Pages

Friday, January 14, 2011

ಸತ್ತ ಕೈ ಮತ್ತೆ ಬಂದಾಗ, ಭಾಗ-೨

ನನ್ನ ಕೈಗೆ ಪುನರ್ಜೀವ ಬಂದ ಪವಾಡದ ಬಗ್ಗೆ ಇಂದು ಬರೆಯುತ್ತೇನೆಂದು  ನಿನ್ನೆ ತಿಳಿಸಿದ್ದೆ. ಏನ್ ಸಾರ್ ಅದು ಪವಾಡ? ಯಾವ ಸ್ವಾಮೀಜಿ ಹತ್ತಿರ ಹೋಗಿದ್ರಿ? ಅಂತಾ ನನ್ನ ಪರಿಚಯದವರು ಆಗಲೇ ನನಗೆ ಫೋನಿನಲ್ಲಿ ಕೇಳಿದ್ದಾಯ್ತು. ಪವಾಡ! ಆಬಗ್ಗೆ  ನಾನು ಏನೂ ಬರೆಯುವುದಿಲ್ಲ. ಆದರೆ ನನಗೆ ಪವಾಡವಾಗಿ ಗುಣಪಡಿಸಿದ್ದು ಪ್ರಾಣಾಯಾಮ!!    ಡಾ|| ಅರುಣಾಚಲಯ್ಯ  ಎಂಬ ವೈದ್ಯರೊಬ್ಬರು ಹಾಸನದಲ್ಲಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆಂದು ಕಾಣುತ್ತೆ. ಒಂದು ಪ್ರಾಣಾಯಾಮ ತರಗತಿಯಲ್ಲಿ  ನನ್ನ ಅನುಭವವನ್ನು ಹೇಳಿದಾಗ, ಅವರು ಗೇಲಿ ಮಾಡಿ ಬಿಟ್ಟರು. ನಾನೇನೂ ಸುಮ್ಮನಾಗಲಿಲ್ಲ. "ಅಲ್ಲಾ ಡಾಕ್ಟ್ರೇ, ಪ್ರಾಣಾಯಾಮ ಅಭ್ಯಾಸ ಮಾಡುತ್ತಲೇ ನನ್ನ  ಕೈಗೆ ಪುನರ್ಜೀವ ಬಂದು ಈಗ ನಾನೂ ಎಲ್ಲರಂತೆ  ಸಾಕ್ಷಿಯಾಗಿ ಎದುರಿಗೇ ನಿಂತಿರುವಾಗ ,ನೀವು ತಮಾಶೆ ಮಾಡ್ತೀರಲ್ಲಾ! ಹಾಗಾದರೆ ನನ್ನ ಅನುಭವವೇ ಸುಳ್ಳೇ?"-ಎಂದು ಗಟ್ಟಿಯಾಗೇ ಹೇಳಿದಾಗ ಅವರು ಸುಮ್ಮನಾಗಬೇಕಾಯ್ತು. ಅಷ್ಟೇ ಅಲ್ಲ, ಅವರೂ ಪ್ರಾಣಾಯಾಮ ತರಗತಿಗಳಿಗೆ ಬರಲು ಆರಂಭಿಸಿ ಈಗ ಅವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಟೀಚರ್  ಆಗಿರಬಹುದು.
ಈಗ ನನ್ನ ಕಥೆ ಮತ್ತೆ ಶುರು ಮಾಡುವೆ. ನನ್ನ ಎಡಗೈ ನಿತ್ರಾಣದಿಂದ  ನಾನು ಮಾನಸಿಕವಾಗಿ ಕುಸಿದುಹೋಗಿದ್ದೆ. ಒಂದು ದಿನ ಬೆಳಿಗ್ಗೆ ನ್ಯೂಸ್ ಪೇಪರ್ ಜೊತೆಯಲ್ಲಿ ಒಂದು ಕರಪತ್ರವು  ನನ್ನ ಮನೆ ಬಾಗಿಲಲ್ಲಿ ಬಿದ್ದಿತ್ತು.  ಎಸ್.ಎಸ್.ವೈ [ಸಿದ್ಧ ಸಮಾಧಿ ಯೋಗ] ತರಗತಿಯು ಆರಂಭವಾಗುವ ಬಗ್ಗೆ ಪ್ರಕಟಣೆ ಅದರಲ್ಲಿತ್ತು. ನೋಡಿದೆ"ಬಿ.ಪಿ. ಶುಗರ್, ಹೃದ್ರೋಗ, ಇತ್ಯಾದಿ ಯಾವುದೇ ಹಳೆಯ ರೋಗಗಳಿಗೆ ಯಾವ ಔಷಧ ವಿಲ್ಲದೆ ಚಿಕಿತ್ಸೆ"
ಕರಪತ್ರ ನೋಡಿದೊಡನೆ  ಧ್ಯಾನ-ಪ್ರಾಣಾಯಾಮ ತರಗತಿಯನ್ನು ಸೇರಲು ನಿರ್ಧರಿಸಿದೆ. ಹಾಸನದ ಜವೇನಹಳ್ಳಿ ಮಠದಲ್ಲಿ ಆರಂಭವಾದ ಆ ಶಿಭಿರವನ್ನು ನಡೆಸಿಕೊಟ್ಟವರು ಶ್ರೀ ಸುರೇಶ್ ಗುರೂಜಿ. ತರಗತಿ ಪ್ರಾರಂಭವಾಯ್ತು. ವಜ್ರಾಸನದಲ್ಲಿ ಕುಳಿತು ಪ್ರಾಣಾಯಾಮ ಅಭ್ಯಾಸ ಶುರುಮಾಡಬೇಕು. ಎರಡೂ ಹಸ್ತಗಳನ್ನು ಸೊಂಟದ ಮೇಲಿಡಬೇಕು. ಬಲಗೈ ಇಡಲು ಸಾಧ್ಯ, ಎಡಗೈ?    ಎಡ ಹಸ್ತವನ್ನು ಬಲಹಸ್ತದ ಸಹಾಯದಿಂದ ಸೊಂಟದ ಮೇಲಿಟ್ಟೆ. ವಿಭಾಗಶ: ಪ್ರಾಣಾಯಾಮ ಶುರುವಾಯ್ತು. ಅಂದು ಕಳೆಯಿತು. ಎರಡನೆಯ ದಿನವೂ ಆರಂಭದಲ್ಲಿ ಸೊಂಟದ ಮೇಲೆ ಎಡಹಸ್ತವನ್ನು ಬಲಹಸ್ತದ ಸಹಾಯದಿಂದಲೇ ಇಟ್ಟು  ಪ್ರಾಣಾಯಾಮ ಶುರು ಮಾಡಿದೆ. ಆನಂತರ ಹಸ್ತಗಳನ್ನು ಕೊಂಕಳಲ್ಲಿ ಇಡಬೇಕು. ಮತ್ತೆ ಅದೇ ರೀತಿ  ಎಡಗೈಯ್ಯನ್ನು  ಬಲಗೈ ಸಹಾಯದಿಂದ ಇಟ್ಟೆ. ಹೀಗೆ ಎರಡೂ ಸ್ಥಿತಿಯ ಪ್ರಾಣಾಯಾಮಗಳನ್ನು ಎರಡೂ ದಿನ ನಾಲ್ಕಾರು ಭಾರಿ ಪ್ರಯತ್ನ ಪೂರ್ವಕವಾಗಿ ಮಾಡಿದೆ. ಮೂರನೆಯ ದಿನ ಪ್ರಾಣಾಯಾಮ ತರಗತಿಯ ಆರಂಭದಲ್ಲಿ ಸ್ವಲ್ಪ ಎಡಗೈಯ್ಯನ್ನು  ಬಲಗೈ ಸಹಾಯದಿಂದಲೇ ಸ್ವಲ್ಪ ಸುಲಭವಾಗಿ ಸೊಂಟದಮೇಲಿಡಲು ಸಾಧ್ಯವಾಯ್ತು. ಆದಿನ ನನ್ನ ಜೀವನದಲ್ಲಿ ಮರೆಯಲಾಗದ ದಿನ.ಆಶ್ಚರ್ಯ! ಪ್ರಾಣಾಯಾಮ ಅಭ್ಯಾಸ ಮಾಡುತ್ತಾ ಮಾಡುತ್ತಾ ಕೈಯಲ್ಲಿ ಶಕ್ತಿಯ ಸಂಚಾರ ಆರಂಭ!! ಚಕಿತನಾದೆ. ಎನೋ ಒಂದು ಶಕ್ತಿಯು ಪ್ರವಹಿಸುವಂತೆ ಭಾಸವಾಯ್ತು. ಅಬ್ಭಾ! ಅದೆಷ್ಟು ದಿಗಳಿಂದ ಕಳೆದುಕೊಂಡಿದ್ದ ಕೈಯ್ಯನ್ನು ನಿಧಾನವಾಗಿ ಆಡಿಸುವಂತಾಯ್ತು. ಅಂದು ನನಗೆ ಹಬ್ಬ!!
ನೋಡಿ, ಮನುಷ್ಯನಿಗೆ ಎಲ್ಲಾ ಚೆನ್ನಾಗಿದ್ದಾಗ ಜೀವನ ಸಪ್ಪೆ ಎನಿಸುತ್ತೆ. ಕೊಟ್ಟಿದ್ದನ್ನು ಭಗವಂತ ಕಿತ್ತುಕೊಂಡು ಮತ್ತೆ ಕೊಟ್ಟಾಗ ನಮಗೆ ಅದರ ಮಹತ್ವ ಅರ್ಥವಾಗುತ್ತೆ. ಕ್ರಮೇಣ ದಿನಕಳೆದಂತೆ ಅದರ ಮಹತ್ವ ಮರೆಯಾಗುತ್ತಾ ಬರುತ್ತೆ. ನಾನು ಈ ವಿಚಾರದಲ್ಲಿ ಒಬ್ಬ ಪಕ್ಕಾ  ಉಧಾಹರಣೆಗೆ ಯೋಗ್ಯ. ಕಾರಣವೇನೆಂದರೆ ಧ್ಯಾನ-ಪ್ರಾಣಾಯಾಮವನ್ನು ಸತತವಾಗಿ ಎರಡು-ಮೂರು ವರ್ಷಗಳು ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದ ನಾನು ಕ್ರಮೇಣ ಅನ್ಯಾನ್ಯ ಸಾಮಾಜಿಕ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸಿಕೊಂಡವನು ನನ್ನ ಜೀವನ ಕ್ರಮವನ್ನು ವೆತ್ಯಾಸ ಮಾಡಿಕೊಂಡೆ. ಈಗ ಸಣ್ಣಪುಟ್ಟ  ರೋಗಗಳು ನನ್ನನ್ನು ಭಾಧಿಸುತ್ತವೆ. ಎಲ್ಲಕ್ಕೂ ನನ್ನಲ್ಲೇ ಪರಿಹಾರವಿದೆ, ಆದರೆ ನಾನೊಬ್ಬ ಭಾವುಕ. ಯವುದೋ ವಿಚಾರಕ್ಕೆ ಅಂಟಿಕೊಂಡರೆ  ನನ್ನ ಎಲ್ಲಾ ಸಮಯವನ್ನೂ ಅದಕ್ಕೆ ಮೀಸಲು ಮಾಡಿ ನನ್ನನ್ನು ನಾನು ಮರೆಯುತ್ತೇನೆ. ನೀವು ಹೀಗಾಗಬೇಡಿ ಎಂದು ವಿನಂತಿಸಲೇ ನಾನು ಈ ಪುಟ್ಟ  ಬರಹವನ್ನು  ಮುಕ್ತಾಯ ಮಾಡುವೆ.
--------------------------------------
 ಪ್ರಾಣಾಯಾಮದಿಂದ ನನಗೆ ಗುಣವಾಯ್ತೆಂದರೆ  ಸೋದರಿ ಚಿತ್ರನಂಬಲಾಗುತ್ತಿಲ್ಲವೆಂದು ತಿಳಿಸಿದ್ದಾರೆ. ಯಾವ ಪ್ರಾಣಾಯಾಮ? ಎಂದಿದ್ದಾರೆ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಈ ಪ್ರಾಣಾಯಾಮವನ್ನು "ವಿಭಾಗೀಯ ಪ್ರಾಣಾಯಾಮಗಳು" ಎನ್ನುತ್ತಾರೆ. ಯೋಗಶಾಸ್ತ್ರದಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ನನಗೆ ವರವಾದ ವಿಭಾಗೀಯ ಪ್ರಾಣಾಯಾಮದ ಒಂದು ಚಿಕ್ಕ ಕ್ಲಿಪ್ ಇಲ್ಲಿ ಹಾಕಿರುವೆ ಸೋದರಿ ಚಿತ್ರ ಇವರಿಗಾಗಿ. ಎಸ್.ಎಸ್.ವೈ ನಲ್ಲಿ ಹೇಳಿಕೊಡಲಾಗುವ ಪ್ರಾಣಾಯಾಮಗಳಲ್ಲಿ  ಇದು ಒಂದು. ಇಲ್ಲಿ ನನಗೆ ಯಾರ ಬಗ್ಗೆಯೂ  ಪ್ರಚಾರಕೊಡಬೇಕೆಂಬ ಆಸೆ ಇಲ್ಲ. ಆದರೆ ನನ್ನ ಅನುಭವವನ್ನು ಮುಕ್ತವಾಗಿ ಹಂಚಿಕೊಂಡಿರುವೆ ಅಷ್ಟೆ.


7 comments:

  1. ಶ್ರೀಧರ್ ಸರ್,

    ಪ್ರಾಣಾಯಾಮದಿಂದ ಅಂತ ಹೇಳಿದ್ದೀರ. ಯಾವ ಪ್ರಾಣಾಯಾಮ ಅಂತ ತಿಳಿಸಿ. ಆದರೂ ನಂಬಲಾಗುತ್ತಿಲ್ಲ.

    ಚಿತ್ರ

    ReplyDelete
  2. ಶ್ರೀ ಶ್ರೀಧರರೇ, ನಿಮ್ಮ ಕಥೆ ಕೇಳಿದೆ. ಅನುಭವ ಜನಿತ! ಪ್ರಾಣಾಯಾಮದಲ್ಲಿ ಚಂದ್ರಬೇಧನ ಮತ್ತು ಭಯಕುಂಭಕ ಪ್ರಾಣಾಯಾಮಗಳು ಮಹತ್ತರ ಸ್ಥಾನ ಪಡೆದಿವೆ ಎಂದು ಕೇಳಿದ್ದೇನೆ. ಇನ್ನು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ನಿಮಗೆ ಯಾರು ಹೇಳಿಕೊಡಬೇಕೇಕೆ? ನೀವಿನ್ನೂ ಚಿಕ್ಕ ವಯಸ್ಸಿಗರಲ್ಲವಲ್ಲ! ಆದರೂ ಆರ್ಷೇಯ ಜೀವನಕ್ರಮದಲ್ಲಿ ತಾವಿದನ್ನು ಕಾಣಬಹುದಾಗಿದೆ. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು, ಶೌಚ-ಮುಖಮಾರ್ಜನೆ ಮುಗಿಸಿ ಯೋಗ-ಪ್ರಾಣಾಯಾಮಗಳಲ್ಲಿ ಒಂದು ಅರ್ಧಘಂಟೆಯನ್ನಾದರೂ ಕಳೆದರೆ ಇಡೀ ದಿನ ಶರೀರ ಲವಲವಿಕೆಯಿಂದಿರುತ್ತದೆ. ಆ ನಂತರ ಸ್ನಾನ,ಧ್ಯಾನ,ಪೂಜೆ ಇತ್ಯಾದಿ ಮುಗಿಸಿ ಉಪಹಾರ ಸ್ವೀಕರಿಸಿ ನಮ್ಮ ವೃತ್ತಿಯೆಡೆಗೆ ಮುಖಮಾಡುವುದು. ನಡುವೆ ಆಗಾಗ ಶುದ್ಧ ನೀರಿನ ಸೇವನೆ. ಮಧ್ಯಾಹ್ನ ೧-೨ ರ ಒಳಗೆ ಆದಷ್ಟೂ ನೆಲದಮೇಲೆ ಕುಳಿತು ಊಟ. ಮತ್ತೆ ನಂತರ ಮಧ್ಯೆ ಮಧ್ಯೆ ನೀರು. ಸಾಯಂಕಾಲ ಇಷ್ಟವಿದ್ದರೆ ಮತ್ತೆ ಸ್ನಾನ, ಧ್ಯಾನ. ರಾತ್ರಿ ೮:೩೦ ರೊಳಗೆ ಊಟ. [ಪ್ರಮಾಣದಲ್ಲಿ ಅತಿ ಕಮ್ಮಿ] ಆಮೇಲೆ ಸ್ವಲ್ಪಕಾಲ ನಿಸರ್ಗವಿಹಾರ. ನಂತರ ಅಧ್ಯಯನ, ವಿಶ್ರಾಂತಿ. --ಈ ಎಲ್ಲದರ ನಡುವೆ ಹೃದಯದಲ್ಲಿ ಸದಾ ಸರ್ವರಿಗೂ [ಹಿತಶತ್ರುಗಳಿಗೂ ಸೇರಿದಂತೇ] ಒಳಿತನ್ನೇ ಬಯಸುವುದು, ಪರೋಪಕಾರ, ದಾನ-ಧರ್ಮ-ಸಹಾಯ. ಅತಿಥಿ ಸತ್ಕಾರ. ಈ ಅಂಶಗಳನ್ನೂ ಕ್ರೋಢೀಕರಿಸಿಕೊಂಡಾಗ ಸರಳ ಸುಂದರ ಜೀವನ ತಂತಾನೇ ಎಲ್ಲರದಾಗುತ್ತದೆ.--ಇದೆಲ್ಲಾ ಮಿಕ್ಕೆಲ್ಲರ[ಕಿರಿಯರ] ತಿಳುವಳಿಕೆಗೆ ಹೇಳಿದ್ದಷ್ಟೇ ಬಿಟ್ಟರೆ ನಿಮಗೆ ಹೇಳಿಕೊಡಬೇಕೆ ?

    ReplyDelete
  3. ಸೋದರಿ ಚಿತ್ರ ಅವರ ಸಂದೇಹ-ಸಮಾಧಾನಕ್ಕಾಗಿ ಲೇಖನದಲ್ಲಿಯೇ ಒಂದು ಆಡಿಯೋ ಕ್ಲಿಪ್ ಹಾಕಿರುವೆ. ಉತ್ತಮ ಸಲಹೆ ನೀಡಿರುವ ಶ್ರೀ ವಿ.ಆರ್. ಭಟ್ಟರಿಗೂ, ಪ್ರತಿಕ್ರಿಯಿಸಿದ ಚಿತ್ರ ಅವರಿಗೂ ಮತ್ತು ವೇದಸುಧೆಯನ್ನು ಅವಲೋಕಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಇಂತಹ ಬರಹಗಳನ್ನು ಪೋಸ್ಟ್ ಮಾಡುವಾಗ ವೇದಸುಧೆಗೆ ಇದು ಹೊಂದುತ್ತದೆಯೇ! ಎಂಬ ಅನುಮಾನದಲ್ಲೇ ಪೋಸ್ಟ್ ಮಾಡಿರುವೆ. ಆದರೆ ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಉಳಿದದ್ದೆಲ್ಲಾ ನಡೆಯಲು ಸಾಧ್ಯ. ಆದ್ದರಿಂದ ಆರೋಗ್ಯದ ವಿಚಾರದಲ್ಲಿ ಧ್ಯಾನ, ಪ್ರಾಣಾಯಾಮ, ಉಪವಾಸ, ಇತ್ಯಾದಿಕ್ರಿಯೆಗಳಿಂದ ತಮಗಾದ ಪರಿಣಾಮಗಳನ್ನು ಉಳಿದವರೂ ಹಂಚಿಕೊಳ್ಳಲೆಂದೇ ಈ ಬರಹ ಬರೆದೆ.ಈ ಬರಹವನ್ನು ಓದಿದ ವಿದ್ಯಾ ಇಲಾಖೆಯಲ್ಲಿ ದೈಹಿಕ ಶಿಕ್ಷಣ ಅಧಿಕಾರಿಯಾಗಿರುವ ಮಿತ್ರ ನಾಗರಾಜ್ ಎಂಬುವರು ಪೂಜ್ಯ ಬಸವಾನಂದ ಸ್ವಾಮೀಜಿಯವರ ಉಪವಾಸ ಚಿಕಿತ್ಸೆಯ ಬಗ್ಗೆ ದೂರವಾಣಿಯಲ್ಲಿ ೨೦ ನ್ಬಿಮಿಷ ಹೇಳಿದರು. ಅವರು ೨೧ ದಿನಗಳು ಕೇವಲ ಜೇನು ಮಿಶ್ರಿತ ನೀರು ಕುಡಿದುಕೊಂಡಿದ್ದು ಅವರ ತೂಕ ೧೧ ಕೆ.ಜಿ. ಕಡಿಮೆಯಾಯ್ತೆಂತಲೂ ಮತ್ತು ಅವರ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಹಿಮ್ಮಡಿಯ ನೋವು ಮಾಯವಾಯ್ತೆಂದು ತಮ್ಮ ಅನುಭವ ಹಂಚಿಕೊಂಡರು. ವೇದಸುಧೆಯ ಅಭಿಮಾನಿಗಳಿಗೂ ಇಂತಹಾ ವಿಶೇಷ ಅನುಭವಗಳಾಗಿರಬಹುದು. ಅವರ ಅನುಭವಕ್ಕೆ ಅಕ್ಷರ ಕೊಡಬೇಕಷ್ಟೆ. ಹೀಗೆ ತಮ್ಮ ಅನುಭವಕ್ಕೆ ಅಕ್ಷರ ಕೊಡುವ ಬರಹಗಳು ಬಂದರೆ " ಆರೋಗ್ಯ-ಅನುಭವ" ಪುಟವನ್ನು ತೆರೆಯಬಹುದು

    ReplyDelete
  4. pranaaayaamada halavaaru prakaaragalannu serisi idannu prayogisiddaare. ide reeti sudarshana kriyeyu swalpa hattira enisitu.
    mula praaanayaamagala prakaaragalannu ramadev gurujiyavara pravachanadalli padeyabahudu. ivugalannu serisi halavaaru sidhdharu kelavu vishishta pranaayaamagalannu serisidaare.

    ReplyDelete
  5. ಶ್ರೀಧರ್ ಸರ್,

    ೪-೫ ಪ್ರಾಣಾಯಾಮ ಬಿಟ್ರೆ ಬೇರೆಯದು ನನಗೆ ತಿಳಿದಿಲ್ಲ. ಅನುಮಾನದಿಂದ ಕೇಳಿದ ಪ್ರಶ್ನೆ ಅಂತ ತಿಳಿಬೇಡಿ ಸರ್. ಆಶ್ಚರ್ಯರೀತಿಯಲ್ಲಿ ನಂಬಲಾಗುತ್ತಿಲ್ಲ ಎಂದೆ. ಮಾಹಿತಿಗೆ ಧನ್ಯವಾದಗಳು. ಹಾಗೆಯೇ ಆಡಿಯೋ ಕೊಂಡಿ ನನ್ನ ಕಚೇರಿಯಿಂದ ಕೇಳಲಾಗುತ್ತಿಲ್ಲ.

    ಬಸವಾನಂದ ಸ್ವಾಮೀಜಿಯವರು ೨೧ ದಿನಗಳು ಕೇವಲ ಜೇನು ಮಿಶ್ರಿತ ನೀರು ಕುಡಿದುಕೊಂಡು ತೂಕ ಇಳಿಸಿಕೊಂಡಿದ್ದರು ಎಂದಿದ್ದೀರ. ನಾನು ಸಹ ದಿನ ಬೆಳಿಗ್ಗೆ ಜೇನುತುಪ್ಪ ಮಿಶ್ರಿತ ನೀರು ಕುಡಿಯುತ್ತಿದ್ದೆ. ಜೊತೆಗೆ ಆಹಾರ ಸೇವನೆಯು ಇರುತ್ತಿತ್ತು. ನನ್ನ ಪ್ರಕಾರ ಅದರ ಜೊತೆಗೆ ದೇಹಕ್ಕೆ ಸರಿಯಾದ ವ್ಯಾಯಾಮ ಕೂಡ ಅಗತ್ಯ.

    ReplyDelete
  6. ಧ್ಯಾನ-ಪ್ರಾಣಾಯಾಮದ ಬಗೆಗೆ ಶ್ರೀ ಸೀತಾರಾಮ್ ರವರು ಹೇಳಿದಂತೆ ಬಾಬಾ ರಾಮ್ ದೇವ್ ಈ ದಿನಗಳಲ್ಲಿ ತುಂಬಾ ಪ್ರಖ್ಯಾತರು. ಅವರಲ್ಲದೆ ಶ್ರೀ ರವಿಶಂಕರ್ ಗುರೂಜಿ, ಶ್ರೀ ಪ್ರಭಾಕರ ಗುರೂಜಿ ,ಇವರುಗಳ ಸುದರ್ಶನ ಕ್ರಿಯೆ, ಸಿದ್ಧ ಸಮಾಧಿಯೋಗ...ಇವೆಲ್ಲವೂ ತುಂಬಾ ಪರಿಣಾಮಕಾರಿಯಾಗಿಯೇ ಇವೆ. ಬಸವಾನಂದ ಸ್ವಾಮೀಜಿಯವರ ಉಪವಾಸ ಚಿಕಿತ್ಸೆಯಂತೂ ಇನ್ನೂ ಪರಿಣಾಮಕಾರಿ. ೨೦-೩೦ ದಿನಗಳು ಕೇವಲ ಜೇನು ಮಿಶ್ರಿತ ನೀರು ಕುಡಿದುಕೊಂಡು,ಅವರು ಹೇಳಿಕೊಡುವ ಪ್ರಾಣಾಯಾಮ-ಧ್ಯಾನದಿಂದ ಬಹಳಷ್ಟು ಉಪಯೋಗ ಪಡೆದ ನನ್ನ ಸ್ನೇಹಿತರಿದ್ದಾರೆ.ಒಂದು ವ್ಯವಸ್ಥಿತ ರೀತಿಯಲ್ಲಿ ದಿನವೂ ಧ್ಯಾನ-ಪ್ರಾಣಾಯಾಮಗಳನ್ನು ಮಾಡುತ್ತಾ,ಲಘು ಆಹಾರ ಸೇವಿಸುತ್ತಾ, ಸಚ್ಚಿಂತನೆಯಲ್ಲಿದ್ದರೆ ಯಾವ ರೋಗವೂ ಸುಳಿಯದೆಂಬುದು ನನ್ನ ಅಭಿಪ್ರಾಯ.

    ReplyDelete
  7. ಹಿಂದೆ ಕಾಮನಬಿಲ್ಲು (೧೦೧.೩) ರೇಡಿಯೋನಲ್ಲಿ ಬೆಳಿಗ್ಗೆ ೮:೦೦ ರಿಂದ ೯:೦೦ ರವರೆಗೆ ಕಾಕಂಬಿ ಎಂಬ ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ಒಬ್ಬ ಲೇಖಕಿಗೆ ಥೈರಾಯ್ಡ್ ಸಮಸ್ಯೆಯಿದ್ದು ಅದನ್ನು ಪ್ರಾಣಾಯಾಮದಿಂದ ಹೇಗೆ ಗುಣಹೊಂದಿದರು ಎಂಬುದನ್ನು ವಿವರಿಸಿದ್ದರು. ಎಡಬಿಡದೆ ಸತತವಾಗಿ ೨-೩ ವರ್ಷದವರೆಗೆ ಅರ್ಧ ಘಂಟೆ ಪ್ರಾಣಾಯಾಮ ಮಾಡುತ್ತಿದ್ದರಂತೆ. ಅಲೋಪತಿಯಿಂದ ಗುಣಪಡಿಸಲಾಗದನ್ನು ಪ್ರಾಣಾಯಾಮ ಗುಣಪಡಿಸಿತು ಅಂತ ಹೇಳಿದ್ದರು.

    ಮಾಹಿತಿಗೆ ಧನ್ಯವಾದ

    ReplyDelete