Pages

Sunday, December 1, 2013

ಎಲ್ಲರಿಗಾಗಿ ವೇದ ಪ್ರಥಮ ಭಾಗ

ಕಳೆದ ಒಂದು ವರ್ಷದಿಂದ ಹಾಸನದ ಸ್ಥಳೀಯ ಪತ್ರಿಕೆಯಲ್ಲಿ ಬರೆಯುತ್ತಿದ್ದ "ಎಲ್ಲರಿಗಾಗಿ ವೇದ" ಲೇಖನ ಮಾಲೆಯ ಮೊದಲ ಭಾಗವನ್ನು  ವೇದ ಸುಧೆಯ ಓದುಗರಿಗಾಗಿ ಪ್ರಕಟಿಸಿರುವೆ.


“ಸಾಮಾನ್ಯನಿಂದ ಸಾಮಾನ್ಯರಿಗೆ”

ಕುಸುಮ-೧            

ವಿಷಯ ಪ್ರವೇಶಕ್ಕೆ ಮುಂಚೆ:

 ಆರಂಭದಲ್ಲಿಯೇ ಒಂದು ಮಾತನ್ನು ಓದುಗರಲ್ಲಿ ಸ್ಪಷ್ಟಪಡಿಸಿಬಿಡುವೆ. ಈ ಹೊತ್ತಿಗೆಯ ಉದ್ಧೇಶವೆಂದರೆ “ವೇದ” ಎಂದರೆ  “ಇದು ನಮ್ಮಂತಹ ಸಾಮಾನ್ಯರಿಗಲ್ಲ”! ವೇದವನ್ನು ತಿಳಿಯಲು  ಸಂಸ್ಕೃತದ ಜ್ಞಾನ   ಇರಬೇಕು! ವೇದ ಎಂದರೆ ಪೂಜೆ ಪುನಸ್ಕಾರಕ್ಕಾಗಿ ಇರುವ ಮಂತ್ರಗಳು! ಎಲ್ಲರಿಗೂ   ವೇದವನ್ನು ಓದುವ ಅರ್ಹತೆ ಇಲ್ಲ! ಹೆಂಗಸರು ಓದಬಾರದು! ಯಾವುದೋ ಒಂದು ವರ್ಗದವರು ಮಾತ್ರ ಓದಬೇಕು! ಇತ್ಯಾದಿ,ಇತ್ಯಾದಿ ವಿಚಾರಗಳು ಬಹುಪಾಲು ಜನರಲ್ಲಿ ಸಾಮಾನ್ಯವಾಗಿ ಬೇರೂರಿದೆ. ಅದಕ್ಕೆ ಹಲವಾರು ಕಾರಣಗಳು ಇವೆ .ಕಾರಣಗಳು ಏನೇ ಇರಲಿ, ಈ ಹೊತ್ತಿಗೆಯ  ಉದ್ಧೇಶವೆಂದರೆ ವೇದವೆಂದರೆ ಇದು “ಅಸಾಮಾನ್ಯರಿಗೆ”ಎನ್ನುವ ಭಾವನೆಯನ್ನು ಕಿತ್ತುಹಾಕಿ ಎಲ್ಲಾ ಮಾನವರ ನೆಮ್ಮದಿಯ ಬದುಕಿಗಾಗಿ ಇರುವ ಅರಿವಿನ ಭಂಡಾರ ಎಂಬುದನ್ನು  ಕೆಲವು ವೇದ ಮಂತ್ರವನ್ನು ಆಧರಿಸಿ  ಸರಳವಾದ ಮಾತುಗಳಲ್ಲಿ  ನನ್ನಂತಹ “ಸಾಮಾನ್ಯನಿಂದ ಸಾಮಾನ್ಯರಿಗೆ”  ತಿಳಿಸುವುದೇ ಆಗಿದೆ. ಈ ಹೊತ್ತಿಗೆಯನ್ನು ಓದುವಾಗ ವೇದ ಪಂಡಿತರುಗಳು ಹಲವು  ಭಾಷ್ಯಗಳ ಆಧಾರದಮೇಲೆ  ಒಂದೇ ಮಂತ್ರಕ್ಕೆ ಬೇರೆಯ ಅರ್ಥವನ್ನು ನೀಡುವ ಅವಕಾಶಗಳೂ ಸಹ  ಇದ್ದೇ ಇದೆ. ಆದರೆ ವೇದ ಪಂಡಿತರಲ್ಲಿ ನನ್ನ ಮನವಿ ಏನೆಂದರೆ ವೇದವು ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸಾರ್ವ ಭೌಮ , ಎಂಬುದನ್ನು ವೇದ ಮಂತ್ರಗಳಲ್ಲೇ ನಿರೂಪಿಸಿದೆ. ಆದರೆ ಅದಕ್ಕೆ ಭಾಷ್ಯವನ್ನು ಬರೆಯುವಾಗ ಅಂದಿನ ಸಾಮಾಜಿಕ ಜೀವನಕ್ಕನುಗುಣವಾಗಿ ವೇದಮಂತ್ರವನ್ನು ಅರ್ಥೈಸಿದ್ದಾರೆಂಬುದು ಗಮನದಲ್ಲಿರಬೇಕು.ಆದರೆ ಇಂದಿನ ಕಾಲಘಟ್ಟದಲ್ಲಿ ಯಾಸ್ಕಾಚಾರ್ಯರ  ನಿರುಕ್ತದ ಆಧಾರದಿಂದ ವೇದ ಮಂತ್ರಗಳನ್ನು ಬಿಡಿಸಿಕೊಂಡಾಗ ಮಾತ್ರ  ವೇದವು ಇಂದಿನ ಕಾಲಕ್ಕೂ , ಮುಂದಿನ ಕಾಲಘಟ್ಟಕ್ಕೂ ಸಹ ಹೇಗೆ ಉಪಯುಕ್ತ ಎಂಬ ಅರಿವು ಮೂಡುತ್ತದೆ.

ಈಗಾಗಲೇ ನಿರುಕ್ತದ ಆಧಾರದಲ್ಲಿ ವೇದಮಂತ್ರಗಳಿಗೆ ಅರ್ಥವನ್ನು ಬಿಡಿಸಿ ಸರ್ವಮಾನವರ ಹಿತಕ್ಕಾಗಿ ಉಪಯೋಗವಾಗುವಂತೆ ಬರೆದಿರುವ ಪಂಡಿತ್ ಸುಧಾಕರ ಚತುರ್ವೇದಿಯವರ “ ವೇದೋಕ್ತ ಜೀವನ ಪಥ” , ವೇದಾಧ್ಯಾಯೀ ಸುಧಾಕರಶರ್ಮರು ನನ್ನ ಅಂತರ್ಜಾಲ ತಾಣವಾದ veಜಚಿsuಜhe.ಛಿom  ಗಾಗಿ ನೀಡಿರುವ ಉಪನ್ಯಾಸಗಳು ಮತ್ತು ಬೆಂಗಳೂರಿನ ವೇದಭಾಷ್ಯಪ್ರಕಾಶನ ಸಮಿತಿಯವರು ಪ್ರಕಟಿಸಿರುವ ಕನ್ನಡ ವೇದಭಾಷ್ಯವು [ಮೂಲ ಸ್ವಾಮಿ ದಯಾನಂದ ಸರಸ್ವತಿಯವರ ಭಾಷ್ಯ] ನನ್ನ ಈ ಹೊತ್ತಿಗೆಗೆ ಆಧಾರವೆಂಬುದನ್ನು ಸವಿನಯವಾಗಿ ತಿಳಿಸಬಯಸುವೆ.ಅಲ್ಲದೆ ಸರ್ವಜನರ ಹಿತಕ್ಕಾಗಿ ಬರುವ ಯಾರದೇ ಸಲಹೆಗಳನ್ನು ಸವಿನಯವಾಗಿ ಸ್ವೀಕರಿಸಲು ಬದ್ಧನಾಗಿರುವೆ. ಇನ್ನು ಒಂದೊಂದೇ ಹೆಜ್ಜೆ ಹಾಕುತ್ತಾ ಸಾಗೋಣ.

ವೇದ ಎಂದರೇನು?
  ವೇದ ಎಂದರೆ  ಜ್ಞಾನ. ಇಷ್ಟು ಸರಳವಾಗಿರುವ ಅರ್ಥವನ್ನು ಅದೆಷ್ಟು ಕಠಿಣ ಮಾಡಿಬಿಟ್ಟಿದ್ದಾರೆ! ಹಾಗೆನಿಸೋದಿಲ್ಲವೇ? ಜ್ಞಾನ ಎಂದರೆ ಅರಿವು. ಎಂತಹ ಅರಿವು ? ಸುಂದರ ಬದುಕು ನಡೆಸುವುದು ಹೇಗೆಂಬ ಅರಿವು.ಮುಂದೆ ಒಂದೊಂದೇ ಮಂತ್ರವನ್ನು ಬಿಡಿಸುತ್ತಾ ಹೋಗುವಾಗ “ ಇದು ಪೂಜೆಯ ಮಂತ್ರವೇ? ಶ್ರಾದ್ಧ ಕರ್ಮಗಳಿಗೆ ಮಾತ್ರ ಪಠಿಸುವ ಮಂತ್ರವೇ? ಹವನ ಹೋಮಗಳಿಗೆ ಮಾತ್ರ ಸೀಮಿತವೇ? ಎಲ್ಲವೂ ಅರ್ಥವಾಗುತ್ತಾ ಹೋಗುತ್ತದೆ.
 “ಎಲ್ಲರಿಗಾಗಿ ವೇದ”  ಎಂಬುದಕ್ಕೆ ಆಧಾರವಾದ  ವೇದ ಮಂತ್ರಗಳು, ಮನುಷ್ಯನ ನೆಮ್ಮದಿಯ ಬದುಕಿಗೆ ವೇದವು ಏನು ಸೂತ್ರವನ್ನು ಕೊಡುತ್ತದೆ?  ಇವನು   ಶ್ರೇಷ್ಠ ಇವನು ಕನಿಷ್ಠನೆನ್ನಲು ವೇದದಲ್ಲಿ ಅವಕಾಶವಿದೆಯೇ? ಎಲ್ಲವನ್ನೂ ಮುಂದಿನ ಪುಟಗಳಲ್ಲಿ ನೋಡೋಣ.

ವೇದವನ್ನು ಯಾರು ಬರೆದರು?
ವೇದವು ಅಪೌರುಷೇಯ.ಇದನ್ನು ಮನುಷ್ಯರು ಬರೆದದ್ದಲ್ಲ. ಅಂದರೆ ಹೇಗೆ ಬಂತು? ಎಂಬುದೇ ತಾನೇ ಮುಂದಿನ ಪ್ರಶ್ನೆ! ವೇದವನ್ನು ಋಷಿಗಳು ತಮ್ಮ ತಪೋ ಬಲದಿಂದ ಕಂಡುಕೊಂಡರು. “ ಋಷಿರ್ದರ್ಶನಾತ್” ಎನ್ನುತ್ತಾರೆ. ಅಂದರೆ ಋಷಿಗಳು ಕಂಡುಕೊಂಡ  ಸತ್ಯ. ಋಷಿಗಳು ಅಂತರ್ಮುಖಿಗಳಾಗಿ ತಪಸ್ಸನ್ನು ಆಚರಿಸಿದಾಗ ಭಗವಂತನಿಂದಲೇ ಕಂಡುಕೊಂಡ  ಸತ್ಯವೇ ವೇದಗಳು. ಮಾನವ ಜನ್ಮ ಯಾವಾಗ ಆಯ್ತೋ ಆಗಿನಿಂದಲೇ ವೇದಗಳು ಇವೆ. ವಿಜ್ಞಾನಿಯೊಬ್ಬ   ಗುರುತ್ವಾಕರ್ಷಣ ನಿಯಮವನ್ನು ಕಂಡು ಹಿಡಿದ. ಯಾವುದೇ ವಸ್ತುವನ್ನು  ಮೇಲೆ ಎಸೆದರೂ ಭೂಮಿಯು ಅದನ್ನು ಆಕರ್ಶಿಸುವುದರಿಂದ ಅದು ಭೂಮಿ ಮೇಲೆ ಬೀಳುತ್ತದೆ. ವಿಜ್ಞಾನಿಯು ಈ ಸತ್ಯವನ್ನು ಕಂಡುಹಿಡಿಯುವ ಮುಂಚೆಯೂ  ಯಾವುದೇ ಮೇಲೆ ಎಸೆದ ವಸ್ತು ಭೂಮಿಗೆಗೆ ಬೀಳುತ್ತಲೇ ಇತ್ತಲ್ಲವೇ? ಆದರೆ ವಿಜ್ಞಾನಿಯು ಈ ನಿಯಮವನ್ನು ತನ್ನ ಸಂಶೋಧನೆಯಿಂದ  ಕಂಡುಕೊಂಡನು. ಹಾಗೆಯೇ ನಮ್ಮ ಋಷಿಮುನಿಗಳು ಅದಾಗಲೇ ಇದ್ದ  ವೇದ ಜ್ಞಾನವನ್ನು ತಮ್ಮ ತಪಸ್ಸಿನ ಬಲದಿಂದ ಕಂಡುಕೊಂಡರು. ಇಷ್ಟನ್ನು ವೇದದ ಉಗುಮದ ಬಗ್ಗೆ ಅರಿತು ಕೊಂಡರೆ ಸಾಕು. ಯಾವ್ಯಾವ ಮಂತ್ರವನ್ನು ಯಾವ ಯಾವ ಋಷಿಗಳು ಕಂಡುಕೊಂಡರೆಂಬುದನ್ನು  ಆಯಾಮಂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ವೇದವ್ಯಾಸರು  ಅಲ್ಲಲ್ಲಿ ಹರಡಿದ್ದ ವೇದ ಜ್ಞಾನವನ್ನು  ನಾಲ್ಕು ಭಾಗಗಳಲ್ಲಿ ಕ್ರಮವಾಗಿ ಹಂಚಿದರು. ಆದರೆ  ನಾಲ್ಕೂ ವೇದಗಳು ಭಗವಂತನಿಂದಲೇ ಪ್ರಕಟವಾದವೆಂಬುದನ್ನು ಒಂದು ವೇದ ಮಂತ್ರವೇ ಸಾರುತ್ತದೆ. ಆ ಮಂತ್ರದಿಂದಲೇ   ಮುಂದುವರೆಯೋಣ.

ಕುಸುಮ-೨
ವೇದದ ಉಗಮ:
ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ. ಯಜುರ್ವೇದದ ೩೧ ನೇ ಅಧ್ಯಾಯದ ೭ನೇ ಮಂತ್ರ ಹೀಗಿದೆ?

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ
ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು
ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.
ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ  ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.
ವೇದವು ಯಾರಿಗಾಗಿ?
ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊಟ್ಟಿದ್ದೇನೆ, ಎಂಬುದು     ಭಗವಂತನ ಮಾತು. ಯಜುರ್ವೇದದ ೨೬ ನೇ ಅಧ್ಯಾಯದ ೨ನೇ ಮಂತ್ರ ಹೀಗಿದೆ?

ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |
ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |
ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ
ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

ಅರ್ಥ:
ಇಹ= ಈ ಲೋಕದಲ್ಲಿ
ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ, ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ
ಇಮಾಂ ಕಲ್ಯಾಣೀಂ  ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು
ಜನೇಭ್ಯ: =ಮಾನವರೆಲ್ಲರ ಸಲುವಾಗಿ
ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ
ಶೂದ್ರಾಯ=ಶೂದ್ರನಿಗಾಗಿ  ಚ=ಮತ್ತು
ಆರ್ಯಾಯ= ವೈಶ್ಯನ ಸಲುವಾಗಿ
ಸ್ವಾಯ=ತನ್ನವನಿಗಾಗಿ
ಚ=ಮತ್ತು[ಅದೇ ರೀತಿಯಲ್ಲಿ]
ಅರಣಾಯ=ಬೇರೆಯವನಿಗಾಗಿ
ಆವದಾನಿ=ಉಪದೇಶಿಸುತ್ತೇನೆ.
ಅಯಂ ಮೇ ಕಾಮ:= ಈ ನನ್ನ ಕಾಮನೆಯು
ಸಮೃಧ್ಯತಾಮ್=ಸಮೃದ್ಧವಾಗಲಿ
ಅದ: = ಈ ಜಗತ್ತು
ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ

ಭಾವಾರ್ಥ:
ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ  ಈ ವಿಚಾರವು ಸ್ಪಷ್ಟವಾಗುತ್ತದೆ. ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.
ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದೆ ವಿಮರ್ಶೆ ಮಾಡಲಿರುವ ವೇದಮಂತ್ರಗಳಲ್ಲಿ ನೋಡ   ಬಹುದಾಗಿದೆ.

ಕುಸುಮ-೩  
       ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ ನಿಮ್ಮ ಜೀವನ ರಥ ತೆರಳಲಿ      

ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ  ಕಲಿಯುತ್ತಿರುವ ವಿದ್ಯಾರ್ಥಿಯು  ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಋಗ್ವೇದ ೫ನೇ ಮಂಡಲದ  ೫೫ನೇ ಸೂಕ್ತದ ೮ನೇ ಮಂತ್ರವನ್ನು  ವಿಮರ್ಶೆ ಮಾಡೋಣ.

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ  = ಯಾವುದು ಪ್ರಾಚೀನವೋ    ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ  ಯಾತಾಂ  ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ:  ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

 ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ.
ಮಂತ್ರದ ಭಾವಾರ್ಥ ನೋಡಿ.
ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದೆ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ.
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ, ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ.
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

ಕುಸುಮ-೪
ಋಗ್ವೇದದ ೭ನೇ ಮಂಡಲದ ೩೩ನೇ ಸೂಕ್ತ ೭ ನೇ ಮಂತ್ರದಬಗ್ಗೆ ತಿಳಿಯೋಣ
“ಆರ್ಯಾ ಜ್ಯೋತಿರಗ್ರಾ:”
ಎಷ್ಟು ಸರಳ! ಆದರೆ ಅದೆಷ್ಟು ಅರ್ಥವ್ಯಾಪ್ತಿಯನ್ನು ಹೊಂದಿರುವ ಮಂತ್ರ!!
“ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು ಆರ್ಯ.” ಆರ್ಯರು ಈ ದೇಶದ ಮೂಲ ನಿವಾಸಿಗಳಲ್ಲ,ಅವರು ಬೇರೆ ದೇಶದಿಂದ ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳ ವಿರುದ್ಧ ಹೋರಾಡಿ ತಮ್ಮ ಅಸ್ಥಿತ್ವವನ್ನು ಭಾರತದಲ್ಲಿ ಉಳಿಸಿಕೊಂಡರು, ಹೀಗೆಲ್ಲಾ ಅಪಪ್ರಚಾರ ನಡೆದಿದೆ. ಆದರೆ ಯಾರು ಆರ್ಯರು? ಎಂಬ ಬಗ್ಗೆ ಈ ಒಂದು ಚಿಕ್ಕ ಮಂತ್ರ  ಅದೆಷ್ಟು ಸೊಗಸಾಗಿ ಹೇಳಿದೆ!
 ಜ್ಯೋತಿಯನ್ನು ಮುಂದಿಟ್ಟುಕೊಂಡು ನಡೆಯುವವನು  ಆರ್ಯ. ಅಂದರೆ ದೀಪ ಹಿಡಿದುಕೊಂಡು ಮುಂದೆ  ಹೆಜ್ಜೆ ಹಾಕುವುದೇ? ಹೌದು? ಎಂತಹ ದೀಪವೆಂಬುದನ್ನು ಮಾತ್ರ ತಿಳಿದಿರಬೇಕು. “ಜ್ಞಾನದ ದಿವ್ಯ ಜ್ಯೋತಿಯನ್ನು ಹಿಡಿಕೊಂಡು  ಮುಂದೆ ಅಡಿ ಇಡುವವನು ಆರ್ಯ.”  ಇಲ್ಲಿ ಪ್ರಥಮವಾಗಿ ಆರ್ಯರೆಂದರೆ ಎಲ್ಲಿಂದಲೋ ಬಂದವರಲ್ಲಾ, ಎಂಬುದನ್ನು ಮೊದಲು ಮನಗಂಡು ಯಾರನ್ನು ಆರ್ಯ ಎನ್ನುವರು? ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. “ಜ್ಞಾನದ ದೀಪವನ್ನು ಹಿಡಿದುಕೊಂಡು   ಮುಂದೆ ಅಡಿ ಇಡುವವನು ಆರ್ಯ” ಎನ್ನುತ್ತದೆ ಋಗ್ವೇದದ ಈ ಮಂತ್ರ. ಅಂದರೆ ಅವನು ಜ್ಞಾನವಂತನಾಗಿರಬೇಕು.ಇಂದು ಪ್ರಚಲಿತವಾಗಿರುವ ಜಾತಿಯಬಗ್ಗೆ ಉಲ್ಲೇಖ ಬರುವುದಿಲ್ಲ.  ಇಲ್ಲಿ ಅವನ ಜ್ಞಾನ ಸಂಪತ್ತು ಮಾತ್ರ ಗಣನೆಗೆ ಬರುತ್ತದೆ. ಅವನ ಹುಟ್ಟು ಯಾರ ಹೊಟ್ಟೆಯಲ್ಲಾಗಿದ್ದರೇನು? ಅವನು ಜ್ಞಾನವಂತನಾಗಿರಬೇಕಷ್ಟೆ. ಅವನು ಬ್ರಾಹ್ಮಣವರ್ಣಕ್ಕೆ ಸೇರುತ್ತಾನೆಂದು ಕೂಡ ವೇದವು ಸಾರುತ್ತದೆ.[ಇಂದಿನ ಜಾತಿಯಲ್ಲ.ವರ್ಣದ ಬಗ್ಗೆ ಮುಂದೆ ನೋಡೋಣ]
ಹಾಗಾದರೆ ಆರ್ಯನೊಬ್ಬ  ಎಷ್ಟು ಎಚ್ಚರದಿಂದ ಹೆಜ್ಜೆ ಇಡಬೇಕೆಂಬ ಬಗ್ಗೆ ನೋಡೋಣ. ಅವನು ಮುಂದೆ ಅಡಿ ಇಡುವಾಗ ತಪ್ಪು ಹೆಜ್ಜೆ ಇಡುವಂತಿಲ್ಲ. ಕಾರಣ ಅವನನ್ನು ಅನುಸರಿಸಲು ನೂರಾರು ಜನ ಕಾದಿದ್ದಾರೆ. ಅವನು ಸತ್ಯ-ಅಸತ್ಯ ಮಾರ್ಗದ ಭೇದವನ್ನು ಚೆನ್ನಾಗಿ ಅರಿತವನಾಗಿರಬೇಕು. ಯಾವುದರಲ್ಲಿಯೂ ಅಂಧಾನುಕರಣೆ ಮಾಡುವಂತಿಲ್ಲ. ಅವನು ಇಡುವ ಹೆಜ್ಜೆ ಸತ್ಯವೇ? ಹಿತವೇ? ಎಂದು  ಪರಿಶೀಲಿಸಿ    ಹೆಜ್ಜೆ ಇಡಬೇಕು. ಹೀಗೆ ವೇದದ ಒಂದೊಂದು ಚಿಕ್ಕ ಮಂತ್ರಗಳನ್ನು ಬಿಡಿಸಿ ನೋಡಿದಾಗ ಅದರ ವಿಶಾಲತೆಯ ಅರಿವಾಗುತ್ತದೆ.

ಕುಸುಮ-೫

ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ

ಇನ್ನೊಂದು ಮಂತ್ರವನ್ನು ನೋಡೋಣ.
[ಅಥರ್ವ: ೨-೧೧-೫]
ಶುಕ್ರೋsಸಿ ಭ್ರಾಜೋsಸಿ ಸ್ವರಸಿ ಜ್ಯೋತಿರಸಿ|
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ||
ಅರ್ಥ:
ಶುಕ್ರ: ಅಸಿ= ಓ ಮಾನವ ನೀನು ನಿರ್ಮಲ ನಾಗಿದ್ದೀಯೇ
ಭ್ರಾಜ: ಅಸಿ = ಪ್ರಕಾಶವಾಗಿದ್ದೀಯೆ
ಶ್ರೇಯಾಂಸಂ ಆಪ್ನುಹಿ = ಶ್ರೇಯಸ್ಸನ್ನು ಸಾಧಿಸಿಕೋ
ಸಮಂ ಅತಿಕ್ರಾಮ = ಸಮನಾದವನನ್ನು ಮೀರಿಸಿ ಮುಂದೆ ನಡೆ

ಈ ಮಂತ್ರದ ಹಿರಿಮೆ ನೋಡಿ, ಹೇಗಿದೆ! ಮನುಷ್ಯನನ್ನು “ನೀನು ಪಾಪಿ” ಎನಲಿಲ್ಲ. ಬದಲಿಗೆ ನೀನು ನಿರ್ಮಲನಾಗಿದ್ದೀಯೆ, ನೀನು ಪ್ರಕಾಶಮಾನವಾಗಿದ್ದೀಯೇ, ಶ್ರೇಯಸ್ಸನ್ನು ನೀನೇ ಸ್ವತ: ಸಾಧಿಸಿ ಅಧ್ಯಾತ್ಮ ಮಾರ್ಗದಲ್ಲಿ ನಿನ್ನ ಸಮ ಇರುವವರನ್ನು ಮೀರಿಸಿ ಮುಂದೆ ನಡೆ. ವೇದದ ಈ ಮಂತ್ರವನ್ನು ಅರ್ಥಮಾಡಿಕೊಳ್ಳುವಾಗ ಒಮ್ಮೆ ನನ್ನ ಮೈ ಝುಮ್ ಎಂದಿತು. ಮಂತ್ರದ ಅರ್ಥವನ್ನು ಮನಸ್ಸಿಟ್ಟು ಓದಿ ,ನಿಮಗೂ ಹಾಗನ್ನಿಸದೆ ಇರದು. ಮುಂದಿನ ಮಂತ್ರದಲ್ಲಿ ಅಂಧಾನುಕರಣೆಗೆ ವೇದವು ಅದೆಷ್ಟು ವಿರೋಧಿಯಾಗಿದೆ ಎಂಬುದನ್ನು ತಿಳಿಯಬಹುದು.

ಮಾ ನೋ ದೀರ್ಘಾ ಅಭಿಶನ್ತಮಿಸ್ರಾ:
[ಋಗ್ವೇದ ೨-೨೭-೧೪]
“ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ”
 ದೀರ್ಘವಾದ ಅಂಧಕಾರಗಳು ಯಾವುವು? ಉಧಾಹರಣೆಗೆ ನೋಡೋಣ?
ಹೊಸದಾಗಿ ವಾಹನವನ್ನೋ ಒಂದು ಯಂತ್ರವನ್ನೋ ಕೊಂಡು ಅದನ್ನು ಚಾಲನೆಗೊಳಿಸುವಾಗ ಪ್ರಥಮ ಪೂಜೆ ಮಾಡುತ್ತೀವಷ್ಟೆ.
[ಪೂಜೆಯ ವಿವರಣೆಯನ್ನೂ ಮುಂದೆ ನೋಡೋಣ] ನೂರಾರು ವರ್ಷಗಳಿಂದ ನಡೆದುಕೊಂಡು    ಬಂದಿರುವ ಆಚರಣೆ ಹೇಗಿದೆ? ಒಮ್ಮೆ ವಿಮರ್ಷೆ ಮಾಡೋಣ. ಯಂತ್ರವನ್ನು ಶುಚಿಗೊಳಿಸಿ ಅದಕ್ಕೆ ಒಂದಿಷ್ಟು ಅರಿಶಿನ-ಕುಂಕುಮ ಹಚ್ಚಿ ನಂತರ ಒಂದು ದೊಡ್ಡ ಬೂದಗುಂಬಳ ಕಾಯಿಗೆ ಒಂದು  ಕುಳಿಮಾಡಿ ಅದರಲ್ಲಿ ಒಂದಿಷ್ಟು ಕುಂಕುಮ,ಒಂದಿಷ್ಟು ಚಿಲ್ಲರೆಕಾಸು ತುಂಬಿ ವಾಹದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ದೊಪ್ಪೆಂದು ನೆಲದ ಮೇಲೆ ಎತ್ತಿಹಾಕಿದಾಗ ಅದು ನಾಲ್ಕಾರು ಚೂರಾಗಿ ಅದರೊಳಗಿನಿಂದ ಕುಂಕುಮಬೆರೆತ ನೀರು ರಕ್ತದಂತೆ ಹರಿದಾಗ ಅದೇನೋ ಸಂತೋಷ!! ಪೂಜೆ ಮಾಡಿದ ತೃಪ್ತಿ!!   ಚೂರಾದ ಕುಂಬಳ ಕಾಯಿಯನ್ನು ಪ್ರಾಣಿಗಳು ತಿಂದರೂ ಅವುಗಳ ಜೀವಕ್ಕೆ ಕಷ್ಟ. ಇನ್ನು ಮನುಷ್ಯ ತಿನ್ನುವ ಮಾತೇ ಇಲ್ಲ ಬಿಡಿ. ಬೇಯಿಸಿ ತಿನ್ನಬೇಕಾದ ಕುಂಬಳಕಾಯಿಯನ್ನು ಹೀಗೆ ಪ್ರಯೋಜನಕ್ಕೆ ಬಾರದಂತೆ ಒಡೆದು ಎಸೆಯುವುದು ಅಂಧಕಾರದ ಪರಮಾವಧಿಯಲ್ಲವೇ?
ಯಂತ್ರವನ್ನು ಚಾಲನೆಗೊಳಿಸುವಾಗ ನಾವು ಮಾಡಬೇಕಾದದ್ದೇನು? ಶುಚಿಗೊಳಿಸಬೇಕು, ಅಗತ್ಯ ಭಾಗಗಳಿಗೆ ಗ್ರೀಸ್ ಅಥವಾ ಎಣ್ಣೆ ಹಾಕಬೇಕು,ಅದು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ನಿರ್ವಹಣೆ ಮಾಡಬೇಕು. ಬದಲಿಗೆ ಅದಾಗಲೇ ಶುಚಿಗೊಳಿಸಿದ್ದ ಯಂತ್ರದಮೇಲೆ ಪೂಜೆ ಮಾಡುವವರು ನೀರು ಚಿಮುಕಿಸಿದಾಗ ನೀರು ತಾಗಬಾರದ ವಿದ್ಯುತ್ ಭಾಗಗಳಿಗೆ ನೀರು ಬಿದ್ದಾಗ ಯಂತ್ರಕ್ಕೆ ತೊಂದರೆಯೂ ಆಗಬಹುದು. ಆ ಯಂತ್ರವಾದರೋ  ಕುಂಕುಮ ಅರಿಶಿನದ ಪಟ್ಟೆಯನ್ನು ಕೇಳುತ್ತದೆಯೇ? ಕುಂಬಳಕಾಯಿ ಬಲಿ ಕೇಳುತ್ತದೆಯೇ? ಇದನ್ನೇ ಅಂಧಕಾರ ಎನ್ನಲಡ್ಡಿಯಿಲ್ಲ. ನಾವು  ಮಾಡುವ ಪೂಜಾವಿಧಿಗಳಿಗೂ ಸರಿಯಾದ ಅರ್ಥ ಇರಬೇಕಲ್ಲವೇ?  ಇದು ಒಂದು ಉಧಾಹರಣೆಯಷ್ಟೆ. ಒಟ್ಟಿನಲ್ಲಿ ಅವೈಜ್ಞಾನಿಕ ಯಾವುದೇ ಆಚರಣೆಯನ್ನು ವೇದವು ವಿರೋಧಿಸುತ್ತದೆ.

 ಕುಸುಮ-೬

 ಅಂಧಕಾರದಿಂದ ಸರಿದಮೇಲೆ ಮುಂದೇನು? ಈ ಪಶ್ನೆಗೆ ವೇದವು ಹೇಳುತ್ತದೆ. . . .

“ಜ್ಯೋತಿರ್ವೃಣೀತ ತಮಸೋ ವಿಜಾನನ್”
[ಋಗ್ವೇದ ೩-೩೯-೭]
“ಅಂಧಕಾರದಿಂದ  ದೂರಸರಿದು ಜ್ಯೊತಿಯನ್ನು ತುಂಬಿಕೊಳ್ಳಬೇಕು” ಎಂದು ವೇದವು ಕರೆಕೊಡುತ್ತದೆ. ಕತ್ತಲೆ ಹೋದಮೇಲೆ ಬೆಳಕು ತಾನೆ ಬರಬೇಕು. ನಿಮ್ಮ ಜೀವನವನ್ನು ಉನ್ನತಿಗೆತ್ತಬಲ್ಲ  ದಿವ್ಯ ಜ್ಯೋತಿಯನ್ನು  ಅಂದರೆ ಜ್ಞಾನವನ್ನು ತುಂಬಿಕೊಳ್ಳಬೇಕೆಂದು ವೇದವು ಸ್ಪಷ್ಟ ಪಡಿಸುತ್ತದೆ. ಅಂದರೆ ಒಂದು ಆಚರಣೆಯನ್ನು ಮಾಡುವಾಗ ಅದು ನಮ್ಮನ್ನು ಸತ್ಯಪಥದಲ್ಲಿ ಕೊಂಡೊಯ್ಯುತ್ತದೋ, ಸಮಾಜದಹಿತವು ಅದರಲ್ಲಿದೆಯೇ? ವೈಜ್ಞಾನಿಕವಾಗಿ ಅದರಿಂದ ಜೀವನಕ್ಕೆ ಲಾಭವಿದೆಯೋ ಅಥವಾ ಅಂಧಕಾರದಲ್ಲಿ ನಮ್ಮನ್ನು ಮುಳುಗಿಸುತ್ತದೋ ,ಹೀಗೆ ಆಚರಣೆಯ ಎಲ್ಲಾ ಮಗ್ಗಲುಗಳನ್ನೂ ವಿವೇಚಿಸಿ ಆಚರಿಸುವುದು ಸೂಕ್ತವೆಂದು ವೇದವು ಸಾರುತ್ತದೆ.  ಮನುಷ್ಯನ  ಸುಖಕರವಾದ, ನೆಮ್ಮದಿಯ ಜೀವನಕ್ಕೆ ಅಗತ್ಯವಾದ  ವೇದದಲ್ಲಿನ  ಸೂತ್ರಗಳ ಬಗೆಗೆ ಮುಂದಿನ ಹಲವು ಮಂತ್ರಗಳಲ್ಲಿ ಚಿಂತನೆ ನಡೆಸೋಣ.ಅವುಗಳಲ್ಲಿ ಶ್ರದ್ಧೆ ಬಗ್ಗೆ ಇರುವ  ಒಂದು ವೇದ ಮಂತ್ರವನ್ನು ನೋಡೋಣ.              
           
“ ಶ್ರದ್ಧೆ”
ಅಂಧಪರಂಪರೆಗೆ ವೇದವು ವಿರೋಧಿಯಾಗಿದ್ದು ಅರಿತು ಮಾಡುವ ಆಚರಣೆಗಳ ಬಗ್ಗೆ “ ಶ್ರದ್ಧೆ” ಹೇಗಿರಬೇಕೆಂಬುದನ್ನು ಈ ಕೆಳಗಿನ ವೇದಮಂತ್ರವು ಸಾರುತ್ತದೆ?.
ಋಗ್ವೇದ: ೧೦-೧೫೧-೫
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯ ದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನ:  ||

ಪ್ರಾತ:= ಬೆಳಗಿನಹೊತ್ತು
ಶ್ರದ್ಧಾಂ ಹವಾಮಹೇ= ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಮಧ್ಯಂದಿನಂ ಪರಿ= ನಡುಹಗಲಿನಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನು ಆಹ್ವಾನಿಸುತ್ತೇವೆ
ಸೂರ್ಯಸ್ಯ ನಿಮೃಚಿ= ಸೂರ್ಯಾಸ್ತ ಕಾಲದಲ್ಲಿಯೂ
ಶ್ರದ್ಧಾಮ್ = ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇವೆ
ಶ್ರದ್ಧೇ= ಓ ಶ್ರದ್ಧೇ!
ಇಹ= ಈ ಜಗತ್ತಿನಲ್ಲಿ
ನ: ಶ್ರದ್ಧಾಪಯ=ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು

ಅಂದರೆ ಬೆಳಿಗ್ಗೆ ಏಳುವಾಗಲಿಂದ ರಾತ್ರಿ ಮಲಗುವ ತನಕ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಈ ಮಂತ್ರವು ಹೇಳುತ್ತದೆ. ಅಂದರೆ ಶ್ರದ್ಧೆ ಎಂದರೇನು?  ನಮ್ಮ ನಂಬಿಕೆಯು ಯಾವಾಗ ಶ್ರದ್ಧೆ ಎನಿಸಿಕೊಳ್ಳುತ್ತದೆ? “ ಶ್ರದ್ದಾ” ಎಂಬ ಪದವನ್ನು ಬಿಡಿಸಿಕೊಂಡಾಗ  “ಶ್ರದ್ಧೆ” ಪದದ ಸರಿಯಾದ ಅರ್ಥ ಗೊತ್ತಾಗುತ್ತದೆ.
  ಸಾಮಾನ್ಯವಾಗಿ ಆಡುಮಾತಿನಲ್ಲಿ ಹೇಳುವುದುಂಟು” ನಮ್ಮ ಮಕ್ಕಳಿಗೆ  ನಮ್ಮ ಧರ್ಮದಲ್ಲಿ ಶ್ರದ್ಧೆ ಇಲ್ಲ, ನಮ್ಮ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಇಲ್ಲ,ಇತ್ಯಾದಿ,ಇತ್ಯಾದಿ. ಈ ಸಂದರ್ಭದಲ್ಲಿ ಎಲ್ಲರೂ ಸಾಮಾನ್ಯವಾಗಿ ಭಾವಿಸುವುದೇನು? ಈಗೇನು ಆಚಾರ-ವಿಚಾರಗಳಿವೆ, ಅವುಗಳನ್ನು ಅನುಸರಿಸದಿದ್ದಾಗ?.ಇವನಿಗೆ  ನಮ್ಮ ಧರ್ಮದಲ್ಲೇ ಶ್ರದ್ಧೆ ಇಲ್ಲಾ!! ಎಂದು ಅವನ ಬಗ್ಗೆ ಪೂರ್ವಾಗ್ರಹದ ತೀರ್ಪು ಹೊರಬೀಳುತ್ತದೆ!! ಆದರೆ ನಿಜವಾಗಿ ಶ್ರದ್ಧೆ ಯಾವಾಗ ಬರಬೇಕು? ಶ್ರದ್ಧೆ ಪದವೇ ಹೇಳುತ್ತದೆ?” ಸತ್ಯದ ಧಾರಣೆ” ಅಂದರೆ ನಮ್ಮ ಆಚಾರ ವಿಚಾರಗಳನ್ನು ವಿಮರ್ಶಿಸಿ” ಇದು ಸತ್ಯವೇ? ಹಿತವೇ? ಇದರಿಂದ ಸತ್ಯದ ಅಪಚಾರವಾಗುವುದಿಲ್ಲವೇ? ಎಂಬುದನ್ನು ಮನವರಿಕೆ ಮಾಡಿಕೊಂಡು ಧರಿಸುವುದಕ್ಕೆ “ ಶ್ರದ್ಧೆ” ಎನ್ನಲಡ್ಡಿಯಿಲ್ಲ. ಆದರೆ ಯಾವುದೇ ಆಚರಣೆಯ ಸತ್ಯಾಸತ್ಯತೆಯನ್ನರಿಯದೆ ಅಂಧಾನುಕರಣೆಮಾಡುವುದನ್ನು” ಶ್ರದ್ಧೆ” ಎನ್ನಲಾಗುವುದಿಲ್ಲ. ಅದು ಕೇವಲ ನಂಬಿಕೆ. ನಮ್ಮ ನಂಬಿಕೆಗಳನ್ನು ಇತರರು ಅನುಸರಿಸದಿದ್ದರೆ ಅವರಿಗೆ  ಈ ಆಚರಣೆಗಳಲ್ಲಿ” ಶ್ರದ್ಧೆ” ಇಲ್ಲಾ  ಎನ್ನುವಂತಿಲ್ಲ. ಶ್ರದ್ಧೆಯೇ ಬೇರೆ. ನಂಬಿಕೆಯೇ ಬೇರೆ. ಈ ವೇದ ಮಂತ್ರವಾದರೋ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ಮಲಗುವವರೆಗೂ ಶ್ರದ್ಧೆಯನ್ನೇ ಆವಾಹನೆ ಮಾಡುತ್ತೇನೆಂದು ಸಾರುತ್ತದೆ. ಶ್ರದ್ಧೆಯ ಅರ್ಥವ್ಯಾಪ್ತಿ ಎಷ್ಟಿದೆ! ನೋಡಿ!


ಕುಸುಮ-೭
       “ಬುದ್ಧಿಯ ಬಗ್ಗೆ ವೇದವು ಏನು ಹೇಳುತ್ತದೆ”

ಹಿಂದಿನ ಮಂತ್ರದಲ್ಲಿ ಶ್ರದ್ಧೆಯ ಬಗ್ಗೆ  ಚಿಂತನೆ ನಡೆಸಿದ್ದೇವೆ. ಈಗ ಬುದ್ಧಿಯ ಬಗ್ಗೆ ವೇದವು     ಏನು ಹೇಳುತ್ತದೆ ನೋಡೋಣ.
ಅಥರ್ವ: ೬-೧೦೮-೦೫
ಮೇಧಾಂ ಸಾಯಂ ಮೇಧಾಂ ಪ್ರಾಥರ್ಮೇಧಾಂ ಮಧ್ಯಂ ದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭಿರ್ವಚಸಾ  ವೇಶಯಾಮಹೇ||
ಅರ್ಥ:
ಸಾಯಮ್ = ಸಂಜೆ
ಮೇಧಾಂ = ಬುದ್ಧಿಯನ್ನು
ಆವೇಶಯಾಮಹೇ = ಜೀವನಕ್ಕೆ ಇಳಿಸಿಕೊಳ್ಳುತ್ತೇವೆ
ಪ್ರಾಥ: = ಬೆಳಿಗ್ಗೆ      
ಮೇಧಾಂ = ಬುದ್ಧಿಯನ್ನು [ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಮಧ್ಯಂದಿನಂ ಪರಿ = ಮಧ್ಯಾಹ್ನದಲ್ಲಿಯೂ
ಮೇಧಾಂ = ಬುದ್ಧಿಯನ್ನು[ಜೀವನಕ್ಕೆ ಇಳಿಸಿಕೊಳ್ಳುತ್ತೇವೆ]
ಸೂರ್ಯಸ್ಯ ರಶ್ಮಿಭಿ: = ಸೂರ್ಯ ಕಿರಣಗಳೊಂದಿಗೆ
ವಚಸಾ = [ವಿದ್ವಜ್ಜನರ ಉಪದೇಶ ]ವಚನಗಳಿಂದ
ಮೇಧಾಂ ಆವೇಶಯಾಮಹೇ = ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆ

ಈ ಮಂತ್ರವು ನಮ್ಮನ್ನು ಹೇಗೆ ಎಚ್ಚರಿಸುತ್ತದೆ! ನೋಡಿ, ನಾವು ಸದಾಕಾಲ ಬುದ್ಧಿಯನ್ನು ಜೀವನಕ್ಕೆ ಇಳಿಸಿಕೊಳ್ಳುತ್ತೇನೆಂದು ಹೇಳುವಾಗ ಜೊತೆಯಲ್ಲಿಯೇ  ವಿದ್ವಜ್ಜನರ ಉಪದೇಶಗಳಿಂದ ಸೂರ್ಯಕಿರಣಗಳೊಂದಿಗೆ  ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇನೆಂದು  ಈ ಮಂತ್ರವು ಹೇಳಿದೆ. ಅಂದರೆ ನಮ್ಮಷ್ಟ್ಟಕ್ಕೆ  ನಮಗೆ ತೋಚಿದಂತೆ ಬುದ್ಧಿಯನ್ನು ಹರಿಬಿಡುವಂತಿಲ್ಲ. ವಿದ್ವಜ್ಜನರ ಉಪದೇಶಗಳಿಂದ ನಿನ್ನ ಬುದ್ಧಿಯನ್ನು ಹದಗೊಳಿಸಿಕೋ” ಎಂದು ಕೂಡ ವೇದವು ಸಾರುತ್ತದೆ.    ಇದರೊಡನೆಯೇ ಇನ್ನೊಂದು ಮಂತ್ರವು ಹೇಳುತ್ತದೆ?
ಅಥರ್ವ: ೧೯-೬೪-೧]
ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ: ಪ್ರ ಯಚ್ಛತು||
ಅರ್ಥ:
ಸ ಜಾತವೇದಾ: = ಸರ್ವಜ್ಞನಾದ ಭಗವಂತನು       ಮೇ = ನನಗೆ
ಶ್ರದ್ಧಾಂಚ ಮೇಧಾಂಚ ಪ್ರಯಚ್ಛತು = ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ.

ಭಗವಂತನನ್ನು ಪ್ರಾರ್ಥಿಸುವಾಗ  ನನಗೆ ಇದರಲ್ಲಿ ಶ್ರದ್ಧೆ ಕೊಡು ಎಂದಷ್ಟೇ ಕೇಳಲಿಲ್ಲ, ಜೊತೆಗೆ ನನಗೆ ವಿವೇಚಿಸುವ ಬುದ್ಧಿಯನ್ನೂ ಕೊಡು  ಎಂದು ಕೇಳ ಬೇಕೆಂದು ವೇದದ ಕರೆ. ಯಾವುದನ್ನಾಗಲೀ ಕುರುಡು ಕುರುಡಾಗಿ  ಅನುಸರಿಸಬೇಡವೆಂಬುದೇ ವೇದದ ಆಶಯ. ಅದಕ್ಕಾಗಿಯೇ ಶ್ರದ್ಧೆಯೊಡನೆ ಬುದ್ಧಿಯೂ ಇರಬೇಕೆಂಬುದೇ ವೇದದ ಕರೆ.


“ಸತ್ಯ-ಅಸತ್ಯದ ಬಗ್ಗೆ ವೇದವು     ಏನು ಹೇಳುತ್ತದೆ”

 ಮೇಲಿನ ಮಂತ್ರದಲ್ಲಿ  “ಶ್ರದ್ಧೆಯ ಜೊತೆಗೆ ಬುದ್ಧಿಯನ್ನೂ ಕೊಡೆಂದು”  ಭಗವಂತನಲ್ಲಿ ಪ್ರಾರ್ಥಿಸಿದ್ದನ್ನು ಗಮನಿಸಿದ್ದೇವೆ. ಸತ್ಯಾ ಸತ್ಯತೆಯ ಬಗ್ಗೆ ವೇದವು  ಏನು ಹೇಳುತ್ತದೆಂಬುದನ್ನು ಮುಂದಿನ ಮಂತ್ರದಲ್ಲಿ ನೋಡೋಣ.

[ಯಜುರ್ವೇದ: ೧೯-೭೭]
ದೃಷ್ಟ್ವಾ ರೂಪೇ ವ್ಯಾಕರೋತ್ ಸತ್ಯಾನೃತೇ ಪ್ರಜಾಪತಿ: |
ಅಶ್ರದ್ಧಾಂ ಅನೃತೇs ದಧಾಚ್ಛದ್ಧಾಂ ಸತ್ಯೇ ಪ್ರಜಾಪತಿ: ||

ಅರ್ಥ:
ಪ್ರಜಾಪತಿ: = ಭಗವಂತನು
ರೂಪೇ ದೃಷ್ಟ್ವಾ = ಸತ್ಯಾಸತ್ಯತೆಗಳ ರೂಪಗಳನ್ನು ನೋಡಿ
ಸತ್ಯಾನೃತೇ ವ್ಯಾಕರೋತ್ = ಸತ್ಯವನ್ನೂ ಅಸತ್ಯವನ್ನೂ ಬೇರ್ಪಡಿಸಿದನು
ಅನೃತೇ = ಅಸತ್ಯದಲ್ಲಿ
ಅಶ್ರದ್ಧಾಂ ಅದಧಾತ್ = ಅಶ್ರದ್ಧೆಯನ್ನು ನೆಲೆಗೊಳಿಸಿದನು
ಸತ್ಯೇ = ಸತ್ಯದಲ್ಲಿ
ಶ್ರದ್ಧಾಂ ಅದಧಾತ್ = ಶ್ರದ್ಧೆಯನ್ನು ನೆಲೆಗೊಳಿಸಿದನು
ಭಾವಾರ್ಥ:
ಭಗವಂತನು ಸತ್ಯಾ ಅಸತ್ಯಗಳೆರಡನ್ನೂ ನೋಡಿ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಿದನು. ಅಸತ್ಯದಲ್ಲಿ ಅಶ್ರದ್ಧೆಯನ್ನೂ ಸತ್ಯದಲ್ಲಿ ಶ್ರದ್ಧೆಯನ್ನೂ ನೆಲಗೊಳಿಸಿದನು.
ಬಹಳ ಸುಲಭವಾಗಿ ಅರ್ಥವಾಗುವಂತಹ ವೇದ ಮಂತ್ರ ಇದು. ಮಂತ್ರವಾದರೋ ಏನನ್ನು ಒತ್ತಿ ಹೇಳುತ್ತದೆ? ಅಸತ್ಯವನ್ನು ನಂಬಬೇಡ. ಸತ್ಯದಲ್ಲಿ ಶ್ರದ್ಧೆ ಇಡು. ಶ್ರದ್ಧೆ ಎಂದರೆ “ಸತ್ಯದ ಧಾರಣೆ” ಎಂಬ ಬಗ್ಗೆ ಚರ್ಚಿಸಿದ್ದೇವೆ. ಈ ಮಂತ್ರದಲ್ಲೂ ಅದನ್ನೇ ಹೇಳುತ್ತದೆ. ಭಗವಂತನೇ ಸತ್ಯಾ-ಅಸತ್ಯಗಳನ್ನು ಬೇರ್ಪಡಿಸಿ  ಸತ್ಯದಲ್ಲಿ ಮಾತ್ರವೇ ಶ್ರದ್ಧೆಯನ್ನು ನೆಲೆಗೊಳಿಸುತ್ತಾನೆ, ಎಂದು ನಿಖರವಾಗಿ ಹೇಳಿದೆ. ಅಂದರೆ ಯಾವುದು ಅಸತ್ಯವೆಂದು ಮನಗಾಣುತ್ತದೋ  ಅದನ್ನು ಯಾರೇ ಹೇಳಲಿ, ಅದನ್ನು ಅನುಸರಿಸಿದರೆ ಅದು   ವೇದ ವಿರೋಧಿ ನಡೆಯಾಗುತ್ತದೆ. ಆದ್ದರಿಂದ ನಾವು ಧರ್ಮದ ಹೆಸರಲ್ಲಿ ಮಾಡುವ ಆಚರಣೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅದು, ಅಸತ್ಯ, ಅವೈಜ್ಞಾನಿಕ, ಸಮಾಜ ವಿರೋಧಿ, ಎನಿಸಿದರೆ ಅಚರಿಸಬಾರದು, ಅದು ಸತ್ಯಪಥವಾಗಿದ್ದು ಸಮಾಜಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಅನುಸರಿಸಬೇಕು. ಇದು ವೇದದ ಕರೆ.

4 comments:

  1. thank you sir, very much narrated and well explained. please continue to send the mails.
    -Vishnumoorthy Bhat

    ReplyDelete
  2. ನಮ್ಮವರ ಶೂನ್ಯ ಸಂಪದ ಬ್ರಹ್ಮ.

    ಬುದ್ಧನ ನಂತರ ಬಂದ ಶಂಕರರು ಅಂದರೇ, ಎಂಟನೇ ಶತಮಾನದ ನಂತರ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದನ್ನು ಈ ಜಗತ್ತು ಪರಮಾತ್ಮ ಬ್ರಹ್ಮನ ಸೃಷ್ಟಿಯೆಂದೇ ಹೇಳಿದ್ದವು. ಅವುಗಳನ್ನು ತಿರಸ್ಕರಿಸಿ ವಿರುದ್ಧವಾಗಿ ಜಗತ್ತು ಒಂದು ಬ್ರಾಂತಿಯೆಂದು, ಈ ಉಪನಿಷದ್ ಮತ್ತು ಭಗವಧ್ಗೀತೆಯಲ್ಲಿ ಹೇಳಿರುವುದ ವಿರುದ್ಧವಾಗಿಯೂ, ನೈಜವಾದ ಬೌದ್ಧಧರ್ಮವನ್ನೇ ಹೀಯಾಳಿಸಿ, ತನ್ನದೇ ಆದ ಮತ ಸಿದ್ಧಾಂತವೆಂದೂ " ನಾಗಾರ್ಜುನ ಶೂನ್ಯವಾದವನ್ನೇ " ಮತ್ತೇ ಜಗತ್ತಿಗೆ ತೋರಿಸಿರುತ್ತಾರೆ. ಜಗತ್ತು ಮಿಥ್ಯೆ ಅಥವಾ ಮಾಯೇ, ಬ್ರಹ್ಮನಿಂದ ಅಥವಾ ದೇವರಿಂದ ಜಗತ್ತು ಸೃಷ್ಟಿಯಾಗಲಿಲ್ಲವೆಂದು ಹೇಳಿರುತ್ತಾರೆ. ಬ್ರಹ್ಮವೇ ಸತ್ಯವೆಂದು ಜಗತ್ತೇ ಬ್ರಹ್ಮ, ಬ್ರಹ್ಮವೇ ಜಗತ್ತು ಎರಡು ಒಂದೇ ಎಂಬ ಅದ್ವೈತ (ಎರಡಲ್ಲ ಒಂದು ) ಸಿದ್ಧಾಂತವನ್ನು ಕೊಟ್ಟಿರುತ್ತಾರೆ. ಕಲ್ಪನಾತೀತ ಜಗತ್ತು ಹಾಗು ಬ್ರಹ್ಮ ಸ್ವಯಂಭು. ತಾನೇ ತಾನಾಗಿಯೇ ಇದ್ದಿತು. ಅದೆಂದಿಗೂ ಹಾಗೇಯೇ ಇರುವಂತದು. ಅಹಂ ಬ್ರಹ್ಮಾಸ್ಮಿ ಅಂದರೇ, " ನಾನೇ ದೇವರಾಗಿದ್ದೇನೆ " ಅದರ ಹಿಂದೆ ದೊಡ್ಡ ಕಥೆಯೇ ಇದೆ.
    ಉದಾಹರಣೆಗೆ, ಜನಕ ಮಹಾರಾಜನ ಕಾಲದ ಕಥೆಯಲ್ಲಿ ಒಬ್ಬ ಜಡಭರತನೆಂಬ ಮಹಾಮೇಧಾವಿ, ಮಹಾಮುನಿ, ವೇಧಾಂತಿ ಬರುತ್ತಾನೆ. ಆತನೋ ಈ ಜಗತ್ತಿಗೆ ಅಂಟಿ ಕೊಂಡಿರುವುದುಲ್ಲ. ತಾನೊಬ್ಬನೇ ಇದ್ದು ಯಾರೊಂದಿಗೂ ಸಹವಾಸವಿಲ್ಲದೇ ಒಂಟಿಯಾಗಿ ತಮ್ಮ ಹೊಲದಲ್ಲಿಯೇ ಅಟ್ಟವನ್ನು ಮಾಡಿಕೊಂಡು ಅದರಲ್ಲಿ ಜೀವನ ನಡೆಸುತ್ತಿರುತ್ತಾನೆ. ತಾಯಿ, ಯಾರಾದರೂ ಊಟ ತಂದುಕೊಟ್ಟಲ್ಲಿ ತಿಂದು ಅಲ್ಲಿಯೇ ಮಲಗಿರುತ್ತಾನೆ. ಒಂದು ದಿನ ಜನಕ ಮಹಾರಾಜನನ್ನು ನೋಡಲು ಬಂದವ ರಾಜ ರಹುಗುಣ ಪಲ್ಲಕ್ಕಿ ಹೊರುವವರಲ್ಲಿ ಒಬ್ಬನಿಗೆ ತಾಳಲಾರದ ಹೊಟ್ಟೆ ನೋವಿನಿಂದ ನರಳುತ್ತಿರಲು. ಅಲ್ಲಿ ಹುಡುಕಲು ಬಲವಾದ ಗಟ್ಟಿಗನಾದ ಯುವಕನನ್ನು ಕಾಣುತ್ತಾರೆ. ಆತನನ್ನೇ ಪಲ್ಲಕ್ಕಿ ಹೊರಲು ಹೇಳುತ್ತಾರೆ. ವಿಧಿಯಿಲ್ಲದೇ ಒಪ್ಪಿಕೊಳ್ಳುತ್ತಾನೆ. ಹೊತ್ತು ಮುಂದೆ ನಡೆಯುವಲ್ಲಿ ಆಗಾಗ್ಗೆ ಪಲ್ಲಕ್ಕಿ ಏರಿಳಿತವಕಂಡು ರಹುಗುಣನು ಕೊಪಗೊಳ್ಳುತ್ತಾನೆ. ಅವನ ಅನುಚರರನ್ನು ಕೇಳುತ್ತಾನೆ. ಅವರು ಈ ಹೊಸದಾಗಿ ಬಂದ ಜಡಭರತನೇ ಹೀಗೆ ದಾಟಿ ದಾಟಿ ಹೆಜ್ಜೆಇಡುವುದರಿಂದ ಹೀಗಾಗುತ್ತಿದೆ ಎನ್ನಲು ವಿಷಯವರಿಯದೇ ಎಡಕಾಲಿನಿಂದ ಜಡಭರತನನ್ನು ಹೊದೆಯುತ್ತಾನೆ. ಆಗ ಕೆಳಗೆಬಿದ್ದ ಜಡಭರತನು ರಹುಗುಣನಿಗೆ ಒಂದು ಮಾತು ಪ್ರೆಶ್ನೆಯನ್ನು ಹೇಳುತ್ತಾನೆ ಕೇಳುತ್ತಾನೆ. ಅದೇನೆಂದರೇ, ನೀವು ನನ್ನ ಶರೀರವನ್ನು ಮಾತ್ರ ಹೊದೆಯಬಹುದೇ ಹೊರತು ನನ್ನನ್ನು ಮಾತ್ರ ನಿಮ್ಮಿಂದ ಹೊದೆಯಲು ಸಾಧ್ಯವೇಯಿಲ್ಲ ಎನ್ನುತ್ತಾನೆ. ಆಗ ಆಲ್ಲಿ ರಹುಗುಣ ರಾಜನೇ ಕುಸಿದು ಹೋಗುತ್ತಾನೆ. ಅಯ್ಯೋ ಎಂತಹ ತಪ್ಪುಮಾಡಿದೆ ಎಂದು ಪಲ್ಲಕ್ಕಿಯಿಂದ ಇಳಿದುಬಂದು ಜಡಭರತನ ಕಾಲಿಗೆ ಬೀಳುತ್ತಾನೆ. ತಾವು ಯಾರೆಂದು ಪ್ರೆಶ್ನಿಸುತ್ತಾನೆ. ಆಗ ಜಡಭರತನೆಂಬ ಈತನನ್ನೇ ತಾ ಹುಡುಕಿ ಬಂದುದಾಗಿ ಹೇಳಿ ಆತನ ಶಿಷ್ಯನಾಗುತ್ತಾನೆ.
    ಮುಂದೆ ಚಾಂಡಾಲನಿಂದ ಬುದ್ಧಿಯನ್ನು ಕಲಿತಿರುತ್ತಾರೆ. ಅದು ಹೇಗೆಂದರೇ, ಒಂದು ಸಂದರ್ಭದಲ್ಲಿ ಆಗಿನ ಕಾಲದಲ್ಲಿ ಕಾಲುದಾರಿ ಒಂದು ಒಣಿಯಲ್ಲಿ ಅಲ್ಲಿ ಶಂಕರಾಚಾರ್ಯರ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರಲು ಒಬ್ಬ ಚಾಂಡಾಲನು ಎದುರಾಗುತ್ತಾರೆ. ಅವನಿಗೆ ಶಂಕರರ ಶಿಷ್ಯರು ದಾರಿಬಿಡಿ, ದಾರಿಬಿಡಿ ಗುರುಗಳು ಬರುತ್ತಿದ್ದಾರೆ ಎಂದು ಕೂಗುತಿರುತ್ತಾರೆ. ಈ ಚಾಂಡಾಲನು ದಾರಿಯನ್ನು ಕೊಡುವುದಿಲ್ಲ ಆಗ ಏಕೆಂದು ಕೇಳಲಾಗಿ ಅವನು ಹೇಳುತ್ತಾನೆ. ನಿಮ್ಮ ಗುರುಗಳು ನನ್ನ ಪ್ರೆಶ್ನೇಗೆ ಉತ್ತರಿಸಿದರೇ ಮಾತ್ರವೇ ದಾರಿಕೊಡುತ್ತೇನೆ ಎನ್ನುತ್ತಾನೆ. ಇವರಿಗೆ ಎಲ್ಲಿಲ್ಲದ ಆಶ್ಚರ್ಯ, ಕೋಪ ಕಿಡಿಕೆಂಡವಾಗುತ್ತಾರೆ. ಆತನೋ ಬಲಶಾಲಿಯಾಗಿದ್ದಾನೆ. ಜೋತೆಗೆ ಅವನಲ್ಲಿ ಹೆಂಡದ ಮಡಿಕೆಯಿದೆ ನಾಲ್ಕು ನಾಯಿಗಳಿದೆ. ಶಿಷ್ಯರು ಆತನನ್ನು ಮುಟ್ಟುವಂತಿಲ್ಲ ಬೇರೆ ದಾರಿಕಾಣದೇ ಕೇಳಲು ಒಪ್ಪುತ್ತಾರೆ. ಆತನೋ ಮಹಾವೇಧಾಂತಿ ಬಹುಙ್ಞಾನವಂತ ( ಬೆಸ್ತ ವ್ಯಾಸರಂತೆ, ದರೋಡೆಕೊರ ವಾಲ್ಮೀಕಿಯಂತೆ ) ಅವನು ಶಂಕರರನ್ನು ಕುರಿತು " ನಾನು ನಿಮಗೆ ದಾರಿ ಬಿಡಬೇಕೆ ?. ಅಥವಾ ನನ್ನ ಶರೀರ ನಿಮಗೆ ದಾರಿಬಿಡಬೇಕೆ ? ". ಎನ್ನುತ್ತಾನೆ. ಶಂಕರರೋ ಭೂಮಿಗೆ ಇಳಿದುಬಿಡುತ್ತಾರೆ. ಹೇಳಲು ದಾರಿ ಕಾಣದೇ ಅತನ ಕಾಲಿಗೆಬಿದ್ದು ನಮಸ್ಕರಿಸಿ ತಪ್ಪೊಪ್ಪಿಕೊಳ್ಳುತ್ತಾರೆ. ಆದರೋ ಶಂಕರರು ಜಟ್ಟಿ ಕೆಳಗೆಬಿದ್ದರು ಮಣ್ಣಾಗಲಿಲ್ಲವೆನ್ನುವಂತೆ ಆತನೇ ಶಿವನೆಂದು ಚಾಂಡಾಲ ರೂಪದಲ್ಲಿ ಕಾಣಿಸಿಕೊಂಡನೆಂದು ಆತನ ಕೈಯಲ್ಲಿನ ಕೊಲೇ ತ್ರೀಶೂಲವೆಂದು ನಾಲ್ಕು ನಾಯಿಗಳೇ ನಾಲ್ಕು ವೇದಗಳೆಂದು. ಮಡಿಕೆಯ ಹೆಂಡವೇ ಅಮೃತವೆಂದು ಬುರುಡೆಯನ್ನು ಬಿಟ್ಟಿರುತ್ತಾರೆ.
    ಹೊಲಸಾದ ಮನುಸ್ಮೃತಿಯನ್ನು ಒಪ್ಪಿಕೊಂಡಿರುತ್ತಾರೆ. ಪ್ರತಿಯೊಂದು ಮಾತಿನಲ್ಲಿಯು ಈ ಐಹಿಕ ಜಗತ್ತಿಗೆ ಔಷದವಿದ್ದಂತೆ ಎಂದು ಘೋಷಿಸಿದ್ದಾರೆ. ಶೂದ್ರನ ಬಾಳು ಸಂಕಷ್ಟದಲ್ಲಿಯೇ ಇರಬೇಕು. ಅವನಿಗೆ ಮೋಕ್ಷವು ಲಭ್ಯವೇಯಿಲ್ಲ ವೆಂದಿರುತ್ತಾರೆ. ಏಕೆಂದರೆ, ಅವನಿಗೆ ವೇದದ ಪಾಠಕ್ಕೆ ಪ್ರವೇಶವಿಲ್ಲ ವೆಂದಿರುತ್ತಾರೆ. ವೇದ ಪಠಣವೇನಾದರೂ ಮಾಡಿದರೆ ಶೂದ್ರನ ನಾಲಿಗೆಯನ್ನು ಕತ್ತರಿಸಬೇಕು ವೇದಗಳನ್ನು ಕೇಳಿದರೇ ಕಿವಿಗೆ ಸೀಸವನ್ನು ಕಾಸಿ ಕಿವಿಗಳಿಗೆ ತುಂಬಬೇಕು ಎಂದು ಹೇಳುವ ಮನುವನ್ನು ಸಮರ್ಥಿಸುತ್ತಾರೆ.
    ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದು ಹೇಳಿರುತ್ತಾರೆ. ಇದರಲ್ಲಿ ನಾಗಾರ್ಜುನನ ಶೂನ್ಯ ಸಿದ್ಧಾಂತವಿದೆ. ಜೋತೆಗೆ ಜಡಭರತನ ಅಹಂ ಬ್ರಹ್ಮಾಸ್ಮಿಯು ಸೇರಿದೆ. ಅದನ್ನು ಸಹಿಸದ ಮಧ್ವರ ಅನುಯಾಯಿಗಳು ಇವರನ್ನು ಸಂಕರಾಚಾರ್ಯರು ( ಬೆರೆಕೆಹುಟ್ಟಿನವರೆಂದು ) ಮೊದಲಿಸಿದರು. ಹಾಗಾದರೇ, ಇವರ ಕಂಡ ಹೊಸ ಸಿದ್ಧಾಂತವಾವುದು ಅರಿಯದಾಗಿದೆ.
    ಬ್ರಹ್ಮವೆಂದರೇನು ?

    ReplyDelete

  3. ಈ ಸಿದ್ಧಾಂತವನ್ನೇ ತಾವು ಸೃಷ್ಟಿಸಿದ ಅದ್ವೈತ ಸಿದ್ಧಾಂತವೆಂದು ಹೇಳಿರುತ್ತಾರೆ. ಇದರಲ್ಲಿ ನಾಗಾರ್ಜುನನ ಶೂನ್ಯ ಸಿದ್ಧಾಂತವಿದೆ. ಜೋತೆಗೆ ಜಡಭರತನ ಅಹಂ ಬ್ರಹ್ಮಾಸ್ಮಿಯು ಸೇರಿದೆ. ಅದನ್ನು ಸಹಿಸದ ಮಧ್ವರ ಅನುಯಾಯಿಗಳು ಇವರನ್ನು ಸಂಕರಾಚಾರ್ಯರು ( ಬೆರೆಕೆಹುಟ್ಟಿನವರೆಂದು ) ಮೊದಲಿಸಿದರು. ಹಾಗಾದರೇ, ಇವರ ಕಂಡ ಹೊಸ ಸಿದ್ಧಾಂತವಾವುದು ಅರಿಯದಾಗಿದೆ.
    ಬ್ರಹ್ಮವೆಂದರೇನು ?
    ಬ್ರಹ್ಮವೆಂದರೇನೆಂದು ತಿಳಿಯುವ ಮೊದಲು ದೇವರೆಂದರೇನೆಂದು ತಿಳಿಯಬೇಕು. ದೇವರೆಂಬುದು ಒಂದು ನಂಬಿಕೆಯ ವಿಚಾರ. ಯಾವ ದೇವರನ್ನು ನಂಬುವುದು ಎಂದರೇ ನಮ್ಮ ನಂಬಿಕೆಗೆ ಪಾತ್ರರಾದ ದೇವರುಗಳು. ನಮ್ಮ ದೇವರುಗಳು ಯಾರೆಂದರೆ ? ಶಕ್ತಿ, ಶಿವಾ, ವಿಷ್ಣು, ಬ್ರಹ್ಮ, ಗಣೇಶ, ಹೀಗೆ ಹಿಂದೂ ದೇವರ ಸಾಲು ಮೂವತ್ತುಮೂರು ಕೋಟಿಯನ್ನು ದಾಟಿ ಮುಂದೆಯು ಹೋಗುತ್ತಲಿದೆ. ಅದಲ್ಲದೇ ಬೇರೆ ಧರ್ಮದ ದೇವರುಗಳು ಏಸು, ಬುದ್ಧ, ಮಹಾವೀರ, ಯಹ್ವೆಹ್( ಯಾಹ್ವಹ್ ), ಸಮನ್‍ತ ದೇವರುಗಳು, ಹೀಗೆ ಅದೊಂದು ಬಹಳ ದೇವರುಗಳ ಪಟ್ಟಿಬೆಳೆಯುತ್ತದೆ. ಈ ದೇವರುಗಳು ಇದ್ದಾರೆಂದು ಮಾನವರು ಮಾತ್ರ ನಂಬಿಕೆಯಿಟ್ಟಿರುವರು. ನಂಬಿಕೆಯೆಂಬುದು ಬರೀ ನಂಬಿಕೆ ಮಾತ್ರ. ಅದು ಏಂದೂ ನಿಜವಾಗಲಾರದು ಕಾರಣ, ನಂಬಿಕೆಯು ಏಂದೂ ಅನುಭವವಾಗ ಲಾರದು, ನಂಬಿಕೆಯೇ ಬೇರೆ ಅನುಭವವೇ ಬೇರೆ, ದೇವರ ಅನುಭವವೇ ಬಹಳ ಬಹಳ ಬಹಳ ಮುಖ್ಯ. ಆದರೆ, ಯಾರಿಗಾದರೂ ದೇವರ ಅನುಭವ ಸಿಕ್ಕಿದೆಯಾ ಎಂದರೇ ಜಗದೆಲ್ಲರಿಂದ ಇಲ್ಲವೆಂದೇ ಸಾಮಾನ್ಯ ಉತ್ತರ ಸಿಕ್ಕುವುದು. ಅಂದರೆ, ನಾವು ಹೇಳುತಿರುವ ಕೇಳಿರುವ ದೇವರುಗಳೆಲ್ಲಾ ಯಾವ ಕಾಲದಲ್ಲೂ ಯಾರಿಗೂ ಏಂದೂ ನಮ್ಮ ಸನಾತನರಿಗೂ ನಮಗೂ ಸಿಕ್ಕಿಲ್ಲವೆಂದರ್ಥ. ಅದೂ ಸತ್ಯವು ಕೂಡ. ಈ ದೇವರುಗಳ ಮೇಲೆ ಮತ್ತೊಂದು ದೇವರು ಇದೆಯೆಂದು ಎಂದು ನಮ್ಮ ಸನಾತನರು ಹೇಳಿದ್ದಾರೆ.
    ಉದಾಹರಣೆಗೆ ಶಿವನು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿದ್ದಾನೆಂಬುದು ನಿಮಗೆ ತಿಳಿದ ವಿಚಾರ ಹಾಗೆಯೇ ಚತುರ್ಮುಖ ಬ್ರಹ್ಮ ವಿಷ್ಣುವು ಯೋಗನಿದ್ರೆಯಲಿ ತಪಗೈದಿರುವುದು ಎಲ್ಲರಿಗೂ ತಿಳಿದ ವಿಚಾರ ಏಸುವು ತನ್ನ ತಂದೆಯಾದ ಪರಮಪಿತನಲ್ಲಿ ಯಾಚಿಸಿರುವುದು ಎಲ್ಲರಿಗೂ ತಿಳಿದವಿಚಾರ ಅದೇ ಆ ಶಕ್ತಿ ನಿರಂಕುಶ, ನಿರಂಜನ ಶಕ್ತಿ ಎಲ್ಲಕ್ಕೂ ಮಿಗಿಲಾದ ಒಡೆತನಹೊಂದಿರುವುದಿದೆ "ಅದೇ ಬ್ರಹ್ಮ",
    ಶಕ್ತಿಯದು ನಪುಂಸಕ ಲಿಂಗವಾಗಿದ್ದು , ಅದೇ ಅಲ್ಲಾ, ಅದೇ ಪರಮಪಿತ, ಅದೇ ಶಕ್ತಿ, ಅದೇ ಮಾತೃಕೆಗಳು ಸ್ತ್ರೀಲಿಂಗವಾದರೇ, ಶಿವಾ, ವಿಷ್ಣು, ಬ್ರಹ್ಮ, ಏಸು ಹೀಗೆ ಇವೇಲ್ಲಾ ಪುಲಿಂಗವಾದರೇ, ಇವನೆಲ್ಲಾ ಮೀರಿದ " ಆ ಆ ಬ್ರಹ್ಮವೇ "ಬೇರೆ ಅದು ನಪುಂಸಕಲಿಂಗ. ಅದು ಹೇಗಿದೆ ಎಂದರೇ, ಅದು ನಿರಾಕಾರ, ನಿರ್ವಿಕಾರ, ನಿರಾಧಾರ, ನಿಗೂಢ, ನಿರ್ಗುಣ, ನಿರ್ಜರ, ನಿರ್ಜೀವ, ನಿರ್ಮಲ, ನಿರ್ಲಿಪ್ತ, ನಿರ್ವಿವಾದ, ನಿರ್ವಾಣವಾಗಿದೆ ( ಶೂನ್ಯವಾಗಿದೆ ) . ವೇದಗಳ ನಾಯಕ ಬ್ರಹ್ಮನಿಗೂ ದೇವಾಲಯವಿದೆ ಆದರೇ, ಈ ಬ್ರಹ್ಮಕ್ಕೆ ಏಲ್ಲೂ ದೇವಸ್ಥಾನವಿಲ್ಲ. ಕಾರಣ ಮುಂದೆ ನೀವು ನೋಡುವಿರಂತೆ.
    ಉದಾಹರಣೆಗೆ :- ಸಂಸ್ಕೃತದಲ್ಲಿ ನಾನು ಈ ವಾಕ್ಯಗಳ ಬರೆಯಲು ಹೋಗಿಲ್ಲ ಕನ್ನಡದಲ್ಲಿಯೇ ಅರ್ಥಗಳನ್ನು ಮಾತ್ರ ಬರೆದಿದ್ದೇನೆ.
    ಓಂ ಎಂಬುವ ಪ್ರಣವ ಮಂತ್ರವು ಬ್ರಹ್ಮವೇ, ಆಕಾಶವು ಬ್ರಹ್ಮವೇ, ತೇಜಸ್ಸು ಬ್ರಹ್ಮವೇ, ಸತ್ಯ ಙ್ಞಾನ ಅನಂತವು ಬ್ರಹ್ಮವೇ, ಸ್ಮೃತಿಯು ಬ್ರಹ್ಮವೇ, ಪ್ರಾಣವು ಬ್ರಹ್ಮವೇ, ವಾಯುವು ಬ್ರಹ್ಮವೇ, ನೀನು ಬ್ರಹ್ಮವೇ, ನಾನು ಬ್ರಹ್ಮವೇ, ಈ ಆತ್ಮವು ಬ್ರಹ್ಮವೇ, ಪ್ರಙ್ಞಾನ ಬ್ರಹ್ಮವೇ, ಆಧಿತ್ಯನೂ ಬ್ರಹ್ಮವೇ, ಸುಖವು ಬ್ರಹ್ಮವೇ, ವಾಕ್ಕು ಬ್ರಹ್ಮವೇ, ಮನಸ್ಸು ಬ್ರಹ್ಮವೇ, ಸಂಕಲ್ಪವು ಬ್ರಹ್ಮವೇ, ಚಿತ್ತವು ಬ್ರಹ್ಮವೇ, ವಿಙ್ಞಾನವು ಬ್ರಹ್ಮವೇ, ಬಲವು ಬ್ರಹ್ಮವೇ, ಅನ್ನವು ಬ್ರಹ್ಮವೇ, ನೀರು ಬ್ರಹ್ಮವೇ, ಆಶೆಯು ಬ್ರಹ್ಮವೇ, ಕಣ್ಣು ಪರಮ ಬ್ರಹ್ಮವೇ, ಸತ್ಯವು ಪರಮ ಬ್ರಹ್ಮವೇ, ತಪಸ್ಸು ಬ್ರಹ್ಮವೇ, ಸರ್ವವು ಬ್ರಹ್ಮವೇ.
    "ಸರ್ವಂ ಖಿಲ್ವಿದಂ ಬ್ರಹ್ಮ" ಇದೆಲ್ಲಾವು ಬ್ರಹ್ಮ, " ಏತತ್ ಬ್ರಹ್ಮ ಅಪೂರ್ವಂ ಅನಪರಂವೊ ಅನಂತವೊ ಅಬಾಹ್ಯಂ", ಈ ಬ್ರಹ್ಮವು ಅಪೂರ್ವವೊ ಅನಪರವೊ ಅನಂತವೊ ಅಬಾಹ್ಯವೊ ಆಗಿದೆ. " ತತ್ ತ್ವಂ ಅಸಿ " ನೀನು ಅದೇ ಆಗಿದ್ದೀಯಾ. ಕಡೆಗೇ ಅಹಂ ಬ್ರಹ್ಮಾಸಿ ನಾನೇ ಬ್ರಹ್ಮ". ಈ ವೇಧಾಂತವನ್ನು ಶಂಕರಿಗೆ ಮುಂಚೆಯೇ ಬಹಳ ಜನ ಹೇಳಿದ್ದಾರೆ.
    ಈಗ ನಾನು ಹೇಳುವುದು ನಿಮ್ಮನ್ನು ಅಙ್ಞಾನದ ದೊಡ್ಡಕೂಪಕ್ಕೆ ತಳ್ಳಿದಂತೆ ನಿಮಗೆ ಭಾಸವಾಗಿರಬೇಕಲ್ಲವೇ, ಇದೇ ನಮ್ಮವರ ಶೂನ್ಯ ಸಂಪದ ಬ್ರಹ್ಮ. ಈಗಲೂ ನಮ್ಮದೇ ದೊಡ್ಡ ಧರ್ಮವೆಂದು ಸಾರುತ್ತಲಿ ಅದಕ್ಕಾಗಿ ಎಲ್ಲರು ಹೋರಾಡ ಬೇಕೆಂಬುದು ಸರಿಯಿಲ್ಲ. ಹೋರಾಟ ಮಾಡುವ ಅಙ್ಞಾನಿಗಳಿಗೆ ಧರ್ಮಾಂಧ ಮತಾಂಧರಾದ ಜನರಿಗೆ ಇದು ಅರ್ಥವಾದರೇ ಸರಿ ಎಂಬುದೇ ನನ್ನ ಅಭಿಲಾಷೆ.

    ಸೂಚನೆ : - ಇದರ ಅರ್ಥಗಳು ಬೇರೆಯಿದ್ದಲ್ಲಿ ಬರೆಯಿರಿ ಬರೆದಿರುವುದರಲ್ಲಿ ತಪ್ಪುಗಳಿದ್ದಲ್ಲಿ ತಿದ್ದಿಕೊಳ್ಳುವುದು.

    ReplyDelete
  4. ಗುರುಗಳೇ ವಂದನೆಗಳು.
    ನಿಮ್ಮ ಅನುಮತಿ ಇಲ್ಲದೇ ಮೇಲಿನ ನಿಮ್ಮ ಲೇಖನವನ್ನು ಮುಖಪುಟದಲ್ಲಿ ಕಾಪೀ ಪೇಸ್ಟ್ ಮಾಡಿದ್ದೇನೆ. ಕ್ಷಮಿಸಿ.
    ಎಲ್ಲರಿಗೂ ನಿಮ್ಮ ಲೇಖನ ಮುಟ್ಟಲಿ ಎಂಬ ಸದಿಚ್ಛೆಯಿಂದ ಇದನ್ನು ಮಾಡಿದ್ದೇನೆಯೇ ಹೊರತು ಇನ್ನ್ಯಾವ ಸ್ವಾರ್ಥವೂ ಇಲ್ಲ. ನಿಮ್ಮ ಹೆಸರು ತಿಳಿದಿರಲಿಲ್ಲವಾದ್ದರಿಂದ ಹೆಸರು ಬರೆಯಲಿಲ್ಲ

    ReplyDelete