Pages

Wednesday, January 12, 2011

" ಅದಕ್ಕಿನ್ನೂ ಕಾಲವಿದೆ" :

"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು  ಕೇಳಿದಾಗ [ಕ್ಷಮೆ ಇರಲಿ, ಇದು ವೇದಸುಧೆಬಳಗದ ಬ್ಲಾಗ್] ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ.
* ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "ವೇದಸುಧೆ ಯನ್ನು ನೋಡು." ಅದರ ಬಗೆಗೆ ಪೂರ್ಣ ವಿಚಾರ ತಿಳಿಯಲು ವ್ಯವಧಾನವಿಲ್ಲದ ಅವನು ಹೇಳಿದ " ಅದಕ್ಕಿನ್ನೂ ಕಾಲವಿದೆ" " ನಾನೂ ನಿನ್ನ ವಯಸ್ಸಿಗೆ ಬಂದಾಗ ಅದೆಲ್ಲಾ  ಶುರುಮಾಡುವೆ
* ವೇದಸುಧೆ ಹೆಸರು ಕೇಳಿದೊಡನೆ ಪುರೋಹಿತರೊಬ್ಬರು " ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
* ಸಾಮಾನ್ಯ ಗೃಹಸ್ತರೊಬ್ಬರು ಯಾವುದೋ ಪೂಜಾ ವಿಧಾನದ ಬಗ್ಗೆ ತಮ್ಮ ಸಂಶಯ ಕೇಳಿದರು
* ಆಸ್ತಿಕರೊಬ್ಬರು ಯಜ್ಞ ಯಾಗಾದಿಗಳ ಫೋಟೋಗಳನ್ನು ಕಳುಹಿಸಿಕೊಟ್ಟರು
* ನಮ್ಮ ಮಕ್ಕಳಿಗೆ ಪುರಾಣಪುಣ್ಯಕಥೆಗಳ ಬಗ್ಗೆ ತಿಳಿಸಬೇಕೆಂದವರು ಕೆಲವರು
* ನಮ್ಮ ಯುವ ಪೀಳಿಗೆಗೆ ಹಬ್ಬ ಹರಿದಿನಗಳ ಬಗೆಗೆ  ವೇದಸುಧೆಯಲ್ಲಿ ಪರಿಚಯ ಮಾಡಿಸಬೇಕೆಂದವರು ಕೆಲವರು
* ನೋಡಿ ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ- ಅದನ್ನು ಉಳಿಸುವ ಕೆಲಸವಾಗಬೇಕೆಂದವರು ಒಬ್ಬ ಹಿರಿಯರು
         ವೇದವೆಂಬ ಎರಡಕ್ಷರವನ್ನು ಕೇಳಿದಾಗ ಹಲವರಿಂದ ಬಂದ ಹಲವು ಅಭಿಪ್ರಾಯಗಳಿವು. ಇವು ಅನೇಕರ ಅಭಿಪ್ರಾಯಗಳಿರಬಹುದು.ಒಂದೊಂದನ್ನೇ ವಿಮರ್ಶಿಸುತ್ತಾ ವಿಚಾರ ಮಾಡೋಣ.
" ಅದಕ್ಕಿನ್ನೂ ಕಾಲವಿದೆ" :
    ಒಂದು ಅತ್ಯಂತ ಬಡತನದ ಮನೆಯಲ್ಲಿ ಹುಟ್ಟಿದ್ದರಿಂದ ನನಗೆ  ಜೀವನಾನುಭವ ಸಾಕಷ್ಟು ಆಗಿದೆಯಾದ್ದರಿಂದ "   ನಿಜ ಮನುಷ್ಯನನ್ನು ಮಾಡುವ ನಿಜವಾದ ವೇದಾಧ್ಯಯನವು  ನನ್ನ ಬಾಲ್ಯದಿಂದಲೇ ಆಗಿದೆ ಎಂಬ ಸಮಾಧಾನ ನನಗಿದೆ" ನನ್ನ ಜೀವನದ ಪಾಠವು  ವೇದದಲ್ಲಿದೆ ಎಂಬುದು ಈಗೀಗ ಅರ್ಥವಾಗುತ್ತಿದೆ.ಆದ್ದರಿಂದ  ತುತ್ತು ಅನ್ನಕ್ಕೆ ಪರಿತಪಿಸುವ ಮನೆಯಲ್ಲಿ ನನ್ನ ಜನ್ಮಕ್ಕೆ ಕಾರಣನಾದ ಆ ಭಗವಂತ ಮತ್ತು ನನಗೆ ಬಡತನದ ಬದುಕು ಹೇಗಿರುತ್ತದೆಂದು ಅನುಭವ ನೀಡಿದ ನನ್ನ ಮಾತಪಿತೃಗಳೇ ನನಗೆ ನಿಜವಾದ ವೇದಾಧ್ಯಯನ ಮಾಡಿಸಿದ ಆಚಾರ್ಯರೆಂದು ತಿಳಿದು ಅವರನ್ನು ಸದಾಸ್ಮರಿಸುತ್ತೇನೆ.ಆದರೆ ನನ್ನ ಮಗ ಒಬ್ಬ ಸ್ಥಿತಿವಂತನ ಮನೆಯಲ್ಲಿ ಹುಟ್ಟಿದ[ಆಹೊತ್ತಿಗೆ ನನ್ನ ಬಡತನದ ಬೇಗೆ ಮಾಯವಾಗಿತ್ತು] ಅವನಿಗೆ ನನ್ನಂತೆ ಜೀವನಾನುಭವವೂ ಆಗಲಿಲ್ಲ. ವೇದಾಧ್ಯಯನವೂ ಆಗಲಿಲ್ಲ. ಅವನಿಗೆ ನಿಜವಾಗಿ ಸಮಯ ಜಾರುತ್ತಿದೆ. "ವೇದಸುಧೆಯಲ್ಲಿ ನೆಮ್ಮದಿಯ ಬದುಕಿಗಾಗಿ ವೇದ ಜ್ಞಾನದ ಬಗೆಗೆ ಸುಧಾಕರಶರ್ಮರು ಸಾಕಷ್ಟು ತಿಳುವಳಿಕೆ ನೀಡುತ್ತಿದ್ದಾರೆ. ಅವನಂತ ಯುವಕರಿಗೆ ಖಂಡಿತವಾಗಿಯೂ "ವೇದಸುಧೆಯು" ದಾರಿ ದೀಪವಾಗಬಲ್ಲದು. ಆದರೆ ಶರ್ಮರ ಉಪನ್ಯಾಸಗಳನ್ನಾದರೂ ನಿತ್ಯವೂ ಅರ್ಧಗಂಟೆಯಾದರೂ ಕೇಳಬೇಕು.
" ಎಲ್ಲಾ ವ್ರಥಕಥೆಗಳ ಬಗ್ಗೆಯೂ ಹಾಕಿದ್ದೀರಾ?
ವೇದದ ನಿಜವಾದ ಅರ್ಥವನ್ನು ತಿಳಿದಾಗ ವ್ರಥಕಥೆಗಳ ಮಾತೇ ಬರುವುದಿಲ್ಲ.
ಪೂಜಾ ವಿಧಾನ:
ನಿತ್ಯಬದುಕೇ ಒಂದು ಆರಾಧನೆ, ಒಂದು ಯಜ್ಞ.ಸಮಾಜಮುಖಿಯಾಗಿ ಬಾಳುವುದನ್ನು ವೇದವು ನಮಗೆ ಕಲಿಸಿಕೊಡುತ್ತದೆ, ನಾವೀಗ ಮಾಡುತ್ತಿರುವ ಪೂಜಾವಿಧಾನವೇ ಬದಲಾಗುತ್ತದೆ.
ಪುರಾಣಪುಣ್ಯಕಥೆಗಳ ಬಗ್ಗೆ :
ನನಗನಿಸುವಂತೆ  ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ ವೇದ ಪ್ರಸಾರಕ್ಕೆ ಧಕ್ಕೆ ಬಂದಿದೆ[ ಇದನ್ನು ಬಲ್ಲವರು ಸರಿಯಾಗಿ ವಿವರಿಸ ಬೇಕು] ಆನಂತರ ಜನರು ಧರ್ಮಬ್ರಷ್ಠರಾಗುತ್ತಾರೆಂದು ಅರಿತ ಕೆಲವು ಋಷಿಗಳು[ಋಷಿ ಎಂಬ ಪದ ಉಚಿತವೋ ಅಲ್ಲವೋ ತಿಳಿಯದು] ಭೀತಿಯಿಂದ ಭಗವಂತನಲ್ಲಿ ನಂಬಿಕೆಬರುವಂತೆ ಸರಳವಾಗಿ ರಚಿಸಿರುವ ಕಥೆಗಳಿರಬಹುದು.ಯಾವುದೋ ಆಪತ್ಕಾಲಕ್ಕೆ ಮಾಡಿರುವ ಆ ಪ್ರಯತ್ನವು ತಲೆತಲಾಂತರಗಳಲ್ಲೂ ಮುಂದುವರೆದು ವೇದ-ಪುರಾಣಗಳೆಂಬ ಮಟ್ಟಿಗೆ ಬೆಳೆದದ್ದು ಸುಳ್ಳಲ್ಲ.  ವೇದವು ಆ ಸಂದರ್ಭದಲ್ಲಿ ನಾಶವಾಗಿಲ್ಲ. ಬದಲಿಗೆ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿ ಅದರ ಪರಿಣಾಮವಾಗಿ  ವೇದವನ್ನು ಬ್ರಾಹ್ಮಣರ ಹೊರತಾಗಿ ಅನ್ಯ ವರ್ಗದ ಜನರ ಕಿವಿಯ ಮೇಲೂ ಬೀಳಬಾರದೆಂಬ ಮಟ್ಟಿಗೆ ನಡೆದುಕೊಂಡದ್ದು ಕಥೆಯಲ್ಲ-ವಾಸ್ತವ.ಆದರೆ ಬ್ರಾಹ್ಮಣ ಪದದ ಅರ್ಥವೇ ಬೇರೆ. ಅದು ಒಂದು ಜಾತಿಯ ಹೆಸರಲ್ಲ. ಅದನ್ನು ವೇದಸುಧೆಯ ಶರ್ಮರ ಪುಟದಲ್ಲಿ ಆಡಿಯೋ ಕೇಳಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಪುರಾಣಪುಣ್ಯಕಥೆಗಳೆಂಬ ಕಟ್ಟು ಕಥೆಗಳ ಹಿಂದೆ ಬಿದ್ದು ನಿಜವಾದ ವೇದವನ್ನು ಮರೆತಿರುವುದು ಸರಿಯೇ? ಚಿಂತನೆ ಮಾಡಬೇಕು.
ಹಬ್ಬ ಹರಿದಿನಗಳ ಬಗೆಗೆ
 ಎಷ್ಟು ಓದಿದರೇನು? ನಾವಿನ್ನೂ ಕಂದಾಚಾರಗಳಿಗೇ ಕಟ್ಟು ಬಿದ್ದಿದ್ದೇವೆ.ಮೊನ್ನೆ ನನ್ನ ತಂಗಿಯ  ಮನೆಯಲ್ಲಿ "ಸುಬ್ರಹ್ಮಣ್ಯ ಷಷ್ಠಿ" ಯ ಆಚರಣೆ. .ಊಟದಲ್ಲಿ ಅಡಿಗೆಗೆ ಖಾರವನ್ನೇ ಹಾಕಿಲ್ಲ. ಬರಿ ಸಪ್ಪೆ. ಮಾಡಿದ್ದು ಹಲವು ಬಗೆ ಅಡಿಗೆ. ಅದರಲ್ಲಿ ಒಂದು  ಅವರೆ ಕಾಳಿನ ಸಾಂಬಾರ್ ಇರಬಹುದು.ಬರಿ ಸಪ್ಪೆ. ನಾನು ಉಪ್ಪಿನ ಕಾಯಿ ಹಾಕ್ತೀರಾ? ಎಂದೆ " ಇವತ್ತು ಹಾಕುವಂತಿಲ್ಲ" ಎಂದರು.
ನೋಡಿ ನಮ್ಮ ಆಚರಣೆಗಳ ಫಲ! ಬಹುಷ: ಆರೋಗ್ಯದ ಕಾರಣಕ್ಕೆ ಯಾವ ಕಾಲದಲ್ಲೋ ಯಾರೋ ಒಬ್ಬರು "ಸುಬ್ರಹ್ಮಣ್ಯ ಷಷ್ಠಿ"ಯ ಹೆಸರಲ್ಲಿ ಆರೋಗ್ಯಕರವಾದ ಅಡಿಗೆ ಹೇಳಿರಬಹುದು. ಆದರೆ ಕಡೆಯಲ್ಲಿ ಉಳಿದಿದ್ದೇನು? ಅಂದು ಅಡಿಗೆಗೆ  ಖಾರವನ್ನೇ ಹಾಕಬಾರದು. ಆದರೆ ಅವರೇ ಕಾಳಿನ ಸಾಂಬಾರ್ ಮಾಡಬಹುದೇ? ಚಿಂತಿಸಲೇ ಇಲ್ಲ.ನಮ್ಮ ಹಬ್ಬಗಳ ಆಚರಣೆ ಹೀಗಿದೆ. ಅರ್ಥ ಕಳೆದುಕೊಂಡಿದೆ ಎನಿಸುತ್ತಿಲ್ಲವೇ?
ಬ್ರಾಹ್ಮಣಿಕೆ ಹಾಳಾಗಿ ಹೋಗುತ್ತಿದೆ
ಪ್ರಶ್ನೆ ಕೇಳಿದವರು ಬ್ರಾಹ್ಮಣ ಎಂದರೆ ಒಂದು ಜಾತಿಯನ್ನು ಉದ್ಧೇಶಿಸಿ ಕೇಳಿದ್ದರು. ಅದರೆ ಬ್ರಾಹ್ಮಣ ಪದಕ್ಕೆ ಅರ್ಥವೇ ಬೇರೆ. ಬ್ರಹ್ಮಜ್ಞಾನವನ್ನು ಪಡೆಯುವವ ಬ್ರಾಹ್ಮಣ.ಹೌದು ಬ್ರಹ್ಮಜ್ಞಾನದ ಪ್ರಸಾರವಾಗಬೇಕು.

ವೇದಸುಧೆಯಲ್ಲಿ ನಿಜವಾದ ವೇದಾರ್ಥಪ್ರಸಾರವಾಗಬೇಕು, ಬದುಕಿಗೆ ನಿಜವಾದ ಮಾರ್ಗದರ್ಶನ ವೇದಗಳಿಂದ ಸಿಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವೇದಸುಧೆ ಆರಂಭವಾಗಿದೆ. ಆಪ್ರಯತ್ನದಲ್ಲಿ ಅವಿರತ ಶ್ರಮಿಸುತ್ತಿದೆ. ಇಂತಹ ವೇದಸುಧೆಯನ್ನು ಯಾವ ವಯಸ್ಸಿನಿಂದ  ಓದಬೇಕು? ಬಹಳ ಪ್ರೀತಿಂದ ಒಂದು ಮಾತು ಹೇಳಿ ಈ ಬರಹ ಮುಗಿಸುವೆ" ವೇದಸುಧೆಗೆ ತಾಂತ್ರಿಕ ಸಲಹೆ ನೀಡುತ್ತಿರುವ ನಮ್ಮ ಮಿತ್ರ ಪ್ರಸನ್ನ  ಪಿ.ಯು.ಸಿ ವಿದ್ಯಾರ್ಥಿ.
ಒಂದು ಮಾತು: ವೇದಸುಧೆಯಲ್ಲಿ ನಾನೊಬ್ಬ ಅಂಚೆ ಪೇದೆ. ನಿಮಗೆ ಏನೇ ಸಂಶಯವಿರಲಿ. ಕೇಳಿ ವೇದಾಧ್ಯಾಯೀ ಸುಧಾಕರಶರ್ಮರು ಉತ್ತರ ನೀಡುವರು. ಕಾರಣ ಅವರು ಮೂರು ದಶಕಗಳಿಂದ ವೇದಾಧ್ಯಯನ ಮಾಡುತ್ತಿದ್ದಾರೆ. ಅವರೇ ಸಮರ್ಥರು.

20 comments:

  1. Thanks for point-by-point incisive analysis and thought provoking comment on your part Sridhar !!!...well done ...keep it up , we are with you !!...and here's wishing more power to you !!!...

    ReplyDelete
  2. ಸರ್
    ಮೊನ್ನೆ ತಾನೆ ವೇದಗಳ ಬಗ್ಗೆ ಸುಮಾರು ಪುಸ್ತಕಗಳನ್ನು ಕೊಂಡುಕೊಂಡಿದ್ದೇನೆ. ಕೆಲವನ್ನು ಓದುತ್ತಿದ್ದೇನೆ. ಕೆಲವು ಇನ್ನೂ ಬಾಕಿ ಇವೆ. ಈಗಾಗಲೆ ನೂರಾರು ಪ್ರಶ್ನೆಗಳು ಬರುತ್ತಿವೆ . ಅದರಲ್ಲಿ ಒಂದು ಮುಖ್ಯವಾದುದು

    ವೇದಗಳು ಈಶ್ವರೀಯವಾದುದು. ಅದು ಯಾರಿಂದಲೂ ಬರೆಯಲ್ಪಟ್ಟಿಲ್ಲ. ಪರಮಾತ್ಮನ ಮುಖಾಂತರ ಅಗ್ನಿ,ಮತ್ತಿತರ ದೇವತೆಗಳಿಗೆ ವರ್ಗಾಯಿಸಲ್ಪಟ್ಟಿತ್ತು (ಅಥವ ಕೊಡಲ್ಪಟ್ಟಿತು)

    ಇದು ನಿಜವೇ ? ಸ್ವಲ್ಪ ವಿವರವನ್ನು ಕೊಡಲಾಗುತ್ತದೆಯೇ?

    -ರೂಪ,ಬೆಂಗಳೂರು

    ReplyDelete
  3. ರೂಪರವರೇ,
    ಈ ವಿಷಯದಲ್ಲಿ ಹಲವು ಚರ್ಚೆ, ಜಿಜ್ಷಾಸೆಗಳಾಗಿವೆ. ವೇದಸುಧೆಯ ಹಳೆಯ ಪುಟಗಳನ್ನು ಸಹ ಕಣ್ಣಾಡಿಸಿರಿ. ತಿಳಿಯುವುದು. ನಿಮ್ಮ ಆಸಕ್ತಿ ಮೆಚ್ಚುವಂತಹುದು.

    ReplyDelete
  4. ಸ್ವಾಮೀ ಶ್ರೀಧರರೇ ಯಾಕೋ ನಿಮ್ಮಲ್ಲೂ ಸ್ವಲ್ಪ ಆರ್ಯ ಸಮಾಜದ ಕುರುಹು ಕಾಣಿಸುತ್ತಿದೆ! ತಾವು ರಮಣ ಮಹರ್ಷಿಗಳಬಗ್ಗೆ ತಿಳಿದಿದ್ದೀರಿ,ಶಿರಡಿ ಸಾಯಿಬಾಬಾ ಬಗ್ಗೆ ಅರಿತದ್ದೀರಿ, ಆದರೂ ಋಷಿ ಎನ್ನುವುದು ಸಮಂಜಸವೇ ಎನ್ನುವ ವಾಕ್ಯ ಉಪಯೋಗಿಸಿದ್ದು ನೋಡಿ ನಗುಬರುತ್ತಿದೆ. ಯಾರೋ ಹೇಳುತ್ತಾರೆ ಅಥವಾ ಹೇಳಿದರು ಅಂತ ನಾನಂತೂ ಮೂರ್ತಿ ಪೂಜೆ ತ್ಯಜಿಸುವುದಿಲ್ಲ. ಮೂರ್ತಿಪೂಜೆಯನ್ನು ತ್ಯಜಿಸುವ ’ಅದಕ್ಕಿನ್ನೂ ಕಾಲವಿದೆ’! ಅದು ಈ ಜನ್ಮದಲ್ಲೋ ಮತ್ತೊಂದರಲ್ಲೋ ನಾನರಿಯೆ. ಅಸಲಿಗೆ ನಾನು ಯಾರೆಂಬುದರ ಅರಿವೇ ನನಗಿರದಾಗ ಋಷಿಮುನಿಗಳ, ಪ್ರಾಜ್ಞರ, ನೈಜಸನ್ಯಾಸಿಗಳ, ಸಾಧಕರ ವಿರುದ್ಧ ಅವರೆಲ್ಲಾ ಹುಚ್ಚರು ಎಂಬ ಮಟ್ಟಕ್ಕೆ ನಾನಿಳಿಯಲಾರೆ. ಮಹಾನುಭಾವ ಶ್ರೀಕೃಷ್ಣ ಭಗವಂತನೇ ಆದರೂ ಕುಚೇಲ ಮತ್ತು ಅಕ್ರೂರರು ಬಂದಾ ಸ್ವತಃ ತನ್ನ ಸಿಂಹಾಸನಮೇಲೆ ಕೂರಿಸಿ ಅವರನ್ನು ಪೂಜಿಸುತ್ತಾನೆ! ಗುರು ಶ್ರೀ ಶ್ರೀಧರಭಗವಾನರು ಇತ್ತೀಚಿನವರೆಗೂ ನಡೆದುಬಂದ ಋಷಿ ಪರಂಪರೆಗೆ ಜ್ವಲಂತ ಸಾಕ್ಷಿಯಾಗಿದ್ದರೆ. ಅತ್ತ ದರಿ ಇತ್ತ ಪುಲಿ ಆಗುವುದಕ್ಕಿಂತಾ ಸಾಕ್ಷಾಧಾರ ಸಹಿತ ದೈವತ್ವಕ್ಕೆ ಕೊಂಡೊಯ್ಯುವ ಮಾರ್ಗ ನಮಗೆ ಅಗತ್ಯ.ಈ ದಿಸೆಯಲ್ಲಿ ವೇದಗಳು ದಾರಿದೀಪವೇ ಹೊರತು ವೇದಗಳೇ ದೇವರಲ್ಲವಲ್ಲ ? ವೇದಗಳು ದೇವರಿಂದ ಜನಿತವಾದವು ಅಲ್ಲವೇ ? ಅಂದಮೇಲೆ ಆ ನಿರಾಕಾರ ದೇವನನ್ನು ಪ್ರೀತಿಯಿಂದ ಗೆಳೆಯನಾಗೋ ಅಣ್ಣನಾಗೋ ತಮ್ಮನಾಗೋ ಕೃಷ್ಣನಾಗೋ ರಾಮನಾಗೋ ಪೂಜಿಸುವುದರಲ್ಲಿ ಸಿಗುವ ತೃಪ್ತಿ ಆಕಾರವಿಲ್ಲದ ಯಾವುದೋ ಏನೋ ಅದಕ್ಕೆ ಪೂಜಿಸುವುದರಿಂದ ಸಿಗುವುದಿಲ್ಲ! ಅದರರ್ಥ ಹಗ್ಗವನ್ನೇ ಹಾವು ಎಂದು ಭ್ರಮಿಸಬೇಕೆಂಬುದಲ್ಲ. ಆದರೆ ಹಾವೂ ಇದೆ ಹಗ್ಗವೂ ಇದೆ ಎಂಬುದನ್ನು ಮನಗಾಣಬೇಕು. ಚತುರ್ಭುಜನಾಗಿ ನಾನು ಯಾರಿಗೂ ಸುಲಭಸಾಧ್ಯದರ್ಶನ ನೀಡುವುದಿಲ್ಲ ಎಂದು ಕೇಶವನೇ ಹೇಳಿದಮೇಲೆ ಕಂಡ ಋಷಿಮುನಿಗಳು ಅದನ್ನೇ ಮೂರ್ತಿಯಾಗಿಸಿದ್ದಾರೆ ನಮಗೆ ನೀಡಿದ್ದಾರೆ. ಮೂರ್ತಿ ಪೂಜೆಯೇ ಬೇಕಾಗಿಲ್ಲ ಎನ್ನುವವರಲ್ಲಿ ನನ್ನ ವಾದವಿಲ್ಲ. ಮೂರ್ತಿ ಪೂಜೆಯಲ್ಲೂ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎಂಬೆಲ್ಲಾ ವಿಧಗಳಿವೆ ಎಂಬುದನ್ನು ಕೇಳಿದ್ದೇನೆ.

    ಅವರವರ ಭಾವಕ್ಕೆ ಅವರವರ ಭಕುತಿಗೆ
    ಅವರವರ ತೆರನಾಗಿ ಇರುತಿಹನು ಶಿವಯೋಗಿ

    ಎಂಬ ಶಿವಶರಣರ ಮಾತು ಇಲ್ಲಿ ಬಹಳ ಪ್ರಸ್ತುತ. ನಮ್ಮ ಭಾವನೆಗೆ ತಕ್ಕಂತೇ ಆಯಾ ರೂಪದಲ್ಲಿ ಆರಾಧಿಸುವುದೇ ಸರಿ. ಅಲ್ಲಿ ದೇವರೇ ಅಣ್ಣನೋ ಗೆಳೆಯನೋ ಆಗುತ್ತಾನೆ. ರಾಜಮಹಾರಾಜರಿಗೆ ನಡೆಸುವ ಸೇವೆಯನ್ನು ಅವನಿಗೆ ಅರ್ಪಿಸಲಾಗುತ್ತದೆ,ನಮ್ಮ ನೋವನ್ನೂ ನಿವೇದಿಸಲಾುತ್ತದೆ, ನಮ್ಮ ನಲಿವನ್ನೂ ಆತನ ಮೆರವಣಿಗೆಯಲ್ಲಿ ಕಾಣಬಹುದಾಗುತ್ತದೆ.

    ತಮ್ಮ ಲೇಖನ ಸರಿಯೇ ಇದೆ. ಆದರೆ ಅಲ್ಲಿ ಮನೀಷಿಗಳನ್ನೇ ಅಲ್ಲಗಳೆಯುವ ನಮ್ಮ ಮನೋವೃತ್ತಿ ದೋಷಪೂರಿತವಾಗುತ್ತದೆ. ವ್ಯಾಸರು ಇರದಿದ್ದರೆ, ಗಣಪ ಬರೆದಿದ್ದರೆ ನಾವು ವೇದಗಳನ್ನು ಓದಲು ಸಾಧ್ಯವಗುತ್ತಿತ್ತೇ? ದೇವರೇ ವ್ಯಾಸನಾಗಿ ಮತ್ತೆ ಗಣೇಶನೂ ಆಗಿ ವಿಜೃಂಭಿಸುವಾಗ ನಾವೇಕೆ ಅವರನ್ನು ಮೂರ್ತಿಯಾಗಿ ಕಾಣಲಾಗುವುದಿಲ್ಲ? ಉಳಿದ ನಿಮ್ಮ ಅನುಭವಗಳಿಗೆ, ಚಿಂತನೆಗೆ ಶರಣು, ಧನ್ಯವಾದ.

    ReplyDelete
  5. ಮಧ್ಯಪ್ರವೇಶಕ್ಕೆ ಕ್ಷಮೆಯಿರಲಿ. ಶ್ರೀಧರರಲ್ಲಿ ಆರ್ಯಸಮಾಜದ ಕುರುಹು ಕಾಣುತ್ತಿದೆಯೆಂಬ ಮಾತು ಅವರನ್ನು 40 ವರ್ಷಗಳಿಂದ ಕಂಡ ನನಗೆ ಇರಸು-ಮುರುಸು ಉಂಟುಮಾಡಿತು. ಸತ್ಯವೆಂಬುದು ಎಲ್ಲಿಂದ ಬಂದರೂ -ಆರ್ಯ ಸಮಾಜವಿರಬಹುದು, ಅಥವ ಮತ್ತೊಂದಿರಬಹುದು - ಅದು ಸ್ವೀಕಾರಾರ್ಹ. ಪ್ರಸ್ತುತತೆ, ಅಪ್ರಸ್ತುತತೆ ವಿಚಾರದಲ್ಲಿ ಜಿಜ್ಞಾಸೆ ಮುಂದುವರೆಯಲಿ. ವಿಚಾರ ಒಪ್ಪುವ ಮುನ್ನ ವಿಶ್ಲೇಷಿಸಿ, ಚರ್ಚಿಸಿ ನಿರ್ಧಾರಕ್ಕೆ ಬರುವುದು ಅವರವರಿಗೆ ಬಿಟ್ಟದ್ದು. ಆಚಾರದಲ್ಲಿ ವಿಚಾರವೂ ಸೇರಿದರೆ ಅರ್ಥಪೂರ್ಣವೆನಿಸುವುದು.

    ReplyDelete
  6. ಶ್ರೀಧರರಿಗೆ ನೋವನ್ನು ಉಂಟುಮಾಡುವ ಉದ್ದೇಶ ನನ್ನದಲ್ಲ, ಅದರಿಂದ ಅವರಿಗೇ ಆಗಲಿ ನಾಗರಾಜರೇ ತಮಗೇ ಆಗಲಿ ನೋವಾಗಿದ್ದರೆ ಕ್ಷಮೆಯಿರಲಿ. ಅವರು ೪೦ ವರ್ಷಗಳಿಂದ ನಂಬಿದ, ನಡೆದ ವೇದದ ದಾರಿಯಲ್ಲಿ ಯಾರೋ ಋಷಿಗಳು[ಎಂದು ಕರೆಯಬಹುದೇ? ]ಸ್ವಸಂತೋಷಕ್ಕೋ ಪ್ರಾರ್ಥನೆಗೋ ಬರೆದ ಕಥೆ-ಪುರಾಣಗಳೆಲ್ಲಾ ವೇದವೆನಿಸಿವೆ ಎನ್ನುತ್ತಾರೆ, ವೇದ ಅಪೌರುಷೇಯ ಎಂದುದಕ್ಕೆ ಈಗಾಗಲೇ ಸಾಕಷ್ಟು ಅಧ್ಯಯನ ನಡೆದಿದೆ, ವೇದವನ್ನು ಈ ದಿಸೆಯಲ್ಲಿ ಯಾರೋ ಬರೆದರು ಎಂದರೆ ಸರಿಯೇ ?- ಎಂಬುದು ನನ್ನ ಪ್ರಶ್ನೆ.

    ReplyDelete
  7. " ಪೂರ್ವದಲ್ಲಿ ರಾಮಾಯಣ ಮಹಾಭಾರತದ ಯುದ್ಧ ಕಾಲದಲ್ಲಿ"- ರಾಮಾಯಣ ಮಹಾಭಾರತ ಇತಿಹಾಸ ಅಲ್ಲ. ಸುಂದರ (ಕಾಲ್ಪನಿಕ) ಕಥೆಗಳು. ಈ ವಿಷಯದಲ್ಲಿ ಪ್ರಪಂಚ ಮಟ್ಟದಲ್ಲಿ ಇತಿಹಾಸಜ್ಞರಲ್ಲಿ ಅನುಮಾನ ಇದ್ದಂತಿಲ್ಲ!!!

    ReplyDelete
  8. ಇಲ್ಲಿ ನನ್ನ ಸ್ಪಷ್ಟನೆ ಅನಿವಾರ್ಯ.ಋಷಿಮುನಿಗಳಲ್ಲಿ ಬಹಳ ಶ್ರದ್ಧೆ ಇಟ್ಟಿರುವವನು ನಾನು. ನಾನು ಪ್ರಥಮತ: ಆರ್ಯಸಮಾಜಿಯಲ್ಲ. ನಾನೊಬ್ಬ ಸಾಮಾಜಿಕ ಚಿಂತಕನೆಂದು ಹೇಳಲು ಇಷ್ಟಪಡುವೆ.ಸಮಾಜದಲ್ಲಿ ಆರೋಗ್ಯಕರ ಚಿಂತನೆಗಳನ್ನು ಕಾಣುವ ಹಂಬಲ ನನ್ನದು.
    ಋಷಿಮುನಿಗಳ ಮಾತನಾಡುವಾಗ ನಾನು ವೇದಗಳ ಬಗ್ಗೆ ಹೇಳಿದ್ದಲ್ಲ.ವೇದ-ಪುರಾಣಗಳೆಂದು ಜೊತೆಜೊತೆಗೆ ರೂಢಿಗೆ ಬಂದಿದೆ ಎಂದು ಹೇಳಿದೆ. ಪುರಾಣಗಳ ಬಗ್ಗೆ ಮಾತನಾಡುವಾಗ ನನ್ನ ಅಭಿಪ್ರಾಯ ತಿಳಿಸಿದೆ. ಪುರಾಣಗಳನ್ನು ಬರೆದವರ ಬಗ್ಗೆ ಋಷಿಗಳೆನ್ನಬೇಕೆ? ಎಂದು ತಿಳಿದವರಲ್ಲಿ ನನ್ನ ಸಂದೇಹವನ್ನು ವ್ಯಕ್ತಪಡಿಸಿದೆ.ಅಲ್ಲದೆ ಪುರಾಣಪುಣ್ಯಕಥೆಗಳು ಹೇಗೆ ರಚನೆವಾಗಿರಬಹುದೆಂದು ಊಹಿಸಿದೆ. ಹೇಗೆ ರಚಿಸಲಲ್ಪಟ್ತವು? ಎಂಬ ಬಗ್ಗೆ ತಿಳಿದವರು ಮಾಹಿತಿಕೊಟ್ಟರೆ ಮತ್ತು ಇಂತಾ ಕಾರಣಕ್ಕಾಗಿ ಪುರಾಣಪುಣ್ಯಕಥೆಗಳು ಬೇಕೆಂದರೆ ಒಪ್ಪಬಹುದು. ನನಗೆ ಅನುಮಾನಗಳು ಶುರುವಾಗಿದ್ದು ಯಾವಾಗ, ಎಂಬುದನ್ನು ತಿಳಿಸಿ ಬಿಡುವೆ. ನಾನೇ ಹಿಂದೊಮ್ಮೆ ಬರೆದಿದ್ದೆ. ಸತ್ಯನಾರಾಯಣ ಪೂಜೆಮಾಡುವಾಗ ಎಲ್ಲಾಮುಗಿದು ಕಥೆ ಕೇಳುವಾಗ ಯಾಕೋ ಸರಿಹೋಗುತ್ತಿಲ್ಲ. ನನ್ನ ಮನ ಒಪ್ಪುತ್ತಿಲ್ಲ.ಪ್ರಸಾದ ತಿನ್ನದಿದ್ದಾಗ ಕೊಬ್ಬರಿಗೆ ಹಣ ನದಿಯಲ್ಲಿ ಮುಳುಗಿಹೋದರೆ, ಪ್ರಸಾದ ಸ್ವೀಕರಿಸಿದಮೇಲೆ ಅಷ್ಟೈಶ್ವರ್ಯವು ಪ್ರಾಪ್ತಿಯಾಯ್ತೆಂಬ ಕಥೆ! ಇಂತಾ ಕಥೆಗಳನ್ನು ಈಗಲೂ ಹೇಳುತ್ತಾ-ಕೇಳುತ್ತಾ ಇರಬೇಕೆ? ನೀವೇ ಹೇಳಿ.
    ಇಷ್ಟೆಲ್ಲದರ ನಡುವೆ ರಮಣ ಮಹರ್ಷಿಗಳ ಬಗ್ಗೆ, ಶ್ರೀಧರಸ್ವಾಮಿಗಬಗ್ಗೆ, ವಿವೇಕಾನಂದ-ರಾಮಕೃಷ್ಣಪರಮಹಂಸರ ಬಗ್ಗೆ ನನಗೆ ಅತ್ಯಂತ ಭಕ್ತಿ-ಗೌರವಗಳಿವೆ. ಯಾರೋ ಅಲ್ಲ, ಸುಧಾಕರಶರ್ಮರಿಗೆ ಅವರುಗಳಬಗ್ಗೆ ಗೌರವಿಲ್ಲದಿದ್ದರೂ ನನಗೆ ಇರಬಾರದೇ?

    ReplyDelete
  9. ಮಾನ್ಯರೇ, ತಮ್ಮೆಲ್ಲರ ಅಭಿಪ್ರಾಯಗಳು ವೇದ್ಯ, ಮಾನ್ಯ. ಆದರೆ ನನ್ನ ಅತೀ ವೈಯ್ಯಕ್ತಿಕ ಅಭಿಪ್ರಾಯ ಹೀಗಿದೆ-ಪುರಾಣಗಳು ಯರೋ ಬರೆದಿದ್ದಿರಬಹುದು. ತಾವು ಹೇಳಿದ ಸತ್ಯನಾರಾಯಣ ವ್ರತ ಪುರಾಣೋಕ್ತವೇ ಹೊರತು ವೇದೋಕ್ತವಲ್ಲ! ವೇದಗಳಲ್ಲಿ ಅಂತಹ ವಿಚಿತ್ರ ಸನ್ನಿವೇಶಗಳು ಬರುವುದಿಲ್ಲ. ಆಚರಿಸುವಾಗ ಕೆಲವು ಕುರುಡು ಸಂಪ್ರದಾಯದಿಂದ ಬಂದ ಆಚರಣೆಗಳು ಇನ್ನು ಕೆಲವು ಸತ್ವಯುತ ಆಚರಣೆಗಳು ಎಂಬ ಎರಡು ಬಗೆಯ ರೂಢ ಆಚರಣೆಗಳನ್ನು ಕಾಣಬಹುದಾಗಿದೆ. ಗೋಮಯ ಬಿಸಿಯಾಗಿ ಹಸಿಯಾಗಿ ಇರುವಾಗ ಅದನ್ನು ಬಳಸಿದರೆ ಕ್ರಿಮಿನಾಶಕವಾಗಿ ಕೆಲಸಮಾಡುತ್ತದೆಯೇ ಹೊರತು ೧೫ ದಿನಗಳ ಹಿಂದಿನ ಸಗಣಿಯಲ್ಲೇ ಕ್ರಿಮಿಗಳು ಜನಿಸುತ್ತವಲ್ಲವೇ? ಹಾಗೇ ವೇದವನ್ನು ಬಳಸುವ ಬದಲು ವೇದಾಂಗಗಳನ್ನು ಅನುಸರಿಸುವ ಬದಲು ಯಾರೋ ಮಧ್ಯೆ ಬಳಸಿದ ಅಸಡ್ಡೆಯ ಕ್ರಮಗಳನ್ನು ಅನುಸರಿಸಿದವರು ಹಲವರು. ತಾವು ಹೇಳಿದಿರಿ ವೇದ ಬ್ರಾಹ್ಮಣರಿಗಷ್ಟೇ ಎಂದು ಮೀಸಲಿಟ್ಟರು-ತಾವು ಯೋಚಿಸಬೇಕು, ಇವತ್ತು ನಾವು ಗಣಕಯುಗದಲ್ಲಿದ್ದೂ ವೇದದ ಬಗ್ಗೆ ತಿಳುವಳಿಕೆ ಯಾ ಆಸಕ್ತಿ ಇರುವವರು ಕಮ್ಮಿ ಇದ್ದಾರೆ, ವೇದವನ್ನು ಓದುವುದೂ ಒಂದು ವ್ರತದಂತೇ! ಅದಕ್ಕೆ ತಕ್ಕ ಮನೋಭೂಮಿಕೆ ಬೇಕು, ತಕ್ಕ ಆಹಾರ-ವಿಹಾರ-ವ್ಯವಹಾರ ಬೇಕು. ಇವತ್ತು ಅಯ್ಯಪ್ಪನ ಭಕ್ತರನ್ನು ನೋಡಿ: ಬೆಳಿಗ್ಗೆ ಶಬರಿಮಲೈನಿಂದ ಬಂದವ ೩೦ ದಿನದಿಂದ ಎಣ್ಣೆಕುಡಿದಿರಲಿಲ್ಲ ಎಂಬ ಮನದ ಕ್ಲೀಷೆ ತಾಳಲಾರದೇ ಸೀದಾ ಎಣ್ಣೆ ಅಂಗಡಿಗೆ ನುಗ್ಗುತ್ತಾನೆ.---ಇದು ಒಂದು ಉದಾಹರಣೆ. ಇದೇ ರೀತಿ ಮಾಂಸವನ್ನೂ ತಿಂದುಂಡು, ಬೇಕಾದ್ದನ್ನೂ ಕುಡಿಯುತ್ತಾ ವೇದವನ್ನು ಓದಿದರೆ ಅದು ಎಣ್ಣೆಹಾಕಿಕೊಂಡು ಗಾಡಿ ಓಡಿಸಿದ ರೀತಿ ಆಗುತ್ತದೆ! ಸಮಾಜದ ಕೆಲವು ವರ್ಗಗಳು ಆಚಾರದಲ್ಲಿ ಉನ್ನತಮಟ್ಟಕ್ಕೆ ಬೆಳೆಯದ್ದರಿಂದ ವೇದ ಬ್ರಾಹ್ಮಣರ ಬಳಕೆಯಲ್ಲಿ ಉಳಿಯಿತು, after all they are not claiming that its their own property, they are telling that they are custodians so what went wrong here ?

    ಶತಮಾನಗಳಿಂದ ಆಯಾಯ ಕೆಲಸಗಳನ್ನು ಮಾಡುತ್ತಾ ಬಂದ ಕೆಲವು ವರ್ಗಗಳಿಗೆ ಅವವೇ ಕೆಲಸ ಸಲೀಸಾಗಿ ಒಪ್ಪುತ್ತವೆ. ಮಡಿವಾಳನಲ್ಲಿ ಯಜ್ಞಮಾಡುವ ಮನೋಭೂಮಿಕೆಗಿಂತಾ ಬಟ್ಟೆತೊಳೆಯುವ ಮನಸ್ಸು ಜಾಸ್ತಿ ಇರುತ್ತದೆ! ಹಜಾಮನಿಗೆ ತ್ವರಿತವಾಗಿ ದುಡಿಮೆ ಕೊಡುವ ಅದೇ ವೃತ್ತಿ ಹಿತವಾಗಿರುತ್ತದೆ! ಅವರು ಅದನ್ನು ಬಿಟ್ಟು ಬೇರೇ ಮಾಡಲು ಕಷ್ಟವಾಗುತ್ತದೆ. ಅಂತೆಯೇ ಉಪವಾಸ, ವ್ರತ, ಪಥ್ಯಾಹಾರ, ಸ್ನಾನ ಮುಂತಾದ ಹಲವು ನೇಮಗಳು ನಿತ್ಯವೂ ಅನಿವಾರ್ಯವಾದ ವೇದಾಚರಣೆಯಲ್ಲಿ ಅನೇಕರಿಗೆ ಅದೊಂದು ಅತೀ ಚಳಿಯಲ್ಲಿ ಐಸ್ಕ್ರೀಮ್ ತಿಂದಹಾಗಾಗಿ ’ಬೇಡವಪ್ಪಾ’ ಎನಿಸಿಬಿಡುತ್ತದೆ! ಇನ್ನೂ ಕೆಲವರು ಇಂದಿಗೂ ದಿನವೂ ಸ್ನಾನವನ್ನೇ ಮಾಡುವ ಮನಸುಳ್ಳವರಲ್ಲ. ಅವರಿಗೆಲ್ಲಾ ವೇದವನ್ನು ಓದಿರಿ ಓದಿರಿ ಎಂದು ಹೇಳಿನೋಡಿ, ಅವರು ನಮಗೇ ಹುಚ್ಚು ಎನ್ನುತ್ತಾರೆ. ಅದಕ್ಕೇ ’ಬ್ರಾಹ್ಮಣ’ ಎಂಬ ಶಬ್ಧದ ಅರ್ಥಕ್ಕೆ ತಕ್ಕಹಾಗೇ ಮೊದಲು ನಡೆದುಕೊಂಡಿದ್ದ ಜನಾಂಗವೇ ವೇದಗಳನ್ನು ಕಾಪಿಡುತ್ತಾ ಬಂತು.ರಾಜಾಶ್ರಯಗಳನ್ನು ಕಳೆದುಕೊಂಡ ಕರ್ಮಠ ಬ್ರಾಹ್ಮಣರ ಮೂಲ ಸಂಸ್ಕಾರಗಳು ನವಸಮಾಜದ ಹಲ್ಲಿಗೆ ಸಿಕ್ಕಿದವು. ಬ್ರಾಹ್ಮಣರಲ್ಲಿ ಅನೇಕರು ಉಪಜೀವನಕ್ಕಾಗಿ ತಮ್ಮ ಮೂಲವೃತ್ತಿಯಾದ ಅಧ್ಯಯನ, ಅಧ್ಯಾಪನ, ವೈದ್ಯ, ಜ್ಯೋತಿಷ್ಯ ಮತ್ತು ಪೌರೋಹಿತ್ಯಗಳನ್ನು ತೊರೆದು ಬೇರೇ ಬೇರೇ ವೃತ್ತಿಗಳಲ್ಲಿ ತೊಡಗಿಕೊಂಡರು. ಕುಲಾಂತರೀ ಬದನೇಕಾಯಂತಾದ ಬ್ರಾಹ್ಮಣರ ಸ್ಥಿತಿ ಹೇಳತೀರ! ಆದರೂ ಇಂದಿಗೂ ಸಜ್ಜನನಾದ, ವಿಶಾಲಮನೋಧರ್ಮದ ಕರ್ಮಠ ಬ್ರಾಹ್ಮಣನೋರ್ವನಲ್ಲಿ ಯಾರನ್ನೋ ಕಳಿಸಿ ತನಗೆ ವೇದ ಓದಬೇಕೆಂದು ಪ್ರಾರ್ಥಿಸಲು ಹೇಳಿ- ಆತ ವಿರುದ್ಧವಾಡಿದರೆ ನನ್ನ ಬರವಣಿಗೆಯನ್ನೇ ನಿಲ್ಲಿಸುವ ಭರವಸೆ ಕೊಡುತ್ತೇನೆ! ಎಲ್ಲೋ ಕೆಲವು ಸಂಪ್ರದಾಯವಾದಿಗಳಿಂದ ಬೇಡದ ಕೆಲವು ಆಚರಣೆಗಳು ಇನ್ನೂ ನಡೆಸಲ್ಪಡುತ್ತಿವೆ ಎಂದ ಮಾತ್ರಕ್ಕೆ ಇಡೀ ಸಮುದಾಯವನ್ನೇ ಹಳದಿಗಣ್ಣಿನಿಂದ ನೋಡಿ ಹಿತ್ತಾಳೇಕಿವಿಯರಂತೇ ಪೂರ್ವಾಗ್ರಹಪೀಡಿತರಾಗಿ ನಾವು ನಡೆದುಕೊಳ್ಳಬಾರದಲ್ಲ. ಅದಕ್ಕೆಂತಲೇ ಇರಬೇಕು ದೇವಭಾಷೆಯಾದ ಸಂಸ್ಖ್ರುತದ ವಿರೋಧಿಗಳೆಷ್ಟೇ ಜನರಿದ್ದರೂ ಬೆಂಗಳೂರಿನಲ್ಲಿ ಅದರ ಸಮ್ಮೇಳನ ಅತ್ಯಂತ ರಸವತ್ತಾಗಿ ನಡೆದು ಅಸಂಖ್ಯಾತ ಜನಸ್ತೋಮ ಕಾಣಿಸಿಕೊಂಡಿದ್ದು ಆ ಭಾಷೆಗೆ ಇರುವ ಮಹತ್ವ ಮತ್ತು ಜನರ ಆಂತರ್ಯದ ತುಡಿತ.

    ಇನ್ನು ಮಾಚಿಕೊಪ್ಪರವರ ಅಭಿಪ್ರಾಯಕ್ಕೆ-- ರಾಮಾಯಣ ಮಹಾಭಾರತಗಳು ಕಾಲ್ಪನಿಕ ಕಥೆಗಳಾದ್ದರಿಂದ ರಾಮೇಶ್ವರದಲ್ಲಿ ಇಂದಿಗೂ ಆ ರಾಮಸೇತುವೆ ಕಾಣಿಸುತ್ತಿರುವುದಲ್ಲವೇ ? ಮಹಾಭಾರತದಲ್ಲಿ ಉಲ್ಲೇಖವಾದ ಹಸ್ತಿನಾಪುರ, ವೈಶಂಪಾಯನ ಸರೋವರ, ಕುರುಕ್ಷೇತ್ರ ಇವೆಲ್ಲಾ ಅದದೇ ಹೆಸರಿನಿಂದ ರಾರಾಜಿಸುತ್ತಿರುವುದು ಕಲ್ಪನೆಗೇ ಇರಬಹುದೇನೋ! ಅಂತಹ ಕಾವ್ಯಗಳು ಈಗ ಯಾಕೆ ಹುಟ್ಟುತ್ತಿಲ್ಲ? ಅಂತಹ ಕವಿಗಳ ಕೊರತೆಯಿದೆಯೇ ? ಅವುಗಳೆಲ್ಲಾ ಇತಿಹಾಸಗಳೇ ಹೊರತು ಕಲ್ಪನೆಗಳಲ್ಲ. ನಾವು ಈಗ ಮಾಡುತ್ತಿರುವುದು ಕಲ್ಪನೆಗಳು ಅಷ್ಟೇ!

    ನಾವು ಯಾವುದನ್ನೇ ಆಚರಿಸಿದರೂ ಅದನ್ನು ಚಿಂತಿಸಿ ಆಚರಿಸೋಣ. ಯಾರೋ ಮಾಡಿದರು ಎಂಬ ಕಾರಣಕ್ಕೆ ಮಾಡುವುದು ಸರಿಯಲ್ಲ. ಅದರ ಬದಲಾಗಿ ಪೂರ್ವಜರೆಲ್ಲರನ್ನೂ ಸಂದೇಹಿಸುವುದು ಎಷ್ಟು ಸರಿ?

    ReplyDelete
  10. [ಯಾರೋ ಅಲ್ಲ, ಸುಧಾಕರಶರ್ಮರಿಗೆ ಅವರುಗಳಬಗ್ಗೆ ಗೌರವಿಲ್ಲದಿದ್ದರೂ ನನಗೆ ಇರಬಾರದೇ?]
    ಶ್ರೀ ಶರ್ಮರೂ ಸಹ ಶ್ರೀಧರಸ್ವಾಮಿಗಳ, ರಮಣಮಹರ್ಷಿಗಳ ಮುಂತಾದವರ ಬಗ್ಗೆ ಗೌರವವಿರುವುದಾಗಿ ಸ್ಪಷ್ಟಪಡಿಸಿರುತ್ತಾರೆ. ಆದರೆ ಅಂತಹ ಮಹನೀಯರುಗಳ ವಿಚಾರಗಳನ್ನೂ ಆನಂತರ ಅವರ ಪರಂಪರೆಯಲ್ಲಿ, ಶಿಷ್ಯರೆನಿಸಿಕೊಂಡವರು ಅವರ ವಿಚಾರಗಳನ್ನು ಎಷ್ಟೋ ತೂರಿಸಿರುವ ಸಾಧ್ಯತೆಯಿದೆ,ಎಂದು ತಿಳಿಸಿರುತ್ತಾರೆ.ನಾನು ಶರ್ಮರ ಹೆಸರನ್ನು ಮಧ್ಯೆತಂದಿದ್ದಕ್ಕೆ ಅವರ ಕ್ಷಮೆ ಕೋರುವೆ.ಬ್ರಾಹ್ಮಣ ಸಮುದಾಯವನ್ನು ನಾನೇಕೆ ನಿಂದಿಸಲಿ? ಯಾಕೆ ಹೀಗೆಲ್ಲಾ ಅರ್ಥ ಕಲ್ಪನೆ? ಚಮ್ಮಾರನು ಚಪ್ಪಲಿ ಹೊಲಿಯುವ ಕೆಲಸವನ್ನೂ, ಒಬ್ಬ ಇಂಜಿನಿಯರ್ ಅವನ ವೃತ್ತಿಯನ್ನು ಶ್ರೇಷ್ಠತಮವಾಗಿ ಮಾಡಿದರೆ ಅದುವೇ ಯಜ್ಞ ಎನ್ನುವ ಮಾತನ್ನು ಶರ್ಮರು ಹಲವಾರು ಕಡೆ ತಿಳಿಸಿದ್ದಾರೆ.ಸಾಲದೇ? ಇನ್ನು ವೇದಾಧ್ಯಯನ ಬೇರೆ ಬೇಕೆ? ಆದರೆ ಹಿಂದುಸಮಾಜದಲ್ಲಿ ಒಂದು ವರ್ಗವನ್ನು ಕಡೆಗಣಿಸಿದ್ದರ ಪರಿಣಾಮವಾಗಿ ಹಿಂದುಸಮಾಜದಲ್ಲಿ ಇಂದು ವರ್ಗಸಂಘರ್ಷಕ್ಕೆ ಕಾರಣವಾಗಿ ಯಾವಾಗಲೋ ಹಚ್ಚಿದ ಬೆಂಕಿ ಈಗ ಸಮಾಜದ ನೆಮ್ಮದಿಯನ್ನು ಸುಡುತ್ತಿಲ್ಲವೇ? ಬೆಂಕಿಯನ್ನು ನಂದಿಸಬೇಡವೇ?

    ReplyDelete
  11. ಶ್ರೀ ಶ್ರೀಧರ್ ರವರೇ!
    ಅಂತಃಸತ್ವವಿಲ್ಲದೇ ಯಾರೂ ಹಿರಿಯರಾಗರು.
    "ಇಷ್ಟೆಲ್ಲದರ ನಡುವೆ ರಮಣ ಮಹರ್ಷಿಗಳ ಬಗ್ಗೆ, ಶ್ರೀಧರಸ್ವಾಮಿಗಬಗ್ಗೆ, ವಿವೇಕಾನಂದ-ರಾಮಕೃಷ್ಣಪರಮಹಂಸರ ಬಗ್ಗೆ ನನಗೆ ಅತ್ಯಂತ ಭಕ್ತಿ-ಗೌರವಗಳಿವೆ. ಯಾರೋ ಅಲ್ಲ, ಸುಧಾಕರಶರ್ಮರಿಗೆ ಅವರುಗಳಬಗ್ಗೆ ಗೌರವಿಲ್ಲದಿದ್ದರೂ ನನಗೆ ಇರಬಾರದೇ?" - ಎಂದಿರುವರಲ್ಲ, ನಾನೆಂದಾದರೂ ಯಾರಬಗ್ಗೆಯಾದರೂ ಅಗೌರವದ ಮಾತುಗಳನ್ನಾಡಿದ್ದೇನೆಯೇ?!
    ಖಂಡಿತವಾಗಿಯೂ ಇಲ್ಲ. ಇವರೆಲ್ಲರ ಬಗ್ಗೆ ಗೌರವವರಿದೆ.
    ಸಮಸ್ಯೆಯಿರುವುದು ಇಲ್ಲಿ -
    ಈ ಪ್ರಸಿದ್ಧ ಗೌರವಾನ್ವಿತರ ಹೆಸರಿನಲ್ಲಿ ಇಂದು ಪ್ರಚಾರದಲ್ಲಿರುವ ಎಲ್ಲವನ್ನೂ ಕಣ್ಣುಮುಚ್ಚಿ ಸ್ವೀಕರಿಸುವುದಿಲ್ಲ ಅಷ್ಟೆ.
    ಅವರ ಪರಂಪರೆಯಲ್ಲಿ, ಶಿಷ್ಯರೆನಿಸಿಕೊಂಡವರು ಅವರ ವಿಚಾರಗಳನ್ನು ಎಷ್ಟೋ ತೂರಿಸಿರುವ ಸಾಧ್ಯತೆಯಿದೆ. ಆ ಹಿರಿಯರನ್ನು Market ಮಾಡುವ ಸಲುವಾಗಿ ಅನೇಕ ಪವಾಡಗಳನ್ನು ಅವರ ಜೀವನಚರಿತ್ರೆಯಲ್ಲಿ ಸೇರಿಸುವ Strategy ಕೂಡ ಇದೇ. ನೇರವಾಗಿ ಪರಿಶೀಲಿಸಿಬಿಡುವ ಎಂದರೆ ಆ ವ್ಯಕ್ತಿಗಳಿಗೆ ನಾವು ಸಮಕಾಲೀನರಲ್ಲ! ಉಳಿದಿರುವ ಒಂದೇ ದಾರಿಯೆಂದರೆ ಜರಡಿ ಆಡುವಿಕೆ. ಸಾಧುವಾದದ್ದು ಅವರದು Original. ಅಸಾಧುವಾದದ್ದು ಕಲಬೆರಕೆ.
    ವಿನಂತಿಯಿಷ್ಟೇ - ಕಲಬೆರಕೆಯನ್ನು, ಸತ್ವಹೀನವಾದದ್ದನ್ನು ಅವರದೇ ಎಂದು ವಾದ ಮಾಡಲು ಹೋಗಿ ದಯವಿಟ್ಟು ಅವರ ಮುಖಕ್ಕೆ ಮಸಿ ಬಳಿಯಬೇಡಿರಿ.
    ಮಾನವೀಯ ವಿಚಾರಗಳು, ತರ್ಕಬದ್ಧ ವಿಚಾರಗಳು, ವಿಶಾಲಮನೋಭಾವದ ವಿಚಾರಗಳು ಮಾತ್ರ ಅವರವು. ಅವರ ಯೋಗ್ಯ ವಿಚಾರಗಳಿಂದ ಹಿರಿತನ ಪಡೆಯುವ ಸಾಮರ್ಥ್ಯವಿರುವ ಅವರುಗಳಿಗೆ ಪವಾಡಗಳ ನೆರವು ಬೇಕಿಲ್ಲ.
    -ಸುಧಾಕರ ಶರ್ಮಾ

    ReplyDelete
  12. ಶ್ರೀಧರರೇ, ಒಂದು ಮಾತು ತುಂಬಾ ಖುಷಿ ತಂದಿತು, ಅದೆಂದರೆ ಶ್ರೀ ಶರ್ಮರೂ ಸಹ ಶ್ರೀಧರಸ್ವಾಮಿಗಳ, ರಮಣಮಹರ್ಷಿಗಳ ಮುಂತಾದವರ ಬಗ್ಗೆ ಗೌರವವಿರುವುದಾಗಿ ಸ್ಪಷ್ಟಪಡಿಸಿರುತ್ತಾರೆ. ತಮ್ಮ ಸಾಮಾಜಿಕ ಕಳಕಳಿಗೆ ನಾನು ಖಂಡಿತಾ ವಿರುದ್ಧವಿಲ್ಲ. ಆದರೆ ಸಮಾಜವನ್ನು ಒಗ್ಗೊಡಿಸುವ ಭರದಲ್ಲಿ ಅಪಥ್ಯವಾದದ್ದನ್ನೇ ಉಳಿದವರು ಹೇಳಿದ್ದನ್ನೇ ನಾವು ಹೇಳಿದರೆ ಸರಿಯೇ? ’ಬ್ರಾಹ್ಮಣರು ವೇದವನ್ನು ತಮ್ಮದೇ ಎಂತ ಬೇರೇ ಯಾರಿೂ ಕಲಿಸಲಿಲ್ಲ’ ಎಂದು ಎಷ್ಟೋ ಜನ ಹೇಳುತ್ತಾರೆ. ಅದಕ್ಕೆ ಉತ್ತರ ನೀಡಿದ್ದೇನೆ. ಸಮಾಜದಲ್ಲಿ ಯಾರೂ ಯಾವ ವರ್ಗವನ್ನೂ ಕಡೆಗಣಿಸಿದ್ದಲ್ಲ--ಅವರವರ ಸಂಸ್ಕಾರಕ್ಕೆ ತಕ್ಕ ಹಾಗೇ ವರ್ಗಗಳ ನಿರ್ಮಾಣವಾಯಿತು. ಆಯಾಯ ವರ್ಗಗಳವರು ಅವರವರೇ ಆದ ಸಂಪ್ರದಾಯ ಆಚರಣೆಗಳನ್ನು ನಡೆಸಿಬಂದರು. ಅಚಾರ-ವಿಚಾರಗಳಲ್ಲಿ ಸ್ವಚ್ಛತೆಯನ್ನು ಬಯಸಿದ್ದ ಜನಾಂಗ ಬ್ರಾಹ್ಮಣರದ್ದಾದ್ದರಿಂದ ಸಹಜವಾಗಿ ಅವರು ಇತರೇ ಜನಾಂಗಗಳ ಜೊತೆ ತೀರಾ ಬೆರೆಯಲಿಲ್ಲ. ಆದರೆ ಅವರನ್ನು ತುಳಿದರು ಎಂದರೆ ಅದು ನಾವೆಸಗುವ ಅಪಚಾರ. ಇವತ್ತೂ ಕೂಡ ಅತ್ಯಂತ ಸ್ಥಿತಿವಂತರು ಬೇರೇ ವರ್ಗಗಳೇ ಹೊರತು ಸಮಾನ್ಯವಾಗಿ ಬ್ರಾಹ್ಮಣರು ಉಂಡುಟ್ಟು ಇರುವವರು ಅಲ್ಲವೇ? ವೃತ್ತಿಯಲ್ಲೇ ದೇವರನ್ನು ಕಾಣುವುದು ಸರಿಯೇ ಆದರೆ ವೇದವನ್ನು ಓದಬೇಕೆನ್ನುವವರಿಗೆ ಕೆಲವು ಆಚಾರ-ವಿಚಾರಗಳ ತಿದ್ದುಪಡಿ ಬೇಕಾಗುತ್ತದೆ ಎಂದಿದ್ದೇನೆ.

    ReplyDelete
  13. ಶ್ರೀಧರ್ ರವರ ಮಾತುಗಳಿಗೆ ಪೂರಕವಾಗಿ ಕೆಲವು ಮಾಹಿತಿ.
    Retire ಆದವರಿಗೆ ವೇದ, ಮಠ, ಆಧ್ಯಾತ್ಮ ಎಂಬುದು ಸಾಮಾನ್ಯವಾದ ಅಭಿಪ್ರಾಯ.
    ವೇದದಲ್ಲಿ ಏನಿದೆ ಎಂಬ ಬಗ್ಗೆ ಅರಿವಿಲ್ಲದೆ ಆಡುವ ಮಾತಿದು.
    ಜೀವನವನ್ನು ಹೇಗೆ ನಡೆಬೇಕು ಎಂಬುದು ವೇದಗಳ ಸಾರಾಂಶ. ಇದನ್ನು ಜೀವನದ ಪ್ರಾರಂಭದಲ್ಲಿ ತಿಳಿಯಬೇಕೋ, ಜೀವನದ ಕೊನೆಯಲ್ಲಿ ತಿಳಿಯಬೇಕೋ?!
    Driving ಪ್ರಯಾಣದ ಮೊದಲಲ್ಲಿ ಕಲಿಯಬೇಕೋ, ಪ್ರಯಾಣದ 'ಕೊನೆ'ಯಲ್ಲಿ ತಿಳಿಯಬೇಕೋ?!
    ವೇದಗಳ ಸರಿಯಾದ ವಿಚಾರಗಳನ್ನು ಮೊದಲೇ ತಿಳಿದರೆ ಜೀವನ ಸುಖಮಯವಾಗುತ್ತದೆ. ಮುಪ್ಪಾದ ಮೇಲೆ ತಿಳಿದರೆ ತಪ್ಪೇನಿಲ್ಲ, ಆದರೆ, ಮೊದಲೇ ತಿಳಿದಿದ್ದರೆ ಚಿನ್ನಾಗಿತ್ತಲ್ಲ ಎಂಬ ಪಶ್ಚಾತ್ತಾಪ ತಪ್ಪಿದ್ದಲ್ಲ.
    ಋಷಿಃ ಸ ಯೋ ಮನುರ್ಹಿತಃ - ಮನುಕುಲದ, ಸಕಲಜೀವರಾಶಿಗಳ ಹಿತವನ್ನು ಬಯಸುವವನೇ ಋಷಿ, ಋಷಿಃ ದರ್ಶನಾತ್ - ಇದ್ದದ್ದನ್ನು ತಿಳಿದವನೇ, ಸತ್ಯವನ್ನು ಕಂಡವನೇ ಋಷಿ, ಯಾರೇ ಆಗಿರಬಹುದು. ಈ ಗುಣಗಳಿಲ್ಲವೋ, ಮತ್ತೆ, ಯಾರೇ ಆಗಿರಬಹುದ, ಜಗತ್ತೇ ಅವರನ್ನು ಋಷಿ ಎನ್ನಬಹುದು, ಅವರು ಋಷಿಗಳಲ್ಲ!!
    ಯಾವುದು ತುಂಬಿಸಿಕೊಡುತ್ತದೋ ಅದು "ಪರ್ವ" (ಪೃ ಪೂರಣ ಪಾಲನಯೋಃ - ಮೂಲ ಧಾತು ಯಾವುದು ತುಂಬಿಸುತ್ತದೆಯೋ, ಪಾಲಿಸುತ್ತದೆಯೋ). ಇದೇ 'ಪಬ್ಬ'ವಾಗಿ ಕೊನೆಗೆ "ಹಬ್ಬ"ವಾಗಿದೆ. ನಮ್ಮ ಕೊರತೆಗಳನ್ನು ನೀಗುವ ಯಾವುದೇ ಆಚರಣೆಯೂ ಹಬ್ಬವೇ. ನಮ್ಮ ಅತ್ಯಂತ ಕೊರತೆ "ಜ್ಞಾನ"ವೇ ಆಗಿರುವುದರಿಂದ ಕಣ್ಣುಮುಚ್ಚಿಕೊಂಡು ಯಾವುದೇ ಹಬ್ಬದ ಆಚರಣೇ ಮೂಲ ಉದ್ದೇಶಕ್ಕೇ ಕೊಡಲಿಪೆಟ್ಟು ಕೊಟ್ಟಂತೆ.
    ಅಗ್ನಿ ಮೊದಲಾದವರು "ಋಷಿ"ಗಳು. ಸ್ತ್ರೀಲಿಂಗದಲ್ಲಿ "ಋಷಿಕೆ"ಯರು. ಸತ್ಯವನ್ನು ದರ್ಶನ ಮಾಡಿಕೊಂಡ ಋಷಿಗಳು ಋಷಿಕೆಯರೂ ಅನೇಕರಿದ್ದಾರೆ. ಈ ದರ್ಶನವು ಬಾಹ್ಯ ಇಂದ್ರಿಯಗಳಿಗಾಗುವಂತಹುದಲ್ಲ. ಅಂತರಂಗದಲ್ಲಿ ಆಗುವ ಸಾಕ್ಷಾತ್ಕಾರ. ಅಂತರಂಗದಲ್ಲಿ ನಮ್ಮ ನಮ್ಮ ಸಂಸ್ಕಾರಗಳು ಎಗರಾಡುತ್ತಿರುವಾಗ ಈ ಸಾಕ್ಷಾತ್ಕಾರ ಆಗದು. ನಾವು ನಮ್ಮ ನಮ್ಮ ಒಳಹೊಕ್ಕು ಈ ಎಗರಾಡುವಿಕೆಯನ್ನು ನಿರೋಧಿಸಿದರೆ, ಇರಬಹುದಾದ ದುಷ್ಟಸಂಸ್ಕಾರಗಳನ್ನು ತೊಳೆದುಕೊಂಡರೆ ಅನುಭವಕ್ಕೆ ಬರುವ ಜ್ಞಾನವೇ ವೇದ. ಯಾರಿಗೂ ಸಾಧನೆಯ ಮಾರ್ಗದಲ್ಲಿ ಈ ಸಾಕ್ಷಾತ್ಕಾರವಾಗಬಹುದು.
    ನಾವೇನೇ "ಭಾವಿಸಿಕೊಂಡರೂ" ಇಂದ್ರಿಯಗಳಿಗೆ ಗೋಚರವಾಗುವವು "ಜಡ" ವಸ್ತುಗಳೇ! Inert Objectsಗಳೇ! ಜಡಪೂಜೆಯಿಂದ ನಮ್ಮ ಚಿಂತನೆಗಳೂ ಜಡವಾಗುವ ಅಪಾಯವಿದೆ. ಸಂಪ್ರದಾಯವಾದ್ದರಿಂದ ಆಚರಿಸುತ್ತೇನೆ, ಬಿಡಲಾರೆ - ಎಂದಾದರೆ ಅಡ್ಡಿಮಾಡಲು ಬೇರೆಯವರಿಗೆ ಹಕ್ಕಿಲ್ಲ!
    ಆದರೆ, ಪ್ರೀತಿಯಿಂದ ಎಚ್ಚರ ನೀಡುವುದು ಕರ್ತವ್ಯವಾಗಿರುತ್ತದೆ. ಎಚ್ಚರ ನೀಡಬೇಡಿ ಎಂದು ತಡೆಯಲೂ ಯಾರಿಗೂ ಹಕ್ಕಿಲ್ಲ!! ದೇತನನಾದ ಜೀವನು ಪರಮಚೇತನದ ಮೊರೆ ಹೊಕ್ಕರೆ ಚಂದವೇ ಹೊರತು ಜಡಕ್ಕೆ ತಲೆಬಾಗುವುದು ಬುದ್ಧಿವಂತಿಕೆಯೇ? ಅದಕ್ಕೆ ನಾವು ತಲೆಬಾಗಿದ್ದಾಗಲೀ ನಮ್ಮ ಮನಸ್ಸಿನಲ್ಲಿರುವ ಭಾವನೆಗಳಾಗಲಿ ತಿಳಿಯುತ್ತದೆಯೇ? ತನ್ನ ಅಸ್ತಿತ್ವವನ್ನೇ ಅರಿಯಲು ಅಸಮರ್ಥವಾಗಿರುವುದನ್ನೇ "ಜಡ" ಎಂದಿರುವುದು.
    ಸಾಧು-ಸಂತರನ್ನು ಹುಚ್ಚರೆಂದು ಶ್ರೀ ಶ್ರೀಧರ್ ರವರು ತಮ್ಮ ಮಾತುಗಳಲ್ಲಿ ಹೇಳಿದ್ದು ಕಾಣಲಿಲ್ಲ.
    ಹಿರಿಯರ ಬಗ್ಗೆ ಗೌರವವಿದೆ, ಅವರ ಸಾಧನೆಗಳು ನಮಗೆ ಎಂದೆಂದಿಗೂ ಅನುಕರಣೀಯವೇ. ಆದರೆ, ಅವರ ವಿಚಾರದಲ್ಲಿ ಪ್ರಕೃತಿನಿಯಮ, ಸೃಷ್ಟಿಕ್ರಮಗಳಿಗೆ ವಿರುದ್ಧವಾದ ಮಾತುಗಳಿದ್ದರೆ ಬಿಡುವುದೇ ಸೂಕ್ತ. ಅವರಾಗೂ ಪವಾಡಗಳಿಂದ ಹಿರಿತನವನ್ನು ಉಳಿಸಿಕೊಳ್ಲಬೇಕಾದ್ದಿಲ್ಲ. ಅವರನ್ನು market ಮಾಡುವ ಸಲುವಾಗಿ ಪರಂಪರೆಯಲ್ಲಿ ಅನುಯಾಯಿಗಳು ಮಾಡಿರುವ ಕಲಬೆರಕೆ. In fact ಇಂತಹವು ಅವರ ಗೌರವವನ್ನು ಹಾಳುಗೆಡವುತ್ತವೆ.
    ರಾಮಾಯಣ - ಭಾರತಗಳು ಮೊದಲಿಗೆ ಇತಿಹಾಸದ ದಾಖಲೆಗಳು.
    ಕಾಲಾನಂತರದಲ್ಲಿ ಕಲಬೆರಕೆಯ ಹಾವಳಿಗೆ ಸಿಕ್ಕಿದವು.
    ಇಂದು ಅವುಗಲನ್ನು "ಮುಖಬೆಲೆ"ಯ ಮೇಲೆ ಸ್ವೀಕರಿಸಲಾಗದು. ಸಂಶೋಧನೆಯ ನಂತರವೇ ಅವುಗಳಲ್ಲಿ ಯೋಗ್ಯವಾದುವನ್ನೇ ಸ್ವೀಕರಿಸಬೇಕಾಗಿದೆ. (ಆ ಬಗ್ಗೆ ಮತ್ತೊಮ್ಮೆ ಚಿಂತಿಸುವ).
    ಪುರಾಣಗಳ ಒಳಹೊಕ್ಕು ನೋಡಿದರೆ ಯಾರೋ ಅಜ್ಞಾನಿಗಳೋ, ಸ್ವಾರ್ಥಿಗಳೋ, ಪಂಥ-ಅನುಯಾಯಿಗಳನ್ನು ನಿರ್ಮಿಸಿಕೊಂಡು ಹೊಟ್ಟೆಹೊರೆಯುವವರೋ ಹುಟ್ಟುಹಾಕಿದ ಕಟ್ಟುಕಥೆಗಳೆಂದು ತಿಳಿಯುತ್ತದೆ. ಜನಗಳು ಸ್ವೀಕರಿಸಲಿ ಎಂಬುದಕ್ಕಾಗಿ ವ್ಯಾಸರ ಸಹಿಯನ್ನು ನಕಲು ಮಾಡಿದ್ದಾರೆ. ಉದಾಹರಣೆಗೆ,
    ಪ್ರಾಮಾಣಿಕ (?) ಪುರಾಣಗಳೆಂದು ಸ್ವೀಕರಿಸುವ 18 ಪುರಾಣಗಳಲ್ಲಿ, ವಿಷ್ಣುಪುರಾಣ, ಶಿವಪುರಾಣ, ದೇವೀಭಾಗವತಗಳನ್ನು ಏಕಕಾಲದಲ್ಲಿ ಸ್ವೀಕರಿಸುವುದಾದರೂ ಹೇಗೆ? ಮೊದಲನೆಯದನ್ನು ಸ್ವೀಕರಿಸಿ ವೈಷ್ಣವರೂ, ಎರಡನೆಯದನ್ನು ಸ್ವೀಕರಿಸಿ ಶೈವರೂ, ಮೂರನೆಯದನ್ನು ಸ್ವೀಕರಿಸಿ ಶಾಕ್ತರೂ ಆಗಿ ಅವುಗಳಲ್ಲಿ ಉಪ, ಉಪ, ಉಪ ಪಂಗಡಗಳಾಗಿ ಸಮಾಜ ನುಚ್ಚುನೂರಾಗಿರುವುದೂ, ಈ ಗುಂಪುಗಳಿ ಪರಸ್ಪರ ಕಾದಾಡುತ್ತಿರುವುದನ್ನೂ ದಿನನಿತ್ಯ ನೋಡುತ್ತಿದ್ದರೂ ಮತ್ತೂ ಪುರಾಣಗಳ ಭ್ರಮೆ ಬಿಡದಿದ್ದಲ್ಲಿ ಅಂತಹ ವ್ಯಕ್ತಿಗಳ ಸಂವೇದನಾಶೀಲತೆಯೇ ಪ್ರಶ್ನಾರ್ಹವಾಗುತ್ತದೆ. ನಂಬಿಕೆಯನ್ನಾಧರಿಸಿದ ಪ್ರತಿಕ್ರಿಯೆಗಿಂತ, ವಸ್ತುನಿಷ್ಠ, ವೈಜ್ಞಾನಿಕ, ತರ್ಕಬದ್ಧ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇನೆ.
    - ಸುಧಾಕರ ಶರ್ಮಾ.

    ReplyDelete
  14. ಒಮ್ಮೊಮ್ಮೆ ಪ್ರತಿಕ್ರಿಯಿಸಲು ಭಯವಾಗುತ್ತದೆ, ಕಾರಣ ನಾನೇನೂ ಬಹಳ ಗ್ರಂಥಗಳ ಅಧ್ಯಯನ ಮಾಡಿದವನಲ್ಲ.ಆದರೆ ನನಗೆ ಬದ್ಧಿ ಬಂದಮೇಲೆ ಐದು ದಶಕಗಳಿಂದ ಸಮಾಜದ ಆಗುಹೋಗುಗಳನ್ನು ಗಮನಿಸುತ್ತಿದ್ದೇನಲ್ಲಾ! ನನ್ನ ಅಂತರಾಳದಲ್ಲಿ ಏಳುವ ಭಾವನೆಗಳನ್ನು ಹೊರಚೆಲ್ಲದಿದ್ದರೆ ನನಗೆ ಸಮಾಧಾನ ಸಿಗುವುದಾದರೂ ಹೇಗೆ? ಅಂತೂ ಯಾರ ಮನಸ್ಸಿಗೂ ನೋವುಂಟು ಮಾಡಲು ನಾನು ಬರೆಯುವುದಿಲ್ಲ.ಯಾವ ಪೂರ್ವಾಗ್ರಹವೂ ನನಗಿಲ್ಲ. ನನ್ನ ಅಂತರಂಗವು ಒಪ್ಪದ ವಿಚಾರಗಳನ್ನು ನಾನು ಒಪ್ಪಲಾರೆ.ಅಂತೂ ನನ್ನೊಳಗೆ ಕಾಡುತ್ತಿದ್ದ ದುಮ್ಮಾನವನ್ನು ಹೊರಚೆಲ್ಲಿಯಾಗಿದೆ. ಅದೆಷ್ಟು ವಿಚಾರಗಳ ಚರ್ಚೆಯಾಯ್ತು! ಎಲ್ಲರಿಗೂ ಧನ್ಯವಾದಗಳು.

    ReplyDelete
  15. ಅದ್ಭುತವಾದ ಮತ್ತು ಅರ್ಥಪೂರ್ಣ ಚರ್ಚೆ ನಡೆದಿರುವುದು, ನಡೆಯುತ್ತಿರುವುದು ಮತ್ತು ನಡೆಯುವುದೇ 'ವೇದಸುಧೆ'ಯ ವೈಶಿಷ್ಠ್ಯ. ಮನಸ್ಸು ಪಕ್ವವಾಗುವುದು ಇಂತಹ ಚರ್ಚೆಗಳಿಂದಲೇ. ಚರ್ಚೆಯಲ್ಲಿ ಭಾಗವಹಿಸಿರುವವರು ಪೂರ್ವಾಗ್ರಹವಿಲ್ಲದೆ ಮತ್ತು ವೈಯಕ್ತಿಕ ಸಂಗತಿಗಳಿಗೆ ಹೆಚ್ಚು ಮಹತ್ವ ಕೊಡದೆ ಮನದಲ್ಲಿದ್ದುದನ್ನು ಹೊರಹಾಕುತ್ತಿರುವುದು ಒಳ್ಳೆಯ ಬೆಳವಣಿಗೆ. ವೇದ ಹೇಳುವುದೂ ಇದನ್ನೇ. ಯಾವುದನ್ನೂ ಚರ್ಚಿಸದೆ, ವಿಮರ್ಷಿಸದೆ, ಸರಿಯೆಂದು ತೋರದೆ ಒಪ್ಪಬಾರದು ಎಮಬುದನ್ನೇ!

    ReplyDelete
  16. ಶ್ರೀ ನಾಗರಾಜ್ ರವರೇ!
    ತಮ್ಮ ಸಮನ್ವಯದ ಮಾತುಗಳು ಆದರಣೀಯವಾಗಿವೆ.
    ಆರ್ಯಸಮಾಜವೆಂಬುದು ವೇದಗಳ ಪ್ರಚಾರಕ್ಕಾಗಿರುವ ಒಂದು ಸಂಸ್ಥೆ. ಅದಕ್ಕೆ ಅದರದೇ ಆದ ಯಾವುದೇ ವಿಚಾರಗಳಾಗಲಿ, Agenda ಅಗಲಿ ಇಲ್ಲ. ಸಂಸ್ಥೆಯನ್ನು ಬಿಡಿ. ಆ ಸಂಸ್ಥೆಯು ಯಾವ ವೇದಗಳ ವಿಚಾರಗಳಿಗಾಗಿ ಹುಟ್ಟಿತೋ ಆ ವೇದಗಳ ವಿಚಾರ ಬೇಕೇ ಬೇಡವೇ ಚಿಂತಿಸಿ. ಪೂರ್ವಾಗ್ರಹಗಳಿಲ್ಲದೆ, ಮುಕ್ತಮನಸ್ಸಿನಿಂದ ವಿಚಾರಗಳ ಪರಿಶೀಲನೆ ನಡೆಸೋಣ. ಸತ್ಯವನ್ನು - ಯಾವುದು, ಎಲ್ಲರಿಗೂ, ಎಲ್ಲ ಕಾಲಕ್ಕೂ, ಎಲ್ಲೆಡೆಯೂ ಒಂದೇ ಆಗಿದ್ದು, ಸಾರ್ವಭೌಮವಾಗಿದೆಯೋ ಅದನ್ನು - ಸ್ವೀಕರಿಸೋಣ. ಎಲ್ಲಿಂದ ಬಂತು ಎಂಬ ಪ್ರಶ್ನೆ ಅನವಶ್ಯಕ. ಅಂತೆಯೇ ಸುಳ್ಳು ಎಲ್ಲಿಂದ ಬಂದರೂ ಸರಿಯೇ, ಬಿಡಬೇಕಾದ್ದೇ!
    ಅವರವರ ಭಾವಕ್ಕೆ ಎನ್ನುವಾಗ ಭಾವಶುದ್ಧಿಯನ್ನು ಮರೆಯಬಾರದು. ಭಾವಶುದ್ಧಿಯಿದ್ದಾಗ ಈ ಮಾತು ಬಲು ಸುಂದರ. ಭಾವಶುದ್ಧಿಯಿರುವವರಲ್ಲಿ ಮಾನವೀಯ ವಿಚಾರಗಳ ಬಗ್ಗೆ ಎಂದಿಗೂ ಒಮ್ಮತವಿರುತ್ತದೆ. ಅದಿಲ್ಲದಿದ್ದಲ್ಲಿ ಅವರವರ ಭಾವಕ್ಕೆ ಎಂಬುದು ದಾರಿತಪ್ಪಿಸುತ್ತದೆ. ಈ ಮಾತನ್ನು ಭಾವಶುದ್ಧಿಯಿರುವ ಶರಣರು ಆಡಿದ್ದೋ? ಅಥವಾ ಭಾವಶುದ್ಧಿಯಿಲ್ಲದವರು ತಮಗೆ ಬೇಕಾದ ಸ್ವೇಚ್ಛೆಗಾಗಿ ಶರಣರ ಬಾಯಲ್ಲಿ ಆಡಿಸಿದ್ದೋ? - ಒಮ್ಮೆ ತೀವ್ರವಾಗಿ ಚಿಂತಿಸಬೇಕಾದ ವಿಷಯ.
    -ಸುಧಾಕರ ಶರ್ಮಾ

    ReplyDelete
  17. ಶ್ರೀಶರ್ಮಾಜಿ, ತಾವು ಅನ್ಯಥಾ ಭಾವಿಸದಿದ್ದರೆ ಒಂದು ಮಾತು ಹೇಳುತ್ತೇನೆ, ಭಾವಶುದ್ಧಿ ಬಹಳ ಉನ್ನತಮಟ್ಟಕ್ಕೆ ಬೆಳೆದಾಗ ಆತ/ಆಕೆ ಋಷಿ/ಋಷಿಕೆ ಯಾಗುವುದರಲ್ಲಿ ಸಂಶಯವಿಲ್ಲ. ಜನಸಾಮಾನ್ಯನಿಗೆ ಒಂದಿನಿತಾದರೂ ಸ್ವಾರ್ಥದ ಹೊಳಹು ಎಲ್ಲೋ ಒಂದು ಮೂಲೆಯಲ್ಲಿ ಬಂದುಬಿಡುತ್ತದೆ. ಅಥವಾ ತಾನು ಯಾರಿಗೇನು ಕಮ್ಮಿ ಎಂಬುದು ಉದ್ಭವವಾಗುತ್ತದೆ! ಸುಮಾರಿನ ಸನ್ಯಾಸಿಗಳಲ್ಲೂ ತಾವು ಮೇಲೆ ತಾವು ಮೇಲೆ ಎಂಬ ಭಾವವಿರುತ್ತದೆ ಎಂದಮೇಲೆ ಭಾವಶುದ್ಧಿಯ ಜನ ಬೆರಳೆಣಿಕೆಯಷ್ಟು. ನಾನು ಶರಣರು ಹೇಳಿದರು ಎಂದೆನೇ ಹೊರತು ಅವರು ಅವರ ಅನುಕೂಲಕ್ಕಾಗಿ ಹೇಳಿದರೋ ಎಂಬುದನ್ನು ಗ್ರಹಿಸಲಾರೆನಲ್ಲ!

    ಆರ್ಯ ಸಮಾಜದ ಬಗ್ಗೆ ನಮಗೆಲ್ಲಾ ಗೌರವವಿದೆ. ಬ್ರಹ್ಮಕುಮಾರಿಯರ ಬಗ್ಗೆಯೋ ಗೌರವವಿದೆ. ಆದರೆ ಬ್ರಹ್ಮಕುಮಾರಿಯರು ಹೇಳುವ ಶಿವ-ಶಂಕರ ಬೇಧದ ಕಥೆ ಒಂಚೂರೂ ಹಿಡಿಸುವುದಿಲ್ಲ. ನಿರಾಕಾರ ಪರಮಾತ್ಮ ಅಂತಾರೆ ಮತ್ತೊಮ್ಮೆ ಆತ ಜ್ಯೋತಿ ಸ್ವರೂಪ ಅಂತಾರೆ. ಜ್ಯೋತಿಗೂ ಸುಮಾರಾಗಿ ಒಂದು ಆಕಾರವನ್ನು ಕಲ್ಪಿಸಬಹುದಾಗಿದೆ! ಹೀಗಾಗಿ ಸಮಾಜದಲ್ಲಿರುವ ಹಲವು ಹತ್ತು ತತ್ವಗಳ ಸಂಸ್ಥೆಗಳೆಲ್ಲವನ್ನೂ ಆದರಿಸುವ ನಾವು ನಮ್ಮ ಮೂಲ ಛಾಯೆಯಾದ ಗುರುಪರಂಪರೆಗಳವರು ಹೇಳುವುದನ್ನು ಅಲ್ಲಗಳೆಯುವುದಿಲ್ಲ- ಅಲ್ಲಿ ಸತ್ಯವಿದೆ.ಅವರು ಹೇಳುವ ಕ್ರಮ ಬದಲಿದೆಯೇ ಹೊರತು ಅವರು ಹೇಳುವುದರಲ್ಲಿ ತಪ್ಪೇನೂ ಇಲ್ಲ. ಅಯ್ಯಪ್ಪ ಭಕ್ತರು ಕೇವಲ ತಿಂಗಳ ಮಟ್ಟಿಗೆ ಅಲ್ಲಿಗೆ ತೆರಳುವಾಗ ಕಷ್ಟಬಿದ್ದು ಹೇಗೆ ವ್ರತಾಚರಣೆ ಮತ್ತು ಮಡಿ ಅಂತಾರೋ ಅದೇ ರೀತಿ ನಿತ್ಯವೂ ದೇವರನ್ನು ಪೂಜಿಸುತ್ತಾ, ಯಜ್ಝಯಾಗಾದಿಗಳಲ್ಲಿ ತೊಡಗುವ ಕರ್ಮಠ ಬ್ರಾಹ್ಮಣರು ಬಾಹ್ಯ ಶುದ್ಧಾಚರಣೆಗಾಗಿ ಕೆಲವು ಜನರಿಂದ ದೂರ ಉಳಿದರೆ ತಪ್ಪೇನಿದೆ?

    ಅಹಂ ವೈಶ್ವಾನರೋ ಭೂತ್ವಾ -ಕೇಳಿದ್ದೇವೆ, ಹಾಗಂತ ಎಲ್ಲಾ ಪ್ರಾಣಿಗಳಲ್ಲಿ ಆತನಿದ್ದರೂ ನಾವು ಆತನನ್ನು ಸೇವಿಸುವಾಗ ಆತನಿಗೆ ಸ್ವಚ್ಛವಾಗಿದ್ದರೆ ಚೆನಾಗಿರುತ್ತದಲ್ಲವೇ? ಉದಾಹರಣೆಗೆ-ತಮ್ಮ ಗೆಳೆಯನೊಬ್ಬ ರಸ್ತೆಯಲ್ಲಿ ಬರುವಾಗ ಚರಂಡಿಯ ನೀರು ಸಿಡಿದು ಬಟ್ಟೆ ಎಲ್ಲಾ ಗಲೀಜಾಗಿದ ಎಂದಿಟ್ಟುಕೊಳ್ಳೋಣ. ಆತ ಮನೆಗೆ ಬಂದರೆ ದ್ಯಾವುದನ್ನೂ ಲೆಕ್ಕಿಸದೇ ನೀವು ಆತನನ್ನು ಆಲಂಗಿಸುವಿರೇ? [ಆಲಂಗಿಸುವ ಅಭ್ಯಾಸವುಳ್ಳವರಿಗೆ ಹೇಳಿದ್ದು] ಕೊಳೆಯಾದ ಆತನ ಬಟ್ಟೆ ಅಡ್ಡಿಬರುತ್ತದಲ್ಲವೇ? ಅದೇ ಆತ ಶುಭ್ರ,ಸ್ವಚ್ಛ ಬಟ್ಟೆಯಲ್ಲಿ ಇದ್ದರೆ ಆಗಿನ ಅನಿಸಿಕೆಯೇ ಬದಲಿರುವುದಲ್ಲವೇ? ಯಾವುದೇ ಸಭೆಗಳಲ್ಲಿ ದೂಷಿತ ಹವೆಯ ದುರ್ನಾತವನ್ನು ತಡೆಯಲು ದೂಪವನ್ನು [ಪರಿಮಳ ದ್ರವ್ಯಗಳನ್ನು] ಬಳಸುತ್ತೇವಲ್ಲವೇ? ಅದೇ ರೀತಿ ಹಿಂದಕ್ಕೆ ’ಮಡಿ’ ಎಂಬ ಆಚರಣೆ ಹುಟ್ಟಿದ್ದು ಕೇವಲ ಸ್ವಚ್ಛತೆಗಾಗಿ ಅಲ್ಲವೇ? ಈ ಮಡಿಯನ್ನೇ ’ಓಹೋ ಬ್ರಾಹ್ಮಣರು ಅವರಿಗೆ ಮಹಾಮಡಿ, ಹತ್ತಿರಸೇರಿಸುವುದಿಲ್ಲ’ ಎಂಬ ಜನ ಅಯ್ಯಪ್ಪ ಭಕ್ತರನ್ನು ಹತ್ತಿರಸೇರಲಿ! ಆಗ ಗೊತ್ತಾಗುತ್ತದೆ.

    ತಾವು ಹೇಳುವ ಹೃದಯಾಂತರಳದ ಶುದ್ಧಿ-ಅಂತಃಶುದ್ಧಿ--ಇದರ ಅರ್ಥವೇ ಗೊತ್ತಿಲ್ಲದ ಜನರು ಬಹುಸಂಖ್ಯಾಕರು. ಹೀಗಾಗಿ ಹೃದಯದಲ್ಲಿ ಒಳ್ಳೆಯ ಭಾವ ತಾಳುವುದೆಂದರೆ ಅದು ಅರಿಷಡ್ವರ್ಗಗಳ ನಿಗ್ರಹವಿದ್ದವರಿಗೆ ಮಾತ್ರ ಸಾಧ್ಯ. ಅದಿಲ್ಲದವರದು ಕೇವಲ ತಾತ್ಕಾಲಿಕ ಒಳ್ಳೆಯತನ! ಈ ಎಲ್ಲಾ ಸಮಸ್ಯೆಗಳ ಇತಿಮಿತಿಯನ್ನು ಪರಿಶೀಲಿಸಿದ ಋಷಿಗಳು ಮೂರ್ತಿಯನ್ನು ನೋಡಾದರೂ ಮನಸ್ಸನ್ನು ನಿಗ್ರಹಿಸಲಿ ಎಂದು ಅನುಗ್ರಹಿಸಿದರು. ಮೂರ್ತಿಯೇ ಬೇಡದೇ ಹಾಗೇ ನಿರಾಳ ಹೃದಯದಲ್ಲಿ ಯಾವ ಶಕ್ತಿಯನ್ನು ಹೇಗೆ ಕರೆಯುತ್ತಾರೆ ಜನ, ತಾವು ಮಾಡಿದ್ದೆಲ್ಲಾ ಒಳ್ಳೆಯದೇ ಎಂದು ಅವರಂದುಕೊಂಡರೆ ಆಗ ತಪ್ಪು ಎಂದು ಅವರಿಗೆ ತಿಳಿಯುವುದು ಹೇಗೆ?

    ಕೊನೆಯೆ ಮಾತು ಬ್ರಾಹ್ಮಣರೆಂದು ಇತರ ಎಲ್ಲ ಸಮಾಜದ ಕೆಂಗಣ್ಣಿಗೆ ಗುರಿಯಾದ ಜನ ಕ್ಷತ್ರಿಯನಾದ ರಾಮನನ್ನೂ ಯಾದವನಾದ ಕೃಷ್ಣನನ್ನೂ ದೇವರೆಂದು ಪೂಜಿಸಿದರಲ್ಲವೇ? ಆದರೆ ಅದು ಯಾಕೆ ಯಾರಿಗೂ ಕಾಣಿಸುತ್ತಿಲ್ಲ.

    ಚರ್ಚೆಯಲ್ಲಿ ತಾವೆಲ್ಲ ದಯವಿಟ್ಟು ಗಮನಿಸಿ--ಇದು ಯಾರದೇ ವಿರುದ್ಧ ಆಡಿರುವ ಮಾತುಗಳಲ್ಲ, ಬದಲಾಗಿ ಸಮಾಜದ ಕೆಲವು ಮುಖಗಳ ಅವಲೋಕನ, ಯಾರಿಗಾದರೂ ನನ್ನಿಂದ ನನ್ನ ನೇರ ನುಡಿಗಳಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಇನ್ನೊಮ್ಮೆ ಕೇಳುತ್ತೇನೆ.

    ReplyDelete
  18. ವಿಚಾರ ಮಂಥನ ನಡೆಯುವಾಗ ವೈಯಕ್ತಿಕವಾಗಿ ತೆಗೆದುಕೊಳ್ಳುವಂತಿಲ್ಲ.ನೀವು ಒಂದು ದೃಷ್ಟಿಕೋನವನ್ನು ಹೊರಹಾಕಿದ್ದೀರಿ. ಸುಧಾಕರಶರ್ಮರು ಏನು ಹೇಳುತ್ತಾರೋ ನೋಡೋಣ. ಅಂತೂ ನನ್ನ ಮನದೊಳಗೆ ನನಗೆ ಕೊರೆಯುತ್ತಿದ್ದ ವಿಚಾರವನ್ನು ಹೊರಹಾಕಿ ನಾನು ನಿರಾಳವಾದೆ. ಆರೋಗ್ಯಕರ ಚರ್ಚೆ ನಡೆಯುತ್ತಿದೆ. ಧನ್ಯವಾದಗಳು.

    ReplyDelete
  19. narasimhayya bareda arinjayana pattedaari kaadambariyondu kaalagarbhadalli alidu saaviraaru varshada nantara mundina peeligeya itihaasakaranige yaavado pettigeyalli doreyuttade. adannu oduttaa hodante adaralli baruva bengaluru, mejestic vrutta, brigade raste, vidhaana soudha ellavu purakavembate itihaasada kaalakoshadalli kandu baruva sthalagalu utkhananada veleyalli daakhaalaati honduttave. ellavannu tale haaaki nodida itihaasakaara heluttaane arinkjayanemba obba mahaa pattedaranobba idda endu.

    illi arinjaya iddano illo kaalpanikavo vaastavavo ellakkinta mukhya avaninda naavu padeyabekaadudeno embudaratta charcheyaadare uditavalle. adakke rushi mattu nadi mula nodabaaradennuvadallave?

    ReplyDelete
  20. ಶ್ರೀ ಸೀತಾರಾಮ್, ನಮಸ್ತೆ,
    ನಮ್ಮ ಋಷಿ ಪರಂಪರೆ ಬಗ್ಗೆ ನನಗೆ ಹೆಮ್ಮೆ ಇದೆ.ಅವರು ತಮ್ಮ ತಪಸ್ಸಿನ ಮೂಲಕ ನಮಗೊಂದು ಜೀವನ ಮಾರ್ಗವನ್ನು ಕೊಟ್ಟಿದ್ದಾರೆಂಬ ಅಚಲ ನಂಬಿಕೆ ನನ್ನದು. ಪುರಾಣಗಳ ಪ್ರಭಾವದಿಂದ ವೇದದ ಮೂಲ ವಿಚಾರಗಳು ಬೆಳಕಿಗೆ ಬಾರದೆ ನಮ್ಮ ಸಮಾಜಕ್ಕೆ ಯಾವ ನಿಜವಾದ ದೈವೀ ಜ್ಞಾನ ಸಿಗಬೇಕಿತ್ತೋ ಆ ಜ್ಞಾನದಿಂದ ಸ್ವಲ್ಪ ಮಟ್ಟಿಗೆ ವಂಚಿತರಾಗಿದ್ದಾರೆಂಬ ಅನುಮಾನ ನನ್ನನ್ನು ಕಾಡಿದೆ. ಹಾಗಾಗಿ ಪುರಾಣಗಳನ್ನು ಬರೆದವರು ಋಷಿಮುನಿಗಳೇ? ಎಂಬ ಪ್ರಶ್ನಾರ್ಥಕ ಚಿನ್ಹೆ ಹಾಕಿದೆ ಅಷ್ಟೆ.ಆದರೆ ಒಂದು ಹಂತದಲ್ಲಿ ಪುರಾಣಗಳು ಸಮಾಜದಲ್ಲಿ ಸತ್ಪರಿಣಾಮವನ್ನು ಬೀರಿರುವುದು ಸುಳ್ಳಲ್ಲ.ಅದರೆ ಸಾಕ್ಷಾತ್ ದೈವೀ ವಾಣಿಯಾದ ವೇದಗಳ ಪ್ರಭಾವ ಇನ್ನೂ ಹೆಚ್ಚು ಜನರನ್ನು ತಲುಪಬೇಕೆಂಬ ಹಂಬಲ ನನ್ನದು.ಅದಕ್ಕಾಗಿ ಸರಳವಾಗಿ ವೇದದ ಪರಿಚಯಮಾಡುತ್ತಿರುವ ಶ್ರೀ ಸುಧಾಕರಶರ್ಮರ ಬೆನ್ನು ಹತ್ತಿರುವೆ. ಬೇರೆ ಯಾರೇ ಆಗಲೀ ವೇದವನ್ನು ಸರಿಯಾಗಿ ಪರಿಚಯಿಸುವವರು ಬೇಕು. ಅಂತವರ ವಿಳಾಸ ದೊರೆತರೆ ನಾನು ಅವರಿದ್ದೆಡೆಗೆ ಹೋಗಿಯೇ ಒಂದಿಷ್ಟು ವಿಚಾರ ಸಂಗ್ರಹಿಸಿ ವೇದಸುಧೆಯ ಮೂಲಕ ಹಂಚುವ ಪೋಸ್ಟ್ ಮನ್ ಕೆಲಸ ಮಾಡಲು ಸದಾ ಸಿದ್ಧ.

    ReplyDelete