Pages

Sunday, July 24, 2011

ಸಾಧನಾ ಪಂಚಕಮ್-ಭಾಗ -11

35. ಪೂರ್ಣಾತ್ಮಾ ಸುಸಮೀಕ್ಷತಾಮ್
ಸರ್ವವ್ಯಾಪಿಯಾಗಿರುವ ಆತ್ಮನನ್ನು ದರ್ಶಿಸು
36. ಜಗದಿದಂ ತದ್ಬಾಧಿತಂ ದೃಶ್ಯತಾಮ್
ಆ ಕ್ಷಣ ಭಂಗುರದ ಜಗತ್ತು ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಮನಗಾಣು

Saturday, July 23, 2011

ಉತ್ತರ ಸಿಕ್ಕಿತು!


      ಅವನ ಪಾಡಿಗೆ ಅವನು ಸುಮ್ಮನೆ ಹೋಗುತ್ತಿದ್ದಾಗ ಎದುರಿಗೆ ಪ್ರಶ್ನೆಯೊಂದು ಅಡ್ಡ ಬಂದಿತು. ಅದನ್ನು ನಿರ್ಲಕ್ಷಿಸಿ ಪಕ್ಕಕ್ಕೆ ಸರಿಸಿ ಹೋಗಲು ಪ್ರಯತ್ನಿಸಿದರೆ ಅದೂ ಪಕ್ಕಕ್ಕೆ ಬಂದು ಉತ್ತರ ಹೇಳಲು ಆಗ್ರಹಿಸಿತು. ಅದನ್ನು ದೂಡಿದಷ್ಟೂ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತಿತ್ತು. ಉತ್ತರ ಹೇಳದೆ ಬಿಡುಗಡೆಯಿಲ್ಲವೆಂದು ಅವನಿಗೆ ಮನದಟ್ಟಾಯಿತು. ಅವನಿಗೆ ಉತ್ತರ ಗೊತ್ತಿರಲಿಲ್ಲ. ಅವನು ಉತ್ತರ ಹುಡುಕಲು ಪ್ರಾರಂಭಿಸಿದ. ಪ್ರಶ್ನೆಯೂ ಅವನನ್ನು ನೆರಳಿನಂತೆ ಹಿಂಬಾಲಿಸುತ್ತಲೇ ಇತ್ತು. ಉತ್ತರ ಕಂಡು ಹಿಡಿಯಲು ಅವನು ಹಲವಾರು ವರ್ಷಗಳ ಕಾಲ ಊರೂರು ಅಲೆದ, ಕಾಡು-ಮೇಡುಗಳನ್ನು ಸುತ್ತಿದ. ಎಲ್ಲರನ್ನೂ ವಿಚಾರಿಸಿದ. ಉತ್ತರ ಸಿಗುತ್ತಿರಲಿಲ್ಲ. ಚರ್ಚು, ಮಸೀದಿ, ಮಠ, ಮಂದಿರಗಳಿಗೆ ಭೇಟಿ ಕೊಟ್ಟ. ಉಹುಂ, ಉತ್ತರ ಸಿಗಲಿಲ್ಲ. ಮೌಲ್ವಿ, ಮುಲ್ಲಾ, ಪಾದ್ರಿ, ಅರ್ಚಕರು, ವಿದ್ವಾಂಸರುಗಳು, ಗುರುಗಳು, ಸಾಧು, ಸಂತರನ್ನು ಕಂಡು ಪ್ರಾರ್ಥಿಸಿದ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು. ಕೆಲವರು ತಾವು ಹೇಳಿದ ದಾರಿಯಲ್ಲಿ ಹೋದರೆ ಮಾತ್ರ ಉತ್ತರ ಸಿಗುತ್ತದೆ, ಇಲ್ಲದಿದ್ದರೆ ಸಿಗಲು ಸಾಧ್ಯವೇ ಇಲ್ಲ ಎಂದರು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದರು. ಅವರು ಹೇಳುವುದನ್ನು ಕೇಳುತ್ತಿದ್ದರೆ ಅದು ಸರಿಯಿರಬಹುದು ಎನ್ನಿಸುತ್ತಿತ್ತು. ಇನ್ನೊಬ್ಬರು ಹೇಳುವುದನ್ನು ಕೇಳಿದಾಗ ಇದೂ ಸರಿಯಿರಬಹುದು ಎನ್ನಿಸುತ್ತಿತ್ತು, ಆದರೆ ಸ್ಪಷ್ಟ ಉತ್ತರ ಸಿಗದೆ ಗೊಂದಲವಾಗಿಬಿಡುತ್ತಿತ್ತು. ಪ್ರಶ್ನೆ ಅವನನ್ನು ನೋಡಿ ಗಹಗಹಿಸಿ ನಗುತ್ತಿತ್ತು. ಕೊನೆಗೆ ಸುಸ್ತಾಗಿ ಒಂದೆಡೆ ಕುಳಿತು ಕಣ್ಣು ಮುಚ್ಚಿ ಯಾವ ಉತ್ತರ ಸರಿ ಎಂದು ಆಲೋಚಿಸತೊಡಗಿದ. ಪ್ರಶ್ನೆಯೂ ಆದಿಶೇಷನಂತೆ ಅವನ ಬೆನ್ನ ಹಿಂದೆಯೇ ಕುಳಿತಿತ್ತು. ಸಿಕ್ಕ ಎಲ್ಲಾ ಉತ್ತರಗಳನ್ನು ಮನಸ್ಸಿನಲ್ಲೇ ವಿಮರ್ಶಿಸತೊಡಗಿದ, ಅಳೆದು ತೂಗಿ ನೋಡತೊಡಗಿದ. ಹೀಗೆ ಆಲೋಚಿಸುತ್ತಾ, ಆಲೋಚಿಸುತ್ತಾ ಅವನು ಒಳಗೆ, ಒಳಗೆ, ತನ್ನ ಒಳಗೆ, ತನ್ನ ಅಂತರಂಗದ ಒಳಗೇ ಸಾಗತೊಡಗಿದ. ಹಾಗೆಯೇ ಸಾಗುತ್ತಿದ್ದಾಗ ಅವನಿಗೆ ಕ್ಷೀಣ ಬೆಳಕೊಂದು ಕಂಡಿತು. ಅದನ್ನು ಅನುಸರಿಸಿ ಮುಂದೆ ಮುಂದೆ ಹೋಗತೊಡಗಿದ. ಕ್ರಮೇಣ ಬೆಳಕು ದೊಡ್ಡದಾಗುತ್ತಾ ಹೋಯಿತು. ಕೊನೆಗೊಮ್ಮೆ ಉಜ್ವಲ ಪ್ರಕಾಶ ಕಂಡಿತು. ಅವನಿಗೆ ತಾನು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಅದುವರೆಗೆ ಉತ್ತರ ಇದ್ದ ಸ್ಥಳ ಬಿಟ್ಟು ಆತ ಬೇರೆಲ್ಲಾ ಕಡೆ ಹುಡುಕಿದ್ದ. ಉತ್ತರ ಸಿಕ್ಕಿದ ಸಂತೋಷದಿಂದ ಪ್ರಶ್ನೆಗೆ ಉತ್ತರ ಹೇಳಲು ಹೊರಪ್ರಪಂಚಕ್ಕೆ ಬಂದರೆ, ಅಲ್ಲಿ ಪ್ರಶ್ನೆಯೇ ಕಾಣುತ್ತಿರಲಿಲ್ಲ. ಅದು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಉತ್ತರದೊಳಗೆ ಐಕ್ಯವಾಗಿಬಿಟ್ಟಿತ್ತು!
(ಚಿತ್ರಕೃಪೆ: ಅಂತರ್ಜಾಲ).
*****************
-ಕ.ವೆಂ.ನಾಗರಾಜ್.

Friday, July 22, 2011

ಧಾವಂತದ ಬದುಕಿನಲ್ಲಿ ಬಡವಾದ ಸಮಾಜ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ:

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಇದು ನಮ್ಮ ಪೂರ್ವಜರು ನಮಗೆ ನೀಡಿರುವ ನಿತ್ಯ ಸಂಕಲ್ಪ.ಇದರ ಅರ್ಥವನ್ನು ಸ್ವಲ್ಪ ನೋಡೋಣ. "ಎಲ್ಲರೂ ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಸಿಗಲಿ.ಯಾರೂ ದು:ಖ ಪಡುವುದು ಬೇಡ"

ಎಲ್ಲರೂ ಅಂದರೆ ಯಾರು? ನಮ್ಮ ಮನೆಯ ಎಲ್ಲಾ ಜನರೇ? ನಮ್ಮ ಜಾತಿಯ ಎಲ್ಲಾ ಜನರೇ? ನಮ್ಮ ಊರಿನ ಎಲ್ಲಾ ಜನರೇ? ನಮ್ಮ ಧರ್ಮದ ಎಲ್ಲಾ ಜನರೇ? ಅಥವಾ ಎಲ್ಲಾ ಮನುಕುಲವೇ?.....ನಮ್ಮ ಪೂರ್ವಜರ ಕಲ್ಪನೆ ಕೇವಲ ಮನುಷ್ಯ ರಿಗೂ ಸೀಮಿತಗೊಳ್ಳಲಿಲ್ಲ. ಭೂಮಂಡಲದಲ್ಲಿರುವ ಎಲ್ಲಾ ಜೀವ ಜಂತುಗಳು, ಗಿಡಮರ ಬಳ್ಳಿಗಳೂ ಕೂಡ ಸುಖವಾಗಿರಬೇಕೆಂಬ ಮಹತ್ತರ ಸಂಕಲ್ಪ. ಅಂದರೆ ಅಷ್ಟರ ಮಟ್ಟಿಗೆ ಉದಾರ ನೀತಿ. ಕೇವಲ ಮನುಷ್ಯ ಮಾತ್ರರೇ ಅಲ್ಲದೆ ಸಮಸ್ತ ಜೀವ ಜಂತುಗಳೂ ಸುಖವಾಗಿರಲೆನ್ನುವ ನಮ್ಮ ಪೂರ್ವಜರು ನಮಗೆ ಎಂತಹಾ ಉದಾರವಾದ ಬದುಕುವ ಶೈಲಿ ಕಲಿಸಿಕೊಟ್ಟಿದ್ದಾರಲ್ಲವೇ?

ಅದ್ವೇಷ್ಟಾ ಸರ್ವ ಭೂತಾನಾಮ್ ಮೈತ್ರ: ಕರುಣ ಏವ ಚ....ಎಂದು ಗೀತೆಯು ಸಾರುತ್ತದೆ. ಅಂದರೆ ಏನು? ಯಾರಮೇಲೂ ದ್ವೇಷ ಬೇಡ, ಎಲ್ಲರಲ್ಲೂ ಮೈತ್ರಿ, ಕರುಣೆ ಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳೋಣ.....

ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:......

ಶತ್ರು ಮಿತ್ರರನ್ನು ಹಾಗೂ ಮಾನ ಅಪಮಾನಗಳನ್ನು ಸಮಭಾವದಿಂದ ಕಾಣೋಣ.

.........ಇಂತಹ ಸಾಕಷ್ಟು ಪ್ರೇರಣಾ ದಾಯಕ ವಿಚಾರಗಳನ್ನು ವೇದ ಉಪನಿಷತ್ತುಗಳಲ್ಲಿ, ಭಗವದ್ಗೀತೆಯಲ್ಲಿ ನಾವು ಕಾಣ ಬಹುದಾಗಿದೆ......

ಇವೆಲ್ಲಾ ನಮ್ಮ ಧಾರ್ಮಿಕ ಜೀವನಕ್ಕೆ ಪ್ರೇರಣಾದಾಯಕ ಅಂಶಗಳು. ಪರ ಮತವನ್ನು ದ್ವೇಶಿಸು, ಹಿಂದು ವಿಚಾರವನ್ನು ಒಪ್ಪದ ಅಥವಾ ನಮ್ಮ ಧಾರ್ಮಿಕ ಗ್ರಂಥಗಳನ್ನು ಒಪ್ಪದವರು ನರಕಕ್ಕೆ ಹೋಗಬೇಕಾಗುತ್ತದೆಂದು ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಹೇಳಿಲ್ಲ. ಅಥವಾ ಹಿಂದು ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಮಾತ್ರ ನಿಮಗೆ ಸ್ವರ್ಗ ಸಿಗುತ್ತದೆಂದೂ ಕೂಡ ಎಲ್ಲೂ ಹೇಳಿಲ್ಲ.ಇಷ್ಟು ಭವ್ಯವಾದ ನಮ್ಮ ನೆಲದ ವಿಚಾರಗಳನ್ನು ನಾವು ಪ್ರಚಾರ ಮಾಡಲೇ ಇಲ್ಲವಲ್ಲ! ಇರಲಿ... ನಮ್ಮ ಮಕ್ಕಳಿಗೂ ಕಲಿಸಲಿಲ್ಲವಲ್ಲಾ!

ಈಗಿನ ನಮ್ಮ ಸಾಮಾಜಿಕ ಪರಿಸ್ಥಿತಿಯನ್ನು ನೋಡಿ.ವೃದ್ಧಾಶ್ರಮ ಸೇರುತ್ತಿರುವ ಅಪ್ಪ-ಅಮ್ಮ. ಹೆತ್ತ ಅಪ್ಪ-ಅಮ್ಮನ ಪ್ರೀತಿ ಕಾಣದೆ ಆಯಾಗಳ ಪೋಷಣೆಯಲ್ಲಿ ಯಾಂತ್ರಿಕವಾಗಿ ಬೆಳೆಯುವ ಮಕ್ಕಳು. ಇಂತಹ ಮಕ್ಕಳು ಬೆಳೆದು ದೊಡ್ದವರಾದಂತೆ ಅವರ ಕಣ್ಮುಂದಿನ ಆದರ್ಶವಾದರೂ ಏನು? ಕೈತುಂಬಾ ಸಂಬಳ ಸಿಗುವ ನೌಕರಿ.ಐಶಾರಾಮ ಜೀವನ. ಪ್ರೀತಿ ಪ್ರೇಮ, ಕಾಮದ ದೃಶ್ಯಗಳೇ ತುಂಬಿತುಳುಕುವ ದೂರದರ್ಶನ ದಾರಾವಾಹಿಗಳು! ಅಥವಾ ಕ್ರಿಕೆಟ್ ಆಟಗಳು!! ಕ್ರೈಮ್ ಡೈರಿಯೇ ಮೊದಲಾದ ಅಪರಾಧವನ್ನೇ ವೈಭವೀ ಕರಿಸುವ ದೃಶ್ಯಗಳು. ಇಷ್ಟಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಬಿಡುವೆಲ್ಲಿಂದ ಬರಬೇಕು? ಮನಸ್ಸಿಗೆ ಮುದವನ್ನು ನೀಡಬಹುದಾದ ಪ್ರವಚನಗಳು, ಸಂಗೀತ-ನೃತ್ಯಗಳು, ಕಥೆ ಕಾದಂಬರಿಯನ್ನು ಓದುವ ಹವ್ಯಾಸಗಳು.... ಇವಕ್ಕೆಲ್ಲಾ ಸಮಯ ಎಲ್ಲಿಂದ ಬರಬೇಕು? ಹೀಗೆ ಸಮಾಜವು ದಿಕ್ಕುತಪ್ಪಿ ಧಾವಿಸುತ್ತಿರುವಾಗ ಸಹಜವಾಗಿ ಅಪರಾಧಗಳು, ಹೊಡೆದಾಟ ಬಡಿದಾಟಗಳು, ಕೋಮು ಗಲಭೆಗಳು, ಅಗ್ನಿ ಸ್ಪರ್ಷಗಳು, ಎಲ್ಲವೂ ಕಿಚ್ಚಿನಂತೆ ಹರಡಿ ಬಿಡುತ್ತವೆ. ಇದೆಲ್ಲಾ ಅತಿರೇಕವಾದಾಗ ಅದನ್ನು ನಿರ್ಬಂಧುಸಲು ಸರ್ಕಾರವು ಹೆಣಗುವ ಪರಿಸ್ಥಿತಿ!!

ಹೀಗೆ ಸಾಮಾಜಿಕವಾಗಿ ನೆಮ್ಮದಿ ಹಾಳಾಗುವುದನ್ನು ನಾವು ನೋಡುತ್ತಿರುವಂತೆಯೇ ವೈಯಕ್ತಿಕವಾಗಿಯೂ ಶಾಂತಿ ಇಲ್ಲದ ಜೀವನವನ್ನು ನೋಡುತ್ತಿದ್ದೇವೆ. ಮಾನಸಿಕವಾಗಿ ಶಾರೀರಿಕವಾಗಿಯೂ ಕೂಡ ಸ್ವಾಸ್ಥ್ಯವನ್ನು ಹಾಳುಮಾಡಿಕೊಂಡಿರುವ ಹಲವಾರು ಉಧಾಹರಣೆಗಳನ್ನು ಇಂದಿನ ಪೀಳಿಗೆಯಲ್ಲಿ ಕಾಣಬಹುದಾಗಿದೆ. ಈ ಪರಿಸ್ಥಿತಿಗೆ ಕಾರಣ ನಮಗೆ ಅರಿವಾಗಿದೆಯೇ?

ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಾವು ನಮ್ಮ ಮಣ್ಣಿನ ಸಂಸ್ಕೃತಿ ಪರಂಪರೆಯನ್ನು ಮರೆತದ್ದೇ ಇಂದಿನ ವಿಶಮ ಸ್ಥಿತಿಗೆ ಕಾರಣ ಎನಿಸುವುದಿಲ್ಲವೇ? ನಾವು ನಿಜವಾಗಿ ಒಬ್ಬ ಮುಗ್ಧ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಚಿಂತನೆ ಮಾಡಿದಾಗ ನಮ್ಮ ಮಕ್ಕಳ ಭವಿಷ್ಯವು ಮುಸುಕಾಗಿ ನಮಗೆ ಕಾಣುವುದಿಲ್ಲವೇ? ನೆಲದ ಉದಾರವಾದ ಸಂಸ್ಕೃತಿ ಪರಂಪರೆಯನ್ನು ಬದಿಗಿಟ್ಟು ಈಗಾಗಲೇ ಕೆಟ್ಟಿರುವುದು ಸಾಲದೇ? ಭಗವದ್ಗೀತೆಯ ಸಾರವನ್ನು ತಿಳಿಯದೆ ಅದನ್ನು ವಿರೋಧಿಸುವವರಿಗೆ ಏನೆನ್ನೋಣ? ಇಡೀ ಮನುಕುಲದ ಒಳಿತಿಗಾಗಿ ನಮ್ಮ ಋಷಿಮುನಿಗಳ ತಪ್ಪಸ್ಸಿನ ಫಲವಾಗಿ ಮೂಡಿಬಂದ ಹಿಂದು ಧರ್ಮವನ್ನು ಅನುಸರಿಸುವ ಹಿಂದು ಮತೀಯರಲ್ಲಿಯೇ ಕೆಲವರನ್ನು ಅಲ್ಲಿಂದ ಬೇರ್ಪಡಿಸಿ ಅನ್ಯಮತೀಯ ಗುಂಪುಗಳೊಡನೆ ಸೇರಿಸುವ ಪ್ರಯತ್ನಕ್ಕೆ ಏನೆನ್ನೋಣ?

ಸಾಧನಾ ಪಂಚಕಮ್-ಭಾಗ -10

33 ಏಕಾಂತೇ ಸುಖಮಾಸ್ಯತಾಮ್
-ಏಕಾಂತದ ಬದುಕನ್ನು ಆಶ್ರಯಿಸು
34. ಪರತರೇ ಚೇತ: ಸಮಾಧೀಯತಾಮ್
-ಚಿತ್ತವನ್ನು ಪರಮಾತ್ಮನಲ್ಲಿ ಲೀನಗೊಳಿಸು



Thursday, July 21, 2011

ಸಾಧನಾಪಂಚಕಮ್-ಭಾಗ -9




ಸಾಧನಾ ಪಂಚಕಂ -ಮೆಟ್ಟಲು- 29+30+31+32

29. ಶೀತೋತೋಷ್ಣಾದಿ ವಿಷಹ್ಯತಾಮ್
ಶೀತ-ಉಷ್ಣ ಇತ್ಯಾದಿಗಳನ್ನು ಸಹಿಸಿಕೊ
30. ನತು ವೃಥಾ ವಾಕ್ಯಂ ಸಮುಚ್ಚಾರ್ಯತಾಮ್
ಹಾಗೆಯೇ ಅನುಚಿತ/ಅನುಪಯುಕ್ತಮಾತುಗಳನ್ನು ಆಡದಿರು
31. ಔದಾಸೀನ್ಯಮಭೀಪ್ಸ್ಯತಾಮ್
ಉದಾಸೀನತೆಯ ನಿಸ್ಪೃಹ ದೃಷ್ಟಿಯನ್ನು ಹೊಂದು
32. ಜನಕೃಪಾನೈಷ್ಠುರ್ಯಮುತ್ಸೃಜಾಮ್
ದಯೆ ಅಥವಾ ಬಿರುನುಡಿಗೆ ಗಮನ ಕೊಡದಿರು

Tuesday, July 19, 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು - ೩:

ಇಂದ್ರ ಕ್ರತುಂ ನ ಆ ಭರ ಪಿತಾ ಪುತ್ರೇಭ್ಯೋ ಯಥಾ |
ಶಿಕ್ಷಾ ಣೋ ಅಸ್ಮಿನ್ ಪುರುಹೂತ ಯಾಮನಿ ಜೀವಾ ಜ್ಯೋತಿರಶೀಮಹಿ ||
(ಋಕ್. ೭.೩೨.೨೬.)

[ಇಂದ್ರ] ಓ ಶಕ್ತಿಮಾನ್ ಪ್ರಭೋ! [ಯಥಾ ಪಿತಾ ಪುತ್ರೇಭ್ಯಃ] ಯಾವ ರೀತಿ ತಂದೆಯು ತನ್ನ ಮಕ್ಕಳಿಗೆ ತುಂಬಿಕೊಡುತ್ತಾನೋ ಅದೇ ರೀತಿ, [ ನಃ ಕ್ರತುಂ ಆಭರ] ನಮಗೆ ಉತ್ತಮ ಆಲೋಚನೆಗಳನ್ನು ತುಂಬಿಕೊಡು. [ಜೀವಾಃ] ಜೀವರಾದ ನಾವು, [ಜ್ಯೋತಿಃ ಆಶೀಮಹಿ] ಜ್ಯೋತಿಯನ್ನು ಸೇವಿಸೋಣ.
ಈ ಜ್ಯೋತಿ, ಜೀವನಪಥವನ್ನು ಬೆಳಗುವ ನಿರ್ಮಲಜ್ಞಾನ ಎಂಬುದನ್ನು ನೆನಪಿಟ್ಟರೆ, ವೈದಿಕ ಧರ್ಮದ ಸೌಂದರ್ಯ ವ್ಯಕ್ತವಾಗುತ್ತದೆ. ಈ ಜಾನ, ಪ್ರಾಕೃತಿಕ ಜಗತ್ತಿನಿಂದಾರಂಭಿಸಿ, ಪರಮಾತ್ಮನವರೆಗಿನ ಸಮಸ್ತ ತತ್ತ್ವಗಳನ್ನೂ ಯಥಾವತ್ತಾಗಿ ಅರಿಯುವುದೇ ಆಗಿದೆ. ಈ ಬಗೆಯ ಅರಿವಿಲ್ಲದೆ, ಮಾನವಜೀವನದ ವಿಕಾಸವಾಗುವುದು ಹಾಗೂ ಅವನು ತನ್ನ ಗುರಿಯನ್ನು ಮುಟ್ಟುವುದು ಅಸಂಭವ. ಅದಕ್ಕಾಗಿಯೇ ವೈದಿಕ ಧರ್ಮೀಯರು ಪ್ರತಿದಿನವೂ ಮಾಡುವ ಸಂಧ್ಯಾವಂದನೆಯಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ:-


ಉದ್ವಯಂ ತಮಸಸ್ಪರಿ ಸ್ವಃ ಪಶ್ಯಂತ ಉತ್ತರಮ್ |
ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಮ್ ||
(ಯಜು. ೩೫.೧೪.)

[ವಯಮ್] ನಾವು, [ತಮಸಃ ಪರಿ] ಅಂಧಕಾರದಿಂದ ಮೇಲೆದ್ದು, [ಉತ್] ಜಗದುತ್ಪತ್ತಿಗೆ ಉಪಾದಾನವಾದ ಪ್ರಕೃತಿಯನ್ನೂ, [ಉತ್ತರಂ ಸ್ವಃ] ಅದಕಿಂತ ಶ್ರೇಷ್ಠನಾದ, ಸುಖರೂಪನಾದ ಜೀವಾತ್ಮನನ್ನೂ, [ಪಶ್ಶಂತಃ] ನೋಡುತ್ತಾ, [ದೇವತ್ರ] ವಿದ್ವನ್ಮಂಡಲದಲ್ಲಿ [ಉತ್ತಮಂ ಜ್ಯೋತಿಃ] ಸರ್ವಶ್ರೇಷ್ಠನಾದ ಜ್ಞಾನಸ್ವರೂಪನೂ, [ದೇವಂ ಸೂರ್ಯಮ್] ಪ್ರಕಾಶಮಯನೂ, ಸರ್ವಧಾತೃವೂ ಆದ ವಿಶ್ವಸಂಚಾಲಕ ಪ್ರಭುವನ್ನು, [ಅಗನ್ಮ] ಸಾಕ್ಷಾತ್ಕಾರ ಮಾಡಿಕೊಳ್ಳೋಣ.
ಪ್ರಕೃತಿಯ ಜ್ಞಾನದಿಂದ ಇಹಲೋಕದ ಸುಧಾರಣೆ; ಸ್ವಂತ ಆತ್ಮನ ಜ್ಞಾನದಿಂದ ತನ್ನ ವ್ಯಕ್ತಿಗತ ಸುಧಾರಣೆ ಹಾಗೂ ಪರಮಾತ್ಮ ಜ್ಞಾನದಿಂದ ಮೋಕ್ಷಸಾಧನೆ - ಹೀಗೆ ಮಾನವಜೀವನದ ಸಾಫಲ್ಯ ಸಿದ್ಧಿಸುತ್ತದೆ. ವೇದೋಕ್ತವಾದ ಈ ಜ್ಞಾನ ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸಂಬಂಧಿಸಿದುದಲ್ಲ; ಕೇವಲ ದಾರ್ಶನಿಕ ಉಗ್ಗಡಣೆಯಲ್ಲ; ಈ ಪ್ರಪಂಚದಲ್ಲಿ ಸಾಂಸಾರಿಕ ಜೀವನವನ್ನು ಉತ್ತಮ ಮಟ್ಟಕ್ಕೇರಿಸಲು ಸುಖೋತ್ಕರ್ಷದ ಪ್ರಾಪ್ತಿಗಾಗಿ ವೈಜ್ಞಾನಿಕ ಆವಿಷ್ಕಾರಗಳನ್ನೂ, ಇತರ ಸಾಮಾಜಿಕ - ಆರ್ಥಿಕ - ರಾಜಕೀಯ - ಪಾರಿವಾರಿಕ ಹಾಗೂ ವೈಜ್ಞಾನಿಕ ಜೀವನಗಳನ್ನು ಉನ್ನತಗೊಳಿಸುವ ಸಾಧನವಾದ ಲೌಕಿಕ ಜ್ಞಾನವನ್ನೂ ಒಳಗೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ಪ್ರಾಪಂಚಿಕ ಅಥವಾ ಭೌತಿಕವಿದ್ಯೆಗೆ ತಿಲಾಂಜಲಿಯಿತ್ತು, ಕೇವಲ ಆಧ್ಯಾತ್ಮಿಕ ವಿದ್ಯೆಯನ್ನೇ ಸಾಧಿಸಲು ಹೊರಟವರು, ಆಧ್ಯಾತ್ಮಿಕ ವಿದ್ಯೆಗೆ ತಿಲಾಂಜಲಿಯಿತ್ತು ಕೇವಲ ಭೌತಿಕ ವಿದ್ಯೆಗೆ ಗಮನ ಕೊಡುವವರಿಗಿಂತ ಹೆಚ್ಚು ಗಾಢವಾದ ಅಂಧಕಾರದಲ್ಲಿ ಬೀಳುವರು ಎಂದು ಯಜುರ್ವೇದ ಹೇಳುತ್ತದೆ. ಕೊನೆಗೆ,


ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ ||
(ಯಜು. ೪೦.೧೧.)


ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ ||
(ಯಜು.೪೦.೧೪.)

[ಸಂಭೂತಿಮ್] ಉತ್ಕೃಷ್ಟವಾದ ತತ್ತ್ವವಾದ ಪರಮಾತ್ಮನನ್ನೂ, [ಚ] ಮತ್ತು, [ವಿನಾಶಂಚ] ನಾಶವಾನ್ ಜಗತ್ತನ್ನೂ, [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ವಿನಾಶೇನ] ನಾಶವಾನ್ ಜಗತ್ತಿನ ಜ್ಞಾನದಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ಸಂಭೂತ್ಮಾ] ಉತ್ಕೃಷ್ಟನಾದ ಪರಮಾತ್ಮನ ಜ್ಞಾನದಿಂದ, [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
[ವಿದ್ಯಾಂ ಚ] ಆಧ್ಯಾತ್ಮಿಕ ವಿದ್ಯೆಯನ್ನೂ [ಅವಿದ್ಯಾಂ ಚ] ಭೌತಿಕ ವಿದ್ಯೆಯನ್ನೂ. [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ಅವಿದ್ಯಯಾ] ಭೌತಿಕ ವಿದ್ಯೆಯಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ವಿದ್ಯಯಾ] ವಿದ್ಯೆಯಿಂದ [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.
ಈ ಮಂತ್ರಗಳ ಮೇಲೆ ಟೀಕೆ ಅನಾವಶ್ಯಕ. ವೈದಿಕ ಧರ್ಮ ಜ್ಞಾನಾಶ್ರಿತ ಧರ್ಮ. ಇದರಲ್ಲಿ ಅಜ್ಞಾನಕ್ಕೆಡೆಯಿಲ್ಲ. ಈ ಜ್ಞಾನ ಸರ್ವವಿಷಯಾಚ್ಛಾದಕ, ಶಾಶ್ವತ ತತ್ತ್ವಗಳ ಹಾಗೂ ಅಶಾಶ್ವತ ತತ್ತ್ವಗಳ ನಿರ್ಭ್ರಾಂತ ಜ್ಞಾನ ಪಡೆದೇ ಮಾನವನು ಆದರ್ಶಮಾನವನಾಗಿ, ಇಹಪರಗಳೆರಡರಲ್ಲೂ ಸಾಧಿಸಿಕೊಳ್ಳುವನು. ಅಂಧವಿಶ್ವಾಸಕ್ಕೆ, ಅಜ್ಞಾನದ ಆಡಳಿತಕ್ಕೆ ವೈದಿಕ ಧರ್ಮದಲ್ಲಿ ಸೂಜಿಯ ಮೊನೆಯಷ್ಟೂ ಜಾಗವಿಲ್ಲ.
************************