Pages

Thursday, September 8, 2011

ವಿಚಾರ ಮಥನ ನಡೆಯಲಿ

     ಅಧ್ಯಯನ, ಶ್ರವಣ, ಮನನ, ವಿಮರ್ಶೆ, ವಿವೇಚನೆ ಇವುಗಳು ಜ್ಞಾನದ ಮೂಲ. ಯಾವುದೇ ಪೂರ್ವಾಗ್ರಹವಿಲ್ಲದ ಚಿಂತನೆ ರೂಢಿಸಿಕೊಂಡರೆ ಸತ್ಯದ ಸಾಕ್ಷಾತ್ಕಾರಕ್ಕೆ ಸಹಕಾರಿ. ವೇದದ ಅರ್ಥ ಮತ್ತು ಉದ್ದೇಶವೂ ಇದೇ ಆಗಿದೆ. ಶ್ರೀ ಶಂಕರಾಚಾರ್ಯರ ವಿವೇಕ ಚೂಡಾಮಣಿ ಕುರಿತು ಶ್ರೀ ಸುಬ್ರಹ್ಮಣ್ಯರವರು ಉತ್ತಮ ಮಾಲಿಕೆ ಆರಂಭಿಸಿದ್ದು ಮಾಲಿಕೆಯ  ಭಾಗ -೯ರಲ್ಲಿ ಈ ರೀತಿ ಹೇಳಿರುವ ಸಂಗತಿ ಇದೆ:


    " ಗುರುವಾದವನು ಬ್ರಹ್ಮನಿಷ್ಠ ಅಥವಾ ಬ್ರಹ್ಮಸಂಪ್ರದಾಯದವನಾಗಿರಬೇಕು ಎಂದು ಹೇಳುತ್ತಾರೆ. ( ಸಮ್ಯಕ್ ಪ್ರಕೃಷ್ಟತಯಾ ದಾಯವರೂಪೇಣ ಸಮಾಗತಮ್ ಇತಿ ಸಂಪ್ರದಾಯಃ = ಚೆನ್ನಾಗಿ, ವಿಶೇಷವಾಗಿ ಬಳುವಳಿ ಅಥವಾ ನಮ್ಮಪಾಲಿಗೆ ಬಂದಿರುವುದೇ ಸಂಪ್ರದಾಯ ). ನಿಷ್ಠೆಯಿದ್ದಲ್ಲಿ ಬ್ರಹ್ಮಜ್ಞಾನದ ಹಾದಿ ಸುಗಮವಾಗುತ್ತದೆ. ಯಾವುದೋ ಒಂದು ವಿಚಾರಕ್ಕೆ ಕಟ್ಟುಬಿದ್ದು ಇಡೀ ವ್ಯವಸ್ಥೆಯನ್ನು ಕೀಳಾಗಿ ಅರ್ಥೈಸುವುದು ’ನಿಷ್ಠೆ’ ಎನ್ನುವುದಕ್ಕೆ ವಿರೋಧವಾಗುತ್ತದೆ. ನಮಗೆ ಆರನೆ ತರಗತಿಯಲ್ಲಿ ’ದಯಾನಂದ ಸರಸ್ವತಿಯವರ’ ಕುರಿತು ಪಾಠವೊಂದಿತ್ತು. ದೇವ ನಿಷ್ಠರಾದ ದಯಾನಂದ ಸರಸ್ವತಿಯವರು ಶಿವರಾತ್ರಿಯ ಜಾಗರಣೆಗೆಂದು ಹೋದ ದೇವಾಲಯದಲ್ಲಿ ಮಧ್ಯರಾತ್ರಿಯ ಒಂದು ಹೊತ್ತಿನಲ್ಲಿ ಶಿವಲಿಂಗದ ಮೇಲೆ ಇಲಿಗಳು ಓಡಾಡಿದುವಂತೆ. ಅದನ್ನು ಕಂಡ ಸರಸ್ವತಿಗಳು ಹೀಗೆ ಹೇಳುತ್ತಾರೆ " ತನ್ನ ಮೈಮೇಲೆ ಓಡಾಡುವ ಇಲಿಗಳನ್ನು ಓಡಿಸಲಾರದ ಈ ಶಿವ ಜಗತ್ತಿನ ಜೀವಕೋಟಿಯನ್ನು ಹೇಗೆ ತಾನೇ ಕಾಪಾಡಿಯಾನು ?" ಎಂದು. ( ದಯಾನಂದರ ಬಗೆಗೆ ಟೀಕೆ ಮಾಡುವ ಅಥವಾ ಖಂಡನೆ ಮಾಡುವ ಯೋಗ್ಯತೆ ನನಗಿಲ್ಲ. ನನ್ನ ವಿಚಾರವೇನಿದ್ದರೂ ಈ ಒಂದು ವಾಕ್ಯದ ಬಗೆಗೆ ಮಾತ್ರ). ಜಗತ್ತಿನ ಜೀವಕೋಟಿಯಲ್ಲಿ ಪಾಪದ ಇಲಿಯೂ ಸೇರಿದೆ ಎನ್ನುವುದು ಸರಸ್ವತಿಗಳಿಗೆ ಏಕೆ ಹೊಳೆಯಲಿಲ್ಲ ? . ದೇವನಿಷ್ಠರಾಗಿದ್ದಾಗ ಜಡವಾದ ಶಿಲೆಯಲ್ಲೇ ಶಿವನನ್ನು ಕಂಡಿದ್ದ ಸರಸ್ವತಿಗಳಿಗೆ ಜೀವವಿರುವ, ಚೈತನ್ಯಪೂರ್ಣವಾದ ಇಲಿಯಲ್ಲಿ ಶಿವನನ್ನು ಕಾಣಲು ಸಾಧ್ಯವಾಗಲಿಲ್ಲವೇ ?!. ಇದಕ್ಕೆ ಸಾರಸಗಟು ವಿಗ್ರಹಾರಾಧನೆಯನ್ನೇ ಅವರು ತಿರಸ್ಕರಿಸಬೇಕಿತ್ತೇ ?. ಈ ನಿಟ್ಟಿನಲ್ಲಿ ನೋಡಿದರೆ ಆರ್ಯಸಮಾಜದಲ್ಲಿ ಸರಸ್ವತಿಗಳ ಭಾವಚಿತ್ರವನ್ನಿಟ್ಟು ಪೂಜಿಸುವುದೂ, ವೇದಗಳನ್ನು ಹೇಳಿಕೊಂಡು ಹವನ (ಬೆಂಕಿಗೆ ತುಪ್ಪ ಸುರಿಯುವುದು ಎನ್ನೋಣವೇ ?) ಮಾಡುವುದೂ ತಪ್ಪೇ ಆಗುತ್ತದೆ !. ಬ್ರಹ್ಮವಿದ್ಯೆಯ  ಅರಿವಿಗೆ  ನಿಷ್ಠೆ ಎನ್ನುವುದು ಬಹಳ ಮುಖ್ಯವಾದ ಅಂಶವಾಗಿದೆ."
     ಈ ಭಾಗದ ಕುರಿತು ನಡೆದ ಚರ್ಚೆ ಹೀಗಿದೆ:

ಕವಿ ನಾಗರಾಜ್ :
ನಮ್ಮ ಪಾಲಿಗೆ ಬಂದಿರುವ ಎಲ್ಲಾ ಸಂಪ್ರದಾಯಗಳೂ ಚೆನ್ನಾಗಿದೆಯೆಂದಾಗಲೀ, ವಿಶೇಷವಾದ ಬಳುವಳಿಯಾಗಿದೆ ಎಂದು ಅನ್ನಿಸುವುದಿಲ್ಲ. ಎಷ್ಟೋ ಸಂಪ್ರದಾಯಗಳು ಹೊಸ ಹೊಸ ರೂಪ/ಕುರೂಪ ತಳೆಯುತ್ತಿವೆ. ವಿಚಾರಕ್ಕೆ ಮಹತ್ವ ಕೊಡದೆ ಕೇವಲ ಆಚಾರಕ್ಕೆ ಮಹತ್ವ ಕೊಡುವ ಪರಿ ಇಂದು ನಾವು ಕಾಣುತ್ತಿದ್ದೇವೆ. 
ಯಾರದೇ ಆಗಲಿ, ಒಂದು ವಾಕ್ಯದ ಮೇಲೆ ಅವರ ಯೋಗ್ಯತೆ ನಿರ್ಧರಿಸಲಾಗುವುದಿಲ್ಲ. ಅದನ್ನು ಹೇಳಿರಬಹುದಾದ ಸಮಯ, ಸಂದರ್ಭಗಳನ್ನೂ ಗಣಿಸಬೇಕಾಗುತ್ತದೆ. ಮಹರ್ಷಿ ದಯಾನಂದ ಸರಸ್ವತಿಯವರು ಇಲಿಯನ್ನು ಜೀವಕೋಟಿಯಿಂದ ಹೊರತಾದದ್ದು ಎಂದು ಭಾವಿಸಿದ್ದಾರೆಂದು ಅರ್ಥೈಸುವುದು ಸರಿಯಾಗಲಾರದು.


ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೇ,
ದಯಾನಂದ ಸರಸ್ವತಿಯವರ ಕುರಿತಾಗಿ ನೀವು ಹೇಳಿರುವುದು ಸರಿಯಾಗಿಯೇ ಇದೆ. ಅವರೇನೂ ಹಾಗೆ ಭಾವಿಸಿರಲಾರರು ಎಂದು ಅಂದುಕೊಂಡರೂ ಮತ್ತು ಅವರಾಡಿದ್ದ ಮಾತುಗಳು ಸಾಂಧರ್ಭಿಕವೆಂದೇ ತಿಳಿದರೂ ಮುಂದೆ ವಿಗ್ರಹಾರಾಧನೆಯನ್ನೇ ಬಹಿಷ್ಕರಿಸಿ ಆರ್ಯಸಮಾಜವು ನಡೆದ ದಾರಿ ತಿಳಿದೇ ಇದೆಯಲ್ಲಾ(ಇಂದಿಗೂ) !. ದಯಾನಂದ ಸರಸ್ವತಿಯವರನ್ನೂ ಶಂಕರರಿಗೇ ಹೋಲಿಸುವುದನ್ನೂ ತಿಳಿದಿದ್ದೇನೆ. ಮಹಾಜ್ಞಾನಿಗಳು ಅವರು, ಅವರ ವಿಚಾರಗಳನ್ನು ನಾನು ಖಂಡಿಸುತ್ತಿಲ್ಲ ( ಆ ಯೋಗ್ಯತೆಯೂ ನನಗಿಲ್ಲ ) ಬದಲಾಗಿ ಇಲಿಗಳು ಓಡಾಡಿದ್ದೇ ಒಂದು ನೆಪವಾಯಿತೇ ಎನ್ನುವುದು ನನ್ನ ಜಿಜ್ಞಾಸೆ ಅಷ್ಟೆ.
ನಿಮ್ಮ ಆಸಕ್ತಿಗೆ, ವೈಚಾರಿಕತೆಗೆ ಧನ್ಯವಾದಗಳು.
ಕವಿ ನಾಗರಾಜ್ :
ವಿಗ್ರಹಾರಾಧನೆ ಸರಿಯಲ್ಲವೆಂದು ಪ್ರತಿಪಾದಿಸುವವರ ಪ್ರಧಾನ ಅಂಶ ದೇವರು ನಿರಾಕಾರನೆಂಬುದೇ ಆಗಿದೆ. ಇದಕ್ಕೆ ಅವರು ಕೊಡುವ ಕಾರಣಗಳೂ ತಳ್ಳಿಹಾಕುವಂತಹುದಲ್ಲ. ಈ ಕುರಿತು ಪ್ರತ್ಯೇಕ ಜಿಜ್ಞಾಸೆ/ಚರ್ಚೆ ಮಾಡಬಹುದು. ಹಿಂದೆಯೂ ಆಗಿದೆ. ಮುಂದೆಯೂ ಮುಂದುವರೆಸೋಣ. ನಿಮ್ಮ ಲೇಖನಮಾಲೆಯಲ್ಲಿ ಈ ಅಂಶ ಒಳಗೊಳ್ಳುವುದು ವಿಹಿತವಲ್ಲ. ಈ ಭಾಗವನ್ನು ಈ ಲೇಖನದಿಂದ ಕೈಬಿಡುವುದು ಸೂಕ್ತವೆನಿಸೀತು. ಏಕೆಂದರೆ ಇಂತಹ ಚರ್ಚೆ ಈ ಲೇಖನದ ಅಡಿಯಲ್ಲಿ ಮುಂದುವರೆಯುವುದು ಸರಿಯಾಗಲಾರದು.
ಸುಬ್ರಹ್ಮಣ್ಯ:
ಮಾನ್ಯ ನಾಗರಾಜರೆ,
ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು. ನನ್ನ ಲೇಖನದಲ್ಲಿ ’ಬ್ರಹ್ಮವಿದುತ್ತಮ್’ ಎನ್ನುವುದಕ್ಕೆ ಪೂರಕವಾಗಿ ಉದಾಹರಣೆಯನ್ನು ಬರೆಯುವಾಗ ನನಗೆ ನೆನಪಿದ್ದ ಶಾಲೆಯ ಪಠ್ಯದಲ್ಲಿದ್ದ ಈ ವಾಕ್ಯವನ್ನು ಹಾಕಿದೆ ಅಷ್ಟೆ. ನೀವು ಹೇಳಿದಂತೆ ಇದಕ್ಕೆ ಪ್ರತ್ಯೇಕ ಚರ್ಚೆಯನ್ನೇ ನೆಡೆಸುವುದು ಒಳಿತು. 
ಇನ್ನು ಸಂಪ್ರದಾಯದ ವಿಷಯವಾಗಿ ಹೇಳುವುದಾದರೆ , ವಿವೇಕಚೂಡಾಮಣಿಯಲ್ಲಿ ಪ್ರಸ್ತಾವಿರುವುದು ಅಧಿಕಾರಿಯು ಬ್ರಹ್ಮಸಂಪ್ರದಾವಿತ್ ಆಗಿರಬೇಕು ಎಂಬ ಹಿನ್ನಲೆಯಲ್ಲಿ ಸಂಪ್ರದಾಯ ಎನ್ನುವುದನ್ನು ಬಳಸಲಾಗಿದೆ. ಇದು ಜನರಲ್ ಸಂಪ್ರದಾಯಗಳಲ್ಲ. 
ವಿವೇಕ ಚೂಡಾಮಣಿಯನ್ನು ಆತ್ಮಜ್ಞಾನದ ನೆಲೆಗಟ್ಟಿನಲ್ಲಷ್ಟೇ ನೋಡಬೇಕಾಗುತ್ತದೆ. ಇಲ್ಲದಿದ್ದರೆ ಗೊಂದಲಮಯವಾಗುತ್ತದೆ. 
ನಿಮ್ಮ ಪ್ರೋತ್ಸಾಹಕಾರಕ ನುಡಿಗಳಿಗೆ ನಾನು ಆಭಾರಿ.


ನನ್ನ ಅನಿಸಿಕೆ: [ದೇವರನ್ನು ಸೀಮಿತ ಮಾಡಿಕೊಂಡು ನೋಡುವುದರಿಂದ ಆಗುವ ಎಡವಟ್ಟುಗಳು ಇವು.] ನನ್ನ ಭಾವವೂ ಇದೇ. ಆದರೆ ಸೀಮಿತ ಅನ್ನುವುದು ಯಾವುದು ಎಂಬುದೂ ಚರ್ಚಾರ್ಹ. ಜಿಜ್ಞಾಸುಗಳು ಅರ್ಥ ಮಾಡಿಕೊಳ್ಳಬಲ್ಲರು. ಅದರೆ ಅರ್ಥ ಮಾಡಿಕೊಳ್ಳದೆ ಮಾಡುವ ಆಚರಣೆಗಳು ಕುರುಡು ಸಂಪ್ರದಾಯಗಳಾಗಿ ಮುಂದುವರೆಯುವ ಅಪಾಯವನ್ನೂ ಅರಿಯಬೇಕು.
ದಯಾನಂದ ಸರಸ್ವತಿಯವರು ಹೇಳಿದ ಮಾತು ಅವರ ಬಾಲ್ಯಕಾಲದಲ್ಲಿ ಎಂದು ತಿಳಿದಿದ್ದೇನೆ. ವಿಚಾರ ಮಾಡುವ ಪ್ರವೃತ್ತಿ ಅವರಿಗೆ ಚಿಕ್ಕಂದಿನಿಂದಲೇ ಬಂದಿತ್ತು. ಅವರ ಈ ಮಾತಿನ ಉಲ್ಲೇಖದಿಂದ ಈ ಚರ್ಚೆಗೆ ಕಾರಣವಾಗಿದ್ದು ವಿಚಾರಮಥನದಿಂದ ಸತ್ಯ ತಿಳಿಯುವಲ್ಲಿ ಸಹಕಾರಿಯಾಗಲಿ.


ಸನ್ಮಾನ್ಯ ವೇದಸುಧೆಯ ಓದುಗರು ಈ ಕುರಿತು ಸುಯೋಗ್ಯ ಚರ್ಚೆ, ಜಿಜ್ಞಾಸೆ ಮಾಡಲಿ, ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಕೋರುವೆ. ಯಾವುದೇ ದೂಷಣೆ, ನಿಂದೆಗಳಿಗೆ ಅವಕಾಶವಿಲ್ಲ. ಖಂಡನೆಗಿಂತ ಮಂಡನೆಗೆ ಆದ್ಯತೆ ಇರಲಿ ಎಂದು ಬಿನ್ನಹ.
-ಕ.ವೆಂ.ನಾಗರಾಜ್.
---------------------------
ನನ್ನ ಅನಿಸಿಕೆ :


ನೇರವಾಗಿ ಹೇಳಬೇಕೆಂದರೆ ಇಲ್ಲಿ ಚರ್ಚೆ ನಡೆಯುವುದೆಂದರೆ ದಯಾನಂದ ಸರಸ್ವತಿಯವರ  ಆರ್ಯ ಸಮಾಜಬಗ್ಗೆಯೇ ನಡೆಯಬೇಕಾಗುತ್ತದೆ. ಮೂರ್ತಿ ಪೂಜೆ ಬೇಕೇ? ಬೇಡವೇ? ಇದೇ ವಿಚಾರ. ಈ ಬಗ್ಗೆ ನನ್ನ ಸ್ಪಷ್ಟ ಅಭಿಪ್ರಾಯ ತಿಳಿಸಿ ಬಿಡುವೆ. ನಾನೀಗಾಗಲೇ ವೇದಸುಧೆಯಲ್ಲಿಯೇ ಪ್ರಸ್ತಾಪಿಸಿರುವಂತೆ ನನ್ನ ಹಿಂದಿನ ಒಂದು ಘಟನೆ ನೆನಪು ಮಾಡುವುದು ಅನಿವಾರ್ಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ರಸ್ತೆಯಲ್ಲಿ ಬಿದ್ದಿರುತ್ತಿದ್ದ ಬೀಡಿ -ಬೆಂಕಿಪೊಟ್ಟಣದ ಮೇಲಿರುತ್ತಿದ್ದ ದೇವರ ಚಿತ್ರಗಳನ್ನು  ಅತ್ಯಂತ ಭಕ್ತಿಯಿಂದ ಕಣ್ಣಿಗೆ ಒತ್ತಿಕೊಂಡು ಜೋಪಾನವಾಗಿ ತೆಗೆದಿಡುತ್ತಿದ್ದೆ. ಹೀಗೆ ಮಾಡುತ್ತಾ ಮಾಡುತ್ತಾ ನಮ್ಮ ಮನೆಯಲ್ಲಿ ಅದೊಂದು ದೊಡ್ದ ಸಂಗ್ರಹವೇ ಆಗಿ ತಲೆನೋವಾಯ್ತು. 
ಮುಂದಿನ ಹೆಜ್ಜೆ.ವಿಗ್ರಹಗಳ ಮೇಲಿನ ಶ್ರದ್ಧೆ. ಕಂಡಕಂಡ ವಿಗ್ರಹಗಳಿಗೆಲ್ಲಾ ಕೈ ಮುಗಿದು ಅಡ್ದ ಬಿದ್ದಿದ್ದಾಯ್ತು. ನಂತರ ನಿತ್ಯ ಪೂಜಾ ಕ್ರಮ. ಇಲ್ಲಿ ನೋಡಿ ಸ್ವಲ್ಪ ದ್ವಂದ್ವ ಶುರುವಾಯ್ತು. ಹತ್ತಾರು ವರ್ಷ ನಿತ್ಯ ಪೂಜೆ ಮಾಡಿತ್ತಿದ್ದ ನನಗೆ ಒಂದು ದಿನ ಪುಟ್ಟ ಪುಟ್ಟ ವಿಗ್ರಹಗಳಿಗೆ ಅಭಿಶೇಕ ಮಾಡುವಾಗ ಮನದಲ್ಲಿ ಮೂಡಿ ಬಂದ ವಿಚಾರ ತಿಳಿಸಿ ಬಿಡುವೆ" ಅರೇ, ಈ ಪುಟ್ಟಬೊಂಬೆಗಳಿಗೆ ಅಭಿಶೇಕ ಮಾಡುತ್ತಿದ್ದೀನಲ್ಲಾ! ತಕ್ಷಣ ನಾನು ಚಿಕ್ಕ ವಯಸ್ಸಿನಲ್ಲಿ ಹಂಚಿಪಕರೆ,ಮಣ್ಣಿನಲ್ಲಿ ಮಾಡಿದ ಪಾತ್ರೆಗಳನ್ನು ಇಟ್ಟುಕೊಂಡು ಆಡುತ್ತಿದ್ದ ದಿನಗಳು ನೆನಪಾಯ್ತು. ಕೂಡಲೇ ಪೂಜೆಯನ್ನು ಅಷ್ಟಕ್ಕೇ ಮುಗಿಸಿದೆ. ಪೂಜಾಗೃಹದಲ್ಲೇ ಕಣ್ಮುಚ್ಚಿ ಕುಳಿತೆ. ಮುಂದೆ ಹಲವಾರು ವರ್ಷಗಳು ಹೀಗೇ ನಡೆದು ಬಂತು. ಕೊನೆಗೆ ಅಗ್ನಿಹೋತ್ರದ ಪರಿಚಯವಾಯ್ತು. ಈಗ ಹಲವಾರು ದಿನಗಳಿಂದ ರೆಗ್ಯುಲರ್ ಆಗಿ ಅಗ್ನಿಹೋತ್ರ ಮಾಡುತ್ತಿರುವೆ. ಅದರಿಂದ ನೆಮ್ಮದಿ ಇದೆ.

ಯಾಕಾಗಿ ಇಷ್ಟೆಲ್ಲಾ ಪುರಾಣ ಹೇಳಿದೆ ನೆಂದರೆ [ಬಹುಷ: ಪುರಾಣ ಹೀಗೆಯೇ ಹುಟ್ಟಿರಬೇಕು] ವಯಸ್ಸಾದಂತೆಲ್ಲಾ ಹಂತಹಂತವಾಗಿ ಪ್ರೌಢಿಮೆ ಬರುವುದು ಸಹಜ. ಕೆಲವರು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲೂ ಏಳು ವರ್ಷದ ಮಕ್ಕಳ ಮನೋಭಾವ ಹೊಂದಿರುತ್ತಾರೆ. ಕೆಲವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಎಪ್ಪತ್ತರ ಅನುಭವ ಪಡೆದವರಂತಿರುತ್ತಾರೆ. ಇಷ್ಟೆ!!
ಪೂರ್ತಿ ಪೂಜೆ ಮಾಡುವುದು ಬಿಡುವುದು ಅವರವರ ಮನೋಭಾವ. ಆದರೆ ಸಾಮಾನ್ಯವಾಗಿ ಇಲ್ಲಿ[ವೇದಸುಧೆಗೆ] ಬಂದವರೆಲ್ಲಾ ಭಗವಂತನಲ್ಲಿ ಅತ್ಯಂತ ಶ್ರದ್ಧೆ ಹೊಂದಿದವರೇ ಆಗಿರುತ್ತಾರೆ. ಈ ಕುರಿತು ಚರ್ಚೆ ಮಾಡಲು ಸಿದ್ಧರಿರುವುದಿಲ್ಲ. ಆದರೆ ನಾಗರಾಜ್ ರಂತವರಾಗಲೀ ಸುಬ್ರಹ್ಮಣ್ಯ ರಂತವರಾಗಲೀ ಬರೆದದ್ದನ್ನು ಶ್ರದ್ಧೆಯಿಂದ ಓದುತ್ತಾರೆ. ಆದರೆ  ಪ್ರತಿಶತ ಒಬ್ಬರಿಗೂ ಚರ್ಚೆ ಮಾಡುವ ಸ್ವಭಾವ ಇರುವುದಿಲ್ಲ. ವೇದಸುಧೆಯ ಒಂದುವರೆ ವರ್ಷದ ಅನುಭವವಿದು. ನಾವು ಹೇಳಬೇಕೆಂದಿದ್ದನ್ನು       ಹೇಳಿ ಬಿಡೋಣ.ಅಷ್ಟೆ.ನಮ್ಮ ಹಲವು ಆಚರಣೆಗಳನ್ನು ಎಷ್ಟು ಕುರುಡಾಗಿ ಆಚರಿಸುತ್ತೇವೆಂದರೆ ಮೊನ್ನೆ ನಡೆದ ಗೌರಿಹಬ್ಬದ ಮೊರದಜೊತೆಯಲ್ಲಿ ಮಂಗಲ ದ್ರವ್ಯಗಳನ್ನು ಕೊಡುವಾಗ ಉಪಯೋಗಿಸಲು ಸಾಧ್ಯವಾಗದ ಬಳೆ ಬಿಚ್ಚೋಲೆಗಳು, ಕನ್ನಡಿ ಬಾಚಣಿಗೆಗಳು, ಅರಿಶಿನ ಕುಂಕುಮದ ಪೊಟ್ಟಣಗಳು[ ಕೇವಲ  ಬಣ್ಣಗಳು  ]ಇವನ್ನೆಲ್ಲಾ ಎಲ್ಲರೂ ನೋಡಿಲ್ಲವೇ? ಮಂಗಳ ದ್ರವ್ಯಗಳ ಪಾವಿತ್ರ್ಯವಾಗಲೀ ಸದುಪಯೋಗವಾಗಲೀ ಅಲ್ಲಿದೆಯೇ? ಕೆಲವರು " ನಮ್ಮ ಮನೆಯಲ್ಲಿ ಇದನ್ನೆಲ್ಲಾ ಸದುಪಯೋಗವಾಗುವಂತೆಯೇ ಹಬ್ಬದ ಆಚರಣೆ ಮಾಡುತ್ತೇವೆಂದು ಬೊಗಳೆ ಬಿಡಬಹುದು. ಆದರೆ ನಾನು ಪ್ರತೀ ವರ್ಷ ಹತ್ತಾರು ಮನೆಗಳಲ್ಲಿ ನೂರಾರು ಮಹಿಳೆಯರು ಮಂಗಳ ದ್ರವ್ಯಗಳ ಪಾವಿತ್ರ್ಯ ಅರಿಯದೆ ಮಕ್ಕಳಾಟದಂತೆ ಕುರುಡಾಗಿ ಆಚರಿಸುವುದನ್ನು ಕಂಡು ತಿಳುವಳಿಕೆ ಹೇಳಿ ಅದಕ್ಕೆ ಬೆಲೆ ಸಿಗದಿದ್ದಾಗ   ನೊಂದು  ಕೊಂಡಿದ್ದೇನೆ. ಹೀಗಾದರೂ ನಾಲ್ಕು ಜನರಿಗೆ ತಿಳಿಯಲೆಂದು ಇಲ್ಲಿ ಸೂಕ್ತವೋ ಅಸೂಕ್ತವೋ ವಿಚಾರವನ್ನು ಹರಿಬಿಟ್ಟಿದ್ದೇನೆ.

ಅಂತಿಮವಾಗಿ ನನ್ನ ಅನಿಸಿಕೆ: ಸಮಾಜದ ಬಗ್ಗೆ /ಭಗವಂತನ ಬಗ್ಗೆ ಶ್ರದ್ಧೆ ಇರುವಂತವರು ಸಾಧ್ಯವಾದಷ್ಟೂ ಧಾರ್ಮಿಕ ಆಚರಣೆಯ ಹೆಸರಲ್ಲಿ ನಡೆಯುವ ಮಕ್ಕಳಾಟವನ್ನು ಆಚರಿಸುವಂತವರಿಗೆ ಮನದಟ್ಟು ಮಾಡಲು ಪ್ರಯತ್ನಿಸಬೇಕು. ಆದರೆ ನಾನು ಭಾರೀ ದೊಡ್ದವನೆಂಬ ಅಹಂ ಇರಬಾರದು ಅಷ್ಟೆ. ಇಷ್ಟಾದರೂ ಹಲವಾರು ಆಚರಣೆಗಳ ಒಳಮರ್ಮ ನಮಗೆ ಅರಿವಾಗದಿರಬಹುದು.ನಾವು ಕೆಲವೆಡೆ ಸೋಲಲೂ ಬಹುದು. 
-ಹರಿಹರಪುರ ಶ್ರೀಧರ್ 


4 comments:

  1. ನನ್ನ ಚರ್ಚೆ ಉದ್ದವಾಯ್ತು. ಲೇಖನದೊಟ್ಟಿಗೆ ಸೇರಿಸಿರುವೆ.

    ReplyDelete
  2. ಸುಂದರ ವಿಚಾರ, ಶ್ರೀಧರ್. ವಿಗ್ರಹಾರಾಧನೆ ಕುರಿತ ಚರ್ಚೆಗೆ ದಯಾನಂದ ಸರಸ್ವತಿಯವರ ಉಲ್ಲೇಖ ನಿಮಿತ್ತವಾಗಬಹುದಷ್ಟೆ. ಈ ಚರ್ಚೆ ಆರ್ಯಸಮಾಜ ಪ್ರಾರಂಭಕ್ಕೆ ಪೂರ್ವದಲ್ಲೂ ನಡೆದಿತ್ತು, ಈಗಲೂ ನಡೆದಿದೆ, ಮುಂದೆಯೂ ಇರುವುದು - ಜಿಜ್ಞಾಸುಗಳು ಇರುವವರೆಗೂ.ಕೆಲವು ಅರ್ಥಪೂರ್ಣ ಆಚರಣೆಗಳೂ ಕುರುಡು ಸಂಪ್ರದಾಯಗಳಾಗಿ ಮಾರ್ಪಡುವುದು ದುರಂತ!

    ReplyDelete
  3. ನನ್ನದು ದೇವರೊ೦ದಿಗೆ ವಿಚಿತ್ರವಾದ ಸ೦ಬ೦ಧ ಅಲ್ಲದೆ ನಾನು ಮೂತ್ರಿ ಪೂಜೆಯನ್ನು ಮಾಡುವವನು.. ನನ್ನ ಪ್ರಕಾರ ದೇವರು ಒ೦ದು ಪರಮೋಚ್ಛ ಶಕ್ತಿ! ನಮಗೆ ನಿರಾಕಾರನಾಗಿ ದೇವರನ್ನು ಕಲ್ಪಿಸಲು ಸಾಧ್ಯವಿಲ್ಲ. ಒ೦ದು ರೂಪ ನಮ್ಮ ಧ್ಯಾನಕ್ಕೆ ಬೇಕು.. ಅ೦ತೆಯೇ ಅದರಿ೦ದ ಫಲವನ್ನೂ ಪಡೆದಿದ್ದೇನೆ. ನಾನು ಅತ್ಯ೦ತ ತುರ್ತಾಗಿ ಕಛೇರಿಗೆ ಹೋಗಬೇಕಾದಲ್ಲಿ ಸ೦ಕ್ಷಿಪ್ತವಾಗಿ ಪೂಜೆ ಮಾಡಿ, ಬ್ರಹ್ಮಾರ್ಪಣ ನೀಡುವಾಗ ಅವಳಿಗೆ ಹೇಳುತ್ತೇನೆ. “ ಈ ದಿನ ಭಾರೀ ಗಡಿಬಿಡಿಯಾಯಿತು.. ನಾಳೆ ವಿಶದವಾಗಿ ಪೂಜೆ ಮಾಡ್ತೇನೆ.. ಬೇಸರ ಬೇಡ“ ನನ್ನದು ಮೊದಲಿನಿ೦ದಲೂ ದೇವರೊ೦ದಿಗಿನ ಪ್ರೀತಿ ಇ೦ಥದ್ದೇ! ಶ್ರೀಮಾತೆಯವರನ್ನು ನನ್ನ ತಾಯಿ ಎ೦ದೇ ಸ೦ಬೋಧಿಸುತ್ತಾ.. ಕೆಲಸಕಾರ್ಯಗಳಲ್ಲಿ ಮೇಲಾಧಿಕಾರಿಗಳು ತೀರಾ ವ್ಯತಿರಿಕ್ತವಾಗಿ ನಡೆದುಕೊ೦ಡಾಗಲೂ ನಾನೂ ಮಾಡುವುದಿಷ್ಟೇ.. ಅವಳ ಹತ್ತಿರ ಹೋಗಿ ನೋಡಿದೆಯ ನಿನ್ನ ಮಗನಿಗೆ ಹೇಗೆ ಬೈದರು!“ ನನಗೆ ದೇವರು ನಿರಾಕಾರನೋ ಸಾಕಾರನೋ ಅಗತ್ಯವಿಲ್ಲ.. ನನಗೆ ದೇವರು ಮುಖ್ಯ.. ನಾನು ಮೂರ್ತಿ ಪೂಜಾ ವಿರೋಧಕರನ್ನು ನಿ೦ದಿಸಲಾರೆ.. ನಮ್ಮ ಯಾವುದೇ ನೀತಿಗಳು ಮತ್ತೊಬ್ಬರನ್ಮ್ನು ದಾರಿ ತಪ್ಪಿಸುವ೦ತಿರಬಾರದು.. ಅವರಲ್ಲಿ ದ್ವ೦ದ್ವ ಹುಟ್ಟಿಸುವ೦ತಿರಬಾರದು! ನಮ್ಮದು ನಮಗೆ ..ಅವರದ್ದು ಅವರಿಗೆ.. ಭಗವದ್ಗೀತೆಯಲ್ಲಿಯೇ ಕೃಷ್ಣನೇ ಹೇಳುವುದಿಲ್ಲವೇ? ನನ್ನನ್ನು ಯಾವರೀತಿ ನೋಡಬೇಕೆ೦ದು ಬಯಸುವಿರೋ ಅದೇ ರೀತಿಯಲ್ಲಿ ನಾನು ನಿಮಗೆ ದರ್ಶನವೀಯುತ್ತೇನೆ! ಇಷ್ಟು ಸ್ಪಷ್ಟತೆ ಇರುವಾಗ ಈ ಎಲ್ಲಾ ದ್ವ೦ದ್ವಗಳು ಏಕೆ? ಮೂರ್ತಿ ಪೂಜೆ ಮಾಡುವವರು ಮಾಡಲಿ.. ಮಾಡದಿದ್ದವರು ಮಾಡುವುದು ಬೇಡ.. ಅವರವರ ನ೦ಬಿಕೆಯಲ್ಲಿಯೇ ದೇವರನ್ನು ಕಾಣುವುದಲ್ಲವೇ? ಮೂಲ ಚಿನ್ನದಿ೦ದ ಹೇಗೆ ಹಲವು ರೀತಿಯ ಆಭರಣಗಳನ್ನು ಹಾಗೂ ಮೂಲ ಜೇಡಿಮಣ್ಣಿನಿ೯ದ ಹಲವು ರೀತಿಯ ಮಣ್ಣಿನ ಮಡಕೆಗಳನ್ನು ಉತ್ಪಾದಿಸಲಾಗುವುದೋ ಹಾಗೆಯೇ ಮೂಲ ಇಬ್ಬರದೂ “ದೇವರು“ ಎ೦ಬ ನ೦ಬಿಕೆಯೇ ಅಲ್ಲವೇ? ಇಬ್ಬರೂ ದೇವರನ್ನು ಭಜಿಸುವವರೇ ಅಲ್ಲವೇ?
    “ಸೀಮಿತ ವ್ಯಾಪ್ತಿಯಲ್ಲಿ ದೇವರು“ ಎನ್ನುವ ಪದ ಪ್ರಯೋಗದಲ್ಲಿ ದೇವರ ವ್ಯಾಪ್ತಿ ಏನು? ಎ೦ಬ ಪ್ರಶ್ನೆ ಪುನ: ಉಧ್ಬವಿಸುತ್ತದೆ!! ಹಾಗಿದ್ದರೆ ದೇವರ ವ್ಯಾಪ್ತಿ ಏನು?

    ReplyDelete
  4. ದೇವರು ನಿರಾಕಾರನೂ ಹೌದು ಸಾಕಾರನೂ ಹೌದು ಮತ್ತೆಲ್ಲವೂ ಹೌದು !. ಇದು ನನ್ನ ಭಾವ. ಅವರವರ ಭಾವಕ್ಕೆ !. ದೇವರನ್ನು ಕೇವಲ ನಿರಾಕಾರ ಎಂದು ಪ್ರತಿಪಾದಿಸುವವರೇ ಅವನು ಸರ್ವಾಂತರ್ಯಾಮಿ ಎಂದೂ ಹೇಳುತ್ತಾರೆ. ಹಾಗಾದರೆ ವಿಗ್ರಹವನ್ನು ಬಿಟ್ಟು ಬೇರೆ ಎಲ್ಲೆಡೆಯೂ ಆತನು ಸರ್ವಾಂತರ್ಯಾಮಿಯೇ ?!. ಈ ರೀತಿ ನಿರಾಕಾರ, ಸಾಕಾರ ಇತ್ಯಾದಿಗಳಾಗಿ ಸೀಮಿತ ಮಾಡಿಕೊಂಡು ದ್ವಂದ್ವಕ್ಕೆ ಬೀಳುವದಕ್ಕಿಂತಲೂ ಎಲ್ಲವನ್ನು ಒಳಗೊಳ್ಳುವಿಕೆ ಮತ್ತು ಎಲ್ಲದರಲ್ಲೂ ಪರಮಾತ್ಮನ ಸ್ವರೂಪವನ್ನು ಕಾಣುವಿಕೆಯೇ ಉತ್ತಮವಾದುದು ಮತ್ತು ವಿವೇಕ ಚೂಡಾಮಣಿಯ ಇಂಗಿತವೂ ಅದೆ.

    "ಮೂರ್ತಿ ಪೂಜೆ ಮಾಡುವವರು ಮಾಡಲಿ.. ಮಾಡದಿದ್ದವರು ಮಾಡುವುದು
    ಬೇಡ.. ಅವರವರ ನ೦ಬಿಕೆಯಲ್ಲಿಯೇ ದೇವರನ್ನು ಕಾಣುವುದಲ್ಲವೇ?"

    ನಿಮ್ಮ ಮಾತು ಒಪ್ಪುವಂತಹುದು. ನನ್ನ ವೈಯಕ್ತಿಕ ಅಭಿಪ್ರಯವೂ ಇದೇ ಆಗಿದೆ. ವೇದಾಂತಿಗಳಿಗೆ ಇರಬೇಕಾದ ಮೂಲ ಗುಣವೇ ’ಅನಿರಾಕರಣ’. ಈ ನಿಟ್ಟಿನಲ್ಲಿ ವಿವೇಕ ಚೂಡಾಮಣಿಯಲ್ಲಿ ’ಆ’ ಉದಾಹರಣೆಯನ್ನು ಕೊಡಬೇಕಾಯಿತು.

    ReplyDelete