಾರದೇಕೆ (?)] ಹಾಗೆ ನೋಡಿದರೆ ಪ್ರಪಂಚದಲ್ಲಿರುವ ಎಲ್ಲಾ ಲೌಕಿಕ (ಪ್ರಾಪಂಚಿಕ) ವಸ್ತುಗಳೂ ಮಾಯೆಯೇ. ಅದು ಚಿನ್ನವಿರಬಹುದು, ಭೂಮಿಯಿರಬಹುದು, ಹೆಣ್ಣಿರಬಹುದು ಅಥವಾ ಇನ್ಯಾವುದೇ ವಸ್ತುವಿರಬಹುದು. ಇಂತಹ ಲೌಕಿಕ ವಸ್ತುಗಳ ಆಕರ್ಷಣೆ ಎಷ್ಟೆಂದರೆ ಅವುಗಳ ಪ್ರಾಪ್ತಿಗಾಗಿ ಮಾನವ ಏನನ್ನು ಮಾಡಲೂ ಸಿದ್ಧನಾಗಿಬಿಡುತ್ತಾನೆ. ಅದಕ್ಕಾಗಿ ಎಲ್ಲಾ ನೈತಿಕ ಮೌಲ್ಯಗಳಿಗೂ ತಿಲಾಂಜಲಿ ನೀಡಲೂ ಹಿಂಜರಿಯುವುದಿಲ್ಲ. ಅಷ್ಟೇ ಏಕೆ, ಅವುಗಳ ಪ್ರಾಪ್ತಿಗಾಗಿ, ತನಗರಿಯದೆಯೇ ತನ್ನ ಸರ್ವಸ್ವವಾದ ಪ್ರಾಣತ್ಯಾಗಕ್ಕೂ ಸಿದ್ಧನಾಗುತ್ತಾನೆ. ಈ ಮಾಯೆಯೆಂಬ ಆಕರ್ಷಣೆ ಅಷ್ಟು ಪ್ರಬಲವಾದದ್ದು. ಮಾಯೆಯ ಮೂಲಗಳಾದ “ಹೆಣ್ಣು-ಹೊನ್ನು-ಮಣ್ಣಿ”ಗಾಗಿ ತಮ್ಮ ರಾಜ್ಯ-ಪ್ರಾಣಗಳನ್ನೇ ಕಳೆದುಕೊಂಡ ಅಸಂಖ್ಯಾತ ನಿದರ್ಶನಗಳು ಪ್ರಪಂಚದ ಇತಿಹಾಸದ ಗರ್ಭದಲ್ಲಿ ಅಡಗಿ ಕುಳಿತಿವೆ. ಇಷ್ಟಾಗಿಯೂ ನಾವು ಪುನ: ಪುನ: “ಇರುಳು ಕಂಡ ಭಾವಿಗೆ ಹಗಲು ಬಿದ್ಧಂತೆ” ನಡೆಯುತ್ತಿರುವುದು ಈ ಮಾಯೆಯೆಂಬ ಭ್ರಮಾಲೋಕದ ಮಹಿಮೆಯಿಂದಲೇ!

ಸೂಕ್ಷ್ಮವಾಗಿ ಮನನ ಮಾಡಿದಾಗ ಸ್ಪಷ್ಟವಾಗುವ ಅಂಶವೆಂದರೆ, ಈ ಪ್ರಾಪಂಚಿಕ ವಸ್ತುಗಳೇ ನಿಜವಾದ ಮಾಯೆಯ ಸ್ವರೂಪಗಳು. ಮೇಲ್ನೋಟಕ್ಕೆ ಇವು ಆರಾಮದಾಯಕ ಮತ್ತು ಸುಖಕರ ಸಾಧನಗಳೆಂದು ತೋರಿದರೂ, ಆಂತರಿಕವಾಗಿ ಅವು ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೆ ನಿಜವಾದ ಕಾರಣಕರ್ತರುಗಳು.  ಹಾಗೆಂದು ಲೌಕಿಕ ವಸ್ತುಗಳನ್ನು ಸಂಪೂರ್ಣ ವರ್ಜಿಸಬೇಕೆಂದಲ್ಲ. ಪ್ರಪಂಚಕ್ಕೆ ಬಂದ ಮೇಲೆ, ಅದರಲ್ಲೂ ದಿವ್ಯವಾದ ಈ ಮಾನವ ಜನ್ಮ ಪಡೆದ ಮೇಲೆ, ಇರುವ ತನಕ, ಪ್ರಾಪಂಚಿಕ ಮತ್ತು ಅಂತಿಮವಾಗಿ  ಅಲೌಕಿಕ ಸಾಧನೆಗೆ ಈ ಪ್ರಾಪಂಚಿಕ ವಸ್ತುಗಳೇ ಮೆಟ್ಟಿಲುಗಳಷ್ಟೇ ಆಗಬೇಕು. ಆದರೆ ಸುಖ, ಶಾಂತಿ ಮತ್ತು ನೆಮ್ಮದಿಗಳನ್ನು ಅವುಗಳಲ್ಲಿ ಅರಸುವುದು ಕತ್ತಲಲ್ಲಿ ಸೂಜಿಯನ್ನು ಹುಡುಕಿದಂತೆಯೇ. ಬರೀ ಆಸೆ, ಬರೀ ಪರಿಶ್ರಮವಷ್ಟೇ ಆದೀತು. ಆದುದರಿಂದ, ಅವುಗಳ ಸಂದರ್ಭಾನುಸಾರ ಮತ್ತು ಅವಶ್ಯಾನುಸಾರ ಸಂಗ್ರಹಣೆ, ಯುಕ್ತಾಯುಕ್ತಾನುಸಾರ ಬಳಕೆ ಮತ್ತು ಮುಂದಿನ ಪೀಳಿಗೆಗಾಗಿ ಅವುಗಳ ಸಂರಕ್ಷಣೆ ? ಅಂತಹ ವಸ್ತುಗಳ ಮಾಯೆಯ ಪಾಶದಿಂದ ಬಿಡಿಸಿಕೊಳ್ಳಬಹುದಾದಂತಹ ಕೆಲವು ಸರಳೋಪಾಯಗಳು. “ಕಂಕುಳಲ್ಲಿರುವ ಮಗುವನ್ನು ಊರೆಲ್ಲಾ ಹುಡುಕಿದಂತೆ” ನಿಜವಾದ ಸುಖ-ಶಾಂತಿ ನಮ್ಮ ಆಂತರ್ಯದಲ್ಲಿಯೇ ಇದೆ ಎಂಬ ಜ್ಞಾನ ಮತ್ತು ತಿಳುವಳಿಕೆ ಹೆಚ್ಚಿದಷ್ಟೂ ಈ ಪ್ರಾಪಂಚಿಕ ವಸ್ತುಗಳ ಮೇಲಿನ ಮೋಹ ಕಡಿಮೆಯಾಗುತ್ತಾ ಹೋಗುತ್ತದೆ.  ಯಾವುದೇ ಪ್ರಾಪಂಚಿಕ ವಸ್ತುಗಳು ಹೆಚ್ಚಾದರೂ - ಹಣ, ಭೂಮಿ, ಆಭರಣಗಳು, ಇತ್ಯಾದಿ - ಅವುಗಳಿಂದ ಸುಖ, ಶಾಂತಿ, ನೆಮ್ಮದಿಗಿಂತ ಚಿಂತೆ, ಭಯ, ಅವನತಿ ಮತ್ತು ಅಪಾಯಗಳೇ ಹೆಚ್ಚು. ಅದೇ ಅಶಾಂತಿಯ ಮತ್ತು ದುರ್ಮಾರ್ಗದ ಬಾಳುವೆಗೆ ಮುನ್ನುಡಿ. ಇಂದಿನ ಅನೇಕ ರಾಜಕಾರಣಿಗಳ ಮತ್ತು ಧನದಾಹಿಗಳ ಬದುಕು ಕೂಡ ಹೀಗೇ ಆಗಿದೆ. ನೋಡಲಿಕ್ಕಷ್ಟೇ ಅವರು ಮುಖಂಡರು, (ನ)ಗಣ್ಯರು; ಆದರೆ ಆಂತರ್ಯದಲ್ಲಿ ಅವರೆಲ್ಲರೂ ಅಶಾಂತಿಯಿಂದ, ಅಭದ್ರತೆಯಿಂದ ಮತ್ತು ಪಾಪಪ್ರಜ್ಞೆ(ಅದಿದ್ದವರಲ್ಲಿ ಮಾತ್ರಾ!) ಯಿಂದ ಮತ್ತು ಇವುಗಳ ಪ್ರಭಾವದಿಂದ ವಾಸಿಯಾಗದಂತಹ ಅನೇಕ ಖಾಯಿಲೆಗಳಿಂದ ಬಳಲಿ ಬೆಂಡಾದವರೇ/ಬೆಂಡಾಗುತ್ತಿರುವವರೇ.  ಆದರೆ ಇಂತಹ ಪ್ರಾಪಂಚಿಕ ವಸ್ತು/ವ್ಯಕ್ತಿಗಳ ಮೂಲಕ ನಮಗುಂಟಾಗುವ ಮಾಯಾ ಪ್ರಪಂಚದ ಅನುಭವಗಳೇ ಮುಂದೆ ನಮ್ಮನ್ನು ಮಾಯಾಪಾಶದಿಂದ ಬಿಡಿಸಿಕೊಳ್ಳುವ ಸಾಧನಗಳಾದಾವು; ಆಗಬೇಕು. ಅಂಥವುಗಳ ಮಿಥ್ಯ ಅವಲಂಬನೆಯಿಂದ ಉಂಟಾದ ಕಷ್ಟ-ಕೋಟಲೆಗಳು, ನಷ್ಟಗಳು, ಅವಮಾನಗಳು ಇತ್ಯಾದಿ ನಮ್ಮ ಕಣ್ತೆರೆಸಬೇಕು. ಒಮ್ಮೆ ಸಂಪತ್ತನ್ನೇ ಸರ್ವಸ್ವವೆಂದು ತಿಳಿದಿದ್ದ ಶ್ರೀ ಪುರಂದರದಾಸರು ಅದಕ್ಕೆಂದೇ ನಂತರ ಈ ರೀತಿ ಹಾಡಿದ್ದು: “ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು | ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ......”

ಆದುದರಿಂದ ಲೌಕಿಕ ವಸ್ತುಗಳನ್ನು ನಾವು ಪರಿಭಾವಿಸುವ ರೀತಿಯಲ್ಲಿ ಜಾಗ್ರತೆ ವಹಿಸಬೇಕು. ಒಬ್ಬ ಸಾಮಾನ್ಯ ಮನುಷ್ಯ ಓರ್ವ ಸುಂದರ ಯುವತಿಯಲ್ಲಿ ಸೌಂದರ್ಯ ಮತ್ತು ಆಕರ್ಷಣೆ ಕಂಡರೆ, ಅದೇ ರಾಮಕೃಷ್ಣ ಪರಮಹಂಸರು ಅವಳಲ್ಲಿ ದೇವೀ ಅಥವಾ ಮಾತೃಸ್ವರೂಪವನ್ನು ಕಾಣುತ್ತಾರೆ. ಬೇಲೂರು ಶಿಲಾಬಾಲಿಕೆ - ಸಾಮಾನ್ಯ ಮನುಷ್ಯ ಮತ್ತು ಕಲೋಪಾಸಕನಲ್ಲಿ ಬೇರೆ ಬೇರೆ ಭಾವನೆಗಳನ್ನೇ ಉಂಟುಮಾಡುತ್ತದೆ. ಮಾಯೆಯೆ ಪರದೆಯನ್ನು ಸರಿಸಿದಾಗಲೇ ಸತ್ಯದರ್ಶನ ಸಾಧ್ಯವಾಗುತ್ತದೆ. ಕಡು ಲೋಭಿಯಲ್ಲಿರುವ ಧನ ಆತನ ಕಣ್ಣಿಗಷ್ಟೇ ಆಪ್ಯಾಯಮಾನವಾದರೆ, ಧನವಂತನಾದ ಗುಣವಂತ ಆ ಹಣವನ್ನು ಸತ್ಪಾತ್ರರಿಗೆ ಮತ್ತು ಸಮಾಜಮುಖೀ ಕಾರ್ಯಗಳಿಗೆ ವಿನಿಯೋಗಿಸುವುದರಲ್ಲಿಯೇ ಸಾರ್ಥಕ್ಯ ಕಂಡುಕೊಳ್ಳುತ್ತಾನೆ. ಕಲಿತ ವಿದ್ಯೆಯನ್ನು, ಕೌಶಲ್ಯಗಳನ್ನು ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವಲ್ಲಿ ಕೂಡ ಈ ಮಾಯೆಯ ಪ್ರಭಾವ ಅಗಾಧವಾದುದು. ಈ ಸಂಪನ್ಮೂಲಗಳು ಒಳಿತಿಗೂ-ಕೇಡಿಗೂ ಸಮನಾಗಿ ಬಳಸಿಕೊಳ್ಳುವಂತಹವು. ಸಮಾಜದ ಅತೀ ಗಣ್ಯರು, ವಿದ್ಯಾವಂತರು ಮತ್ತು ಪ್ರಾಜ್ಞರು ಎನಿಸಿಕೊಂಡ ಬಹು ಮಂದಿ ಇಂದು ನಡೆಸುತ್ತಿರುವ ಅನೇಕ ಅನಾಚಾರಗಳೇ ಇದಕ್ಕೆ ಸಾಕ್ಷಿ. ಹಣ, ಯಶಸ್ಸು, ಅಧಿಕಾರ, ಕೀರ್ತಿ ಮುಂತಾದವುಗಳ ಸಂಗ್ರಹಣೆಗಾಗಿ ವಿದ್ಯಾವಂತರೇ ಇಂದು ಎಲ್ಲ ವಾಮಮಾರ್ಗಗಳನ್ನು ಅನುಸರಿಸುತ್ತಿರುವುದು ಕೂಡ ಈ ಮಾಯೆಯೆಂಬ ಬಿಸಿಲು ಕುದುರೆಯನ್ನೇರಿಯೇ! ಕಾಮನಬಿಲ್ಲಿನಷ್ಟು ಆಕರ್ಷಕ ದೃಶ್ಯ ಮತ್ತೊಂದಿಲ್ಲ. ಆದರೆ ಅದು ಅಷ್ಟೇ ಕ್ಷಣಿಕ! ಆ ಸತ್ಯದ ಅರಿವು ನಮ್ಮ ಅಂತರಾಳಕ್ಕಿರಬೇಕಷ್ಟೇ!

ಹಾಗಾಗಿ ಹೊರನೋಟಕ್ಕೆ ಕಂಡು ಬರುವುದೆಲ್ಲಾ ವಾಸ್ತವವಾದುದಲ್ಲ ಎಂಬ ಅಂಶ ತಡವಾಗಿಯಾದರೂ ನಮಗೆ ಸ್ಪಷ್ಟವಾಗಬೇಕು. ನಿಜಾರ್ಥಗಳು-ಗೂಡಾರ್ಥಗಳು ಬೇರೆ ಬೇರೆಯೇ ಇರುತ್ತವೆ.  ನದಿ ಮೂಲ, ಋಷಿ ಮೂಲ, ಸ್ತ್ರೀ ಮೂಲ ಇತ್ಯಾದಿಗಳಂತೆ! ಯಾವ ವಸ್ತುಗಳ-ವ್ಯಕ್ತಿಗಳ ಸದ್ಬಳಕೆಯಿಂದ/ಸಂಪರ್ಕದಿಂದ ಶಾಶ್ವತ ಸುಖ ಅಥವಾ ಶಾಶ್ವತ ನೆಮ್ಮದಿಯೆಡೆಗೆ ನಡೆಯಲು ಸಾಧ್ಯ ಎಂಬ ಒಳ ಚಿಂತನೆ ಬಹಳ ಅವಶ್ಯ. ಒಂದು ಫಲವನ್ನು ಒಬ್ಬನೇ ಸವಿಯುವ ಸವಿಯೇ ಬೇರೆ. ಅದೇ ಫಲವನ್ನು ನಾಲ್ಕಾರು ಜನರಿಗೆ ಹಂಚಿ ಸಾಮೂಹಿಕವಾಗಿ ಸೇವಿಸುವ ಭಾವವೇ ಬೇರೆ. ಅದೇ ಅದರ ನಿಜವಾದ ಸವಿ. ಎಲ್ಲವೂ ನಮಗಿರಲಿ ಎಂಬ ಉತ್ಕಟಾಪೇಕ್ಷೆ ಎಲ್ಲರಲ್ಲಿ ಸಹಜವೇ. ಆದರೂ ಅಷ್ಟೂ ನಮಗೆ ನಿಜವಾಗಿ ಬೇಕೇ? ಎಂದು ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ನಿಜ ತಂತಾನೇ ಸ್ಪಷ್ಟವಾಗುತ್ತದೆ. ಕೂಡಿಟ್ಟ ಹಣ, ಕಟ್ಟಿದ ಮನೆ-ಮಠಗಳು, ಬೆಳೆಸಿದ ತೋಟ-ಜಮೀನುಗಳು, ಸಂಗ್ರಹಿಸಿದ ಆಭರಣಗಳು ಎಲ್ಲವೂ ಒಂದೇ ಪ್ರಕೃತಿಯ ವಿಕೋಪದಿಂದ - ಸುನಾಮಿ, ಭೂಕಂಪ, ಪ್ರವಾಹ, ಅಗ್ನಿ, ಬಿರುಗಾಳಿ, ದರೋಡೆ ಇತ್ಯಾದಿ - ಕ್ಷಣಮಾತ್ರದಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಬಹುದು.  ಹಾಗೆ ನಿರಂತರ ನಾಶವಾಗುತ್ತಿರುವುದನ್ನು ಕೂಡ ನಾವು ನಿತ್ಯ ಗಮನಿಸುತ್ತಲೇ ಇದ್ದೇವೆ. [ಜಪಾನಿನಲ್ಲಿ ಮೊನ್ನೆಯಷ್ಟೇ ಆದ ದುರಂತಕ್ಕಿಂತ ಬೇರೆ ಉದಾಹರಣೆ ಬೇಕೇ?] ಅಂದರೆ ಲೌಕಿಕವೆಲ್ಲವೂ ಅಶಾಶ್ವತ ? ಆ ಲೌಕಿಕ ಸಂಪತ್ತು-ಸವಲತ್ತುಗಳನ್ನು ನಾವೆಷ್ಟು ಪಾರಮಾರ್ಥಿಕವಾಗಿ ಪರಿಭಾವಿಸಿದ್ದೆವು ಮತ್ತು ಬಳಸಿದ್ದೆವು ಎಂಬುದಷ್ಟೇ ಮುಂದೆ ಶಾಶ್ವತವಾಗುತ್ತದೆ; ಮುಂದಿನ ಜನ್ಮಜನ್ಮಾಂತರಗಳಿಗೆ ಪ್ರಸ್ತುತವಾಗುತ್ತದೆ. ಮಳೆ ಬಂದಾಗ ಆ ಮಳೆ ನೀರು ಯಾವುದೇ ಭೇದ-ಭಾವವಿಲ್ಲದೇ ಎಲ್ಲೆಡೆ ಬೀಳುತ್ತದೆ. ಹರಿಯುವಾಗ ತನ್ನೊಡನೆ ಎಷ್ಟೊಂದು ಕೊಳೆ-ಕಸ-ಕಡ್ಡಿ ಇತ್ಯಾದಿಗಳನ್ನು ಒಯ್ಯುತ್ತದೆ. ಆದರೆ ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರಾ. ಹರಿಯುವ ಹಾದಿಯಲ್ಲಿಯೇ ಹೊತ್ತು ತಂದ ಇಂತಹ ಅನೇಕ ಕಲ್ಮಷಗಳನ್ನು ಅದು ಸ್ವಲ್ಪ ಸ್ವಲ್ಪವೇ ವಿಸರ್ಜಿಸುತ್ತಾ ಮುಂದೆ ನದಿಯಾಗಿ ತಿಳಿಯಾದ ಶುಭ್ರ ಜಲಧಾರೆ ಪ್ರವಹಿಸುತ್ತದೆ. ನಮ್ಮ ಜೀವನ  ಕೂಡಾ ಇಂತಹ ಮಳೆ ಹರಿವಿನ ಪ್ರವಾಹದಂತಿರಬೇಕು. ಪ್ರಪಂಚಕ್ಕೆ ಕಾಲಿಟ್ಟ ಮೇಲೆ, ವ್ಯಕ್ತಿಗಳ, ವಸ್ತುಗಳ ಮತ್ತು ನಮ್ಮ ಸಂಸ್ಕಾರದ ಮತ್ತು ಸಂಪರ್ಕಗಳ ಪ್ರಭಾವದಿಂದ ನಮ್ಮ ಜೀವನಯಾತ್ರೆಯಲ್ಲಿ ಅನೇಕ ತಪ್ಪುಗಳನ್ನೆಸಗುತ್ತೇವೆ; ಅನೇಕರಿಗೆ ತೊಂದರೆ ಕೊಟ್ಟಿರುತ್ತೇವೆ ಮತ್ತು ಮಾನಸಿಕವಾಗಿ ನಾವೂ ಸಾಕಷ್ಟು ಕ್ಷೇಷಕ್ಕೊಳಗಾಗಿರುತ್ತೇವೆ. ಅರಿತೋ ಅರಿಯದೆಯೋ ಅನೇಕರ ಸಂಪರ್ಕದಿಂದ ದುಷ್ಟ ಆಚಾರ-ವಿಚಾರಗಳ ದಾಸರಾಗಿಬಿಟ್ಟಿರುತ್ತೇವೆ. ಪ್ರಾಪಂಚಿಕ ವಸ್ತುಗಳ ದುರ್ಬಳಕೆಯಿಂದ ನಮ್ಮ ಮನಸ್ಸಿಗೆ, ನಮ್ಮ ದೇಹಕ್ಕೆ ಮತ್ತು ಇಡೀ ಸಮಾಜಕ್ಕೆ ಸಾಕಷ್ಟು ಹಾನಿ ಮಾಡಿರುತ್ತೇವೆ. ಇಂತಹ ಒಂದು ಕಲ್ಮಷಗಳ ಅರಿವು ಮತ್ತು ಮಳೆ ಹರಿವಿನಂತೆ ಅಲ್ಲಲ್ಲಿಯೇ ಅವುಗಳನ್ನು (ಅಂದರೆ ಮಾಯೆಯನ್ನು)  ಬಿಟ್ಟು ಬಿಡಬೇಕೆಂಬ ಅರಿವು ಮತ್ತು ಅಂತಿಮವಾಗಿ ಹರಿವ ತಿಳಿ ನೀರಿನಂತೆ ನಮ್ಮ ಮನಸ್ಸು ಮತ್ತು ದೇಹ ಎರಡೂ ಆಗಬೇಕೆಂಬ ಅರಿವು ? ಈ ಮಾಯೆಯೆಂಬ ಪಾಶದಿಂದ ಹೊರಬರಲು ಸಹಕಾರಿ.

ಆದರೆ ಯಾವುದು ಮಾಯೆ ಎಂಬುದನ್ನು ಗುರುತಿಸುವುದೇ ಕಷ್ಟಸಾಧ್ಯವಾದ ಕೆಲಸವೆಂದರೆ ತಪ್ಪಲ್ಲ. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಚಿಕ್ಕಂದಿನಿಂದ ಗುರು-ಹಿರಿಯರಲ್ಲಿ ಶ್ರದ್ಧಾಭಕ್ತಿ, ಸದ್ವಿದ್ಯಾರ್ಜನೆ, ಪರೋಪಕಾರ ಬುದ್ಧಿ, ಉಪಕಾರ ಸ್ಮರಣೆ, ಕರುಣೆ, ಪರಮಾತ್ಮ ತತ್ವದಲ್ಲಿ ಅಚಂಚಲ ನಂಬಿಕೆ ಮುಂತಾದ ಉದಾತ್ತ ಗುಣಗಳು ಮಾಯಾಪಾಶಗಳನ್ನು ನಿವಾರಿಸುವಲ್ಲಿ ಪ್ರಬಲ ಅಸ್ತ್ರಗಳಾಗಬಲ್ಲವು. ಯಾವುದೇ ವಿಷಯದ ಬಗ್ಗೆ ಜಿಜ್ಞಾಸೆಗಳು, ದ್ವಂದ್ವಗಳು ಮತ್ತು ಅನಿಶ್ಚಯತೆ ಎದುರಾದಾಗ ಸೂಕ್ತ ಗುರುವಿನ ಆಸರೆ, ಸಹಾಯ, ಮಾರ್ಗದರ್ಶನ ಲಭ್ಯವಾದರೆ ಮಾಯೆಯನ್ನು ಜಯಿಸುವಲ್ಲಿ ಅದಕ್ಕಿಂತ ಬೇರೆ ಏನೂ ಹೆಚ್ಚಿನದು ಬೇಕಾಗದು. ಲೋಕದಲ್ಲಿ ಸರ್ವವ್ಯಾಪಿಯಾಗಿರುವ ಈ ಮಾಯೆಯ ಪರದೆಯನ್ನು ಸರಿಸಿ, ನಿಜ ಸತ್ಯದ, ಜೀವನಾರ್ಥದ, ಸಂಬಂಧಗಳ ಮಿಥ್ಯೆಯ ಮತ್ತು ಮೋಕ್ಷದೆಡೆಗೆ ಸಾಗುವ ಪರಿಯನ್ನೇ ಶ್ರೀ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಪ್ರಸ್ತುತ ಪಡಿಸಿರುವುದು. ಭಗವದ್ಗೀತೆ ಮಾಯೆಯೆಂಬ ಮೋಡವನ್ನು ಸರಿಸಿ, ಬೆಳಕಿನೆಡೆಗೆ, ಜ್ಞಾನದೆಡೆಗೆ ಮತ್ತು ಪರತತ್ವ ಸಾಧನೆಯೆಡೆಗೆ ನಮ್ಮನ್ನೊಯ್ಯುವ ದಿವ್ಯ ನಾವೆ. ಆದುದರಿಂದಲೇ, ಮಾಯೆಯ ಮೋಡಿ ನಿರಂತರವಾದರೆ ಅದಕ್ಕೆ ನಾವು ಹಾಕುವ ನಿಯಂತ್ರಣ ಕ್ರಮಗಳೂ ಕೂಡ ನಿರಂತರವಾಗಿರಬೇಕು. ಇದು ದಿನನಿತ್ಯದ ನಿಲ್ಲದ ಪ್ರಕ್ರಿಯೆಯಾಗಬೇಕು. ಅದೇ ಮಾಯೆಯನ್ನು ಮೆಟ್ಟಿ ನಿಲ್ಲುವ ನಿರಂತರ ಸಾಧನೆ. ಮಾಯಾಪಾಶದಿಂದ ಬಿಡುಗಡೆ ಪಡೆವ ಹಾದಿ.

|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

ಕವಿ ವೆಂ. ಸುರೇಶ್

6 comments:

  1. [ಯಾವುದೇ ಪ್ರಾಪಂಚಿಕ ವಸ್ತುಗಳು ಹೆಚ್ಚಾದರೂ - ಹಣ, ಭೂಮಿ, ಆಭರಣಗಳು, ಇತ್ಯಾದಿ - ಅವುಗಳಿಂದ ಸುಖ, ಶಾಂತಿ, ನೆಮ್ಮದಿಗಿಂತ ಚಿಂತೆ, ಭಯ, ಅವನತಿ ಮತ್ತು ಅಪಾಯಗಳೇ ಹೆಚ್ಚು] ಸತ್ಯವಾದ ಮಾತು.ಸತ್ಯವಾದ ಮಾತು.ಈ ಬಗ್ಗೆ ಚರ್ಚಿಸದೆ ಒಪ್ಪಿಬಿಡುವ ಮಾತು.
    ಇನ್ನು ಮಾಯೆ ವಿಚಾರದಲ್ಲಿ ವೇದಾಂತಿಗಳ ಬಾಯಿಂದ ಕೇಳಿ ಬಿಟ್ಟರೆ ತಲೆ ಚಿತ್ರಾನ್ನವಾಗಿ ಬಿಡುತ್ತದೆ.
    ಜೀವನದ ಅನುಭವದ ಸಾರವಾಗಿ ಮೂಡಿ ಬಂದಿದೆ ಈ ನಿಮ್ಮ ಲೇಖನ.
    ಗಂಡಿಗೆ ಹೆಣ್ಣು ಮಾಯೆ, ಹೆಣ್ಣಿಗೆ ಗಂಡು ಮಾಯೆ.ಆದರೆ ಹೆಣ್ಣನ್ನು ಮಾತ್ರ ಮಾಯೆಗೆ ಹೋಲಿಸುವುದು ನಡೆದು ಬಂದಿದೆ. ಇದು ಪ್ರಕೃತಿ ಧರ್ಮ.ಇದರ ವಿರುದ್ಧ ಹೋಗಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ವಿವೇಕ ಮತ್ತು ವಿವೇಚನೆ ಎಂಬುದು ಮನುಷ್ಯನಲ್ಲಿದ್ದರೆ ಮಾಯೆಯಿಂದ ಹೊರಬರುವುದು ಖಂಡಿತವಾಗಿಯೂ ಕಷ್ಟವೇನಲ್ಲ.ಜೀವನದಲ್ಲಿ ಈ ಮಾಯೆಗೆ ಸಿಲುಕುವುದೇನೂ ಅಪರಾಧವಲ್ಲ. ಆದರೆ ಜೀವನ ಅಷ್ಟೇ ಅಲ್ಲವಲ್ಲಾ! ಅಲ್ಲಿಂದ ಹೊರಬರಲೇ ಬೇಕು.ಆಗ ನಿರಾಳ. ಮನುಷ್ಯ ತಾನು ಒಂಟಿಯಲ್ಲಾ, ಒಂದು ಸಮಾಜದಲ್ಲಿ ತಾನು ಬದುಕುತ್ತಿದ್ದೇನೆಂಬ ಅರಿವು ಅವನಿಗಿದ್ದರೆ ಒಂದು ಹಂತದಲ್ಲಿ ಅವನು ಸಾಮಾಜಿಕ ಚಟುವಟಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಮಾಯೆ ಎಂಬುದು ಮಾಯವಾದೀತು.

    ReplyDelete
  2. [[ಗಂಡಿಗೆ ಹೆಣ್ಣು ಮಾಯೆ, ಹೆಣ್ಣಿಗೆ ಗಂಡು ಮಾಯೆ.ಆದರೆ ಹೆಣ್ಣನ್ನು ಮಾತ್ರ ಮಾಯೆಗೆ ಹೋಲಿಸುವುದು ನಡೆದು ಬಂದಿದೆ.]]
    ಶ್ರೀ ಶರ್ಮಾಜಿಯವರು ತಿಳಿಸಿದ ವೇದದ ವಿಚಾರಗಳಿಂದ ನಾನು ತಿಳಿದುಕೊಂಡಿರುವುದೇನೆಂದರೆ ಧರಿಸಿದ ದೇಹದ ಕಾರಣದಿಂದ ಲಿಂಗವೇ ಹೊರತು ಒಳಗಿರುವ ಆತ್ಮಕ್ಕೆ ಲಿಂಗವಿಲ್ಲ.ಆತ್ಮ ಪುಲ್ಲಿಂಗಿಯೂ ಹೌದು, ಸ್ತ್ರೀಲಿಂಗಿಯೂ ಹೌದು, ನಿರ್ಲಿಂಗಿಯೂ ಹೌದು; ಅದು ಪುಲ್ಲಿಂಗಿಯೂ ಅಲ್ಲ, ಸ್ತ್ರೀಲಿಂಗಿಯೂ ಅಲ್ಲ, ನಿರ್ಲಿಂಗಿಯೂ ಅಲ್ಲ.
    ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ|
    ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ|| (ಅಥರ್ವ.೧೦.೮.೨೭)
    ಈ ಕುರಿತು ತಲೆಕೆಡಿಸಿಕೊಳ್ಳುವುದೇ ಬೇಡ. 'ಸದ್ವಿಚಾರ ಮಾಡೋಣ, ಸದಾಚಾರದಲ್ಲಿರೋಣ' ಎಂಬುದು ಲೇಖನದ ಸಾರ. ಒಳ್ಳೆಯ ವಿಚಾರವಿದೆ, ಸ್ವಾಗತಿಸೋಣ.

    ReplyDelete
  3. [ಈ ಕುರಿತು ತಲೆಕೆಡಿಸಿಕೊಳ್ಳುವುದೇ ಬೇಡ. 'ಸದ್ವಿಚಾರ ಮಾಡೋಣ, ಸದಾಚಾರದಲ್ಲಿರೋಣ]
    ತಲೆ ಕೆಡಸಿಕೊಂಡಿಲ್ಲ ನಾಗರಾಜ್, ಅಭಿಪ್ರಾಯ ವಿನಿಮಯ ಅಷ್ಟೆ. ಲೇಖನವಂತೂ ತುಂಬಾ ಚೆನ್ನಾಗಿದೆ.ಸುರೇಶ್ ಹೀಗೆ ಬರೆಯುತ್ತಿರಲೆಂಬುದು ನನ್ನ ಆಸೆ.

    ReplyDelete
  4. ಮಾನ್ಯ ಕವಿ ಸುರೇಶ್ ಅವರ ಲೇಖನ ನೇರ, ಸರಳ ಹಾಗೂ ಸುಂದರವಾಗಿದೆ. ನನ್ನ ಪ್ರಕಾರ `ಮಾಯೆ' ಎಂದರೆ ಇಂದ್ರಿಯ ಲೋಲುಪತೆ. ಜಗತ್ತಿನ ಸಕಲ ಅನಿಷ್ಟ, ಅನಾಹುತಗಳಿಗೆಲ್ಲ ಈ ಇಂದ್ರಿಯ ಲೋಲುಪತೆಯೇ ಕಾರಣ. ಇದೇ ಈ ಲೇಖನದಲ್ಲಿ ನಾವು ತಿಳಿಯಬೇಕಾದ ಸಾರ. ಆದರೆ ಇಂದ್ರಿಯಗಳನ್ನು ಶೇ.100 ರಷ್ಟು ವರ್ಜಿಸಲೂ ಸಾಧ್ಯವೂ ಇಲ್ಲ; ಸಾಧುವೂ ಅಲ್ಲ. ಇಂದ್ರಿಯಾನುಭವಗಳ `ನಕಾರಾತ್ಮಕತೆ'ಯನ್ನು `ಸಕಾರಾತ್ಮಕ' ಮಾಡಿಕೊಳ್ಳಬೇಕೆಂಬುದೇ ವೇದಗಳು ನೀಡುವ ಸಂದೇಶವಾಗಿದೆ. ಅದರಂತೆ ನಡೆದರೆ ಜಗತ್ತೇ ಸ್ವರ್ಗವಾದೀತು ಅಲ್ಲವೆ!?

    ReplyDelete
  5. ಮಾಯೆ" ಎಂಬುದು ವೇದಾಂತದಲ್ಲಿ ಬಳಸುವ ಒಂದು ಪದ. ಈ ಜಗತ್ತು, ಈ ಜೀವನ ಎಲ್ಲವೂ ಬರೀ ಕಲ್ಪನೆ, ಇವು ಯಾವುವೂ ನಿಜವಾಗಿ ಇಲ್ಲವೇ ಇಲ್ಲ. ಎಲ್ಲಾ ಬರೀ ಕನಸಿನಂತೆ ಮುಂತಾಗಿ ಇದರ ಬಗ್ಗೆ ಭಾಷಣ, ಲೇಖನಗಳು ಎಷ್ಟೇ ಮಾಡಿದರೂ, ಬರೆದರೂ, ಒಬ್ಬ ಸಾಮಾನ್ಯನಿಗೆ ಗೊಂದಲವನ್ನು ಉಂಟುಮಾಡುವುದರಲ್ಲಿ ಜಯಶಾಲಿಯಾಗಿವೆ! ನಿತ್ಯಜೀವನದ ಜಂಜಾಟ, ಸುಖ-ಸಂತೋಷಗಳು ಹಾಗಾದರೆ ಸುಳ್ಳೇ?! ಪ್ರತಿಕ್ಷಣವೂ ಅನುಭವಕ್ಕೆ ಬರುತ್ತಿರುವ ಸಾವು-ನೋವುಗಳನ್ನು ಕಲ್ಪನೆ, ಭ್ರಮೆಯೆಂದು ಒಪ್ಪುವುದಾದರೂ ಹೇಗೆ??!! ಸಾಧಾರಣರ ವಿಚಾರ ಒತ್ತಟ್ಟಿಗಿರಲಿ. ಈ ಜಗತ್ತನ್ನು "ಮಾಯೆ’ ಎಂದು ಕರೆಯುತ್ತಿರುವ ವೇದಾಂತಿಗಳು, ಈ ‘ಮಾಯಾ ಪ್ರಪಂಚ’ದ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲವೇ?! ಹಾಗಾದರೆ ಅವರ ಮಾತಿಗೂ, ನಡೆಗೂ ಇರುವ ಕಂದರವನ್ನು ಮುಚ್ಚುವುದಾದರೂ ಹೇಗೆ??!! ‘ಮಾಯೆ’ ಎಂಬ ಶಬ್ದವನ್ನು ಅರ್ಥಮಾಡಿಕೊಳ್ಳುವುದರಲ್ಲೇ ಏನೂ ತೊಂದರೆಯಿದೆ.

    ‘ಅಳತೆ’ ಎಂಬರ್ಥದ ಧಾತುವಿನಿಂದ ಬಂದಿದ್ದು ಈ ‘ಮಾಯೆ’ ಎಂಬ ಪದ. ಇದ್ದದ್ದನ್ನು ಇದ್ದಂತೆ, ಇದ್ದಷ್ಟೇ ತಿಳಿಯುವ ಯಥಾರ್ಥಜ್ಞಾನ ಎಂಬರ್ಥದಲ್ಲಿ ಈ ಶಬ್ದದ ಬಳಕೆ ‘ವೇದ’ಗಳಲ್ಲಿ ಆಗಿರುವುದುಂಟು. ಜಗತ್ತಿನಲ್ಲಿರುವ ಪ್ರತಿಯೊಂದಕ್ಕೂ ಒಂದು ಹೊರಮುಖ, ಒಂದು ಒಳಮುಖ ಎಂಬುದಿರುತ್ತದೆ. ಸಾಧಾರಣವಾಗಿ ನಾವು ಹೊರಮುಖವನ್ನು ನೋಡಿ ವ್ಯವಹರಿಸುತ್ತೇವೆ, ನಿಶ್ಚಯಿಸುತ್ತೇವೆ. ಗೋಮುಖವ್ಯಾಘ್ರಗಳ ದುರುದ್ದೇಶಗಳಿಗೆ ಬಲಿಯಾಗುತ್ತೇವೆ. ಒಳಮುಖವನ್ನು ತಿಳಿಯುವ ಪ್ರಯತ್ನವನ್ನು ಸಾಮಾನ್ಯವಾಗಿ ಮಾಡುವುದೇ ಇಲ್ಲ. ಆದರೆ, ಪ್ರತಿಯೊಂದು ವಿಚಾರ, ವಸ್ತು, ವ್ಯಕ್ತಿಯ ನಿಜಸ್ವರೂಪ, ಒಳಮುಖವನ್ನು ಅರಿಯುವುದರಿಂದ ಮಾತ್ರ ತೆರೆದುಕೊಳ್ಳುತ್ತದೆ.

    ನೀರು ಬರೀ
    H2Oಅಲ್ಲ, ಸಕಲ ಜೀವರಾಶಿಗಳ ‘ಜೀವನ’, ಅಮೂಲ್ಯ. ನಾವು ಕೊಡುವ ನೀರಿನ ಶುಲ್ಕ ನೀರಿಗಾಗಲ್ಲ! ಆ ನೀರು ನಮ್ಮ ಮನೆಯ ಬಾಗಿಲಿಗೆ ಬರುವುದಕ್ಕೆ ತೆರುತ್ತಿರುವ ಶುಲ್ಕ!! ಈಗ ಒಂದೊಂದು ನೀರಿನ ಹನಿಯ ಬೆಲೆ ತಿಳಿದು, ಸದ್ಬಳಕೆಗೆ ನಾಂದಿಯಾಗುತ್ತದೆ. ಗಿಡ-ಮರಗಳು, ಮರ-ಮುಟ್ಟುಗಳಲ್ಲ! ಸಲೆ, ಘನ ಅಡಿಗಳಲ್ಲಿ ಲೆಕ್ಕಹಾಕುವ ತುಂಡು-ಚಕ್ಕೆಗಳಲ್ಲ!! ಇಡೀ ಭೂಮಂಡಲವನ್ನು ತಂಪಾಗಿರಿಸುವ, ಕಾಲಕಾಲಕ್ಕೆ ಮಳೆಬರಲು ಸಹಾಯಮಾಡುವ, ಸಕಲ ಜೀವರಾಶಿಗಳಿಗೆ ಬೇಕಾದ ‘ಪ್ರಾಣವಾಯು’ವನ್ನು (Oxygen ಎನ್ನೋಣವೇ!) ಉತ್ಪಾದಿಸುವ ಕಾರ್ಯಾಗಾರಗಳು. ಎಷ್ಟೇ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತೇವೆಂದರೂ ಇವಕ್ಕೆ ಬದಲೀ ವ್ಯವಸ್ಥೆ ಇಲ್ಲ. ಈಗ ಒಂದು ಹುಲ್ಲುಕಡ್ಡಿಯನ್ನು ಕೀಳಲೂ ಮನಸ್ಸಾಗುವುದಿಲ್ಲ! ಇತ್ಯಾದಿ ...

    ನಮ್ಮ ಜೀವನದೃಷ್ಟಿಕೋನ ವಿಶಾಲವೂ, ಗಂಭೀರವೂ, ನಿಃಸ್ವಾರ್ಥವೂ, ಮಾನವೀಯವೂ ಆಗಿ ಬದಲಾಗುತ್ತದೆ. ಇದೀಗ ನಿಜವಾದ ‘ಮಾಯೆ’, ನಿಜವಾದ ವೇದಾಂತ.
    -ಸುಧಾಕರ ಶರ್ಮ

    ReplyDelete
  6. ವಿಚಾರಗಳು ಓರೆಗಲ್ಲಿಗೆ ಹಚ್ಚಿದಾಗಲೇ ಹೆಚ್ಚು ಹೆಚ್ಚು ಸ್ಪಷ್ಟತೆ ಪಡೆಯಬಲ್ಲವು ಎಂಬುದಕ್ಕೆ ಶ್ರೀ ಶರ್ಮಾಜಿಯವರ ಮತ್ತು ಶ್ರೀ ಶ್ರೀಧರ್, ಶ್ರೀ ನಾಗರಾಜ್ ಮತ್ತು ಶ್ರೀ ಪ್ರಭಾಕರ್ ರವರ ಸ್ಪಂದನೆಗಳೇ ಸಾಕ್ಷಿ. ಲೇಖನ ಇಷ್ಟು ವಿಚಾರ-ವಿನಿಮಯಕ್ಕೆ ಅನುವು ಮಾಡಿತಲ್ಲ ಎಂಬುದೇ ನನ್ನ ಸಮಾಧಾನ. ಎಲ್ಲರಿಗೂ ನನ್ನ ಆತ್ಮೀಯ ಧನ್ಯವಾದಗಳು.

    ReplyDelete