Pages

Tuesday, February 14, 2012

ಅಹಂಕಾರ



                   ಒಂದು ಬೆಟ್ಟದ ಮೇಲೆ ಪುರಾತನ ಕಾಲದ 3 ಆಶ್ರಮಗಳಿದ್ದವು.  ಇದನ್ನು  ಮಠಗಳೆಂದು ಕರೆಯುತ್ತಿದ್ದರು. ಈ ಮಠಗಳ  ಮುಖ್ಯಸ್ಥರುಗಳು ಯಾವಾಗಲಾದರೊಮ್ಮೆ ಒಟ್ಟಿಗೆ ಸೇರುತ್ತಿದ್ದರು. ಒಮ್ಮೆ ಹೀಗೆ ಸೇರಿದಾಗ ಉಭಯಕುಶಲೋಪರಿ ಆದನಂತರ ಪ್ರಾಸಂಗಿಕವಾಗಿ ತಮ್ಮ ತಮ್ಮ ಮಠಗಳ ಬಗ್ಗೆ ಮಾತನಾಡಲು ಆರಂಭಿಸಿದರು.  ಒಬ್ಬ   ಮಠಾಧಿಪತಿ  " ನಿಮ್ಮ ಮಠ ಸುಂದರವಾದ ಉತ್ತಮವಾದ ಮಠ. ಆದರೆ, ನಮ್ಮ ಮಠದ ವ್ರತ,ನಿಯಮ ಮತ್ತು ಕಠಿಣ ಬದ್ಧತೆಯಲ್ಲಿ ನೀವು ನಮ್ಮ ಮಠವನ್ನು ಸರಿಗಟ್ಟಲಾರಿರಿ." ಎಂದು ಸ್ವಯಂ ಪ್ರತಿಷ್ಠೆಯಲ್ಲಿ ಹೇಳಿದರು.  ಇದನ್ನು ಕೇಳಿಸಿಕೊಂಡ  ಮತ್ತೊಬ್ಬ  ಮಠಾಧಿಪತಿ         "ಹೌದು, ನೀವು ಹೇಳಿದ್ದು ಸರಿಯೇ. ನಿಮ್ಮ ಮಠದ ಬಗ್ಗೆ ನಮಗೆ ಚನ್ನಾಗಿ ಗೊತ್ತು. ನಿಮ್ಮ ವ್ರತ, ನಿಯಮ ಮತ್ತು ಕಠಿಣ ಬದ್ಧತೆಯ ವಿಚಾರ ಪ್ರಶಂಸನೀಯ ಮತ್ತು ಉತ್ಕೃಷ್ಟ.  ಆದರೂ, ಕಲಿಕೆಯ ವಿಚಾರ ಬಂದರೆ ನಮ್ಮ ಮಠಕ್ಕೆ ಯಾವ ಹೋಲಿಕೆಯನ್ನು ಮಾಡಲಾಗದು. ನಮ್ಮ ಮಠದಲ್ಲಿ ಇರುವಷ್ಟು ಶಾಸ್ತ್ರಾಧ್ಯಯನ ಆಚಾರ್ಯರು ಮತ್ತು ಪಂಡಿತರು ಬೇರೆ ಯಾವ ಮಠದಲ್ಲೂ ಇಲ್ಲವೆಂಬ ವಿಚಾರ ನಿಮಗೂ ತಿಳಿದಿರಬೇಕಲ್ಲ!" ಎಂದು ಹಮ್ಮಿನಿಂದ ಹೇಳಿಕೊಂಡರು.   ಈ ಎಲ್ಲ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಮಠಾಧಿಪತಿ " ನೀವಿಬ್ಬರು ಸರಿಯೇ. ನಿಮ್ಮ ಮಠದ  ವ್ರತ, ನಿಯಮ ಮತ್ತು ಇವರ ಮಠದ  ಶಾಸ್ತ್ರಾಧ್ಯಯನ ಆಚಾರ್ಯರುಗಳ ಬಗ್ಗೆ  ಯಾರೂ ಮಾತಾಡುವ ಹಾಗೆ ಇಲ್ಲ.  ಆದರೂ, ನಮ್ಮ ಮಠದಲ್ಲಿರುವ ಯಾರೊಬ್ಬರಲ್ಲೂ ಸ್ವಪ್ರತಿಷ್ಠೆ ಇಲ್ಲ. ನಮ್ರತೆ, ವಿನೀತ ಮತ್ತು ತಗ್ಗಿ ಬಗ್ಗಿ ನಡೆಯುವ ನಾವುಗಳು  ಉನ್ನತ ಸ್ತಾನದಲ್ಲಿ ಇದ್ದೇವೆ. ಈ ಗುಣಗಳನ್ನು ನಿಮ್ಮ ಮಠದಲ್ಲಿ ಕಾಣಸಿಗುವುದಿಲ್ಲ.  ಇದನ್ನು ನೀವು ಒಪ್ಪುತ್ತಿರ ಅಲ್ಲವೇ?"  ಎಂದು ಅಹಂನಿಂದ ಹೇಳಿದರು.ಮೊದಲು ಹೇಳಿದ ಇಬ್ಬರು ಮಠಾಧಿಪತಿಗಳ ಹೇಳಿಕೆಯಲ್ಲಿ ಅಹಂಕಾರದ ಛಾಯೆ ಇರುವುದು ಅವರ ಮಾತಿನಲ್ಲಿ  ಕಾಣುತ್ತದೆ . ಆದರೆ ಮುರನೆಯ ಮಠಾಧಿಪತಿಯ ಹೇಳಿಕೆಯು ಎಂತಹ ವಿರೋಧಾಭಾಸ. ಸಾತ್ವಿಕ ಗುಣ ಇದೆ ಎನ್ನುವ ವಿಚಾರ ಕೂಡ ಅಹಂಕಾರದಲ್ಲಿದೆ.

                  ಇದನ್ನು, ಕೆಲವರು ಸಾತ್ವಿಕ ಅಹಂಕಾರ ಎನ್ನುತ್ತಾರೆ. ಇಲ್ಲೇ ವಿಚಾರಬೇಧ ಇರುವುದು. ಅಹಂಕಾರದಲ್ಲಿ ಸಾತ್ವಿಕ ಮತ್ತು ಸಾಮಾನ್ಯ ಎಂಬುದಿಲ್ಲ.  ಅಹಂಕಾರ  ಅಹಂಕಾರವೇ! ಹಣವಿದೆ, ರಾಜಕೀಯದಲ್ಲಿ ಬಲವಿದೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳಿವೆ,  ಸೌಂದರ್ಯವಿದೆ, ವಿದ್ಯೆಬುದ್ಧಿ  ಇದೆ, ಉತ್ತಮ ದೇಹಧಾಡ್ಯತೆ  ಇದೆ, ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಇದೆ, ದೊಡ್ಡ ಸಂತನಾಗಿದ್ದೇನೆ,  ಹೀಗೆ ಇನ್ನು ಹಲವಾರು ರೀತಿಯ  ವಿಂಗಡಣೆಗಳು  ಅಹಂಕಾರದ ಬೀಜಗಳು.  ಈ  'ನಾನು ನನ್ನದು ' ಎಂಬ ಹಮ್ಮು ಒಮ್ಮೆ ಮನದಾಳದಲ್ಲಿ ಹೊಕ್ಕಿದರೆ ಸಾಕು, ಒಂದು ಚಿಕ್ಕ ಬೀಜ ಹೆಮ್ಮರವಾಗಿ ಬೆಳೆದು ಬೇಕೆಂದ ಕಡೆಗೆಲ್ಲ ತನ್ನ ಬಾಹುಳ್ಯವನ್ನು ಚಾಚಿಕೊಂಡು ಬಿಡುತ್ತದೆ. ಇದೊಂದು ರೀತಿಯ ರಕ್ತಬೀಜಾಸುರನ ಹಾಗೆ!  ಈ ಅಹಂಕಾರವು ಯಾವುದೇ ದಿಕ್ಕಿನಿಂದ ಬಂದು ನಮ್ಮನ್ನು ಆವರಿಸಿಬಿಡಬಹುದು. ಅಹಂಕಾರಕ್ಕೆ ಇಂತಹುದೇ ಒಂದು ನಿರ್ಧಿಷ್ಟ ದಾರಿಯಿಲ್ಲ. ಇದು ಯಾವುದೇ ಸನ್ನಿವೇಶವನ್ನು ತನ್ನದಾಗಿಸಿಕೊಂಡು ಗಟ್ಟಿ ಬೇರುಗಳನ್ನು  ಬಿಡಬಲ್ಲದು.

                  ಸಾತ್ವಿಕತೆ ಉದಯವಾಗುವುದು ಅಹಂಕಾರದ ಮರಣದ ನಂತರ. ಆಚಾರ್ಯ ರಜನೀಷರು ಹೇಳುತ್ತಾರೆ. "ಸಾತ್ವಿಕತೆ ಇದ್ದಲ್ಲಿ ಅಹಂಕಾರ ಇರುವುದಿಲ್ಲ.  ಅಹಂಕಾರ ಇರುವಲ್ಲಿ ಸಾತ್ವಿಕತೆಗೆ ಜಾಗವೇ ಇಲ್ಲ. ಒಂದೇ ಜಾಗದಲ್ಲಿ ಎರಡು ಭಾವಗಳು ಇರಲು ಹೇಗೆ ತಾನೇ ಸಾಧ್ಯ?"    ತಮಸ್ಸು, ರಜಸ್ಸು ಮುಂತಾದ ಪರಿಕ್ರಮಗಳೆಲ್ಲ ಮುಗಿದನಂತರ ಸಾತ್ವಿಕತೆ ಕಾಣುತ್ತದೆ.  ಸಾತ್ವಿಕ ನಾಗಿ ಉಳಿಯಲು ಆಹಾರ ವಿಹಾರಗಳ ಜೊತೆಗೆ ನಡೆನುಡಿಗಳಲ್ಲಿ  ಕ್ಷಣ ಕ್ಷಣದಲ್ಲೂ ಎಚ್ಚರನಾಗಿರಬೇಕು. ಶ್ರೀ ಶಂಕರರು ಹೇಳುತ್ತಾರೆ " ಸಾಧಕನು, ಅಧ್ಯಾತ್ಮದಲ್ಲಿ  ಮೇಲೆ ಹೋದಂತ್ತೆಲ್ಲ ದಾರಿ ಕಿರಿದು ಮತ್ತು  ಜಾರಿಕೆಯದು. ಒಮ್ಮೆ ಎಚ್ಚರ ತಪ್ಪಿದರೆ ಸಾಕು ನೇರ ಪ್ರಪಾತವೆ!  ಆದ್ದರಿಂದ ಸಾಧಕನು ತನ್ನೆಲ್ಲ ಮೋಹಭಾವದ ಹೊರೆಯನ್ನು ಕಳಚುತ್ತ ಹೋದರೆ ಭಾರ ಕಡಿಮೆಯಾಗುತ್ತದೆ.  ಹಗುರವಾದಂತೆ ಮೇಲೇರುವುದು ಸುಲಭ".   ಇದನ್ನು ವಿವರಿಸಲು ಶಂಕರರು ಇನ್ನೊಂದು ಉದಾಹರಣೆ ಕೊಡುತ್ತಾರೆ "ಬೆಟ್ಟದ ಮೇಲೆ ನಿಂತು ಮಗು ಚಂಡಿನ  ಆಟ ಅಡುತ್ತಿರುತ್ತದೆ.  ಬಹಳ ಜಾಗರೂಕತೆಯಿಂದ ಆಡುತ್ತದೆ. ಏಕೆಂದರೆ, ಮಗುವಿಗೆ ಗೊತ್ತು,  ಒಮ್ಮೆ ತಪ್ಪು ಮಾಡಿದರೆ ಚಂಡು ಒಂದೇ ಕ್ಷಣದಲ್ಲಿ ಕೆಳಕ್ಕೆ ಬಿದ್ದು ಬಿಡುತ್ತದೆ."  ಹೌದು, ಸಾಧಕನು ಅಹಂಕಾರಕ್ಕೆ ವಶನಾದರೆ ಸತ್ವದ  ಬದಲಿಗೆ ಅಹಂಕಾರ ವೃದ್ಧಿಯಾಗುತ್ತದೆ. ಸತ್ವಗುಣ ಬೆಳೆದಿದೆಯೆಂಬ ಅಹಂಕಾರಕ್ಕೆ ಮೊದಲು ಬೀಳುತ್ತಾನೆ.    "ಅಹಂಕಾರ ಉದಯವಾಗಿದ್ದು ಎಲ್ಲಿಂದ   ಎಂಬುದನ್ನು ಮೊದಲು ಪ್ರಶ್ನೆ ಮಾಡು. ನಾನು ಎಂಬುದೇ ಅಹಂಕಾರದ ಬೀಜ. ಈ  'ನಾನು'  ದೇಹವೋ? ಆತ್ಮವೋ? ಎಂಬುದನ್ನು ವಿಚಾರಮಾಡು. " ಎನ್ನುತ್ತಾರೆ ಭಗವಾನ್ ರಮಣರು.

                  "ಅಹಂಕಾರದ ಮುಕ್ತಿಗಾಗಿ ಬಯಸುವವನು ವರ್ತಮಾನದಲ್ಲಿ ಬದುಕಲು ಪ್ರಾರಂಭಿಸಬೇಕು.  ಅವನಿಗೆ ನಿನ್ನೆಗಳು ಸತ್ತಿವೆ, ನಾಳೆಗಳು ಬೇಕಾಗಿಲ್ಲ.  ಇಂದಿಗೆ ಬದುಕುವವನಿಗೆ ಈ ನಾಳೆಗಳು ಅನಿವಾರ್ಯವಲ್ಲ.  ಇಂದಿಗೆ ಬದುಕಲು ಪ್ರಾರಂಭ ಮಾಡಿದಾಗ ಬೇಕುಗಳು ಕಡಿಮೆಯಾಗುತ್ತವೆ.  ಈ ಬೇಕುಗಳೇ ನಾಳೆಯನ್ನು ಸೃಷ್ಟಿ ಮಾಡುವುದು". ಎನುತ್ತಾರೆ ಡಿ ವಿ ಜಿ .
" ಅಹಂಕಾರ ಖಂಡಿತವಾಗಿಯೂ ನಿನ್ನ ಮಿತ್ರನಲ್ಲ,  ಎಂದಿಗೂ ಅವನು ನಿನ್ನ ಶತ್ರುವೇ! ಈ ಶತ್ರುವನ್ನು  ಬೇರು ಸಮೇತ ಕಿತ್ತುಬಿಡು. ಇದು ವಾಸಿಯಾಗುವ  ರೋಗವಲ್ಲ, ಇದಕ್ಕೆ ಯಾವ ಔಷಧಿಯು ಇಲ್ಲ.   ಶಸ್ತ್ರ ಚಿಕಿತ್ಸೆಯೇ ಆಗಬೇಕು. ಮನದಾಳದಿಂದ ಕಿತ್ತುಬಿಡು." ಎನ್ನುತ್ತಾರೆ ಆಚಾರ್ಯ ರಜನೀಶರು.

           ತಿಮ್ಮಗುರು ಹೀಗೆ ಹೇಳುತ್ತಾರೆ.

            ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ|  ಭವಿಷಿಯವ ಚಿಂತಿಸದೆ ಬದುಕ ನೂಕುತಿರು||
            ವಿವರಗಳ ಜೋಡಿಸುವ ಯಜಮಾನ ಬೇರಿಹನು|    ಸವೆಸು ನೀಂ ಜನುಮವನು ಮಂಕುತಿಮ್ಮ||  ೬೮೨ ||

                  ಈ ಕ್ಷಣವೇ ಅತ್ಯಂತ ಮದುರ. ಭಗವಂತ ಈ ಕ್ಷಣದಲ್ಲಿ ಏನೇನು ಕರುಣಿಸಿದ್ದಾನೋ ಅದು ಮಾತ್ರ ನನ್ನ ಪಾಲಿನ ಭಿಕ್ಷೆ, ಇದನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುವ, ಅಹಂಕಾರದಿಂದ ಮುಕ್ತನಾಗಿ ದಿನನಿತ್ಯದಲ್ಲಿ  ಬದುಕುವ ಮನಸು ನೀಡಿ ಕರುಣಿಸೋ ಎಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ. 
                   
ಹೆಚ್ ಎನ್ ಪ್ರಕಾಶ್ 
--

11 comments:

  1. [ಭಗವಂತ ಈ ಕ್ಷಣದಲ್ಲಿ ಏನೇನು ಕರುಣಿಸಿದ್ದಾನೋ ಅದು ಮಾತ್ರ ನನ್ನ ಪಾಲಿನ ಭಿಕ್ಷೆ, ಇದನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುವ ಮನಸು ಕರುಣಿಸೋ ಎಂದು ಭಗವಂತನಲ್ಲಿ ಅನನ್ಯ ಪ್ರಾರ್ಥನೆ]

    ನನ್ನದೂ ಅದೇ ಪ್ರಾರ್ಥನೆ.

    ReplyDelete
  2. ನಮಸ್ತೆ
    ವಿಚಾರ ಚೆನ್ನಾಗಿದೆ ಆದರೆ ನಾವು ಅದರಂತೆ ನಡೆದುಕೊಳ್ಳಲು ನಮ್ಮಲ್ಲಿರುವ ಅಹಂ ಬಿಡುತ್ತದೆಯೇ? ನಮಗೆ ಸಿಗುವ ಪ್ರಾಮುಖ್ಯತೆ ಸ್ವಲ್ಪ ಕಡಿಮೆಯಾದರೂ ನಮ್ಮ ಮನಸ್ಸಿನಲ್ಲಾಗುವ ತಳಮಳಗಳನ್ನು ಹೇಳಲಾಗುತ್ತದೆಯೇ? ನಾವೇನಾದರೂ ಇದರಿಂದ ಹೊರತಾಗಿರುವುದು ಸಾಧ್ಯವಾದರೆ ಅದ್ಭುತವೇ ಸರಿ. ಮಹಾತ್ಮರೆಲ್ಲ ಹೇಳಿರುವುದು ಸರಿ ನಾವು ಓದುತ್ತೇವೆ ಉಪದೇಶ ಮಾಡುತ್ತೇವೆ ಮಾಡುವ ಉಪದೇಶ ಅಕಸ್ಮಾತ್ ಬೇರೆಯವರಿಗೆ ಒಪ್ಪಿಗೆಯಾಗದಿದ್ದರೆ ಅಥವಾ ನಮ್ಮ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅದನ್ನು ತಡೆದುಕೊಳ್ಳುವ ಮನ ಸ್ಥಿತಿ ನಮ್ಮಲ್ಲಿದೆಯೇ? ವಿಚಾರ ಅದ್ಭುತ ನಾವೇನಾದರೂ ಒಮ್ಮೆ ನುಡಿದಂತೆ ನಡೆಯಲು ಪ್ರಾರ೦ಭಿಸಿದರೆ ಅದರಿಂದಾಗುವ ಆನಂದವೇ ಬೇರೆಯಲ್ಲವೆ? ಅನೇಕ ಮನೆಗಳ ಬಗ್ಗೆ ಯೋಚಿಸಿದರೆ ತಿಳಿಯುತ್ತೆ ಅಲ್ಲಿ ಮನಸ್ತಾಪ ಮಾಡಿಕೊಳ್ಳಬಹುದಾದ ಯಾವುದೇ ವಿಚಾರವೂ ಇರುವುದಿಲ್ಲ, ಅತ್ತೆಗೆ ತನ್ನ ಅಹಂ ಮುಖ್ಯ ,ಸೊಸೆಗೆ ಅವಳ ಅಹಂ ಮುಖ್ಯ. ಅಪ್ಪನಿಗೆ ತನ್ನ ವಿಚಾರವೇ ದೊಡ್ಡದು ಮಗನಿಗೆ ಅವನದೇ ಶ್ರೇಷ್ಠ .ಯಾರಾದರೊಬ್ಬರು ಬೇರೆಯವರದ್ದು ಸರಿ ಇರಬಹುದು ಎನ್ನುವ ಉದಾರತೆ ತೋರಿಸಿದರೆ ಅದೇ ಸ್ವರ್ಗ, ಆದರೆ ನಮಗಾರಿಗೂ ಮನೆ ಸ್ವರ್ಗವಾಗಬೇಕಿಲ್ಲವಲ್ಲ ಸ್ವರ್ಗಕ್ಕಾಗಿ, ಅದನ್ನು ಪಡೆಯಲು ಸಾಯಬೇಕು. ಸತ್ತ ಮೇಲೆ ಸಿಗುವ ಆ ಸ್ವರ್ಗಕ್ಕಾಗಿ ಹಾತೊರೆಯುತ್ತ ಜೀವನವನ್ನು ನರಕ ಮಾಡಿಕೊಳ್ಳಲು ಹಪಹಪಿಸುತ್ತೇವೆ. ಎಲ್ಲಾ ಉಪನ್ಯಾಸಕರು ಅಹಂಕಾರವನ್ನು ಬಿಡಬೇಕೆಂದೇ ಬೋಧಿಸುತ್ತಾರೆ ಆದರೆ ಅವರು ನಡೆದುಕೊಳ್ಳುವ ರೀತಿ ಯಾವುದು?
    ಬೆಂಗಳೂರಿನ ಗೋಖಲೆ ಸಭಾಂಗಣದಲ್ಲಿ ನಡೆದ ಒಂದು ಘಟನೆ : ಒಬ್ಬ ಮಹಾನುಭಾವರ ಉಪನ್ಯಾಸ ಸಂಗೀತದ ಮೇಲೆ (ಸಂಗೀತವನ್ನು ಬಹಳವಾಗಿ ಅಭ್ಯಾಸ ಮಾಡಿದವರಲ್ಲ ಎನ್ನುವುದು ಬೇರೆ ಮಾತು) ಸಭಿಕರಲ್ಲಿ ಒಬ್ಬರು (ಶಾಸ್ತ್ರೀಯವಾಗಿ ಅಭ್ಯಸಿಸಿದವರು) ಎದ್ದು ಕೇಳಿದರು ನೀವು ಹೇಳುತ್ತಿರುವ ವಿಷಯ ಸರಿಯಿಲ್ಲ ಅದು ಸತ್ಯಕ್ಕೆ ದೂರವಾಗಿದೆ, ಸಂಗಿತದಲ್ಲಿ ಇರುವುದೇ ಬೇರೆ ಎಂದಾಗ ಉಪನ್ಯಾಸಕರು ಕೊಟ್ಟ ಉತ್ತರ ಏನು ಗೊತ್ತ? ಇಲ್ಲಿ ಕಾರ್ಯಕ್ರಮ ಇರುವುದು ಯಾರಿಗೆ ಸಂಗೀತ ಗೊತ್ತಿಲ್ಲವೋ ಅವರಿಗಾಗಿ ನಿಮ್ಮಂತವರು ಈ ಕಾರ್ಯಕ್ರಮಕ್ಕೆ ಬರುವ ಅಗತ್ಯವಿಲ್ಲ! ತಮ್ಮ ದೋಷವನ್ನು ತಿದ್ದಿಕೊಳ್ಳುವ ಪ್ರಯತ್ನಕ್ಕೆ ಆತ್ಮ ಜ್ಞಾನದ ಬಗ್ಗೆ ಬೋಧನೆ ಮಾಡುವ ವ್ಯಕ್ತಿಯ ಅಹಂಗೆ ಅಡ್ಡಿಯಾಯಿತು ಅದರ ಪರಿಣಾಮ ಇದು. ಅಕಸ್ಮಾತ್ ಅವರು ನಿಜವಾದ ಜ್ಞಾನಿಗಳಾದ್ದರೆ ದೋಷವನ್ನು ತಿದ್ದಿಕೊಳ್ಳಲು ತಿಳಿದವರ ಸಹಾಯ ಪಡೆಯಬಹುದಿತ್ತು ಅಲ್ಲವೇ?
    ಹಾಗಾಗಿ ನಾವು ಒಂದು ಒಳ್ಳೆಯ ವಿಷಯದ ಬಗ್ಗೆ ಚಿಂತನೆ ನಡೆಸುತ್ತಿರುವುದರಿಂದ ಕನಿಷ್ಠ ನಾವುಗಳಾದರು ಇದರಿಂದ ಹೊರ ಬರಬಹುದೇ? ಯೋಚಿಸೋಣ

    ಸತೀಶ

    ReplyDelete
    Replies
    1. ಆತ್ಮಶೋಧನೆ ಮಾಡಿಕೊಳ್ಳುವ ನಿಮ್ಮ ಸಲಹೆ ಒಪ್ಪಿದೆ. ಯಾರೂ ಸರ್ವಜ್ಞ ರಲ್ಲ. ತಿಳಿದುಕೊಳ್ಳಬೇಕಿರುವುದು ಬೆಟ್ಟದಷ್ಟು. ತಿಳಿದಿದೆ ಎಂದು ಕೊಂಡಿರುವುದು ಸಾಸಿವೆಯಷ್ಟು

      Delete
  3. ಆತ್ಮೀಯರೆ,
    ಯಾವುದೆ ವಿಚಾರವಾಗಲಿ ಅದು ಪ್ರಾರಂಭವಾಗಬೆಕಾಗಿರುವುದು ಮೊದಲು ನಮ್ಮಿಂದಲೆ. ಆಗ ಮಾತ್ರ ಹೇಳುವ ಮಾತು ಅರ್ಥಪೂರ್ಣ. ಇಂತಹ ವಿಚಾರಗಳಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವುದು ಪ್ರಯತ್ನದಿಂದಲೆ ಆಗಬೇಕು. ನಡೆದಷ್ಟಿದೆ ನೆಲ, ಕಲಿತಷ್ಟಿದೆ ವಿದ್ಯೆ.
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
    ಪ್ರಕಾಶ್.

    ReplyDelete
  4. This comment has been removed by the author.

    ReplyDelete
  5. ಸನ್ಮಾನ್ಯ ಪ್ರಕಾಶರೇ,

    ಮಠಾಧಿಪತಿಗಳ ಬಗ್ಗೆ ತಾವು ಹೇಳಿದ ಕಥೆ ನೋಡಿ ಸ್ವಲ್ಪ ಜಾಸ್ತೀನೇ ನಗು ಬಂತು! ಇವತ್ತಿಗೂ ಮಠಾಧಿಪತಿಗಳಲ್ಲಿ ಇದೇ ರೀತಿ ಭಿನ್ನ-ಭೇದಭಾವ ಇದ್ದೇ ಇದೆ, ಇನ್ನೂ ಶತಮಾನ ಕಳೆದರೂ ಅದು ಹೋಗಲಾರದು ಎನಿಸುತ್ತದೆ. ಹಿಂದಕ್ಕೆ ಆದಿಶಂಕರರು ಆಮ್ನಾಯ ಮಠಗಳನ್ನು ಸ್ಥಾಪಿಸುವ ಮೊದಲು ಮಠಗಳೇ ಇರಲಿಲ್ಲ. ಸನ್ಯಾಸಿಗಳು ಧರ್ಮರಕ್ಷಣೆಗಾಗಿ ರಾಜರುಗಳಿಗೂ ಪ್ರಜೆಗಳಿಗೂ ಸಲಹೆ ನೀಡಿ ಸನ್ಮಾರ್ಗ ಬೋಧಿಸಲಿ ಎಂಬ ಸದಾಶಯದಿಂದ ಮೊದಲಾಗಿ ರಾಜಸನ್ಯಾಸಕ್ಕೆ ’ಮಠಗಳು’ ಎಂಬ ಚೌಕಟ್ಟನ್ನು ಅವರು ನೀಡಿದರು. ಅಲ್ಲಿಂದಾಚೆ ಕಾಲಕ್ರಮೇಣ ಎಷ್ಟೋ ಲಕ್ಷೋಪಲಕ್ಷ ಮಠಗಳಾದವು ಅದು ಬೇರೇ ಪ್ರಶ್ನೆ. ಅಂದಿನ ಆ ಕಠಿಣವಾದ, ದುರ್ಗಮವಾದ. ಕಡಿದಾದ ಹಾದಿಗಳಲ್ಲಿ ಶಂಕರರು ಕಾಲ್ನಡಿಗೆಯಲ್ಲೇ ಚಲಿಸಿದರು, ದೇಶದುದ್ದಗಲ ಸಂಚರಿಸಿದರು! ಇಂದಿನ ಮಠಾಧಿಪತಿಗಳಿಗೆ ಜಗತ್ತಿನ ಅತ್ಯುಕೃಷ್ಟ ಏಸಿ ಕಾರೇ ಆಗಬೇಕು ! ಒಬ್ಬ ತಕ್ಕೊಂಡ ಅಂತ ಇನ್ನೊಬ್ಬ ಅದಕ್ಕೂ ಹೆಚ್ಚಿನ ಮೌಲ್ಯದ್ದೂ ವ್ಯವಸ್ಥೆ ಉಳ್ಳದ್ದೂ ಆದ ಕಾರು ಕೊಂಡ, ಅದನ್ನು ನೋಡಿ ಇನ್ನೂಬ್ಬ ಮಠಾಧಿಪ ಮತ್ತೇನನ್ನೋ ಕೊಂಡ ! ಹೀಗಾಗಿ ರಾಜವೈಭೋಗದಲ್ಲಿ ತಾವೇನೂ ಕಮ್ಮಿಯಿಲ್ಲವೆಂಬುದರಲ್ಲೇ ಹಲವು ಮಠಾಧಿಪತಿಗಳು ತಲ್ಲೀನರಾಗಿರುವಾಗ ಜನಸಾಮಾನ್ಯನ ಅರಿವಿನ ಮಟ್ಟವನ್ನು ಪ್ರಾಯೋಗಿಕವಾಗಿ ಬದಲಾಯಿಸುವ ನಿಜವಾದ ಆಸಕ್ತಿ ಯಾರಲ್ಲಿದೆ ಎಂಬುದೂ ಕೂಡ ನಮ್ಮ ಮುಂದಿರುವ ಪ್ರಶ್ನೆ.

    ಇನ್ನು ಸನ್ಯಾಸಿಯಾದವರು ಷಟ್ ಶಾಸ್ತ್ರಗಳನ್ನೂ ಅಭ್ಯಾಸಮಾಡಿ ವೇದ-ವೇದಾಂಗಗಳಲ್ಲೂ, ಇತಿಹಾಸ-ಪುರಾಣಗಳಲ್ಲೂ ಪಾರಂಗತರಾಗಬೇಕೆಂಬುದು ಶಂಕರರ ಕಟ್ಟಳೆ.

    ಅಸ್ಮತ್ಪೀಠೇ ಸಮಾರೂಢಃ ಪರಿವ್ರಾಡುಕ್ತ ಲಕ್ಷಣಃ |
    ಅಹಮೇವೇತಿ ವಿಜ್ಞೇಯ ಯಸ್ಯ ದೇವ ಇತಿಶ್ರುತೇ ||

    ತನ್ನ ಪೀಠದಲ್ಲಿ ಕುಳಿತುಕೊಳ್ಳುವ ಪರಿವ್ರಾಜಕ ಲಕ್ಷಣಗಳುಳ್ಳ ವ್ಯಕ್ತಿಯನ್ನು ತಾನೇ ಎಂಬುದಾಗಿ ಪರಿಗಣಿಸಿ ಗೌರವಿಸಿ ಎಂಬುದಾಗಿ ಶಂಕರರು ತಿಳಿಸಿಯೇ ಹೋಗಿದ್ದಾರೆ! ಇಂದಿನ ಹಲವು ಸನ್ಯಾಸಿಗಳಲ್ಲಿ ಆ ಮಟ್ಟದ ಪಾಂಡಿತ್ಯವನ್ನು ಪಡೆದವರು ಬೆರಳೆಣಿಕೆಯಷ್ಟು ! ಶಂಕರರ ಪೀಠಗಳಲ್ಲೇ ಇಷ್ಟಿದ್ದಮೇಲೆ ಮಿಕ್ಕಿದ್ದರ ಬಗ್ಗೆ ತರ್ಕಿಸುವುದನ್ನು ನಿಮ್ಮ ಊಹೆಗೇ ಬಿಡುತ್ತೇನೆ.

    ಕಳೆದೆರಡು ಲೇಖನಗಳಿಂದ ಪ್ರತ್ಯಾಹಾರದ ಬಗ್ಗೇ ಹೆಚ್ಚಿನ ತರ್ಕ ನಡೆಯುತ್ತಿದೆ. ಅರಿಷಡ್ವರ್ಗಗಳನ್ನು ಧನಾತ್ಮಕ ಕ್ರಿಯೆಗಳಿಗೆ ಉಪಯೋಗಿಸಿಕೊಂಡರೆ ಹೇಗೆ ಎಂಬುದು ಇನ್ನೊಂದು ವಾದ! ಅದಲ್ಲದೇ ಪರಮಾತ್ಮನನ್ನು ಹಲವಾರು ದಾರಿಗಳಲ್ಲಿ ಹೋಗಿ ಇಷ್ಟವಾದ ರೀತಿಯಲ್ಲಿ ಕಾಣಬಹುದು ಎಂಬ ಅನಿಸಿಕೆಯೂ ಹಲವರದ್ದಿದೆ. ಹೊಸತನವನ್ನು ಮೈಗೂಡಿಸಿಕೊಳ್ಳುತ್ತಾ ಹೊಸತೇನನ್ನೋ ಕಾಣುವ ಹಂಬಲದಲ್ಲಿ ಸತ್ಯಾನ್ವೇಷಕರಾದ ಹಲವರು ಹಾಗೆ ಮಾಡುವುದಕ್ಕೂ ಮುನ್ನ ಪುಣ್ಯಭೂಮಿ ಭಾರತದ ಪುನರುಜ್ಜೀವನಕ್ಕಾಗಿ ಹಲವು ರೂಪರೇಷೆಗಳನ್ನೂ ಮತ್ತು ಆತ್ಮೋದ್ಧಾರಕ್ಕಾಗಿ ಆಚಾರ-ವಿಚಾರಗಳನ್ನೂ ಬೋಧಿಸಿದ ಶಂಕರರ ತತ್ವಗಳನ್ನೂ ಅವರ ಕೃತಿಗಳನ್ನೂ ಸರಿಯಾಗಿ ಓದದೇ ಯಾ ಅರ್ಥವಿಸಲಾಗದೇ ಎಲ್ಲೋ ಸ್ವಲ್ಪ ಎಡವಿದ್ದಾರೆ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ! ಯಾವುದೇ ಪೂರ್ವಾಗ್ರಹವಿಲ್ಲದೇ ಆಮೂಲಾಗ್ರ ಸಂಶೋಧಿಸಿದಾಗ ಪ್ರತೀ ಹೆಜ್ಜೆಯಲ್ಲಿ ಯಾರೇ ಆದರೂ ಅ-ದ್ವೈತವನ್ನು ಕಾಣಬಹುದಾಗಿದೆ. ಇದು ನಾನು ಅದ್ವೈತ ಸಂಪ್ರದಾಯ ಶರಣನಾಗಿ ಬ್ಲೈಂಡ್ ಫಾಲೋವರ್ ಆಗಿ ಹೇಳುತ್ತಿರುವುದಲ್ಲ. ಯಾವುದನ್ನೇ ಆಗಲಿ, ವೈಜ್ಞಾನಿಕ ನಿಷ್ಕರ್ಷೆ ಇಲ್ಲದೇ ಒಪ್ಪುವ ಮನೋಭಾವ ನನ್ನದಲ್ಲ. ಅದ್ವೈತದ ವಿಷಯವನ್ನು ಹಲವು ಮುತ್ಸದ್ಧಿಗಳ ಜೊತೆ, ಜ್ಞಾನಿಗಳ-ವಿಜ್ಞಾನಿಗಳ ಜೊತೆ ಗಂಟೆಗಳ ಕಾಲ ಕೂತು ಚರ್ಚಿಸಿದ್ದೇನೆ. ಅದ್ವೈತದಲ್ಲಿ ಶಂಕರರು ತಿಳಿಸಿದ ಪರಮೋಚ್ಚ ಗುರಿ ಪಾರಮಾರ್ಥಿಕ ಸಾಧನೆಗೈದ ಮನುಷ್ಯನಿಗೆ ಅತ್ಯಂತ ಸಹಜಪ್ರಾಪ್ತವಾಗಬಹುದಾದ ಅಂಶವಾಗಿದೆ. ಈಗಿರುವ ಅಹಂ ಹೋಗಿ ಆಗ ಬರುವ ಅಹಂ ಬೇರೇಯೇ ಇರುತ್ತದೆ. ಅಲ್ಲೀವರೆಗೂ ನಾವೆಷ್ಟೇ ಪ್ರಯತ್ನಿಸಿದರೂ ಅಹಂ ಕಳೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಎಲ್ಲೋ ಒಂದುಕಡೆ ಎಳ್ಳಿನಷ್ಟಾದರೂ ’ನಾನು’ ಕೂತಿರುತ್ತದೆ. ಕಿಲುಬು ಹಿಡಿದ ಪಾತ್ರೆಯನ್ನು ತಿಕ್ಕಿ ತಿಕ್ಕಿ ತಿಕ್ಕಿ ತೊಳೆದಂತೇ ’ನಾನು’ವನ್ನು ತೊಳೆದುಕೊಳ್ಳಬೇಕಾಗುತ್ತದೆ.

    ದೇವಸ್ಥಾನ/ಮಠ-ಮಂದಿರಗಳಿಗೆ ಚಿಕ್ಕದೇನನ್ನೋ ಕೊಟ್ಟರೆ ಅನೇಕರ ಹೆಸರನ್ನು ದೊಡ್ಡದಾಗಿ ಅದರಮೇಲೆ ಬರೆಸಿರುವುದು ಕಾಣುತ್ತದೆ. ನಿಜವಾದ ದೇಣಿಗೆಯಾದರೆ ಆತ ’ನಾನು’ ವನ್ನು ಬರೆಸದೇ ಎಲೆಮರೆಯ ಕಾಯಿಯಾಗಿ ಅಂತಹ ಸೇವೆ ಸಲ್ಲಿಸಬೇಕಾಗುತ್ತದೆ. ಕೊಟ್ಟದ್ದನ್ನು ಹೆಂಡತಿಗೂ ನಟ ವಿಷ್ಣುವರ್ಧನ್ ಹೇಳಿರಲಿಲ್ಲವಂತೆ ! ಹಾಗೇ ಸಾಧಕನ ಹಂತ ಅಲ್ಲಿಂದಲೇ ಗುರುತಿಸಲ್ಪಡುತ್ತದೆ. ಸನ್ಮಾನಧನವಾಗಿ ತನಗೆ ಬಂದ ಕೋಟಿ ಹಣದಲ್ಲಿ ಬಿಡಿಗಾಸನ್ನೂ ಮುಟ್ಟದೇ ಗೋಖಲೆ ಸಾರ್ವಜನಿಕ ಸಂಸ್ಥೆ ಕಟ್ಟಿದ ಮಹಾತ್ಮ ಡೀವೀಜಿ ಎಲ್ಲೂ ತನ್ನ ಹೆಸರನ್ನು ಹಾಕಿಸಲಿಲ್ಲ! ಇದೆಲ್ಲಾ ಅಹಂ ಕಳೆದುದರ ಉದಾಹರಣೆಯಾಗುತ್ತದೆ.

    ಗೋಮುಖದಲ್ಲಿ ಜನಿಸಿದ ಗಂಗಾ ಶುಭ್ರವಾಗಿದ್ದಾಳೆ, ಹರಿಯುತ್ತಾ ಹರಿಯುತ್ತಾ ಆಕೆ ಹಲವರ ಪಾಪಗಳನ್ನೂ ಪಾಪಕೂಪಗಳನ್ನೂ ತೊಳೆಯುತ್ತಾ ಮಲಿನವಾಗುತ್ತಾಳೆ; ಅದೇ ರೀತಿ ಶಂಕರರ ಮೂಲ ಕೃತಿಗಳು ಗಂಗೆಯಂತೇ ಪವಿತ್ರವಾಗಿ ಸಾಧಕನಿಗೆ ದಾರಿದೀಪಗಳಾಗಿವೆ, ಅನೇಕರು ಅವುಗಳನ್ನು ಮನಬಂದಂತೇ ಅರ್ಥೈಸಿ ಮಲಿನಮಾಡುತ್ತಾರೆ; ಅವರನ್ನೇ ಪ್ರಶ್ನಿಸುವ ಬುದ್ಧಿಮಟ್ಟವನ್ನು ಪ್ರದರ್ಶಿಸುತ್ತಾರೆ! ಎಲ್ಲೀವರೆಗೆ ಮೂಲ ಪಾವಿತ್ರ್ಯತೆಯನ್ನು ಕಾಣಲು ನಮ್ಮಿಂದ ಸಾಧ್ಯವಿಲ್ಲವೋ ಅಲ್ಲೀವರೆಗೂ ಅಹಂ ಒಂದೇ ಅಲ್ಲ ಆರೂ ಅರಿಗಳು ನಮ್ಮನ್ನು ಬಿಟ್ಟುಹೋಗುವುದೂ ಇಲ್ಲ; ಧನಾತ್ಮಕವಾಗಿ ಅವುಗಳ ಉಪಯೋಗ ಸಾಧ್ಯವೂ ಇಲ್ಲ! ಲೇಖನ ಚೆನ್ನಾಗಿ ಬರೆದಿದ್ದೀರಿ, ತಮಗೆ ಧನ್ಯವಾದಗಳು.

    ReplyDelete
  6. ಭಟ್ಟರೇ,
    ನಿಮ್ಮ ಚಿಂತನೆಯನ್ನು ಪ್ರತ್ಯೇಕ ಲೇಖನವಾಗಿಯೇ ಪ್ರಕಟಿಸಬಹುದಿತ್ತು.ಚೆನ್ನಾಗಿದೆ.ಚಿಂತನ-ಮಂಥನ ನಡೆಯುತ್ತಿರಲಿ.ಪ್ರಯೋಜನ ಇದ್ದೇ ಇದೆ.

    ReplyDelete
  7. ಸನ್ಮಾನ್ಯ ವಿ ಆರ್ ಭಟ್ಟರೇ,
    ನಮಸ್ತೆ, ನಿಮ್ಮ ಧೀರ್ಘ ಉತ್ತರಕ್ಕೆ ಧನ್ಯವಾದಗಳು.
    ಪ್ರಕಾಶ್.

    ReplyDelete
  8. ಪ್ರಕಾಶರೇ, ಸುಂದರ ವಿಚಾರ.ಅಹಂಕಾರದ ಕುರಿತು ಒಳ್ಳೆಯ ವಿಶ್ಲೇಷಣೆ. ನಾನು ಹೇಳುವುದೇ, ತಿಳಿದುಕೊಂಡಿರುವುದೇ ಸರಿ ಎಂಬ ವಿಚಾರಿಗಳು ಎಷ್ಟೇ ಪಂಡಿತರಾಗಿದ್ದರೂ ಅವರ ಮಾತು ಎಲ್ಲರಿಗೂ ರುಚಿಸುವುದು ಕಷ್ಟ.ಸಜ್ಜನರ ಸರಳತೆಯಲ್ಲಿ ಅಹಂ ಇರುವುದಿಲ್ಲ. ಅಹಂ ಇರದವರಿಗೆ ಖಂಡಿತ ಮಾನ್ಯತೆ ಸಿಗುತ್ತದೆ.

    ReplyDelete
  9. ನಿಮ್ಮ ವಿಚಾರ ಹಾಗು ಉತ್ತರಗಳು ಎರಡೂ ಚೆನ್ನಾಗಿವೆ.
    ಧನ್ಯವಾದಗಳು
    ಸ್ವರ್ಣಾ

    ReplyDelete
  10. ಆತ್ಮೀಯರೆ,
    ಸರಳತೆಯಲ್ಲಿ ದೈವತ್ವವಿದೆ ಎನ್ನುತ್ತಾರೆ ಹಿರಿಯರು. ಸರಳತೆಯ ಜೊತೆ ನಮ್ರತೆ ಬೆರೆತರೆ ಹಾಲಿಗೆ ಜೇನು ಬೆರತಂತೆ.ಅಂತಹವರ ಒದನಾಟದಲ್ಲಿ ಅಂಕಾರಕ್ಕೆ ಆಸ್ಪದವೆ ಇರುವುದಿಲ್ಲ. ಸತ್ಸಂಗದ ಮಹಿಮೆಯನ್ನು ಶ್ರೀ ರಮಣರು "ಅಹಂಕಾರ ನಾಶ ಮಾದಿಕೊಳ್ಳಲು ಇರುವ ದಾರಿಗಳಲ್ಲಿ ಒಂದು" ಎನ್ನುತ್ತಾರೆ. ಇಲ್ಲಿ ನನಗೆ ಸಿಗುತ್ತಿರುವ ಸತ್ಸಂಗಕ್ಕೆ ನಾನು ಋಣಿ. ಅಡಗಿ ಕುಳಿತಿರುವ ಅಹಂಕಾರ ಒಂದಷ್ಟು ನಶಿಸಿದರೆ ಸಾಕು ಎನ್ನುವ ಪ್ರಯತ್ನ ಸದಾ ಜಾರಿಯಲ್ಲಿದೆ.
    ನಿಮ್ಮೆಲ್ಲರ ಅಭಿಪ್ರಾಯಗಳಿಗೆ ಧನ್ಯವಾದಗಳು.
    ಪ್ರಕಾಶ್

    ReplyDelete