Pages

Friday, March 25, 2011

ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಕಳೆದ ಒಂದು ಸಾರ್ಥಕ ಸಂಜೆ

ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು

ಪಂಡಿತರ ಸಾನ್ನಿಧ್ಯದಲ್ಲಿನ ಸಂತಸ - ಕವಿ ನಾಗರಾಜ್ ಪತ್ನಿ ಭಾರತಿಯೊಂದಿಗೆ


      ಪಂ. ಸುಧಾಕರ ಚತುರ್ವೇದಿಯವರು ೧೮೯೭ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, ೧೩ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ’ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ೧೩ ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಹತ್ಯೆಯಾದವರ ಸಾಮೂಹಿಕ ಶವಸಂಸ್ಕಾರ ಮಾಡಿದವರು. ಕ್ರಾಂತಿಕಾರಿ ಭಗತ್‌ಸಿಂಗರ ಗುರುವಾಗಿದ್ದವರು. ಅವರು ಹಿಂದೊಮ್ಮೆ ’ವಿಜಯ ಕರ್ನಾಟಕ’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: "ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. ’ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್’ - ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು". ಬರಲಿರುವ ರಾಮನವಮಿಗೆ ೧೧೫ ವರ್ಷಗಳಿಗೆ ಕಾಲಿರಿಸಲಿರುವ ಇವರು ಬೆಂಗಳೂರಿನ ಜಯನಗರದ ೫ನೆಯ ಬ್ಲಾಕಿನಲ್ಲಿ ಶ್ರೀ ಕೃಷ್ಣಸೇವಾಶ್ರಮದ ಆಸ್ಪತ್ರೆಯ ಎದುರು ಸಾಲಿನಲ್ಲಿರುವ ಮನೆಯೊಂದರಲ್ಲಿ ವಾಸವಿದ್ದಾರೆ. ಪ್ರತಿ ಶನಿವಾರ ಸಾಯಂಕಾಲ ಇವರ ಮನೆಯಲ್ಲಿ ಸತ್ಸಂಗ ಇದ್ದು ಆಸಕ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಳೆದ ೧೯-೦೩-೨೦೧೧ರಂದು ನನ್ನ ಪತ್ನಿ ಮತ್ತು ಮಗನೊಂದಿಗೆ ಅಂತಹ ಒಂದು ಸತ್ಸಂಗದಲ್ಲಿ ಪಾಲುಗೊಂಡದ್ದು ನನ್ನ ಪುಣ್ಯವಿಶೇಷ.





     ಸರಿಯಾಗಿ ಸಾಯಂಕಾಲ ೫-೩೦ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ (೫-೨೫ರಲ್ಲಿ ಸಮಯ ವಿಚಾರಿಸಿದ ಅವರು, ಇನ್ನೂ ೫ ನಿಮಿಷವಿದೆ ಎಂದು ಹೇಳಿದ್ದರು) ಮೊದಲಿಗೆ ಸುಮಾರು ೧೫-೨೦ ನಿಮಿಷಗಳ ಕಾಲ ಬಂದಿದ್ದ ಮಹಿಳೆಯರ ಪೈಕಿ ನಾಲ್ವರು ಭಾಗವಹಿಸಿದ ಅಗ್ನಿಹೋತ್ರಕ್ಕೆ ನಾವು ಸಾಕ್ಷಿಯಾದೆವು. ನಂತರದಲ್ಲಿ ಸುಮಾರು ೪೫-೫೦ ನಿಮಿಷಗಳ ಕಾಲ ಪಂ. ಸುಧಾಕರ ಚತುರ್ವೇದಿಯವರು ಬಂದಿದ್ದವರಿಗೆ ತಮ್ಮ ವಿಚಾರಗಳನ್ನು ಮುಂದಿಟ್ಟರು. ವಯೋಮಾನದ ಕಾರಣ ಕೆಲವು ಪದಗಳು ಅಸ್ಪಷ್ಟವೆಂದೆನಿಸಿದರೂ ಗಮನವಿರಿಸಿದರೆ ಅರ್ಥವಾಗುತ್ತಿತ್ತು. ಅವರು ತಿಳಿಸಿದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸಿ ಈ ಲೇಖನ. ಅವರ ಅಂದಿನ ವಿಚಾರದ ತುಣುಕುಗಳು, ಇದೋ ನಿಮ್ಮ ಮುಂದೆ:

ವಿಚಾರ ಮಾಡೋಣ

     ನಾಲಿಗೆ ಎರಡು ಅಲಗಿನ ಕತ್ತಿಯಿದ್ದಂತೆ. ಆಡುವ ಮಾತಿನಲ್ಲಿ ನಿಯಂತ್ರಣವಿರಬೇಕು. ಇಲ್ಲದಿದ್ದರೆ ಅದು ಇತರರನ್ನು ಮಾತ್ರವಲ್ಲದೆ ಆಡಿದವರನ್ನೂ ಘಾತಿಸುತ್ತದೆ. ಪಿಪ್ಪಲಾದ ಎಂಬ ಋಷಿಗೆ ಆ ಹೆಸರು ಬಂದದ್ದು ಆತ ಕೆಳಗೆ ಬಿದ್ದಿದ್ದ ಫಲವನ್ನು ಮಾತ್ರ ತಿನ್ನುತ್ತಿದ್ದರಿಂದ. ಗೌತಮನಿಗೆ ಅಕ್ಷಪಾದ -ಅಂದರೆ ಕಾಲಿನಲ್ಲಿ ಕಣ್ಣಿದ್ದವನು- ಎಂಬ ಹೆಸರೂ ಇತ್ತು. ಆತ ನಡೆದಾಡುವಾಗ ಯಾವುದೇ ಕ್ರಿಮಿ, ಕೀಟಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದ. ಅವರುಗಳು ಅಷ್ಟರಮಟ್ಟಿಗೆ ಇತರರನ್ನು ನೋಯಿಸಬಾರದೆಂಬ ಮನೋಭಾವ ಹೊಂದಿದ್ದರು. ಮಾತು ಅನ್ನುವುದು ಬಾಣವಿದ್ದಂತೆ. ಆಡಿದ ಮೇಲೆ ಮುಗಿಯಿತು. ಬಾಣ ತನ್ನ ಗುರಿಯನ್ನು ಛೇದಿಸುವಂತೆ ಪಾಪವನ್ನು ದೂರ ಮಾಡುವಂತಿರಬೇಕು, ಇತರರನ್ನು ಚುಚ್ಚುವಂತಿರಬಾರದು. ಮನಸ್ಸಿಗೆ ಹಿತ, ಸಂತೋಷ ತರಬೇಕು. ನಮಗೆ ಕೆಟ್ಟದಾದಾಗ, ತೊಂದರೆಯಾದಾಗ ಪರಮಾತ್ಮನನ್ನು ದೂಷಿಸುವುದು ಸರಿಯಲ್ಲ. ನಮಗೆ ಕೆಟ್ಟದಾಗಲು ಕಾರಣ ನಮ್ಮ ತಪ್ಪೇ ಹೊರತು ಪರಮಾತ್ಮನದಲ್ಲ ಎಂಬುದನ್ನು ಅರಿಯಬೇಕು. ನಮಗೆ ಕಷ್ಟವನ್ನು ಎದುರಿಸಲು ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕೇ ಹೊರತು ಅವನನ್ನು ಬಯ್ಯಬಾರದು. ನಾವು ಹೊಗಳಿದರೂ ಅಷ್ಟೆ, ತೆಗಳಿದರೂ ಅಷ್ಟೆ, ಪರಮಾತ್ಮ ಪರಮಾತ್ಮನೇ. ಅವನು ನಿರ್ಲಿಪ್ತ. ಹೊಗಳುತ್ತಾರೆಂದು ಒಳ್ಳೆಯದು ಮಾಡುತ್ತಾನೆ, ತೆಗಳುತ್ತಾರೆಂದು ಕೆಟ್ಟದು ಮಾಡುತ್ತಾನೆ ಎಂದು ಭಾವಿಸುವುದು ಮೂರ್ಖತನ. ಎಲ್ಲಿ ನ್ಯಾಯ, ಸತ್ಯ, ಧರ್ಮ ಇರುತ್ತದೋ ಅಲ್ಲಿ ಭಗವಂತನಿರುತ್ತಾನೆ. ಇದರ ಅರಿವಾದರೆ ಪಾಪ ಮಾಡಲು ಧೈರ್ಯ ಬರುವುದಿಲ್ಲ.
     ಭಗವಂತ ಸರ್ವಶಕ್ತ, ಸರ್ವವ್ಯಾಪಕ, ನಿರಾಕಾರ. ಯಜುರ್ವೇದದ ಈ ಮಂತ್ರ ಕೇಳಿ:

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ||

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ. [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂತಿರುವ, ಎಲ್ಲಾಕಡೆ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ನಿಜವಾಗಿ ಅದಿರುವುದು ಹಾಗೆಯೇ.
     ದಿಕ್ಕುಗಳು ಎನ್ನುವುದು ಸ್ಥಳ ಗುರುತಿಸುವುದು, ದಿಸೆ ತೋರಿಸುವ ಸಲುವಾಗಿ ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದೇ ಹೊರತು ಮತ್ತೇನಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂಬುದು ಒಂದು ಅರ್ಥದಲ್ಲಿ ಸರಿಯಿರಬಹುದು. ಆ ಸೂರ್ಯನೂ ಸಹ ತನ್ನ ಚಲನೆಯ ಪಥವನ್ನು ಬದಲಿಸುತ್ತಾನೆ. ಬಳಕೆಯಲ್ಲಿ ನಾವು ಪೂರ್ವ, ಪಶ್ಚಿಮ, ಇತ್ಯಾದಿ ಎಂಟು ದಿಕ್ಕುಗಳನ್ನು ಬಳಸುತ್ತೇವೆ. ನಮಗೆ ಪೂರ್ವವೆನಿಸುವ ಒಂದು ಸ್ಥಳ ಇನ್ನೊಬ್ಬರಿಗೆ ಪಶ್ಚಿಮವಾಗಬಹುದು. ವಾಸ್ತವವಾಗಿ ನಮ್ಮ ಸುತ್ತಲೂ ಇರುವ ೩೬೦ ಡಿಗ್ರಿ ಪ್ರದೇಶದ ಒಂದೊಂದು ಡಿಗ್ರಿಯೂ ಒಂದೊಂದು ದಿಕ್ಕು. ಈಗ ಹೇಳಲಾಗುತ್ತಿರುವ ಜ್ಯೋತಿಷ್ಯ ಎಂಬುದಕ್ಕೆ ಅರ್ಥವಿಲ್ಲ. ಬ್ರಹ್ಮಾಂಡದ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಜನರನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಅವುಗಳೇ ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಅವನೇ ಭಗವಂತ. ಈ ವಿಶಾಲ ಬ್ರಹ್ಮಾಂಡವನ್ನು ಆ ಪರಮಾತ್ಮ ಇದ್ದಲ್ಲೇ ಇದ್ದು ನಿಯಂತ್ರಿಸುತ್ತಿದ್ದಾನೆ. ಇದನ್ನು ಅರಿಯದಿದ್ದರೆ ಅವನಿಗೆ ನಷ್ಟವೇನೂ ಇಲ್ಲ. ನಾನು ಎಷ್ಟೋ ವಿದ್ವಾಂಸರನ್ನು ನಕ್ಷತ್ರಗಳು ಎಷ್ಟಿವೆ ಎಂಬುದು ಗೊತ್ತೇ? ಎಂದು ಪ್ರಶ್ನಿಸಿದ್ದೇನೆ. ಯಾರಿಗೂ ಉತ್ತರಿಸಲು ಆಗಿಲ್ಲ. ಸರ್ ಸಿ.ವಿ. ರಾಮನ್‌ರವರನ್ನೂ ಕೇಳಿದ್ದೆ. ಅವರು 'ಪೋಯಾ, ಪೋಯಾ! ನಾನು ಸಣ್ಣವನು, ಇಷ್ಟು ದೊಡ್ಡ ಬ್ರಹ್ಮಾಂಡವನ್ನು ಅರಿಯುವ, ಅಳೆಯುವ ಶಕ್ತಿ ನನ್ನಂತಹವರಿಗೆ ಎಲ್ಲಿ ಬರಬೇಕು' ಎಂದು ಹೇಳಿದ್ದರು.

     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.

     ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವವರು ಎಂದು ಅರ್ಥವಲ್ಲ. ಬ್ರಹ್ಮನಲ್ಲಿ ಸಂಚಾರ ಮಾಡುವ ಶಕ್ತಿಯಿರುವವನು ಎಂದು ಅರ್ಥ. ಈ ಮನುಷ್ಯ ಜನ್ಮ ದೊಡ್ಡದು. ಅದನ್ನು ಭೌತಿಕ ಸುಖಭೋಗಕ್ಕಾಗಿ ಮಾತ್ರ ಎಳಸದೆ ಈ ಜನ್ಮದ ಅರ್ಥ ತಿಳಿದು ಸತ್ಕರ್ಮಕ್ಕಾಗಿ ಬಳಸಬೇಕು. ಹಾಗೆ ಮಾಡದಿದ್ದರೆ ನಂತರದಲ್ಲಿ ಮತ್ತೆ ಇನ್ನು ಯಾವಾಗಲೋ ಮನುಷ್ಯ ಸಿಕ್ಕುವುದು! ಮನುಷ್ಯಜನ್ಮ ಎಷ್ಟೋ ಜನ್ಮಗಳನ್ನು ದಾಟಿಬಂದ ನಂತರ ಸಿಕ್ಕಿದೆ. ಇದನ್ನು ಸಾರ್ಥಕಪಡಿಸಿಕೊಳ್ಳಬೇಕು. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಗಳಾಗಬೇಕಾದುದು ಮನುಷ್ಯಜನ್ಮದ ಉದ್ದೇಶ. ಯಾರೋ ಹೇಳುತ್ತಿದ್ದರು,'ಲಕ್ಷಾಂತರ ಜನ್ಮಗಳ ನಂತರ ಮನುಷ್ಯನಾಗಿ ಹುಟ್ಟಿದ್ದೇವೆ, ಪುನಃ ಕೆಳಗೆ ಹೋಗುತ್ತೇವೆಯೇ? ಮೇಲೆ ಹತ್ತಿ ಬಂದಿದ್ದೇವೆ, ಕೆಳಗೆ ಇಳಿಯುತ್ತೇವೆಯೇ?' ಸರಿಯಾಗಿ ಮನುಷ್ಯನಂತೆ ನಡೆಯದಿದ್ದರೆ ಮನುಷ್ಯರಾಗೇ ಹುಟ್ಟುತ್ತೇವೆಂದು ಹೇಳಲಾಗುವುದಿಲ್ಲ. ನಾವು ಮಾಡಿದ ಕರ್ಮವನ್ನು ನಾವು ಭೋಗಿಸಲೇಬೇಕು. ಇದು ಭಗವಂತನ ನಿಯಮ. ನಾನು ಬಹಳಷ್ಟು ಸನ್ಯಾಸಿಗಳನ್ನು ನೋಡಿದ್ದೇನೆ - ಕಾವಿ ಬಟ್ಟೆ ಸನ್ಯಾಸಿಗಳು, ಬಿಳಿ ಬಟ್ಟೆ ಸನ್ಯಾಸಿಗಳು, ಹಳದಿ ಬಟ್ಟೆ ಸನ್ಯಾಸಿಗಳು, ಕಪ್ಪು ಬಟ್ಟೆ ಸನ್ಯಾಸಿಗಳು, ಹೀಗೆ. ಸನ್ಯಾಸಿಗಳು ಎಂದರೆ ಎಲ್ಲವನ್ನೂ ಬಿಟ್ಟವರು, ಅವರೇನು ಬಿಟ್ಟಿದ್ದಾರೆ? ಹಸಿವಾದಾಗ 'ಭವತಿ ಭಿಕ್ಷಾಂದೇಹಿ'ಅನ್ನುತ್ತಾರೆ, ಛಳಿಯಾದಾಗ ಬೆಚ್ಚಗೆ ಹೊದ್ದುಕೊಳ್ಳುತ್ತಾರೆ! ಸನ್ಯಾಸಿಗಳೆಂದರೆ ಭೌತಿಕ ಸುಖ ಭೋಗಗಳನ್ನು ತ್ಯಾಗ ಮಾಡಿದವರು, ಪರಮಾತ್ಮನ ಕುರಿತು ಧ್ಯಾನದಲ್ಲಿ ತೊಡಗಿಕೊಂಡವರು ಎನ್ನುತ್ತಾರೆ. ಅಂತಹ ನಿಜವಾದ ಸನ್ಯಾಸಿಗಳು ಎಷ್ಟು ಜನ ಇದ್ದಾರೆ? ಸ್ವಾಮಿ ಶ್ರದ್ಧಾನಂದರು ಹಾಸ್ಯವಾಗಿ ಹೇಳುತ್ತಿದ್ದರು - 'ದೇಶಕ್ಕೆ ಸ್ವಾತಂತ್ರ್ಯ ಬಂದು ನಾನು ಪ್ರಧಾನ ಮಂತ್ರಿಯಾದರೆ ಮಾಡುವ ಮೊದಲ ಕೆಲಸವೆಂದರೆ ಸಾಧು-ಸಂತರೆನಿಸಿಕೊಂಡವರನ್ನೆಲ್ಲಾ ಹಿಡಿದು ಮಿಲಿಟರಿಗೆ ಸೇರಿಸಿಬಿಡುತ್ತಿದ್ದೆ! ಮೊದಲೇ ಬಡ ದೇಶ, ಒಂದಿಷ್ಟು ಭಿಕ್ಷುಕರು ಕಡಿಮೆಯಾಗಲಿ!'

     ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಹೇಳುವವರನ್ನು ನೋಡಿದ್ದೇನೆ - ಅವರು ಕಂಡೆವೆಂದು ಹೇಳುವ ಪರಮಾತ್ಮ ಅಂದರೆ ಮೂರು ಕಣ್ಣಿನ ಶಿವ, ನಾಲ್ಕು ತಲೆಯ ಬ್ರಹ್ಮ, ಹೀಗೆ. ಇದೆಲ್ಲಾ ಬುರುಡೆ. ನಿರಾಕಾರ ಪರಮಾತ್ಮ ಎಂದೂ ಸಾಕಾರನಾಗಿರಲಿಲ್ಲ, ಆಗುವುದೂ ಇಲ್ಲ. ಕೃಷ್ಣನನ್ನು ವಿಷ್ಣುವಿನ ಅವತಾರ ಅನ್ನುತ್ತಾರೆ. ಅವತಾರ ಎಂದರೆ ಮೇಲಿನಿಂದ ಕೆಳಗೆ ಅವತರಿಸಿದವನು ಎಂದು. ಆ ಪರಮಾತ್ಮ ಮೇಲಿನಿಂದ ಕೆಳಗೆ ಇಳಿದು ಬಂದನೆಂದರೆ ಆತ ಮೊದಲು ಕೆಳಗೆ ಇರಲಿಲ್ಲವೇ? ಕೌಸಲ್ಯೆಯ ಮಗನಾಗಿ ಪರಮಾತ್ಮ ರಾಮನ ಅವತಾರದಲ್ಲಿ ಬಂದನೆಂದರೆ ಅದಕ್ಕೂ ಮೊದಲು ಭೂಮಿಯಲ್ಲಿ ದೇವರಿರಲಿಲ್ಲವೆ? ಸಾಕ್ಷಾತ್ಕಾರ ಎನ್ನುವ ಪದವನ್ನೇ ನಾನು ಬಳಸಲು ಇಚ್ಛಿಸುವುದಿಲ್ಲ. ಪರಮಾತ್ಮ ಎಂದೂ ಸಾಕಾರ ರೂಪಿ ಅಲ್ಲವೇ ಅಲ್ಲ, ಸಾಕಾರನೆಂದಾಕ್ಷಣ ಸರ್ವಶಕ್ತ, ಸರ್ವವ್ಯಾಪಕ ಭಗವಂತನನ್ನು ಮಿತಿಗೊಳಿಸಿದಂತೆ! ಆತ ಅನುಭವಗಮ್ಯನೇ ಹೊರತು ಕಣ್ಣಿನಿಂದ ಕಾಣಲಾಗುವುದಿಲ್ಲ. ಹೃದಯದಲ್ಲಿ ಕಾಣಬೇಕು, ಅನುಭವಿಸಬೇಕು! ಪರಮಾತ್ಮ ರಾಮನೆಂದರೆ ಹೃದಯದಲ್ಲಿ ನೆಲೆಸಿರುವ, ರಮಿಸುವ ಭಗವಂತನೇ ಹೊರತು ಕೌಸಲ್ಯಾಸುತನೆಂದಲ್ಲ. ರುದ್ರನೆಂದರೆ ಲಯಕಾರಕನೆಂದು ಬಿಂಬಿಸಲ್ಪಟ್ಟವನಲ್ಲ, ಪರರ ಸಂಕಷ್ಟಗಳನ್ನು ಕಂಡು ಕಣ್ಣೀರು ಸುರಿಸುವವನು, ಪರಿಹರಿಸಲು ಸಹಕರಿಸುವವನು! ಸ್ವರ್ಗ, ನರಕ ಅನ್ನುವುದು ಬೇರೆ ಇಲ್ಲ. ಇಲ್ಲೇ ಇದೆ. ಸ್ವರ್ಗ ಅಂದರೆ ಮೇಲೇರುವುದು, ನರಕ ಅಂದರೆ ಕೆಳಕ್ಕೆ ಇಳಿಯುವುದು. ನಮ್ಮ ನಡವಳಿಕೆಗಳು ಸರಿಯಿದ್ದರೆ, ಸತ್ಕರ್ಮ ಮಾಡಿದರೆ ನಾವು ಸ್ವರ್ಗ ಕಾಣುತ್ತೇವೆ, ಇಲ್ಲದಿದ್ದರೆ ಕೆಳಗೆ ಬೀಳುತ್ತೇವೆ. ನನ್ನನ್ನು ನಾಸ್ತಿಕನೆಂದು ದೂರುವವರೂ ಇದ್ದಾರೆ. ಆಸ್ತಿಕರೆಂದರೆ ಯಾರು, ನಾಸ್ತಿಕರು ಯಾರು? ಅರ್ಥರಹಿತ ಸಂಪ್ರದಾಯಗಳು, ಆಚರಣೆಗಳನ್ನು ಪೋಷಿಸುವ ಆಸ್ತಿಕರೆನಿಸಿಕೊಳ್ಳುವವರಿಗಿಂತ ನಾಸ್ತಿಕರೇ ಮೇಲು! ಜ್ಞಾನಿಗಳಾದವರು ವಿಚಾರ ತಿಳಿದವರಾಗಿದ್ದು ಯಾರು ಏನೇ ಹೇಳಿದರೂ ತಪ್ಪುದಾರಿಗೆ ಎಳೆಯಲ್ಪಡುವುದಿಲ್ಲ. ಆದರೆ ತಿಳುವಳಿಕೆ ಕಡಿಮೆಯಿದ್ದವರನ್ನು ದಾರಿ ತಪ್ಪಿಸುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಕ್ಷಮಿಸಬೇಕು, ನಾನು ಆಡಿದ ಮಾತುಗಳು ಕಟುವಾಗಿ ಕಾಣಬಹುದು, ಆದರೆ ಸತ್ಯ ಸತ್ಯವೇ. ನಾನು ಯಾರನ್ನೂ ನೋಯಿಸಲು ಉದ್ದೇಶಿಸಿಲ್ಲ, ಕೆಟ್ಟ ಭಾವನೆಯಿಂದ ಮಾತನಾಡಿಲ್ಲ, ಪಂಡಿತನೆಂದು ಭಾವಿಸಿ ಆಡಿಲ್ಲ. ಒಳ್ಳೆಯ ವಿಚಾರ ಮಾಡೋಣ, ವಿಮರ್ಶೆ ಮಾಡೋಣ, ಒಳ್ಳೆಯ ದಾರಿಯಲ್ಲಿ ನಡೆಯೋಣ!
-0-0-0-0-0-

Thursday, March 24, 2011

ಯೋಚಿಸಲೊ೦ದಿಷ್ಟು...೨೭

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ!

೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ ಅವನನ್ನು ಹಿ೦ತಿರುಗಿ ಕರೆತರಲಾಗದು!

೩. ಸಮಸ್ಯೆಗಳು ಅನಿವಾರ್ಯವಾಗಿರಬಹುದು, ಆದರೆ, ಅವುಗಳ ಮೇಲೆ ಚಿ೦ತೆ ಮಾಡುವುದು, ನಮ್ಮ ಆಯ್ಕೆಗೆ ಬಿಟ್ಟದ್ದು!
೪. ಬದುಕನ್ನು ಬದುಕುವ ರೀತಿಯಲ್ಲಿಯೇ ಬದುಕಿದರೆ ಬದುಕು ಸು೦ದರ!

೫. ಜೀವನಕ್ಕೆ ‘ನಿಲುಗಡೆ‘ ಯಿಲ್ಲ! ಕನಸುಗಳಿಗೆ “ಕೊನೆಯ ದಿನಾ೦ಕ“ ಎ೦ಬುದಿಲ್ಲ! ಅ೦ತೆಯೇ “ಕಾಲ“ಕ್ಕೆ “ರಜೆ“ ಎ೦ಬು ದಿಲ್ಲ! ನಮ್ಮ ಜೀವನದ ಪ್ರತಿಯೊ೦ದು ಕ್ಷಣವೂ ಅಮೂಲ್ಯವಾದುದೇ!

೬. ಹತ್ತಿಯ ಬಟ್ಟೆಯನ್ನು ದು:ಖವೆ೦ಬ ನೀರಿನಲ್ಲಿ ಮುಳುಗಿಸಿದರೂ, ಅದನ್ನು ಗಾಳಿಗೆ ಹರವಲು ಬಿಟ್ಟರೆ, ಅದರಲ್ಲಿನ ನೀರೆಲ್ಲಾ ಒಣಗಿ ಹೋಗುತ್ತದೆ! ಅ೦ತೆಯೇ ಜೀವನವೂ ಕೂಡಾ ಒ೦ದು ಹತ್ತಿ ಬಟ್ಟೆಯ೦ತೆಯೇ!

೭. ಇನ್ನೊಬ್ಬರ ತಪ್ಪುಗಳನ್ನು ಕ೦ಡೂ ಪ್ರತಿಭಟಿಸದೇ ಮೌನವಾಗಿರುವುದೆ೦ದರೆ, ತಪ್ಪು ಮಾಡುವವರಿಗೆ ಮತ್ತಷ್ಟು ಹೆಚ್ಚು ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸಿದ೦ತೆಯೇ!

೮. ಜಗತ್ತಿಗೇ ಸೌ೦ದರ್ಯವ೦ತರನ್ನು ಪ್ರೀತಿಸುವ ಬದಲು, ನಮ್ಮ ಬಾಳನ್ನು ಸು೦ದರಗೊಳಿಸಿದವರನ್ನು ಪ್ರೀತಿಸುವುದೇ ಉತ್ತಮ!

೯. ಯಾರು ನಿಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಾರೆಯೋ, ಅವರಾಗಲೇ ನಿಮ್ಮಿ೦ದ “ಆಕರ್ಷಿತ“ ರಾಗಿದ್ದಾರೆ೦ದು ಅರ್ಥ!

೧೦. ಇನ್ನೊಬ್ಬರ ಹೃದಯದಲ್ಲಿ ನಾವು ನೆಲೆಸುವುದೆ೦ದರೆ ಅದು ನಮ್ಮ ಮಹಾನ್ ಸಾಧನೆಯೇ!

೧೧. ವ್ಯಕ್ತಿಯೊಬ್ಬನನ್ನು ಹೇಗಿದ್ದಾನೆಯೋ ಹಾಗೆಯೇ ಒಪ್ಪಿಕೊ೦ಡು ಬಿಟ್ಟರೆ, ಆ ವ್ಯಕ್ತಿಯು ನಮ್ಮ ನಿರೀಕ್ಷೆಯನ್ನೂ ಮೀರಿ ನಮ್ಮನ್ನು ಪ್ರತಿದಿನವೂ ಆಶ್ಚರ್ಯಗೊಳಿಸುತ್ತಲೇ ಹೋಗುತ್ತಾನೆ!!

೧೨.“ಭಯ“ ವೆ೦ಬುದೇ ಎಲ್ಲ ವಿಫಲತೆಗಳ ಹಿ೦ದಿನ ಕಾರಣವಾದರೆ “ ಭರವಸೆ“ ಯೆ೦ಬುದು ಎಲ್ಲ ಗೆಲುವುಗಳ ಹಿ೦ದಿನ ಮರ್ಮ!

೧೩. ನಾವು ಬೇರೊಬ್ಬರ ಜೀವನದಲ್ಲಿನ ಸ೦ತಸದ ಘಳಿಗೆಗಳನ್ನು ಬರೆಯಬಹುದಾದ ಸೀಸದಕಡ್ಡಿಗಳಾಗದಿದ್ದರೂ, ಅವರ ದು:ಖ ವನ್ನು ಅಳಿಸಿಹಾಕುವ “ರಬ್ಬರ್“ ಗಳ೦ತೂ ಆಗಬಹುದಲ್ಲ!

೧೪.ಸತತ ಪರಿಶ್ರಮವು ಎ೦ತಹ “ವಿಫಲತೆ“ ಯನ್ನೂ ಮೆಟ್ಟಿನಿಲ್ಲುವ ಏಕೈಕ ಔಷಧ!

೧೫. ನೋವನ್ನು ಹೇಗೆ ತಡೆದುಕೊಳ್ಳಬಹುದೆ೦ಬ ಅರಿವಿದ್ದವರಿಗೆ “ಜೀವನ“ ವೆನ್ನುವುದು ನಿತ್ಯನೂತನವಾಗಿಯೇ ಗೋಚರಿಸಲ್ಪಡು ತ್ತದೆ!

Monday, March 21, 2011

ಅನುಮಾನದ ಮೇಲ್

ವೇದಸುಧೆಯ ಬಂಧುಗಳೇ,
ಇತ್ತೀಚೆಗೆ ಪರಿಚಿತರ ಮೇಲ್ ವಿಳಾಸದಿಂದ ಬರುವ  ಕೆಲವು ಮೇಲ್ ಗಳೂ ಕೂಡ ಸಂಶಯಕ್ಕೆಎಡೆಮಾಡಿಕೊಡುತ್ತಿದೆ. ವೇದಸುಧೆಯ ಬಳಗದ ಶ್ರೀ ಲಕ್ಷ್ಮೀನಾರಾಯಣ್ ರವರಿಗೆ ಹೀಗೊಂದು ಅನುಮಾನದ ಮೇಲ್ ಬಂದಿದೆ. ಶ್ರೀ ವಿಶ್ವನಾಥ ಶರ್ಮರ ಮೇಲ್ ವಿಳಾಸದಿಂದ ನನಗೂ ಇಂತದೇ ಮೇಲ್ ಬಂದಿದೆ.ಈ ಬಗ್ಗೆ ಚಿಂತನೆ ಮಾಡುವುದು ಸೂಕ್ತವೆಂದು ಕಾಣುತ್ತದೆ. ಹಾಗೊಂದು ವೇಳೆ ನಿಮ್ಮ ಪಾಸ್ ವರ್ಡ್ ನ್ನು ಯಾರಾದರೂ ಕದ್ದಿದ್ದಾರೆಂದು ನಿಮಗೆ ನಿಮಗೆ ಸಂಶಯ ಬಂದರೆ ಪಾಸ್ ವರ್ಡ್ ಕೂಡಲೇ ಬದಲಿಸಿಕೊಳ್ಳುವುದು ಸೂಕ್ತ. ಶ್ರೀ ಲಕ್ಷ್ಮೀ ನಾರಾಯಣರಿಂದ ವೇದಸುಧೆಗೆ ಬಂದಿರುವ ಈ ಮೇಲ್ ಎಲ್ಲರ ಗಮನಕ್ಕಾಗಿ ಈ ಕೆಳಗೆ ಪ್ರಕಟಿಸಲಾಗಿದೆ.

ಪ್ರಿಯ ಶ್ರೀಧರ್,
ನನಗೊಂದು ಮೇಲ್ ಬಂದಿದೆ. ಅದು ಹೀಗಿದೆ.
read message ಮೇಲೆ ಕ್ಲಿಕ್ ಮಾಡಿದರೆ , ಅದು ನನ್ನ ಬಗೆಗಿನ ಎಲ್ಲ details ಕೇಳಿ ನಂತರ ನನ್ನ ಮೇಲ್ ಅಡ್ರೆಸ್  ಮತ್ತು password ಕೇಳುತ್ತಿದೆ.
 ನೋಡುವ ಎಂದು ಹೊಸ ಪಾಸ್ವರ್ಡ್ ಕೊಟ್ಟರೆ , invalid ಎನ್ನುವ ಸೂಚನೆ ಬರಿತ್ತಿದೆ. ನನ್ನ gmail na paasword ಕೊಡಲು ಯೋಚಿಸುವಂತಾಯಿತು. ಹಾಗಾಗಿ ಇದು ಏನು , ನಿಮ್ಮ ಗಮನಕ್ಕೆ , ಬಂದಿರದ  ವಿಷಯವೇ ಹೇಗೆ , ನನ್ನ ಪಾಸ್ವರ್ಡ್  ಪಡೆಯಲು ಬೇರೆ ಯಾರೋ ಮಾಡುತ್ತಿರುವ , ವಿಷಯವೇ  ಹೇಗೆ ?
ಇದು ನಿಮಗೆ ತಿಳಿಸುವುದು ಸೂಕ್ತವೆಂದು   ನಿಮಗೆ ಬರೆಯತ್ತಿರುವೆ.,
ವಂದನೆಗಳೊಂದಿಗೆ,
ಬಿ ಎಸ್ಸ್ ಲಕಶ್ಮೀ ನಾರಾಯಣ ರಾವ್.

-----------------------------------------

ನನ್ನ Orkut ಪ್ರೊಫೈಲ್ ಕನ್ನ ಕೊರಕರ ದಾಳಿಗೆ ಗುರಿಯಾದ ಕಥೆ.

ಬೆಕ್ಕಿನಮರಿಯ ಕುತೂಹಲದಿಂದಾಗಿ ಇತ್ತೀಚಿಗೆ ನನ್ನ ಆರ್ಕುಟ್ ಪ್ರೊಫೈಲ್ ಕನ್ನಕೊರಕರ ದಾಳಿಗೆ ಗುರಿಯಾಯಿತು. ಆ ಕನ್ನಕೊರಕರಿಗೆ ಕೋಟೆಯ ಹೆಬ್ಬಾಗಿಲಿನ ಬೀಗ ತೋರಿಸಿ ಕೀಲಿ ಕೈಯೆತ್ತಿ ಕೊಟ್ಟವರು ನಾವೇ ಅನ್ನುವುದು ನೂರಕ್ಕೆ ನೂರು ಸತ್ಯ. ನಾವು ಹೇಗೆ ಮಂಗಗಳು ಆದೆವೆಂಬುದನ್ನು ಮುಂದೆ ಓದಿ.
     ಹಿಂದೊಮ್ಮೆ ಸರಿಯಾಗಿ ಏಟು ತಿಂದ ಮೇಲೆ ಜಾಲ ತಾಣ ಕ್ಲಿಕ್ ಮಾಡುವ ವಿಷಯದಲ್ಲಿ ನಾನು ತುಂಬಾ ಎಚ್ಚರವಾಗಿರುತ್ತೇನೆ. ಇಂಟರ್ನೆಟ್ ಹಾಗು ಕಂಪ್ಯೂಟರ್ ಬಂದ ಹೊಸತರಲ್ಲಿ ಏನೇನೋ ಹುಡುಕಿ ಯಾವುದೋ ವೆಬ್ ಸೈಟ್ಗೆ ಹೋಗಿ ಅವಾಂತರ ಪಟ್ಟಿದ್ದೆ.(ಹಾವು ಬಿಡುವವರು ಅವರೇ ದುಡ್ಡಿಗೆ ಹಾವು ಹಿಡಿಯುವವರೂ ಅವರೇ – ಎಂಬ ಮಾತಿನ ಸಾಕ್ಷಾತ್ ಅನುಭವವಾಗಿತ್ತು.) ಡೈಲ್ ಅಪ್ ಇಂಟರ್ನೆಟ್ ನಲ್ಲೇ ತುಂಬಾ ಹಾನಿಯಾಗಿತ್ತು. ಕಂಪ್ಯೂಟರ್ ರಿ ಫಾರ್ಮೆಟ್ ಮಾಡಬೇಕಾಯಿತು. ಆಗ ಡಿಜಿಟಲ್ ಕ್ಯಾಮೆರಾ ಇರಲಿಲ್ಲವಾದ್ದರಿಂದ ಕೆಲವೊಂದು ಹಾಡುಗಳನ್ನ ಬಿಟ್ಟರೆ ಹೆಚ್ಹೇನನ್ನು ಕಳೆದುಕೊಂಡಿರಲಿಲ್ಲ. ಒಮ್ಮೆ ಹಾಗೆ ಆದಮೇಲೆ ಮತ್ತೆ ಹಾಗೆಂದೂ ಆಗಿರಲಿಲ್ಲ. ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಿದ್ದರೂ ಏನೂ ಆಗಿರಲಿಲ್ಲ.
        ಆದರೆ ಮೊನ್ನೆ ಮಾತ್ರ ಆರ್ಕುಟ್ನಲ್ಲಿ ಏನಾಯಿತೆಂದರೆ —
ಅರವತ್ತಕ್ಕಿಂತ ಹೆಚ್ಚು ವಯಸ್ಸಾದ, ದೊಡ್ಡ ಶಾಲೆಯೊಂದರ ನಿರ್ದೇಶಕರಾದ, ಜ್ಯೋತಿಷ್ಯ ವಿಶಾರದರಾದ, ನನ್ನ ಕಸಿನ್ ಹೆಂಡತಿಯ ನೆಂಟರಾದ, ದೊಡ್ಡ ಫೋಟೋಗ್ರಾಫರ್ ಆದ ನನ್ನ ಆರ್ಕುಟ್ ಸ್ನೇಹಿತರೊಬ್ಬರ (ನನ್ನ ಹೋಂ ಪೇಜ್ನಲ್ಲಿ ಕಂಡ) ಅಪ್ ಡೆಟ್ ನ ಲಿಂಕ್ ಒಂದರ ಮೇಲೆ ಬೆಕ್ಕಿನ ಮರಿಯ ಕುತೂಹಲದಿಂದ ಕ್ಲಿಕ್ ಮಾಡಿದೆ.(ಅವರು ವಿನೋದಕ್ಕೆ ಆ ಸೈಟಿನ ಲಿಂಕ್ ಅಪ್ ಡೆಟ್ ಮಾಡಿಕೊಂದಿದ್ದರೆನೋ. ಬೇರೆ ಹುಡುಗ ಬುದ್ದಿಯವರು ಆ ವೆಬ್ ಸೈಟ್ ಲಿಂಕ್ ಅಪ್ ಡೆಟ್ ಮಾಡಿದ್ದರೆ ಕಣ್ಣೆತ್ತಿಯೂ ನೋಡುತ್ತುರಲಿಲ್ಲ.) ಅಷ್ಟು ಮಾಡಿದ್ದೆ ತಡ ಆರ್ಕುಟ್ ಹೋಂ ಪೇಜ್ ಪ್ರತ್ಯಕ್ಷವಾಯಿತು. ಕೆಲವೊಮ್ಮೆ ಬೇರೆ ಟ್ಯಾಬ್ ನಲ್ಲಿ ಗೂಗಲ್ ನವರ ಇತರ ಸೇವೆಗಳು ಅಂದರೆ ಬ್ಲಾಗರ್, ಜಿ ಮೇಲ್ ಕೆಲಸ ಮಾಡುತ್ತಿದ್ದು ಅಲ್ಲಿ ನಾವು ಸೈನ್ ಔಟ್ ಮಾಡಿ ಆರ್ಕುಟ್ ನ ನಮ್ಮ ಪೇಜ್ ಮೇಲೆ ಏನಾದರೂ ಕ್ಲಿಕ್ ಮಾಡಿದಾಗ ಅಲ್ಲೂ ಹಾಗೇ ಆಗಿ ಆರ್ಕುಟ್ ಹೋಂ ಪೇಜ್ ಬರುತ್ತಿತ್ತು. ನಾವು ಮತ್ತೊಮ್ಮೆ ನಮ್ಮ ಯುಸರ್ ನೇಮ್ ಪಾಸ್ ವರ್ಡ್ ಕೊಟ್ಟು ಮತ್ತೊಮ್ಮೆ ಲಾಗಿನ್ ಆಗಬೇಕಿತ್ತು. ಹಾಗೇನೂ ಆಯಿತೇನೋ ಎಂದು ತಿಳಿದು ಪ್ರತ್ಯಕ್ಷವಾದ ಆರ್ಕುಟ್ ಹೋಂ ಪೇಜ್ ನಲ್ಲಿ ನನ್ನ ಯುಸರ್ ನೇಮ್, ಪಾಸ್ ವರ್ಡ್ ಕೊಟ್ಟು ಎಂಟರ್ ಒತ್ತಿ ನನ್ನ ಪೇಜ್ ತೆರೆಯುವುದೇ ಕಾಯುತ್ತಿದ್ದೆ. ತೆರೆಯದಿದ್ದಾಗ ಅನುಮಾನ ಬಂದು ಆ ಸೈಟನ್ನು ಕ್ಲೋಸ್ ಮಾಡಿ ಲ್ಯಾಪ್ ಟಾಪ್ ಆಫ್ ಮಾಡಿದೆ. ಅಷ್ಟರಲ್ಲಾಗಲೇ ಬೀಗ ಮತ್ತು ಬೀಗದ ಕೈ ಕನ್ನಕೊರಕರ ಕೈ ಸೇರಿಯಾಗಿದೆ.
           ನಾನು ಮೊನ್ನೆ ರಾತ್ರಿ ಮನೆ ಸೇರುತ್ತಿದ್ದಂತೆಯೇ ಹೆಂಡತಿ ಮೊದಲು ಹೇಳಿದ ವಿಷಯ ಇಂಜಿನಿಯರ್ ಓದುತ್ತಿರುವ ನನ್ನ ಅಕ್ಕನ (ಕಸಿನ್) ಮಗ ನಮ್ಮನೆಗೆ ಫೋನ್ ಮಾಡಿ ನನ್ನ ಪ್ರೊಫೈಲ್ ಹ್ಯಾಕ್ ಆಗಿದೆಯೆಂದು ಹೇಳಿದ್ದು. ಸಾದಾರಣ ಉಟವಾದಮೇಲೆ ನೆಟ್ ತೆರೆಯುವವನು ಅಂದು ಕೂಡಲೇ ಕನೆಕ್ಟ್ ಮಾಡಿ ನನ್ನ ಆರ್ಕುಟ್ ಪೇಜ್ ನೋಡ್ತೀನಿ. ಏನಿದೆ ಅಲ್ಲಿ? ನನ್ನ ಫೋಟೋ ಬದಲು ಜೀನ್ಸ್ – ಟಿ ಶರ್ಟ್ ಧಾರಿ ನಗುಮೊಗದ ಚೆಲುವೆಯ ಚಿತ್ರ!! ಹೆಸರೂ ತುಂಬ ರಮ್ಯ."Call girl for sex"-ಅಂತ. (ಅಷ್ಟರಲ್ಲಾಗಲೇ ಕೊಂಗನೊಬ್ಬನ ಫ್ರೆಂಡ್ ರಿಕ್ವೆಸ್ಟ್ ಬೇರೆ!!) ಹ್ಯಾಕ್ ಆಗಿದೆಯೆಂದು ನನ್ನ ಕೆಲವು ಮಿತ್ರರ ಹೇಳಿಕೆಗಳು. ಕೂಡಲೇ ಆನ್ ಲೈನಲ್ಲಿ ಕಾಣಿಸಿಕೊಂಡ ಒಂದಿಬ್ಬರು ಮಿತ್ರರು ಹ್ಯಾಗಾಯಿತೆಂಬ ಪ್ರಶ್ನೆ. ಒಮ್ಮೆಲೇ ಜೋರು ನಗುಬಂತು. ಸದ್ಯ ೫-೬ ಘಂಟೆ ಮಾತ್ರ ಆಗಿದ್ದದರಿಂದ ಹೆಚ್ಚಿನ ಜನ ನೋಡಿರಲಿಲ್ಲ.
 ಹತ್ತು ನಿಮಿಷದಲ್ಲೇ ಎಲ್ಲಾ ಸರಿಮಾಡಿಕೊಂಡೆ. ನಾನು ಏನೇನು ಮಾಡಿದೆನೆಂದು ಹೇಳುತ್ತೇನೆ. ನಾಳೆ ನಿಮ್ಮ ಪ್ರೋಫೈಲೂ ಹ್ಯಾಕ್ ಆಗಬಹುದು. ನೀವೂ ಹೀಗೇ ಮಾಡಿಕೊಳ್ಳಬಹುದು.
-ಆರ್ಕುಟ್ ನಿಂದ ಸೈನ್ ಔಟ್ ಮಾಡಿ ಗೂಗಲ್ ಅಕೌಂಟ್ಗೆ ಹೋಗಿ ಸೈನ್ ಇನ್ ಮಾಡಿದೆ.
-ಪಾಸ್ ವರ್ಡ್ ಚೇಂಜ್ ಕ್ಲಿಕ್ ಮಾಡಿ ಹೊಸ ಪಾಸ್ ವರ್ಡ್ ಪಡೆದೆ.
-ಈಗ ಮತ್ತೆ ಹೊಸ ಪಾಸ್ ವರ್ಡ್ ನಿಂದ ಆರ್ಕುಟ್ ಲಾಗ್ ಇನ್ ಆಗಿ ಪ್ರೊಫೈಲನ್ನು ಹೊಸದಾಗಿ ಎಡಿಟ್ ಮಾಡಿ ಹಾರ್ಡ್ ಡಿಸ್ಕ್ ನಿಂದ ನನ್ನ ಫೋಟೋ ಅಪ್ ಲೋಡ್ ಮಾಡಿಕೊಂಡೆ. ಸ್ನೇಹಿತರಿಗೆಲ್ಲ ಸುದ್ದಿ ಮುಟ್ಟಿಸಿದ್ದಕ್ಕೆ ಧನ್ಯವಾದ ಹೇಳಿದೆ.
-ಹ್ಯಾಕರ್ ನನ್ನನ್ನು ಸೇರಿಸಿದ ಯಾವ್ಯಾವುದೋ ಕಮ್ಯೂನಿಟಿಯಿಂದ ಹೊರಬಂದೆ.
      ಇಲ್ಲಿ ನಾನು (ನಾವು) ತಪ್ಪದೇ ಧನ್ಯವಾದ ಹೇಳಬೇಕಾಗಿರುವುದು ಆ ಪುಣ್ಯಾತ್ಮ ಹ್ಯಾಕರ್ ನಿಗೆ!!!! ನಿಜಕ್ಕೂ ಪುಣ್ಯಾತ್ಮ. ಆತ ಏನು ಬೇಕಾದರೂ ಮಾಡಬಹುದಿತ್ತು. ಬ್ಲಾಗುಗಳನ್ನ, ಮೇಲ್ಗಳನ್ನ ಹಾಗೂ ಪಿಕಾಸದಲ್ಲಿದ್ದ ಅನೇಕ ನೂರು ಫೋಟೋಗಳನ್ನ ಅಳಿಸಿ ಹಾಕಬಹುದಿತ್ತು. ಆದರೆ ಹಾಗಾಗಿರಲಿಲ್ಲ.

         ನೀವೂ ಹ್ಯಾಕರ್ ದಾಳಿ ಅನುಭವ ಪಡೆಯಬೇಕೇ? ಅಥವಾ ನಿಮ್ಮ ಸ್ನೇಹಿತರಿಗೆ ಆ ಅನುಭವ ಕೊಡಬೇಕೇ?

ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು, ನಿಮ್ಮ ಸಮಝಾಯಿಶಿ ಬೇಕು.

ಶ್ರೀ ಮಂಜುನಾಥಶರ್ಮರು ಅಭಿಮತದಲ್ಲಿ ಬರೆದಿರುವ ಪತ್ರವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಇದನ್ನು ಶರ್ಮರ ಗಮನಕ್ಕೆ ತರಲಾಗುವುದು.
----------------------------------------
ಶ್ರೀ ಮಂಜುನಾಥಶರ್ಮರೇ, 
ನಿಮ್ಮ ಮೇಲ್ ವಿಳಾಸ ಕೊಟ್ಟಿದ್ದರೆ ಚೆನ್ನಿತ್ತು. ಶ್ರೀ ಸುಧಾಕರ ಶರ್ಮರು ತುಂಬಾ ಕೆಲಸಗಳ ಒತ್ತಡದಲ್ಲಿದ್ದಾರೆ.ವೇದಸುಧೆಯನ್ನು ವಾರಕ್ಕೊಮ್ಮೆಯೂ ಇಣುಕಲು ಅವರಿಗೆ ಪುರಸೊತ್ತಿಲ್ಲವಾಗಿದೆ.ಆದರೂ ಶ್ರೀ ಶರ್ಮರಿಗೆ ದೂರವಾಣಿಮೂಲಕ ವಾದರೂ ವಿನಂತಿಸುವೆ.ಸ್ವಲ್ಪ ತಾಳ್ಮೆ ಇರಲಿ. ನಿಮ್ಮ ಸಂದೇಹಗಳು ನಿಮ್ಮೊಬ್ಬರದೇ ಅಲ್ಲ. ಹಲವರ ಅಭಿಪ್ರಾಯಗಳು ನಿಮ್ಮಿಂದ ಧ್ವನಿಸಿವೆ ಅಷ್ಟೆ.ನೂರಾರು ವರ್ಷಗಳಿಂದ ಇದೇ ಸತ್ಯವೆಂದು ನಂಬಿ ಆಚರಿಸಿಕೊಂಡು ಬಂದಿರುವ ಬಹುಪಾಲು ಎಲ್ಲರಿಗೂ  ಇಂತಹ ದ್ವಂದ್ವಗಳಿದ್ದೇ ಇದೆ. ಪರವಾಗಿಲ್ಲ. ಈ ದ್ವಂದ್ವಗಳು ನಮ್ಮ ನೆಮ್ಮದಿ ಹಾಳುಮಾಡದಂತೆ ಎಚ್ಚರವಿರಲಿ, ಅಷ್ಟೆ. ನಿಮಗೆ ಸತ್ಯವೆನಿಸಿದ ವಿಚಾರಗಳನ್ನು ನಂಬಿ ಅದರಂತೆ ನಡೆಯಿರಿ, ಅನುಮಾನವಿದ್ದ ವಿಚಾರಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ನಿಧಾನವಾಗಿ ನಮಗೆ ಸತ್ಯದ ಅರಿವಾಗುವುದರಲ್ಲಿ ಸಂದೇಹವಿಲ್ಲ.ಸಧ್ಯಕ್ಕೆ ಒಂದು ಪುಸ್ತಕದ ಬಗ್ಗೆ ತಿಳಿಸಬಹುದು. ಪಂ|| ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ ಓದಿ ನೋಡಿ.ಪುಸ್ತಕವು ಬೆಂಗಳೂರಿನ ಆರ್ಯ ಸಮಾಜದಲ್ಲಿ ಲಭ್ಯ.
-----------------------------
ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ:
ಶ್ರೀ ಮಂಜುನಾಥಶರ್ಮರು ಯೋಚಿಸಬೇಕಾದ ಒಂದಿಷ್ಟು ವಿಚಾರಗಳನ್ನು ಹೊರಹಾಕಿದ್ದಾರೆ.ನಿಮ್ಮ ಮನದ ವಿಚಾರಗಳನ್ನು
 ನೀವು ಪ್ರತಿಕ್ರಿಯಿಸಿದರೆ  ಶ್ರೀ ಸುಧಾಕರ ಶರ್ಮರಿಂದ ಕಡೆಗಾದರೂ ಸಮಝಾಯಿಶಿ ಪಡೆಯಬಹುದು.
-ಹರಿಹರಪುರಶ್ರೀಧರ್
ಸಂಪಾದಕ
--------------------------------------------------------------------------------
 ಶ್ರೀ ಸುಧಾಕರಶರ್ಮರಿಗೆ ನಮಸ್ಕಾರಗಳು
ಕಳೆದ ಐದಾರು ತಿಂಗಳುಗಳಿಂದ ನಿಮ್ಮ ಧ್ವನಿಯಲ್ಲಿ ಹಲವು ಪ್ರವಚನಗಳನ್ನು ಕೇಳಿದ್ದೇನೆ. ಈ ಅವಕಾಶವನ್ನು ಕಲ್ಪಿಸಿಕೊಟ್ಟ ವೇದಸುಧೆಗೂ ಮತ್ತು ನಿಮಗೂ ಕೃತಜ್ಞತೆಗಳು.
ವೇದ ಮಂತ್ರಗಳ ಬಗ್ಗೆ ನಿಮ್ಮ ಸರಳವಾದ ವಿವರಣೆಯಿಂದ ಜೀವನ ಕ್ರಮವೇ ಒಂದು ಯಜ್ಞವಾಗಿರಬೇಕೆಂಬುದನ್ನು ನಾನು ಒಪ್ಪುತ್ತೇನೆ. ಹಲವು ಪ್ರವಚನಗಳಲ್ಲಿ ವೇದಮಂತ್ರಗಳನ್ನು ಕಲಿಯಲು ಜಾತಿಯಾಗಲೀ ಲಿಂಗವಾಗಲೀ ಆಡ್ದಬರುವುದಿಲ್ಲ ಎಂಬುದನ್ನು ಒತ್ತುಕೊಟ್ಟು ಆಧಾರಸಹಿತವಾಗಿ ಹೇಳಿದ್ದೀರಿ. ಧನ್ಯವಾದಗಳು.
ಒಂದು ಸಂದೇಹ ನನಗೆ ಕಾಡುತ್ತಿದೆ. ನನಗೆ ವೇದಮಂತ್ರಗಳನ್ನು ಸ್ವರಸಹಿತವಾಗಿ ಕಲಿಯಬೇಕೆಂಬ ಆಸೆ ಇದೆ. ಆದರೆ ನನಗೀಗಾಗಲೇ ಅರವತ್ತು ವರ್ಷ ವಯಸ್ಸು. ನಾಲ್ಕು ವೇದವನ್ನು ಸಂಪೂರ್ಣವಾಗಿ ಈ ಜನ್ಮದಲ್ಲಿ ನನಗೆ ಕಲಿಯಲು ಸಾಧ್ಯವಿಲ್ಲವೆಂಬ ಅರಿವಿದೆ. ಆದರೆ ನಾಲ್ಕೂ ವೇದಗಳನ್ನು ಅಧ್ಯಯನಮಾಡಿರುವ ಹಲವರು ನಿಮ್ಮೊಡನಿರಬಹುದು. ನೀವೂ ಕೂಡ ಅಧ್ಯಯನ ಮಾಡಿರಬಹುದು.ನಿಮ್ಮಂತವರು ಆಯ್ದ ವೇದಮಂತ್ರಗಳ ಒಂದು ಚಿಕ್ಕ ಪುಸ್ತಕವನ್ನು ನಮ್ಮಂತವರಿಗೆ ಏಕೆ ಕೊಡಬಾರದು? ಅದರಲ್ಲಿ ನಾಲ್ಕೂ ವೇದಗಳಿಂದ ಆಯ್ದ ಕೆಲವು ವೇದಮಂತ್ರಗಳನ್ನು ಮುದ್ರಿಸಿ ಅದಕ್ಕೆ ಅರ್ಥ ಮತ್ತು ವಿವರಣೆಯನ್ನು ಕೊಡಬಾರದೇಕೆ? ವೇದದ ಹೆಸರಲ್ಲಿ ಸಾವಿರ ಪುಟಗಳ ಗ್ರಂಥಗಳನ್ನು ಪ್ರಕಟಿಸಿದರೆ ಅದನ್ನು ಮನೆಯಲ್ಲಿಟ್ಟು ಪೂಜಿಸಬಹುದು ಅಷ್ಟೆ. ನೀವೇ ಹೇಳುವಂತೆ ಗ್ರಂಥಗಳಿರುವುದು ಅಧ್ಯಯನಕ್ಕೆ ಪೂಜೆ ಮಾಡಲು ಅಲ್ಲ. ಹಾಗಾದರೆ ನಿಮ್ಮಂತವರು ನಮಗೆ ದಾರಿ ತೋರಿಸಬೇಡವೇ? ಮತ್ತೊಂದು ವಿಚಾರ. ಹಲವು ಕಡೆ ನೀವು ನಮ್ಮ ಪೂರ್ವದಿಂದ ಬಂದಿರುವ ಪೂಜಾಪದ್ದತಿಯಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ಉಧಾಹರಣೆಗೆ ಹೇಳಬೇಕೆಂದರೆ "ಆಗಮಾರ್ಥಂತು ದೇವಾನಾಂ" ಮಂತ್ರದ ಬಗ್ಗೆ . ಎಲ್ಲ ಕಡೆ ದೇವರು ಇರುವುದು ಸತ್ಯವಾದರೂ ನಮ್ಮ ಕಾನ್ಸೆಂಟ್ರೇಶನ್ ಗೋಸ್ಕರ ಅವನನ್ನು ಒಂದು ಕಡೆ ಊಹಿಸಿಕೊಂಡರೆ ಆಗುವ ನಷ್ಟವಾದರೂ ಏನು? ನೀವು ಇನ್ನು ನೂರು ವರ್ಷ ವಾದಮಾಡಿದರೂ ನಮ್ಮಲ್ಲಿ ಚಾಲ್ತಿಯಲ್ಲಿರುವ ಪೂಜಾ ಪದ್ದತಿಯನ್ನು ನಮ್ಮಂತವರು ಬಿಡಲು ಸಾಧ್ಯವಿಲ್ಲ. ನಮಗೆ ನಿಮ್ಮ ವಿಚಾರದಲ್ಲಿ ಪ್ರೀತಿ ಇದ್ದರೂ ದೇವಾಲಯ,ದೇವರ ವಿಗ್ರಹ -ಈ ವಿಚಾರದಲ್ಲಿ ನಿಮ್ಮ ಖಂಡನೆಯನ್ನು ನಾನಲ್ಲಾ ನನ್ನಂತಹ ಯಾರೂ ಒಪ್ಪುವುದಿಲ್ಲ. ಒಂದು ವೇಳೆ ಎಲ್ಲಾ ತೊರೆದು ನಿಮ್ಮೊಡನೆ ಇರುತ್ತೇವೆಂದು ಯಾರಾದರೂ ಹೊರಟರೆ ಆ ಸಂಖ್ಯೆ ಪ್ರತಿಶತ ೧ ಕೂಡ ಆಗುವುದಿಲ್ಲ. ಆದ್ದರಿಂದ ವ್ಯರ್ಥವಾಗಿ ನೀವು ನಮ್ಮಂತವರ ಮನಸ್ಸಿಗೆ ಅಹಿತಮಾಡುವುದನ್ನು ಬಿಟ್ಟರೆ ನಿಮ್ಮ ಉಳಿದೆಲ್ಲಾ ವಿಚಾರವನ್ನೂ ಒಪ್ಪುವವರ ಸಂಖ್ಯೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಜಾತಿಯ ಬಗೆಗೆ ನಿಮ್ಮ ವಿವವರಣೆಯಿಂದ ಬಲು ಸಂತೋಷವಾಗಿದೆ. ಹೋಮದಲ್ಲಿ ಅನಗತ್ಯವಾಗಿ ಸುಡುವ ರೇಶ್ಮೆ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಮ್ಮ ವಿಚಾರದಲ್ಲಿ ನನ್ನ ಒಪ್ಪಿಗೆ ಇದೆ. ಹಿಂಸೆಯ ವಿರೋಧಕ್ಕೆ ಸಮ್ಮತಿ ಇದೆ.ಆದರೆ ಸಸ್ಯಾಹಾರಿಗಳಾಗಿದ್ದರೆ ಮಾತ್ರ ಉಪನಯನ ಸಾಧ್ಯವೆಂದು ತಿಳಿಸಿದ್ದೀರಿ. ಇದೂ ಕೂಡ ಪ್ರಾಕ್ಟಿಕಲ್ ಅಲ್ಲ. ಇದರಿಂದ ಪುನ: ನೀವು ಒಂದು ವರ್ಗವನ್ನು ದೂರ ಇಡುವ ಹುನ್ನಾರ ಮಾಡಿದ್ದೀರಿ. ನನ್ನ ಮಾತಿನಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯೂ ಇದೆ. ಅದೇ ವೇಳೆ ನಿಮ್ಮ ಬಗ್ಗೆ ಕನಿಕರವೂ ಇದೆ. ಕನಿಕರ ಏಕೆಂದರೆ ನಾನು ಒಪ್ಪದ ಹಲವು ವಿಚಾರ ತಿಳಿಸಿದ್ದೀನಲ್ಲಾ, ಅವುಗಳಿಂದಲೇ ನಿಮ್ಮ ಏಳ್ಗೆಗೆ ಅಡ್ಡಿಯಾಗುತ್ತವಲ್ಲಾ! ಸ್ವಲ್ಪ ಲಿಬರಲ್ ಆಗಿ ನೀವು ಯೋಚಿಸಬೇಡವೇ? ಎಲ್ಲದಕ್ಕೂ ವೇದವೇ ಅಂತಿಮ ವೆನ್ನುತ್ತೀರಿ. ಇರಲಿ. ಆದರೆ ವಿಶ್ವದ ಶಾಂತಿಗಾಗಿ ನೂರಾರು ಜನ ಮಹನೀಯರು ಅವರದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಸಂಗೀತದ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಶಾಸ್ತ್ರೀಯ ಸಂಗೀತದಿಂದ ಸಿಗುವ ನೆಮ್ಮದಿ ನನಗೆ ಸಾಕು. ನೀವು ಅದನ್ನು ಸಾಮವೇದ ಎನ್ನುತ್ತೀರೇನೋ. ಇರಲಿ. ಆದರೆ ವೇದಕ್ಕೆ ಹೊರತಾದ ಹಲವು ಸಂಗತಿಗಳು ಇಂದಿನ ಜಗತ್ತಿಗೆ ನೆಮ್ಮದಿನೀಡಬಲ್ಲವು. ಮತ್ತೊಮ್ಮೆ ಅಗತ್ಯವೆನಿಸಿದರೆ ವಿವರವಾಗಿ ಬರೆಯುವೆ. ಈಗ ಇಷ್ಟು ಸಾಕು. ನಿಮ್ಮ ಸಮಝಾಯಿಶಿ ಬೇಕು.
- ಮಂಜುನಾಥಶರ್ಮ

Sunday, March 20, 2011

ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ

ಈ ಮಗುವಿನ ಕಂಠದಲ್ಲಿ ಹೊರಹೊಮ್ಮಿರುವ ಈ ಹಾಡು ನಿಮಗೆ ಖಂಡಿತವಾಗಿಯೂ ಸಂತೋಷ ಕೊಡುವುದರಲ್ಲಿ ಸಂಶಯವಿಲ್ಲ.

Thursday, March 17, 2011

ಯೋಚಿಸಲೊ೦ದಿಷ್ಟು..೨೬

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!

೨. ಕೆಟ್ಟದ್ದನ್ನು ಮಾಡುವವನಿಗೆ ಅವಕಾಶ ಕೊರತೆ ಕಾಣಿಸದು!

೩. ದುಷ್ಟನು ಉಪಕಾರ ಮಾತ್ರದಿ೦ದಲೇ ಶಾ೦ತನಾಗಲಾರ!

೪. ಕೆಡುಕನ ಕೈಯಲ್ಲಿ ಯಾವ ಆಯುಧವಿದ್ದರೂ ಕೆಡುಕೇ ಸ೦ಭವಿಸುತ್ತದೆ! ಆಯುಧ ಹರಿತವಿದ್ದಷ್ಟೂ ಅಪಾಯಗಳು ಜಾಸ್ತಿ!

೫. ದುರದೃಷ್ಟ ಎಲ್ಲರನ್ನೂ ತಟ್ಟಿದಾಗಲೇ ಒಗ್ಗಟ್ಟು ಉ೦ಟಾಗುತ್ತದೆ!

೬. ನಿಜವಾಗಿ ಕೊಡುವುದೆ೦ದರೆ ನಮ್ಮಲ್ಲಿಯ ಯಾವುದಾದರೂ ವಸ್ತುವೊ೦ದನ್ನು ಕೊಡುವುದಲ್ಲ. ನಮ್ಮನ್ನು ನಾವೇ ಕೊಟ್ಟು ಕೊಳ್ಳುವುದು!! ( ಖಲೀಲ್ ಗಿಬ್ರಾನ್)

೭. ಅದೃಷ್ಟಹೀನರೊ೦ದಿಗೆ ಸದಾ ಸ೦ಗಾತಿಯಾಗಿರುವುದೆ೦ದರೆ ವಿಪತ್ತು ಮಾತ್ರ!

೮. ನಾವು ಬೆಳಕಿನಲ್ಲಿದ್ದಾಗ ಎಲ್ಲರೂ ನಮ್ಮನ್ನು ಅನುಸರಿಸುವವರೇ. ಆದರೆ ನಾವು ಕತ್ತಲೆಯಲ್ಲಿದ್ದಾಗ ನಮ್ಮ ನೆರಳೂ ನಮ್ಮನ್ನು ಬಿಟ್ಟು ಹೋಗುತ್ತದೆ!!

೯. ಭರವಸೆಯೊ೦ದಿದ್ದರೆ, ಅತ್ಯ೦ತ ಎತ್ತರದ ಪರ್ವತವೂ ನಮ್ಮ ಕಾಲಡಿಯಲ್ಲಿಯೇ! ಎಲ್ಲಾ ಕಾರ್ಯದಲ್ಲಿಯೂ “ಸ೦ಪೂರ್ಣ ಭರವಸೆ“ ಇರಬೇಕು.

೧೦. ಆತ್ಮೀಯರು ಹತ್ತಿರದಲ್ಲಿದ್ದಾಗ ನಾವು ಅನುಭವಿಸುವ ಸ೦ತಸಕ್ಕಿ೦ತ, ಅವರ ಗೈರಿನಲ್ಲಿ ನಾವು ಅನುಭವಿಸುವ ವಿರಹವೇ ಅತ್ಯ೦ತ ನೋವು ನೀಡುವ೦ಥಾದ್ದು!

೧೧. ಯಾವುದೇ ಕಾರ್ಯದಲ್ಲಿನ ನಮ್ಮ “ಅನುಭವ“ ವು ನಮ್ಮನ್ನು “ಸುಧಾರಿತ“ ವ್ಯಕ್ತಿಗಳನ್ನಾಗಿಸಿದರೆ,“ತರಬೇತಿ“ ನಮ್ಮನ್ನು ಉತ್ತೀರ್ಣರನ್ನಾಗಿಸುತ್ತದೆ.ಆದರೆ ನಮ್ಮನ್ನು ತೃಪ್ತಿಗೊಳಿಸುವುದೆ೦ದರೆ ನಾವು ಅದರಲ್ಲಿ ತೊಡಗಿಸಿಕೊಳ್ಳಬಹುದಾದ “ತನ್ಮಯತೆ“!

೧೨. ನಿಜವಾಗಿಯೂ “ತಪ್ಪು“ಗಳು ಸ೦ಭವಿಸಿದಾಗ ಮಾತ್ರವೇ “ಕ್ಷಮೆ“ ಎ೦ಬ ಪದವು ತನ್ನ ಕಾರ್ಯವನ್ನು ಮಾಡುವುದು! ಆದರೆ ಸ೦ಭ೦ಧಗಳ ನಡುವೆ ಬಿರುಕು ಮೂಡಿದಾಗ ತಪ್ಪಿತಸ್ಥರಾಗಲೀ ಯಾ ತಪ್ಪಿನ ಪರಿಣಾಮವನ್ನು ಅನುಭವಿಸಿದವರಿ೦ದಾಗಲೀ ಪರಸ್ಪರ “ಕ್ಷಮೆ“ ಕೋರುವುದರಿ೦ದ ಯಾ ಕ್ಷಮಿಸುವುದರಿ೦ದ ಯಾವುದೇ ಬೆಳವಣಿಗೆಗಳು ಉ೦ಟಾಗಲಾರದು!

೧೩. “ಕಣ್ಣೀರು“ ಮಾಡಿದ ತಪ್ಪಿಗೆ ಪಶ್ಚಾತಾಪದ ಪ್ರತಿರೂಪವಾದರೆ “ಮೌನ“ ವು ಸ೦ಧಾನದ ಲಕ್ಷಣ! ಹಾಗೆಯೇ “ನಗು“ ವೆ೦ಬುದು ಆ ವಿಚಾರವನ್ನು “ಒಪ್ಪಿಕೊಳ್ಳು“ ವುದರ ಸ೦ಕೇತ!

೧೪. “ಭಾವನೆ“ಗಳಿಗೆ ಬೆಲೆ ಇರದ ಪಕ್ಷದಲ್ಲಿ “ಖ೦ಡಿತವಾದಿ“ ಯಾಗುವುದೇ ಉತ್ತಮ!

೧೫. ನಮ್ಮ “ಗೈರು“ ನಮ್ಮ ಆತ್ಮೀಯರ ಜೀವನವನ್ನು ಬದಲಿಸಲಾರದಾದರೆ, ನಮ್ಮ “ಪ್ರಸ್ತುತ“ ತೆಯೂ ಕೂಡ ಏನನ್ನೂ ಸಾಧಿಸಲಾರದು!