Pages

Saturday, March 12, 2011

ಕಾಲಾಧೀನಂ ಜಗತ್ ಸರ್ವಂ- 1


ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶ್ರೀಮಠದ ಯತಿಗಳಾದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಸರಸ್ವತೀ ಸ್ವಾಮೀಜಿಯವರು ಒಂದು ದೇವಾಲಯದ ಕುಂಭಾಭಿಷೇಕವನ್ನು ನೆರವೇರಿಸಲು ಇಂದು ಹಾಸನಕ್ಕೆ ಆಗಮಿಸಿದ್ದರು.ಸರಳ ಸ್ವಭಾವದ ಸ್ವಾಮೀಜಿಯವರ ಮಾತುಗಳು ಭಕ್ತರನ್ನು ಆಕರ್ಷಿಸುತ್ತವೆ. ಅವರ ಪ್ರವಚನದ ಭಾಗಗಳನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಎರಡು ಮೂರು ಕಂತುಗಳಲ್ಲಿ ಇಂದಿನಿಂದ ಪ್ರಕಟಿಸಲಾಗುತ್ತಿದೆ.


Thursday, March 10, 2011

ಯೋಚಿಸಲೊ೦ದಿಷ್ಟು..೨೫

ಓದುಗರಲ್ಲಿ ವಿನ೦ತಿ:


ಫೆಬ್ರವರಿ ಕೊನೆಯ ವಾರಕ್ಕೇ ನನ್ನ ಈ ಸರಣಿಯ ೨೫ ನೇ ಕ೦ತು ಪ್ರಕಟಗೊಳ್ಳಬೇಕಿತ್ತು. ಆದರೆ ಕಾರಣಾ೦ತರಗಳಿ೦ದ ಶ್ರೀಕ್ಷೇತ್ರದ ರಥೋತ್ಸವ ಕಾರ್ಯಕ್ರಮಗಳಾದಿಗಳೆಡೆಯಲ್ಲಿ ಸಾಧ್ಯವಾಗಲಿಲ್ಲ. ಕ್ಷಮಿಸುವಿರೆ೦ದು ನ೦ಬಿದ್ದೇನೆ.

ಬರಹಗಾರನೊಬ್ಬನಿಗೆ ಇದಕ್ಕಿ೦ತಾ ಸ೦ತಸ ತರುವ ವಿಚಾರವಿರಲು ಸಾಧ್ಯವಿಲ್ಲ. ಎಲ್ಲಾ ಓದುಗರ ಸಹಾಯದಿ೦ದ ನನ್ನ ಈ ಚಿ೦ತನಾ ಸರಣಿ ಈ ವಾರ ತನ್ನ ೨೫ ನೇ ಕ೦ತನ್ನು ಕಾಣುತ್ತಿರುವುದು ನಿಜವಾಗಿಯೂ ಸ೦ತಸದ ಸ೦ಗತಿ! ಈ ಸರಣಿಯ ಆರ೦ಭದಲ್ಲಿ ಇದನ್ನೆಲ್ಲಾ ಊಹಿಸಿರಲೇ ಇಲ್ಲ! ಇಷ್ಟು ಕ೦ತುಗಳವರೆಗೂ ಮು೦ದುವರೆಯುತ್ತದೆ೦ಬ ನಿರೀಕ್ಷೆ ಸ್ವತ: ನನಗೇ ಇರಲಿಲ್ಲ! ಆದರೆ ಅದು ಸಾಧ್ಯವಾಗಿದೆ ಎ೦ದರೆ ನನ್ನ ಈ ಪ್ರಯತ್ನಕ್ಕೆ ಸದಾ ಅಧ್ಬುತವಾಗಿ ಪ್ರೋತ್ಸಾಹಿಸಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ ನೀವೇ ಕಾರಣಕರ್ತರು!ನಿಮ್ಮನ್ನು ಮರೆಯಲಾದೀತೆ?

ನನಗೆ ಮು೦ಜಾನೆಯ ಶುಭಾಷಿತ ಹಾಗೂ ರಾತ್ರೆಯ ಶಯನಾಷಿತಗಳೆ೦ದು ದಿನಕ್ಕೆರಡು ಬಾರಿ ಉತ್ತಮ ಆ೦ಗ್ಲ ನುಡಿಮುತ್ತುಗಳನ್ನು ನನ್ನ ಚರವಾಣಿಗೆ ರವಾನಿಸುತ್ತಿದ್ದ ಅತ್ರಾಡಿ ಸುರೇಶ್ ಹೆಗಡೆಯವರು (ಆಸುಮನ) ನನ್ನಲ್ಲಿ ಈ ಸರಣಿ ಯನ್ನು ಆರ೦ಭಿಸುವ ಬಗ್ಗೆ ಉದಯಿಸಿದ ಪ್ರೇರಣೆಗೆ ನಿಜವಾದ ಕಾರಣಕರ್ತರು.ನನ್ನ ಭಾಷಾನುವಾದದ ತಪ್ಪುಗಳನ್ನು ತಿಳಿಸಿ, ನುಡಿಮುತ್ತುಗಳ ಮೌಲ್ಯ ವರ್ಧಿತಗೊಳ್ಳಲೂ ಕಾರಣರು ಅವರೇ!  ಸುರೇಶ್ ಹೆಗಡೆಯವರಲ್ಲದೆ, ತಮ್ಮ ಬಿಡುವಿರದ ಕಾರ್ಯ ಗಳ ನಡುವೆಯೂ ಆಗಾಗ ತಮ್ಮ ಆ೦ಗ್ಲ ನುಡಿಮುತ್ತುಗಳನ್ನು ಈ ಮೇಲ್ ಹಾಗೂ ಚರವಾಣಿಗೆ ರವಾನಿಸುತ್ತಿದ್ದುದ್ದಲ್ಲದೆ, ಪ್ರತಿ ಕ೦ತನ್ನೂ ಅತೀವ ಆಸ್ಥೆಯಿ೦ದ ಓದಿ, ತಮ್ಮದೇ ಅಭಿಪ್ರಾಯಗಳನ್ನು ಪ್ರತಿಕ್ರಿಯೆಗಳ ಮೂಲಕ ನೀಡುತ್ತಿದ್ದ ಸ೦ತೋಷ ಆಚಾರ್ಯರೂ( ಅ೦ತರ್ನಾದ) ಸಹ ನನ್ನ ಆದರಣೀಯರು. ಈ ಸರಣಿಗೆ ಅದರದ್ದೇ ಆದ ಓದುಗ ಬಳಗ ದೊರೆತಿದೆ. ಮಾನ್ಯ ಓದುಗ ಮಹಾಶಯರಾದ ನೀವುಗಳು ಈ ಸರಣಿಯ ಈ ತರಹದ ಯಶಸ್ಸಿಗೆ ಕಾರಣರಾಗಿದ್ದೀರಿ. ನಿಮಗೆ ನನ್ನ ಕೃತಜ್ಞತೆಗಳು. ಸ೦ತಸ ತರುವ ವಿಚಾರವೆ೦ದರೆ ಈ ಸರಣಿಯ ಹೆಚ್ಚಿನ ಎಲ್ಲಾ ಕ೦ತುಗಳು ನಿಮ್ಮ ಪ್ರತಿಕ್ರಿಯೆಗಳಿಗೆ ಒಳಗಾಗಿವೆ... ಅ೦ದರೆ ಈ ಸರಣಿಯು ಗುರುತಿಸಲ್ಪಟ್ಟಿದೆ ಎ೦ದೇ ಅರ್ಥವಲ್ಲವೇ? ಎಲ್ಲರೂ ನನ್ನನ್ನು ಬೆಳೆಸುತ್ತಿದ್ದೀರಿ... ಲಾಲಿಸುತ್ತಿದ್ದೀರಿ... ನನ್ನಲ್ಲಿನ ಬರಹಗಾರನನ್ನು ಪ್ರೋತ್ಸಾಹಿಸುತ್ತಿದ್ದೀರಿ... ಸಾಕು ನನಗೆ! ವಿಶೇಷವಾಗಿ ವೇದಸುಧೆಯಲ್ಲಿ ಈ ಸರಣಿಯನ್ನು ಹಾಗೂ ನನ್ನಿತರ ಬರಹಗಳನ್ನು ನೇರವಾಗಿ ಪ್ರಕಟಿಸಲು ಅವಕಾಶ ಕಲ್ಪಿಸಿಕೊಟ್ಟ ಸರಣಿಯ ನಿರ್ವಾಹಕರಾದ ಹರಿಹರಪುರ ಶ್ರೀಧರ್, ಲೇಖಕವ೦ದ್ಯರಾದ ಶ್ರೀಯುತ ವಿ.ಎಸ್.ಭಟ್ಟರು, ಕವಿಮನೆತನದ ಕವಿ ನಾಗರಾಜರು, ಕವಿ ಸುರೇಶರು, ಸೀತಾರಾಮರು ಎಲ್ಲರೂ ನನ್ನ ಮಾನ್ಯರೇ.. ಅಲ್ಲದೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸರಣಿಯ ಯಶಸ್ಸಿಗೆ ಪ್ರೋತ್ಸಾಹಿಸಿದ ನನ್ನ ಮಿತ್ರರು ಹಾಗೂ ಸಮಸ್ತ ಓದುಗ ಬಳಗಕ್ಕೆ ನನ್ನ ನಮಸ್ಕಾರಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲೆ೦ದು ಆಶಿಸುವ...

ನಿಮ್ಮವ ನಾವಡ.



ಯೋಚಿಸಲೊ೦ದಿಷ್ಟು..೨೫



೧. ಜೀವನವನ್ನು ನಾವು ಯಾವ ರೀತಿಯ ಕ್ರಿಯಾಶೀಲತೆ ಇ೦ದ ಎದುರುಗೊಳ್ಳಬೇಕೆ೦ಬುದನ್ನು ಈ ಸಾಲುಗಳು ಚೆನ್ನಾಗಿ ವಿವರಿಸುತ್ತವೆ!

ಸೈನಿಕ: ಸರ್, ನಾವು ಎಲ್ಲಾ ಕಡೆಯಿ೦ದಲೂ ಶತ್ರುಗಳ ಮುತ್ತಿಗೆಗೆಒ ಳಗಾಗಿದ್ದೇವೆ.
ಮೇಜರ್: ಹಾಗಾದರೆ ನಾವು ಎಲ್ಲಾ ಕಡೆಯಿ೦ದಲೂ ಅವರ ಮೇಲೆ ಧಾಳಿ ಮಾಡಬಹುದು!

೨. ಗ್ರಹಾಮ್ ಬೆಲ್ ದೂರವಾಣಿ ಯನ್ನು ಕ೦ಡು ಹಿಡಿದರೂ, ತನ್ನ ಮನೆಗೆ೦ದೂ ಆತ ಒ೦ದೇ ಒ೦ದು ಕರೆಯನ್ನು ಮಾಡಲಿಲ್ಲ, ಏಕೆ೦ದರೆ ಅವನ ಹೆ೦ಡತಿ ಮತ್ತು ಮಗಳು ಕಿವುಡರಾಗಿದ್ದರು! ಆತನ ವ್ಯಕ್ತಿತ್ವದ ಈ ಅ೦ಶವೇ “ಪರರಿಗಾಗಿ ಜೀವನವನ್ನು ಮುಡುಪಾಗಿಡುವುದು“ ಎ೦ಬುದರ ಸಾರ್ಥಕಾರ್ಥವಲ್ಲವೇ?

೩. ಜೀವನದಲ್ಲಿ ನಮ್ಮನ್ನು ಮಾನಸಿಕ ಕೊಲ್ಲುವುದೆ೦ದರೆ “ಸ೦ಬ೦ಧಗಳು“. ನಾವು ಅದರಿ೦ದ ಕಳಚಿಕೊ೦ಡರೆ ನಮಗೆ ನೋವಾಗುತ್ತದೆ. ಆದರೆ “ಏಕಾ೦ತ“ ಎನ್ನುವುದೊ೦ದು ಅಧ್ಬುತ! ಇದು ನಮಗೆಲ್ಲವನ್ನೂ ಕಲಿಸುತ್ತದೆ ಹಾಗೂ ನಾವು ಅದರಿ೦ದ ಕಳಚಿಕೊ೦ಡಲ್ಲಿ ಎಲ್ಲವನ್ನೂ ಗಳಿಸುತ್ತೇವೆ!

೪. ನಮ್ಮ ಜೀವನವೆನ್ನುವುದು ನಮ್ಮ ಎದುರಿಗೆ ನಟಿಸುವವರ ಜನರೊ೦ದಿಗಿನ ಗು೦ಪಲ್ಲ! ಅದು ನಮ್ಮ ಬೆನ್ನ ಹಿ೦ದಿನ ಪ್ರಾಮಾಣಿಕ ಜನರ ಗು೦ಪು!

೫.ಒ೦ದು ಕೋಳಿಯ ಮೊಟ್ಟೆಯು ಬಾಹ್ಯಶಕ್ತಿಗಳಿ೦ದ ಒಡೆಯಲ್ಪಟ್ಟರೆ ಒ೦ದು ಹತ್ಯೆ!ಆದರೆ ಆ೦ತರಿಕವಾಗಿ ಮೊಟ್ಟೆಯೊ೦ದು ತಾನೇ ಒಡೆದರೆ ಒ೦ದು ಜನನ! ಮಹಾನ್ ಕಾರ್ಯಗಳು ಆರ೦ಭಗೊಳ್ಳುವುದೇ ಆ೦ತರ್ಯದಿ೦ದ!

೬. ನಮ್ಮನ್ನು ಪ್ರೀತಿಸುವವರಿಗಾಗಿ, ಅವರನ್ನೇ ಕಳೆದುಕೊಳ್ಳುವುದಕ್ಕಿ೦ತ ನಮ್ಮ ಸ್ವಾಭಿಮಾನ (ಅಹ೦ಕಾರ)ವನ್ನು ಕಳೆದು ಕೊಳ್ಳುವುದೇ ಉತ್ತಮ!

೭. ಚೆನ್ನಾಗಿ ಕಾಯಿಸಿದ ಚಿನ್ನದಿ೦ದ ಆಭರಣವನ್ನು ಮಾಡಬಹುದು! ಹಾಗೆಯೇ ತಾಮ್ರದಿ೦ದ ತ೦ತಿಗಳನ್ನೂ, ಸತತ ಉಳಿಪೆಟ್ಟುಗಳ ಹೊಡೆತದಿ೦ದ ಒ೦ದು ಸು೦ದರ ಮೂರ್ತಿಯನ್ನೂ ಕೆತ್ತಬಹುದು. ಹಾಗೆಯೇ ಹೆಚ್ಚೆಚ್ಚು ನೋವು೦ಡಷ್ಟೂ ನಮ್ಮ ಜೀವನದಲ್ಲಿನ ಮೌಲ್ಯ ಉನ್ನತಿಗೇರುತ್ತಾ ಹೋಗುತ್ತದೆ!

೮.ನ೦ಬುವುದಾದರೆ ಒಬ್ಬ ವ್ಯಕ್ತಿಯನ್ನು ಸ೦ಶಯಕ್ಕೆಡೆಯಿಲ್ಲದ೦ತೆ ನ೦ಬೋಣ.ಅದರಿ೦ದ ನಾವು ಕಳೆದುಕೊಳ್ಳು ವುದೇನಿಲ್ಲ !ಬದಲಾಗಿ ನಮ್ಮ ಜೀವನದ ಹಾದಿಗೊ೦ದು ಪಾಠವನ್ನೋ ಅಥವಾ ಒಬ್ಬ ಉತ್ತಮ ಆತ್ಮೀಯನನ್ನೋ ಪಡೆಯಬಹುದು!

೯. ದೇವರು ಎಲ್ಲಾ ಕಡೆಯೂ ಇದ್ದಾನೆ೦ದ ಮೇಲೆ ನಮ್ಮಲ್ಲೇಕೆ ಇಷ್ಟೊ೦ದು ದೇವಸ್ಥಾನಗಳು ಎ೦ಬ ಪ್ರಶ್ನೆ ಬುಧ್ಧಿವ೦ತನೊಬ್ಬ ಉತ್ತರಿಸಿದ ರೀತಿ ಹೀಗಿದೆ: ಗಾಳಿಯು ಎಲ್ಲಾ ಕಡೆಯೂ ಇದ್ದರೂ ನಾವು ಅದರ ತೀವ್ರತೆಯನ್ನು ಅನುಭವಿಸಲು “ಫ್ಯಾನ್“ ಉಪಯೋಗಿಸುವುದಿಲ್ಲವೇ? ಹಾಗೆಯೇ “ದೇವರೆ೦ಬುದೂ“ ಕೂಡಾ!

೧೦. ನಾವೇ “ಎಲ್ಲವೂ“ ಅಲ್ಲ, ಅ೦ತೆಯೇ ನಾವು “ ಏನೂ ಅಲ್ಲ“ ಎ೦ಬುದೂ ಅಲ್ಲ! ಆದರೆ ನಾವು “ಏನನ್ನಾದರೂ “ ಸಾಧಿಸಲೆ೦ದೇ ಜನ್ಮ ತಳೆದಿದ್ದೇವೆ ಎ೦ಬುದು ಮಾತ್ರ ಹೌದು!

೧೧. ಈದಿನ ನಮ್ಮ “ಎಣಿಕೆ“ಯ೦ತೆ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ ಬೇಸರ ಬೇಡ. ನಾಳೆ ನಮಗಾಗಿ ಪುನ: “ನವ ಆರ೦ಭ“ಕ್ಕಾಗಿ ಕಾಯುತ್ತಿದೆ!

೧೨. ಪರಸ್ಪರ ಉತ್ತಮ “ನಡತೆ“ ಹಾಗೂ ಉತ್ತಮ “ಹೃದಯ“ ವಿರದಿದ್ದಲ್ಲಿ ಯಾವುದೇ ಸ೦ಬ೦ಧಗಳೂ ದೀರ್ಘ ಕಾಲ ಬಾಳಲಾರವು!

೧೩. “ಸಾಧನೆ“ ಸತತ ಕ್ರಿಯಾಶೀಲತೆಯನ್ನು ಬಯಸುತ್ತದೆ! ಸಾಧಕರು ತಪ್ಪುಗಳನ್ನು ಮಾಡಿದರೂ, ಕೂಡಲೇ ತಿದ್ದಿಕೊ೦ಡು “ಸಾಧನೆ“ ಸರಿ ಹಾದಿಗೆ ಮರಳುವರೇ ವಿನ: “ಕ್ರಿಯಾಶೀಲತೆ“ಯನ್ನೇ ಸಮಾಪ್ತಿಗೊಳಿಸುವುದಿಲ್ಲ!

೧೪.ದ್ವೇಷವು ತಪ್ಪುಗಳನ್ನು ಹಿಗ್ಗಿಸಿ ತೋರಿಸಿದರೆ, ಪ್ರೇಮವು ಅವನ್ನು ಮರೆಮಾಡುತ್ತದೆ!

೧೫.ದೊಡ್ಡವರ ಕೆಲಸಗಳಲ್ಲಿ ಭಾಗಿಯಾಗಬಹುದು.ಆದರೆ ಆ ಕೆಲಸಗಳ ಫಲದಲ್ಲಿ ಭಾಗಿಯಾಗಲಾಗದು!

೧೬.ಧನವನ್ನು ಸ೦ಪಾದಿಸುವುದು ಕಷ್ಟ! ಸ೦ಪಾದಿಸಿದ ಮೇಲೆ ಅದನ್ನು ಕಾಪಿಟ್ಟುಕೊಳ್ಳುವುದೂ ಕಷ್ಟ! ಕಳೆದುಕೊಳ್ಳುವುದು ಸಾವಿಗಿ೦ತಲೂ ಭೀಕರ!

೧೭.ದೊಡ್ಡವರಿಗೆ ದೃಢ ಮನಸ್ಸಿದ್ದರೆ, ಅಲ್ಪರಿಗೆ ಅನೇಕ ಅಪೇಕ್ಷೆಗಳಿರುತ್ತವೆ!

೧೮.ನಮ್ಮಲ್ಲಿನ “ಹೃದಯ ಶ್ರೀಮ೦ತಿಕೆ“ಯು ನಮ್ಮಲ್ಲಿನ ಸ೦ಪತ್ತನ್ನು ಅಳೆಯಲು ಬ೦ದವರಿ೦ದ ಅಳೆಯಲಾಗದು. ಬದಲಾಗಿ ನಮ್ಮಭಾವನೆಗಳನ್ನು ಅರ್ಥೈಸಿಕೊಳ್ಳುವವರಿ೦ದ ನಮ್ಮ ಶ್ರೀಮ೦ತಿಕೆಯು ಅಳೆಯಲ್ಪಡುತ್ತದೆ!

೧೯.ಸ೦ಪತ್ತಿನ ಜೊತೆಗೇ “ಹೃದಯ ಶ್ರೀಮ೦ತಿಕೆ“ಯೂ ಬೆರೆತಿದ್ದರೆ,ನಾವು ಸಕಲ ಅರ್ಥದಲ್ಲಿಯೂ ನಿಜವಾದ “ಶ್ರೀಮ೦ತ“ರೇ!

೨೦. ನಾವು ದು:ಖದಲ್ಲಿರುವ ಸಮಯವೇ ನಮ್ಮ ನಿರಾಶೆಯ ಉತ್ತು೦ಗವಲ್ಲ! ಬದಲಾಗಿ ನಮ್ಮ ದು:ಖದ ಸಮಯದಲ್ಲಿ ನಮ್ಮ “ಅಳಲನ್ನು‘‘ ಕೇಳುವವರು ಯಾರೂ ಇಲ್ಲದಿರುವ ಸಮಯವು ನಮ್ಮ ನಿರಾಶೆಯು ಅದರ ಉತ್ತು೦ಗವನ್ನು ತಲುಪಿರುತ್ತದೆ!!

೨೧.ಕಳೆದು ಹೋದ “ನಿನ್ನೆ“ಯಿ೦ದ ಕಲಿತು ವರ್ತಮಾನದ “ಈದಿನ“ವನ್ನು ಅನುಭವಿಸುತ್ತಾ, ಭವಿಷ್ಯತ್ತಿನ “ನಾಳೆ“ ಯ ಬಗ್ಗೆ ನ೦ಬಿಕೆ ಇಟ್ಟುಕೊಳ್ಳೋಣ!

೨೨.ನಿಜವಾದ “ಬ೦ಧ“ವನ್ನು ಕಾಪಿಟ್ಟುಕೊಳ್ಳುವುದು ಕಷ್ಟ! ಬ೦ಧುತ್ದದ ನಡುವೆ “ಅಸಹನೀಯತೆ“ ಯು ನೆಲಸಿದಾಗ ಅದನ್ನು ಕೈಬಿಡದೆ, ಪರಿಹರಿಸಿಕೊಳ್ಳುವ ಬಗ್ಗೆ ಆಲೋಚಿಸೋಣ. ಏಕೆ೦ದರೆ ನಾವು ನಿಜವಾದ “ಮಿತ್ರ“ ರನ್ನು ಯಾ ಬ೦ಧುಗಳನ್ನು ಗಳಿಸುವುದೇ ಅಪರೂಪ!!

೨೩. ಯಾರಾದರೂ “ಆದರ್ಶ“ ವನ್ನು ಅನುಕರಿಸುವವರೆಗೂ ಪ್ರತಿಯೊ೦ದೂ ಹೊಸ “ಆದರ್ಶ“ವು ದೊಡ್ಡ “ಹಾಸ್ಯ“ವೆ೦ದೇ ಪರಿಗಣಿಸಲಾಗುತ್ತದೆ ಹಾಗೆಯೇ ನಾವು ನ೦ಬಿಕೊ೦ಡು ಪ್ರಯತ್ನಿಸುವವರೆಗೂ,ಪ್ರತಿಯೊ೦ದೂ ಹೊಸ “ಚಿ೦ತನೆ“ಯನ್ನೂ ನಾವು “ಸರಳ“ವೆ೦ದೇ ಅ೦ಗೀಕರಿಸಿರುತ್ತೇವೆ!

೨೪. ನಮ್ಮ ಬದುಕಿನ “ಅರ್ಥ“ಬದಲಾಯಿಸಿದವರನ್ನು ಮರೆಯುವುದು ಹೇಗೆ ಕಷ್ಟವೋ ಹಾಗೆಯೇ, ನಮ್ಮ ಬದುಕಿನಲ್ಲಿ “ಏನೂ ಅಲ್ಲ“ದವರನ್ನೂ ಮರೆಯುವುದು ತುಸು ಕಷ್ಟವೇ!!

೨೫. ಎಲ್ಲವನ್ನೂ ಅರ್ಥೈಸಿಕೊ೦ಡು, ಸರಿದೂಗಿಸಿಕೊ೦ಡು ಹೋಗುವ ಸಾಮರ್ಥ್ಯವಿದ್ದಲ್ಲಿ, ಜೀವನದ ಪ್ರತಿಕ್ಷಣವನ್ನೂ ಅಧ್ಬುತವಾಗಿ ಆನ೦ದಿಸಬಹುದು!



Tuesday, March 8, 2011

ವೇದೋಕ್ತ ಜೀವನ ಪಥ - ಜೀವಾತ್ಮ ಸ್ವರೂಪ -6

     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ನೋಡಿರಿ:-


ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |

ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)

     [ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಯಿಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.

     ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ತಾನು ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಈ ಬಗ್ಗೆ ಅಜ್ಞಾನದಿಂದ ದೂರ ಸರಿಯಬೇಕು. ಮಾನವನು ಹುಟ್ಟಿನಿಂದಲೇ ಪಾಪಿ, ಆದುದರಿಂದ ಅವನು ಯಾವನೋ ದೇವಪುತ್ರನ ನೆರವಿಲ್ಲದೆ ಭಗವ0ತನ ರಾಜ್ಯದಲ್ಲಿ ಪ್ರವೇಶಿಸಲಾರ - ಎನ್ನುವುದಕ್ಕಿಂತ ಘೋರ ಪಾತಕವಿಲ್ಲ. ಭಗವಂತನ ರಾಜ್ಯ ಬೇರೆಲ್ಲೋ ತೇಲಾಡುತ್ತಿಲ್ಲ. ಸರ್ವವ್ಯಾಪಕನಾದ ಪ್ರಭುವಿನ ರಾಜ್ಯ ಇಲ್ಲಿಯೇ ಇದೆ. ವೇದಗಳು ಮೋಕ್ಷದ ಮಾರ್ಗವನ್ನು ಹೀಗೆ ವರ್ಣಿಸುತ್ತವೆ:


ಶುನಃಶೇಪೋ ಹ್ಯಹ್ವದ್ ಗೃಭೀತಸ್ ತ್ರ್ರಿಷ್ವಾದಿತ್ಯಂ ದ್ರುಪದೇಷು ಬದ್ಧಃ |
ಅವೈನಂ ರಾಜಾ ವರುಣಃ ಸಸೃಜ್ಯಾದ್ ವಿದ್ವಾನ್ ಅದಬ್ಧೋ ವಿ ಮುಮೋಕ್ತು ಪಾಶಾನ್ || (ಋಕ್.೧.೨೪.೧೩)


     [ತ್ರಿಷು ದ್ರುಪದೇಷು ಗೃಭೀತಸ್ ಬದ್ಧಃ] ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳ ಅಥವಾ ತನು-ಮನ-ವಚನ ಎಂಬ ಮೂರು ಗೂಟಗಳಿಗೆ ಕಟ್ಟುಬಿದ್ದ, [ಶುನಃಶೇಪಃ] ಸುಖಾಭಿಲಾಷಿಯಾದ ಜೀವನು [ಆದಿತ್ಯಂ ಹಿ ಅಹ್ವತ್] ಅಖಂಡನಾದ ಪ್ರಭುವಿಗೆ ಮೊರೆಯಿಡುತ್ತಾನೆ. [ರಾಜಾ ವರುಣಃ] ವಿಶ್ವಸಾಮ್ರಾಟ್ ವರಣೀಯ ಪ್ರಭುವು [ಏನಂ ಅವ ಸಸೃಜಾತ್] ಇವನನ್ನು ಸಡಿಲಗೊಳಿಸುತ್ತಾನೆ. [ಅದಬ್ಧಃ ವಿದ್ವಾನ್] ಪ್ರಾಕೃತ ಮೋಹಕ್ಕೆ ಅಡಿಯಾಳಾಗದ ವಿದ್ವಾನ್ ಜೀವನು [ಪಾಶಾನ್ ವಿ ಮುಮೋಕ್ತು] ತನ್ನ ಬಂಧನಗಳನ್ನು ತಾನೇ ಕಡಿದುಹಾಕಬೇಕು.

     ಹೌದು, ಮಧ್ಯಸ್ಥನಿಗೆ ಇಲ್ಲಿ ಎಡೆಯೇ ಇಲ್ಲ. ಪ್ರಭೂಪಾಸನೆ ಮಾಡಬೇಕು. ಆಗ ಪ್ರಭು ಭೋಗವಿಲಾಸದ ಕಟ್ಟನ್ನು ಸಡಿಲಿಸುತ್ತಾನೆ. ಜ್ಞಾನಿಯಾದ ಜೀವನು ತನ್ನ ಪಾಶಗಳನ್ನು ತಾನೇ ಕಡಿಯಬೇಕು. ಒಬ್ಬನೇ ಏನು ದೇವಪುತ್ರ? ದೇವಪುತ್ರಾ ಋಷಯಃ (ಋಕ್. ೧೦.೬೨.೪) - ದೇವಪುತ್ರರೇ! ತತ್ವದರ್ಶಿಗಳೇ - ಎಂದು ಎಲ್ಲರನ್ನೂ ವೇದ ಸಂಬೋಧಿಸಿರುವುದನ್ನು ಪಾಠಕರಾಗಲೇ ಓದಿದ್ದಾರೆ. ಮಾನವ, ಜನ್ಮದಿಂದಲೇ ಪಾಪಿ ಎನ್ನುವುದು ಅಜ್ಞಾನದ ಪರಮಾವಧಿ. ವೇದದ ಈ ಉದ್ಭೋದನವನ್ನು ಆಲಿಸಿ, ಮುಂದಿನ ಅಧ್ಯಾಯ ಪ್ರಾರಂಭಿಸೋಣ.

ಶುಕ್ರೋಸಿ ಭ್ರಾಜೋಸಿ ಸ್ವಶಸಿ ಜ್ಯೋತಿರಸಿ  |
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ  || (ಅಥರ್ವ. ೨.೧೧.೫)


     ಓ ಮಾನವ! [ಶುಕ್ರಃ ಅಸಿ] ನೀನು ನಿರ್ಮಲನಾಗಿದ್ದೀಯೆ. [ಭ್ರಾಜಃ ಅಸಿ] ಪಾಪದಾಹಕ ಪ್ರಕಾಶವಾಗಿದ್ದೀಯೆ. [ಸ್ವಃ ಅಸಿ] ಸುಖಸ್ವರೂಪನಾಗಿದ್ದೀಯೆ. [ಜ್ಯೋತಿಃ ಅಸಿ] ಜ್ಞಾನದ ಜ್ಯೋತಿಯಾಗಿದ್ದೀಯೆ. [ಶ್ರೇಯಾಂಸಂ ಆಪ್ನುಹಿ] ಶ್ರೇಯಸ್ಸನ್ನು ಸಾಧಿಸಿಕೋ. [ಸಮಂ ಅತಿಕ್ರಾಮ] ಆಧ್ಯಾತ್ಮ ಪಥದಲ್ಲಿ ಸಮನಾದವನನ್ನು ಮೀರಿಸಿ ಮುಂದೆ ನಡೆ.
-೦-೦-೦-೦-

Saturday, March 5, 2011

ವೇದಗಳ ಬಗ್ಗೆ ಒಂದು ಚಿಂತನೆ - ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ



 ಕಳೆದ ವರ್ಷ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 19 ರಿಂದ 28 ರವರೆಗೆ ಹಾಸನದ ಶಂಕರ ಮಠದಲ್ಲಿ ನಡೆದ ಉಪನ್ಯಾಸ ಮಾಲೆಯಲ್ಲಿ ವೇದಾಧ್ಯಾಯಿಗಳಾದ ಬೆಂಗಳೂರಿನ ಶ್ರೀ ಸುಧಾಕರ ಶರ್ಮರು  ಸೆ.21 ರಿಂದ 23 ರವರೆಗೆ `ವೇದ- ಎಲ್ಲರಿಗಾಗಿ' ವಿಷಯವಾಗಿ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಹಾಸನದ ಪತ್ರಕರ್ತ ಎಚ್.ಎಸ್. ಪ್ರಭಾಕರ-ಅಂದರೆ ನಾನು ಶ್ರೀ ಸುಧಾಕರ ಶರ್ಮ ಅವರ ಸಂದರ್ಶನ ನಡೆಸಿದೆ. ಅದರ ಸಾರಾಂಶವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ವೇದಗಳು: ಅಲ್ಲಿ ಎಲ್ಲವೂ ಇದೆ; ಎಲ್ಲರಿಗಾಗಿಯೂ ಇದೆ!

ಲೋಕಾ ಸಮಸ್ತಾಃ ಸುಖಿನೋ ಭವಂತು||
ಸರ್ವಃ ಸರ್ವತ್ರ ನಂದತು||
ಮಾ ಕಶ್ಚಿತ್ ದುಃಖಮಾಪ್ನುಯಾತ್||
ಸರ್ವೇ ಜನಾಃ ಸುಖಿನೋ ಭವಂತು||
ಸರ್ವೇ ಭದ್ರಾಣಿ ಪಶ್ಯಂತು||
ಸರ್ವಸ್ತರತು ದುರ್ಗಾಣಿ||
ಸರ್ವೇ ಸಂತು ನಿರಾಮಯಾಃ||

ನಮ್ಮ ತಲೆ ತಲೆಮಾರುಗಳಷ್ಟು ಹಿಂದಿನ ಜನರು ಪ್ರತಿದಿನ ಉಷಾಃ ಕಾಲದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಕೈಮುಗಿದುಕೊಂಡು ಋಷಿ ಮುನಿಗಳು ರಚಿಸಿದ ಮೇಲ್ಕಂಡ ವೇದ ಮಂತ್ರಗಳನ್ನು ಪಠಿಸುತ್ತಾ ಪ್ರಾರ್ಥಿಸುತ್ತಿದ್ದರು. ಪಂಚ ಭೂತಗಳೂ ಸುಸ್ಥಿತಿಯಲ್ಲಿರಲಿ; ಸಮಸ್ತ ಲೋಕವೂ ಚೆನ್ನಾಗಿರಲಿ; ಸರ್ವರಿಗೂ ಮಂಗಳವಾಗಲಿ ಎಂಬ ಉದಾತ್ತ ವಿಶಾಲ ಮನೋಭಾವ ಅಂದಿನ ಜನರಿಗಿತ್ತು.
ಆದರೆ ಈಗೇನಾಗಿದೆ? ಹಾಗಾದರೆ ವೇದಗಳು ಅಪ್ರಸ್ತುತವೆ?
ಚತುರ್ವೇದಗಳನ್ನೂ ಅರಗಿಸಿಕೊಂಡಿರುವ ಮಹಾನ್ ಚೇತನ ಶತಾಯುಷಿ ಶ್ರೀ ಸುಧಾಕರ ಚತುರ್ವೇದಿ ಅವರ ಶಿಷ್ಯರೂ ಹಾಗೂ ವೇದಾಧ್ಯಾಯಿಗಳೂ ಆಗಿರುವ ಬೆಂಗಳೂರಿನ ಸುಧಾಕರ ಶರ್ಮ ಅವರ ಪ್ರಕಾರ ವೇದಗಳು ಖಂಡಿತ ಅಪ್ರಸ್ತುತವಲ್ಲ! ಅಜ್ಞಾನಿಗಳೂ, ಜಗತ್ತಿನ ನಿತ್ಯ ಸತ್ಯಗಳನ್ನು ಅರಗಿಸಿಕೊಳ್ಳಲಾಗದವರು; ಅದರಂತೆ ನಡೆಯುವ ಸಾಮಥ್ರ್ಯವಿಲ್ಲದವರು ಈ ಪಲಾಯನ ವಾದ ಮಂಡಿಸುತ್ತಾರಷ್ಟೆ. ಈ ಒಂದೇ ಭೂಮಿಯ ಮೇಲೆ ಮನುಷ್ಯ ಹೇಗೆ ಬದುಕಬೇಕು; ಅವನ ರೀತಿ ನೀತಿಗಳು ಹೇಗಿರಬೇಕು; ಅವನ ಅಂತಿಮ ಗುರಿ ಏನು ಎಂಬುದನ್ನು ತಿಳಿಸಿಕೊಡುವ ವೇದಗಳು ``ಮನು ಕುಲದ ಸಂವಿಧಾನ''ವಾಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳ ಜತೆಗೆ 6 ವೇದಾಂಗಗಳಿವೆ. ಅವು- ಛಂದಸ್ಸು, ಶಿಕ್ಷಾ, ವ್ಯಾಕರಣ, ನಿರುಕ್ತಿ, ಜ್ಯೋತಿಷ ಹಾಗೂ ಕಲ್ಪ. ಜತೆಗೆ 6 ದರ್ಶನಗಳಿವೆ- ಅವು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ ಹಾಗೂ ಉತ್ತರ ಮೀಮಾಂಸ. ಇದಲ್ಲದೆ ಆಯುರ್ವೇದ  ಮತ್ತಿತರ ಉಪ ವೇದಗಳೂ ಇವೆ. ಇವೆಲ್ಲವನ್ನೂ ಒಳಗೊಂಡ `ವೇದ ವೇದಾಂಗ ದರ್ಶನಗಳ' ವಿಷಯಗಳೇ ಜಗತ್ತಿನ ನಿತ್ಯ ಸತ್ಯಗಳು. ಉಳಿದಂತೆ ಪುರಾಣಗಳು, ಪುಣ್ಯ ಕಥೆಗಳು, ನಂಬಿಕೆಗಳು, ಆಚರಣೆಗಳು, ಪದ್ಧತಿಗಳು ಇತ್ಯಾದಿ ಅಪಭ್ರಂಶಗಳೆಲ್ಲ ನಾವು ಸೃಷ್ಟಿಸಿಕೊಂಡ ಮಿಥ್ಯಗಳೇ ಆಗಿವೆ. ದುರದೃಷ್ಟವಶಾತ್ ಭಾರತವೂ ಸೇರಿದಂತೆ ಈಗ ಜಗತ್ತು ಇಂತಹ ಮಿಥ್ಯಗಳ ಹಾದಿಯಲ್ಲೇ ನಡೆಯುತ್ತಿದೆ! `ವೈದಿಕ ಸಿದ್ಧಾಂತ ಹಾಗೂ ಮಾನವೀಯ ಧರ್ಮ' ಮುಖ್ಯವೇ ಹೊರತು ಯಾವುದೇ ವ್ಯಕ್ತಿಗಳಲ್ಲ. ಆದರೆ ಇಂದು ಎಲ್ಲವೂ ವ್ಯಕ್ತಿ ಪ್ರಧಾನ್ಯತೆ ಮೇಲೆಯೇ ಸಾಗುತ್ತಿವೆ. ಇದು ಸಲ್ಲದು ಎಂಬ ಪ್ರಖರ ಹಾಗೂ ಕ್ರಾಂತಿಕಾರಿ ಸತ್ಯಗಳನ್ನು ಅವರು ಮುಂದಿಡುತ್ತಾರೆ.
ತಪ್ಪು ಕಲ್ಪನೆಗಳು:
ವೇದಗಳ ಕುರಿತು ಇಂದು ಅನೇಕ ತಪ್ಪು ಕಲ್ಪನೆಗಳಿವೆ. ಈ ನಕಾರಾತ್ಮಕ ಕಲ್ಪನೆಗಳದ್ದೇ ಸಾಮ್ರಾಜ್ಯ. ವೇದ ಎಂದರೆ `ಜ್ಞಾನ' ಎಂಬ ಅರ್ಥವಷ್ಟೆ. ಈ ಜ್ಞಾನ ರಾಶಿ ಜಗತ್ತಿನ ಯಾರ ಸ್ವತ್ತೂ ಅಲ್ಲ; ವೇದಗಳಲ್ಲಿ ಯಾವುದೇ ನಿರ್ದಿಷ್ಟ ಜಾತಿ, ಮತ, ಪಂಥಗಳ ಉಲ್ಲೇಖವಿಲ್ಲ. ವೇದಗಳ ಮೇಲೆ ಯಾರಿಗೂ ಅಧಿಕಾರ ಸ್ಥಾಪಿಸುವ ಹಕ್ಕಿಲ್ಲ. ಈ ಜಗತ್ತಿನೊಂದಿಗೇ ಸೃಷ್ಟಿಯಾದ ವೇದಗಳಲ್ಲಿ ಎಲ್ಲವೂ ಅಡಗಿದೆ ಹಾಗೂ ಅವು ಜಗತ್ತಿನ ಎಲ್ಲರಿಗಾಗಿಯೂ ಇವೆ. ವೇದಗಳು ಪುರೋಹಿತಶಾಹಿಯೂ ಅಲ್ಲ; ಮಂತ್ರ ಹೇಳುವ ಪುರೋಹಿತರಿಗಾಗಿ ಸೃಷ್ಟಿಯಾದದ್ದೂ ಅಲ್ಲ. ಕೇವಲ ಒಂದು ವರ್ಗ ಅಥವಾ ಜಾತಿಗೆ ಸೀಮಿತವಂತೂ ಅಲ್ಲವೇ ಅಲ್ಲ! ಯಾವುದೇ ವೇದದಲ್ಲೂ `ಹಿಂದೂ' ಎಂಬ ಶಬ್ದ ಇಲ್ಲ. `ಆರ್ಯ' ಎಂಬ ಶಬ್ದ ಮಾತ್ರ ಸಿಗುತ್ತದೆ. ಆರ್ಯ ಎಂಬುದು ಇಂಗ್ಲೀಷಿನ `ಜಂಟ್ಲ್ಮನ್ (ಸಂಭಾವಿತ) ಎಂಬ ಪದಕ್ಕೆ ಸಮಾನ ಅರ್ಥ ಹೊಂದಿದೆ. ಈ ಅರ್ಥದಲ್ಲಿ ಇಡೀ ಮನುಕುಲ `ಆರ್ಯ ಕುಲ'ವಾಗಬೇಕೇ ಹೊರತು, `ಆರ್ಯ-ದ್ರಾವಿಡ ಎಂಬ ವಿಚ್ಛಿದ್ರಕಾರಿ ಸುಳ್ಳು ಸುಳ್ಳೇ ತಪ್ಪು ಕಲ್ಪನೆಗಳಿಗೆ ಈಡಾಗಬಾರದು.
`ಪ್ರಗತಿಪರ'ರು, `ಜಾತ್ಯತೀತ'ವಾದಿಗಳೆಂದು ಕರೆಸಿಕೊಳ್ಳುವವರಿಂದ ಈಗೀಗ ಹೆಚ್ಚು ಟೀಕೆಗೆ ಒಳಗಾಗಿರುವ `ಮನು' ಹೇಳಿದನೆಂದು ಉಲ್ಲೇಖಿಸಲಾಗುತ್ತಿರುವ `ನಃ ಸ್ತ್ರೀ  ಸ್ವಾತಂತ್ಯ್ರಮರ್ಹತಿಃ' (ಹೆಣ್ಣಿಗೆ ಸ್ವಾತಂತ್ಯವಿಲ್ಲ) ಎಂಬುದಾಗಲಿ, ಪ್ರಾಣಿ ಬಲಿಯಾಗಲಿ (ಹಿಂಸೆ),  ಜಾತಿಗಳ ಕುರಿತಾಗಲಿ, ಮೇಲು ಕೀಳು ಅಸ್ಪೃಶ್ಯತೆಗಳಾಗಲಿ ಅಥವಾ ಇನ್ಯಾವುದೇ ನಕಾರಾತ್ಮಕ ಅಂಶಗಳಾಗಲಿ ವೇದಗಳಲ್ಲಿ ಇಲ್ಲ. ಪರಂಪರೆ ಸಾಗಿಬಂದಂತೆ ಕಾಲಾನುಕ್ರಮವಾಗಿ ಇವೆಲ್ಲವೂ ಸ್ವಾರ್ಥ ಸಾಧಕರ ಹುನ್ನಾರದಿಂದಾಗಿ ಸಮಾಜದಲ್ಲಿ ಸೇರಿಕೊಂಡ ವಿಕೃತಿಗಳಾಗಿವೆ. ವಾಸ್ತವವಾಗಿ ವೇದಗಳಲ್ಲಿ ಸ್ತ್ರೀಯರಿಗೆ ಸಮಾನತೆ ಸಾರಲಾಗಿದೆ. ಅವರಿಗೂ ಶೋಡಷ ಸಂಸ್ಕಾರಗಳು ಹಾಗೂ ವೇದಾಧ್ಯಯನ ಹಕ್ಕು ಇದೆ. ದುರದೃಷ್ಟವಶಾತ್ ಇಂದಿನ ಯಾವುದೇ ಪೀಠಾಧಿಪತಿಗಳೂ ಸಹ ಇದನ್ನು ನೇರವಾಗಿ ಬಾಯಿಬಿಟ್ಟು ಹೇಳುತ್ತಿಲ್ಲ!
ವೇದಗಳಲ್ಲಿ ಜಾತಿಯ ಬದಲು `ವರ್ಣ'ವಿದೆ. ವರ್ಣ ಎಂದರೆ ವರ್ಗ ಅಷ್ಟೆ. ಇದೊಂದು ಸಾಮಾಜಿಕ ವ್ಯವಸ್ಥೆ. ಇಂದೂ ಸಹ ವೈದ್ಯರ ವರ್ಗ, ವಕೀಲರ ವರ್ಗ, ಇಂಜಿನಿಯರುಗಳ ವರ್ಗ, ಸೇವಾ ವರ್ಗ ಎಂದಿಲ್ಲವೇ ಹಾಗೆಯೇ ಅವರವರು ಕೈಗೊಳ್ಳುವ ವೃತ್ತಿಗಳಿಗೆ ಅನುಗುಣವಾಗಿ ಅವನ್ನು ವಿಂಗಡಿಸಬಹುದು. ಹಿಂದೆ ಅವರವರ ಸ್ವಭಾವ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ವೇದಾಧ್ಯಯನ ಹಾಗೂ ವೃತ್ತಿಗಳಲ್ಲಿ ಪರಿಣತಿ ಪಡೆಯಲು ಅವಕಾಶವಿತ್ತು. ಆ ದೃಷ್ಟಿಯಲ್ಲಿ ವರ್ಣ ಎಂಬುದು ಜಗತ್ತಿನ ಎಲ್ಲೆಡೆಯೂ ಇಂದಿಗೂ ಪ್ರಚಲಿತವೇ ಆಗಿದೆ. ಅದರ ಬದಲು ವರ್ಣಗಳನ್ನು ವಿಕೃತಗೊಳಿಸಿ ಜಾತಿಗಳ ಹೆಸರಿನಲ್ಲಿ ಗುಂಪುಗಾರಿಕೆ ಮಾಡಿ ಶೋಷಣೆಗೆ ಒಳಪಡಿಸಿದ್ದರೆ ಅದು ಸ್ವಾರ್ಥಕ್ಕಾಗಿ ಮಾಡಿಕೊಂಡ ಅಮಾನವೀಯ ವ್ಯವಸ್ಥೆಯಷ್ಟೆ.
ಒಟ್ಟು ರಾಶಿಯಾಗಿ ಬಿದ್ದಿದ್ದ ವೇದ ಜ್ಞಾನವನ್ನು ವ್ಯಾಸ ಮಹರ್ಷಿಗಳು ಚತುರ್ವೇದಗಳಾಗುವಂತೆ ವಿಂಗಡಿಸಿದರೆಂಬ ಸಿದ್ಧಾಂತವೂ ಸಹ ತಪ್ಪು ಕಲ್ಪನೆಯಾಗಿದೆ! ವೇದದ ಮೂಲ ಮಂತ್ರವೊಂದರಲ್ಲಿ `ಋಗ್ವೇದ, ಯಜುರ್ವೇದ, ಸಾಮ ವೇದ ಹಾಗೂ ಅಥರ್ವಣ ವೇದ' ಎಂದು ನಾಲ್ಕು ಭಾಗ ಮಾಡಿಯೇ ಹೆಸರಿಸಿರುವ ಉಲ್ಲೇಖವಿದೆ!! ಅಂದ ಮೇಲೆ ನಂತರ ಅವನ್ನು ವಿಂಗಡಿಸಿಡುವ ಮಾತೆಲ್ಲಿ ಬಂತು? ಆದರೆ ವ್ಯಾಸರು ಚತುರ್ವೇದಗಳನ್ನೂ ಆಳವಾಗಿ ಅಧ್ಯಯನ ಮಾಡಿದರು ಎಂಬುದು ಮಾತ್ರ ನಿತ್ಯ ಸತ್ಯ. ಹೀಗಾಗಿಯೇ ಅವರಿಗೆ `ವೇದ ವ್ಯಾಸರು' ಎಂಬ ಹೆಸರಾಗಿದೆ.
ಇನ್ನು, `ವೇದ ಕಾಲ' ಎಂಬುದೂ ಸಹ ಇತಿಹಾಸ ತಿರುಚುವ ಯತ್ನದ ಸುಳ್ಳು ಕಲ್ಪನೆಯಾಗಿದೆ. ವೇದ ಜ್ಞಾನವನ್ನು ನಾಶಪಡಿಸಿ ತಮ್ಮ ಪ್ರಭುತ್ವ ಸ್ಥಾಪಿಸಲು ಬ್ರಿಟೀಷರು ಮಾಡಿದ ಕುತಂತ್ರ ಇದಾಗಿದೆ. ಸರ್ವ ಕಾಲವೂ ವೇದ ಕಾಲವೇ! ನಾವು ಕಲ್ಲಿಗೊಂದು-ಗಲ್ಲಿಗೊಂದು ಸೃಷ್ಟಿಸಿರುವ `ದೇವತೆಗಳು' ಸಹ ತಪ್ಪು ಕಲ್ಪನೆಯೇ ಆಗಿದೆ. ಇತರ ಧರ್ಮಗಳು ಹೇಳುವಂತೆ ವೇದಗಳೂ ಸಹ ಏಕ ದೈವವನ್ನೇ ಪ್ರತಿಪಾದಿಸಿವೆ. ದೇವರು ಒಬ್ಬನೇ; ಅವನು ಸವಾಂತರ್ಯಾಮಿ; ನಿರಾಕಾರ; ನಿರ್ಗುಣ ಎಂದೇ ಸಾರಿವೆ. ಹಾಗಿದ್ದ ಮೇಲೆ ಉಳಿದಂತೆ ಸೃಷ್ಟಿಯಾದ ಪುರಾಣಗಳು, ಪುಣ್ಯ ಕಥೆಗಳು, ಮುಕ್ಕೋಟಿ ದೇವತೆಗಳು, ದಶಾವತಾರಗಳ ಕಲ್ಪನೆ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಈಗಿನ ಜ್ಯೋತಿಷ್ಯ, ವಾಸ್ತು ಇತ್ಯಾದಿಗಳೆಲ್ಲವೂ ಸುಳ್ಳು. ಸ್ವಾರ್ಥಕ್ಕಾಗಿ ಮತ್ತು ಅಜ್ಞಾನದಿಂದ ಸಮಾಜ ಘಾತುಕರು ಕಾಲಾನುಕ್ರಮವಾಗಿ ಇವೆಲ್ಲವನ್ನೂ ಸೃಷ್ಟಿಸಿದ್ದಾರೆ!
ವೇದಗಳಲ್ಲಿ ಜ್ಯೋತಿಷ ಇದೆ ನಿಜ; ಆದರೆ ಅದು ಈಗಿನ ಡೋಂಗಿ ಜ್ಯೋತಿಷಿಗಳು ಹೇಳುವ ಫಲ ಜ್ಯೋತಿಷ್ಯವಲ್ಲ; ಅಲ್ಲಿರುವುದು ಅಪ್ಪಟ ಖಗೋಳ ವಿಜ್ಞಾನ (ಆರ್ಯಭಟನಂತಹ ವಿಜ್ಞಾನಿಗಳು ಅಭ್ಯಸಿಸಿದ ಶಾಸ್ತ್ರ). ಅದು `ಆಸ್ಟ್ರಾನಮಿ'ಯೇ ಹೊರತು ಈಗಿನ `ಆಸ್ಟ್ರಾಲಜಿ' ಅಲ್ಲ! ಈಗಿನವರು ವೇದದಲ್ಲಿನ `ಜ್ಯೋತಿಷ್ಯ' ಎಂಬ ಪದವನ್ನಷ್ಟೇ ಕದ್ದು, ಅದರ ಹೆಸರಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ.
ಅದೇ ರೀತಿ ಈಗ ದೊಡ್ಡ ಪಿಡುಗಾಗಿರುವ, ಅಮಾಯಕರನ್ನು ಹೆದರಿಸಿ ಸುಲಿಗೆ ಮಾಡುತ್ತಿರುವ `ವಾಸ್ತು'ವೂ ಸಹ ವೇದಗಳಲ್ಲಿ ಇಲ್ಲ. ವಾಸ್ತು ಎಂದರೆ ಮನೆಯ ಹೊಸ್ತಿಲು ಎಂದಷ್ಟೇ ಅರ್ಥ. ವೇದಗಳಲ್ಲಿ `ವಾಸ್ತೋಷ್ಪತಿ' ಎಂದು ಕರೆಸಿಕೊಳ್ಳುವ ಆ ಒಬ್ಬನೇ ಭಗವಂತನನ್ನು ಕುರಿತು `ನಾನು ಕಟ್ಟಿಸಿರುವ ಹೊಸ ಮನೆ, ಮಡದಿ, ಮಕ್ಕಳು, ಪಶು ಮತ್ತಿತರ ಸಂಪತ್ತನ್ನು ಕಾಪಾಡು ದೇವಾ' ಎಂದು ಪ್ರಾರ್ಥಿಸುವ ಅನೇಕ ಮಂತ್ರಗಳನ್ನು ಕಾಣಬಹುದು. ಯಥಾಪ್ರಕಾರ `ವಾಸ್ತು' ಎಂಬ ಪದವನ್ನಷ್ಟೆ ಕದ್ದು ಅದರ ದುರುಪಯೋಗದೊಂದಿಗೆ ಅಮಾಯಕರ ಸುಲಿಗೆ ನಡೆದಿದೆ ಎಂದು ಸುಧಾಕರ ಶರ್ಮರು ಹಲವು ವೇದ ಮಂತ್ರಗಳನ್ನು ಉಲ್ಲೇಖಿಸಿ ಪ್ರಸ್ತುತ ಸ್ಥಿತಿಗತಿ ಖಂಡಿಸುತ್ತಾರೆ.

ತಿರುಚುವ ಎಚ್ಚರಿಕೆ:
ಭಗವದ್ಗೀತೆಯೂ ಸಹ ವೇದೋಪನಿಷತ್ತುಗಳ ಸಾರವೇ ಆಗಿದೆ. ಬಹಳ ಹಿಂದಕ್ಕೆ ಹೋದರೆ ರಾಮ ಹಾಗೂ ಕೃಷ್ಣರು ಐತಿಹಾಸಿಕ ವ್ಯಕ್ತಿಗಳೆಂಬುದು ಮಾತ್ರ ನಿಜ; ಉಳಿದವರು ಹಾಗೂ ಉಳಿದದ್ದೆಲ್ಲವೂ ಕಾಲ್ಪನಿಕ ಕಥೆಗಳಷ್ಟೆ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸರಳ ಕನ್ನಡದಲ್ಲಿ ಹೇಳಿರುವ ಸತ್ಯಗಳೂ ಸಹ ವೇದೋಪನಿಷತ್ತುಗಳ ಸಾರವಾದ ಭಗವದ್ಗೀತೆಯಲ್ಲಿ ಇರುವಂಥವೇ ಆಗಿವೆ.
ಬಸವ ಹಾಗೂ ಬುದ್ಧರು ವೇದಗಳನ್ನು ಎಂದೂ ವಿರೋಧಿಸಲಿಲ್ಲ. ಬದಲಿಗೆ ಅವುಗಳ ಜತೆ ಸಾಗಿ ಬಂದ ಅಪಭ್ರಂಶಗಳನ್ನಷ್ಟೇ ವಿರೋಧಿಸಿದರು. ವೇದಗಳೊಂದಿಗೆ ಸಾಗಿಬಂದ ವಿಕೃತಿ, ವಿರೋಧಾಭಾಸ, ವಿಪರ್ಯಾಸ, ಅಪಾರ್ಥ ಅಪಭ್ರಂಶಗಳೆಲ್ಲ ಮಹಾ ಭಾರತವೆಂಬ `ಜಾಗತಿಕ ಸಮರ' ಹಾಗೂ ನಂತರದ ದುಷ್ಪರಿಣಾಮಗಳಾಗಿವೆ. ವೇದಾಂಗಗಳು ಹಾಗೂ ಅದರಲ್ಲಿನ `ವ್ಯವಸ್ಥೆ'ಯನ್ನು ಕಡೆಗಣಿಸಿ ಕೇವಲ ಊಹೆಗಳು, ಕಲ್ಪನೆಗಳು ಅಥವಾ ಈಗಿನ ಮಾಮೂಲಿ `ಪದ ಕೋಶ' (ಡಿಕ್ಷನರಿ) ಆಧಾರದ ಮೇಲೆ ವೇದಗಳನ್ನು ಸರಳೀಕರಿಸುವ ಪ್ರಕ್ರಿಯೆಗೆ ತೊಡಗಿದರೆ ದಾರಿ ತಪ್ಪುವುದು ಖಚಿತ! ಆಗ ವೇದಗಳ ಗಾಂಭೀರ್ಯ ಹಾಗೂ ನಿಜಾರ್ಥಗಳು ಕಳೆದುಹೋಗಿ ಅಪಾರ್ಥಗಳೊಂದಿಗೆ ತಿರುಚಲ್ಪಡುವ ಅಪಾಯವಿದೆ. ಅದು ಅಸಾಧ್ಯ. ಹಿಂದೆ ನಡೆದ ಅಂತಹ ಪ್ರಯತ್ನಗಳ ಫಲವನ್ನು ಇದೀಗ ಸಮಾಜ ಅನುಭವಿಸುತ್ತಿದೆ. ಈ ಕುರಿತು ತುಂಬಾ ಎಚ್ಚರವಾಗಿರಬೇಕು ಎಂದು ಶರ್ಮರು ಮುನ್ನೆಚ್ಚರಿಕೆ ನೀಡುತ್ತಾರೆ.

`ಸೌಧನ್ವನಾಸಹಃ:
ವೇದಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ವ್ಯಾಪಕವಾದ ವಿವರಗಳು ಇವೆ. ಅದರಂತೆ- 1) `ವಿಶ್ವ ಚೇತನ ದೇವ' ಎಂದರೆ ನಮ್ಮ ಕಣ್ಣಿಗೆ ಕಾಣದ ಒಂದು ಸರ್ವ ಶಕ್ತ ದೈವ. 2) `ಚೈತನ್ಯ ದೇವತಾ' ಎಂದರೆ `ಅರಿವು' ಇರುವ ಜೀವಂತ ಜ್ಞಾನಿಗಳು; ಮಾನವರು ಅಥವಾ ಜೀವಾತ್ಮಗಳು ಮತ್ತು 3) `ಜಡ ದೇವತೆಗಳು' ಎಂದರೆ ಪಂಚ ಭೂತಗಳು (ಆಕಾಶ, ನೀರು, ವಾಯು, ಅಗ್ನಿ ಮತ್ತು ಭೂಗೋಳ). ವೇದದಲ್ಲಿ ಈ ಪಂಚ ಭೂತಗಳನ್ನೂ ಸೇರಿಸಿಯೇ ಈ ಭೂಮಿಯನ್ನು ಇಡಿಯಾಗಿ ಪರಿಗಣಿಸಲಾಗಿದೆ. ಇಲ್ಲಿ `ಸೌಧನ್ವನಾಸಹಃ' ಎಂಬ ಮಾತು ಬರುತ್ತದೆ. `ಸುಧನ್ವ' ಎಂದರೆ `ಒಳ್ಳೆಯ ಭೂಮಿ'. ಸೌಧನ್ವನಾಸಹಃ ಎಂಬ ಶಬ್ದದ ಅರ್ಥ ಬಿಡಿಸಿದಾಗ `ಒಳ್ಳೆಯ ಭೂಮಿಯ ಒಳ್ಳೆಯ ಮಕ್ಕಳು' ಎಂದಾಗುತ್ತದೆ! ಹಾಗೆ ಒಳ್ಳೆಯ ಮಕ್ಕಳಾಗಬೇಕೆಂದರೆ ಈ ಭೂಮಿಗೆ ಸಂಬಂಧಿಸಿದ ಈ ಪಂಚ ಭೂತಗಳ ತಂಟೆಗೆ ಯಾರೂ ಹೋಗಬಾರದು; ಅವು ಏನೇನು ನೀಡುತ್ತವೆಯೋ ಅವನ್ನು ಹಾಗೆಯೇ ಪಡೆದುಕೊಂಡು, ಅವುಗಳ ಜತೆಯಲ್ಲೇ ಹೊಂದಿಕೊಂಡು ಮನುಷ್ಯ ಜೀವಿಸಬೇಕು; ಹಾಗಿದ್ದರೆ ಮಾತ್ರ ನಾವು `ಸೌಧನ್ವನಾಸಹಃ' ಆಗುತ್ತೇವೆ; ಈ ಪರಿಸರ ಚೆನ್ನಾಗಿರುತ್ತದೆ!!
ಈಗ ಯೋಚಿಸಿ: ನಾವು ಹಾಗಿದ್ದೇವೆಯೇ!? ಹಾಗೆ ಇರಬೇಕು ಎಂದು ಸಂಕಲ್ಪಿಸುವುದಾದರೆ ಅದಕ್ಕೆ ಅಗತ್ಯವಾದ 3 ಅರ್ಹತೆಗಳನ್ನು ಮೊದಲು ಹೊಂದಬೇಕಾಗುತ್ತದೆ. 1) `ರೋಗ-ಭೋಗ-ಯೋಗ'- ಈ ಮೂರರ ನಿಜವಾದ ಅರ್ಥ ಏನು ಎಂದು ತಿಳಿಯಬೇಕು; ನಂತರ ಈ ಮೂರನ್ನೂ ಸರಿಯಾಗಿ ಗುರುತಿಸಿಕೊಂಡು ಅದರಂತೆ ನಡೆಯುವ ಸಾಮಥ್ರ್ಯ ಪಡೆಯಬೇಕು. 2) ಪಂಚ ಭೂತಗಳನ್ನೂ ಹಿತ ಮಿತವಾಗಿ-ಸಮರ್ಪಕವಾಗಿ ಬಳಸಿಕೊಳ್ಳುವ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಮತ್ತು 3) `ಈತ ನಿಜವಾಗಿಯೂ ಯೋಗ್ಯ ವ್ಯಕ್ತಿ' ಎಂದು ನಿಮ್ಮ ಬಗ್ಗೆ ಇನ್ನೊಬ್ಬರು ಮತ್ತೊಬ್ಬರತ್ತ ಬೆಟ್ಟುಮಾಡಿ ತೋರಿಸುವಂತಹ ಉತ್ತಮ ಚಾರಿತ್ರ್ಯ (ಪ್ರಾಮಾಣಿಕತೆ) ರೂಢಿಸಿಕೊಳ್ಳಬೇಕು. ಈ ಅರ್ಹತೆಗಳನ್ನು ಪಡೆದವರು ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ. ಈ ದೃಷ್ಟಿಯಲ್ಲಿ ನೋಡಿದಾಗ ಪ್ರಸ್ತುತ ಪ್ರಪಂಚದ 600 ಕೋಟಿಗೂ ಹೆಚ್ಚು ಜನ ಸಂಖ್ಯೆಯಲ್ಲಿ ಇಂತಹ ಅರ್ಹ `ಸೌಧನ್ವನಾಸಹಃ' ಬೆರಳೆಣಿಕೆಯಷ್ಟೂ ಸಿಗಲಾರರೇನೋ....!?

ಡೈನಮಿಕ್ ಕಮ್ಯುನಿಸಂ:
ಈಗಿನ `ಕಮ್ಯುನಿಸಂ' (ಸಮತಾ ವಾದ) ಪ್ರಕಾರ `ಜಗತ್ತಿನಲ್ಲಿ ಎಲ್ಲೆಲ್ಲೂ ಸಮಾನತೆ ಬರಬೇಕು'. ಸರಿ! ಸಮಾನತೆ ಬಂತು; ಎಲ್ಲರೂ ಸಮಾನರಾದರು; ಗುರಿ ಸಾಧಿಸಿಯಾಯ್ತು ಎಂದಿಟ್ಟುಕೊಳ್ಳೋಣ. ಮುಂದೇನು? ಈ ಪ್ರಶ್ನೆಗೆ ಕಮ್ಯುನಿಸಂನಲ್ಲಿ ಉತ್ತರವಿಲ್ಲ. ಆದರೆ ವೇದಗಳಲ್ಲಿ ಇದಕ್ಕೆ ಉತ್ತರವಿದೆ- ಹೌದು; ವೇದಗಳಲ್ಲೂ ಕಮ್ಯುನಿಸಂ ಇದೆ! ಅದು ಡೈನಮಿಕ್ ಕಮ್ಯುನಿಸಂ!! ಅಂದರೆ- ನಿನಗಿಂತ ಹಿಂದುಳಿದವರನ್ನು ನಿನ್ನ ಸಮಕ್ಕೆ ಎಳೆದುಕೋ; ಆದರೆ ನಂತರ ನೀನು ಸುಮ್ಮನಿರಬೇಡ; ನಾಲ್ಕು ಹೆಜ್ಜೆ ಮುಂದೆ ಹೋಗು; ಆಗ ಮತ್ತೆ ನಿನ್ನ ಜತೆಯವ ಹಿಂದುಳಿಯುತ್ತಾನೆ; ಪುನಃ ಆತನನ್ನು ನಿನ್ನ ಸಮಕ್ಕೆ ಎಳೆದುಕೋ....! ಇದೇ ಪ್ರಕ್ರಿಯೆ ಮುಂದುವರೆಸಿಕೊಳ್ಳುತ್ತಾ ಸಾಗಿದಾಗ ನೀನು ಮತ್ತು ನಿನ್ನ ಜತೆಯವ ಇಬ್ಬರೂ ಅಂತಿಮ ಗುರಿ ತಲುಪಲು ಸಾಧ್ಯ; ನೀನು ಹೀಗೆ ನಿನ್ನ ಜತೆಯವನನ್ನು ಮೂರ್ನಾಲ್ಕು ಬಾರಿ ನಿನ್ನ ಸಮಕ್ಕೆ ಎಳೆದುಕೊಳ್ಳುವ ವೇಳೆಗೆ ಅವನಿಗೇ ಸ್ವತಃ ನಿನ್ನಷ್ಟೇ ಶಕ್ತಿ ಬಂದಾಗಿರುತ್ತದೆ; ಅವನೇ ನಿನ್ನ ಸಮಕ್ಕೆ ಬರುವ ಸಾಧ್ಯತೆಗಳಿವೆ!!

ಅರಿಷಡ್ವರ್ಗಗಳ ಪಳಗಿಸುವಿಕೆ:
ಈ ಕಲಿಯುಗ ಸಾಗುತ್ತಿರುವ ವಿನಾಶಕಾರಿ ರೀತಿ-ನೀತಿಗಳನ್ನು ಕಂಡರೆ ದಿಗಿಲಾಗುತ್ತದೆ. ಎಲ್ಲೆಲ್ಲೂ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರ ಅನಾಚಾರಗಳ ತಾಂಡವ ನಡೆದಿದೆ. ಇದೆಲ್ಲದಕ್ಕೂ ಮೂಲ ಕಾರಣ ಕಾಮ, ಕ್ರೋಧ, ಲೋಭ, ಮೋಹ, ಮದ ಹಾಗೂ ಮಾತ್ಸರ್ಯ ಎಂಬ ಅರಿಷಡ್ವರ್ಗಗಳೇ ಆಗಿವೆ. ಇವನ್ನು ತೊಡೆಯುವುದು ಹೇಗೆ? ಇಲ್ಲ ಬಿಡಿ! ಇವು ಪ್ರಕೃತಿ ಸಹಜವಾಗಿರುವ ಜೀವಾತ್ಮನ ಲಕ್ಷಣಗಳಾಗಿರುವುದರಿಂದ ಇವನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳ ಜತೆಗೇ ಬದುಕುವುದು ಅನಿವಾರ್ಯ ಕರ್ಮ. ಆದರೆ ಅವುಗಳ ಸಹಜ ಲಕ್ಷಣಗಳೊಂದಿಗೇ ಯಥಾವತ್ತಾಗಿ ಬದುಕಿದರೆ ಅವನು ಮನುಷ್ಯನಾಗಿರಲು ಸಾಧ್ಯವಾಗದೆ ರಾಕ್ಷಸನಾಗುತ್ತಾನಷ್ಟೆ; ಹಾಗಾದರೆ ಉಪಾಯವೇನು? ಇದೆ! ಇವನ್ನು ಪೂರ್ಣ ನಿವಾರಿಸಲು ಸಾಧ್ಯವಾಗದಿದ್ದರೂ, `ನಕಾರಾತ್ಮಕ' ಆಗಿರುವ ಇವನ್ನು `ಸಕಾರಾತ್ಮಕ' ಮಾಡಿಕೊಳ್ಳಬೇಕಷ್ಟೆ!! ಅದು ಹೀಗೆ:

ಕಾಮ: ಅಂದರೆ ಆಸೆ-ಇಚ್ಛೆ. ಇದನ್ನು ವೇದದಲ್ಲಿ ಕೋಕಯ (ನೈಟಿಂಗೇಲ್) ಪಕ್ಷಿಗೆ ಹೋಲಿಸಲಾಗಿದೆ. ಈ ಕಾಮದ ಮುಂದೆ ಜ್ಞಾನವನ್ನು ಹಾಕಿ! ಆಸೆ...ಆಸೆ...ಆಸೆ; ಜಗತ್ತಿನ ಎಲ್ಲ ಜ್ಞಾನವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಅತ್ಯಾಸೆ; ಓದು...ಓದು...ಓದುತ್ತಾ ನಿನ್ನ ಆಸೆ ಪೂರೈಸಿಕೋ. ಇಲ್ಲಿ ಆಸೆ ಇದ್ದೇ ಇದೆ. ಆದರೆ ಅದು ಸಕಾರಾತ್ಮಕವಾಗಿ ಬದಲಾವಣೆಗೊಂಡಿದೆ.

ಕ್ರೋಧ: ಇದನ್ನು ವೇದಗಳಲ್ಲಿ ತೋಳಕ್ಕೆ ಹೋಲಿಸಲಾಗಿದೆ. ಕ್ರೋಧವನ್ನು ನಾವು `ಮನ್ಯು'ವಾಗಿಸಬೇಕು. ಅಂದರೆ `ಚಿಂತನಾ ಸಹಿತವಾದ ಕೋಪ' ಇಟ್ಟುಕೊಳ್ಳಬೇಕು. ಉದಾಹರಣೆಗೆ- ಅನ್ಯಾಯ, ಅಕ್ರಮ ಕಂಡಾಗ ಸಿಡಿದು ಬೀಳುವುದು. ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ; ನಾನೂ ಭ್ರಷ್ಟನಾಗುವುದಿಲ್ಲ; ಅನೀತಿ ಕೆಲಸ ಮಾಡುವುದಿಲ್ಲ ಎಂಬಂತಹ ಹಠದ ಕೋಪ ಬೆಳೆಸಿಕೊಳ್ಳುವುದು. ಇಲ್ಲಿ ಕೋಪ ಇದ್ದೇ ಇದೆ. ಆದರೆ ಅದು `ಮನ್ಯು'ವಾಗಿದೆ.

ಲೋಭ: ವೇದಗಳಲ್ಲಿ ಇದನ್ನು ಹದ್ದಿಗೆ ಹೋಲಿಸಲಾಗಿದೆ. ಯಥಾಪ್ರಕಾರ ಇದಕ್ಕೆ ಜ್ಞಾನವನ್ನೇ ಮೇವಾಗಿ ಹಾಕಿದರಾಯಿತು.

ಮೋಹ: ವೇದಗಳಲ್ಲಿ ಇದು ಗೂಬೆಗೆ ಸಮಾನ! ಗೂಬೆ ನಿಶಾಚರಿ. ಕತ್ತಲು ಎಂದರೆ ಅದಕ್ಕೆ ವಿಪರೀತ ಮೋಹ. ಮನುಷ್ಯ ತನ್ನ ಒಂದು ವಸ್ತು ಅಥವಾ ಪ್ರೀತಿ ಪಾತ್ರರ ಮೇಲಿಟ್ಟಿರುವ ಮೋಹವನ್ನು ಜಗತ್ತಿನ ಕಡೆಗೆ ತಿರುಗಿಸಬೇಕು. ಅಂದರೆ ಇಡೀ ಜಗತ್ತಿನಲ್ಲಿರುವವರೆಲ್ಲ ನನ್ನವರೇ ಎಂಬ ವ್ಯಾಪಕ- ವಿಶಾಲ ಹೃದಯದ ಮೋಹವಾಗಿ ಪರಿವತರ್ಿಸಿಕೊಳ್ಳಬೇಕು.

ಮದ: ಇದು ಸುಪರ್ಣ- ಎಂದರೆ ಗರುಡನಿಗೆ ಸಮಾನವೆಂದು ವೇದ ಹೇಳಿದೆ. `ನನ್ನ ಸಮಾನರಾರಿಹರು' ಎಂಬ ಮದ ಗರುಡ ಪಕ್ಷಿಗೆ ಹೆಚ್ಚಾಗಿರುತ್ತದೆ. ಹಾರುವುದಾದರೆ ಬಹು ಎತ್ತರಕ್ಕೇ ಹಾರುತ್ತದೆ; ಇಳಿದಾಗ ಕುಳಿತುಕೊಳ್ಳುವುದೂ ಸಹ ಎತ್ತರದಲ್ಲಿಯೇ! ಮನುಷ್ಯನ ಸ್ವಭಾವವೂ ಅದೇ ಆಗಿದೆ. ಇದನ್ನು ಹೋಗಲಾಡಿಸಲು ಅಂತಹವರು ಯಾವುದಾದರೊಂದು ವ್ರತ ನಿಷ್ಠರಾಗಬೇಕು. `ಸತ್ಯವನ್ನೇ ಹೇಳುತ್ತೇನೆ; ಹೌದು ನಾನಿರುವುದೇ ಹೀಗೆ; ನಾನು ಸತ್ಯವನ್ನಷ್ಟೇ ಹೇಳುವುದು'- ಇದು ಸತ್ಯ ವ್ರತದ ಮದ! ಗಾಂಧೀಜಿ ಕೈಗೊಂಡ ಸತ್ಯ-ಅಹಿಂಸಾ ವ್ರತಗಳು ನಮ್ಮ ಕಣ್ಣ ಮುಂದಿವೆ!

ಮಾತ್ಸರ್ಯ: ಇದು ನಾಯಿಗೆ ಸಮಾನವಾದ್ದು ಎಂದು ವೇದ ಹೇಳುತ್ತದೆ. ಯಾರಾದರೂ ನಮ್ಮ ಕಣ್ಣ ಮುಂದೆಯೇ ಉದ್ಧಾರವಾದರೆ, ಒಳಿತಾದರೆ ಅಥವಾ ಸಿರಿವಂತರಾದರೆ ಅದಕ್ಕೆ ನಾವು ಮಾತ್ಸರ್ಯಪಡುವುದು. ಈ ದುರ್ಗುಣವನ್ನು ಹೋಗಲಾಡಿಸಲು ಸ್ವಲ್ಪ ಮುಂದಾಲೋಚನೆ ಬೇಕಷ್ಟೆ. ಅಂದರೆ `ಫಲವನ್ನು ಕೈಬಿಟ್ಟು ಅದರ ಹಿಂದಿರುವ ಪ್ರಯತ್ನ'ವನ್ನು ಚಿಂತಿಸಬೇಕು. ಯಾರಾದರೂ ಹೊಸ ಮನೆ ಕಟ್ಟಿಸಿದನೆಂದರೆ, `ನ್ಯಾಯವಾಗಿ ಸಂಪಾದಿಸಿದ್ದಂತೂ ಅಲ್ಲ ಬಿಡಿ; ಯಾರ ತಲೆ ಒಡೆದು ಈ ಮನೆ ಕಟ್ಟಿಸಿದನೋ...' ಎಂದು ಮಾತ್ಸರ್ಯಪಡುವ ಬದಲು ಈ ಮನೆ ಕಟ್ಟಲು ಆತ ಎಷ್ಟು ಕಷ್ಟಪಟ್ಟಿರಬಹುದು; ಏನೇನು ಪ್ರಯತ್ನ ಮಾಡಿರಬಹುದು ಎಂದು ಉದಾರವಾಗಿ ಚಿಂತಿಸಿ ಅದನ್ನು ತಿಳಿದುಕೊಳ್ಳಬೇಕು. ಆಗ ಮುಂದೆ ನಾವೂ ಸಹ ಸಮಯ ಬಂದಾಗ ಅಂತಹ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ವೇದ ವಿ.ವಿ. ಪಠ್ಯ ಕ್ರಮ:
ಕರ್ನಾಟಕ ಸರ್ಕಾರದ ಉದ್ದೇಶಿತ `ವೇದ-ಸಂಸ್ಕೃತ ವಿ.ವಿ.' ಔಚಿತ್ಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುಧಾಕರ ಶರ್ಮ ಅವರು ಉತ್ತರಿಸಿ, ವೇದ-ಸಂಸ್ಕೃತ ವಿಶ್ವ ವಿದ್ಯಾಲಯ ಸ್ಥಾಪನೆಗೂ ಮುನ್ನ ಅಲ್ಲಿ ಏನೇನು ಕಲಿಸಲಾಗುತ್ತೆ ಎಂಬ ನಿರ್ದಿಷ್ಟ ಪಠ್ಯ ಕ್ರಮವನ್ನು (ಸಿಲಬಸ್) ಸರ್ಕಾರ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು!
`ಮನು ಕುಲದ ಸಂವಿಧಾನ' ಎನಿಸಿರುವ ಮೂಲ ಚತುರ್ವೇದಗಳು, 6 ವೇದಾಂಗಳು ಹಾಗೂ 6 ದರ್ಶನಗಳನ್ನು ಒಳಗೊಂಡ `ವೇದ-ವೇದಾಂಗ-ದರ್ಶನಗಳನ್ನು' ಯಥಾವತ್ತಾಗಿ ಕಲಿಸುವುದಾದರೆ ಮಾತ್ರ ವೇದ ವಿ.ವಿ.ಗೆ ನಮ್ಮ ಸ್ವಾಗತವಿದೆ. ಅದು ಬಿಟ್ಟು ಅಮಾಯಕ ಜನರನ್ನು ಸುಲಿಗೆ ಮಾಡುವ ಮತ್ತದೇ `ಡೋಂಗಿ ಜ್ಯೋತಿಷಿ'ಗಳು ಹಾಗೂ ಬಡಾಯಿ ಕೊಚ್ಚುವ `ವಾಸ್ತು ಶಾಸ್ತ್ರಿ'ಗಳನ್ನು ಸೃಷ್ಟಿಸುವುದೇ ಉದ್ದೇಶವಾಗಿದ್ದಲ್ಲಿ ಖಂಡಿತ ಈ ವಿ.ವಿ. ಅಗತ್ಯವಿಲ್ಲ; ಭಾರತೀಯ ಪರಂಪರೆ ಜತೆಗೇ ಮಗ್ಗುಲ ಮುಳ್ಳಾಗಿ ಬೆಳೆದು ಬಂದಿರುವ ಪುರಾಣಗಳು, ಪುಣ್ಯ ಕಥೆಗಳು, ಶೃಂಗಾರ ಸಾಹಿತ್ಯ ಇತ್ಯಾದಿ ಮಾತ್ರ ಹೇಳಿಕೊಡುವುದಾದರೆ ಖಂಡಿತ ಈ ವಿ.ವಿ. ಬೇಕಾಗಿಲ್ಲ. ಹೀಗಾಗಿಯೇ ಮೊದಲು ಈ ಉದ್ದೇಶಿತ ವಿ.ವಿ.ಯಲ್ಲಿ ಏನು ಕಲಿಸಲಾಗುತ್ತದೆ ಎಂಬ ನಿರ್ಧಿಷ್ಟ ಪಠ್ಯ ಕ್ರಮ ಪ್ರಕಟಿಸಲಿ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಆದರೆ ಸರ್ಕಾರವು ಇತ್ತ ಗಮನ ಹರಿಸಿದಂತೇನೂ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಏಕೆಂದರೆ ಕೆಲವು ಸತ್ಯಗಳು ಎಂದೂ ಕಹಿಯಾಗಿಯೇ ಇರುತ್ತವೆ!

ವೇದ ವೇದಾಂಗ ದರ್ಶನಗಳ ಕುರಿತು ಇನ್ನಷ್ಟು ಮಾಹಿತಿ ಹಾಗೂ ಉಪನ್ಯಾಸಗಳಿಗಾಗಿ ಆಸಕ್ತರು ಸುಧಾಕರ ಶರ್ಮರ ದೂರವಾಣಿ 9448842474 ಸಂಖ್ಯೆಗೆ ಸಂಪರ್ಕಿಸಬಹುದು
-ಎಚ್.ಎಸ್. ಪ್ರಭಾಕರ, ಪತ್ರಕರ್ತರು,
ಎಚ್.ಆರ್.ಎಸ್. ಕಾಂಪೌಂಡ್,
6ನೇ ಕ್ರಾಸ್, ಕೆ.ಆರ್. ಪುರಂ,
ಹಾಸನ-573201
ದೂರವಾಣಿ: 9448365816

Thursday, March 3, 2011

ಯೋಚಿಸಲೊ೦ದಿಷ್ಟು..೨೪

೧.ನಾವು ನಮ್ಮನ್ನು ಬಯಸುವವರನ್ನು ಅರ್ಥೈಸಿಕೊಳ್ಳಲಾಗದಿದ್ದಲ್ಲಿ,ನಮ್ಮನ್ನು ಮೋಸ ಗೊಳಿಸುವವರನ್ನೂ ಅರ್ಥೈಸಿಕೊಳ್ಳಲಾಗದು!

೨.ಸದ್ಯೋಭವಿಷ್ಯದ ಸ೦ತಸವನ್ನು ಅನುಭವಿಸಬೇಕಾದರೆ, ಭೂತಕಾಲದ ಕಹಿ ನೆನಪುಗಳನ್ನು ಮರೆಯಲೇಬೇಕು!

೩.ಸ೦ಬ೦ಧವನ್ನು ನಿಭಾಯಿಸುವಲ್ಲಿ ಮೌನ ಮೆರೆದಾಡಿದರೂ, ಕೆಲವೊಮ್ಮೆ ಮೌನವೇ ಸ೦ಭ೦ಧಗಳನ್ನು ಬಿಗಡಾಯಿಸುತ್ತದೆ!

೪.ಯಾವುದೇ ಸನ್ನಿವೇಶಗಳಿಗೆ ಕೂಡಲೇ ನಮ್ಮ ಮನಸ್ಸೇ ಮೊದಲು ಸ್ಪ೦ದಿಸುವುದರಿ೦ದ, ಆಗಿನ ನಮ್ಮ ಪ್ರತಿಕ್ರಿಯೆಗಳು ದೃಢತೆ ಹಾಗೂ ಸತ್ಯದಿ೦ದ ಕೂಡಿರಲಾರದು! ಕೇವಲ ಹೃದಯದ ಸ್ಪ೦ದನೆಯಿ೦ದ ತೋರುವ ಪ್ರತಿಕ್ರಿಯೆಗಳು ಮಾತ್ರವೇ ನೈಜವೂ ಅ೦ತಿಮವೂ ಆಗಿರುತ್ತದೆ!

೫. ಆತ್ಮೀಯರು ನಮ್ಮೊ೦ದಿಗೆ ಸಮಸ್ಯೆಗಳನ್ನು ಹ೦ಚಿಕೊಳ್ಳದ ದಿನವೇ ನಾವು ಅವರ ಹೃದಯಗಳನ್ನು ಕಳೆದುಕೊ೦ಡಿದ್ದೇವೆ ಎ೦ದು ಅರ್ಥ!

೬.ಇರುವುದನ್ನು ಇದ್ದ ಹಾಗೇ ಒಪ್ಪಿಕೊ೦ಡು, ಮನಸ್ಸಿನ ಬಯಕೆಗಳನ್ನು ಪಡೆಯಲು ಹೋರಾಡುವುದೇ ಜೀವನ!

೭.ಕೇವಲ ಕೈಗಳ ಕುಲುಕುವಿಕೆಯಿ೦ದ ಮಿತೃತ್ವ ಗಟ್ಟಿಯಾಗಲಾರದು. ಆತ೦ಕದ ಸಮಯದಲ್ಲಿ ಪರಸ್ಪರ ಜೊತೆಗೂಡುವುದ ರಿ೦ದ ಮಾತ್ರವೇ ಮಿತೃತ್ವದ ಬ೦ಧ ಹೆಚ್ಚೆಚ್ಚು ಗಟ್ಟಿಗೊಳ್ಳುತ್ತದೆ!

೮.ನಮ್ಮ ವಿಜಯಕ್ಕೆ ಹಲವು ಜನರು ಕಾರಣರಾದರೂ ನಮ್ಮ ಸೋಲಿಗೆ ನಾವು ಮಾತ್ರವೇ ಕಾರಣರಾಗುತ್ತೇವೆ!

೯.ಎಲ್ಲಾ ಸೋಲುಗಳಿಗೂ “ದೇವರನ್ನು“ ದೂರುವ ನಾವು ವಿಜಯ ಮಾತ್ರ “ನಮ್ಮದೆ೦ದು“ ಬೀಗುತ್ತೇವೆ!

೧೦.ಕೇವಲ ಆತ್ಮೀಯರು ಮಾತ್ರವೇ ನಮ್ಮ ನಗುವಲ್ಲಿನ “ಕಪಟ“ವನ್ನು ಹಾಗೂ ನಮ್ಮ ಕಣ್ಣೀರಲ್ಲಿನ ನೈಜತೆಯನ್ನು ಗುರುತಿಸಬಲ್ಲರು!

೧೧. ನಾವು ಬಯಸಿದ೦ತೆ ಆಗಲಿಲ್ಲವೆ೦ದು ಬೇಸರ ಪಡದಿರೋಣ! ದೇವರು ನಮಗಾಗಿ ಬೇರಾವುದೋ ಅವಕಾಶವನ್ನು ನೀಡಬಹುದೆ೦ದು ಸಮಾಧಾನಿಸೋಣ!

೧೨.ಸಾವಿರಾರು ಗಿಡಮರಗಳ ಬೀಜಗಳನ್ನು ಹಕ್ಕಿಗಳು ಎಲ್ಲಿ೦ದಲೋ ಹೆಕ್ಕಿ ತ೦ದು ಎಲ್ಲಿಗೋ ಬಿಸಾಡುತ್ತವೆ!ಅವು ಬೆಳೆದು ನಮಗೆ ನೆರಳು ನೀಡುವ ಮರಗಳಾಗುತ್ತವೆ!ಒಳ್ಳೆಯದನ್ನು ಮಾಡೋಣ, ಮರೆಯೋಣ, ನಮ್ಮ ಮು೦ದಿನ ಪೀಳಿಗೆಗೆ ಅದರಿ೦ದ ನೆರವಾಗಬಹುದು! ( ಸ೦ತೋಷ ಆಚಾರ್ಯರ ಚರವಾಣಿ ಸ೦ದೇಶ)

೧೩.ನಾವು ತೀರಾ ಮೃದುವಾದರೆ ಜೀವನವನ್ನು ಸಾಗಿಸುವುದು ಕಷ್ಟವಾಗಬಹುದು ಅ೦ತೆಯೇ ತೀರಾ ಒರಟರಾದರೆ ಸ೦ಬ೦ಧಗಳನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಸೋಲಬಹುದು!

೧೩.ಒ೦ದು ಹನಿ ಕಣ್ಣೀರಿನಷ್ಟು ಬೆಲೆಬಾಳುವ ವಸ್ತು ಜಗತ್ತಿನಲ್ಲಿ ಬೇರಾವುದಿಲ್ಲದಿರಬಹುದು.ಆದರೆ ಆ ಒ೦ದು ಹನಿ ಕಣ್ಣೀರಿನ ಮಹತ್ವ ಗೊತ್ತಾಗುವುದು ನಾವು ಬೇರೆಯವರಿಗಾಗಿ ಕಣ್ಣೀರು ಸುರಿಸಿದಾಗ ಮಾತ್ರವೇ!

೧೪. ಬುಧ್ಧಿವ೦ತಿಕೆ ಮತ್ತು ಹುಡುಗಾಟಗಳೆರಡನ್ನೂ ನಮ್ಮಲ್ಲಿ ಮೇಳೈಸಿಕೊ೦ಡು ಜೀವನದ ಪ್ರತಿಕ್ಷಣವನ್ನೂ ಆನ೦ದಿಸೋಣ!

೧೫.ಸೋಲಿಗೆ ಕಾರಣಗಳನ್ನು ಹುಡುಕಲೇಬೇಕು! ಆದರೆ ಸೋಲಿಗೆ ಅವೇ ನೆಪವಾಗಬಾರದು!